Thursday, March 26, 2009

ಫಿರಾಕ್: ಹೇಳೋ ಹಾಗಿಲ್ಲ ಬಹುಪರಾಕ್


ಅದೊಂದು ಸಿನಿಮಾ ಅಂತ ಅನ್ನಿಸಲೇ ಇಲ್ಲ. ಸಾಕ್ಷ್ಯಚಿತ್ರದಂತಿತ್ತು.
ಫಿರಾಕ್ ಸಿನಿಮಾ ನೋಡಬೇಕು ಅಂತ ಯಾಕೋ ಅನ್ನಿಸಿತ್ತು. ಸಾಮಾನ್ಯವಾಗಿ ಬಿಡುಗಡೆಯ ಮೊದಲ ದಿನ ಚಿತ್ರಮಂದಿರದತ್ತ ಸುಳಿಯದ ನಾನು ‘ಫಿರಾಕ್’ ಬಿಡುಗಡೆಯಾದ ಮೊದಲ ದಿನವೇ ನೋಡಿಬಿಟ್ಟೆ!
ಸತ್ಯವಾಗಿ ಹೇಳ್ತೀನಿ ಬೋರ್ ಬರಲಿಲ್ಲ. ಜೋರ್ ಇಷ್ಟವಾಗಲೂ ಇಲ್ಲ. ಗುಜರಾತ್ ನ ಮಲ್ಟಿಫ್ಲೆಕ್ಸ್ ಗಳು ಈ ಚಿತ್ರ ತೋರಿಸಲು ನಿರಾಕರಿಸಿವೆ ಎಂಬ ಸುದ್ದಿಯಿಂದ ಈ ಸನಿಮಾದಲ್ಲಿ ‘ಎಂಥದೋ’ ಇದೆ ಅಂದುಕೊಂಡೆ. ಅದರಲ್ಲೂ ಗುಜರಾತ್‌ನ ಗೋದ್ರಾ ಗಲಭೆ ನಂತರದ ಸಂಗತಿಯ ಸಿನಿಮಾ ಅಂದಾಗ ಸಹಜವಾಗಿ ಕುತೂಹಲ ಮೂಡಿತ್ತು. ಆ ಕುತೂಹಲ ತಣಿಯಿತು. ಗುಜರಾತ್ ನ ಮಲ್ಟಿಫ್ಲೆಕ್ಸ್ ಗಳು ಈ ಚಿತ್ರ ತೋರಿಸಲು ಯಾಕೆ ನಿರಾಕರಿಸಿವೆ ಎಂಬುದೂ ತಿಳಿಯಿತು. ಈ ಸಿನಿಮಾ ಮಲ್ಟಿಫ್ಲೆಕ್ಸ್ ಗಳಲ್ಲಿ ತೋರಿಸುವ ಗುಣಮಟ್ಟ ಹೊಂದಿಲ್ಲ.
ಸ್ವಲ್ಪ ಮಟ್ಟಿಗೆ ಗಲಭೆ ನಂತರದ ಪರಿಸ್ಥಿತಿಯನ್ನು ಬಿಂಬಿಸಲು ನಿರ್ದೇಶಕಿ ನಂದಿತಾ ದಾಸ್ ಸಫಲರಾಗಿದ್ದಾರೆ. ಆದರೆ ಆಕೆಯ ಮೊದಲ ಚಿತ್ರವಾದ್ದರಿಂದ ಅವರಿನ್ನೂ ಸಾಕ್ಷ್ಯ ಚಿತ್ರದ ಗುಂಗಿನಿಂದ ಹೊರಬಂದಿಲ್ಲ ಎಂಬುದು ಕಾಣುತ್ತಿತ್ತು.
ಚಿತ್ರದ ಆರಂಭದಲ್ಲಿ ಟಿಪ್ಪರ್ ಲಾರಿಯೊಂದರಲ್ಲಿ ಹೆಣಗಳನ್ನು ತಂದು ಕಲ್ಲು ಸುರಿದಂತೆ ಸುರಿವ ದೃಶ್ಯ ನಿಮ್ಮನ್ನು ಕಲಕಿ ಹಾಕಿಬಿಡುತ್ತದೆ. ನಿಮ್ಮ ಮನಸ್ಸಿನಲ್ಲಿ ಅಚ್ಚೊತ್ತಿ ಕುಳಿತುಬಿಡುತ್ತದೆ. ಆದರೆ ಹೀಗೇ ಇಡೀ ಸಿನಿಮಾ ಮನಸಿನಲ್ಲಿ ಅಚ್ಚೊತ್ತುವಂತೆ ಮಾಡುವಲ್ಲಿ ನಂದಿತಾ ವಿಫಲರಾಗಿದ್ದಾರೆ.
ಹಿಂದು-ಮುಸ್ಲಿಮರ ಗೆಳೆತನ. ಒಳ್ಳೆಯ ಹಿಂದು-ಮುಸ್ಲಿಂ, ಕೆಟ್ಟ ಹಿಂದು-ಮುಸ್ಲಿಂ ಇಬ್ಬರನ್ನೂ ತೋರಿಸಿದ್ದಾಳೆ ನಂದಿತಾ. ಆದರೆ ಪೊಲೀಸರನ್ನು ಮಾತ್ರ ಕೆಟ್ಟದಾಗಿ ಚಿತ್ರಿಸಿದ್ದಾಳೆ. ಎಲ್ಲೋ ಒಂದಿಬ್ಬರು ಪೊಲೀಸರು ಗುಜರಾತ್ ಗಲಭೆ ಸಂದರ್ಭ ಕೆಟ್ಟದಾಗಿ ನಡೆದುಕೊಂಡಿರಬಹುದು. ಆದರೆ ಎಲ್ಲ ಪೊಲೀಸರು ಹಾಗಲ್ಲ ಎಂಬುದನ್ನು ತೋರಿಸಲು ನಂದಿತಾ ಮರೆತಿದ್ದಾಳೆ. ಗಲಭೆಯ ಒಂದು ತಿಂಗಳ ನಂತರದ ಕತೆ ಅನ್ನುತ್ತಾಳೆ. ಹಾಗೆಯೇ ಪೊಲೀಸ್ ಒಬ್ಬನ ಬಾಯಲ್ಲಿ ಮುಸ್ಲಿಮನೊಬ್ಬನಿಗೆ ‘ಹೋಗು ಹೋಗು ಪಾಕಿಸ್ತಾನಕ್ಕೇ ಹೋಗು. ಇಲ್ಯಾಕೆ ಇದೀಯಾ’ ಎಂದು ಹೇಳಿಸುತ್ತಾರೆ ನಂದಿತಾ.
ಹೀಗಾಗಿ ಪಾಕಿಸ್ತಾನದಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ ಪ್ರಥಮ ಬಹುಮಾನ ಬಂದುದರಲ್ಲಿ ಆಶ್ಚರ್ಯವಿಲ್ಲ!
ನೀವೇ ಹೇಳಿ ಯಾವ ಪೊಲೀಸ್ ಹೀಗೆ ಹೇಳಲು ಸಾದ್ಯ?
ಅಕಸ್ಮಾತ್ ಒಬ್ಬ ಹೇಳಿದ್ದರೂ, ಅದನ್ನು ಎಲ್ಲ ಪೊಲೀಸರಿಗೆ ಅನ್ವಯಿಸುವ ಅಗತ್ಯವಿರಲಿಲ್ಲ. ಇಡೀ ಚಿತ್ರದುದ್ದಕ್ಕೂ ಪೊಲೀಸರನ್ನು ಕೆಟ್ಟದಾಗಿಯೇ ಚಿತ್ರಿಸಿರುವ ನಂದಿತಾ, ಪೊಲೀಸರ ಮೇಲೆ ಸಮಾಜಕ್ಕೆ ನಂಬಿಕೆ ಹೋಗುವಂತೆ ಮಾಡುವುದು ಎಷ್ಟು ಅಪಾಯಕಾರಿ ಎಂಬುದನ್ನು ಮರೆತಂತೆ ಕಾಣುತ್ತಾರೆ.
ಆದರೂ ಎಂದಿನಂತೆ ನಾಸಿರುದ್ದೀನ್ ಷಾ ನಟನೆ ಇಷ್ಟವಾಯಿತು. ವಯಸ್ಸಾದ ಉಸ್ತಾದನ ವೇಷದಲ್ಲಿ ಅವರ ಬಾಡಿ ಲಾಂಗ್ವೇಜ್ ನೋಡಲಾದರೂ ಸಿನಿಮಾ ನೋಡಬಹುದು. ಉಳಿದಂತೆ ಗಲಭೆ ನಂತರ ತಂದೆ-ತಾಯಿ ಕೊಲೆಯಾದದ್ದನ್ನು ಕಣ್ಣಾರೆ ಕಂಡ ಮುಸ್ಲಿಂ ಬಾಲಕನೊಬ್ಬನ ತಳಮಳಗಳು ಚೆನ್ನಾಗಿ ಮೂಡಿಬಂದಿವೆ. ಆತನನ್ನು ಮೋಹನನನ್ನಾಗಿ ಮಾಡಿ ಮನೆಯಲ್ಲಿಟ್ಟುಕೊಳ್ಳಲು ಯತ್ನಿಸುವ ಹಿಂದು ತಾಯಿಯೊಬ್ಬಳ ತವಕ, ಅವಳ ತುಡಿತ, ಗಾಬರಿ ಚೆನ್ನಾಗಿ ಮೂಡಿಬಂದಿದೆ. ಗಲಭೆ ನಂತರದ ಕೆಲವು ದೃಶ್ಯಗಳು ಕೂಡ ಮನಕಲಕುವಂತಿದೆ.
ಆದರೂ ಸಿನಿಮಾದುದ್ದಕ್ಕೂ ಬೆರಳು ಹಾಕಿಕೊಂಡರೂ ಕಣ್ಣಿಂದ ನೀರು ಬರುವುದಿಲ್ಲ!ಮಾರ್ಚ್ ೧೮ರಂದು ಹೊಸದಿಲ್ಲಿಯಲ್ಲಿ ‘ಫಿರಾಕ್’ ಚಿತ್ರ ಪ್ರದರ್ಶನವಿತ್ತು. ಅದರಲ್ಲಿ ಅವಳ ತಂದೆ ಪ್ರಸಿದ್ಧ ಕಲಾವಿದ ಜತಿನ್ ದಾಸ್ ಕಣ್ಣೀರ್ ಗರೆದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅದೇನು ಮಗಳು ಇಂತಹ ಸಿನಿಮಾ ಮಾಡಿದ್ದಾಳೆ ಅಂತ ಅತ್ತರೋ? ಜನ ನೋಡಲಿಕ್ಕಿಲ್ಲ ಅಂತ ಅನಿಸಿ ಅತ್ತರೋ? ಇಲ್ಲ ದೃಶ್ಯ ನೋಡಿ ಅತ್ತರೋ? ಎಂಬುದು ಸ್ಪಷ್ಟವಾಗಿಲ್ಲ. ಸಿನಿಮಾ ಮುಸ್ಲಿಂ ಪರ ಎಂಬ ಆರೋಪಕ್ಕೆ ಉತ್ತರಿಸಿರುವ ನಂದಿತಾ ‘ಗಲಭೆ ನಂತರ ಮುಸ್ಲಿಮರ ಕಷ್ಟಗಳನ್ನು ಚಿತ್ರಿಸಿದ್ದೇನೆ’ ಎಂದಿದ್ದಾರೆ. ಗಲಭೆ ಅಂದ ಮೇಲೆ ಎರಡೂ ಕಡೆಯವರಿಗೆ ಹಾನಿಯಾಗಿರುತ್ತದೆ. ದೇಶದ ಯಾವುದೇ ಕೋಮುಗಲಭೆ ತೆಗೆದು ನೋಡಿ ಅದರಲ್ಲಿ ಒಂದೇ ಕೋಮಿನ ಜನ ಸತ್ತಿರುವುದಿಲ್ಲ ಅಥವಾ ಒಂದೇ ಕೋಮಿನ ಜನರಿಗೆ ಹಾನಿಯಾಗಿರುವುದಿಲ್ಲ. ಲೆಕ್ಕಾಚಾರ ಯಾವಾಗಲೂ ಸಮನಾಗಿಯೇ ಇರುತ್ತದೆ.
ಆರೋಪಗಳೇನೆ ಇರಲಿ. ಸಿನಿಮಾ ನೋಡಿದರೆ ನಿಮಗದು ಸಂಪೂರ್ಣ ಮುಸ್ಲಿಂ ಪರ ಅನಿಸುವುದಿಲ್ಲ. ಸಂಗತಿಗಳನ್ನು ‘ಬ್ಯಾಲೆನ್ಸ್’ ಮಾಡಲು ನಂದಿತಾ ಯತ್ನಿಸಿದ್ದಾರೆ. ಆದರೆ ಯಾವುದನ್ನೂ ಸರಿಯಾಗಿ ಹೇಳಿಲ್ಲ. ಅಂತಿಮವಾಗಿ ಪೊಲೀಸರನ್ನು ಕೆಟ್ಟದಾಗಿ ಚಿತ್ರಿಸಿದ್ದಾರೆ. ನಾಸಿರುದ್ದೀನ್ ಷಾ, ಪರೇಶ್ ರಾವಲ್ ಅವರಂತಹ ನಟರನ್ನು ಸರಿಯಾಗಿ ಬಳಸಿಕೊಳ್ಳಲೂ ನಿರ್ದೇಶಕಿಯಾಗಿ ನಂದಿತಾ ವಿಫಲರಾಗಿದ್ದಾರೆ.
ಈ ಸಿನಿಮಾಕ್ಕೆ ಕ್ಷಮಿಸಿ ಸಾಕ್ಷ್ಯಚಿತ್ರಕ್ಕೆ ೫ ಚಲನಚಿತ್ರೋತ್ಸವ ಪ್ರಶಸ್ತಿಗಳು ಬಂದಿವೆ. ಪ್ರಶಸ್ತಿ ಬಂದ ಸಿನಿಮಾಗಳನ್ನು ನೋಡುವ ಗೀಳಿನವರಾಗಿದ್ದರೆ ಆ ಕಾರಣಕ್ಕಾದರೂ ನೀವು ಇದನ್ನು ನೋಡಬಹುದು. ಇಲ್ಲವಾದಲ್ಲಿ ನೀವು ತುಂಬ ಬುದ್ದಿವಂತರು ಅಂತ ನೀವಂದುಕೊಂಡಿದ್ದರೆ ತಪ್ಪದೆ ನೋಡಿ. ಯಾಕೆಂದರೆ ಬಹುತೇಕ ದೃಶ್ಯಗಳು, ಡೈಲಾಗ್‌ಗಳ ಅರ್ಥ ಸೂಚ್ಯವಾಗಿದೆ. ಆದ್ದರಿಂದ ಸಾಮಾನ್ಯ ನೋಡುಗ ಅರ್ಥ ಮಾಡಿಕೊಳ್ಳುವುದು ಕಷ್ಟ. ಸಿನಿಮಾ ಮುಗಿದಾಗ ನನ್ನ ಅಕ್ಕಪಕ್ಕದಲ್ಲಿದ್ದವರೆಲ್ಲಾ ‘ಮುಗಿದೇ ಹೋಯಿತಾ’ ಎಂಬರ್ಥದ ಮುಖಮುದ್ರೆ ಹೊತ್ತು ‘ಅರ್ಥವೇ ಆಗಲಿಲ್ಲ’ ಎಂಬಂತೆ ಕೈ ತಿರುಗಿಸದ್ದೇ ಇದಕ್ಕೆ ಸಾಕ್ಷಿ.
ಅವರಿಗಿಂತ ನಾನೇ ಬುದ್ದಿವಂತ ಅಂತ ಸಾಮಾದಾನ ಮಾಡಿಕೊಂಡು ಹೊರಬಂದೆ.
ನನ್ನ ಬುದ್ದಿಗೆ ದಕ್ಕಿದಷ್ಟನ್ನು ಬರೆದಿದ್ದೇನೆ. ನಾನು ಬುದ್ದಿವಂತನಲ್ಲ. ತುಂಬ ವಿಚಾರವಾದಿಗಳ, ಸಾಹಿತ್ಯಿಕ, ಸೂಚ್ಯಾರ್ಥವುಳ್ಳ ಸಿನಿಮಾಗಳು ನನಗಿಷ್ಟವಾಗುವುದಿಲ್ಲ. ಸಿನಿಮಾಗಳನ್ನು ಶುದ್ಧ ಮನೋರಂಜನೆ ದೃಷ್ಟಿಯಿಂದ ನೋಡುವ ನಾನು ಜಗ್ಗೇಶ್ ರ ಹಳೆ ಸಿನಿಮಾಗಳನ್ನು ಇಷ್ಟಪಟ್ಟವ. ಅದಿಲ್ಲವಾದರೆ ಪೊಲೀಸ್ ಕತೆಗಳು ನಂಗಿಷ್ಟ. ಈಗೀಗ ನನ್ನ ಬುದ್ದಿ ಬೆಳೆಯುತ್ತಿರುವ ಅಥವಾ ಕೆಡುತ್ತಿರುವ ಲಕ್ಷಣವೋ ಏನೊ ‘ಫೀರಾಕ್’ನಂತಹ ಸಿನಿಮಾಗಳನ್ನು ನೋಡಲಾರಂಭಿಸಿದ್ದೇನೆ. ಸರಿಯಾಗಿ ಅರ್ಥವಾಗಲಿಲ್ಲ ಅನ್ನೋದು ಬೇರೆ ಮಾತು. ಹೀಗಾಗಿ ನೀವು ನೋಡಿ. ಬುದ್ದಿವಂತರಾಗಿದ್ದರೆ ನಿಮಗೆ ಖಂಡಿತಾ ಅರ್ಥವಾದೀತು.
ಒಂದು ಸಾಲು ವಿಮರ್ಶೆ: ಫಿರಾಕ್ ಸಿನಿಮಾ ನೋಡಲು ದುಡ್ಡು ಖರ್ಚು ಮಾಡಿದರೆ ಮಾತ್ರ ಸಾಲದು, ಬುದ್ದಿಯನ್ನೂ ಖರ್ಚು ಮಾಡಬೇಕು!

Friday, March 20, 2009

ಅದು ಓದಿ ಬರೆದದ್ದು ಇದು!


ಧಾರಾವಾಡದ ಕಾಲೇಜೊಂದರಲ್ಲಿ ಒಂದು ದಿನ ಶಿವರಾಮ ಕಾರಂತರ ಉಪನ್ಯಾಸ ಕಾರ್ಯಕ್ರಮ ಇತ್ತಂತೆ. ಶಿವರಾಮ ಕಾರಂತ ಮಾತನಾಡುತ್ತಿದ್ದಾಗ ಒಬ್ಬಾಕೆ ವಿದ್ಯಾರ್ಥಿನಿ ಕೀಟಲೆ ಮಾಡುತ್ತಲೋ, ಅಕ್ಕಪಕ್ಕದವರಲ್ಲಿ ಮಾತನಾಡುತ್ತಲೋ ಇದ್ದಳಂತೆ. ಕೊನೆಗೆ ಕಾರ್ಯಕ್ರಮ ಮುಗಿದ ಬಳಿಕ ಆಕೆ ಕಾರಂತರಲ್ಲಿ ಅಟೋಗ್ರಾಫ್ ಕೊಡಿ ಪ್ಲೀಸ್ ಎಂದು ಕೇಳಿದಾಗ ಕಾರ್ಯಕ್ರಮದುದಕ್ಕೂ ಆಕೆಯ ಚಟುವಟಿಕೆಯನ್ನು ಗಮನಿಸಿದ್ದ ಕಾರಂತರು ಬರೆದದ್ದು;

'ನನ್ನ ಕೈಬರೆಹದಿಂದ ನಿನ್ನ ಹಣೆ ಬರೆಹವನ್ನು ತಿದ್ದಲಾಗದು!'


ಇಂಥಹದೊಂದು ಬರಹವನ್ನು ಗೆಳೆಯ ಮಿಥುನ್ ಬ್ಲಾಗಿಸಿದ್ದ. ಅದನ್ನು ಓದುತ್ತಿದ್ದಂತೆ ಬಹಳ ದಿನಗಳಿಂದ ಸುಮ್ಮನಿದ್ದ ನನ್ನ ಕೀಟಲೆ ಮನಸ್ಸು ಜಾಗೃತವಾಯಿತು. ಆಗ ಹೀಗೆ ಅನಿಸಿತು.....

* ಹಣೆ ಬರಹದಿಂದಲೂ ಕೆಲವರ ಕೈ ಬರಹ ತಿದ್ದಲು ಸಾದ್ಯವಿಲ್ಲ!


* ಕೈ ಬರಹ ಚೆನ್ನಾಗಿದ್ದವರ ಹಣೆ ಬರಹವೂ ಚೆನ್ನಾಗಿರುತ್ತದೆ ಎನ್ನಲಾಗುವುದಿಲ್ಲ!


* ಹಣೆ ಬರಹ ಬರೆದವನ ಕೈ ಬರಹ ಕೆಟ್ಟದಾಗಿದ್ದರೆ ಹಣೆ ಬರಹವೂ ಕೆಟ್ಟದಾಗಿರುತ್ತದೆ!


* ಅಕ್ಷರಸ್ಥ ಕೂಡ ಹಣೆಬರಹ ಓದಲಾರ!


* ಹಣೆ ಬರಹ ಓದಬಲ್ಲವನೇ ನಿಜವಾದ ಅಕ್ಷರಸ್ಥ!

* ಹಾಗಾದರೆ ಜಗತ್ತಿನ ತುಂಬ ಅನಕ್ಷರಸ್ಥರೆ!

* ಹಣೆಬರಹ ಬರೆಯಲು ದೇವರು ಅದೆಷ್ಟು ಮೊದಲೇ ಪರ್ಮನೆಂಟ್ ಮಾರ್ಕರ್ ಪೆನ್ನು ಕಂಡುಹಿಡಿದಿದ್ದ!

* ಹಣೆಬರಹ ಕೆಟ್ಟದಾಗಿದ್ದರೂ ಕೈ ಬರಹ ಕೆಟ್ಟದಾಗಿರಬೇಕಿಲ್ಲ!

* ಹಣೆಬರಹ ಬರೆಯುವುದೇ ನಿನ್ನ ಹಣೆಬರಹ ಅಂತ ಆತನ ಹಣೆಮೇಲೆ ಬರೆದವರಾರು!

Thursday, March 19, 2009

ನಗ್ಮ ದರ್ಶನ!



ಫೇಮಸ್ ಚಿತ್ರನಟಿಯೊಬ್ಬರು ದಿಢೀರನೆ ಸಿಕ್ಕರೆ ನೀವೇನು ಮಾಡುತ್ತೀರಿ? ಹೋಗಿ ಕೈ ಕುಲುಕುತ್ತೀರಿ. ಫೋಟೋ ತೆಗೆಸಿಕೊಳ್ಳಲು ಅತ್ತಿತ್ತ ಫೋಟೋಗ್ರಫರ್‌ಗಾಗಿ ಹುಡುಕುತ್ತೀರಿ. ಅವರ ಆಟೋಗ್ರಾಫ್ ತೆಗೆದುಕೊಳ್ಳುತ್ತೀರಿ. ಚಿತ್ರನಟಿಯರ ಕಂಡಾಗೆಲ್ಲ ಮುತ್ತಿಕೊಳ್ಳುವ ಜನರನ್ನು, ಅವಳ ಒಂದು ಟಚ್ ಗಾಗಿ, ಒಂದು ಸಹಿಗಾಗಿ ಅದೆಷ್ಟು ಕಷ್ಟಪಡುತ್ತಾರೆ ನೀವೇ ನೋಡಿದ್ದೀರಲ್ಲ.

ಅಂತಹ ನಟಿಯೊಬ್ಬಳು ನಮ್ಮ ಮಲ್ಲಿಕಾರ್ಜುನ ಖರ್ಗೆಯನ್ನು ಭೇಟಿಯಾಗಲು ಬಂದಾಗ ಅವರು ಕೇಳಿದ ಮೊದಲ ಪ್ರಶ್ನೆಯೇನು ಗೊತ್ತೇ ‘ನಿಮ್ಮ ಹೆಸರೇನು?’

ಹೌದು. ನೀವು ನಂಬಲೇ ಬೇಕು!

ಸೋಲಿಲ್ಲದ ಸರದಾರ, ಸಿದ್ದುಗಾಗಿ ಪ್ರತಿಪಕ್ಷ ನಾಯಕನ ಸ್ಥಾನ ತೆರವು ಮಾಡಿ, ತ್ಯಾಗಮಯಿ ಅನ್ನಿಸಿಕೊಳ್ಳಲು ಮನಸಿಲ್ಲದ ಮನಿಸಿನಿಂದಲೇ ಸಿದ್ದರಾಗುತ್ತಿರುವ ಮಲ್ಲಿಕಾರ್ಜುನ ಖರ್ಗೆ ಒಂದು ದಿನ ಕರ್ನಾಟಕ ಭವನದ ಕೊಠಡಿಯಲ್ಲಿ ಕುಳಿತಿದ್ದರು. ಪ್ರತಿಪಕ್ಷ ನಾಯಕನ ಸ್ಥಾನ ತಪ್ಪಿಸುವ ಮುನ್ಸೂಚನೆಯಾಗಿ ಖರ್ಗೆಗೆ ಮಹಾರಾಷ್ಟ್ರದ ಅಭ್ಯರ್ಥಿ ಆಯ್ಕೆ ಸಮಿತಿ ಅಧ್ಯಕ್ಷತೆ ವಹಿಸಲಾಗಿದೆ.

ಅದೃಷ್ಟ ನೋಡಿ!

ಚಿತ್ರ ನಟಿ ನಗ್ಮಾ ಖರ್ಗೆ ಭೇಟಿಗೆಂದು ತಾವೇ ಹುಡುಕಿಕೊಂಡು ಬಂದುಬಿಡಬೇಕೆ!

ಮುಂಬಯಿ ಪಶ್ಚಿಮ ಕ್ಷೇತ್ರದಿಂದ ನಗ್ಮಾ ಟಿಕೆಟ್ ಬಯಸಿದ್ದಾರೆ. ಬಹಳ ಪ್ರಯತ್ನವನ್ನೂ ನಡೆಸಿದ್ದಾರೆ. ಈ ಪ್ರಯತ್ನದ ಭಾಗವಾಗಿಯೇ ನಗ್ಮಾ ಅವರು ಖರ್ಗೆ ಭೇಟಿಗೆ ಆಗಮಿಸಿದ್ದರು. ನಗ್ಮಾ ಎಷ್ಟೆಂದರೂ ಫೇಮಸ್ ಅಲ್ಲವೆ. ಬಹುಶಃ ಖರ್ಗೆ ತನ್ನನ್ನು ಗುರುತಿಸಬಹುದು ಅಂದುಕೊಂಡಿದ್ದರು.

ಆದರೆ ಖರ್ಗೆ ಅಮಾಯಕರಂತೆ ನಿಮ್ಮ ಹೆಸರೇನಮ್ಮಾ ಅಂದಾಗ ದಂಗಾಗಿ ಹೋದಳು ನಗ್ಮಾ!

ಆಗ ಖರ್ಗೆ ಪಕ್ಕದಲ್ಲಿದ್ದ ಅವರ ಸ್ನೇಹಿತ ಕೊಂಡಯ್ಯ ಅವರು ಖರ್ಗೆ ಕಿವಿಯಲ್ಲಿ ‘ಸರ್ ಅವಳ ಹೆಸರು ನಗ್ಮಾ ಅಂತ. ಅವಳು ಫೇಮಸ್ ಚಿತ್ರನಟಿ ಸರ್. ಅವಳ ಹೆಸರಿನಲ್ಲಿ ತಮಿಳುನಾಡಿನಲ್ಲಿ ದೇವಸ್ಥಾನಗಳನ್ನೆಲ್ಲ ಕಟ್ಟಿಸಿದ್ದಾರೆ. ಅವಳಿಗೆ ಮುಂಬಯಿನಿಂದ ಟಕೆಟ್ ಬೇಕಂತೆ’ ಎಂದು ಉಸುರಿದರು.

ಆಗ ದಂಗಾಗುವ ಪಾಳಿ ಖರ್ಗೆಯದ್ದು!

ಹೌದಾ? ನಾನು ಅವಳ ಒಂದೂ ಸಿನಿಮಾ ನೋಡಿಲ್ಲಲ್ಲೊ ಎಂದು ಖರ್ಗೆ ಅಮಾಯಕರಂತೆ ನುಡಿದಾಗ ಕೊಠಡಿಯಲ್ಲಿದ್ದವರೆಲ್ಲ ಕಂಗಾಲು. ಆದರೂ ಸಾವರಿಸಿಕೊಂಡ ಖರ್ಗೆ ‘ರಾಜಕೀಯದ ಅನುಭವ ಎಷ್ಟಿದೆ? ನೀನು ಮಾಡಿದ ಸಾಮಾಜಿಕ ಕಾರ್ಯವೇನು?’ ಎಂದೆಲ್ಲ ಕೇಳಿದಾಗ ಚುನಾವಣೆಗೆ ಸ್ಪರ್ಧಿಸಲು ಇದೆಲ್ಲ ಅಗತ್ಯವಿದೆಯಾ ಎಂಬ ಪ್ರಶ್ನಾರ್ಥಕ ಚಿಹ್ನೆ ನಗ್ಮಾಳ ಮುಖದಲ್ಲಿ ಮೂಡಿತು. ಆ ಪ್ರಶ್ನೆ ಹೊತ್ತೇ ಅವರು ಖರ್ಗೆ ಕೊಠಡಿಯಿಂದ ಹೊರಹೋಗಬೇಕಾಯಿತು.

ಇದು ನಡೆದಾಗ ಕೆಲವರೇ ಇದ್ದರು ಕೊಠಡಿಯಲ್ಲಿ. ಆದರೂ ಈ ಸುದ್ದಿ ಹೇಗೋ ಹೊರಗೆ ನುಸುಳಿ ಬಂದುಬಿಟ್ಟಿದೆ. ನಾವೇನೋ ಕನ್ನಡ ಪತ್ರಕರ್ತರು ಇದನ್ನು ಕೇಳಿ, ನಕ್ಕು, ಜೋಕೆಂಬಂತೆ ಕೆಲವರ ಬಳಿ ಹೇಳಿ ಸುಮ್ಮನಿದ್ದೆವು. ಆದರೆ ‘ಮಿಡ್ ಡೇ’ ಪತ್ರಿಕೆಯವರು ಮುಖಪುಟದಲ್ಲಿ ಖರ್ಗೆಗೆ ನಗ್ಮಾ ಪರಿಚಯವೇ ಇಲ್ಲ ಎಂದು ಬರೆದು, ಜಗಜ್ಜಾಹೀರು ಮಾಡಿದರು.

ಅದಕ್ಕೆ ಪಾಪ ಖರ್ಗೆ "ಅಲ್ಲೊ ಹೆಸರೇನು ಅಂತ ಕೇಳಿದರೆ ನನಗೆ ಅವಳ ಪರಿಚವೇ ಇಲ್ಲ ಬರೆದುಬಿಡೋದಾ' ಅಂತ ಕನ್ನಡ ಪರ್ತಕರ್ತರೊಬ್ಬರ ಬಳಿ ದುಃಖ ತೋಡಿಕೊಂಡರಂತೆ.

ಚಿತ್ರನಟಿ ನಗ್ಮಾ ಅವರು ಖರ್ಗೆ ಭೇಟಿಗೆ ಬಂದಿದ್ದಾರೆ ಅಂತ ನನಗೆ ಫೋನ್ ಬಂದಾಗ ನನಗನ್ನಿಸಿತು..... ಖರ್ಗೆ ಜನ್ಮ ಸಾರ್ಥಕವಾಯಿತು ಬಿಡಿ ಅಂತ. ‘ಪ್ರತಿಪಕ್ಷ ನಾಯಕನ ಸ್ಥಾನ ಹೋದರೆ ಹೋಗಲಿ’ ಅಂತ ನಗ್ಮಾ ಭೇಟಿ ನಂತರ ಖರ್ಗೆ ಅವರೇ ಅಂದುಕೊಂಡಿರಬಹುದು ಅಂದುಕೊಂಡು ಮನಸೊಳಗೇ ನಕ್ಕಿದ್ದೆ.

ಒಂದು ಭೇಟಿ ಇಷ್ಟೆಲ್ಲ ಸುದ್ದಿ, ನಗು ಸೃಷ್ಟಿಸಿತು ನೋಡಿ.

Friday, March 13, 2009

ಪ್ರಗತಿ ಪರರೇ ನೀವು ನಿಜವಾಗಿಯೂ ಪ್ರಗತಿ ಪರವೇ?


