Tuesday, July 31, 2007

ಅಮರ್ ಆಳ್ವ ಹ್ಯಾಂಗ್ ಕೊಲೆ ಆಗ್ಬಿಟ್ಟ ಅಲ್ವ?

ಅದು ಮಂಗಳೂರಲ್ಲಿ ನಡೆದ ಭೂಗತ ಲೋಕದ ದೊಡ್ಡ ವ್ಯಕ್ತಿಯ ಮೊದಲ ಕೊಲೆ!
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚು ಚರ್ಚೆಗೊಳಗಾದ ಕೊಲೆ. ಜನರನ್ನು ಒಮ್ಮೆ ಬೆಚ್ಚಿ ಬೀಳಿಸಿದ ಕೊಲೆ. ಅದು ಭೂಗತ ಲೋಕದ ಸಂಪರ್ಕ ಹೊಂದಿದ್ದ ಉದ್ಯಮಿ ಅಮರ್ ಆಳ್ವ ಕೊಲೆ.
೧೬ ವರ್ಷಗಳ ಹಿಂದೆ ನಡೆದ ಈ ಕೊಲೆ ಇಂದಿಗೂ ಜನರ ಮನದಲ್ಲಿದೆ. ಅಮರ್ ಆಳ್ವ ಆಗಾಗ ಮಿಲಾಗ್ರಿಸ್‌ನಲ್ಲಿದ್ದ ಸೂಪರ್ ಮಾರ್ಕೆಟ್‌ಗೆ ಬರುತ್ತಿದ್ದ. ಅದನ್ನು ಹಂತಕರು ಗಮನಿಸಿದ್ದರು. ೧೯೯೨ರ ಜುಲೈ ೧೪ರಂದು ಸಂಜೆ ಅಮರ್ ಆಳ್ವ ಕೆಲವೇ ಹೊತ್ತಿನಲ್ಲಿ ತಾನು ಹಂತಕರ ಗುಂಡಿಗೆ ಗುರಿಯಾಗಲಿದ್ದೇನೆ ಎಂಬ ಅರಿವಿಲ್ಲದೇ ಗೆಳೆಯರೊಂದಿಗೆ ಹರಟುತ್ತಿದ್ದ.
ಆಗ ಸಿಡಿಯಿತು ಗುಂಡು...!
ನಾಲ್ಕು ಜನರಿದ್ದ ಹಂತಕ ಪಡೆ ಯದ್ವಾತದ್ವಾ ಗುಂಡು ಹಾರಿಸಿತು. ಅಮರ್ ಆಳ್ವರ ಅವರ ಕಡೆಯವರೂ ಗುಂಡು ಸಿಡಿಸಿದರು. ಗುಂಡು ತಾಗಿ ಗಾಯಗೊಂಡ ಅಮರ್ ಆಳ್ವ ಫಳ್ನೀರ್ ಕಡೆ ಓಡಿದ. ಹಂತಕರು ಅಟ್ಟಿಸಿಕೊಂಡು ಹೋದರು. ರಸ್ತೆ ಮದ್ಯದಲ್ಲಿ ಬಿದ್ದ ಅಮರ್ ಆಳ್ವನಿಗೆ ಕಡಿದರು. ಇನ್ನು ಆತ ಬದುಕಲಾರ ಎಂಬುದು ಗ್ಯಾರಂಟಿಯಾದಾಗ ಹಂತಕ ಪಡೆ ರಿಕ್ಷಾ ಹತ್ತಿ ಪರಾರಿಯಾಯಿತು. ಅಮರ್ ಆಳ್ವನನ್ನು ಆಸ್ಪತ್ರೆಗೆ ಸೇರಿದರೂ ಪ್ರಯೋಜನವಾಗಲಿಲ್ಲ. ಅವರ ತಲೆಗೆ ಗುಂಡು ತಾಗಿದ್ದರೆ, ಕುತ್ತಿಗೆ, ಕೈ ಮೇಲೆಲ್ಲ ಕಡಿದ ಗಾಯಗಳಿದ್ದವು.
ಈ ಘಟನೆಯಲ್ಲಿ ಮಂಜುನಾಥ ಶೆಟ್ಟಿ, ಜಗನ್ನಾಥ್ ಶೆಟ್ಟಿ, ವಿಜಯ ನಾಯ್ಕ್, ರಮೇಶ್ ಭಟ್, ಕೇದಾರನಾಥ್, ಸುದರ್ಶನ್, ಬಾಲಕೃಷ್ಣ ರಾವ್ ಗಾಯಗೊಂಡಿದ್ದರು. ಕೆಲವರು ಅಮರ್ ಆಳ್ವನೊಟ್ಟಿಗೆ ಸಂಬಂಧ ಇಲ್ಲದವರೂ ಇದ್ದರು.ಇಷ್ಟೆಲ್ಲ ನಡೆದದ್ದು ಸಂಜೆ ೭.೪೫ಕ್ಕೆ. ಕೊಲೆ ಸುದ್ದಿ ಹಬ್ಬುತ್ತಿದ್ದಂತೆ ಅಮರ್ ಆಳ್ವ ಅವರ ಶವ ಇರಿಸಿದ್ದ ಸಿಟಿ ಆಸ್ಪತ್ರೆ ಎದುರು ಅಪಾರ ಸಂಖ್ಯೆಯ ಜನ ಸೇರಿದ್ದರು. ಮಂಗಳೂರು ಭಾಗಶಃ ಬಂದ್ ಆಗಿತ್ತು. ಮೆರವಣಿಗೆಯಲ್ಲಿಯೆ ಅಮರ್ ಆಳ್ವ ಶವ ಮನೆಗೆ ತೆಗೆದುಕೊಂಡು ಹೋಗಿ, ಅವತ್ತೇ ಅಂತ್ಯ ಸಂಸ್ಕಾರ ಮಾಡಲಾಯಿತು. ಮಂಗಳೂರು ಮಟ್ಟಿಗೆ ದೊಡ್ಡ ಹೆಸರು ಮಾಡಿದ್ದ ಅಮರ್ ಆಳ್ವ ಕತೆ ಮುಗಿದೇಹೋಗಿತ್ತು.