ಇಂತಹ ಮಾಹಿತಿ ಯುಗದಲ್ಲೂ ಇದೊಂದು ಸುದ್ದಿ ನಿಮ್ಮ ಕಣ್ತಪ್ಪಿಹೋಗಿರಬಹುದು!
ಯಾಕೆಂದರೆ ಮಂಗಳೂರಿನ ಪಬ್ ದಾಳಿಯನ್ನು ದೇಶವೊಂದರ ಮೇಲಿನ, ಇಡೀ ಮಹಿಳಾ ಸಮಾದ ಮೇಲೆ ನಡೆದ ದಾಳಿ ಎಂಬಂತೆ ಬಿಂಬಿಸಿದ, ವೆಲಂಟೈನ್ಸ್ ಡೇ ಆಚರಣೆಗೆ ಅಡ್ಡಿಪಡಿಸುವ ಶ್ರೀರಾಮ ಸೇನೆ ಹೇಳಿಕೆಯನ್ನು ಸ್ವಾತಂತ್ರ್ಯೋತ್ಸವಕ್ಕೆ ಅಡ್ಡಿಪಡಿಸಿದಷ್ಟು ಗಂಭೀರವಾಗಿ ಪಡಿಗಣಿಸಿದ ರಾಷ್ಟ್ರೀಯ ಮಾಧ್ಯಮಗಳು, ಈ ಸುದ್ದಿಯನ್ನು ಯಾವಾಗ ಪ್ರಕಟಿಸಿದವೊ ಗೊತ್ತಾಗಲೇ ಇಲ್ಲ.
೩ ವಾರದ ಹಿಂದೆ ಕೋಲ್ಕತ್ತ ನಗರದಲ್ಲಿ ದಾಂಧಲೆಗಳು ನಡೆದವು. ‘ದಿ ಸ್ಟೇಟ್ಸ್‌ಮೆನ್’ ಪತ್ರಿಕೆ ಸಂಪಾದಕ ರವೀಂದ್ರ ಕುಮಾರ್ ಹಾಗೂ ಪ್ರಕಾಶಕ ಆನಂದ ಸಿನ್ಹಾ ಅವರನ್ನು ಬಂಧಿಸಿದ ನಂತರವೇ ಗದ್ದಲ ತಣ್ಣಗಾಯಿತು. ಇದಕ್ಕೆ ಕಾರಣವಿಷ್ಟೆ. ‘ಇಂಡಿಪೆಂಡೆಂಟ್’ ಎಂಬ ಪತ್ರಿಕೆಯಲ್ಲಿ ಜೋಹಾನ್ ಹರಿ ಎಂಬವರು ಬರೆದ ಲೇಖನವನ್ನು ‘ದಿ ಸ್ಟೇಟ್ಸ್‌ಮೆನ್’ ಮರುಮುದ್ರಿಸಿತ್ತು. ಅದರಲ್ಲಿ ಇಸ್ಲಾಂ ಕುರಿತು ಟೀಕೆ ಇತ್ತು. ಅದೇ ಗಲಾಟೆಗೆ ಕಾರಣ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಆರೋಪದಲ್ಲಿ ಸಂಪಾದಕ ಮತ್ತು ಪ್ರಕಾಶನನ್ನು ಬಂಧಿಸಬೇಕು ಎಂಬ ಆಗ್ರಹವೇ ಗಲಾಟೆಗೆ ಮೂಲ.
ಜೋಹಾನ್ ಹತಿ ಬ್ರಿಟನ್‌ನ ಪ್ರಗತಿಪರ ಚಿಂತಕ, ಜಾತ್ಯಾತೀತವಾದಿ. ಆದರೆ ಡೋಂಗಿಯಲ್ಲ. ಈತ ಜಾತ್ಯತೀತ ನಿಲುವಿಗಾಗಿ ಪ್ರಶಸ್ತಿಯನ್ನೂ ಪಡೆದಿದ್ದಾನೆ ಎಂಬುದು ಗಮನಾರ್ಹ. ಹಿಂದೆ ಹಲವು ಬಾರಿ ಈತ ಇಸ್ಲಾಂ ಸಮರ್ಥಿಸಿ ಕೂಡ ಲೇಖನ ಬರೆದ ದಾಖಲೆಗಳಿವೆ. ಈತ ಇಂಡಿಪೆಂಡೆಂಟ್ ಎಂಬ ಪತ್ರಿಕೆಯಲ್ಲಿ ‘why should I respect opressive religions?’ (ದಬ್ಬಾಳಿಕೆ ನಡೆಸುವ ಧರ್ಮಗಳನ್ನು ನಾನ್ಯಾಕೆ ಗೌರವಿಸಲಿ?) ಎಂಬ ಹೆಡ್‌ಲೈನ್ ನೀಡಿ ಒಂದು ಲೇಖನ ಬರೆದಿದ್ದ. ಅದನ್ನು ‘ದಿ ಸ್ಟೇಟ್ಸ್‌ಮೆನ್’ ಯಥಾವತ್ತಾಗಿ ಪ್ರಕಟಿಸಿತ್ತು.
ಈ ಲೇಖನದಲ್ಲಿ ಮುಖ್ಯವಾಗಿ ವಾಕ್ ಮತ್ತು ಅಭಿವ್ಯಕ್ತಿ ಸಾತಂತ್ರ್ಯದ ಬಗ್ಗೆ ಜೊಹಾನ್ ಹರಿ ಪ್ರತಿಪಾದಿಸಿದ್ದ. ವಿಶ್ವಸಂಸ್ಥೆ ವಾಕ್ ಸ್ವಾತಂತ್ರ್ಯವನ್ನು ಪ್ರಮುಖವಾಗಿ ಪ್ರತಿಪಾದಿಸುತ್ತಿದೆ. ಆದರೆ ಕೆಲವು ಮುಸ್ಲಿಂ ರಾಷ್ಟ್ರಗಳು ಅದಕ್ಕೆ ತದ್ವಿರುದ್ಧವಾಗಿ ವರ್ತಿಸುತ್ತಿವೆ. ಅವು ಧರ್ಮ ಹಾಗೂ ಸ್ತ್ರೀ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ವಾಕ್ ಸ್ವಾತಂತ್ರ್ಯದ ಮೇಲೆ ನಿಯಂತ್ರಣ ಇರಬೇಕು. ಯಾಕೆಂದರೆ ಅದು ಇಸ್ಲಾಂನಲ್ಲಿ ಸಮ್ಮತವಲ್ಲ ಎಂದು ವಾದಿಸುತ್ತಿವೆ. (ಇತ್ತೀಚೆಗೆ ಸ್ವಾತ್ ಪ್ರದೇಶದಲ್ಲಿ ಇಸ್ಲಾಂನ ಶೆರಿಯತ್ ಕಾನೂನು ಜಾರಿ ಮಾಡಲು ಪಾಕಿಸ್ತಾನ ಸರಕಾರ ಸಮ್ಮತಿಸಿದ್ದನ್ನು ನೆನಪಿಸಿಕೊಳ್ಳಬಹುದು.)
‘ನೈಜೀರಿಯಾದಲ್ಲಿ ಗಂಡನಿಂದ ತಿರಸ್ಕೃತಳಾದ ಮಹಿಳೆಯನ್ನು ಮನೆಯಿಂದಲೇ ಹೊರಹಾಕಲಾಗುತ್ತದೆ. ಅವರ ಮಕ್ಕಳನ್ನು ನೋಡಲೂ ಅವಕಾಶ ಇಲ್ಲ. ಈ ಪದ್ಧತಿ ವಿರುದ್ಧ ಅನ್ಯಾಯಕ್ಕೊಳಗಾದ ಮಹಿಳೆಯರೆಲ್ಲ ಸೇರಿ ಪ್ರತಿಭಟಿಸಲು ನಿರ್ಧರಿಸಿದರೆ, ಅಲ್ಲಿನ ಪೊಲೀಸರು ಅದು ಇಸ್ಲಾಂಗೆ ವಿರುದ್ಧ ಎಂಬ ಕಾರಣ ನೀಡಿ ಪ್ರತಿಭಟನೆಗೆ ಅವಕಾಶ ನಿರಾಕರಿಸಿದರು. ಈ ಜಿಪ್ತ್‌ನಲ್ಲಿ ಶೆರಿಯತ್ ಕಾನೂನು ಜಾರಿ ಮಾಡದೆ, ಪರಿಷ್ಕೃತ ಇಸ್ಲಾಂ ಕಾನೂನು ಜಾರಿ ಮಾಡಬೇಕು ಎಂಬ ಅಭಿಪ್ರಾಯವನ್ನು ಬ್ಲಾಗ್‌ನಲ್ಲಿ ಪ್ರಕಟಿಸಿದ ಅಬ್ದುಲ್ ರೆಹಮಾನ್‌ನನ್ನು ಬಂಧಿಸಿ, ಬ್ಲಾಗ್ ಮುಚ್ಚಿಸಲಾಯಿತು. ಸೌದಿಯಲ್ಲಿ ವಯಸ್ಸಾದವನೊಬ್ಬ ೧೦ ವರ್ಷದ ಹುಡುಗಿಯನ್ನು ಮದುವೆಯಾಗಲು ಸಮ್ಮತಿಯಿದೆ.’
‘ಇಸ್ಲಾಂ ಸಂಸ್ಕೃತಿಯನ್ನು ಗೌರವಿಸಿ ಎಂದು ಬೊಬ್ಬೆ ಹೊಡೆಯುವ ಪ್ರಗತಿಪರರು, ಗೌರವಿಸಬೇಕಾದ್ದು ಮಹಿಳೆಯರನ್ನೊ? ಬ್ಲಾಗರ್‌ನನ್ನೊ? ಅಥವಾ ಇವರ ಸ್ವಾತಂತ್ರ್ಯ ಹತ್ತಿಕ್ಕುತ್ತಿರುವವರನ್ನೊ? ಎಂಬುದಕ್ಕೆ ಉತ್ತರಿಸಬೇಕು’ ಎಂಬುದು ಜೋಹಾನ್ ಹರಿಯ ಲೇಖನದ ಹೂರಣ. ಹೀಗೆ ಬರೆಯುತ್ತ ಆತ ‘೫೩ ವರ್ಷದವನಿದ್ದಾಗ ೯ ವರ್ಷದ ಬಾಲಕಿಯೊಂದಿಗೆ ಸಂಬಂಧ ಬೆಳೆಸಿದ, ತನ್ನ ಅನುಯಾಯಿಗಳಾಗಲಿಲ್ಲ ಎಂಬ ಕಾರಣಕ್ಕೆ ಇಡೀ ಗ್ರಾಮವೊಂದರ ಜನರನ್ನು ಕೊಲ್ಲುವಂತೆ ಆದೇಶಿಸಿದ ಪ್ರವಾದಿಯ ಮಾತನ್ನು ಅನುಸರಿಸಬೇಕು ಎಂಬ ಕಲ್ಪನೆಯನ್ನು ನಾನು ಗೌರವಿಸುದಿಲ್ಲ’ ಎಂದು ಬರೆದಿದ್ದಾನೆ.
ಇದೇ ವಿವಾದದ ಮೂಲ!
ಈ ವಾಕ್ಯದ ನಂತರ ‘ಜ್ಯೂಯಿಷ್‌ಗಳಿಗೆ ವೆಸ್ಟ್‌ಬ್ಯಾಂಕ್ ಹಸ್ತಾಂತರಿಸಬೇಕು ಮತ್ತು ಪ್ಯಾಲಿಸ್ತೇನಿಗಳನ್ನೆಲ್ಲ ಬಾಂಬ್ ಹಾಕಿ ಕೊಲ್ಲಬೇಕು ಎಂಬ ಭಾವನೆಯನ್ನೂ ಗೌರವಿಸುವುದಿಲ್ಲ. ಹಾಗೆಯೇ ಮಾನವ ಮೊದಲು ಕುರಿ, ಕೋತಿಯಾಗಿದ್ದ ಎಂಬ ನಂಬಿಕೆಯನ್ನೂ ಒಪ್ಪುವುದಿಲ್ಲ’ ಎಂದು ಜೋಹಾನ್ ಹರಿ ಬರೆದಿದ್ದು ಗದ್ದಲ ಮಾಡಿದವರಿಗೆ ಕಂಡಿಲ್ಲ.
ವಿಶ್ವದಲ್ಲಿ ಧರ್ಮಗಳನ್ನು ಟೀಕಿಸಿ ಪ್ರಕಟವಾದ ಪುಸ್ತಕಗಳಿಗೆ ಕೊರತೆಯಿಲ್ಲ. ಇತ್ತೀಚೆಗೆ ಕೇರಳದ ಸನ್ಯಾಸಿನಿಯೊಬ್ಬಳು ‘’ಅಮೆನ್- ಎ ಆಟೊಬಯಾಗ್ರಫಿ ಆಫ್ ನನ್’ ಎಂಬ ಆತ್ಮಚರಿತ್ರೆ ಬರೆದಿದ್ದಾಳೆ.ಅದರಲ್ಲಿ ಸನ್ಯಾಸಿನಿಯರ ಸಲಿಂಗ ಕಾಮ, ಫಾದರ್‌ಗಳ ಲೈಂಗಿಕ ಕಿರುಕುಳದ ಬಗ್ಗೆಲ್ಲ ತನ್ನ ೩೦ ವರ್ಷದ ಅನುಭವ ದಾಖಲಿಸಿದ್ದಾಳೆ. ಸಾಕಷ್ಟು ವಿವಾದ್ಕಕೀಡಾದ ‘ದ ವಿನ್ಸಿಕೋಡ್’ ನಿಮಗೆ ನೆನಪಿರಬಹುದು. ಯಾವುದೇ ವ್ಯಕ್ತಿ ‘ಮಹಾಭಾರತ’ದಲ್ಲಿ ದ್ರೌಪದಿ ಐವರ ಹೆಂಡತಿಯಾಗಿದ್ದಳು ಎಂದೊ, ಕೃಷ್ಣನ ರಾಸಲೀಲೆಗಳು, ಆತ ಗೋಪಿಕೆಯರ ಬಟ್ಟೆ ಕದ್ದದ್ದು, ಸೀತೆಯ ಅಗ್ನಿ ಪರೀಕ್ಷೆ ಮುಂತಾದವುಗಳನ್ನು ಟೀಕಿಸಿ ಬರೆದರೆ ಇಡೀ ಹಿಂದೂ ಸಮಾಜ ಸಿಡಿದೆದ್ದು ಪ್ರತಿಭಟಿಸುತ್ತದೆ ಎಂದು ನನಗನ್ನಿಸುವುದಿಲ್ಲ. ಎಲ್ಲೋ ಕೆಲವು ಸಂಘಟನೆಗಳು ಪ್ರತಿಭಟಿಸಬಹುದು. ಅಷ್ಟೆ. ಆದರೆ ಹೆಚ್ಚಿನವರು ಟೀಕೆಯನ್ನು ಒಪ್ಪಿಕೊಳ್ಳುತ್ತಾರೆ. ಇತ್ತೀಚೆಗೆ ಇಂಗ್ಲೀಷ್ ಪತ್ರಿಕೆಯೊಂದರಲ್ಲಿ ‘ಸೀತೆಯೂ ಮದ್ಯಪಾನ ಮಾಡುತ್ತಿದ್ದಳು’ ಎಂಬ ಲೇಖನ ಪ್ರಕಟವಾಯಿತು.
ಒಂದೇಒಂದು ಪ್ರತಿಭಟನೆಯೂ ನಡೆಯಲಿಲ್ಲ!!
ಆದರೆ ಪ್ರವಾದಿಯ ಬಗ್ಗೆ, ಇಸ್ಲಾಂ ಬಗ್ಗೆ ಟೀಕಿಸುವುದು ಬಿಡಿ ಒಂದು ಕಾರ್ಟೂನು, ಒಂದು ವಾಕ್ಯ ಬರೆದರೂ ಸಾಕು ದೊಡ್ಡ ಗಲಾಟೆಗಳಾಗುತ್ತವೆ. ಹಿಂದೊಮ್ಮೆ ವಿದೇಶದಲ್ಲೆಲ್ಲೊ ಪ್ರವಾದಿಯ ಕಾರ್ಟೂನ್ ಪ್ರಕಟಿಸಿದ್ದಕ್ಕೆ ಭಾರತದಲ್ಲಿ ಪ್ರತಿಭಟನೆ, ಗಲಾಟೆಗಳು ನಡೆದಿದ್ದವು. ಡ್ಯಾನಿಷ್ ಕಾರ್ಟೂನ್‌ಗಾಗಿ ಕ್ಷಮೆ ಕೇಳಿ ಇಲ್ಲವೇ ಆತನ ತಲೆದಂಡಕ್ಕಾಗಿ ಬಹುಮಾನ ಘೋಷಣೆ ಮಾಡುತ್ತೇವೆ ಎಂಬ ಘೋಷಣೆ ಹೊರಬಿತ್ತು. ಕರ್ನಾಟಕದ್ದೇ ಪತ್ರಿಕೆಗೆ ಹಿಂದೆ ಇಂಥದ್ದೇ ಅನುಭವವಾಗಿದೆ. ಲೇಖಕಿ ತಸ್ಲೀಮಾ ನ್ರೀನ್‌ಗೆ ಭಾರತದಲ್ಲಿ ಯಾವ ಸ್ಥಿತಿ ನಿರ್ಮಾಣ ಮಾಡಿದರು ಎಂಬುದು ನಿಮಗೆ ಗೊತ್ತೇ ಇದೆ. ಜಾತ್ಯತೀತ ಎಂದು ಹೇಳಿಕೊಳ್ಳುವ ಭಾರತದಲ್ಲಿರುವ ಕೋಲ್ಕತ್ತಾದಿಂದಲೇ ಅವಳ್ನನು ಹೊರಗಟ್ಟಲಾಯಿತು. ಸಲ್ಮಾನ್ ರಶ್ದಿಗೆ ಕೊಲೆ ಬೆದರಿಕೆ ಹಾಕಲಾಗಿತ್ತು.
ಶಾರದೆಯನ್ನು ಬೆತ್ತಲೆಯಾಗಿ ಚಿತ್ರಿಸಿದ ಎಂ.ಎಫ್. ಹುಸೇನ್ ಮೇಲೆ ದಾಳಿಗಳು ನಡೆದಾಗ ಅದನ್ನು ಪ್ರಗತಿಪರರು ವಿರೋಧಿಸಿದರು. ಆ ಪ್ರಗತಿಪರರೆಲ್ಲ ಇಂತಹ ಘಟನೆಗಳನ್ನೂ ಯಾಕೆ ವಿರೋಧಿಸುವುದಿಲ್ಲ? ಈಗ ಯಾಕೆ ‘ದಿ ಸ್ಟೇಟ್ಸ್‌ಮೆನ್’ ಪತ್ರಿಕೆ ಸಂಪಾದಕ ಹಾಗ ಲೇಖಕ ಜೋಹಾನ್ ಹರಿ ಪರವಾಗಿ ಯಾಕೆ ಮಾತನಾಡುವುದಿಲ್ಲ. ಅವರ ವಿರುದ್ಧ ಹಿಂಸೆಗಿಳಿದವರನ್ನು ಯಾಕೆ ಖಂಡಿಸುವುದಿಲ್ಲ?ತನಗೆ ಇಷ್ಟಬಂದಂತೆ ಚಿತ್ರ ರಚಿಸುವುದು ಕಲಾವಿದನ ಹಕ್ಕು. ಅದನ್ನು ಒಪ್ಪದವರು ಚಿತ್ರ ನೋಡದಿದ್ದರಾಯಿತು ಎಂಬುದು ಹುಸೇನ್ ಮೇಲಿನ ಹಲ್ಲೆ ವಿರೋಧಿಸುವವರ ವಾದ. ಸರಿ ಒಪ್ಪಿಕೊಳ್ಳೋಣ. ಅಕಸ್ಮಾತ್ ಹುಸೇನ್ ಅವರೇ ಪ್ರವಾದಿಯ ಅಶ್ಲೀಲ ಚಿತ್ರ ಬೇಡ ಸಾದಾ ಚಿತ್ರ ಬಿಡಿಸಿದ್ದರೆ? ದೊಡ್ಡ ಗದ್ದಲವೇ ಆಗುತ್ತಿತ್ತೇನೊ. ಆಗ ಪ್ರಗತಿಪರರು ‘ಇಸ್ಲಾಂನಲ್ಲಿ ಪ್ರವಾದಿಯ ಯಾವುದೇ ಬಗೆಯ ಚಿತ್ರೀಕರಣ ಮಾನ್ಯವಲ್ಲ. ಆದ್ದರಿಂದ ಅವರು ಮಹಾಪರಾಧ ಮಾಡಿದ್ದಾರೆ’ ಎಂದು ಚಿತ್ರ ಬಿಡಿಸಿದವರನ್ನೇ ಖಂಡಿಸುತ್ತಿದ್ದರು. ಮುಸ್ಲಿಮರ ಪ್ರಕಾರ ಪ್ರವಾದಿಯ ಚಿತ್ರೀಕರಣ ನಿಷಿದ್ಧ. ಆದರೆ ಬೇರೆ ಧರ್ಮದವರೂ ಅವರ ನಿಯಮಗಳಿಗೆ ಬದ್ಧರೆ? ಮುಸ್ಲಿಮರು ಖುರಾನ್‌ಗೆ, ಮುಲ್ಲಾಗರಳ ಆದೇಶಕ್ಕೆ ಬದ್ಧರಾಗಿರಬೇಕು. ಆ ವಿಷಯದಲ್ಲಿ ವಾಕ್ ಸ್ವಾತಂತ್ರ್ಯ ಹೊಂದಿರಬಾರದು. ಆದರೆ ಬೇರೆ ಧರ್ಮದವರೂ ಅದನ್ನು ಪಾಲಿಸಬೇಕೆಂದೇನೂ ಇಲ್ಲವಲ್ಲ. ಎಂ.ಎಫ್. ಹುಸೇನ್ ಕಲಾಕಾರನ ಕಲ್ಪನೆಯಿಂದ ಶಾರದೆಯನ್ನು ಕಲ್ಪಿಸಿದರೊ, ಹಾಗೆಯೇ ಬೇರೊಬ್ಬ ಕಲಾಕಾರನ ದೃಷ್ಟಿಗೆ ಪ್ರವಾದಿ ಕೂಡ ಹಾಗೆಯೇ ಕಾಣಬಹುದು. ಆಗ?
ಶಾರದೆಯ ಚಿತ್ರವನ್ನು ಅಭಿವ್ಯಕ್ತಿ ಸ್ವಾತಂತ್ರ್ಯವೆಂದು ಸಹಿಸಿಕೊಳ್ಳಿ ಎನ್ನುವವರು ಇನ್ನೊಬ್ಬ ಕಲಾಕಾರ ಬಿಡಿಸಿದ ಪ್ರವಾದಿಯ ಚಿತ್ರವನ್ನು ಸಹಿಸಿಕೊಳ್ಳಲೂ ಸಿದ್ಧರಿರಬೇಕಲ್ಲವೆ? ಈ ಪಗ್ರತಿಪರರು ವಾಕ್ ಮತ್ತು ಅಭಿವ್ಯಕಿ ಸ್ವಾತಂತ್ರ್ಯವನ್ನು ಬೆಂಬಲಿಸುತ್ತಾರೆ. ಆದರೆ ದುರಭಿಮಾನಿಗಳೂ, ಅಂಧಾಭಿಮಾನಿಗಳು ವಿರೋಧಿಸುವ ವಿಷಯದ ಬಗ್ಗೆ ಮಾತನಾಡಿದರೆ, ಆಗ ಸರೀ ವಿರುದ್ಧ ನಿಲುವು ತಾಳುತ್ತಾರೆ. ಗಲಾಟೆಗೆ ಪ್ರಚೋದಿಸಿದ್ದೇ ಹಿಂಸೆಗೆ ಮೂಲ ಕಾರಣ ಎಂದು ದೂರುತ್ತಾರೆ. ಇದೇ ಜನರ ಬಳಿ ‘ಕರಾವಳಿಯಲ್ಲಿ ಅಕ್ರಮ ದನ ಸಾಗಾಟವೇ ಕೋಮು ಗಲಭೆಗೆ ಮೂಲ ಕಾರಣ’ ಎಂದು ಹೇಳಿನೋಡಿ. ಆಗ ಅವರು ‘ಇಲ್ಲಾ ಅದನ್ನು ಬಜರಂಗದಳದವರು ತಡೆದು ತಾವೇ ಪೊಲೀಸರಾಗ ಹೊರಟಿರುವುದೇ ಗಲಭೆಗೆ ಕಾರಣ’ ಅನ್ನುತ್ತಾರೆ.
ರಾಮಜನ್ಮಭೂಮಿ ಸಮಸ್ಯೆಯನ್ನೇ ನೋಡಿ. ಅಲ್ಲಿ ರಾಮ ಮಂದಿರ ನಿರ್ಮಿಸಲು ಯತ್ನಿಸುವ ಮೂಲಕ ಮುಸ್ಲಿಮರನ್ನು ಪ್ರಚೋದಿಸುವ ಕೆಲಸ ನಡೆಯುತ್ತಿದೆ. ಅದಕ್ಕಾಗಿ ಯಾವನಾದರೂ ಒಬ್ಬ ಬುದ್ದಿಜೀವಿ ‘ನೋಡಿ ರಾಮಜನ್ಮಭೂಮಿ ನಿಷ್ಪ್ರಯೋಜಕ ಎಂಬುದು ನನಗೂ ಗೊತ್ತು. ಆದರೇನು ಮಾಡುವುದು ಈ ವಿವಾದದಿಂದ ಬಿಜೆಪಿಗೆ ಲಾಭವಾಗುತ್ತದೆ. ದಿನದಿಂದ ದಿನಕ್ಕೆ ಅದರ ಜನಪ್ರಿಯತೆ ಹೆಚ್ಚುತ್ತಿದೆ. ಅದರ ಬದಲು ರಾಮಂದಿರ ನಿರ್ಮಾಣಕ್ಕೆ ಅವಕಾಶ ಮಾಡಿಕೊಡೋಣ. ಆ ಮೂಲಕ ನಾವು ಕೋಮು ಸಮಾರಸ್ಯಕ್ಕೆ ಮೊದಲ ಹೆಜ್ಜೆ ಇಡೋಣ. ಬಿಜೆಪಿಗೆ ಪ್ರಚಾರ ಪಡೆಯಲೂ ಅವಕಾಶ ಇಲ್ಲದಂತಾಗುತ್ತದೆ. ಹೇಗೂ ಬಾಬರಿ ಮಸೀದಿ ನಮಾಜ್‌ಗೆ ಬಳಕೆಯಾಗುತ್ತಿಲ್ಲ’ ಎಂದುಬಿಟ್ಟರೆ. ಹೀಗೆ ಯಾವನಾದರೂ ಹೇಳಿದರೆ ಅಂತ ನಾನು ಬರೆದಿದ್ದಕ್ಕೇ ವಿಚಾರವಾದಿಗಳು ಸಿಟ್ಟಿಗೇಳುವ ಸಾದ್ಯತೆಯಿದೆ.
ಮಂಗಳೂರು ಪಬ್ ದಾಳಿಗೆ ರಾಷ್ಟ್ರೀಯ ಮಾಧ್ಯಮಗಳು ಎಷ್ಟೆಲ್ಲ ಪ್ರಚಾರ ನೀಡಿದವುಎಂಬುದು ನಿಮಗೆ ಗೊತ್ತೇ ಇದೆ. ಆಗ ಕೇಂದ್ರ ಮಹಿಳಾ ಆಯೋಗದಿಂದ ತನಿಖೆಗೆ ಆಗಮಿಸಿ ಸಮಿತಿಯ ನೇತೃತ್ವ ವಹಿಸಿದ್ದ ನಿರ್ಮಲಾ ವೆಂಕಟೇಶ್ ಅವರನ್ನು ಅದೇ ಮಾಧ್ಯಮಗಳು ದಿನಾ ತೋರಿಸಿದವು. ಆದರೆ ಅದೇ ನಿರ್ಮಲಾ ವೆಂಕಟೇಶ್ ಅವರ ಸಮಿತಿ ನೀಡಿದ ವರದಿಯನ್ನು ಕೇಂದ್ರ ಸರಕಾರ ತಿರಸ್ಕರಿಸಿತು. ತನಗೆ ಬೇಕಾದಂತೆ ವರದಿ ನೀಡಲಿಲ್ಲ ಎಂಬ ಕಾರಣಕ್ಕೆ, ನಿರ್ಮಲಾ ವೆಂಕಟೇಶ್ ಅವರು ರಾಜೀನಾಮೆ ಸಲ್ಲಿಸಿದ್ದರೂ, ಅವರನ್ನು ವಜಾ ಮಾಡಿ ಆದೇಶ ಹೊರಡಿಸಿತು. ಇದು ಮಹಿಳೆಯರ ಮೇಲಿನ ದೌರ್ಜನ್ಯವಲ್ಲವೇ? ಪಬ್‌ನಲ್ಲಿ ದಾಳಿಗೊಳಗಾದ ಮಗಿಳೆಯರ ಪರ ವಕಾಲತ್ತು ವಹಿಸಿದ ಮಾಧ್ಯಮಗಳು, ಮಹಿಳಾ ಪರ ಹೋರಾಟಗಾರರೆಲ್ಲ ಸ್ಥಾನ ಕಳೆದುಕೊಂಡ ನಿರ್ಮಲಾ ವೆಂಕಟೇಶ್ ಪರ ಯಾಕೆ ನಿಲ್ಲಲಿಲ್ಲ? ನಿರ್ಮಲಾ ವೆಂಕಟೇಶ್ ಅವರನ್ನು ವಜಾ ಮಾಡಿದ್ದು ಅನಗತ್ಯ ಎಂದು ಯಾಕೆ ವಾದಿಸಲಿಲ್ಲ?
ಪ್ರಗತಿಪರರೇ ಯಾಕೀ ದ್ವಿಮುಖ ನೀತಿ? ಜಾತ್ಯತೀತ ಸಮಾಜಕ್ಕೆ ಇದು ತಕ್ಕುದಲ್ಲ. ಪ್ರಗತಿಪರರ ನಿಲುವು ಸರಿಯಾಗಿರಬೇಕು. ಎಲ್ಲ ವಿಷಯದಲ್ಲೂ ಸಮನಾದ, ಜಾತ್ಯತೀತ, ವಿಷಯ ನಿಷ್ಟ ನಿಲುವು ವ್ಯಕ್ತಪಡಿಸಬೇಕು. ಪ್ರಗತಿಪರರ ನಿಲುವುಗಳೂ ಧರ್ಮ, ಜಾತಿ ಅವಲಂಬಿಸುವಂತಾದರೆ ‘ಜಾತ್ಯತೀತ’ ಎಂಬ ಶಬ್ದಕ್ಕೆ ಅರ್ಥವಿರುವುದಿಲ್ಲ. ಪ್ರಗತಿಪರರು ಹೆಸರಿಗೆ ಮಾತ್ರ ಪ್ರಗತಿಪರರಾಗಿರುತ್ತಾರೆ. ಆಗ ‘ಪ್ರಗತಿಪರರೇ ನೀವು ನಿಜವಾಗಿಯೂ ಪ್ರಗತಿಪರವೇ’ ಎಂಬ ಅನುಮಾನ ಮೂಡುತ್ತದೆ.

Tuesday, March 10, 2009

ಹೀಗೊಂದು ನಂಬಲಾಗದ ಕತೆ

ಇಂತಹ ಕತೆ ನಾನು ಹಿಂದೆಂದೂ ಕೇಳಿರಲಿಲ್ಲ. ಬಹುಶಃ ಮುಂದೆಯೂ ಕೇಳಲಿಕ್ಕಿಲ್ಲ. ನೀವೂ ಕತೆ ಓದಿದ ನಂತರ ಹೀಗೇ ಹೇಳುತ್ತೀರಿ. ಯಾಕೆಂದರೆ ಹಾಗಿದೆ ಈ ಕತೆ.
ದೆಹಲಿ ಕರ್ನಾಟಕದ ಸಂಘದಲ್ಲೊಂದು ಕಾರ್ಯಕ್ರಮ. ಕರ್ನಾಟಕ ವಾರ್ತಾ ಇಲಾಖೆಯಲ್ಲಿ ದೆಹಲಿ ಕಚೇರಿಯಲ್ಲಿ ವಾರ್ತಾಧಿಕಾರಿಯಾಗಿರುವ ವೀರಣ್ಣ ಆಗಾಗ ದೆಹಲಿ ಕನ್ನಡಿಗರಿಗಾಗಿ ಕನ್ನಡ ಸಿನಿಮಾ ತೋರಿಸುತ್ತಿರುತ್ತಾರೆ. ಹಾಗೇ ಒಮ್ಮೆ ಸಿನಿಮಾ ತೋರಿಸುತ್ತೇನೆ ಬನ್ನಿ ಎಂದು ಕರೆದಿದ್ದರು. ಹೋಗಿದ್ದೆ. ಅಂತಹ ಅವಕಾಶ ತಪ್ಪಿಸುವುದಿಲ್ಲ.
ಯಾಕೆಂದರೆ ದೆಹಲಿಯಲ್ಲಿ ಕನ್ನಡ ಸಿನಿಮಾ ಅಂದರೆ ಸಮುದ್ರದ ನಡುವೆ ಸಿಹಿನೀರು ಸಿಕ್ಕಂತೆ!

ಹಾಗೆ ಸಿನಿಮಾ ನೋಡೋಕೆ ಅಂತ ಕೆಲವು ತಿಂಗಳ ಹಿಂದೆ ಹೋದಾಗ ಒಂದು ಸಭಾ ಕಾರ್ಯಕ್ರಮ ಇಟ್ಟುಕೊಂಡಿದ್ರು. ಅದು ಪಾಪ ವೀರಣ್ಣ ಅವರ ಕುಕೃತ್ಯವಾಗಿರಲಿಲ್ಲ. ಆದರೆ ಅವರು ಅದನ್ನು ತಪ್ಪಿಸುವಂತೆಯೂ ಇರಲಿಲ್ಲ. ಅನಿವಾರ್ಯ ಕರ್ಮ. ಕಾರ್ಯಕ್ರಮಕ್ಕೆ ತಲೆಕೊಟ್ಟವು. ಭಾಷಣ ಕೇಳುವ ಆಸಕ್ತಿ ಯಾರಿಗೂ ಇರಲಿಲ್ಲ. ಆದರೆ ಕೇಳದೆ ಇರುವಂತೆಯೂ ಇರಲಿಲ್ಲ.
ಆಗ ಭಾಷಣ ಮಾಡಿದ ಒಬ್ಬರು ಒಂದು ಕತೆ ಹೇಳಿದರು ನೋಡಿ. ಕೇಳಿ ನಾನು ದಂಗಾಗಿ ಹೋದೆ. ಅರೆ ಇಂತಹ ಕತೆಯೂ ಇದೆಯಾ? ಇದನ್ನು ಇಷ್ಟೆಲ್ಲ ಜನರ ಎದುರು ಹೇಳಲು ಅವರಿಗೆಷ್ಟು ಧೈರ್ಯ? ಏನು ನಮ್ಮನ್ನೆಲ್ಲಾ ದಡ್ಡರೆಂದು ಅವರು ಅಂದುಕೊಂಡಿದ್ದೀರಾ? ಅಥವಾ ಅವರೇ ದಡ್ಡರು ಎಂಬುದನ್ನು ಸಾಬೀತು ಮಾಡಲು ಅವರು ಹೊರಟಿದ್ದರಾ?
ಒಂದೂ ಅರ್ಥವಾಗಲಿಲ್ಲ!
ಕತೆ ಹೀಗಿತ್ತು....
ಅವರು ಒಮ್ಮೆ ಬೆಂಗಳೂರು ಹೊರಭಾಗದಲ್ಲಿ ಒಂದು ಬಸ್ಸಿನಲ್ಲಿ ಹೋಗುತ್ತಿದ್ದಂತೆ. ಅದು ಆ ಊರಿಗಿರುವ ಒಂದೇ ಒಂದು ಬಸ್. ಬಸ್ಸು ತುಂಬ ರಶ್ಶಿತ್ತು. ಅಷ್ಟು ರಶ್ಶಿದ್ದ ಬಸ್ಸಿಗೆ ಮಗು ಕರೆದುಕೊಂಡಿದ್ದ ಒಬ್ಬ ಹೆಂಗಸು ಕೈ ಮಾಡಿದಳು. ನಮ್ಮದು ಎಷ್ಟೆಂದರೂ ಕೈ ತೋರಿಸಿದಲ್ಲಿ ನಿಲ್ಲುವ ವಾಹನವಲ್ಲವೆ? ಬಸ್ಸು ನಿಂತಿತು. ಹೇಗೇಗೋ ಪ್ರಯತ್ನ ಮಾಡಿ ಆಕೆ ಬಸ್ಸು ಹತ್ತಿದಳು. ಸ್ವಲ್ಪ ದೂರ ಹೋದ ನಂತರ ಬಸ್ಸಿನಿಂದ ಏನೋ ಬಿದ್ದಂತಾಯಿತು. ಏನು? ಏನು? ಏನು? ಅಂತ ಎಲ್ಲರೂ ನೋಡಿದ್ದೇ ನೋಡಿದ್ದು. ೧-೨ ಕಿ.ಮೀ ಹೋದ ಮೇಲೆ ಅದು ಮಗುವೇ ಇರಬೇಕು ಎಂಬ ಅನುಮಾನ ತಾಯಿಗೆ ಆರಂಭವಾಯಿತು.
ನೋಡಿದರೆ ಹೌದು!
ತಾಯಿ ಮಗುವನ್ನು ಬುಟ್ಟಿಯಲ್ಲಿ ಹಾಕಿ ಬಸ್ಸಿನ ಟಾಪ್ ಮೇಲಿಟ್ಟಿದ್ದಳು. ಬಸ್ಸಿನ ಓಲಾಡುವಿಕೆಯಲ್ಲಿ ಮಗು ಕೆಳಗೆ ಬಿದ್ದಿತ್ತು. ಬಸ್ಸು ನಿಲ್ಲಿಸಿ ತಾಯಿ ಇಳಿದಳು. ಅವಳ ಜತೆ ನಮಗೆ ಕತೆ ಹೇಳಿದವರು ಹಾಗೂ ಮತ್ತೊಂದಿಬ್ಬರು ಬಸ್ ಇಳಿದರಂತೆ. ನಡೆದುಕೊಂಡು ಹೋಗಿ ನೋಡಿದರೆ ಮಗು ರಸ್ತೆ ಬದಿಗೆ ಬಿದ್ದಿತ್ತಂತೆ. ಬುಟ್ಟಿಯಲ್ಲಿದ್ದಿದ್ದರಿಂದ ಗಾಯವೇನೂ ಆಗಿರಲಿಲ್ಲ.
ಇಷ್ಟೇ ಅವರ ಕತೆ. ಅಲ್ಲಲ್ಲ ಸತ್ಯ ಘಟನೆ.
ನನ್ನ ಸಂಶಯ ಇಷ್ಟೆ. ಯಾವ ತಾಯಿಯೂ ಬಸ್ ಟಾಪ್ ಮೇಲೆ ಮಗುವನ್ನಿಟ್ಟು ತಾನು ಮಾತ್ರ ಒಳಗೆ ಕೂರುವುದಿಲ್ಲ. ಒಂದೋ ಆಕೆಯೂ ಮಗುವಿನ ಜತೆಯೇ ಬಸ್ ಟಾಪಿನ ಮೇಲೆ ಕೂರುತ್ತಾಳೆ. ಕರುನಾಡಲ್ಲಿ ಇನ್ನೂ ಅಂತಹ ತಾಯಂದಿರು ಇಲ್ಲ ಎಂಬುದು ನನ್ನ ಭಾವನೆ. ಹೀಗಿರುವಾಗ ಆ ಹಿರಿಯರು ಹೇಳಿದ ಘಟನೆ ಸತ್ಯಾಸತ್ಯತೆ ಬಗ್ಗೇ ನನಗೆ ಅನುಮಾನವಿದೆ. ಅವರು ಏನೋ ಹೇಳಲು ಹೋಗಿ ಏನೋ ಹೇಳಿದ್ದರು. ಯಾಕೆ ಕೆಲವರು ದೊಡ್ಡ ಸ್ಥಾನದಲ್ಲಿದ್ದರೂ ಹೀಗೆಲ್ಲ ಮಾತನಾಡುತ್ತಾರೊ? ಅಥವಾ ಮಾತನಾಡುವ ತೆವಲು ಅವರಿಂದ ಹೀಗೆಲ್ಲ ಆಡಿಸುತ್ತದೊ? ಒಂದೂ ಅರ್ಥವಾಗುತ್ತಿಲ್ಲ. ಅಂತೂ ಅವರ ಕತೆಯಿಂದಾಗಿ ನಿಷ್ಪ್ರಯೋಜಕ ಕಾರ್ಯಮವೊಂದು ನಮ್ಮನ್ನು ಚಿಂತೆಗೆ ಹಚ್ಚಿದ್ದು ಸುಳ್ಳಲ್ಲ.
ಈ ಕತೆ ನಿಮ್ಮನ್ನೂ ಚಿಂತೆಗೆ ಹಚ್ಚಿದರೆ ನಾನು ಅದಕ್ಕೆ ಕಾರಣವಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸುತ್ತೇನೆ. ಆ ಕೀರ್ತಿ ಏನಿದ್ದೂ ಕತೆ ಹೇಳಿದವರಿಗೇ ಸೇರಬೇಕು.

Monday, February 23, 2009

‘ಸ್ಲಂ ಡಾಗ್’ ಕಾಲದಲ್ಲಿ ‘ಶೌರ್ಯ’ದ ಬೊ(ಹೊ)ಗಳಿಕೆ



ಒಮ್ಮೊಮ್ಮೆ ಹೀಗೇ ಆಗೋದು ನೋಡಿ. ಆ ಡಿವಿಡಿ ತಂದು ಅದೆಷ್ಟೋ ದಿನವಾಗಿತ್ತು. ನನಗೆ ಅತ್ಯಂತ ಪ್ರಿಯವಾದ, ಇಷ್ಟವಾದ ‘ಎ ವೆನ್ಸಡೆ’ ಡಿವಿಡಿಯೊಟ್ಟಿಗೆ ಶೌರ್ಯ ಸಿನಿಮಾದ ಡಿವಿಡಿಯೂ ಇತ್ತು. ಒಮ್ಮೆ ಹಚ್ಚಿ ನೋಡಲು ಕುಳಿತು, ತುರ್ತು ಕೆಲಸದಿಂದ ಬಂದ್ ಮಾಡಿದ್ದೆ. ಶೌರ್ಯ ನೋಡಬೇಕು ಅಂತ ಹಲವು ಬಾರಿ ಅಂದುಕೊಂಡಿದ್ದೆನಾದರೂ, ಕಾಲ ಕೂಡಿ ಬಂದಿರಲಿಲ್ಲ. ಹಿಂದೊಮ್ಮೆ ಗಣೇಶಯ್ಯ ಅವರ ‘ಶಾಲಭಂಜಿಕೆ’ ಪುಸ್ತಕ ಕೂಡ ಹೀಗೇ ಆಗಿತ್ತು. ಆಮೇಲೆ ಓದಿದಾಗ ಛೆ ಮೊದಲೇ ಓದಬಾರದಿತ್ತೆ ಅನ್ನಿಸಿತ್ತು.

ಶೌರ್ಯ ಸಿನಿಮಾ ನೋಡಿದಾಗಲೂ ಹಾಗೇ ಅನ್ನಿಸಬೇಕೆ!

ಇವತ್ತು ಕಚೇರಿಯಿಂದ ಮನೆಗೆ ಬರುವಾಗ ಯಾಕೋ ಶೌರ್ಯ ನೆನಪಾಯಿತು. ಮನೆಗೆ ಬಂದವನೆ ಬೇರೇನೂ ವಿಚಾರ ಮಾಡದೆ ಕಂಪ್ಯೂಟರ್ ಆನ್ ಮಾಡಿ ಕುಳಿತೆ.

ವಾವ್.... ಸೂಪರ್.... ಫೆಂಟಾಸ್ಟಿಕ್....

ಒಮ್ಮೊಮ್ಮೆ ಅಲ್ಲ ಹಲವು ಬಾರಿ ಹೀಗೇ ಆಗುತ್ತೆ ನೋಡಿ. ಎಷ್ಟೋ ಜನ ಈ ಸಿನಿಮಾದ ಹೆಸರನ್ನಾದರೂ ಕೇಳಿದ್ದಾರೊ ಇಲ್ಲವೊ. ಸಾಮಾನ್ಯವಾಗಿ ನಾವು ಬಹುಜನರ ಅಭಿಪ್ರಾಯದಲ್ಲಿ ತೇಲಿಹೋಗುತ್ತೇವೆ. ‘ಸ್ಲಂ ಡಾಗ್’ ಸಿನಿಮಾದಂತೆ!

ನಮ್ಮ ಕಚೇರಿಯಲ್ಲಿರುವ ವಿನಯ್ ಶೇಷಗಿರಿ ‘ಸ್ಲಂ ಡಾಗ್’ ನೋಡಿ ಬಂದು, ಛೆ ಪ್ರಯೋಜನವಿಲ್ಲ. ಒಬ್ಬ ಭಾರತೀಯನಾಗಿ ನಾನು ಅದನ್ನು ಇಷ್ಟಪಡುವುದಿಲ್ಲ ಎಂದರು. ಆ ಸಿನಿಮಾ ನೋಡಬೇಕೆಂದು ಇದ್ದ ಸಣ್ಣ ಉದ್ದೇಶವನ್ನೂ ಕೈಬಿಟ್ಟೆ.

‘ಶೌರ್ಯ’ ಸಿನಿಮಾ ನೋಡಿದಾಗ ಮಾಧ್ಯಮಗಳು ಹೇಗೆ ನಮ್ಮ ಟೇಸ್ಟ್‌ಗಳನ್ನು, ನಿರ್ಣಯಗಳನ್ನು ಬದಲಿಸಿಬಿಡುತ್ತವೆ ಅಂದುಕೊಂಡೆ. ‘ಸ್ಲಂ ಡಾಗ್’ ಬಗ್ಗೆ ನಮ್ಮಲ್ಲಿರುವ ಸ್ಲಂಗಳ ಬಗ್ಗೆ ವರದಿ ಮಾಡಿದ್ದಕ್ಕಿಂತ ಬೇಕಾದಷ್ಟು ಹೆಚ್ಚು ವರದಿ ಮಾಡಿದ ಮಾಧ್ಯಮಗಳು, ನಾವೂ ಆ ಸಿನಿಮಾ ನೋಡಬೇಕು ಅನ್ನಿಸುವಂತೆ ಮಾಡಿಬಿಟ್ಟವು. ನೀವು ಆ ಸಿನಿಮಾ ನೋಡದಿದ್ದರೇ ಬದುಕಿರುವುದೇ ವೇಸ್ಟು ಎಂಬಂತೆ ಬರೆದವು. ಅದೇ ಮಾಧ್ಯಮಗಳು ‘ಶೌರ್ಯ’ದ ಬಗ್ಗೆ ನಿಮಗೆ ಗೊತ್ತೇ ಆಗದಷ್ಟು ಚಿಕ್ಕದಾಗಿ ಬರೆದವು.

ಸಮಸ್ಯೆಯೆಂದರೆ ಬಹುತೇಕ ಬಾರಿ ನಾವು ಸಿನಿಮಾ ರಿವ್ಯೂ ಆಧರಿಸಿ ಸಿನಿಮಾ ನೋಡುತ್ತೇವೆ. ನಾನು ಸಿನಿಮಾ ರಿವ್ಯೂ ಓದುವುದು ಕಡಿಮೆ, ನನಗೆ ನೋಡಬೇಕು ಅನ್ನಿಸಿದರೆ ನೋಡುತ್ತೇನೆ. ಇಲ್ಲವಾದಲ್ಲಿ ಅದೆಷ್ಟೇ ಸೂಪರ್ ಹಿಟ್ ಆಗಿರಲಿ ನಾನು ನೋಡುವುದಿಲ್ಲ.

ಜನರೆಲ್ಲ ನೋಡಿದ ಸಿನಿಮಾ ನಾನು ನೋಡುವುದಿಲ್ಲ. ಬಹುತೇಕ ಸಿನಿಮಾಗಳು ನಾನು ನೋಡಿದ್ದನ್ನು ಹೆಚ್ಚಿನ ಜನ ನೋಡಿರುವುದಿಲ್ಲ.

ಶೌರ್ಯ ಅಂತಹ ಸಿನಿಮಾಗಳಲ್ಲೊಂದು. ಶೌರ್ಯ ನಿಜಕ್ಕೂ ಅದ್ಭುತ ಸಿನಿಮಾ. ಸೈನ್ಯಾಧಾರಿತ ಕತೆ. ನಿಮ್ಮನ್ನು ಆಕರ್ಷಿಸುವ ನಟರಿಲ್ಲ. ದೊಡ್ಡ ದೊಡ್ಡ ಬಾಡಿಗಳ ನಾಯಕರಿಲ್ಲ. ಹೊಕ್ಕಳ ಕೆಳಗೆ ಸೀರೆ ಉಡುವ, 'ಪಿಂಕ್' ಚಡ್ಡಿ ಕಾಣಿಸುವಷ್ಟು ಚಿಕ್ಕ ಸ್ಕರ್ಟ್ ಹಾಕುವ ನಾಯಕಿಯಿಲ್ಲ. ಐಟಂ ಸಾಂಗ್ ಇಲ್ಲ. ಆದರೆ ಒಳ್ಳೆ ಕತೆಯಿದೆ. ನಿಮ್ಮನ್ನು ಆಸಕ್ತಿಯಿಂದ ನೋಡುವಂತೆ ಮಾಡುವ ಸ್ಕ್ರೀನ್ ಪ್ಲೇ ಇದೆ. ಸೈನ್ಯದ ಬಗ್ಗೆ ಒಂದೊಳ್ಳೆ ಮೆಸೇಜ್ ಇದೆ.

ಚಿತ್ರದ ನಾಯಕ ರಾಹುಲ್ ಭೋಸ್ ನ ವಿಚಿತ್ರವಾದ, ಕನ್‌ಫ್ಯೂಸ್ ಆದಂತಿರುವ ಆತನ ಪಿಕ್ಯುಲರ್ ಮ್ಯಾನರಿಸಂ ನಂಗಿಷ್ಟ. ಈತ ಸಿನಿಮಾದಲ್ಲಿ ಒಬ್ಬ ಬೇಜವಾಬ್ದಾರಿ, ಜಾಲಿ ಮನುಷ್ಯ. ಈತನ ಹೆಸರು ಮೇಜರ್ ಸಿದ್ದಾರ್ಥ ಚೌಧರಿ. ಈತನ ಗೆಳೆಯ ಮೇಜರ್ ಆಕಾಶ್ ಚೌಧರಿ. ಒಂದು ದಿನ ಆಕಾಶ್ ಕೇಸೊಂದನ್ನು ತಂದು ಸಿದ್ದಾರ್ಥನಿಗೆ ನೀಡುತ್ತಾನೆ. ಸೈನ್ಯದ ಅಧಿಕಾರಿಯೊಬ್ಬ ತನ್ನ ಕಮಾಂಡಿಂಗ್ ಅಧಿಕಾರಿಯನ್ನೇ ಕೊಂದಿರುತ್ತಾನೆ. ಆತನ ಕೋರ್ಟ್ ಮಾರ್ಷಲ್ ನಡೆಯಬೇಕಿರುತ್ತದೆ. ಅದರಲ್ಲಿ ಆತನ ಪರವಾಗಿ ಸಿದ್ದಾರ್ಥ ವಾದಿಸಬೇಕು. ಇಷ್ಟವಿಲ್ಲದ ಮನಸ್ಸಿನಿಂದ ಒಪ್ಪಿಕೊಂಡ ಸಿದ್ದಾರ್ಥನಿಗೆ ಪತ್ರಕರ್ತೆ (ಚಿತ್ರದ ನಾಯಕಿ) ಭೇಟಿಯಾಗುತ್ತಾಳೆ. ಆಕೆ ಕೇಸಿನ ಬಗ್ಗೆ ಕೇಳಿದಾಗ ಸಿದ್ದಾರ್ಥ ಸರಿಯಾಗಿ ಉತ್ತರಿಸುವುದಿಲ್ಲ. ಆಕೆ ಅದನ್ನೇ ಪ್ರಕಟಿಸಿಬಿಡುತ್ತಾಳೆ. ಹಾಗೆ ಪತ್ರಿಕೆಯಲ್ಲಿ ಬಂದರೆ ಏನಾಗುತ್ತದೆಂದು ನಿಮಗೆ ಗೊತ್ತಿದೆ.

ಈತ ಅವಳಿಗೆ ಬಯ್ಯಲು ಹೋದಾಗ ಆಕೆ ಪ್ರಕರಣದ ಗಂಭೀರತೆಯನ್ನು ಹೇಳುತ್ತಾಳೆ. ಅಂದಿನಿಂದ ಸಿದ್ದಾರ್ಥ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತಾನೆ.

ಆಗ ಆತನಿಗೆ ಬ್ರಿಗೇಡಿಯರ್ ಪ್ರತಾಪ್‌ನ ಭೇಟಿಯಾಗುತ್ತದೆ. ಆತ ಪ್ರತಾಪಗಳ ಪರಿಚಯವಾಗುತ್ತದೆ. ಆರೋಪಿ ಜಾವೇದ್ ಖಾನ್ ತನ್ನ ಅಧಿಕಾರಿ ಮೇಜರ್ ರಾಠೋಡ್‌ನನ್ನು ಕೊಂದಿರುತ್ತಾನೆ. ಆದರೆ ಜಾವೇದ್ ಮಾತೇ ಆಡುವುದಿಲ್ಲ. ಬೇಕಂತಲೇ ಮೌನಿಯಾಗಿರುತ್ತಾನೆ. ನಿಧಾನವಾಗಿ ಕತೆ ಬಿಚ್ಚಿಕೊಳ್ಳುತ್ತ ಹೋಗುತ್ತದೆ. ಹಂತಹಂತವಾಗಿ, ಕುತೂಹಲಕಾರಿಯಾಗಿ.

ಈ ಚಿತ್ರದಲ್ಲಿ ಕತೆಯ ಜತೆಗೆ ಬ್ರಿಗೇಡಿಯರ್ ಪ್ರತಾಪ್‌ನ ಡೈಲಾಗ್‌ಗಳು, ಮ್ಯಾನರಿಸಂ, ಮೆಡಲ್ ಪಡೆದ ಅಧಿಕಾರಿಯೊಬ್ಬನ ದರ್ಪ, ಆತನ ಸಮರ್ಥನೆಗಳು ನಿಮಗಿಷ್ಟವಾಗುತ್ತವೆ. ಅದೇರೀತಿ ಪೆಕ್ರನಂತೆ ಆಡುವ ಸಿದ್ದಾರ್ಥ ಚೌಧರಿ ನಟನೆ ಕೂಡ. ಹಾಸ್ಯ ಕೂಡ ಅಲ್ಲಲ್ಲಿ ಚಕ್ಕನೆ ಇಣುಕಿ, ಕಚಗುಳಿ ಇಟ್ಟು ಮರೆಯಾಗುತ್ತದೆ.

ಕೇವಲ ಮುಸ್ಲಿಂ ಎಂಬ ಕಾರಣಕ್ಕೆ ಯಾವನೂ ದೇಶದ್ರೋಹಿಯಲ್ಲ ಎಂಬ ಸಂದೇಶದ ಜತೆಗೆ ಭಾರತದ ಸೇನೆ ಜಾತಿ, ಧರ್ಮ ಮೀರಿ ನಿಂತಿದೆ ಎಂಬುದನ್ನೂ ನಿರ್ದೇಶಕ ಸಮರ್ ಖಾನ್ ಬಿಂಬಿಸಿದ್ದಾರೆ. ಮಾಲೇಗಾಂವ್ ಬಾಂಬ್ ಸ್ಫೋಟ ಆರೋಪಿಗಳಿಗೆ ಲೆಫ್ಟಿನೆಂಟ್ ಪುರೋಹಿತ್ ತರಬೇತಿ ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲೂ ಈ ಸಿನಿಮಾ ನೋಡಬಹುದು.

ಇಷ್ಟು ಕತೆ ಸಾಕು. ಉಳಿದದ್ದನ್ನು ನೀವು ಸಿನಿಮಾ ನೋಡಿಯೇ ಆನಂದಿಸಿ. ದಯವಿಟ್ಟು ಸಮಯ ಸಿಕ್ಕರೆ ‘ಶೌರ್ಯ’ ಡಿವಿಡಿ ತಂದು ನೋಡಿ. ನಿಮಗಿಷ್ಟವಾಗಬಹುದು. ಕೊಂಚ ದೇಶಭಕ್ತಿಯೂ ಮೂಡಬಹುದು. ನಿಮಗಿಷ್ಟವಾದರೆ ತಿಳಿಸಿ. ಅಷ್ಟೇ ನನಗೆ ತೃಪ್ತಿ.

ಇಷ್ಟಕ್ಕೂ ಈ ‘ಸ್ಲಂ ಡಾಗ್’ ಕಾಲದಲ್ಲಿ ಹಳೆಯ ‘ಶೌರ್ಯ’ದ ಬಗ್ಗೆ ಬೊಗಳಿದ್ದಕ್ಕೆ ಕ್ಷಮೆ ಇರಲಿ.

Friday, January 09, 2009

ವಿಶ್ವದಲ್ಲೆಲ್ಲ ಮೆಲ್ಟ್‌ಡೌನು, ನನ್ನ ಮನೆಲೆಲ್ಲ ಶಟ್‌ಡೌನು!



ಪ್ರಪಂಚದ ಜನರಿಗೆಲ್ಲ ಮೆಲ್ಟ್ ಡೌನಿನ ಚಿಂತೆ. ನನ್ನ ಮನೇಲೋ ಶಟ್ ಡೌನಿನ ಕಂತೆ!

ಎಲ್ಲರೂ ಸಾಮಾನ್ಯ ಜೀವನಕ್ಕೆ ಹಣ ಹೊಂದಿಸುವ ಹರಿಬರಿ. ನನಗೋ ಶಟ್ ಡೌನಾದ ವಸ್ತುಗಳ ದುರಸ್ತಿಯ ತರಾತುರಿ!

ನಾನು ಸೆಪ್ಟೆಂಬರ್ನಲ್ಲಿ ಊರಿಗೆ ಹೋಗಿ ಬಂದಾಗಿಬನಿಂದ ದುರಸ್ತಿ ಮಾಡಿಸಿದ ವಸ್ತುಗಳ ಪಟ್ಟಿ ನೋಡಿದರೆ, ಸರಿಯಿರುವ ನನ್ನ ತಲೆಯೂ ಹಾಳಾಗುತ್ತದೆ! ನಿಮ್ಮದೂ ಹಾಳಾಗಬಹುದು!!

ಊರಿಂದ ಬಂದ ದಿನವೇ ಮನೆಗೆ ಬಂದು ಮೊಬೈಲ್ ಚಾರ್ಜ್ ಹಾಕಿದರೆ, ಚಾರ್ಜೇ ಆಗುವುದಿಲ್ಲ. ಎಷ್ಟು ಕಷ್ಟಪಟ್ಟರೂ! ಮೊಬೈಲ್ ಬಳಸಬೇಕಾದರೆ ಚಾರ್ಜರ್ ಬೇಕೇ ಬೇಕು. ತಕ್ಷಣ ಅಂಗಿ ಹಾಕಿ ಹೊರಟೆ. ಮನೆಯಿಂದ ೧.೫ ಕಿ.ಮೀ. ದೂರವಿರುವ ಮಾರುಕಟ್ಟೆಗೆ ಹೋಗಿ, ಸೋನಿ ಶೋರೂಂ ಹುಡುಕಿ, ಸಮಸ್ಯೆ ಹೇಳಿದೆ. ಚಾರ್ಜರ್ ಹಾಳಾಗಿದೆ ಸರ್ ಎಂದ. ಸರಿ ೫೦೦ ರೂ. ಕೊಟ್ಟು ಚಾರ್ಜರ್ ಖರೀದಿಸಿದೆ.
ಕಿಸೆಯ ಚಾರ್ಜ್ ಕಡಿಮೆಯಾದರೂ, ಮೊಬೈಲ್ ಫುಲ್ ಚಾರ್ಜ್ ಆಯಿತು!
ಸ್ವಲ್ಪ ದಿನ ಯಾವ ಸಮಸ್ಯೆಯೂ ಇರಲಿಲ್ಲ. ಅಷ್ಟೊತ್ತಿಗೆ ಬಂತು ನೋಡಿ ವಿಶ್ವ ಆರ್ಥಿಕ ಹಿಂಜರಿತ ಅಲಿಯಾಸ್ ಮೆಲ್ಟ್ ಡೌನು! ಜತೆಗೆ ಚಳಿ.
ಚಳೀಗೆ ಹೆದರಿಯೋ, ಆರ್ಥಿಕ ಹಿಂಜರಿತದ ಜರಿತಕ್ಕೊ ನನ್ನ ಟಿವಿ ಕಣ್ಮುಚ್ಚಿತು. ಹಿಂದಿನ ದಿನ ರಾತ್ರಿವರೆಗೂ ಸರಿಯಾಗೇ ಉರಿಯುತ್ತಿದ್ದ ಟಿವಿ, ಮರುದಿನ ಮಧ್ಯಾಹ್ನ ಹಚ್ಚಿದರೆ ಸಣ್ಣ ಸೌಂಡೂ ಹೊರಹಾಕಲಿಲ್ಲ! ಏನೋ ಸಣ್ಣ ಸಮಸ್ಯೆ ಇರಬಹುದು ಅಂತ ಹತ್ತಿರವೇ ಇರುವ ಎಲೆಕ್ಟ್ರೀಷಿಯನ್ ಕರೆಸಿದೆ. ಆತ ಬಂದು ನೋಡಿ, ಸರ್ ಟಿವಿ ಅಂಗಡಿಗೇ ತೆಗೆದುಕೊಂಡು ಹೋಗಬೇಕು ಅಂದ. ಹಾಗೆಲ್ಲ ಅವನ ಅಂಗಡಿಗಳಿಗೆ ಕಳುಹಿಸುವುದು ಸರಿಯಲ್ಲ. ಒಮ್ಮೊಮ್ಮೆ ಅಂಗಡಿಗೆ ಹೋಗಿ ಕುಳಿತ ಟಿವಿ ಮರಳುವುದೇ ಇಲ್ಲ. ಹೀಗಾಗಿ ಹೆದರಿದ ನಾನು ಬೇಡ ಬಿಡು. ಕಂಪನಿಯ ಸರ್ವೀಸ್ ರೂಂನಲ್ಲೇ ದುರಸ್ತಿ ಮಾಡಿಸುತ್ತೇನೆ ಅಂದೆ. ೧೦೦ ರೂ. ಕೊಟ್ಟು ಕಳುಹಿಸಿದೆ. ಸರಿ ಪಿಲಿಫ್ಸ್ ಕಸ್ಟಮರ್ ಕೇರ್ ಗೆ ಫೋನಾಯಿಸಿದೆ. ಮರುದಿನ ಒಬ್ಬ ಎಕ್ಸಿಕ್ಯುಟೀವ್ ರೂಪದ ಎಲೆಕ್ಟ್ರೀಷಿಯನ್ ಬಂದ. ನೋಡಿ, ಸರ್ ಟಿವಿ ಸರ್ವೀಸ್ ರೂಮಿಗೆ ತನ್ನಿ ಎಂದ. ಮನೆ ಬಳಿಯ ಎಲೆಕ್ಟ್ರೀಚಿಯನ್ ಹೇಳಿದ್ದನ್ನೇ ಆತನೂ ಹೇಳಿದ್ದ. ಈತನ ಚಾರ್ಜು ೨೮೦ ರೂ!
ಮರುದಿನ ಕಾರಲ್ಲಿ ಟಿವಿ ತುಂಬಿ ಸರ್ವೀಸ್ ರೂಂ ಹುಡುಕಿ ಹೋದೆ. ೫ ದಿನದ ನಂತರ ಟಿವಿ ಮನೆಗೆ ಬಂತು. ಒಟ್ಟು ೯೦೦ ರೂ. ಕಿಸೆಯಿಂದ ಹೋಗಿತ್ತು!
ಈ ನಡುವೆ ಕಾರಿನ ಸರ್ವೀಸಿಂಗ್ ಬಾಕಿ ಇತ್ತು. ಅಲ್ಲಿಗೆ ಹೋದರೆ ಸರ್ ೬೦,೦೦೦ದ ಸರ್ವೀಸು. ಮೇಜರ್ರು ಅಂದ. ಬಿಲ್ಲು ಮೇಜರ್ ಆಗೇ ಇತ್ತು. ೮೦೦೦ ರೂ. ತೆತ್ತು ಗಾಡಿ ತಂದೆ. ಮರುದಿನ ಬೆಳಗ್ಗೆ ಕಾರು ಸ್ಟಾರ್ಟ್ ಮಾಡಿದರೆ ಹಳೆ ಫಿಯೆಟ್ ಗಾಡಿಯಂತೆ ಸ್ಟಾರ್ಟ್ ಆಗಲು ನಿರಾಕರಿಸಿತು! ಅಂತೂ ೨-೩ ಬಾರಿ ಪ್ರಯತ್ನಿಸಿದ ಮೇಲೆ ಸ್ಟಾರ್ಟ್ ಆಯಿತು. ಅವತ್ತೇನೋ ಕೆಲಸ. ಶೋರೂಂಗೆ ಹೋಗಲಾಗಲಿಲ್ಲ. ಮತ್ತೆ ಮರುದಿನ ಇದೇ ಕತೆ. ಹಿಂದಿನ ದಿನ ಕೊಂಚ ಪ್ರಯತ್ನಿಸಿದ ಮೇಲೆ ಸ್ಟಾರ್ಟ್ ಆಗಿದ್ದರಿಂದ ನಾನೂ ಚಲಬಿಡದೆ ಪ್ರಯತ್ನಿಸಿದೆ! ಕಾರೂ ಚಲಬಿಡಲಿಲ್ಲ!
ಸಮೀಪದ ಗ್ಯಾರೇಜಿನಿಂದ ಮೆಕ್ಯಾನಿಕ್ ಕರೆತಂದು ಆತನಿಗೆ ೧೦೦ ರೂ. ಕೊಟ್ಟಮೇಲೆಯೇ ಕಾರು ಸ್ಟಾರ್ಟ್ ಆಗಿದ್ದು!
ಸೀದಾ ಶೋ ರೂಮಿಗೆ ಹೋಗಿ ದಬಾಯಿಸಿದೆ. ಕಾರಿಟ್ಟು ಹೋಗಿ ಸರ್. ನಾಳೆ ಎಲ್ಲಾ ಕರೆಕ್ಟ್ ಆಗಿರುತ್ತೆ ಅಂತ ತಲೆಸವರಿ ಕಳುಹಿಸಿದರು. ಮರುದಿನ ಹೋದೆ. ಯಾವುದೇ ಕರ್ಚಿಲ್ಲದೆ ರಿಪೇರಿ ಮಾಡಿಟ್ಟಿದ್ದರು. ಉಸ್ಸಪ್ಪ, ಬದುಕಿದೆಯಾ ಬಡ ಜೀವವೆ (೨ ದಿನದ ಹಿಂದಷ್ಟೇ ೮೦೦೦ ಕೊಟ್ಟು ಬಡವಾಗಿದ್ದರಿಂದ!) ಅಂತ ಮನೆಗೆ ಬಂದೆ. ಮರುದಿನ ಬೆಳಗ್ಗೆ ಎದ್ದು ಕಚೇರಿಗೆ ಹೊರಟರೆ ಸೆಂಟ್ರಲ್ ಲಾಕಿಂಗ್‌ನ ರಿಮೋಟ್ ಬಟನ್ ಒತ್ತಿದರೂ ಕಾರು ಕುಂಯ್ ಅನ್ನಲಿಲ್ಲ. ಹಲವು ಬಾರಿ ಪ್ರಯತ್ನಿಸಿದೆ. ಕೊನೆಗೆ ಚಾವಿ ಮೂಲಕ ತೆಗೆದು ಒಳಗೆ ಕೂತರೆ, ಸೈರನ್ ಹೊಡೆದುಕೊಳ್ಳಲಾರಂಭಿಸಿತು!
ಪಾಪ. ನನ್ನ ಹೆಂಡತಿ ಸಮೀಪದ ಮಾರುಕಟ್ಟೆಗೆ ಹೋಗಿ ಸೆಂಟ್ರಲ್ ಲಾಕಿಂಗ್ ರಿಮೋಟ್ಗೆ ಸೆಲ್ ಹಾಕಿಸಿ ತಂದಳು. ನನ್ನ ಗೃಹಚಾರಕ್ಕೆ ರಿಮೋಟ್ ನ ಸೆಲ್ ಸತ್ತೇ ಹೋಗಿತ್ತು!
ಇದಾದ ಸ್ವಲ್ಪ ದಿನಕ್ಕೆ ನನ್ನ ಲ್ಯಾಪ್ಟಾಪ್ ಸಮಸ್ಯೆ ಕೊಡತೊಡಗಿತು. ನನ್ನ ಕಚೇರಿಯಲ್ಲಿರುವ ಕಂಪ್ಯೂಟರ್ ತಜ್ಞನಿಗೆ ಕೊಟ್ಟೆ. ಆತ ಅದೇನೋ ಮಾಡಿಸಿ ತಂದ. ೫೦೦ ರೂ. ಕೊಡಿ ಅಂದ. ಅದಾದ ೩ ದಿನ ಲ್ಯಾಪ್ಟಾಪ್ ಸ್ಟಾರ್ಟ್ ಆಗಲು ನಿರಾಕರಿಸಿತು. ಈ ಕಿರಿಕಿರಿ ಬೇಡ. ದರ ಹೆಚ್ಚಾದರೂ ತೊಂದರೆಯಿಲ್ಲ ಏಸರ್ ಸರ್ವೀಸ್ ರೂಂನಲ್ಲೇ ದುರಸ್ತಿ ಮಾಡಿಸೋಣ. ಒಮ್ಮೆ ಸಮಸ್ಯೆ ಬಗೆಹರಿಯುತ್ತದಲ್ಲ ಎಂದು ಅಲ್ಲಿಗೇ ಕೊಟ್ಟೆ. ಮರುದಿನ ಸರ್ ಮದರ್ ಬೋರ್ಡ್ ಹೋಗಿದೆ. ೧೩,೦೦೦ ಆಗುತ್ತೆ ಅಂತ ಫೋನ್ ಬಂತು!
ಹಳೆ ಲ್ಯಾಪ್ಟಾಪ್ ಮಾರಾಟ ಮಾಡಿದರೆ ನೆಟ್ಟಗೆ ೫೦೦೦ ಸಿಗುವುದು ಅನುಮಾನ. ಅದಕ್ಕೆ ೧೩,೦೦೦ ಕೊಟ್ಟು ದುರಸ್ತಿ ಮಾಡಿಸುವುದೇ? ಅಂತ ಈಗ ೨೦,೫೦೦ ರೂ. ಕೊಟ್ಟು ಹೊಸ ಕಂಪ್ಯೂಟರ್ ತಂದಿರಿಸಿಕೊಂಡಿದ್ದೇನೆ. ನನ್ನ ಗೃಹಚಾರಕ್ಕೆ ಅದೂ ಸಮಸ್ಯೆ ಕೊಡಬೇಕೆ!
ಅಂತೂ ನೆಹರುಪ್ಲೇಸಿಗೆ (ಏಷ್ಯಾದ ದೊಡ್ಡ ಕಂಪ್ಯೂಟರ್ ಮಾರುಕಟ್ಟೆ) ತಿರುಗಾಡಿ ಅದನ್ನಂತೂ ಸರಿ ಮಾಡಿಸಿದ್ದೇನೆ. ಟ್ರಿಪಲ್ ಕೋರ್ ಪ್ರೊಸೆಸರ್ ಹಾಕಿಸಿದ್ದಕ್ಕೇ ಇರಬೇಕು ಹೊಸ ಕಂಪ್ಯೂಟರ್ ಸರಿಯಾಗಿ ಕೆಲಸ ಮಾಡಲು ನೆಹರೂ ಪ್ಲೇಸಿಗೆ ೩ ಬಾರಿ ಹೋಗಬೇಕಾಯಿತು! ಈಗ ಅದರ ಮೂಲಕವೇ ಬ್ಲಾಗಿಸುತ್ತಿರುವುದು. ಲ್ಯಾಪ್ಟಾಪ್ ಇನ್ನೂ ತಂದಿಲ್ಲ.
ಈ ನಡುವೆ ಟಿವಿ ಒಂದು ಶುಭ ಮುಂಜಾನೆ ಅರ್ಥಾತ್ ಹೊಸ ವರ್ಷದ ೨ನೇ ದಿನ ಮತ್ತೆ ಕೆಲಸ ಮಾಡುವುದನ್ನು ನಿಲ್ಲಿಸಿತು. ಅದಕ್ಕೆ ಹೊಸ ವರ್ಷದಲ್ಲಿ ಹೊಸದಾಗಿ ದುರಸ್ತಿ ಮಾಡಿಸಿಕೊಳ್ಳುವಾಸೆ! ಮೊದಲು ಮಾಡಿದ ತಪ್ಪುಗಳಿಂದ ಪಾಠ ಕಲಿತಿದ್ದ ನಾನು ಸೀದ ಶೋರೂಮಿಗೆ ಟಿವಿ ತೆಗೆದುಕೊಂಡು ಹೋದೆ. ರಿಪೇರಿ ಮಾಡಿಕೊಟ್ಟು ೧ ತಿಂಗಳಿನ್ನೂ ಆಗಿಲ್ಲ ಎಂಬ ಕಾರಣಕ್ಕೋ ಏನೋ ಹಾಳಾಗಿದ್ದ ಬಿಡಿ ಭಾಗದ ೨೦೦ ರೂ. ಮಾತ್ರ ಪಡೆದು ರಿಪೇರಿ ಮಾಡಿಕೊಟ್ಟರು.
ಇಷ್ಟಕ್ಕೇ ಮುಗಿದಲ್ಲ ನನ್ನ ವ್ಯಥೆ!
ಫ್ರಿಜ್ಜು ಸದ್ಯಕ್ಕೆ ಹಾಳಾಗಿದೆಯೋ ಇಲ್ಲವೋ ಗೊತ್ತಿಲ್ಲ. ಅದೇನು ದಿಲ್ಲಿಯ ತಂಪು ಫ್ರಿಡ್ಜಿಗಿಂತ ಜಾಸ್ತಿ ತಂಪಿರುವುದರಿಂದಲೋ ಏನೋ ಫ್ರಿಡ್ಜು ತಂಪೇ ಆಗುತ್ತಿಲ್ಲ ಎಂಬ ಅನುಮಾನ ನಮಗೆ, ಈಗ ಚಳಿ ಇರುವುದರಿಂದ ಅದಕ್ಕೆ ಸದ್ಯ ರೆಸ್ಟ್ ನೀಡಿದ್ದೇವೆ. ಬೇಸಿಗೆ ಬಂದ ಮೇಲೆ ಅದರ ಬಗ್ಗೆ ತಲೆಬಿಸಿ ಮಾಡಿಕೊಳ್ಳುವ ಅಂತ!
ಇದೆಲ್ಲ ಓದಿದ ಮೇಲೆ ಸದ್ಯಕ್ಕೆ ವಿನಾಯಕನ ಮನೆಯಲ್ಲಿ ಸರಿ ಇರುವುದು ಅವನ ಮತ್ತು ಹೆಂಡತಿಯ ತಲೆ ಮಾತ್ರ ಅಂತ ನಿಮಗೆ ಅನ್ನಿಸಿದರೂ ಅಚ್ಚರಿಯಿಲ್ಲ. ಯಾಕೆಂದರೆ ನನಗೇ ಎಷ್ಟೋ ಸಾರಿ ಹಾಗನ್ನಿಸಿದೆ!
ನಾನು ದಿಲ್ಲಿಗೆ ಬಂದು ೭ ತಿಂಗಳಷ್ಟೇ ಆಗಿದೆ. ಈ ಅವಧಿಯಲ್ಲಿ ನಿನ್ನ ಸಾಧನೆಯೇನು ಅಂತ ಯಾರಾದರೂ ಕೇಳಿದರೆ, ಯಾವುದೇ ವಸ್ತು ಕೊಡಿ ನಾನು ದುರಸ್ತಿ ಮಾಡಿಸಿ ತರಬಲ್ಲೆ ಎಂದು ಧೈರ್ಯದಿಂದ ಹೇಳಬಲ್ಲೆ!
ಸದ್ಯಕ್ಕೆ ನನ್ನ ಈ ‘ಹಾಳು’ ಪುರಾಣ ಮುಗಿಸುತ್ತೇನೆ. ಮತ್ತೇನಾದರೂ ಹಾಳಾದರೆ ಬರೆದು ತಿಳಿಸುತ್ತೇನೆ ಎಂದು ಈ ಮೂಲಕ ನಿಮ್ಮನ್ನು ಹೆದರಿಸುತ್ತಿದ್ದೇನೆ!

Wednesday, December 03, 2008

ಪಾಪಿ ಚಿರಾಯು...


ಯಾರೂ ಸಾಯಬಾರದು. ಹಾಗೆಂದು ಬಯಸಬಾರದು. ಹಾಗೆ ಬಯಸುವುದು ಮಾನಸಿಕ ಅದಃಪಥನದ ಸೂಚನೆ. ಇವತ್ತಿನವರೆಗೂ ನನಗೆ ಹಾಗೆ ಅನ್ನಿಸಿದ್ದೂ ಇಲ್ಲ.

ಮೊನ್ನೆ ಹಾಗನ್ನಿಸಿತು. ಉಗ್ರರು ಮುಂಬಯಿಗೆ ದಾಳಿ ನಡೆಸಿದಾಗ!

ದಾಳಿ ನಡೆಸಿದ ಉಗ್ರರೆಲ್ಲ ಸಾಯಬೇಕು ಅಂತ ಎಲ್ಲರಿಗೂ ಅನ್ನಿಸಿದೆ. ನನಗನ್ನಿಸಿದ್ದು ಬೇರೆ. ದಾಳಿಯ ಗಡಿಬಿಡಿಯಲ್ಲಿ ನೀವು ಗಮನಿಸಿದ್ದೀರೋ ಇಲ್ಲವೊ. ನಾನು ಸರಿಯಾಗಿ ಗಮನಿಸಿದೆ.

ತಾಜ್‌ಗೆ ಉಗ್ರರು ದಾಳಿ ನಡೆಸಿದಾಗ ಅದರಲ್ಲಿ ನಮ್ಮ ನಾಲ್ಕು ಸಂಸದರು (ಎಂಪಿಗಳು) ಇದ್ದರು. ಇಬ್ಬರು ಆರಂಭದಲ್ಲೇ ತಪ್ಪಿಸಿಕೊಂಡರೆ, ಇನ್ನಿಬ್ಬರು ೩೨ ಗಂಟೆಗಳ ನಂತರ ಪಾರಾದರು!

ಆಗ ನನಗೆ ಅನ್ನಿಸಿತು. ಇಷ್ಟೆಲ್ಲ ಜನ ಅಮಾಯಕರು, ನಿತ್ಯ ಜೀವನದ ಅನಿವಾರ್ಯಕ್ಕೆ ಹೆಣಗುತ್ತಿರುವವರು ಸತ್ತರು. ನಮ್ಮ ಸೈನಿಕರು, ಪೊಲೀಸರು ಸತ್ತರು. ಛೆ! ಹಾಗಿರುವಾಗ ಇವರೂ ಸಾಯಬಾರದಿತ್ತೇ ಅನ್ನಿಸಿಬಿಟ್ಟಿತು. ವಿಚಿತ್ರವೆಂದರೆ ಇಂದಿಗೂ ನನಗೆ ಹಾಗೆ ಅನ್ನಿಸುತ್ತಲೇ ಇದೆ. ಇನ್ನೂ ಭಯಂಕರವೆಂದರೆ ಛೆ, ನಮ್ಮ ಭದ್ರತಾ ದಳದವರಾದರೂ ಯಾಕೆ ಅವರನ್ನು ಹೊರಗೆ ಸುರಕ್ಷಿತವಾಗಿ ಕರೆತಂದರು. ಅವರನ್ನು ಎಳೆದುಕೊಂಡು ಉಗ್ರರ ಎದುರಿಗೆ ನಿಲ್ಲಿಸಿಬಿಡಬೇಕಿತ್ತು. ಇಲ್ಲವೇ ಭದ್ರತಾ ದಳದ ಸಿಬ್ಬಂದಿಯೇ ಗುಂಡುಹೊಡೆದರೂ ಆಗುತ್ತಿತ್ತು!

ಹೀಗೆಲ್ಲ ಯೋಚಿಸುವುದು ಸ್ವಸ್ಥ ಮನಿಸಿನ ಚಿಂತನೆಯಲ್ಲ ಎಂಬುದು ನನಗೆ ಅರಿವಿದೆ. ಆದರೂ ಅವರ ಮೇಲಿನ ಕೋಪ ಹೀಗೆಲ್ಲ ಯೋಚಿಸುವಂತೆ ಮಾಡುತ್ತಿದೆ. ಮತ್ತು ಅದೇ ಸರಿ ಅಂತಲೂ ಅನ್ನಿಸುತ್ತಿದೆ.

ಹೌದು. ಅವರು ಸಾಯಬೇಕಿತ್ತು. ಆಗಲಾದರೂ ನಮ್ಮ ರಾಜಕಾರಣಿಗಳು ಉಗ್ರರ ದಾಳಿ, ಬಾಂಬ್ ಸ್ಫೋಟಗಳನ್ನು ಗಂಭೀರವಾಗಿ ಪರಿಗಣಿಸುತ್ತಿದ್ದರೇನೊ. ಇಲ್ಲವಾದಲ್ಲಿ ನಮ್ಮನ್ನಾಳುವವರು ಇದನ್ನೆಲ್ಲ ಮತಕ್ಕಾಗಿ ಬಳಸಿಕೊಳ್ಳುವುದನ್ನೇ ವೃತ್ತಿಯಾಗಿಸಿಕೊಂಡಿದ್ದಾರೆ. ಅವರದ್ದೇ ಕಾಲಬುಡಕ್ಕೆ ಬಂದಾಗ, ಅವರದ್ದೇ ಜನ ಸತ್ತಾಗಲಾದರೂ ಸ್ವಲ್ಪ ಎಚ್ಚೆತ್ತುಕೊಳ್ಳುತ್ತಾರೇನೋ ಎಂಬ ಕಾರಣಕ್ಕಾಗಿಯೇ ನನಗೆ ಹಾಗನ್ನಿಸಿತು.

ಅವತ್ತು ತಾಜ್‌ನಲ್ಲಿ ಬಿಜೆಪಿಯ ಗೋದ್ರಾ ಸಂಸದ, ಮಹಾರಾಷ್ಟ್ರ ಎನ್‌ಸಿಪಿ ಸಂಸದ, ಕಾಂಗ್ರೆಸ್‌ನ ಸಂದರು ಇದ್ದರು. ಸರ್ವ ಪಕ್ಷ ಸಮನ್ವಯವೂ ಆಗುತ್ತಿತ್ತು. ತಥ್. ಹಾಗಾಗಲಿಲ್ಲ.

ನಾಲ್ಕು ಎಂಪಿಗಳು ಪಾರಾಗಿದ್ದು, ಅದರಲ್ಲೂ ೩೨ ಗಂಟೆಗಳ ನಂತರ ಇಬ್ಬರು ಎಂಪಿಗಳು ಪಾರಾದ ಸುದ್ದಿ ಓದಿದಾಗ ನೆನಪಾಯ್ತು...

ಪಾಪಿ ಚಿರಾಯು!

ಹಾಂ... ಅಂದಹಾಗೆ ಜೋಗಿ ಇತ್ತೀಚೆಗೆ ಬರೆದ ಯಾಮಿನಿ ಕಾದಂಬರಿಯ ಹೀರೋ ಹೆಸರು ಚಿರಾಯು!

ಅದರ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ.

Monday, December 01, 2008

ಇನ್ನೆಷ್ಟು ವರ್ಷ ಕಾಶ್ಮೀರಕ್ಕೆ ವಿಶೇಷ ರಾಜ್ಯದ ಕಿರೀಟ?


ಕಾಶ್ಮೀರಿಗಳೆಲ್ಲ ಭಾರತದ ಪ್ರಜೆಗಳು. ಆದರೆ ಭಾರತದ ಪ್ರಜೆಯೊಬ್ಬ ಕಾಶ್ಮೀರಿಯಾಗಲು ಸಾಧ್ಯವಿಲ್ಲ! ನೀವು ಎಂದಿಗೂ ಕಾಶ್ಮೀರದ ಚುನಾವಣೆಯಲ್ಲಿ ಮತ ಚಲಾಯಿಸಲಾರಿರಿ. ಅಲ್ಲಿ ಭೂಮಿ ಕೊಳ್ಳಲಾರಿರಿ. ಅದೇ ಒಬ್ಬ ಕಾಶ್ಮೀರಿ ಪ್ರಜೆ ಹಂಪಿಗೆ ಬಂದು ಮತದಾರರ ಗುರುತುಪತ್ರ ಪಡೆಯಬಲ್ಲ. ವಿಜಾಪುರದಲ್ಲಿ ಭೂಮಿ ಖರೀದಿಸಿ, ಗಲ್ಲಿಯಲ್ಲಿ ವ್ಯಾಪಾರಿಯಾಗಲ್ಲ.

೬೧ ವರ್ಷದಲ್ಲಿ ಜಮ್ಮು-ಕಾಶ್ಮೀರ ಒಬ್ಬೇ ಒಬ್ಬ ಹಿಂದೂ ಮುಖ್ಯಮಂತ್ರಿಯನ್ನು ಕಂಡಿಲ್ಲ. ಒಬ್ಬ ಹಿಂದುವೂ ಪ್ರಮುಖ ಖಾತೆಯ ಸಚಿವನಾಗಲಿಲ್ಲ. ಕೇಂದ್ರ ಸರಕಾರ ಈ ರಾಜ್ಯದ ಪ್ರಜೆಗಳಿಗೆ ವರ್ಷಕ್ಕೆ ತಲಾ ೯,೭೫೪ ರೂ. ದೊರೆಯುವಷ್ಟು ಅನುದಾನ ನೀಡುತ್ತದೆ. ಬಿಹಾರದಂತಹ ರಾಜ್ಯಕ್ಕೆ ದಕ್ಕುವುದು ತಲಾ ೮೭೬ ರೂ.ನಷ್ಟು ಅನುದಾನ ಮಾತ್ರ. ಇಷ್ಟಾಗಿಯೂ ವಿದೇಶಾಂಗ, ಭದ್ರತೆ ಹಾಗೂ ಸಂಪರ್ಕ ಸಂಬಂಧಿ ಕಾನೂನುಗಳುನ್ನು ಬಿಟ್ಟರೆ ದೇಶದ ಅತ್ಯುನ್ನತ ಕೇಂದ್ರವಾದ ಲೋಕಸಭೆ ಜಾರಿ ಮಾಡಿದ ಕಾನೂನುಗಳು ಕಾಶ್ಮೀರಕ್ಕೆ ಲಾಗೂ ಆಗುವುದಿಲ್ಲ!

ವಿಶೇಷ ರಾಜ್ಯದ ಸವಲತ್ತುಗಳನ್ನು ಕಾಶ್ಮೀರ ಇಷ್ಟೂ ವರ್ಷ ತಕರಾರಿಲ್ಲದೆ, ಸುಖದಿಂದ ಅನುಭವಿಸಿಕೊಂಡುಬಂದಿದೆ. ಇಷ್ಟೆಲ್ಲ ಅನುಭವಿಸಿದ ಕಾಶ್ಮೀರಿಗಳು ಮಾಡಿದ್ದೇನು?

೬೧ನೇ ಸ್ವಾತಂತ್ರ್ಯೋತ್ಸವದ ದಿನ ಶ್ರೀನಗರದ ಲಾಲ್‌ಚೌಕ್‌ನಲ್ಲಿ ಹಾರಿಸಲಾಗಿದ್ದ ಭಾರತ ಧ್ವಜವನ್ನು ಕೆಲವೇ ಕ್ಷಣದಲ್ಲಿ ಇಳಿಸಿ, ಪಾಕಿಸ್ಥಾನ ಧ್ವಜ ಹಾರಿಸಿದರು. ಪಾಕಿಸ್ಥಾನಕ್ಕೆ ಜಯಕಾರ ಕೂಗಿದರು. ಭಾರತದ ಸೈನ್ಯ ಜಮ್ಮು-ಕಾಶ್ಮೀರ ಹೆದ್ದಾರಿಯನ್ನು ಸಂಚಾರಕ್ಕೆ ಮುಕ್ತವಾಗಿರಿಸಿತ್ತು. ಸರಕಾರಿ ಅಧಿಕೃತ ದಾಖಲೆಗಳ ಪ್ರಕಾರ ಆಗಸ್ಟ್ ತಿಂಗಳ ೧ ರಿಂದ ೧೦ನೇ ತಾರೀಕಿನವರೆಗೆ ೩,೦೭೨ ಲಾರಿಗಳು ಔಷಧಿ ಸೇರಿದಂತೆ ಅಗತ್ಯ ವಸ್ತುಗಳನ್ನು ಶ್ರೀನಗರಕ್ಕೆ ತಲುಪಿಸಿವೆ. ೨,೧೪೨ ಲಾರಿಗಳು ಕಾಶ್ಮೀರದಿಂದ ಹಣ್ಣು ತುಂಬಿಕೊಂಡು ಲಖನಪುರ ದಾಟಿ ದೇಶದ ಇತರ ಭಾಗಗಳಿಗೆ ಪ್ರಯಾಣ ಬೆಳೆಸಿವೆ. ಜುಲೈ ತಿಂಗಳಲ್ಲಿ ೨೫,೬೫೩ ಲಾರಿಗಳು ಈ ರಾಜ್ಯ ಪ್ರವೇಶಿಸಿ, ೧೫,೪೦೧ ಲಾರಿಗಳು ಹೊರಹೋಗಿವೆ. ಹೀಗಿದ್ದೂ ತಮ್ಮ ಬೆಳೆಗಳನ್ನು ಪಾಕಿಸ್ಥಾನದ ಮುಜಫಾರಾಬಾದಿಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತೇವೆ ಎಂದು ಹೆದರಿಸಿದರು.

ಪ್ರತ್ಯೇಕತಾವಾದಿಗಳ ನಾಯಕ ಸಯ್ಯದ್ ಅಲಿ ಗೀಲಾನಿ ಸಾರ್ವಜನಿಕವಾಗಿ `ಪಾಕಿಸ್ತಾನ ಸೇರಬಯಸುತ್ತೇವೆ. ಕಾಶ್ಮೀರಿಗಳೆಲ್ಲ ಪಾಕಿಸ್ತಾನಿಗಳು' ಎಂದ. ಕಾಫಿರರೇ ಕಾಶ್ಮೀರ ಬಿಟ್ಟು ತೊಲಗಿ ಎಂದು ಘೋಷಣೆ ಮೊಳಗಿತು. ನಮ್ಮ ತೆರಿಗೆ ದುಡ್ಡಿನಲ್ಲಿ ಇಷ್ಟು ವರ್ಷ ಸಕಲ ಸವಲತ್ತು ನೀಡಿ ಸಾಕಿದ್ದಕ್ಕೆ ಈಗ ದಕ್ಕಿದ್ದು `ಕಾಫಿರರು' ಎಂಬ ಬಿರುದು!

ನಮ್ಮ ಕೇಂದ್ರ ಸರಕಾರ ಮಾತ್ರ ಇನ್ನೂ `ಪಾಪ ಕಾಶ್ಮೀರಿ ಮುಸ್ಲಿಮರಿಗೆ ಬೇಸರವಾಗುತ್ತದೆ. ಹಾಗಾದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮುಸ್ಲಿಮರ ಮತಗಳು ಸಿಗದೇ ಹೋಗುತ್ತದೆ' ಎಂದು ಮಾತಾಡದೆ ಸುಮ್ಮನೆ ಕುಳಿತಿತು.`ಪಾಕಿಸ್ತಾನದ ಮುಜಫರಾಬಾದಿಗೆ ಹೋಗುವವರು ಹೋಗಬಹುದು. ಆದರೆ ಮರಳಿ ಬರುವಂತಿಲ್ಲ. ಅವರು ಅಲ್ಲೇ ಉಳಿಯಲಿ' ಎಂದು ಹೇಳುವ, `ಪಾಕಿಸ್ತಾನ ಧ್ವಜ ಹಾರಿಸಿದವನಿಗೆ ಗುಂಡಿಕ್ಕಲು ಹಿಂಜರಿಯುವುದಿಲ್ಲ' ಎಂದಬ್ಬರಿಸುವ ಒಬ್ಬ ಗಂಡು ಕೇಂದ್ರ ಸರಕಾರದಲ್ಲಿ ಕಾಣಲಿಲ್ಲ.

ಹಾಗೇನಾದರೂ ಹೇಳಿದ್ದಲ್ಲಿ ಮುಜಫರಾಬಾದಿಗೆ ಹೊರಟವರ ಬಾಯಿ ಕಟ್ಟಿಹೋಗುತ್ತಿತ್ತು. ರಾಲಿ ಸದ್ದಿಲ್ಲದೆ ನಿಂತುಹೋಗುತ್ತಿತ್ತು. ಅಷ್ಟರ ಹೊರತಾಗಿಯೂ ಅವರು ಹೋಗಿದ್ದರೆ ದೇಶಕ್ಕೆ ನಷ್ಟವೇನೂ ಆಗುತ್ತಿರಲಿಲ್ಲ ಬಿಡಿ.

ಪ್ರತ್ಯೇಕತೆಯ ಕೂಗು ಭಾರತಕ್ಕೆ ಹೊಸದಲ್ಲ. ನಾಗಾಲ್ಯಾಂಡ್, ಆಸ್ಸಾಂ, ಮಿಜೋರಾಂ, ತಮಿಳುನಾಡು, ಪಂಜಾಬ ಕೂಡ ಪ್ರತ್ಯೇಕವಾಗಬಯಸಿದ್ದವು. ಆದರೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಅವಕ್ಕೆಲ್ಲ ಒಂದು ಪರಿಹಾರ ಕಂಡುಕೊಂಡಿದೆ. ಆ ಮೂಲಕ ಏಕಾಗ್ರತೆ ಉಳಿಸಿಕೊಂಡು, ಅವರನ್ನೂ ದೇಶದೊಳಗೊಂದಾಗಿಸಿದೆ. ಕ್ರೂರ, ಅತಿಕ್ರೂರವಾಗಿ ಶಕ್ತಿಯ ಬಳಕೆ, ಪ್ರತ್ಯೇಕತಾವಾದಿ ನಾಯಕರನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿದ್ದು ಹಾಗೂ ಉದಾರ ಅನುದಾನ ಹೀಗೆ ೩ ವಿಧಾನಗಳ ಮೂಲಕ ಪ್ರತ್ಯೇಕತೆಯ ಸದ್ದಡಗಿಸಲಾಗಿದೆ. ಇದರ ಪರಿಣಾಮ ನಾಗಾಗಳು ಕೂಡ ಈಗ ರಾಜ್ಯದ ಗಡಿ ವ್ಯತ್ಯಾಸಕ್ಕೆ ಹೋರಾಟ ಸೀಮಿಗೊಳಿಸಿದ್ದಾರೆ. ತಮಿಳುನಾಡಿನ ಹಿಂದಿ ವಿರುದ್ಧದ ಪ್ರತಿಭಟನೆ ಈಗ ಮಸುಕು ನೆನಪು ಮಾತ್ರ.

ಆದರೆ ಕಾಶ್ಮೀರ? ಊಹುಂ. ಕೇಂದ್ರ ಉದಾರವಾಗಿ ಹಣ ನೀಡಿದೆ. ವಾರ್ಷಿಕ ಅನುದಾನದ ಜತೆಗೆ ೨೦೦೪ರಲ್ಲಿ ೫೦,೦೦೦ ಕೋಟಿ ವಿಶೇಷ ಅನುದಾನ ನೀಡಿದೆ. ವಿಶೇಷ ಸ್ಥಾನಮಾನ ಮೊದಲಿಂದಲೂ ಇದೆ. ಎಲ್ಲವನ್ನೂ ಪಡೆದು ಅನುಭವಿಸುತ್ತಲೇ ಕಾಶ್ಮೀರಿಗಳು ರಾಜಕೀಯ ಸ್ವಾತಂತ್ರ್ಯ ಇಲ್ಲ ಎಂದರು. ಅದನ್ನೂ ಕೊಡಲಾಯಿತು. ೨೦೦೪ರಲ್ಲಿ ವಿಶ್ವವೆ ಮೆಚ್ಚುಗೆ ವ್ಯಕ್ತಪಡಿಸುವಂತೆ ಚುನಾವಣೆಯೂ ನಡೆಯಿತು. ಇದಕ್ಕಿಂತ ಹೆಚ್ಚಿನದೇನನ್ನು ಕೊಡಲು ಸಾಧ್ಯ? ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಇದೆಲ್ಲ ದಕ್ಕಿದೆಯೇನು?ಆದರೂ ಕಾಶ್ಮೀರಿಗಳಿಗೆ ಸಮಾದಾನವಿಲ್ಲ. ಅಮರನಾಥ ದೇವಸ್ಥಾನ ಮಂಡಳಿಗೆ ಭೂಮಿ ಕೊಟ್ಟಿದ್ದನ್ನೆ (ಪುಕ್ಕಟೆ ಕೊಟ್ಟಿದ್ದೂ ಅಲ್ಲ) ನೆಪಮಾಡಿ ದೊಡ್ಡ ಗಲಾಟೆ ಎಬ್ಬಿಸಿದರು. ಅವರ ೨ ದಿನದ ಪ್ರತಿಭಟನೆಗೆ ಹೆದರಿದ ಸರಕಾರ ಭೂಮಿ ಹಿಂಪಡೆಯಿತು. ಅಲ್ಲಿಗೆ ಕಾಶ್ಮೀರಿಗಳ ಪ್ರತಿಭಟನೆ ನಿಲ್ಲಬೇಕಿತ್ತು. ಹಾಗಾಗಲಿಲ್ಲ. ಈಗ ಅಮರನಾಥ ಭೂ ವಿವಾದ ಕಾಶ್ಮೀರಿಗರ ಬೇಡಿಕೆಯಾಗಿ ಉಳಿದಿಲ್ಲ. ಅವರದ್ದು ಮತ್ತದೇ ಪ್ರತ್ಯೇಕತೆಯ ಕೂಗು.

ಕಾಶ್ಮೀರ ಭಾರತದ ತಲೆ ಇದ್ದಂತೆ ಎಂದು ಅದ್ಯಾವ ಮಹಾನುಭಾವರು ಹೇಳಿದರೋ? ಕಾಶ್ಮೀರ ಸದಾ ದೇಶಕ್ಕೆ ತಲೆನೋವಾಗೇ ಉಳಿದಿದೆ. ಇನ್ನೂ ಎಷ್ಟು ದಿನ ಅದನ್ನು ಸಹಿಸಿಕೊಳ್ಳುವುದು? ಇನ್ನೆಷ್ಟು ವರ್ಷ ವಿಶೇಷ ರಾಜ್ಯದ ಕಿರೀಟ ತೊಡಿಸುವುದು? ಅಥವಾ ದೇಶವಿರುವಷ್ಟು ಕಾಲವೂ ಕಾಶ್ಮೀರ ವಿಶೇಷ ರಾಜ್ಯವಾಗೇ ಉಳಿಯಬೇಕೇ?

ವಿಶೇಷ ರಾಜ್ಯ ಎಂಬ ನೆಪದಲ್ಲಿ ಕಾಶ್ಮೀರಕ್ಕೆ ಸಿಗುವ ಸವಲತ್ತುಗಳನ್ನು ನೋಡಿದರೆ ಎಲ್ಲ ರಾಜ್ಯಗಳು `ನಮ್ಮನ್ನೂ ವಿಶೇಷ ರಾಜ್ಯ ಎಂದು ಘೋಷಿಸಿ' ಎಂದು ಹೋರಾಟ ಆರಂಭಿಸುವ ಅಪಾಯವಿದೆ. ಭಾರತದೊಂದಿಗೆ ಸೇರಿದ ೬೧ ವರ್ಷಗಳ ನಂತರವೂ ಕಾಶ್ಮೀರದ ಜನ ಭಾರತದೊಂದಿಗೆ ಮಾನಸಿಕವಾಗಿ ಬೆರೆತೇ ಇಲ್ಲ. (ಭಾರತದ ಪರವಾಗಿದ್ದ ಪಂಡಿತರನ್ನೆಲ್ಲ ಅಲ್ಲಿಂದ ಓಡಿಸಲಾಗಿದೆ ಬಿಡಿ) ಅದೆಲ್ಲಕ್ಕಿಂತ ಹೆಚ್ಚಾಗಿ ಅವರು ಪ್ರತ್ಯೇಕತೆಯ ಅಸ್ತ್ರವನ್ನು ದೇಶವನ್ನು ಹೆದರಿಸಲೆಂದೇ ಬಳಸಿಕೊಂಡುಬಂದಿದ್ದಾರೆ.`ಸಣ್ಣ ಮಕ್ಕಳು ಆಟವಾಡುವಾಗ ನೀನು ಹಂಗೆಲ್ಲ ಮಾಡಿದರೆ ನಾನು ಬರಲ್ಲ ಅಂತ ಮುಖ ತಿರುಗಿಸುತ್ತಾರಲ್ಲ, ವಯಸ್ಸಿಗೆ ಬಂದ ಮಗ ಅಪ್ಪನನ್ನು ಮನೆ ಬಿಟ್ಟುಹೋಗುತ್ತೇನೆಂದು ಹೆದರಿಸುತ್ತಾನಲ್ಲ ಹಾಗೆ...

ಕಾಶ್ಮೀರಿಗಳು ಭಾರತದೊಂದಿಗಿದ್ದೇ ಸುಖವಾಗಿದ್ದಾರೆ. ಹಾಗೊಮ್ಮೆ ಅವರು ಸುಖವಾಗಿಲ್ಲವಾಗಿದ್ದರೆ ಹಿಂಸೆಗೆ ಹೆದರಿ ಪಂಡಿತರು ಕಾಶ್ಮೀರ ತೊರೆದಂತೆ ಅವರೂ ಕಾಶ್ಮೀರ ಬಿಟ್ಟು ಹೋಗುತ್ತಿದ್ದರು. ಪಾಕ್ ಆಕ್ರಮಿತ ಕಾಶ್ಮೀರದ ಸ್ಥಿತಿ ನೋಡಿ ಪಾಕಿಸ್ತಾನಕ್ಕೆ ಸೇರಿದರೆ ಏನಾಗುತ್ತದೆ ಎಂಬುದನ್ನು ಅವರು ಅರಿತಿದ್ದಾರೆ. ಹಾಗಾಗಿ ಪಾಕಿಸ್ತಾನ ಸೇರುವುದು ಇಷ್ಟವಿಲ್ಲ. ಸ್ವತಂತ್ರ್ಯ ರಾಷ್ಟ್ರ ಅನ್ನುತ್ತಾರೆ. ಒಂದೊಮ್ಮೆ ಕಾಶ್ಮೀರಕ್ಕೆ ಸ್ವಾತಂತ್ರ್ಯ ಕೊಟ್ಟರೆ ಪಾಕಿಸ್ತಾನ ಅದನ್ನು ಬಿಟ್ಟೀತೇ? ಹಾಗೊಮ್ಮೆ ಬಿಟ್ಟರೂ ಒಂದು ರಾಷ್ಟ್ರವಾಗಿ, ಪ್ರಜೆಗಳು ಸುಖವಾಗಿ ಬದುಕುವ ರಾಷ್ಟ್ರವಾಗಿ ಉಳಿಯಲು ಸಾಧ್ಯವಾದೀತೇ?

ಇದೆಲ್ಲ ಆಗದ ಮಾತು ಎಂಬುದು ಕಾಶ್ಮೀರಿಗಳಿಗೂ ಗೊತ್ತಿದೆ. ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ `ಪ್ರತ್ಯೇಕತೆಯ ಕೂಗು ಕ್ಷೀಣಿಸುತ್ತದೆ. ಸ್ವತಂತ್ರ್ಯ ರಾಷ್ಟ್ರವಾಗಿ ಉಳಿಯುವುದು ಸಾಧ್ಯವಿಲ್ಲ. ಮಾತುಕತೆ, ಹೊಂದಾಣಿಕೆಯಲ್ಲಿ ಮುಕ್ತಾಯವಾಗಲಿದೆ' ಎಂದು ಹೇಳಿರುವುದು ಇದಕ್ಕೆ ಸಾಕ್ಷಿ.

ಆದರೇನು ಮಾಡುವುದು ಅವರಿಗೆ ಹಠ ಮಾಡಿ ರೂಢಿಯಾಗಿದೆ. ಕೆಲವು ಮಕ್ಕಳು ರಚ್ಚೆ ಹಿಡಿಯುತ್ತಾರಲ್ಲ ಹಾಗೆ. ಆಗಾಗ ನಾವು ಪಾಕಿಸ್ತಾನಕ್ಕೆ ಸೇರುತ್ತೇವೆ ಅನ್ನುವುದು. ಸ್ವಾತಂತ್ರ್ಯ ಕೊಡಿ ಅನ್ನುವುದು. ಅದಕ್ಕೆ ಹೆದರಿ ದಿಲ್ಲಿ ದೊರೆಗಳು ಕೊಡುವ ವಿಶೇಷ ಕೊಡುಗೆ ಸ್ವೀಕರಿಸಿ ಸುಮ್ಮನಾಗುವುದು. ಅವರಿಗೆ ಹಠ ಮಾಡುವ ಚಟ, ಇವರಿಗೆ ಸಮಾದಾನ ಮಾಡುವ ಸಂಭ್ರಮ!

ಸಾಕು, ಇಷ್ಟು ವರ್ಷ ಅವರನ್ನು ವಿಶೇಷವಾಗಿ ಸಲಹಿದ್ದು ಸಾಕು. ಸ್ವಾತಂತ್ರ್ಯ ಬಂದಾಗ, ಅದ್ಯಾವುದೋ ಅನಿವಾರ್ಯ ಸ್ಥಿತಿಯಲ್ಲಿ ಭಾರತಕ್ಕೆ ಸೇರಿದಾಗ ಇದ್ದ ಜನಾಂಗ ಈಗಿಲ್ಲ. ಈಗ ಕಾಶ್ಮೀರದಲ್ಲಿರುವುದು ಹೊಸ ಜನಾಂಗ. ಚಾನಲ್‌ಗಳಲ್ಲಿ ನೋಡಿದರೆ ೧೫-೪೦ ವರ್ಷದವರೇ ಪ್ರತಿಭಟನೆಗಳಲ್ಲಿ ಕಾಣಸಿಗುತ್ತಾರೆ. ಅಂದರೆ ಅವರು ಹುಟ್ಟಾ ಭಾರತೀಯರು. ಭಾರತಕ್ಕೆ ಕಾಶ್ಮೀರ ಸೇರುವಾಗ ಇದ್ದ ಜನರಿಗೆ ವಿಶೇಷ ಸೌಲಭ್ಯಗಳನ್ನು ಕೊಡುವುದು ನ್ಯಾಯಯುತ. ಒಪ್ಪಿಕೊಳ್ಳೋಣ. ಈಗಿನವರಿಗೂ ಅದನ್ನು ನೀಡುವ ಅಗತ್ಯ ಖಂಡಿತ ಇಲ್ಲ.

ಕಾಶ್ಮೀರ ವಿಶೇಷ ರಾಜ್ಯವಾಗಿ ಮೆರಿದಿದ್ದು ಸಾಕು. ಅದನ್ನೂ ದೇಶದ ಇತರ ರಾಜ್ಯಗಳಂತೆ ಪರಿಗಣಿಸುವತಾಗಲಿ. ಅವರೂ ನಮ್ಮ ಹಾಗೆ ಹೊಂಡದಿಂದ ಕೂಡಿದ, ರಸಗೊಬ್ಬರ ಸಿಗದ, ನಮ್ಮ ರಾಜ್ಯಗಳಷ್ಟೇ ಅನುದಾನ ಪಡೆಯುವ, ದಕ್ಕಬೇಕಾದ್ದನ್ನೂ ಹೋರಾಟ ಮಾಡಿಯೇ ದಕ್ಕಿಸಿಕೊಳ್ಳಬೇಕಾದ ಸ್ಥಿತಿ ಅನುಭವಿಸಲಿ. ಆಗ ಅವರ ಹಠ ಕಡಿಮೆಯಾದೀತು.

ಬಗ್ಗಿದವನ ಬೆನ್ನಿಗೊಂದು ಗುದ್ದು ಎಂದು ಹಳೇ ಮಾತಿದೆ. ಹಾಗೆ ದಿಲ್ಲಿಯಲ್ಲಿನ ಕೇಂದ್ರ ಸರಕಾರಗಳು ಕಾಶ್ಮೀರಿಗಳ ಎದುರು ಬಗ್ಗಿದ್ದಷ್ಟೇ ಅಲ್ಲ ಕುಕ್ಕುರುಗಾಲಿನಲ್ಲಿ ಕುಳಿತಿದೆ. ಅದಕ್ಕೇ ಅವರು ಆಗಾಗ ಗುದ್ದುತ್ತಿರುತ್ತಾರೆ. ಕೇಂದ್ರ ಸರಕಾರ ಸೆಟೆದು ನಿಂತುಕೊಳ್ಳಲಿ. ದೇಶದ ಮುಸ್ಲಿಮರಿಗೆಲ್ಲಿ ಬೇಸರವಾಗುತ್ತದೋ ಎಂದು ಅಂಜುವ ಅಗ್ಯವಿಲ್ಲ. ಯಾಕೆಂದರೆ ಕಾಶ್ಮೀರಿ ಮುಸ್ಲಿಮರ ಬಗ್ಗೆ ದೇಶದ ಇತರೆಡೆಯ ಮುಸ್ಲಿಮರೇನು ವಿಶೇಷ ಒಲವು ಹೊಂದಿಲ್ಲ. ಇದು ಮೊದಲು ಮತ್ತು ಈಗ ಸಾಬೀತಾಗಿದೆ. ಹಾಗಾಗಿ ಕೇಂದ್ರ ಸರಕಾರ ಧೈರ್ಯದಿಂದ ಈ ನಿರ್ಧಾರ ತೆಗೆದುಕೊಳ್ಳಬಹುದು.

ಇಷ್ಟೆಲ್ಲ ಆದ ನಂತರವೂ ಕಾಶ್ಮೀರಕ್ಕೆ ವಿಶೇಷ ಸ್ಥಾನ-ಮಾನ ಮುಂದುವರಿಸಿದರೆ, ವಿಶೇಷ ಸ್ಥಾನಮಾನದ ಆಸೆಗಾಗಿ ಪ್ರತ್ಯೇಕತೆಯ ಪೀಪಿ ಮೊಳಗಿಸುವಂತೆ ಇತರೆ ರಾಜ್ಯಗಳಿಗೆ ನಾವೇ ಪ್ರೋತ್ಸಾಹ ನೀಡಿದಂತಾಗುತ್ತದೆ.

Tuesday, October 14, 2008

ನನಗೆ ಅಂಥ ಪಿಚ್ಚರುಗಳೇ ಯಾಕೆ ಇಷ್ಟವಾಗುತ್ತವೆ?


ಅಬ್‌ತಕ್ ಚಪ್ಪನ್, ರಿಸ್ಕ್, ಶೂಟ್‌ಔಟ್ ಎಟ್ ಲೋಖಂಡ್ವಾಲಾ, ಎ ವೆನ್ಸಡೆ, ಗಂಗಾಜಲ್...

ಓಹ್! ಗಂಗಾಜಲ್, ಅಬ್ತಕ್ ಚಪ್ಪನ್ ಪಿಚ್ಚರ್ಗಳನ್ನು ಹಲವು ಬಾರಿ ನೋಡಿದ್ದೇನೆ. ನೀವು ಇನ್ನೊಮ್ಮೆ ತೋರಿಸಿದರೂ ಮೊದಲ ಸಾರಿ ನೋಡಿದಾಗಿನಿಗಿಂತ ಹೆಚ್ಚು ಆಸಕ್ತಿಯಿಂದ ನೋಡುತ್ತೇನೆ. ನನಗೆ ಇಷ್ಟವಾಗೋ ಪಿಚ್ಚರ್(ಸಿನಿಮಾ)ಗಳ ಲೀಸ್ಟು ನೋಡಿದರೆ ಎಲ್ಲವೂ ಒಂದೇ ಥರದವು. ಅವುಗಳ ಕತೆ, ಅಲ್ಲಿನ ತಿರುವುಗಳಲ್ಲಿ ವ್ಯತ್ಯಾಸ ಇದೆಯಾದರೂ ಹೆಚ್ಚಿನವೆಲ್ಲ ಪೊಲೀಸರಿಗೆ ಸಂಬಂಧಿಸಿದ ಕತೆಗಳು. ಅದರಲ್ಲೂ ನಿಯತ್ತಿನ, ಧಕ್ಷ ಪೊಲೀಸ್ ಅಧಿಕಾರಿಗಳ ಕತೆಗಳು. ಒಳ್ಳೆ ಪೊಲೀಸರ ಕತೆಗಳು!

ಒಂದು ಕಾಲದಲ್ಲಿ ಪೊಲೀಸರು ಅಂದರೆ ಕೆಟ್ಟವರು. ಎಲ್ಲ ಮುಗಿದ ಮೇಲೆ ಬರುವವರು. ಲಂಚ ತಿನ್ನುವವರು. ಖಾಕಿ ಧಾರಿ ಗೂಂಡಾಗಳು ಎಂದು ಬಿಂಬಿಸುವ ಪಿಚ್ಚುಗಳೇ ಬರುತ್ತಿದ್ದವು. ಅವುಗಳನ್ನೂ ನೋಡಿದ್ದೇನೆ. ಈಗಿನ ಪೊಲೀಸ್ ಪರ ಪಿಚ್ಚರ್ ಗಳನ್ನೂ ನೋಡುತ್ತಿದ್ದೇನೆ.

ಚಿಕ್ಕನಿರುವಾಗ ನನ್ನ ಫೇವರಿಟ್ ಹೀರೊ ದೇವರಾಜ್! ಯಾಕೆಂದರೆ ಆತ ದಕ್ಷ ಪೊಲೀಸ್ ಅಧಿಕಾರಿಗಳ ಪಾತ್ರ ಮಾಡುತ್ತಿದ್ದ. ಒರಿಜಿನಲ್ ಸಾಂಗ್ಲಿಯಾನಾ ಇಷ್ಟವಾಗದಿದ್ದರೂ ಶಂಕರ್‌ನಾಗ್‌ನ ಎಸ್ಪಿ ಸಾಂಗ್ಲಿಯಾನಾ ಪಿಚ್ಚರ್ ಇಷ್ಟವಾಗಿತ್ತು! ನಂತರ ಸಾಯಿಕುಮಾರ್ ಬಂದ. ಪೊಲೀಸ್‌ಸ್ಟೋರಿ ಮೂಲಕ ಇಷ್ಟವಾದ.

ಈಗಲ್ಲ. ಚಿಕ್ಕವನಿರುವಾಗಿನಿಂದಲೂ ನನಗೆ ಪೊಲೀಸರ ಕತೆಯ ಪಿಚ್ಚರ್‌ಗಳೆಂದರೆ ಇಷ್ಟ. ಕೊಂಚ ಮಟ್ಟಿಗೆ ಭೂಗತಲೋಕದ ಕತೆಗಳು ಕೂಡ! ಸೈನಿಕರ ಕತೆಗಳು ಇಷ್ಟವಾಗುತ್ತವಾದರೂ ಪೊಲೀಸರ ಕತೆಗಳಷ್ಟು ಅವು ನನ್ನನ್ನು ಸೆಳೆಯಲಿಲ್ಲ. ಮನಸಲ್ಲಿ ನಿಲ್ಲಲಿಲ್ಲ.

ಯಾಕೆ?

ನಾನಗೆ ಪೊಲೀಸ್ ಆಗಬೇಕೆಂಬ ಆಸೆ ಇದ್ದದ್ದಕ್ಕಾ? ಆ ಮೂಲಕ ಸಮಾಜಕ್ಕೆ ಒಂದಷ್ಟಾದರೂ ಒಳ್ಳೆಯದು ಮಾಡಬೇಕು ಅಂದುಕೊಂಡಿದ್ದಕ್ಕಾ? ಸೈನಿಕನಾಗಿ ಹೊರಗಿನ ಶತ್ರುಗಳ ವಿರುದ್ಧ ಹೋರಾಡುವುದಕ್ಕಿಂತ ಪೊಲೀಸ್ ಅಧಿಕಾರಿಯಾಗಿ ದೇಶದೊಳಗಿನ ಶತ್ರುಗಳ ವಿರುದ್ಧ ಹೋರಾಡುವ ಮನಸ್ಸಿದ್ದಿದ್ದಕ್ಕಾ? ಅಥವಾ ಇಂಥ ಪಿಚ್ಚರ್ ನೋಡಿಯೇ ನಾನೂ ಒಬ್ಬ ದಕ್ಷ ಪೊಲೀಸ್ ಅಧಿಕಾರಿ ಆಗಬೇಕು ಅನ್ನಿಸಿತಾ?

ಇವತ್ತಿಗೂ ನನಗೆ ಈ ಪ್ರಶ್ನೆಗಳಿಗೆ ಸರಿಯಾದ ಉತ್ತರ ಸಿಕ್ಕಿಲ್ಲ. ಆದರೂ ನಾನು ಒಬ್ಬ ಒಳ್ಳೆ ಪೊಲೀಸ್ ಅಧಿಕಾರಿಯಾಗಬೇಕು ಅದುಕೊಂಡಿದ್ದು ಸತ್ಯ. ಹಲವು ಕಾರಣಗಳು. ಅದಾಗಲಿಲ್ಲ. ಬದಲಾಗಿ ಪತ್ರಕರ್ತನಾದೆ. ಈ ಮೂಲಕವೂ ಸಮಾಜಕ್ಕೆ ಸೇವೆ ಸಲ್ಲಿಸಬಹುದಲ್ಲ ಎಂಬ ಸಮಾದಾನ. ಅಷ್ಟೇ ಅಲ್ಲ ಕ್ರೈಂ ವರದಿಗಾರನೂ ಆದೆ. ಆ ಮೂಲಕ ಮತ್ತೆ ನನಗಿಷ್ಟವಾದ ಪೊಲೀಸ್ ಇಲಾಖೆ ಸಂಪರ್ಕ ಪಡೆದೆ.

ಒಳ್ಳೆ ಅಧಿಕಾರಿಗಳ ಪರಿಚಯವಾಯಿತು. ಹೆಸರು ಬರೆಯುತ್ತ ಹೋದರೆ ಸಾಕಷ್ಟಿದೆ. ಹಾಗೆ ಬರೆದರೂ ಅವರಿಗೂ ಹಾನಿ! ಅಂತೂ ಒಳ್ಳೆ ಅಧಿಕಾರಿಗಳ ಪರಿಚಯವೇ ಆಯಿತು. ಯಾರಿಗೂ ಗೊತ್ತಾಗದ ಅದೆಷ್ಟೋ ಸಂಗತಿಗಳು ಕಿವಿಗೆ ಬೀಳತೊಡಗಿದವು. ಕಿವಿಗೆ ಬಿದ್ದಿದ್ದು ಕಣ್ಣಿಗೂ ಕಂಡವು. ಏನೇ ಹೇಳಿ ನನಗಂತೂ ಸಾಕಷ್ಟು ಒಳ್ಳೆ ಅಧಿಕಾರಿಗಳೇ ಕಂಡರು. ಅಥವಾ ನನ್ನ ಮನಸ್ಸಲ್ಲಿ ಒಳ್ಳೆಯದೇ ಇದ್ದಿದ್ದಕ್ಕೆ ಅವರಲ್ಲಿದ್ದ ಒಳ್ಳೆಯದನ್ನಷ್ಟೇ ಕಂಡೆನೊ? ಕೆಲವು ವಿಷಯದಲ್ಲಿ ಪತ್ರಕರ್ತನಾಗಿ ಅವರಿಗೆ ಸಹಾಯವನ್ನೂ ಮಾಡಿದೆ. ಆ ಮೂಲಕ ಸಮಾಜಕ್ಕೂ ಅಂತ ಅಂದುಕೊಂಡೆ. ಈಗಲೂ ಅವರೊಂದಿಗೆ ಗೆಳತನ ನನಗಿಷ್ಟ.

ಇಂದಿಗೂ ಅದೆಷ್ಟೋ ಒಳ್ಳೆ ಅಧಿಕಾರಿಗಳಿದ್ದಾರೆ. ಅವರನ್ನೆಲ್ಲ ಅರ್ಧ ಹಾಳು ಮಾಡುತ್ತಿರುವವರು ನಮ್ಮ ರಾಜಕಾರಣಿಗಳು. ಅವರ ಲಾಭಕ್ಕೆ ಪೊಲೀಸರು ದಾಳಗಳು. ಸಾರ್ವಜನಿಕರು ನಡೆಸುವ ಕಾಯಿಗಳು. ಕಾನೂನು ಮುರಿಯುವವನಿಗೆ ಯಾವುದೂ ಇಲ್ಲ. ಅದೇ ಕಾನೂನು ಪಾಲಕರು ಸಮಾಜದ ಒಳ್ಳೆಯದಕ್ಕೆ ಎನ್‌ಕೌಂಟರ್ ನಡೆಸಿದರೆ ಮಾನವ ಹಕ್ಕು ನಾಶವಾದ ಬಗ್ಗೆ ಬೊಬ್ಬೆ ಹೊಡೆಯಲಾಗುತ್ತದೆ! ಕಾನೂನು ಪಾಲಿಸದೆ ಸಮಾಜಕ್ಕೆ ಕೆಡುಕುಂಟು ಮಾಡುವವನ ನಾಶಕ್ಕೆ ಕಾನೂನು ಪಾಲಕರು ಕೊಂಚ ಕಾನೂನು ಬಿಟ್ಟು ಹೋದರೆ ತಪ್ಪೇನು?

ನಿಮಗೆ ನೆನಪಿರಬಹುದು, ಶೂಟೌಟ್ ಎಟ್ ಲೋಖಂಡ್ವಾಲಾದಲ್ಲಿ ಪ್ರಕರಣದ ತನಿಖೆ ನಡೆಸುವ ನ್ಯಾಯಾಧೀಶರ ಬಳಿ ಅಮಿತಾಬ್ ಕೊನೆಯಲ್ಲೊಂದು ಪ್ರಶ್ನೆ ಕೇಳುತ್ತಾನೆ... ನೀವು ನ್ಯಾಯಾಲಯದಲ್ಲಿದ್ದೀರಿ. ಹೆಂಡತಿ- ಮಕ್ಕಳು ಮನೆಯಲ್ಲಿದ್ದಾರೆ. ಒಬ್ಬ ವ್ಯಕ್ತಿ ನಿಮ್ಮ ಮನೆಯ ಹೊರಗೆ ಪಿಸ್ತೂಲ್ ಹಿಡಿದು ನಿಂತಿದ್ದಾನೆ. ಆತ ಪೊಲೀಸ್ ಆಗಿರಲಿ ಎಂದು ಬಯಸುತ್ತೀರೊ? ಗೂಂಡಾ ಆಗಿರಲಿ ಎಂದು ಬಯಸುತ್ತೀರೊ?

ಸಹಜ. ಆತ ಪೊಲೀಸ್ ಆಗಿರಲಿ ಎಂದೇ ಬಯಸುತ್ತೇವೆ. ಎಲ್ಲದಕ್ಕೂ ಉತ್ತರ ಅಲ್ಲಿಯೇ ಇದೆ. ಎಷ್ಟೇ ಕೆಟ್ಟವರಿರಲಿ, ಪೊಲೀಸರಿಗೆ ಕಾನೂನಿನ ತಡೆಯಿರುತ್ತದೆ. ಆತನನ್ನು ನಿಯಂತ್ರಿಸುವುದು ಕಷ್ಟವಲ್ಲ. ಆದರೆ ಕಾನೂನೇ ಇಲ್ಲದ ಗೂಂಡಾಗಳು ಹಾಗಲ್ಲ. ದುರತವೆಂದರೆ ಅಂಥವರು ಈಗ ಖಾದಿ ಧರಿಸಿ, ನಮ್ಮನ್ನೇ ಆಳುವಂತಾಗಿದ್ದಾರೆ!

ಅದೇನು ನಾನು ಬೆಳೆದ ವಾತಾವರಣವೋ? ನನ್ನಪ್ಪ-ಅಮ್ಮ ನೀಡಿದ ಸಂಸ್ಕಾರವೋ? ಅಥವಾ ಅವರೇ ಸ್ವತಃ ನಿಯತ್ತಿನಿಂದ, ಭಾರತದ ಉತ್ತಮ ಪ್ರಜೆಗಳಾಗಿರುವುದೋ? ನನ್ನ ಮನಸ್ಸಿನಲ್ಲಿ ಚಿಕ್ಕಂದಿನಿಂದಲೂ ಲಂಚ, ಅನ್ಯಾಯ ವಿರೋಧಿ ಮನಸ್ಸು ರೂಪುಗೊಂಡುಬಿಟ್ಟಿದೆ. ಇವತ್ತಿಗೂ ಅನ್ಯಾಯ, ಲಂಚ ಕಂಡರೆ ಅದು ಸಹಿಸದು. ಎಲ್ಲ ಕಡೆ ಲಂಚ ಇದೆ ಅಂತ ಅನ್ನಿಸಿದರೂ ನಾನು ಇವತ್ತಿನವರೆಗೆ ಯಾರಿಗೂ ಲಂಚಕೊಟ್ಟಿಲ್ಲ. ಪತ್ರಕರ್ತನಾಗಿಯೂ, ದೊಡ್ಡ ಪೊಲೀಸ್ ಅಧಿಕಾರಿಗಳ ಪರಿಚಯವಿದ್ದೂ ಪೊಲೀಸರಿಗೆ ದಂಡ ಕಟ್ಟಿದ್ದೇನೆ. ಲಂಚಕೊಟ್ಟಿಲ್ಲ. ಇವತ್ತಿಗೂ ನನಗೆ ಲಂಚಕೋರರನ್ನು, ಕೊಳಕು ರಾಜಕಾರಣಿಗಳನ್ನು ಕಂಡರೆ ಎಲ್ಲಿಲ್ಲದ ದ್ವೇಷ. ಅಂಥವರ ವಿರುದ್ಧ ಬರೆಯಲು ಸಿಕ್ಕ ಒಂದು ಅವಕಾಶವನ್ನೂ ನಾನು ಇವತ್ತಿನವರೆಗೆ ಸುಮ್ಮನೆ ಬಿಟ್ಟಿಲ್ಲ. ನನಗೆ ಅವರ ಮೇಲೆ ಸೇಡು ತೀರಿಸಿಕೊಳ್ಳು ಕಾನೂನು ಬದ್ಧವಾಗಿರುವ ಮಾರ್ಗ ಅದು.

ಎಲ್ಲರೂ ಕಳ್ಳರು. ಲಂಚ ಎಲ್ಲೆಲ್ಲೂ ಆವರಿಸಿದೆ ಅಂತ ಎಷ್ಟೇ ಅಂದರೂ ನನಗೆ ಈಗಲೂ ನಂಬಿಕೆಯಿದೆ. ಅದೇನೆಂದರೆ ಇವತ್ತಿಗೂ ನಿಯತ್ತಿನ ಜನ ಇದ್ದಾರೆ. ಧಕ್ಷ ಅಧಿಕಾರಿಗಳಿದ್ದಾರೆ. ರಾಜಕಾರಣಿಗಳೂ! ಸಂಖ್ಯೆ ಕಡಿಮೆ ಇರಬಹುದು. ಹೆಚ್ಚಿದ್ದರೂ ನಮಗೆ ಕಡಿಮೆ ಅನ್ನಿಸಬಹುದು. ಅವರಿಗೆ ಕೆಟ್ಟವರು ಕಿರಿಕಿರಿ ನೀಡಬಹುದು. ಅದೇನಾದರೂ ಇರಲಿ. ನಾವು ನಮ್ಮಷ್ಟಕ್ಕೆ ನಿಯತ್ತಿನಿಂದ ಇರಬೇಕು. ಇಲ್ಲಿದ್ದುಕೊಂಡೇ ಕೈಲಾದಷ್ಟು ಬದಲಾವಣೆ ಮಾಡಬಹುದು ಅಥವಾ ನಿಯತ್ತು ಇನ್ನಷ್ಟು ಕೆಡದಂತೆ, ಭಷ್ಟತೆ ಹರಡದಂತೆ ತಡೆಯಬಹುದು.

ನಾವು ಮಾಡಬೇಕಾದ್ದಿಷ್ಟೆ, ನಾವು ನಿಯತ್ತಿನಿಂದಿರಬೇಕು. ಲಂಚ ಕೊಡಬಾರದು. ನಮ್ಮ ಮಕ್ಕಳೂ ನಿಯತ್ತಾಗಿ ಭಾರತದ ಉತ್ತಮ ಪ್ರಜೆಯಾಗುವಂತೆ ನೋಡಿಕೊಳ್ಳಬೇಕು. ಅಷ್ಟು ಸಾಕು. ಅದೇ ನಾವು ದೇಶಕ್ಕೆ ಕೊಡಬಹುದಾದ ಕೊಡುಗೆ. ಅದಕ್ಕಾಗಿ ನಮಗೆ ಯಾರೂ ಭಾರತ ರತ್ನ ಪ್ರಶಸ್ತಿ ನೀಡಬೇಕಿಲ್ಲ. ಯಾರೂ ನಮ್ಮನ್ನು ಗುರುತಿಸಬೇಕಾಗಿಯೂ ಇಲ್ಲ.

(ವಿ.ಸೂ: ಇವತ್ತು (೧೪-೧೦-೦೮) ರಾತ್ರಿ ಯುಟಿವಿಯಲ್ಲಿ ರಿಸ್ಕ್ ಸಿನಿಮಾ ನೋಡ್ತಾ ಇದ್ದೆ. ನನಗೆ ಪೊಲೀಸ್ ಸಿನಿಮಾಗಳು ಇಷ್ಟವಾಗುವ ಬಗ್ಗೆ ಯಾಕೊಂದು ಚಿಕ್ಕ ಬರಹ ಬ್ಲಾಗಿಸಬಾರದು ಅನ್ನಿಸಿತು. ಪಿಚ್ಚರ್‌ನೋಡುತ್ತ, ಜಾಹೀರಾತು ಬಂದಾಗ ಬರೆಯುತ್ತ ಹೋದೆ. ಪಿಚ್ಚರ್ ಬಗ್ಗೆ ಬರೆಯಬೇಕು ಅದುಕೊಂಡು ಹೊರಟವ, ಅದು ಎಲ್ಲಿಗೋ ಹೋಯಿತು. ತುಂಬ ಸೀರಿಯಸ್ ಅನ್ನಿಸಿ ಬೋರು ಹೊಡೆಸಿದ್ದರೆ, ಬಯ್ಯಬೇಡಿ. ಬರೆಯುತ್ತ ನನ್ನ ಬಗ್ಗೇ ಹೆಚ್ಚು ಹೊಗಳಿಕೊಂಡಿದ್ದೇನೆ ಅನ್ನಿಸಿದರೆ ಕ್ಷಮಿಸಿ. ನಿಯತ್ತಿನ ಮನುಷ್ಯನಾಗಿ ನನಗಷ್ಟು ನೈತಿಕ ಅಧಿಕಾರ ಇದೆ ಅಂದುಕೊಳ್ಳುತ್ತೇನೆ.)

Monday, October 13, 2008

ಆಹಾ ಮಿಥುನನ ಮದ್ವೆಯಂತೆ!

ನಾನು ಕರ್ನಾಟಕದಲ್ಲೇ ಇದ್ದಿದ್ದರೆ ಇವತ್ತು ಹೋಗಲೇ ಬೇಕಿತ್ತು. ಆದರೆ ದೂರದ ದಿಲ್ಲಿಯಲ್ಲಿದ್ದೇನಲ್ಲಾ. ನನ್ನ ಆತ್ಮೀಯ ಗೆಳೆಯ ಮಿಥುನನ ಮದುವೆ ಇವತ್ತು. ನನ್ನ ಪರವಾಗಿ ನನ್ನ ಹೆಂಡತಿ ಹೋಗಿ ಬಂದಳು. ಆದರೆ ನಾನು ಮಿಸ್!
ಮಿಥುನ್ ಸದಾ ಚಟುವಟಿಕೆಯ ಹುಡುಗ. ಅದಕ್ಕೆ ತಕ್ಕಂತೆ ಗಡಿಬಿಡಿ. ಫೋನು ಮಾಡಿದರೆ ಕಟ್ ಮಾಡುವ ಬಟನ್ ಮೇಲೆ ಬೆರಳಿಟ್ಟೇ ಮಾತನಾಡುತ್ತಾನೆ. ಕಿನ್ನಿಗೋಳಿಯಂತಹ ಸಣ್ಣ ಊರಲ್ಲಿ ಕುಳಿತು ದೊಡ್ಡ ದೊಡ್ಡ ವಿಷಯಗಳ ಬೆನ್ನುಹತ್ತುತ್ತಾನೆ. ತುಂಬ ಚುರುಕು. ಅಸೂಯೆಯಾಗುವಷ್ಟು!
ಆದರೆ ಆತ ನನ್ನ ಲೇಖನ ಪತ್ರಿಕೆಯಲ್ಲಿ ಬಂದಾಗೆಲ್ಲ ಉರಿದುಕೊಳ್ಳುತ್ತಿರುತ್ತಾನೆ. ಬೆಳ್ಳಂಬೆಳಗ್ಗೆ ಆತನ ಮಿಸ್ ಕಾಲ್ ಬಂದಿದೆ ಎಂದರೆ ಆ ದಿನ ನನ್ನ ಲೇಖನ ಪ್ರಕಟವಾಗಿದೆ ಎಂದೇ ಅರ್ಥ. ಓದದಿದ್ದರೂ ನೋಡಿದ ಕೂಡಲೆ ಒಂದು ಮಿಸ್ ಕಾಲ್ ಕೊಡುವುದು ಆತನ ಪದ್ಧತಿ.
ನನ್ನ ಗೆಳೆಯನ ಮದುವೆಯಾಗಿದ್ದರೆ ಬ್ಲಾಗಿಗೆ ಬರೆಯುತ್ತಿರಲಿಲ್ಲ. ಅವನ ಮದುವೆಗೂ ನನಗೂ ಸಂಬಂಧ ಉಂಟು! ನನ್ನ ಗೆಳೆಯನಾದರೂ ನನ್ನ ಬಳಿ ಹುಡುಗಿಯರು ಮಾತನಾಡುವುದು ಕಂಡು ಅವನಿಗೆ ಒಳಗೊಳಗಷ್ಟೇ ಅಲ್ಲ ಹೊರಗೂ (ನನ್ನ ಬಳಿಯೇ ಹೇಳಿದ್ದಾನೆ ಹಾಗಾಗಿ) ಅಸೂಯೆ. ಒಂದಾದರೂ ಹುಡುಗಿಯನ್ನು ಪಟಾಯಿಸಿ ಮಿಂಚಬೇಕೆಂದು ಆಸೆ. ಅವಳನ್ನೇ ಮದುವೆಯಾಗಲೂ ಸಿದ್ಧನಿದ್ದ ಬಿಡಿ. ಮೂಡುಬಿದಿರೆಯ ನುಡಿಸಿರಿ, ಉಡುಪಿಯ ಸಾಹಿತ್ಯ ಸಮ್ಮೇಳನ ಹೀಗೆ ದೊಡ್ಡ ಕಾರ್ಯಕ್ರಮಗಳಲ್ಲಿ ಉತ್ತಮ ವರದಿಯ ಜತೆ ಹುಡುಗಿಯೂ ಸಿಗುತ್ತಾಳೇನೋ ಹುಡುಕಿದ್ದೇ ಹುಡುಕಿದ್ದು.
ನಾನಾವಾಗಲೇ ಹೇಳಿದ್ದೆ ನನ್ನ ಜತೆ ತಿರುಗಬೇಡ. ನಿನಗೆ ಹುಡುಗಿ ಸಿಗುವುದಿಲ್ಲ ಎಂದು. ಆತ ಕೇಳಬೇಕಲ್ಲ. ನನ್ನ ಜತೆಯೇ ಇರುತ್ತಿದ್ದ. ನನಗೂ ಅವನ ಜತೆ ಇಷ್ಟವಾಗುತ್ತಿತ್ತು. ಹೀಗೆ ಹೋದಲ್ಲೆಲ್ಲ ಯಾವುದೋ ಹುಡುಗಿಯನ್ನು ಸುಮ್ಮನೆ ಕಣ್ಣುಹಾಕಿ ಇಟ್ಟಿರುತ್ತಿದ್ದ. ದುರಂತವೆಂದರೆ ಆ ಹುಡುಗಿ ನನ್ನ ಬಳಿ ನಗುನಗುತ್ತ ಮಾತನಾಡಿ, ಪರಿಚಯ ಮಾಡಿಕೊಂಡು ಹೋಗುತ್ತಿದ್ದರು. ಅವರು ಹೋದ ಮೇಲೆ ಈತ ನನಗೆ ಶಾಪಹಾಕುತ್ತಿದ್ದ! ಪ್ರೀತಿಯಿಂದ!!
ಎಷ್ಟು ಕಾರ್ಯಕ್ರಮ ಸುತ್ತಿದರೂ ವರದಿ ಹೊರತು ಬೇರೇನೂ ಲಾಭವಾಗಲಿಲ್ಲ. ಅಂತೂ ನಾನು ಮಂಗಳೂರು ಬಿಟ್ಟೆ. ಅದೇನು ಕಾಕತಾಳೀಯವೋ? ಆತನಿಗೆ ಹುಡುಗಿ ಸಿಕ್ಕಿ ಮದುವೆ ನಿಕ್ಕಿಯಾಯಿತು! ಅಂತೂ ಅವನಿಗೆ ಹುಡುಗಿ ಸಿಗಬೇಕಾದರೆ ನಾನು ಮಂಗಳೂರು ಬಿಡಬೇಕಲಾಯಿತು!!
ಇವತ್ತು ಯಾರೋ ಅವನ ಮದುವೆಯಲ್ಲಿ 'ಮಿಥುನನ ರಿಮೋಟ್ ಪೋಂಡಾ ಅಂದು' (ಮಿಥುನನ ರಿಮೋಟ್ ಹೋಯ್ತು) ಅಂದರಂತೆ. ಹೋಗಿಬಂದ ಗೆಳೆಯರ ವರದಿ ಪ್ರಕಾರ ಮಿಥುನನ ಪರಿಸ್ಥಿತಿ ಇನ್ನುಮುಂದೆ ಕಷ್ಟ ಎಂಬಂತಿತ್ತು. ಏನೇ ಇರಲಿ. ಅವರಿಬ್ಬರೂ ಸುಖವಾಗಿರಲಿ.
ಹನಿಮೂನಿಗೆ ದಿಲ್ಲಿಗೆ ಬಾ ಎಂದಿದ್ದೇನೆ. ಮದುವೆಯಾದ ಗಡಿಬಿಡಿಯಲ್ಲಿ ಎಲ್ಲಾ ಅಲ್ಲೇ ಮುಗಿಸುತ್ತಾನೊ, ದಿಲ್ಲಿಗಾಗಿ ಏನಾದ್ರೂ ಉಳಿಸಿಕೊಳ್ಳುತ್ತಾನೊ? ನೋಡಬೇಕು...
(ವಿಸೂ: ವಿಶೇಷ ಸೂಚನೆ ಅಥವಾ ವಿನಾಯಕನ ಸೂಚನೆ!: ಮದುವೆಯ ದಿನವೇ ಸಂಸಾರ ಹಾಳು ಮಾಡುವ ಯತ್ನಕ್ಕೆ ಕೈಹಾಕಿದ್ದಾನೆ ಎಂದು ಅಪಾರ್ಥ ಮಾಡಿಕೊಳ್ಳಬೇಡಿ. ಯಾಕೆಂದರೆ ಅವರವರ ಸಂಸಾರಕ್ಕೆ ಅವರೇ ಜವಾಬ್ದಾರರು!)

Tuesday, October 07, 2008

ಕಟ್ಟಿದೆ ಮೂಗು, ತೆರೆದಿದೆ ಬ್ಲಾಗು!


ಮೂಗು ಕಟ್ಟಿದೆ. ಪರಿಣಾಮ ನಿದ್ದೆ ಕೆಟ್ಟಿದೆ.

ಈ ಸಿಂಬಳ ಹಿಡಿದಿಡಲಾಗದೆ

ಮೂಗು ಸೋತಿದೆ...

ಈ ಶೀತ ಹಿಡಿದಿಡಲು

ಬೆಡ್‌ಶೀಟೂ ಸಾಲದೆ...

(ದುಂಡಿರಾಜರ 'ಈ ಚೆಲುವೆಯ ಬಣ್ಣಿಸಲಾಗದೆ ಕವಿತೆ ಸೋತಿದೆ, ನಿನ್ನ ರೂಪ ಬಣ್ಣಿಸಲು ಪದಗಳೂ ಸಾಲದೆ' ಹಾಡಿನಿಂದ ಸ್ಪೂರ್ತಿ ಪಡೆದು) ಅಷ್ಟು ಶೀತ. ಮೇಲೆ ಮುಖಮಾಡಿ ಮಲಗಿದರೆ ಸಿಂಬಳ ಮೂಗಿನ ಕೆಳಭಾಗದಲ್ಲಿ ಕಟ್ಟುತ್ತದೆ. ಕೆಳಮುಖಮಾಡಿ ಮಲಗಿದರೆ ಸಿಂಬಳ ಮೇಲ್ಭಾಗದಲ್ಲಿ ಕಟ್ಟುತ್ತದೆ. ಒಟ್ಟಿನಲ್ಲಿ ನಿದ್ರೆ ಇಲ್ಲದ ರಾತ್ರಿ!

ಬಹುತೇಕ ಜನರಿಗೆ ಹೀಗಾದಾಗ ಮೂಡು ಕೆಡುತ್ತದೆ. ವಕ್ರದಂತನಾದ ನಾನು ಇಲ್ಲೂ ವಕ್ರ. ನನಗೆ ಮೂಡು ಬಂತು. ಆಗಸ್ಟ್ 1೫ರಂದು ಒಂದು ಲೇಖನ ಬರೆದು ಬ್ಲಾಗಿಗೆ ಹಾಕಿದವ ಮತ್ತೆ ಬ್ಲಾಗಿಸಿಯೇ ಇರಲಿಲ್ಲ. ಅಷ್ಟೇ ಏಕೆ ಬೇರೆ ಬ್ಲಾಗಿನತ್ತ ಬಗ್ಗಿ, ಬಾಗಿಯೂ ನೋಡಿರಲಿಲ್ಲ. ಆ.೨೯ರಿಂದ ೧೫ ದಿನ ಊರಿಗೆ ಹೋಗಿದ್ದೆ. ಪತ್ರಿಕೋದ್ಯಮ ಸೇರಿದ ಮೇಲೆ ಮದುವೆಗೆ ೧೨ ದಿನ ರಜೆ ಹಾಕಿದ್ದು ಬಿಟ್ಟರೆ ಮತ್ತೆ ೧೫ ದಿನದ ದೀರ್ಘ ರಜೆ ಇದೇ ಮೊದಲು. ಆಗಸ್ಟ್ ೧೫ರ ನಂತರ ಊರಿಗೆ ಹೋಗುವ ಸಂಭ್ರಮ. ಬ್ಲಾಗು ಬೋರನ್ನಿಸಿತು. ಊರಿನಲ್ಲಿ ಲ್ಯಾಪ್‌ಟಾಪ್ ಜತೆಯಲ್ಲಿತ್ತಾದರೂ ಯಾಕೋ ಬ್ಯಾಗಿನಿಂದ ಹೊರತೆಗೆಯುವ ಮನಸ್ಸಾಗಲಿಲ್ಲ. ಬಂದ ಮೇಲೆ ಊರಿನ ರಂಗು, ರಜೆಯ ಗುಂಗು ಏನೂ ಬರೆಯಲಾಗಲಿಲ್ಲ.

ಹಾಗಂತ ಬರೆಯೋಕೆ ವಿಷಯ ಇರಲಿಲ್ಲ ಅಂತಲ್ಲ. ಓದಿದ ಪುಸ್ತಕ, ನೋಡಿದ ಸಿನಿಮಾ ಎಲ್ಲ ಸಾಕಷ್ಟಿದ್ದವು. ರೈಲಿನಲ್ಲಿ ಜೋಗಿಯವರ ಯಾಮಿನಿ, ಚೇತನಾ ಅವರ ಭಾಮಿನಿ ಓದಿದೆ. ದಿಲ್ಲಿಯಲ್ಲಿ ಮನೆಯಲ್ಲಿ ಕುಳೀತು ಜಯಂತ ಕಾಯ್ಕಿಣಿ ಅವರ ಕತೆಗಳನ್ನು ಓದಿ ಮತ್ತೆ ಮಾನಸಿಕವಾಗಿ ದೀವಗಿ ಸೇತುವೆ ಮೇಲೆ, ಗೋಕರ್ಣದ ಬೀದಿಯಲ್ಲಿ ಓಡಾಡಲಾರಂಭಿಸಿದೆ. ಇವುಗಳನ್ನೆಲ್ಲ ಓದುತ್ತಿದ್ದಂತೆ ಕೆಲವು ಸಿನಿಮಾ ನೋಡುತ್ತಿದ್ದಂತೆ ಇದರ ಬಗ್ಗೆ ಬರೆದು ಬ್ಲಾಗಿಸಬೇಕು ಅಂದುಕೊಳ್ಳುತ್ತಿದ್ದೆ. ಸಾಮಾನ್ಯವಾಗಿ ಹಾಗೆ ಮಾಡುತ್ತೇನೆ. ಆದರೆ ಲ್ಯಾಪ್‌ಟಾಪ್‌ನ ಮುಂದೆ ಕುಳಿತರೆ ಬರೆಯಲೇಕೋ ಮನಸ್ಸಿಲ್ಲ. ಇಂದು ಹುಡುಗಿಗೆ ಐಲವ್ ಯು ಹೇಳಲೇ ಬೇಕು ಅಂತ ಬೇಗ ಎದ್ದು ಚೆಂದವಾಗಿ ರೆಡಿಯಾಗಿ ಕಾಲೇಜಿಗೆ ಬಂದ ಹುಡುಗ ಯಾಕೋ ಇವತ್ತು ಬೇಡ ಎಂದು ೭೨ನೇ ಬಾರಿಯೂ ಶುಭ ಕಾರ್ಯ ಮುಂದೂಡಿದಂತೆ!

ಈ ನಡುವೆ ಬ್ಲಾಗಿನ ಬಗ್ಗೆ ಒಂದು ನಮೂನೆ ನಶ್ವರ ಭಾವ. ರವಿ ಬೆಳೆಗೆರೆ ಅವರು ಹಾಯ್ ಬೆಂಗಳೂರಿನಲ್ಲಿ ಜೋಗಿ ಅವರ ಬಗ್ಗೆ ಬರೆಯುತ್ತ ನಯ್ಯಾಪೈಸೆ ಲಾಭವಿಲ್ಲದ ಬ್ಲಾಗೂ ನಡೆಸುತ್ತಾನೆ ಎಂದು ಶರಾ ಬರೆದಿದ್ದರು. ಅದರಿಂದ ಸ್ಪೂರ್ತಿ ಪಡೆದರೋ ಎಂಬಂತೆ ಜೋಗಿ ಕೂಡ ಹಿಟ್‌ವಿಕೆಟ್ ಆದವರಂತೆ ಬ್ಲಾಗ್ಲೋಕದಿಂದ ನಿರ್ಗಮಿಸಿಬಿಟ್ಟರು. ಈ ನಡುವೆ ವಿಶ್ವೇಶ್ವರ ಭಟ್ಟರು ಸುಮ್ಮನೆ ಬ್ಲಾಗಿಗೆ ಬರೆದು ಯಾಕೆ ಸಮಯ ಹಾಳು ಮಾಡ್ತೆ. ಪತ್ರಿಕೆಗೆ ಬರೆ. ಅದನ್ನು ಬೇಕಾದ್ರೆ ಬ್ಲಾಗಿಸು ಎಂದಿದ್ದರು. ಬಹುಶಃ ಇಷ್ಟೆಲ್ಲ ವಿಷಯಗಳು ಒಟ್ಟಿಗೆ ಸೇರಿ ನನಗೆ ಬ್ಲಾಗಿನ ಬಗ್ಗೆ ಬ್ಯಾಸರ ಮೂಡುವಂತೆ ಮಾಡಿತು.

ಕಳ್ಳಂಗೊಂದು ಪಿಳ್ಳೆ ನೆವ ಅಂತಾರಲ್ಲ ಹಾಗೆ ನನ್ನ ಆಲಸಿತನಕ್ಕೆ ಇಷ್ಟೆಲ್ಲ ದೊಡ್ಡ ಜನರ ಸಮರ್ಥನೆ ಸಿಕ್ಕಿಬಿಟ್ಟತ್ತು! ಪರಿಣಾಮ ನನ್ನ ಬ್ಲಾಗು ಬಂದಿತ್ತು. ಕೆಲವು ಗೆಳೆಯರು ಆರ್ಕುಟ್‌ನಲ್ಲಿ ಯಾಕೋ ನಿನ್ನ ಬ್ಲಾಗನ್ನು ಸ್ಕ್ಯಾಪ್ ಮಾಡಿದ್ದೀಯಾ ಅಂದರು. ಹಾಗೇನಿಲ್ಲ ಅಂತ ನಾನು ಸ್ಕ್ರ್ಯಾಪ್ ಮಾಡಿದೆ. ಏನೋ ಅನಿವಾರ್ಯ ಅನ್ನೋ ಶೈಲಿಯಲ್ಲಿ ಪತ್ರಿಕರ್ತನ ಕೆಲಸವನ್ನು ಮಾಡುತ್ತಿದ್ದೆ. ಅದೂ ಪೂರ್ತಿ ನನಗೇ ಸಮಾದಾನ ಕೊಡುತ್ತಿರಲಿಲ್ಲ.

ಎಲ್ಲ ಚಟಗಳಂತೆ ಬರೆವಣಿಗೆ ಚಟ ಕೂಡ. ನೀವು ಅದನ್ನು ಸ್ವಲ್ಪ ದಿನ ಬಿಟ್ಟಿರೋ ಬಿಟ್ಟೇಹೋಗುತ್ತದೆ. ಮತ್ತೆ ಅದನ್ನು ಶುರುಮಾಡಬೇಕಾಗುತ್ತದೆ.

ಆದರೆ ನನ್ನ ಕಟ್ಟಿದ ಮೂಗು ನನ್ನನ್ನು ಮತ್ತೆ ಬ್ಲಾಗಿನೊಳು ಮೂಗುತೂರಿಸುವಂತೆ ಮಾಡಿತು. ಬ್ಲಾಗಿನಲ್ಲಿ ನಾನು ಇಷ್ಟು ದಿನ ಕಾಣಿಸಿಕೊಳ್ಳದಿರುವುದರ ಬಗ್ಗೆ ಬರೆದೇ ಯಾಕೆ ಪುನಾರಂಭ ಮಾಡಬಾರದು ಎಂದು ಯೋಚಿಸಿದೆ. ಮಧ್ಯರಾತ್ರಿ ೧೨.೦೦ ಗಂಟೆಗೆ ಎದ್ದೆ. ಬರೆದೆ. ಬ್ಲಾಗಿಸಿದೆ.

ಬ್ಲಾಗಿಗೆ ಮರುಹುಟ್ಟು ನೀಡಲು ಕಟ್ಟಿದ ಮೂಗು ಕಾರಣವಾದರೂ ಬರೆಯದೇ ಗರಬಡಿದವನಂತೆ ಇದ್ದ ನನ್ನನ್ನು ಬರೆಯಲು ಹಚ್ಚಿದ್ದು ಪ್ರತಾಪಸಿಂಹ. ಏನು ವಿನಾಯಕ್? ಬರವಣಿಗೆ ನಿಲ್ಲಿಸಿಬಿಟ್ಟಿದ್ದೀಯಾ? ಏನಾದ್ರೂ ಬರೆದುಕೊಡಿ. ಅಪರೂಪಕ್ಕಾದರೂ ಪತ್ರಿಕೆಯಲ್ಲಿ ಕಾಣಿಸಿಕೊಳ್ತಾ ಇರಬೇಕು ಎಂದು ತಿದಿಯೊತ್ತಿದರು.

ಬರವಣಿಗೆ ಆರಂಭಿಸಲು ಒಂದು ನೆಪ ಬೇಕಿತ್ತು. ಅದು ಸಿಕ್ಕಂತಾಯಿತು. ಒಂದು ಲೇಖನ ಬರೆದೆ. ನನಗೇಕೋ ಪೂರ್ಣ ಸಮಾದಾನ ಆಗಿರಲಿಲ್ಲ. ಆದರೂ ಸೋಮವಾರ ಕಳುಹಿಸಿತ್ತೇನೆ ಅಂದಿದ್ದೆ. ಕಳುಹಿಸಿದೆ. ಆದರೆ ಸೋಮವಾರ ಸಂಜೆ ವೈನಾಗಿ (ಕುಡಿದು ಅಲ್ಲ) ಕುಳಿತು ಇನ್ನೊಂದು ಲೇಖನ ಬರೆದೆ. ನನಗೆ ಖುಶಿಕೊಟ್ಟಿತು. ಅದನ್ನೇ ಪ್ರತಾಪ್‌ಗೆ ಕಳುಹಿಸಿದೆ. ಯಾಕೋ ಬಹಳ ದಿನದ ನಂತರ ನಾನು ಉಲ್ಲಸಿತನಾಗಿದ್ದೆ. ಬಹುಶಃ ಕಟ್ಟಿದ ಮೂಗಿಗಿಂತ ಮನಸ್ಸಿಗೆ ಕಟ್ಟಿದ ಮೋಡ ಚದುರಿ ಹೋದದ್ದಕ್ಕೇ ಇರಬೇಕು ನಿದ್ರೆ ಬರುತ್ತಿಲ್ಲ!

ಚಿಕ್ಕವರಿರುವಾಗ ಪ್ರವಾಸಕ್ಕೆ ಹೋಗುವ ಹಿಂದಿನ ದಿನ ನಿದ್ರೆ ಬರುತ್ತಿರಲಿಲ್ಲವಲ್ಲ ಹಾಗೆ!

Friday, August 15, 2008

ಸ್ವಾತಂತ್ರ್ಯೋತ್ಸವದಲ್ಲಿಯೇ ಕಾಣದ ಸ್ವಾತಂತ್ರ್ಯ!


೧೫ ದಿನದ ಹಿಂದಿನಿಂದಲೇ ಪ್ರವಾಸಿಗರಿಂದ ಕೆಂಪುಕೋಟೆ, ರಾಷ್ಟ್ರಪತಿ ಭವನ ಮುಂತಾದ ಪ್ರಮುಖ ಪ್ರವಾಸಿ ತಾಣಕ್ಕೆ ಭೇಟಿ ನೀಡುವ ಸ್ವಾತಂತ್ರ್ಯ ಕಸಿದುಕೊಳ್ಳಲಾಗಿದೆ. ನಗರದ ರೈಲು ನಿಲ್ದಾಣಗಳಿಗೆ ೨೦ ದಿನ ಹಿಂದಿನಿಂದಲೇ ಪ್ರಯಾಣಿಕರನ್ನು ಕರೆದುಕೊಂಡು ಬರಲು ಹೋಗುವ ಸಾರ್ವಜನಿಕರಿಗೆ ಪ್ಲಾಟ್‌ಫಾರ್ಮ್ ಪ್ರವೇಶ ನಿಷೇಧಿಸಲಾಗಿದೆ.
೫-೬ ದಿನದಿಂದ ಪ್ರಮುಖ ಸ್ಥಳಗಳಲ್ಲಿನ ಕಟ್ಟಡಗಳು, ಅದರಲ್ಲಿನ ಕಚೇರಿಗಳು ರಾತ್ರಿ ೮.೦೦ ಗಂಟೆ ನಂತರ ಕೆಲಸ ಮಾಡುವ ಸ್ವಾತಂತ್ರ್ಯ ಕಳೆದುಕೊಂಡಿವೆ. ಸ್ವಾತಂತ್ರ್ಯೋತ್ಸವದ ಹಿಂದಿನ ದಿನವಂತೂ ನಮ್ಮ ಕಚೇರಿಯ ಕಟ್ಟಡವೂ ಸೇರಿದಂತೆ ಹಲವು ಕಟ್ಟಡಗಳನ್ನು ಸಂಜೆ ೪.೦೦ ಗಂಟೆ ಹೊತ್ತಿಗೇ ಮುಚ್ಚುವ ಆದೇಶ ಹೊರಬಿದ್ದಿದೆ!
ಹೋಗಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಾದರೂ ನೀವು ಸ್ವತಂತ್ರರಾಗಿ ಭಾಗವಹಿಸಬಹುದೇ? ಊಹುಂ. ಕೆಂಪುಕೋಟೆಯೂ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಗಳಿಗೆ ನೀವು ಭಾಗವಹಿಸಲು ಹರಸಾಹಸ ಮಾಡಬೇಕಾಗುತ್ತದೆ. ಮೊದಲೇ ಪಾಸು ಮಾಡಿಸಿಕೊಂಡರೆ ಮಾತ್ರ ನಿಮಗೆ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ!
ಸ್ವಾತಂತ್ರ್ಯೋತ್ಸವ ಸಮೀಪಿಸುತ್ತಿದ್ದಂತೆ ನಿಮ್ಮ ಒಂದೊಂದೇ ಸ್ವಾತಂತ್ರ್ಯ ಕಡಿತಗೊಳ್ಳುತ್ತಾ ಹೋಗುತ್ತದೆ! ಹುಡುಕಬೇಕು ನಮಗೆಷ್ಟು ಸ್ವಾತಂತ್ರ್ಯವಿದೆ ಎಂಬುದನ್ನು!!
ಸಾರ್ವಜನಿಕ ಮಾರುಕಟ್ಟೆಗಳೂ ೧೫ ದಿನ ಹಿಂದಿನಿಂದಲೇ
ಮೆಟಲ್ ಡಿಟೆಕ್ಟರಿನೊಳಗೆ ಹಾದು
ಒಳಗೆ ಬಾಯಾತ್ರಿಕನೆ... ಎಂದು ಜನರನ್ನು ಕೋರುತ್ತಿವೆ. ಮಾರುಕಟ್ಟೆಯ ಸುತ್ತಲಿನ ದಾರಿಗಳು ಬಂದ್ ಆಗಿವೆ. ಒಂದಿಡೀ ಮಾರುಕಟ್ಟೆಗೆ ೧ ಅಥವಾ ೨ ಕಡೆ ಮಾತ್ರ ಪ್ರವೇಶ ಸಾಧ್ಯ. ಅದೂ ಮೆಟಲ್‌ಡಿಟೆಕ್ಟರ್ ಎಂಬ ಹೊಸ್ತಿಲ ಮೂಲಕ. ಪ್ರಮುಖ ಸ್ಥಳಗಳಲ್ಲಿರುವ ಕಟ್ಟಡದ ಒಳಕ್ಕೆ ಕಾರು ತೆಗೆದುಕೊಂಡು ಹೋದರೆ ಮನೆಗೆ ಸ್ವಾಮೀಜಿಗಳು ಬಂದಾಗ ಹಾನದಲ್ಲಿ ಮುಖನೋಡಿ ಒಳಕರೆದುಕೊಳ್ಳುತ್ತಾರಲ್ಲ ಹಾಗೆ ಕಾರಿನ ಅಡಿಭಾಗವನ್ನು ಕನ್ನಡಿಯಲ್ಲಿ ಪರಿಶೀಲಿಸಿ ಒಳಬಿಡಲಾಗುತ್ತದೆ. ನೀವು ಒಳಹೋಗಬೇಕೆಂದರೆ ಕೆಲವು ಕಡೆ ಮೊಬೈಲು, ಇನ್ನು ಕೆಲವು ಕಡೆ ನಿಮ್ಮ ಮನೆಯ ಚಾವಿ, ಬೆಲ್ಟ್ ಕೂಡ ರೆಸೆಪ್ಶನಿಸ್ಟ್‌ಗೆ ಕೊಟ್ಟು ಹೋಗಬೇಕು. ನಿಮ್ಮ ಕೈಯಲ್ಲಿ ಚೀಲವಿದ್ದರಂತೂ ಮುಗಿದೇ ಹೋಯಿತು. ಅದರಲ್ಲೇನಿದೆ ಅಂತ ಪೂರ್ತಿ ನೋಡಿದ ನಂತರವೇ ಒಳಪ್ರವೇಶ. ಮಾರುಕಟ್ಟೆ, ಕಟ್ಟಡ ಹೀಗೆ ಎಲ್ಲೆಂದರಲ್ಲಿ ಬಂದು ಕುಳಿತಿರುವ ಸಿಸಿ ಟಿವಿ ಕ್ಯಾಮರಾಗಳು ಅದ್ಯಾವಾಗಲೋ ನಿಮ್ಮ ಪ್ರತಿ ಕ್ಷಣದ ಚಲನೆಯನ್ನೂ ದಾಖಲಿಸುತ್ತಿವೆ.
೬೧ನೇ ಸ್ವಾತಂತ್ರ್ಯೋತ್ಸವದ ದಿನ ಕುಳಿತು ಯೋಚಿಸಿದರೆ...
ಯಾರಿಗೆ ಬಂತು ಸ್ವಾತಂತ್ರ್ಯ?
ಎಲ್ಲಿಗೆ ಬಂತು ಸ್ವಾತಂತ್ರ್ಯ? ಎಂಬ ಪ್ರೊ. ಸಿದ್ದಲಿಂಗಯ್ಯ ಅವರು ಬರೆದ ಈ ಹಾಡು ನೆನಪಾಗುತ್ತದೆ. ಸಿದ್ದಲಿಂಗಯ್ಯ ಅವರು ಬೇರೆಯೇ ಕಾರಣಗಳಿಗಾಗಿ ಈ ಹಾಡು ಬರೆದಿದ್ದರೂ ಅದು ಈಗ ದೇಶದ ಅದರಲ್ಲೂ ವಿಶೇಷವಾಗಿ ರಾಜಧಾನಿಯಾದ ಹೊಸದಿಲ್ಲಿಯನ್ನು ಗಮನದಲ್ಲಿಸಿಕೊಂಡೇ ಬರೆದಂತಿದೆ. ಅಷ್ಟು ಚೆನ್ನಾಗಿ ದಿಲ್ಲಿಗೆ ಹೊಂದಿಕೊಳ್ಳುತ್ತದೆ ಈ ಹಾಡು.
ಈ ಪರಿಸ್ಥಿತಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಬೇಕಾ? ಸ್ವಾತಂತ್ರ್ಯೋತ್ಸವ ಬಂತಲ್ಲಾ ಎಂದು ಖುಷಿಪಡಬೇಕಾ? ದುಃಕ್ಕಿಸಬೇಕಾ? ಎಂಬ ಪ್ರಶ್ನೆ ಕಾಡುತ್ತದೆ.
ಸ್ವಾತಂತ್ರ್ಯೋತ್ಸವ ಅಂದರೆ ಎಲ್ಲೆಡೆ ಖುಶಿ ಇರಬೇಕು. ಪುಟಾಣಿ ಮಕ್ಕಳಲ್ಲಿ ಇರುತ್ತದಲ್ಲ ಅಂತಹ ಖುಷಿ. ಆದರೆ ನಮಗೋ ಹೊಸದಿಲ್ಲಿಯೂ ಸೇರಿದಂತೆ ಹಲವೆಡೆ ಬಾಂಬ್ ಭಯ! ಸ್ವಾತಂತ್ರ್ಯೋತ್ಸವ ಬಂತೆಂದರೆ ಹೊಸದಿಲ್ಲಿಯಂತಹ ಮಹಾನಗರಗಳಲ್ಲಿ ಭಯದ ಛಾಯೆ. ಒಂದು ವಾರದ ಹಿಂದಿನಿಂದಲೇ ಮಾರುಕಟ್ಟೆಗಳಿಗೆ ಬರುವ ಜನರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಹೊಸದಿಲ್ಲಿಯ ದೊಡ್ಡ ದೊಡ್ಡ ಮಾಲ್‌ಗಳು, ಪ್ರಸಿದ್ಧ ಮಾರುಕಟ್ಟೆಗಳಲ್ಲಿ ಸ್ವಾತಂತ್ರ್ಯೋತ್ಸವ ಸಮೀಪಿಸುತ್ತಿರುವ ೧ ವಾರದಲ್ಲಿ ಆಗಮಿಸುವವರ ಸಂಖ್ಯೆ ಶೇ.೫೦ರಷ್ಟು ಇಳಿದಿದೆಯಂತೆ. ಎಲ್ಲ ಆಫರ್‌ಗಳ ಹೊರತಾಗಿ!
ಕಾರಣ ಉಗ್ರರು. ಸ್ವಾತಂತ್ರ್ಯೋತ್ಸವ ಸಂಭ್ರಮ ಹಾಳು ಮಾಡಲು ಅವರೆಲ್ಲಿ ಬಾಂಬ್ ಸ್ಪೋಟಿಸುತ್ತಾರೊ ಎಂಬ ಭಯ. ಅದಕ್ಕಾಗಿ ಮುನ್ನೆಚ್ಚರಿಕೆ ಹೆಸರಲ್ಲಿ ಕಟ್ಟಡ ಮುಚ್ಚಿಸುವುದು, ರಾತ್ರಿ ೮.೦೦ ಗಂಟೆ ನಂತರ ಕೆಲಸ ಮಾಡದಂತೆ ಸೂಚಿಸುವುದು ನಡೆಯುತ್ತಿದೆ. ಜನ ಭದ್ರತೆ, ನೆಮ್ಮದಿಗಾಗಿ ಅದನ್ನೆಲ್ಲ ಸಹಿಸಿಕೊಳ್ಳುತ್ತಿದ್ದಾರೆ.
ಇದೆಲ್ಲ ಏನನ್ನು ಸೂಚಿಸುತ್ತದೆ? ನಾವು ಭಯದ ನೆರಳಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದೇವೆ. ಅನಾಹುತ ರಹಿತ ಸ್ವಾತಂತ್ರ್ಯೋತ್ಸವಕ್ಕಾಗಿ ನಮ್ಮ ಸ್ವಾತಂತ್ರ್ಯ ಹರಣ ಸಹಿಸಿಕೊಳ್ಳುತ್ತೇವೆ. ಮೊದಲ್ಲೆಲ್ಲ ಹೇಳುವಂತೆ ಸಂಭ್ರಮದ ಸ್ವಾತಂತ್ರ್ಯೋತ್ಸವ ಎಂಬುದು ಮಾಯವಾಗಿ ಕೇವಲ ಸ್ವಾತಂತ್ರ್ಯೋತ್ಸವಕ್ಕೆ ಸೀಮಿತವಾಗುತ್ತಿರುವಂತೆ ಭಾಸವಾಗುತ್ತಿದೆ. ೬೧ನೇ ಸ್ವಾತಂತ್ರ್ಯೋತ್ಸವ ಹೊಸ್ತಿಲಲ್ಲಿ ನಿಂತು ನಮಗೆಷ್ಟು ಸ್ವಾತಂತ್ರ್ಯವಿದೆ, ಎಷ್ಟು ಸ್ವಾತಂತ್ರ್ಯ ಮುಂದಿನ ದಿನಗಳಲ್ಲಿ ಉಳಿಯಲಿದೆ ಎಂದು ವಿಚಾರ ಮಾಡುವಂತಾಗಿದೆ.
ನೀಮಗೂ ಹಾಗನ್ನಿಸುತ್ತಿದೆಯೇ? ಹಾಗಾದ್ರೆ ಸೇಮ್ ಪಿಂಚ್!!

Tuesday, August 05, 2008

ಪೇಜ್ ತ್ರಿ ನೋಡಿ ಏನೆಲ್ಲಾ ನೆನಪಾತ್ರಿ!


ಪೇಜ್ ತ್ರಿ!
ನನ್ನ ತಟ್ಟಿದ, ನೆನಪಲ್ಲುಳಿದ, ಚಿಂತೆಗೀಡು ಮಾಡಿದ, ಮತ್ತೆ ಮತ್ತೆ ನೋಡಿದರೂ ಬೇಸರ ತರಿಸದ ಚಲನಚಿತ್ರಗಳಲ್ಲಿ ಪೇಜ್ ತ್ರಿ ಕೂಡ ಒಂದು. ಅದೊಂಥರದಲ್ಲಿ ನ(ನ್ನ)ಮ್ಮದೇ(!) ಕತೆ. ಅಂದರೆ ಪತ್ರಕರ್ತರ ಕತೆ.
ಫಿಲ್ಮಿ ಚಾನಲ್‌ನಲ್ಲಿ ನಿನ್ನೆ (೪-೦೮-೦೮) ಪೇಜ್ ತ್ರಿ ಫಿಲ್ಮ್ ಇತ್ತು. ಆ ಚಿತ್ರ ಇಷ್ಟವಾಗಲು ಈಗಲೇ ಕೊಟ್ಟ ಕಾರಣಗಳ ಜತೆಗೆ ಇನ್ನೊಂದು ಕಾರಣವೆಂದರೆ ಅದರಲ್ಲಿ ಕ್ರೈಂ ರಿಪೋರ್ಟರ್ ಹೆಸರು ವಿನಾಯಕ ಮತ್ತು ನಾನೂ ೪ ತಿಂಗಳ ಹಿಂದಿನವರೆಗೂ ಕ್ರೈಂ ರಿಪೋರ್ಟರ್ ಆಗಿದ್ದೆ!!
ಹೀಗಾಗಿ ಪೇಜ್ ತ್ರಿ ನೋಡುತ್ತಿದ್ದಂತೆ ನನ್ನ ಮನಸ್ಸು ಹುಂಬುರ್ಕಿ ಓಡತೊಡಗಿತು. ನೆನಪುಗಳತ್ತ, ಮಂಗಳೂರಿನತ್ತ, ಕ್ರೈಂ ರಿಪೋರ್ಟರ್ ಆಗಿದ್ದಾಗ ಆದ ಅನುಭವಗಳತ್ತ, ಮರೆಯಲಾಗದ ಆ ದಿನಗಳತ್ತ, ಹಸಿ ಹಸಿ ಕೊಲೆಗಳತ್ತ...
ನಾನು ನನ್ನ ಗೆಳೆಯರ ಬಳಿ ಈಗಾಗಲೇ ಹೇಳಿಕೊಂಡಿರುವಂತೆ ನಾನು ಬಯಸಿ ಕ್ರೈಂ ರಿಪೋರ್ಟರ್ ಆದದ್ದಲ್ಲ. ಆದರೆ ಕ್ರೈಂ ರಿಪೋರ್ಟರ್ ಆದ ಮೇಲೆ ಬಯಸಿದ್ದು!
ಪತ್ರಿಕೋದ್ಯಮದ ಆರಂಭಿಕ ಹಂತದಲ್ಲಿ ಕಚೇರಿಯೊಳಗೆ ಪ್ರೆಸ್‌ನೋಟ್‌ಗಳನ್ನು ಬರೆಯುತ್ತ ಕುಳಿತಿದ್ದ ನಾನು ಒಂದು ಮಧ್ಯಾಹ್ನ ಆಕಸ್ಮಿಕವಾಗಿ ಮತ್ತು ಅನಿವಾರ್ಯವಾಗಿ ತ್ರಿಬಲ್ ಮರ್ಡರ್ ವರದಿ ಮಾಡಬೇಕಾಗಿ ಬಂತು. ಆ ವರದಿ ನನ್ನನ್ನು ಕ್ರೈಂ ರಿಪೋರ್ಟರ್‌ನನ್ನಾಗಿ ಮಾಡಿತು. ಅಥವಾ ಆ ವರದಿಯೇ ನಾನು ಕ್ರೈಂ ರಿಪೋರ್ಟರ್ ಆಗಲು ಕಾರಣವಾಯಿತು. ಆಮೇಲೆ ತಿಳಿಯಿತು ಕ್ರೈಂ ರಿಪೋರ್ಟಿಂಗ್ ಉಳಿದ ವರದಿಗಾರಿಕೆಗಿಂತ ಆಸಕ್ತಿಕರ ಎಂಬುದು.

ಕ್ರೈಂ ರಿಪೋರ್ಟರ್ ಆಗಿ ಹಲವು ಎನ್‌ಕೌಂಟರ್‌ಗಳು, ನಕ್ಸಲೀಯರ ಬಗೆಗಿನ ಮಾಹಿತಿಗಳು, ಕೋಮುಗಲಭೆಗಳು, ಹಿಂದಿನ ಕಾರಣಗಳು, ಕರ್ಫ್ಯೂ, ಜನರು ಆಗ ಅನುವಿಸುವ ಕಷ್ಟ, ಊಟ, ನಿದ್ರೆ, ಸ್ನಾನವೂ ಇಲ್ಲದೆ ಕಳೆದ ದಿನಗಳು, ಅಪರಾತ್ರಿಯಲ್ಲಿ ಎಬ್ಬಿಸಿದ ಕೊಲೆಗಳು, ಮನಸ್ಸು ಕಲಕಿದ ಸಾವುಗಳು, ಸಹನೆಗೆ ಸವಾಲೆಸೆಯುವಂತೆ ಕಾದು ಕುಳಿತು ನಡೆಸಿದ ತನಿಖಾ ವರದಿಗಳು, ಯಾರಿಗೂ ತಿಳಿಯದ ಹಲವು ವಿಷಯಗಳನ್ನು ತಿಳಿಯಲು, ಕಲಿಯಲು ಅವಕಾಶವಾಯಿತು. ಹೊರನೋಟಕ್ಕೆ ದಕ್ಕದ ಪೊಲೀಸ್ ಇಲಾಖೆಯ ಅಂತರಾಳದ ಪರಿಚಯವಾಯಿತು. ಎಲ್ಲಕ್ಕಿಂತ ಹೆಚ್ಚಾಗಿ ಕೆಲವು ಒಳ್ಳೆ ಪೊಲೀಸ್ ಗೆಳೆಯರು ದೊರೆತರು. ಅವರಿಗೆ ಅದೇನು ಪ್ರೀತಿಯೋ ಕಾಣೆ ನನಗೆ ಎಕ್ಸ್‌ಕ್ಲ್ಯೂಸೀವ್ ಸುದ್ದಿ ಕೋಡೋರು.

ಇಷ್ಟೇ ಸಾಕು. ಹೀಗೇ ಮುಂದುವರಿದರೆ ನನ್ನನ್ನು ನಾನೇ ಹೊಗಳಿಕೊಂಡುಬಿಡುವ ಅಥವಾ ಹಾಗೆ ನಿಮಗನ್ನಿಸಿಬಿಡುವ ಸಾಧ್ಯತೆ ಇದೆ.
ಪೇಜ್ ತ್ರಿ ವಿಷಯಕ್ಕೆ ಬರೋಣ. ಮಂಗಳೂರಿನಲ್ಲಿ ಸಿನಿಮಾ ನೋಡಿದಾಗ ಪೇಜ್ ತ್ರಿ ಪತ್ರಿಕೋದ್ಯಮ ಅಂದರೇನು ಎಂಬುದು ಸರಿಯಾಗಿ ಅರ್ಥವಾಗಿರಲಿಲ್ಲ. ಆದರೆ ಈಗ ದಿಲ್ಲಿಗೆ ಬಂದ ಮೇಲೆ ಅರ್ಥವಾಗುತ್ತಿದೆ. ಇಲ್ಲಿನ ಪತ್ರಕರ್ತರು ಜಿಲ್ಲಾ ವರದಿಗಾರರಂತೆ ಸುದ್ದಿಗಾಗಿ ಒದ್ದಾಡುವುದಿಲ್ಲ. ಇಡೀ ದಿನಕ್ಕೆ ಒಂದೇ ಬೀಟ್. ಕಾಂಗ್ರೆಸ್, ಬಿಜೆಪಿ ಅಥವಾ ಯಾವುದೇ ಪಕ್ಷದ ಕಚೇರಿಗೆ ಹೋಗಿ ಒಂದಿಡೀ ದಿನ ಕುಳಿತು, ಸಿಕ್ಕ ನಾಯಕರೊಂದಿಗೆ ಹರಟಿ, ಪತ್ರಿಕಾಗೋಷ್ಠಿಗಳಿದ್ದರೆ ಅವುಗಳನ್ನು ಅಟೆಂಡ್ ಮಾಡಿ ಸುದ್ದಿ ಬರೆದರೆ ಮುಗಿಯಿತು. ಇದರ ಪರಿಣಾಮ ಕೆಲವರಂತೂ ರಾಜಕಾರಣಿಗಳ ಚೇಲಾಗಳಂತಾಗಿಬಿಟ್ಟಿರುತ್ತಾರೆ. ನ್ಯೂಸ್ ಚಾನಲ್‌ನವರಿಗಂತೂ ಒಬ್ಬ ಮುಖಂಡನ ಬೈಟ್ ಸಿಕ್ಕಿದರೆ ಸಾಕು. ಅವರಿಗೆ ರಾಷ್ಟ್ರಪ್ರಶಸ್ತಿ ಸಿಕ್ಕಷ್ಟು ಸಂತೋಷ. ಆ ಸುದ್ದಿಯ ಆಳ, ಅಗಲ ಅವರಿಗೆ ಬೇಡ. ಇನ್ನು ಪಾರ್ಟಿಗಳನ್ನು ವರದಿ ಮಾಡುವ ಪತ್ರಕರ್ತರ ಕೆಲಸ ಆ ದೇವರಿಗೇ ಪ್ರೀತಿ.

ಇದನ್ನೆಲ್ಲ ನೋಡುವಾಗ ಅನ್ನಿಸುತ್ತದೆ ಇವರಿಗಿಂತ ಜಿಲ್ಲಾ ಮಟ್ಟದ ಕ್ರೈಂ ವರದಿಗಾರ ಮೇಲು ಅಂತ!
ಪೇಜ್ ತ್ರಿ ಸಿನಿಮಾದಲ್ಲಿ ನಾಯಕಿ ಮಾಧವಿ ಮೊದಲು ಪೇಜ್ ತ್ರಿ ಪತ್ರಕರ್ತೆಯಾಗಿದ್ದು, ನಂತರ ಮನಸ್ಸು ಬದಲಿಸಿ ಕ್ರೈಂ ವರದಿಗಾರ್ತಿಯಾಗುತ್ತಾಳೆ. ಹಾಗೆ ಒಂದೊಳ್ಳೆ ತನಿಖಾ ವರದಿ ತರುತ್ತಾಳೆ. ನಗರದ ಅತಿಗಣ್ಯನೊಬ್ಬ ಕ್ಕಳೊಂದಿಗೆ ಸಲಿಂಗಕಾಮದಲ್ಲಿ ನಿರತನಾಗಿದ್ದ, ಅದಕ್ಕಾಗಿ ಹಲವು ಮಕ್ಕಳನ್ನು ಬಳಸಿಕೊಳ್ಳುತ್ತಿದ್ದ ಜಾಲದ ಸುದ್ದಿಯದು. ಆದರೆ ಆತ ಪತ್ರಿಕೆಗೆ ಜಾಹೀರಾತು ನೀಡುತ್ತಾನೆಂಬ ಕಾರಣಕ್ಕೆ ಪತ್ರಿಕೆಯ ಮಾಲಿಕ ಆ ವರದಿ ಪ್ರಕಟಿಸದಂತೆ ಹೇಳುತ್ತಾನೆ. ಸಾಲದ್ದಕ್ಕೆ ಅವಳನ್ನು ಕೆಲಸದಿಂದ ತೆಗೆಯುತ್ತಾನೆ.
ಇದನ್ನು ನೋಡುವಾಗ ನಾನು ಬರೆದೂ ಪ್ರಕಟವಾಗದ, ಪ್ರಕಟವಾಗದು ಎಂಬ ಗ್ಯಾರಂಟಿ ಇದ್ದುದರಿಂದ ಬರೆಯಲೇ ಆಗದ, ಬರೆದು ಪ್ರಕಟವಾಗಿ ನಂತರ ನಾನು ಅನುಭವಿಸಿದ ಕೆಲವು ವರದಿಗಳು, ಅದರ ಹಿಂದುಮುಂದಿನ ಘಟನೆಗಳು ಕಣ್ಣಮುಂದೆ ಹಾದುಹೋದವು.

ಮಾಧ್ಯಮಗಳೂ ಮೊದಲಿನಂತಿಲ್ಲ. ಪತ್ರಿಕಾ ವೃತ್ತಿ ಹೋಗಿ ಪತ್ರಿಕೋದ್ಯಮವಾಗಿದೆ. ರಿಲಯನ್ಸ್ ನಂತಹ ಹಲವಾರು ಉದ್ಯಮ ಹೊಂದಿರುವ ಸಂಸ್ಥೆ ಕೂಡ ಈಗ ಮಾಧ್ಯಮ ಕ್ಷೇತ್ರದ ಮೇಲೆ ಕಣ್ಣು ಹಾಕಿದೆ. ಉದ್ಯಮ ಅಂದ ಮೇಲೆ ಸೇವೆ, ಸಾರ್ವಜನಿಕ ಬದ್ದತೆ ಎಂಬೆಲ್ಲ ಪದಗಳು ಅರ್ಥ ಕಳೆದುಕೊಳ್ಳುತ್ತವೆ. 'ಅರ್ಥ'ಶಾಸ್ತ್ರ ಮಾತ್ರ ಮುಖ್ಯವಾಗುತ್ತದೆ. ಹಾಗಾದಾಗ ಹೀಗಾಗುತ್ತದೆ. ಹೀಗಾದಾಗ ಪತ್ರಕರ್ತ ತಾನೆಣಿಸಿದ್ದನ್ನೆಲ್ಲ ಸತ್ಯ ಎಂಬುದು ಗೊತ್ತಿದ್ದರೂ, ದಾಖಲೆಗಳಿದ್ದರೂ ಬರೆಯಲಾರ. ಆದರೆ ಅದೊಂದು ಸ್ಟೋರಿ ಪ್ರಕಟಿಸಲು ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕೆ ಕೆಲಸ ಬಿಡಲಾದೀತೆ? ಹಾಗೆ ಮಾಡಿದರೆ ಸಾಧಿಸುವುದೇನು?
ಇದೇ ಅಲ್ವಾ ಪೇಜ್ ತ್ರಿ ಸಿನಿಮಾ ಕೊನೆಯ ಸಂದೇಶ!?
ಪೇಜ್ ತ್ರಿ ಸಿನಿಮಾ ಸತ್ಯಕ್ಕೆ ಕನ್ನಡಿ ಹಿಡಿದಂತಿದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಇದನ್ನೊಮ್ಮೆ ನೋಡುವುದೊಳಿತು. ಇದರ ಜತೆಗೆ 'ಇಟ್ಸ್ ಬ್ರೇಕಿಂಗ್ ನ್ಯೂಸ್ 'ಎಂಬ ಸಿನಿಮಾ ಕೂಡ ಇಂದಿನ ನ್ಯೂಸ್ ಚಾನಲ್‌ಗಳ ಒಳ ಹೊರಗನ್ನು ತೆರೆದಿಡುತ್ತದೆ. ಇವುಗಳನ್ನು ನೋಡಿದರೆ ಪತ್ರಿಕೋದ್ಯಮ ವಿದ್ಯಾರ್ಥಿಗಳು ಕ್ಷೇತ್ರಕ್ಕಿಳಿಯುವ ಮೊದಲು ಆ ಬಗ್ಗೆ ಒಂದಷ್ಟು ಮಾನಸಿಕ ಸಿದ್ಧತೆಯನ್ನಾದರೂ ಗಳಿಸಬಹುದು. ಯಾಕೆಂದರೆ ಕ್ಲಾಸಿನಲ್ಲಿ ಕಲಿತದ್ದಕ್ಕೂ ಕ್ಷೇತ್ರದಲ್ಲಿ ಅನುಭವಿಸುವುದಕ್ಕೂ ಅಜಗಜಾಂತರವಿದೆ.

Friday, August 01, 2008

ರೈ ಹೇಳಿದ ಚೇಳಿನ ಕಥೆ


ಅವರಾಗ ರಾಜ್ಯದ ಸಾರಿಗೆ ಸಚಿವರು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ ಹೌದು. ದಿನಕ್ಕೆ ನಾಲ್ಕೈದು ಕಾರ್ಯಕ್ರಮದಲ್ಲಿ ಭಾಗವಹಿಸದಿದ್ರೆ ಅವರಿಗೆ ನಿದ್ರೆ ಬರಲ್ಲ. ಅವ್ರೇರೀ... ರಮಾನಾಥ ರೈ.

ರೈ ಸಚಿವರಾಗಿದ್ದಾಗ ಸದಾ ಕಾರ್ಯಕ್ರಮದಲ್ಲಿ ಭಾಗವಹಿಸುವುದೇ ಒಂದು ದೊಡ್ಡ ಕೆಲಸ. ಎಲ್ಲ ಕಾರ್ಯಕ್ರಮಕ್ಕೂ ವಿಳಂಬವಾಗಿ ಬರೋದು ಮಾಮೂಲು. ಒಮ್ಮೆ ಬಂಟ್ವಾಳದ ಶಾಲಾ ವಾಷಿಱಕೋತ್ಸವ ಕಾರ್ಯಕ್ರಮಕ್ಕೆ ಮಧ್ಯರಾತ್ರಿ ೧೨.೦೦ ಗಂಟೆಗೆ ಹೋಗಿದ್ದರು. ಅದಕ್ಕೆ ರೈ ಅವರನ್ನು ಯಾವ ಕಾರ್ಯಕ್ರಮಕ್ಕೆ ಕರೆದರೂ ಮದುವೆಗೆ ಮಾತ್ರ ಕರೆಯಬಾರದು ಎಂದು ಅಲ್ಲಿನ ಜನ ಹೇಳುತ್ತಿದ್ದರು. ಯಾಕೆಂದರೆ ಅವರು ಮದುವೆಗೆ ಕರೆದರೆ ಫಸ್ಟ್ ನೈಟಿನ ಹೊತ್ತಿಗೆ ಬರುತ್ತಾರೆಂಬ ಭಯ!

ರೈ ಅವರು ಲೆಕ್ಕತಪ್ಪುವಷ್ಟು, ಸುಸ್ತಾಗುವಷ್ಟು ಕಾರ್ಯಕ್ರಮದಲ್ಲಿ ಭಾಗವಹಿಸಿದರೂ ಎಂದೂ ಯದ್ವಾತದ್ವಾ ಮಾತನಾಡಿದವರಲ್ಲ. ಯಾರನ್ನೂ ಬೈದವರಲ್ಲ. ಕಥೆ ಹೇಳಿದವರೇ ಅಲ್ಲ. ಅಂತಹ ಸಚಿವರು ಮಂಗಳೂರಿನ ತಿರುವೈಲಿನಲ್ಲಿ ರಸ್ತೆ ಕಾಮಗಾರಿ ಉದ್ಘಾಟನೆ ಸಂದರ್ಭ ಭಾಷಣ ಮಾಡುವಾಗ ಚೇಳಿನ ಕಥೆ ಹೇಳಿದ್ದರು.

ಒಬ್ಬ ತೊರೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ. ಆಗ ಒಂದು ಚೇಳು ನೀರಲ್ಲಿ ಬಿದ್ದಿರುವುದು ಕಂಡಿತು. ಅದು ಮೇಲೆ ಬರಲು ಯತ್ನಿಸಿ, ಯತ್ನಿಸಿ ವಿಫಲವಾಗುತ್ತಿತ್ತು. ಅದನ್ನು ನೋಡಿದ ಆತ ಚೇಳನ್ನು ಹಿಡಿದು ಮೇಲೆ ಬಿಡಲು ನಿರ್ಧರಿಸಿ ಅದನ್ನು ಹಿಡಿದ. ಆದರೆ ಚೇಳು ಅವನ ಕೈ ಕಡಿದಿದ್ದರಿಂದ ಆತ ಅದನ್ನು ಬಿಟ್ಟ. ಚೇಳು ಪುನಃ ನೀರಿಗೆ ಬಿತ್ತು. ಮತ್ತೆ ಚೇಳನ್ನು ನೀರಿನಿಂದ ಮೇಲೆತ್ತಲು ಹೋದ. ಅದು ಕಡಿಯಿತು. ಈತ ಬಿಟ್ಟ ಚೇಳು ನೀರಿಗೆ ಬಿತ್ತು!!

ಹೀಗೆ ಮಾಡುತ್ತಿರುವಾಗ ಇನ್ನೊಬ್ಬ ದಾರಿಹೋಕ ಆ ವಿಚಿತ್ರ ವ್ಯಕ್ತಿಯಲ್ಲಿ ಹೇಳಿದ: ಅಲ್ಲಯ್ಯ ಅದು ಕಡಿದರೂ ನೀನೇಕೆ ಅದನ್ನು ಮತ್ತೆ ಮತ್ತೆ ನೀರಿನಿಂದ ಮೇಲೆತ್ತಲು ಯತ್ನಿಸುವೆ. ನಿನಗೆ ಬೇರೆ ಕೆಲಸ ವಿಲ್ಲವೇ? ಅದಕ್ಕೆ ಆ ವ್ಯಕ್ತಿ ಅದು ನೀರಲ್ಲಿ ಬಿದ್ದು ಸಾಯುತ್ತಿದೆ. ಅದನ್ನು ಬದುಕಿಸುವುದು ನನ್ನ ಧರ್ಮ. ಆದರೆ ಕಡಿಯುವುದು ಅದರ ಗುಣ ಅಂದನಂತೆ.

ಈ ಕತೆ ಕೇಳಿದ ಮೇಲೆ ರೈ ಯಾಕೆ ಈ ಕಥೆ ಹೇಳಿರಬಹುದು ಎಂದು ಯೋಚಿಸಿದೆ. ಅವರು ಕಥೆ ಹೇಳಿದ್ದರ ಅರ್ಥ ಇಷ್ಟೆ. ತನ್ನ ವಿರೋಧಿಗಳು ಚೇಳಿದ್ದಂತೆ. ನೀರಲ್ಲಿ ಬಿದ್ದ (ಕಷ್ಟದಲ್ಲಿರುವ) ಅವರನ್ನು ಎಷ್ಟು ಸರಿ ನಾನು ಎತ್ತಲು ಹೋದರೂ ನನಗೇ ಕಡಿಯುತ್ತಾರೆ. ಕಡಿಯುವುದು ಅವರ ಗುಣ. ಆದರೆ ಅವರನ್ನು ಬದುಕಿಸುವುದು ನನ್ನ ಧರ್ಮ ಎಂದು ನಾನು ತಿಳಿದುಕೊಂಡಿದ್ದೇನೆ ಎಂಬುದು ಒಳ ಅರ್ಥ. ಇದನ್ನು ರೈ ಸುಚ್ಯವಾಗಿ ಚೇಳಿನ ಕಥೆ ಮೂಲಕ ಹೇಳಿದ್ದರು.

ತಿರುವೈಲು ಗ್ರಾಮವನ್ನು ಮಹಾನಗರ ಪಾಲಿಕೆಗೆ ಸೇರಿಸುವ ಸಂದರ್ಭ ಹಲವರು ವಿರೋಧ ವ್ಯಕ್ತಪಡಿಸಿದ್ದಲ್ಲದೆ, ಒಳ ರಾಜಕೀಯ ನಡೆಸಿದ್ದರು. ಇದು ರೈ ಸಿಟ್ಟಿಗೆ ಕಾರಣವಾಗಿತ್ತು. ಚೇಳಿನ ಕಥೆ ಮೂಲಕ ರೈ ವಿರೋಧಿಗಳನ್ನು ಕುಟುಕಿದರು.

Monday, June 30, 2008

ವ್ಹಾ! ವಾಟ್ ಎನ್ ಐಡಿಯಾ ಸರ್ ಜಿ!!!




ಒಂದು ಸಾಧಾರಣ ಊರು. ಬಹುಶಃ ಕೇರಳ ರಾಜ್ಯದ್ದು. ಆ ಊರಿಗೊಂದೇ ಶಾಲೆ. ಅದೂ ಖಾಸಗಿ. ಆ ಊರಿನ ಒಬ್ಬ ಬಡ ಮುದುಕ ತನ್ನ ಮೊಮ್ಮಗಳು ಲಕ್ಷ್ಮಿರಾಧಾಳನ್ನು ಆ ಶಾಲೆಗೆ ಸೇರಿಸಲು ಹೋಗುತ್ತಾನೆ. ಆದರೆ ಅಲ್ಲಿ ಕಂಡದ್ದು ಎಡ್ಮಿಶನ್ ಫುಲ್ ಬೋರ್ಡು. ಮುದಕಪ್ಪನಿಗೆ ಅದನ್ನು ಓದಲು ಬಾರದೆ ಶಾಲೆಯ ಒಳಗೆ ಹೋಗಲು ನೋಡಿದಾಗ, ಅಲ್ಲಿನ ಒಬ್ಬ ಮಾಸ್ತರ ಅಜ್ಜನಿಗೆ ಸೀಟಿಲ್ಲ ಎಂದು ಹೇಳಿ ಕಳುಹಿಸುತ್ತಾನೆ.
ಇದನ್ನು ಆ ಶಾಲೆಯ ಮುಖ್ಯಸ್ಥ ಫಾದರ್ ನೋಡುತ್ತಾನೆ. ಆತನಿಗೆ ಆ ಮುದುಕಪ್ಪನ ಮೊಮ್ಮಗಳನ್ನು ಶಾಲೆಗೆ ಸೇರಿಸಿಕೊಳ್ಳಲಾಗದಿರುವುದಕ್ಕೆ ಬೇಸರವಾಗುತ್ತದೆ. ಅಂತಹವರಿಗೂ ಕಲಿಯಲು ಅವಕಾಶ ಸಿಗುವಂತಾಗಬೇಕು ಎಂದು ಆಶಿಸುತ್ತಾನೆ. ಅದಕ್ಕೆ ಆತ ಒಂದು ಐಡಿಯಾ ಮಾಡುತ್ತಾನೆ. ತನ್ನ ಶಾಲೆಯಲ್ಲಿ ಶಿಕ್ಷಕರು ಕಲಿಸುವಾಗ ಅವರ ಎದುರು ಮೊಬೈಲ್‌ಗಳನ್ನು ಇಡುತ್ತಾನೆ. ಈ ಮೊಬೈಲ್‌ನಲ್ಲಿ ಹಳ್ಳಿಯ ಕೆಲವೆಡೆ ಜಾಗ ಗುರುತಿಸಿ, ಅಲ್ಲಿಟ್ಟ ಮೊಬೈಲ್‌ಗೆ ಸಂಪರ್ಕ ಕಲ್ಪಿಸುತ್ತಾನೆ. ಮೊಬೈಲ್ ಎದುರು ಮಕ್ಕಳು ಕುಳಿತು ಶಾಲೆ ಕಲಿಯುತ್ತಾರೆ. ಹೀಗೆ ಮೊಬೈಲ್ ಎದುರಲ್ಲಿ ಕುಳಿತು ಕಲಿತ ಲಕ್ಷ್ಮಿ ರಾಧಾ ಉತ್ತಮ ವಿದ್ಯಾರ್ಥಿನಿ ಬಹುಮಾನ ಗೆಲ್ಲುತ್ತಾಳೆ.

ಇಷ್ಟು ಕಾನ್ಸೆಪ್ಟು. ಅದಕ್ಕೆ ಅಂದವಾದ ಹಿನ್ನೆಲೆ ಸಂಗೀತ. ಓಹೊಹೊ ಓಹೊಹೊ ಓಹೊಹೋಹೊ ಎಂಬ ಮಕ್ಕಳ ಧ್ವನಿ. ಒಂದಷ್ಟು ಇಷ್ಟವಾಗಬಲ್ಲ ದೃಶ್ಯ. ಅಭಿಷೇಕ್ ಬಚ್ಚನ್‌ಗೆ ಇಲ್ಲಿ ಫಾದರ್ ಪಾತ್ರ.
ಇದು ಇವತ್ತಷ್ಟೇ ಇಡುಗಡೆಯಾದ (ಚಿತ್ರವಲ್ಲ) ಜಾಹೀರಾತು. ಐಡಿಯಾ ಮೊಬೈಲ್‌ನದ್ದು. ಬಹುಶಃ ನನಗೆ ಗೊತ್ತಿರುವ ಮಟ್ಟಿಗೆ ಇದೇ ಮೊದಲ ಬಾರಿಗೆ ಚಲನಚಿತ್ರ ಬಿಡುಗಡೆ ಮಾಡುವಾಗ ಜಾಹೀರಾತು ಪ್ರಕಟಿಸುತ್ತಾರಲ್ಲ ಹಾಗೆ ಜಾಹೀರಾತು ಪ್ರಕಟಿಸಿದ್ದರು. ಇಂದು ರಾತ್ರಿ ೯.೩೦ಕ್ಕೆ ಬಿಡುಗಡೆ ಎಂದು ಇಲ್ಲಿನ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಸೋಮವಾರ (೩೦-೦೬-೦೮) ರಾತ್ರಿ ಟಿವಿ ಚಾನಲ್‌ಗಳಲ್ಲಿ (ನಾನು ನೋಡಿದ್ದು ಫಿಲ್ಮಿ ಚಾನಲ್) ೧೦-೧೫ ನಿಮಿಷ ನಿರಂತರವಾಗಿ ಈ ಜಾಹೀರಾತನ್ನು ಮತ್ತೆ ಮತ್ತೆ ತೋರಿಸಲಾಯಿತು.
ರಾತ್ರಿ ಈ ಜಾಹೀರಾತು ನೋಡಿದಾಗ ಅರೆ ಹೊಸತು ಅನ್ನಿಸಿತು. ಇಷ್ಟವಾಯಿತು. ಮತ್ತೆ ಮತ್ತೆ ಅದನ್ನೇ ನೋಡುತ್ತ ನೋಡುತ್ತ ಬೆಳಗ್ಗೆ ಪತ್ರಿಕೆಯಲ್ಲಿ ನೋಡಿದ ಜಾಹೀರಾತು ನೆನಪಾಯಿತು. ಥಟ್ಟನೆ ಪತ್ರಿಕೆ ತೆಗೆದುನೋಡಿದೆ. ಹೌದು ಅದೇ ಜಾಹೀರಾತು. ವ್ಹಾಟೆ ಎನ್ ಐಡಿಯಾ ಸರ್ ಜಿ!
ಏನು ಐಡಿಯಾ ನೋಡಿ!
ನಾನು ಕಲಿತ ಪತ್ರಿಕೋದ್ಯಮ ಪದವಿಯಲ್ಲಿ ಜಾಹೀರಾತು ಒಂದು ವಿಷಯ. ಈಗಲೂ ಪತ್ರಿಕೋದ್ಯಮದಲ್ಲಿದ್ದರೂ ನನಗೆ ಜಾಹೀರಾತಿನ ಬಗ್ಗೆ ಯಾಕೋ ವಿಶೇಷ ಆಸಕ್ತಿ. ನೀವೆಲ್ಲ ರಿಮೋಟ್ ಹಿಡಿದೇ ಟಿವಿ ಮುಂದೆ ಕುಳಿತುಕೊಳ್ಳುತ್ತೀರಿ. ಜಾಹೀರಾತು ಬಂದಾಕ್ಷಣ ಚಾನಲ್ ಬದಲಿಸಲು. ಆದರೆ ನಾನು? ಚಾನಲ್ ಬದಲಿಸುವುದು ಕಡಿಮೆ. ಜಾಹೀರಾತನ್ನೂ ಕಾರ್ಯಕ್ರಮದಷ್ಟೇ ಅಥವಾ ಅದಕ್ಕಿಂತ ಹೆಚ್ಚು ಆಸಕ್ತಿಯಿಂದ ನೋಡುತ್ತೇನೆ. ನೀವೂ ಸರಿಯಾಗಿ ಗಮನಿಸಿ ನೋಡಿ ದಾರಾವಾಹಿ ಅಥವಾ ಇತರೆ ಕಾರ್ಯಕ್ರಮ ನಿರ್ಮಿಸಿರುವುದಕ್ಕಿಂತ ಹೆಚ್ಚಿನ ಬುದ್ದಿವಂತಿಕೆ ಮತ್ತು ಚಾಕಚಕ್ಯತೆಯಿಂದ ಜಾಹೀರಾತು ನಿರ್ಮಿಸಿರುತ್ತಾರೆ.
ವಿಐಪಿ ಸೂಟ್‌ಕೇಸ್ ಜಾಹೀರಾತು ನಂಗಿನ್ನೂ ನೆನಪಿದೆ. ಹಡುಗಿಯೊಟ್ಟಿಗೆ ಒಬ್ಬ ಹುಡುಗ ಕಾರಿನಲ್ಲಿ ಹೋಗುತ್ತಿರುತ್ತಾನೆ. ಕಾರು ಕೆಟ್ಟು ನಿಲ್ಲುತ್ತದೆ. ಕೊಂಚ ಹೊತ್ತಿನಲ್ಲಿ ಬಂದ ಹುಡುಗನ ಬೈಕ್ ಹತ್ತಿ ಹುಡುಗಿ ಕಾರಿನ ಹುಡುಗನಿಗೆ ಟಾಟಾ ಮಾಡುತ್ತಾಳೆ. ಅದರ ನಂತರ ಈತ ಕಾರಿನಲ್ಲಿದ್ದ ಸೂಟ್‌ಕೇಸ್ ತೆಗೆದು, ಬಂದ ಲಾರಿಗೆ ಚತ್ರಿ ಮೂಲಕ ಸಂಪರ್ಕ ಕಲ್ಪಿಸಿ, ಸೂಟ್‌ಕೇಸ್ ಮೇಲೆ ತಾನು ಕುಳಿತುಕೊಳ್ಳುತ್ತಾನೆ. ಅದು ಚಕ್ರ ಇರುವ ಸೂಟ್‌ಕೇಸ್. ಸ್ವಲ್ಪ ದೂರ ಹೋಗುವಷ್ಟರಲ್ಲಿ ಲಾರಿ ಟಾಟಾ ಮಾಡಿ ಹೋಗಿದ್ದ ಹುಡುಗಿ ಕುಳಿತಿದ್ದ ಬೈಕನ್ನು ಓವರ್‌ಟೇಕ್ ಮಾಡುತ್ತದೆ. ಈತ ಅವಳಿಗೆ ಟಾಟಾ ಮಾಡುತ್ತಾನೆ. ಅದಕ್ಕೆ ಹಿಂದಿಯ ಹಳೆಯ ಹಾಡಾದ ಸುಹಾನಾ ಸಫರ್ ಹೇ ಯೆ ಮೋಸಂ ಹಸಿ... ಹಾಡು.
ನೋಡಿ ಎಂತಹ ಅದ್ಭುತ ಕಲ್ಪನೆ. ಹಾಗಾಗಿಯೇ ಇಂದಿಗೂ ಮರೆತಿಲ್ಲ.
ಬ್ರು ಕಾಫೀಯ, ಓಟು ಕೇಳಲು ಬಂದ ರಾಜಕಾರಣಿಗೇ ಪ್ರಶ್ನೆ ಕೇಳುವ ಚಹಾದ ಜಾಹೀರಾತುಗಳು ಇಂದಿಗೂ ನೆನಪಿನಲ್ಲಿವೆ. ಆತ ಸಹಾರಾ ವಿಮೆ ಮಾಡಿಸುತ್ತಾನೆ. ನಂತರ ಸ್ಕೂಟರ್ ಹತ್ತಿ ಬೆಟ್ಟದ ಬಳಿ ಹೋಗಿ ಕುಳಿತು ಸಾಂಬಾ, ವಾಂಬಾ ಎಲ್ಲಿದ್ದೀಯಾ ಇಳಿದು ಬಾ. ನಿನ್ನಮ್ಮನ ಎದೆ ಹಾಲು ಕುಡಿದಿದ್ದರೆ ಇಳಿದು ಬಾ ಎಂದು ಸವಾಲು ಹಾಕುವ ಸಹಾರಾ ಸಂಸ್ಥೆ ಜಾಹೀರಾತೂ ತಕ್ಕಮಟ್ಟಿಗಿದೆ.

ಜಾಹೀರಾತು ವಲಯದಲ್ಲಿ ಕೆಲವರನ್ನು ಆಕರ್ಷಿಸಿದ ಮತ್ತು ಖುಶಿ ಕೊಟ್ಟಿದ್ದು ಪೆಪ್ಸಿ, ಕೋಕ್ ಸಂಸ್ಥೆಗಳ ಜಾಹೀರಾತು ಸಮರ. ಅದು ಇಂದಿಗೂ ಮುಂದುವರೆದಿದೆ. ಥಮ್ಸ್ ಅಪ್‌ಗಾಗಿ ಅಕ್ಷಯ್ ಕುಮಾರ್ ಮಂಗನಂತೆ ಎಲ್ಲೆಲ್ಲೊಂದೋ ಹಾರಿ, ಮೆಟ್ಟಿಲ ಮೇಲೆ ಜಾರಿ, ರಸ್ತೆಗಳ ನಡುವೆ ತೂರಿ ಲಾರಿಯಲ್ಲಿದ್ದ ಬಾಟಲಿ ಎಗರಿಸುತ್ತಾನೆ. (ಕುರ್‌ಕುರೆ ಜಾಹೀರಾತಿನಲ್ಲಿ ಜೂಹಿ ಹೀಗೆ ಪ್ಯಾಂಕು ಪ್ಯಾಂಕು ಎಂಬ ಮೀನು ಮಾರಾಟದ ಹಾರ್ನು ಕೇಳಿ ಯಾಹೀ ಅಂತ ಹಾರಿದ್ದೂ ನಿಮಗೆ ನೆನಪಿರಬಹುದು) ಇದೇ ಜಾಹೀರಾತು ಇರಿಸಿಕೊಂಡು ಪೆಪ್ಸಿಯವರು ಈಗ ಹೊಸ ಜಾಹೀರಾತು ಮಾಡಿದ್ದಾರೆ.
ಅಂಕಲ್ ಈ ವಯಸ್ಸಿನಲ್ಲಿ ಕೋಲ್ಡ್‌ಡ್ರಿಂಕ್ಸ್‌ಗಾಗಿ ಕಟ್ಟಡದಿಂದ ಕಟ್ಟಡಕ್ಕೆ ಹಾರಿ ಕೈಕಾಲು ಮುರಿದುಕೊಳ್ಳಬೇಡ. ಯಾಕೆಂದರೆ ವಯಸ್ಸಾದ ಮೇಲೆ ಮುರಿದ ಎಲುಬು ಕೂಡಿಕೊಳ್ಳುವುದು ಲೇಟು. ಅದನ್ನು ಪೆಪ್ಸಿ ಕುಡಿ. ಎಲ್ಲ ಕಡೆ ಸಿಗುತ್ತೆ ಎಂದು ಜಾಹೀರಾತು ಮಾಡಿ ಥಮ್ಸ್‌ಅಪ್‌ಗೆ ಟಾಂಗ್ ನೀಡಿದ್ದಾರೆ.
ಕೆಲವು ವರ್ಷದ ಹಿಂದಂತೂ ಇದು ಪರಾಕಾಷ್ಠೆಯ ತುದಿ ತಲುಪಿತ್ತು. ನೋಡುಗರಾದ ನಮಗೋ ಮಜವೊ ಮಜಾ.
ಮಾನ ಹಕ್ಕು, ನಾಯಿ ಹಕ್ಕುಗಳು ಏನೇ ಹೇಳಲಿ ನಂಗಂತೂ ಹಚ್ ಜಾಹೀರಾತು ಇಷ್ಟ. ಹಚ್ ಸಂಸ್ಥೆಯ ಗ್ರಾಹಕ ಸೇವಾ ಕೇಂದ್ರ ಯಾವಾಗಲೂ ನಿಮಗೆ ಸಹಾಯ ಮಾಡಲು ಸಿದ್ಧವಾಗಿರುತ್ತದೆ ಎಂದು ನಾಯಿಯ ಸಹಾಯದ ಮೂಲಕ ಎಷ್ಟು ಅಂದವಾಗಿ ತೋರಿಸಿದ್ದಾರೆ. ಅದನ್ನು ನೋಡಿ ಖುಶಿ ಪಡುವುದು ಬಿಟ್ಟು ಅದ್ಯಾರೋ ಕೇಸು ಹಾಕಿದ್ದಾರಂತೆ. ಅದರ ಪರಿಣಾಮ ಹಚ್ ಕಂಪನಿಯವರು ಕೆಲವು ದಿನ ಕಂಪ್ಯೂಟರ್ ನಾಯಿಯನ್ನೂ ತೋರಿಸಿ ಚಟ ತೀರಿಸಿಕೊಂಡರು. ಈಗ ಮತ್ತೆ ಜೀವಂತ ನಾಯಿಯನ್ನೇ ತೋರಿಸುತ್ತಿದ್ದಾರೆ.
ಸರಿಯಾಗಿ ಗಮನಿಸಿ ನೋಡಿ. ಜಾಹೀರಾತು ಮಾಡಲು ಭಾರೀ ಬುದ್ದಿವಂತಿಕೆ ಬೇಕು. ನಿಮ್ಮ ಕಲ್ಪನೆಗಳು ಏನೇ ಇದ್ದರೂ ೧-೨ ನಿಮಿಷದಲ್ಲಿ ಮುಗಿಸಬೇಕು. ಅದು ಗ್ರಾಹಕರ ಮನಸ್ಸಿನ ಮೇಲೆ ಪರಿಣಾಮ ಬೀರಿ, ಅವರು ಆ ವಸ್ತುವನ್ನು ಕೊಳ್ಳುವಂತಾಗಬೇಕು. ನನಗಂತೂ ಬಹುತೇಕ ಜಾಹೀರಾತುಗಳು ಅದ್ಭುತ ಅಂತಲೇ ಅನ್ನಿಸುತ್ತವೆ. ಮೊದಲಾದರೆ ಒಂದು ಜಾಹೀರಾತು ಮಾಡಿದರೆ ಕನಿಷ್ಟ ೬ ತಿಂಗಳು, ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಸಮಯ ನಿಭಾಯಿಸಹುದಿತ್ತು. ಆದರೆ ಈಗ ಹಾಗಿಲ್ಲ. ಒಂದೆರಡು ತಿಂಗಳು. ಅಷ್ಟಕ್ಕೆ ಅದು ಹಳೆತು. ಮತ್ತೆ ಹೊಸ ಸ್ಲೋಗನ್, ಹೊಸ ಕಲ್ಪನೆ, ಹೊಸ ಜಾಹೀರಾತು. ಒಂದೊಂದು ಸಂಸ್ಥೆಯೂ ಜಾಹೀರಾತಿನ ಮೇಲೆ ಕೋಟಿಗಟ್ಟಲೆ ದುಡ್ಡು ಚೆಲ್ಲುತ್ತಿವೆ.
ಇದರ ಪರಿಣಾಮ ಬೇಕಾದಷ್ಟು ಜಾಹೀರಾತು ಏಜೆನ್ಸಿಗಳು ಹುಟ್ಟಿಕೊಂಡಿವೆ. ಒಂದು ಸ್ಲೋಗನ್‌ಗೆ, ಒಂದು ಕಲ್ಪನೆಗೆ ಇಲ್ಲಿ ಕೋಟಿಗೂ ಮೀರಿದ ಬೆಲೆಯಿದೆ. ಇದಕ್ಕೇ ಇರಬೇಕು ನನಗೂ ಜಾಹೀರಾತಿನತ್ತ ಸೆಳೆತ!
ಹಾಗಂತ ಕೆಟ್ಟ ಜಾಹೀರಾತುಗಳೇ ಇಲ್ಲವೆಂದಲ್ಲ. ಲೇಯ್ಸ್ ಚಿಪ್ಸ್‌ನ ಬಾಯಿ ಕಳೆದು ಆ... ಎಂದರಚುವ ಹೊಸ ಜಾಹೀರಾತು ಸ್ವಲ್ಪವೂ ಚೆನ್ನಾಗಿಲ್ಲ. ಅವರ ಮುಸುಡಿಗಳನ್ನು ನೋಡಿದರೆ ಲೇಯ್ಸ್ ಬಿಡಿ ಜನ ಬೇರೆ ಯಾವ ಚಿಪ್ಸೂ ತಿನ್ನದಂತಾಗಿದೆ. ಒಳ್ಳೆಯ ಜಾಹೀರಾತುಗಳು ಇಂತಹ ಕೆಟ್ಟ ಜಾಹೀರಾತುಗಳನ್ನು ಮರೆಸಿ ಮನಸ್ಸಿಗೆ ಮುದ ನೀಡುತ್ತವೆ. ಅದೇ ಸಂತೋಷ.
(ನನಗೆ ಈ ಮೇಲ್ ಮೂಲಕ ಬಂದಿದ್ದ, ಸಂಗ್ರಹಿಸಿಟ್ಟಿದ್ದ ಕೆಲವು ಉತ್ತಮ ಜಾಹೀರಾತು ಫೋಟೋಗಳಿದ್ದವು. ಅವುಗಳನ್ನು ಈ ಲೇಖನದ ಜತೆ ಪ್ರಕಟಿಸಿದ್ದೇನೆ. ನೀವಾ ಹೇರ್ ಕ್ರೀಂ ಜಾಹೀರಾತು ನೋಡಿ,ನೀವು ಸತ್ತು ಮಣ್ಣಲ್ಲಿ ಮಣ್ಣಾದರೂ ಕೂದಲು ಹಾಗೇ ಇರುತ್ತದೆ! ಪೆಡಿಗ್ರೀ ತಿಂದರೆ ನಾಯಿ ಹೆಗ್ಗಣದಂತೆ ಟಾರ್ ರಸ್ತೆಯನ್ನೂ ಅಗೆದು ತೆಗೆಯಲ್ಲದು... ಹೀಗೆ. ನಿಮಗೆ ಇಷ್ಟವಾಗಬಹುದು ಅಂದುಕೊಂಡಿದ್ದೇನೆ)

Thursday, June 26, 2008

ಶಾಲಭಂಜಿಕೆ ಓದಲೇಕೆ ಅಂಜಿಕೆ?



ಅದೇನೋ ಅಂಜಿಕೆ. ಶಾಲಭಂಜಿಕೆ ಎಂಬ ಹೆಸರು, ಅದರಲ್ಲಿನ ಅಪರೂಪದ ಸೆಳೆತಕ್ಕೆ ಸಿಕ್ಕೇ ಅದನ್ನು ತಂದಿದ್ದೆ. ಅದೇ ಅಪರೂಪತ್ವ ಅದನ್ನು ಓದಲು ಅಡ್ಡಿಯಾಯಿತು!

ಇದರ ಪರಿಣಾಮ ಶಾಲಭಂಜಿಕೆ ಪುಸ್ತಕ ಕಪಾಟಿನಲ್ಲಿ ಇತರ ಪುಸ್ತಕಗಳ ನಡುವೆ ಕಣ್ಣಾಮುಚ್ಚಾಲೆ ಆಡುವವರಂತೆ ಅಡಗಿ ಕುಳಿತಿತ್ತು. ಸಾಕಷ್ಟು ಹೊಸ ಪುಸ್ತಕಗಳನ್ನು ತರುತ್ತಿದ್ದೆನಾದ್ದರಿಂದ ಹಳೆಯ ಪುಸ್ತಕಗಳು ನೆನಪಿನಾಳದಲ್ಲಿ ಹೂತುಹೋಗುತ್ತಿದ್ದವು. ಅದನ್ನು ಎಂದೂ ಕೆದಕುತ್ತಿರಲಿಲ್ಲ.

ಆದರೀಗ ದಿಲ್ಲಿಗೆ ಬಂದ ಮೇಲೆ ಹೊಸ ಪುಸ್ತಕಗಳು ಸಿಗದು. ಹೀಗಾಗಿ ಓದದೇ ಕಪಾಟಿನಲ್ಲಿಟ್ಟ ಪುಸ್ತಕಗಳಿಗೆ ಬಿಡುಗಡೆಯ ಭ್ಯಾಗ್ಯ. ಅಂತಹ ಓದದೇ ಉಳಿದ ಪುಸ್ತಕಗಳ ನಡುವಿಂದ ಅಂಜಿಕೆಯಿಂದಲೇ ಕೈಗೆತ್ತಿಕೊಂಡ ಪುಸ್ತಕ ಶಾಲಭಂಜಿಕೆ.

ಲೇಖಕರು ನನ್ನ ಮಟ್ಟಿಗೆ ಹೊಸಬರು. ಡಾ. ಕೆ.ಎನ್. ಗಣೇಶಯ್ಯ. ಅವರ ಬಗ್ಗೆ ಕೇಳಿದ್ದಿಲ್ಲ. ಓದಿದ್ದಂತೂ ಮೊದಲೇ ಇಲ್ಲ. ಆದರೆ ಶಾಲಭಂಜಿಕೆ ಎಂಬ ಹೆಸರೇ ವಿಚಿತ್ರವಾಗಿದೆ. ಪುಸ್ತಕವೂ ವಿಚಿತ್ರವಾಗಿಯೇ ಇರಬಹುದು ಎಂದುಕೊಂಡೇ ಅತ್ರಿ ಬುಕ್‌ಸ್ಟಾಲ್‌ನಿಂದ ಕೊಂಡುತಂದಿದ್ದೆ. ಹಾಗೇ ಇಟ್ಟಿದ್ದೆ. ನಿನ್ನೆ ಕೂಡ ಪುಸ್ತಕ ತೆರೆದಾಗ ಮನದಲ್ಲಿ ಶಾಲಂಜಿಕೆ ಬಗ್ಗೆ ಅಂಜಿಕೆ ಇದ್ದೇ ಇತ್ತು. ಆದರೆ ಓದುತ್ತ ಹೋದಂತೆ ಅಂಜಿಕೆ ದೂರವಾಗಿ ಆಸಕ್ತಿ ಕೆರಳಿತು. ಪುಟ ಪುಟದಲು ಪುಟಿದೆದ್ದಿತು...

ಈ ಪುಸ್ತಕದಲ್ಲಿರುವ ೮ ಕತೆಗಳು ಒಂದಷ್ಟು ಇತಿಹಾಸ ಜ್ಞಾನ, ಹಲವು ದೇಶದ ಕೇಳರಿಯದ ವಿಷಯಗಳ ಜತೆಗೆ ರೋಚಕ ತಿರುವುಗಳನ್ನು ಒದಗಿಸುತ್ತವೆ. ಇಲ್ಲಿನ ಕಥೆಗಳ ವಿಶೇಷವೆಂದರೆ ಪ್ರತಿ ಕಥೆಯೂ ಸತ್ಯಘಟನೆಗಳೊಂದಿಗೆ, ಇತಿಹಾಸದೊಂದಿಗೆ ಥಳಕು ಹಾಕಿಕೊಂಡಿವೆ. ಕೆಲವು ಕತೆಗಳಂತೂ ಗಣೇಶಯ್ಯ ಬರೆದಿದ್ದೇ ಸತ್ಯವಿರಬಹುದೇ ಅನ್ನಿಸಿಬಿಡುತ್ತದೆ. ಈ ಕಥೆಗಳು ಓದಿನ ಸುಖದ ಜತೆಗೆ ಒಂದಷ್ಟು ಜ್ಞಾನವನ್ನೂ ಅರಿಯದಂತೆ ನಿಮ್ಮ ತಲೆಯೊಳಗೆ ತುರುಕಿಬಿಡುತ್ತವೆ.

ನಂಜಾದ ಮಧು ಕಥೆಯಲ್ಲಿ ಜೇನುಹುಳಗಳು ಜೇನು ಸಂಗ್ರಹಿಸಿ ಬಂದ ನಂತರ ಗೂಡಿನಲ್ಲಿ ನೃತ್ಯ ಮಾಡುತ್ತವೆ. ಈ ನೃತ್ಯದ ಮೂಲಕ ಅವು ಇತರ ಹುಳುಗಳಿಗೆ ತಾನು ಜೇನಿನ ಮರ ಇರುವ ದಿಕ್ಕು ಮತ್ತು ದೂರವನ್ನು ತಿಳಿಸುತ್ತವೆ. ಜೇನು ಮೆದ್ದು ಗೊತ್ತಿದ್ದರೂ ಈ ವಿಷಯ ನನಗೆ ತಿಳಿದಿರಲಿಲ್ಲ. ಬಹುಶಃ ಜೇನು ಸಾಕುವ, ತಿನ್ನುವ ಎಷ್ಟೋ ಜನರಿಗೆ ಗೊತ್ತಿಲ್ಲ. ಆದರೆ ಈ ಕಥೆ ಮೂಲಕ ಅದು ಗೊತ್ತಾಯಿತು. ಅದೇರೀತಿ ಹುಲಿಯ ಮಡಿಲ ಹುಳು ಮೂಲಕ ಶ್ರೀಲಂಕಾದಿಂದ ಕಾಫಿ ಹಣ್ಣಿನ ಹುಳುಗಳು ಭಾರತಕ್ಕೆ ಬಂದಿದ್ದು, ಪರಾಗ ತ್ಯಾಗದ ಮೂಲಕ ಆಯಿಲ್ ಪಾಮ್ ಗಿಡಗಳ ವಿಷಯ ತಿಳಿಯುವಂತಾಯಿತು.

ಇದರ ಜತೆಗೆ ಅನಿರೀಕ್ಷಿತ, ಅನೂಹ್ಯ ತಿರುವುಗಳು ಕತೆಯನ್ನು ಓದೆಬಲ್ ಆಗಿಸಿವೆ. ತಡ ಇನ್ನೇಕೆ? ಶಾಲಭಂಜಿಕೆ ಓದಲು ಬೇಡ ಅಂಜಿಕೆ. ಹಾಗಂತ ನಿಮಗೆಲ್ಲ ತಿಳಿಸಲು ಇದನ್ನು ಇಲ್ಲಿ ಬ್ಲಾಗಿಸಿದ್ದೇನೆ.

ಗಣೇಶಯ್ಯ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಂತೆ. ಅವರು ಕತೆ ಬರೆದಷ್ಟೇ ಆಸಕ್ತಿಕರವಾಗಿ ಪಾಠ ಮಾಡಿದಲ್ಲಿ ಅವರ ಬಳಿ ಕಲಿತವರು ಪುಣ್ಯವಂತರು. ಯಾಕೆಂದರೆ ನಮ್ಮ ವಿಶ್ವವಿದ್ಯಾಲಯದ ಹೆಚ್ಚಿನ ಪ್ರಾಧ್ಯಾಪಕರು ಆಸಕ್ತಿ ಮೂಡಿಸುವಂತೆ ಕಲಿಸುವುದನ್ನೇ ಮರೆತಿದ್ದಾರೆ. ಬರೆಯುವುದಂತೂ ಗೊತ್ತೇ ಇಲ್ಲ ಬಿಡಿ. ಇದಕ್ಕೆ ಗಣೇಶಯ್ಯ ಅಪವಾದದಂತಿದ್ದಾರೆ.

Saturday, June 21, 2008

ಅಂದು ನೋಡಿದ ದಿಲ್ಲಿ ಹಾಗೇ ಇದೆ ಇಲ್ಲಿ


ಶಾಂತವಾದ, ಹಳೆಯ ಬೆಂಗಳೂರನ್ನು ನೆನಪಿಸುವ ಸೌತ್ ಎವಿನ್ಯು. ಚಿಕ್ಕ ಓಣಿಯಂತಿರುವ ಮೈಸೂರು ಕೆಫೆ. ನಮ್ಮೂರ ಹೆದ್ದಾರಿಯನ್ನೂ ಮೀರಿಸುವಷ್ಟು ಅಗಲವಿರುವ, ವಾಹನಗಳೆಲ್ಲಿ ಜಾರಿಬಿಡುತ್ತವೋ ಅನ್ನುವಂತಹ ರಸ್ತೆಗಳು. ಸೌತ್ ಎವಿನ್ಯುವಿನ ಅಗಲವಾದ ರಸ್ತೆಯಲ್ಲಿ ನಡೆಯುತ್ತಿದ್ದರೆ ಕಣ್ಣೆದುರಿಗೆ ರಾಷ್ಟ್ರಪತಿ ಭವನದ ಭವ್ಯ ದೃಶ್ಯ.

ಅಂದು ನೋಡಿದ, ಮನಸಲ್ಲಿ ಅಚ್ಚೊತ್ತಿದ್ದ ದಿಲ್ಲಿ ಚಿತ್ರಕ್ಕೆ ಈಗಿನ ಚಿತ್ರ ಕರೆಕ್ಟಾಗಿ ಮ್ಯಾಚ್ ಆಗುತ್ತಿದೆ!
೮ ವರ್ಷದ ಹಿಂದೆ ವಿದ್ಯಾರ್ಥಿಯಾಗಿ ದಿಲ್ಲಿಗೆ ಬಂದಿಳಿದಿದ್ದೆ. ಆಗ ರಾಜಧಾನಿ ಮಂಜಿನ ಮುಸುಕು ಹೊದ್ದು ಮಲಗಿದಂತಿತ್ತು. ಮಂಜಿನ ಮಬ್ಬು ಮಬ್ಬು ಮುಸುಕಿನಲ್ಲಿ ರಾಷ್ಟ್ರಪತಿ ಭವನ ನೋಡಿದ್ದೆ. ಮೊದಲ ಬಾರಿ. ಮಂಜು ಮುಸಿಕಿದ ಹಾದಿಯಲ್ಲೇ ನಡೆದುಕೊಂಡು ನಾವು ನಾಲ್ಕೈದು ಮಂದಿ ಇಂಡಿಯಾ ಗೇಟ್‌ಗೆ ನಡೆದುಕೊಂಡು ಹೋಗಿದ್ದೆವು. ಆಹಾ ಎಂಥಾ ಬೆರಗು!

ಆಗಲೂ ಈಗಲೂ ದಿಲ್ಲಿಗೆ ಎಂದು ಹೊರಟು ಬಂದಿಳಿದಿದ್ದು ನಿಜಾಮುದ್ದೀನ್ ರೈಲ್ವೆ ನಿಲ್ದಾಣಕ್ಕೆ. ಅಲ್ಲಿಂದ ಪಯಣ ಸೌತ್ ಎವಿನ್ಯುಗೆ. ಆಗ ಬಂದಾಗ ಸಂಸದ ಸನದಿ ಅವರ ಮನೆಯಲ್ಲಿ ಉಳಿದಿದ್ದೆವು. ಈ ಬಾರಿ ಧಾರವಾಡ ಉತ್ತರ ಕ್ಷೇತ್ರದ ಸಂಸದ ಪ್ರಹ್ಲಾದ ಜೋಷಿ ಅವರ ಮನೆಯಲ್ಲಿ. ಒಬ್ಬನೇ ರೈಲಿನಲ್ಲಿ ಬಂದು ನಿಜಾಮುದ್ದೀನ್‌ನಲ್ಲಿ ಇಳಿದು, ರಿಕ್ಷಾ ಹತ್ತಿ ಸೌತ್‌ಎವಿನ್ಯುಗೆ ಬಂದಿಳಿದೆ. ಅದೊಂದು ಅಪರಿಚಿತ, ಹೊಸ ಜಾಗ ಅನ್ನಿಸಲೇ ಇಲ್ಲ. ನಾನು, ನನ್ನ ಮತ್ತು ಗೆಳೆಯರ ಅಧ್ಯಯನ ಪ್ರವಾಸದ ಗೆಜ್ಜೆ ಗುರುತುಗಳು ಸ್ಪಷ್ಟವಾಗಿ ಅಲ್ಲಿ ಕಾಣುತ್ತಿದ್ದವು. ಸಮೀಪದಲ್ಲಿರುವ ಸರ್ದಾರ್ಜಿಯ ಪರಾಟ ಹೋಟೆಲ್, ಹಾಲಿನ ಡೇರಿ, ತರಕಾರಿ ಅಂಗಡಿ, ಗೆಳೆಯರು ಕುಳಿತು ಸುದ್ದಿ ಹೇಳಿದ, ಪ್ರೀತಿಯ ವಿಷಯಕ್ಕೆ ಜಗಳ ಮಾಡಿದ ಕಟ್ಟೆ ಹೀಗೆ ಎಲ್ಲವೂ ಪರಿಚಿತ ಅನ್ನಿಸಿತು. ಸೌತ್ ಎವಿನ್ಯು ವಿಶೇಷವೇ ಅದು. ದಕ್ಷಿಣ ಭಾರತದವರ ಮಟ್ಟಿಗೆ ಸೌತ್ ಎವಿನ್ಯು ನಮ್ಮದೇ ಊರಿನಂತೆ ಅನ್ನಿಸುತ್ತದೆ. ಸೌತ್ ಎವಿನ್ಯು ಒಂದರ್ಥದಲ್ಲಿ ದಿಲ್ಲಿಯ ಕರ್ನಾಟಕ. ಕರ್ನಾಟಕದವರು ಬಂದರೆ ಉಳಿಯುವುದು ಸೌತ್ ಎವಿನ್ಯುದಲ್ಲೇ ಹೆಚ್ಚು. ಅಲ್ಲಿದ್ದರೆ ನಿಮಗೆ ಕರ್ನಾಟಕದಿಂದ ಬಹಳ ದೂರದಲ್ಲಿದ್ದೇವೆ ಎಂಬ ಅನುಭವವೇ ಆಗದು.

೮ ವರ್ಷ ಹಿಂದಿನ ಅಧ್ಯಯನ ಪ್ರವಾಸ ನನ್ನ ದಿಲ್ಲಿ ಉದ್ಯೋಗದ ಪ್ರಯಾಸ ಕಡಿಮೆ ಮಾಡಿತು.
ನಿಜ ಹೇಳಬೇಕೆಂದರೆ ಸಂಪಾದಕು ದಿಲ್ಲಿಯಲ್ಲಿ ವರದಿಗಾರನಾಗುವ ಅವಕಾಶ ಇರುವ ಬಗ್ಗೆ ತಿಳಿಸಿದಾಗ ನಾನು ಒಪ್ಪಿಕೊಳ್ಳಲು ಅಧ್ಯಯನ ಪ್ರವಾಸವೇ ಕಾರಣ. ನನಗೆ ರಶ್ ಅಂದರೆ ಆಗದು. ಟ್ರಫಿಕ್ ಜಾಂ, ಎಲ್ಲಿ ನೋಡಿದರಲ್ಲಿ ರಶ್. ಹೀಗಾದರೆ ನೆಮ್ಮದಿಯ ಜೀವನ ಅಸಾಧ್ಯ. ನನ್ನ ಮಟ್ಟಿಗೆ. ಆದರೆ ಅಧ್ಯಯನ ಪ್ರವಾಸಕ್ಕೆ ಬಂದಾಗ ನೋಡಿದ ದಿಲ್ಲಿ, ಇಲ್ಲಿನ ಅಗಲವಾದ ರಸ್ತೆ, ಸಿಗ್ನಲ್‌ಗಳ ಬದಲು ವೃತ್ತಗಳು, ಮಂಜು ಮುಸಿಕಿದ ವಾತಾವರಣ ಇವೆಲ್ಲ ನನ್ನನ್ನು ಆಕರ್ಷಿಸಿದ್ದವು. ದಿಲ್ಲಿಯಲ್ಲಿ ವರದಿಗಾರನಾಗಲು ಒಪ್ಪಿಕೊಳ್ಳಲು ಇದೂ ಒಂದು ಕಾರಣವಾಯಿತು. ಬಹುಶಃ ಅಧ್ಯಯನ ಪ್ರವಾಸದ ನೆಪದಲ್ಲಿ ದಿಲ್ಲಿ ನೋಡದೇ ಹೋಗಿದ್ದರೆ ಇಲ್ಲಿಗೆ ಬರಲು ಮನಸ್ಸು ಒಪ್ಪುತ್ತಿರಲಿಲ್ಲವೇನೊ. ಅಥವಾ ಬಂದರೂ ಸ್ವಲ್ಪ ಕಷ್ಟವಾಗುತ್ತಿತ್ತೇನೊ.
ಹಾಗಂತ ದಿಲ್ಲಿಯಲ್ಲಿ ಟ್ರಾಫಿಕ್ ಜಾಂ ಇಲ್ಲ. ರಸ್ತೆಗಳಲ್ಲಿ ಹೊಂಡಗಳೇ ಇಲ್ಲ ಎಂದು ನಾನುಹೇಳುತ್ತಿಲ್ಲ. ಇಲ್ಲೂ ಆಗಾಗ ಟ್ರಾಫಿಕ್ ಜಾಂ ಸಿಗುವುದಿದೆ. ಆದರೆ ಬೆಂಗಳೂರಿನಷ್ಟಲ್ಲ! ಇಲ್ಲೂ ಹೊಂಡಗಳಿವೆ ಆದರೆ ರಾಷ್ಟ್ರೀಯ ಹೆದ್ದಾರಿ ೧೭ ಮತ್ತು ೪೮ರಷ್ಟಲ್ಲ!!
ಅದೇ ಸಮಾದಾನ. ಇನ್ನೂ ಒಂದು ಸಮಾದಾನವೆಂದರೆ ಪೆಟ್ರೋಲ್, ಡೀಸೆಲ್ ಬೆಲೆ ಉಳಿದ ಕಡೆಗಿಂತ ಕಡಿಮೆ ಇದೆ!

Monday, June 16, 2008

ಪದ್ಮಪ್ರಿಯಾ ಸಾವಿಗೊಂದು ಬೆನ್ನುಡಿ...


ಕೊಂಚ ಸಹನೆ, ಶಾಸಕರ ಮಾನದ ಬಗೆಗಿದ್ದ ಕಾಳಜಿಯ ಒಂದಷ್ಟಾದರೂ ಪದ್ಮಪ್ರಿಯಾಳ ಭಾವನೆಯ ಬಗ್ಗೂ ಇರುತ್ತಿದ್ದರೆ ಬಹುಶಃ ಅವಳು ಜೀವನಕ್ಕೆ ದುರಂತ ಅಂತ್ಯ ಕಾಣಿಸಿಕೊಳ್ಳಬೇಕಾಗಿರಲಿಲ್ಲ.
ಪದ್ಮಪ್ರಿಯಾ ಮತ್ತು ಅತುಲ್ ನಡುವಿನ ಪ್ರೇಮ ತೀರ ಗುಪ್ತವಾಗೇನೂ ಉಳಿದಿರಲಿಲ್ಲ. ಸ್ವತಃ ರಘುಪತಿ ಭಟ್ ಸೇರಿದಂತೆ ಎಲ್ಲರಿಗೂ ಗೊತ್ತಿತ್ತು. ಅಧಿಕೃತವಾಗಲ್ಲದಿದ್ದರೂ ಅನಧಿಕೃತವಾಗಿ, ಗಾಳಿಸುದ್ದಿಯಾಗಿ ಅದು ಉಡುಪಿ ಜನರ ಬಾಯಿ- ಕಿವಿಯಲ್ಲಿ ಸುಳಿದಾಡುತ್ತಿತ್ತು. ಇದರಿಂದಾಗಿಯೇ ಪದ್ಮಪ್ರಿಯಾ ನಾಪತ್ತೆಯಾದಾಗ ಉಡುಪಿ ಜನ ಕಣ್ಣು ತಿರುಗಿಸಿದ್ದು ಅತುಲ್ ಕಡೆಗೆ.
ಇಡೀ ಘಟನೆಯಲ್ಲಿ ಸ್ವತಃ ಪದ್ಮಪ್ರಿಯಾ, ಅತುಲ್, ಶಾಸಕರ ರಘುಪತಿ ಭಟ್ ಮತ್ತು ನಮ್ಮ ಸರಕಾರ ಹೀಗೆ ಎಲ್ಲರೂ ಕೊಂಚ ಎಡವಿದವರೇ. ಪದ್ಮಪ್ರಿಯಾ ಗೃಹಿಣಿ. ಆಕೆಯ ಸ್ವಂತ ಭಾವನೆಗಳಿಗೆ ಬೆಲೆ ಖಂಡಿತ ಇದೆ. ಅದನ್ನೇ ಆಕೆ ಇನ್ನಷ್ಟು ಸಹನೆಯಿಂದ, ವ್ಯವಸ್ಥಿತವಾಗಿ ಸಾಧಿಸಿಕೊಳ್ಳಹುದಿತ್ತು. ಮಕ್ಕಳ ಬಗ್ಗೆ ಕೊಂಚ ಯೋಚಿಸಬಹುದಿತ್ತು. ರಘುಪತಿ ಭಟ್ಟರಿಂದ ವಿಚ್ಛೇದನ ಪಡೆದು ತನಗೆ ಇಷ್ಟವಾದಂತೆ ಜೀವನ ನಡೆಸಹುದಿತ್ತು. ಇಲ್ಲವೇ ಹೇಗೂ ಇಬ್ಬರ ಸಂಬಂಧ ಹದಗೆಟ್ಟಿದ್ದೇ ಆದರೆ ಗಂಡನನ್ನು ಒಪ್ಪಿಸಿಯೇ ಇಷ್ಟಪಟ್ಟವರ ಜತೆ ಹೋಗಬಹುದಿತ್ತು. ಇದ್ಯಾವುದನ್ನೂ ಮಾಡದೆಯೂ ಹೋಗುವ ಕೊನೆಯ ಕ್ಷಣದಲ್ಲಿ ಒಂದು ಸಣ್ಣ ಚೀಟಿ ಬರೆದಿಟ್ಟು ಹೋಗಿದ್ದರೂ ಇಷ್ಟು ಗೊಂದಲ, ಕುತೂಹಲ ಸೃಷ್ಟಿಯಾಗುತ್ತಿರಲಿಲ್ಲ.
ಇನ್ನು ಅತುಲ್. ಅವರ ನಡುವಿನ ಸಂಬಂಧ, ಭಾವನೆಗಳು ಏನೇ ಇರಲಿ. ಆತನಿಗೂ ಜವಾದಾರಿಗಳಿವೆ. ಆತನೂ ಸಂಸಾರಸ್ಥ. ಆತ ಆಕೆಗೆ ತಿಳಿಹೇಳಬಹುದಿತ್ತು ಮತ್ತು ತಿಳಿಹೇಳಬೇಕಿತ್ತು. ಆತನೂ ಅದನ್ನು ಮಾಡಲಿಲ್ಲ. ಅಥವಾ ಆತ ಬುದ್ದಿ ಹೇಳಿದರೂ ಈಕೆ ಕೇಳಲಿಲ್ಲವೊ. ಇನ್ನು ಶಾಸಕ ಭಟ್ಟರ ಮನಸ್ಥಿತಿ ಅರ್ಥವಾಗದ್ದು. ಅವರಿಗೆ ಕೌಟುಂಬಿಕ ಸಂಬಂಧ ಹೇಗೇ ಇರಲಿ ಸಾರ್ವಜನಿಕರಿಗೆ ಅದು ಚೆನ್ನಾಗಿಯೇ ಕಾಣಬೇಕು. ಒಬ್ಬ ಶಾಸಕನಾಗಿ ಅದು ಅನಿವಾರ್ಯ. ಇದೇ ಕಾರಣಕ್ಕೆ ಅವರು ವಿಚ್ಛೇದನ ಬೇಡಿಕೆ ಮುಂದೂಡುತ್ತ ಬಂದಿದ್ದರು ಎಂಬುದು ಸುದ್ದಿ. ಒಬ್ಬ ರಾಜಕಾರಣಿಗೆ ಹೆಂಡತಿಕೊಡುವ ವಿಚ್ಛೇದನ ಸೋಲಿಗೂ ಕಾರಣವಾಗಿಬಿಡಹುದು. ಪತ್ನಿ ತಿರಸ್ಕರಿಸಿದಂತೆ ಜನವೂ ತಿರಸ್ಕರಿಬಿಟ್ಟರೆ? ಎಂಬ ಭಯ.
ಇನ್ನು ಸರಕಾರ. ಅದಕ್ಕೆ ಅದರ ಮರ್ಯಾದೆ, ಅದಕ್ಕಾಗುವ ಇರುಸುಮುರುಸುಗಳನ್ನು ತಪ್ಪಿಸಿಕೊಳ್ಳುವುದಷ್ಟೇ ಮುಖ್ಯ. ಅವರು ಶಾಸಕರೇ ಆಗಿರಲಿ, ಅವರ ಪತ್ನಿಯೇ ಆಗಿರಲಿ ಅದನ್ನೊಂದು ಪರಾರಿ ಪ್ರಕರಣವನ್ನಷ್ಟೇ ಆಗಿ ನೋಡುವುದು ಸರಕಾರದಿಂದಲೂ ಸಾಧ್ಯವಾಗಲಿಲ್ಲ. ಸಾಧ್ಯವಾಗುವುದೂ ಇಲ್ಲ. ಶಾಸಕರ ಪತ್ನಿ ಪರಾರಿಯನ್ನು ಸರಕಾರ ತನ್ನ ಪ್ರತಿಷ್ಠೆಯ ವಿಷಯ ಮಾಡಿಕೊಳ್ಳದೇ ಹೋಗಿದ್ದರೆ ಬಹುಶಃ ಸಮಸ್ಯೆ ನಿಧಾನವಾಗಿ ಬಗೆಹರಿಯುತ್ತಿತ್ತೇನೊ. ಅದೂ ಆಗಲಿಲ್ಲ. ಸರಕಾರ ಮತ್ತು ಅದರ ಸಕಲ ಅಂಗಗಳು ಶಾಸಕರ ಮಾನ ಕಾಪಾಡುವ ಮೂಲಕ ತಮ್ಮ ಮಾನವನ್ನೂ ಕಾಪಾಡಿಕೊಳ್ಳುವ ಆತುರದಲ್ಲಿದ್ದವು. ಹಾಗಿಲ್ಲದೇ ಹೋಗಿದ್ದಲ್ಲಿ ಕರ್ನಾಟಕ ಪೊಲೀಸರು ದಿಲ್ಲಿ ಪೊಲೀಸರ ಸಹಾಯ ಪಡೆದುಕೊಳ್ಳುತ್ತಿದ್ದರು. ಹಾಗೆ ಮಾಡಿದ್ದರೆ ಪದ್ಮಪ್ರಿಯಾ ಉಳಿಯುತ್ತಿದ್ದಳೇನೊ.
ಇದರಲ್ಲಿ ಮಾಧ್ಯಮಗಳ ಪಾಲು ತುಂಬ ಕಡಿಮೆ. ಆದರೂ ಸ್ವಲ್ಪ ಇದೆ. ಪದ್ಮಪ್ರಿಯಾ ಆತ್ಮಹತ್ಯೆ ಮಾಡಿಕೊಂಡ ಮನೆಯಲ್ಲಿ ಕನ್ನಡದ ಸುದ್ದಿ ಚಾನಲ್ ಒಂದು ಚಾಲೂ ಆಗಿತ್ತು. ಆಕೆ ಅದನ್ನೇನಾದರೂ ನೋಡಿ ತಕ್ಷಣಕ್ಕೆ ಆತ್ಮಹತ್ಯೆ ನಿರ್ಧಾರ ತೆಗೆದುಕೊಂಡಳೇ? ಎಂಬ ಅನುಮಾನವೂ ಇದೆ. ಯಾಕೆಂದರೆ ಚಾನಲ್‌ನವರು ಟಿಆರ್‌ಪಿ ಗಳಿಸುವ ಗಡಿಬಿಡಿಯಲ್ಲಿ ಸುದ್ದಿಯನ್ನು ಬ್ರೇಕ್ ಮಾಡುವ ಆತುರದಲ್ಲಿ ಬಾಯಿಗೆ ಬಂದಿದ್ದನ್ನೆಲ್ಲ ಒದರುತ್ತಲೇ ಇರುತ್ತಾರೆ. ಅದು ಆ ಪ್ರಕರಣಕ್ಕೆ ಸಂಬಂಧಿಸಿದವರ ಮೇಲೆ ಯಾವ ಪರಿಣಾಮ ಬೀರೀತು ಎಂಬುದು ಅವರಿಗೆ ಮನಸ್ಸಿನಲ್ಲಿ ಇರುವುದೇ ಇಲ್ಲ.ಈ ಎಲ್ಲ ಕಾರಣಗಳೂ ಸೇರಿ ಉಡುಪಿ ಶಾಸಕ ರಘುಪತಿ ಭಟ್ಟರ ಪತ್ನಿ ದಿಲ್ಲಿಯ ಮನೆಯೊಂದರಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಳ್ಳುವಂತಹ ಅನಿರೀಕ್ಷಿತ ಅಂತ್ಯ ಕಾಣುವಂತಾಯಿತು.
ಯಾವುದೇ ವಿಷಯವಿರಲಿ ಅದು ಅದರ ವ್ಯಾಪ್ತಿ ಮೀರಿ ಬೃಹತ್ತಾಗಿ ಬೆಳೆದಾಗ ಅನಾಹುತಗಳು ಸಂಭವಿಸುತ್ತವೆ. ಪದ್ಮಪ್ರಿಯಾ ವಿಷಯದಲ್ಲಿ ಆಗಿದ್ದೂ ಇದೇ.
ಪದ್ಮಪ್ರಿಯಾ ಸಾವು ಯಾಕೋ ಬೇಸರ ಉಂಟುಮಾಡಿದೆ. ಛೆ ಹೀಗಾಗಬಾರದಾಗಿತ್ತು ಅನಿಸುತ್ತಿದೆ. ಆದರೂ ಹಾಗಾಗಿ ಹೋಗಿದೆ. ನನಗೆ ಇಂತಹ ದುಃಖದಲ್ಲೂ ಒಂದು ಹಾಸ್ಯ ಕಾಣಿಸುತ್ತಿದೆ. ಅದೇನೆಂದರೆ ಭಾನುವಾರ ಬೆಳಗ್ಗೆ ಟಿವಿ ಚಾನಲ್ ಮತ್ತು ಪತ್ರಿಕೆಗಳಲ್ಲಿ ಪದ್ಮಪ್ರಿಯಾ ಕೋಲಾರದಲ್ಲಿ ಪತ್ತೆ. ಉಡುಪಿಗೆ ರವಾನೆ, ಮಂಗಳೂರಿನ ಬಿಜೆಪಿ ಮುಖಂಡರೊಬ್ಬರ ಮನೆಯಲ್ಲಿ ಮನವೊಲಿಕೆ ಮುಂತಾದ ಸುದ್ದಿಗಳನ್ನು ಪ್ರಕಟವಾಗಿದ್ದವು. ಪ್ರಕಟವಾಗುತ್ತಲೇ ಇದ್ದವು. ಆಕೆ ದಿಲ್ಲಿಯ ಮನೆಯೊಂದರಲ್ಲಿ ಕುಳಿತು ಇದನ್ನೆಲ್ಲ ನೋಡುತ್ತಿದ್ದಳು!
ಆಕೆಗೆ ಈ ಮಾಧ್ಯಮಗಳು ಅದೆಷ್ಟು ಸುದ್ದಿ ಬಿತ್ತರಿಸುತ್ತವೆ ಅನ್ನಿಸಿರಬೇಕಲ್ಲ. ಹೀಗೆ ಅನ್ನಿಸಿಯೂ ಅದೇ ಮಾಧ್ಯಮ ಬಿತ್ತರಿಸಿದ ಸುದ್ದಿ ನಂಬಿ ಆತ್ಮಹತ್ಯೆಗೆ ಮನಸ್ಸು ಮಾಡಿರಬಹುದಾ? ಅನುಮಾನ. ಆದರೂ ಸಾಯುವ ಮುಂಚೆ ಮಾಧ್ಯಮಗಳಲ್ಲಿ ಪ್ರಕಟವಾದ ಪದ್ಮಪ್ರಿಯಾ ಕೋಲಾರದಲ್ಲಿ ಪತ್ತೆ ಸುದ್ದಿ ನೋಡಿ ಆಕೆ ನಕ್ಕಿರಬಹುದಲ್ಲಾ...

Saturday, June 07, 2008

ಮಂಜುನಾಥ ಕಲ್ಮನಿಯಿಂದ ಕಲಿಯಬೇಕಾದ್ದು...

ಆತ ಸಾಫ್ಟ್‌ವೇರ್ ಎಂಜಿನಿಯರ್. ಹಣ, ಉತ್ತಮ ಜೀವನ ಹುಡುಕಿ ಅಮೆರಿಕಕ್ಕೆ ಹೋಗಿದ್ದ. ವೆದರ್ ಡಾಟ್ ಕಾಂನಲ್ಲಿ ಕೆಲಸ ಮಾಡಲು. ತಂದೆ- ತಾಯಿ, ಊರು, ರಾಜ್ಯ ಎಲ್ಲದರಿಂದ ದೂರವಾಗಿ, ಹಣಕ್ಕೆ ಹತ್ತಿರವಾಗಲು ಹೊರಟ. ಡಾಟ್ ಕಾಂ ಮುಚ್ಚಿತು. ಬದುಕುಮಗುಚಿತು. ಜೀವನದ ಆಸೆಗೆ ಕಾಮಾ (ಅಲ್ಪವಿರಾಮ) ಬಿತ್ತು. ಅದೇ ಟೆನ್ಶನ್‌ನಲ್ಲಿ ಕಾರು ಓಡಿಸುವಾಗ ಅದು ರಸ್ತೆ ಬದಿ ಮರಕ್ಕೆ ಗುದ್ದಿತು. ಕುತ್ತಿಗೆಗಿಂತ ಕೆಳಗೆ ದೇಹ ನಿಯಂತ್ರಣ ಕಳೆದುಕೊಂಡಿತು. ಹಾಗೇ ಆರು ವರ್ಷ ಅಮೆರಿಕದಲ್ಲಿ ಜೀವಚ್ಛವಾಗಿದ್ದ ಮಂಜುನಾಥ ಕಲ್ಮನಿ. ಮನೆಯವರು ಒಬ್ಬರೂ ಹೋಗಲಿಲ್ಲ. ಯಾಕೆಂದರೆ ಮಂಜುನಾಥ ಕಲ್ಮನಿ ಅಮೆರಿಕಕ್ಕೆ ಹೋದ ನಂತರ ಮನೆಯವರ ಸಂಪರ್ಕವನ್ನೇ ಹೆಚ್ಚುಕಡಿಮೆ ಕಳೆದುಕೊಂಡಿದ್ದ.
ದುಡ್ಡು ಆ ಮಟ್ಟಕ್ಕೆ ಮುಟ್ಟಿಸಿತ್ತು.
ಅವನ ನಸೀಬು ಚೆನ್ನಾಗಿತ್ತು. ೨೦೦೮ರಲ್ಲಿ ವೀಸಾ ಅವಧಿ ಮುಗಿಯಿತು. ಅದೇ ಕಾರಣಕ್ಕೆ ಅಮೆರಿಕ ಆಂಬುಲೆನ್ಸ್ ವಿಮಾನದಲ್ಲಿ ಮಂಜುನಾಥ ಕಲ್ಮನಿಯನ್ನು ಹೊತ್ತುಕೊಂಡು ಬಂದು ದಿಲ್ಲಿಯಲ್ಲಿ ಇಳಿಸಿಹೋಯಿತು. ಅವತ್ತಿನಿಂದ ದಿಲ್ಲಿಯ ಸಫ್ತರ್‌ಜಂಗ್ ಆಸ್ಪತ್ರೆ ಮಂಜುನಾಥ ಕಲ್ಮನಿಯ ಮನೆಯಾಯಿತು. ಮಗ ಏನೇ ಮಾಡಿರಲಿ, ಹೆತ್ತ ಕರುಳು ಕೇಳಬೇಕಲ್ಲ. ಮನೆಯವರು ಮಂಜುನಾಥ ಕಲ್ಮನಿ ನೋಡಲು ಆರಂಭದಲ್ಲಿ ಹಿಂಜರಿದರೂ, ತಾಯಿ ಕಣ್ಣೀರು ಹಾಕುತ್ತ ದಿಲ್ಲಿಗೆ ಆಗಮಿಸಿದಳು. ೮ ವರ್ಷದ ನಂತರ ಮಗನನ್ನು ನೋಡಿದಳು. ೩ ತಿಂಗಳು ಮಗನ ಆರೈಕೆ ಮಾಡಿದರು. ಕೊನೆಗೂ ಮಂಜುನಾಥ ಕಲ್ಮನಿ ಮೇ ೪ರಂದು ಕೊನೆಯುಸಿರೆಳೆದ.
ಇದು ಕರಳು ಹಿಂಡುವ ಕತೆ. ನಾಗತಿಹಳ್ಳಿ ಯಂಥವರು ಈಕತೆಯನ್ನು ಅಮೆರಿಕಾ ಅಮೆರಿಕಾ ಭಾಗ ೧ ಸಿನಿಮಾ ಮಾಡಬಹುದು.
ಇದರಲ್ಲಿ ಒಂದು ವಿಷಯವಿದೆ. ಹೆಚ್ಚಿನ ಮಾಧ್ಯಮಗಳಲ್ಲಿ ಮಂಜುನಾಥ ಕಲ್ಮನಿ ಪರ ವರದಿ ಪ್ರಕಟವಾದವು. ಆತನನ್ನು ಮನೆ ತಲುಪಿಸಲು ಸರಕಾರ ಜವಾಬ್ದಾರಿ ವಹಿಸಬೇಕು ಎಂಬರ್ಥದ ವರದಿಗಳೂ ಬಂದವು.
ಯಾಕೆ? ಯಾಕೆ? ಮಂಜುನಾಥ ಕಲ್ಮನಿ ದೇಶಕ್ಕಾಗಿ ಹೋರಾಡಲು ಅಮೆರಿಕಕ್ಕೆ ತೆರಳಿದ್ದ ಯೋಧನೆ? ಅಮೆರಿಕದಿಂದ ಕೆಲವು ಮಾಹಿತಿಗಳನ್ನು ದೇಶಕ್ಕೆ ಒದಗಿಸುತ್ತಿದ್ದ ಗುಪ್ತಚರನೇ? ದೇಶಕ್ಕೆ, ರಾಜ್ಯಕ್ಕೆ ಹೆಸರು ತಂದ ವ್ಯಕ್ತಿಯೆ? ದೇಶ, ರಾಜ್ಯ ಬಿಡಿ ಮನೆಯವರಿಗಾಗಿ ಏನಾದರೂ ತ್ಯಾಗ ಮಾಡಿದವನೇ? ಊಹುಂ. ಆತ ಉದ್ಯೋಗ ಅರಸಿ ಹೋದ ಒಬ್ಬ ವ್ಯಕ್ತಿ ಅಷ್ಟೆ. ಅದೂ ಮನೆಯವರಿಂದ ದೂರವಾಗಿ! ಮಾನವೀಯ ನೆಲೆಯಲ್ಲಿ ಸರಕಾರ ಸಹಾಯ ಮಾಡಬಹುದೇ ಹೊರತು, ಕರ್ತವ್ಯದ ನೆಲೆಯಲ್ಲಲ್ಲ. ಆ ನೆಲೆಯಲ್ಲಿ ಸರಕಾರ ಸಾಕಷ್ಟು ಮಾಡಿತು.
ಆದರೂ ಅವರ ಮನೆಯವರಿಗೆ ಅದು ಸಾಕಾಗಿಲ್ಲ. ಸರಕಾರ ಅಷ್ಟು ವೆಚ್ಚ ಮಾಡಿ ಆತನನ್ನು ವಿಮಾನದಲ್ಲಿ ಊರಿಗೆ ತಲುಪಿಸಬೇಕಿತ್ತು. ಮನೆಯವರಿಗೆ ಪರಿಹಾರ ಸಿಗಬೇಕಿತ್ತು ಎಂಬೆಲ್ಲ ಭಾವನೆ ಇದ್ದಂತಿದೆ.
ನಮ್ಮದೇ ರಾಜ್ಯದಲ್ಲಿ ಎಷ್ಟು ಮಂದಿ ಬಡವರಿದ್ದಾರೆ. ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯಲಾಗದೆ ನರಳುತ್ತಿದ್ದಾರೆ. ಸರಕಾರ ಅವರಿಗೆಲ್ಲ ದಿಲ್ಲಿಯ ಸಫ್ತರ್‌ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತದೆಯೇ? ಇಲ್ಲ. ಆದರೂ ಮಂಜುನಾಥ ಕಲ್ಮನಿಗೆ ಕೊಡಿಸಿತು. ಎಷ್ಟು ಜನ ಔಷಧಿಗೆ ದುಡ್ಡಿಲ್ಲದೆ ಪರದಾಡುತ್ತಿದ್ದಾರೆ. ಅವರಿಗೆಲ್ಲ ಸರಕಾರ ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಿರುವಾಗ ಮಂಜುನಾಥ ಕಲ್ಮನಿಗೆ ಸರಕಾರ ಅದನ್ನೆಲ್ಲ ಮಾಡಬೇಕು ಎಂದು ಮಾಧ್ಯಮದವರು ಬಯಸುವುದೇಕೆ? ತಪ್ಪಲ್ಲವೇ?
ನಾವು ಪತ್ರಕರ್ತರು ಇನ್ನು ಮುಂದಾದರೂ ವರದಿ, ವಿಶೇಷ ವರದಿಯ ಕೊನೆಯಲ್ಲಿ ಇನ್ನು ಮುಂದಾದರೂ ಸರಕಾರ ಇದರ ಬಗ್ಗೆ ಗಮನ ಹರಿಸಬೇಕು ಎಂದು ಬರೆಯುವುದನ್ನು ನಿಲ್ಲಿಸಬೇಕು. ಇದು ನನ್ನ ಮನವಿ. ನಿಜವಾಗಿಯೂ ಸರಕಾರ ಗಮನ ಹರಿಸುವ್ ಅಗತ್ಯವಿದ್ದಲ್ಲಿ ಜಾಡಿಸಿ ಬರೆಯಿರಿ ಬೇಡ ಅನ್ನುವವರಾರು...