ಕೊಲೆ ನಡೆದ ಸ್ಥಳದಲ್ಲಿ ಎರಡು ಜೀವಂತ ಹಾಗೂ ಐದು ಖಾಲಿ ಗುಂಡುಗಳು ದೊರಕಿದ್ದವು.
ಸಿಕ್ಕಿಬಿದ್ದ ಆರೋಪಿ: ಅಮರ್ ಆಳ್ವನ ಕಡೆರಯವರು ಹಾರಿಸಿದ ಗುಂಡಿನಿಂದ ಹಂತಕ ಪಡೆಯ ಒಬ್ಬ ಗಾಯಗೊಂಡಿದ್ದ. ಹಾಗೆ ಪೊಲೀಸರು ಆಸ್ಪತ್ರೆಗಳ ಮೇಲೆ ಕಣ್ಣಿಟ್ಟರು. ಪರಾರಿಯಾಗುವ ದಾರಿಯಲ್ಲಿ ಗಾಯಗೊಂಡ ಆರೋಪಿ ಕಿನ್ನಿಗೋಳಿಯ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ. ಸ್ಥಿತಿ ಗಂಭೀರವಾಗಿದ್ದರಿಂದ ಆತನನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು. ಆತನ ಹೆಸರು ಯತೀಶ ಶೆಟ್ಟಿ. ಸುಳ್ಳು ಹೆಸರು, ವಿಳಾಸ ನೀಡಿ ಈತನನ್ನು ಆಸ್ಪತ್ರೆಯಲ್ಲಿ ಇಡಲಾಗಿತ್ತಾದರೂ ಪೊಲೀಸರಿಗೆ ಗೊತ್ತಾಗಿಬಿಟ್ಟಿತ್ತು. ಎರಡು ದಿನ ಬಿಟ್ಟು ಆತನನ್ನು ಪೊಲೀಸರು ವಿಚಾರಣೆಗೆ ಗುರುಪಡಿಸಿದರು. ಆಗ ಇತರ ಆರೋಪಿಗಳಾದ ಮುರಳಿ ಯಾನೆ ಮುರಳೀಧರ, ಶ್ರೀಕರ, ಬಾಲಕೃಷ್ಣ ಶೆಟ್ಟಿ ಯಾನೆ ಬಾಲೇಶ ಎಂಬವರೊಂದಿಗೆ ಸೇರಿ ಅಮರ್ ಆಳ್ವನನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡ.
ಕಾರಣ: ೧೯೯೧ರ ಡಿಸೆಂಬರ್ ೩೧ರಂದು ಉಡುಪಿಯ ಎಂಜಿಎಂ ಕಾಲೇಜು ಬಳಿ ಬಶೀರ್ ಎಂಬವರು ತೆಗೆದುಕೊಂಡು ಹೋಗುತ್ತಿದ್ದ ೬ ಲಕ್ಷ ರೂ.ಗಳನ್ನು ಯಾರೋ ಅಪಹರಿಸಿದ್ದರು. ಆರೋಪಿಗಳನ್ನು ಪತ್ತೆ ಹಚ್ಚಿ ಹಣ ವಾಪಸ್ ಕೊಡಿಸುವಂತೆ ಬಶೀರ್ ಪುರುಷೋತ್ತಮ ಶೆಟ್ಟಿ ಎಂಬವರ ಬಳಿ ಕೇಳಿಕೊಂಡಿದ್ದ. ಯತೀಶ್, ಮುರುಳಿ ಹಾಗೂ ಇತರರೆ ಆ ಹಣ ಅಪಹರಿಸಿದ್ದು ಎಂಬುದನ್ನು ಪತ್ತೆ ಮಾಡಿದ ಪುರುಷೋತ್ತಮ ಶೆಟ್ಟಿ, ಅವರಿಂದ ಹಣ ವಾಪಸ್ ಕೊಡಿಸುವಂತೆ ಅಮರ್ ಆಳ್ವನಿಗೆ ವಿನಂತಿಸಿದ್ದ. ಅವನ ವಿನಂತಿಯಂತೆ ಅಮರ್ ಆಳ್ವನ ಸಹಚರರು ಯತೀಶನಿಗೆ ಹಣ ಕೊಡುವಂತೆ ಬೆದರಿಸಿದ್ದರು. ಒಮ್ಮೆ ಯತೀಶ ಇಲ್ಲದಾಗ ಆತನ ಮನೆಗೆ ಹೊದ ಕೆಲವರು ಬಂದೂಕು ತೋರಿಸಿ ಹೆದರಿಸಿ ಬಂದಿದ್ದರು. ಇದರಿಂದ ಹೆದರಿದ ಯತೀಶ ಹಾಗೂ ಸಂಗಡಿಗರು ಮುಂಬಯಿ, ಗೋವಾಕ್ಕೆ ಹೋಗಿ ಅಡಗಿಕೊಂಡರು. ಅಲ್ಲೂ ಅಮರ್ ಆಳ್ವ ಅನುಚರರು ಅವರನ್ನು ಬೆಂಬತ್ತಿದರು. ಯತೀಶನಿಗೆ ದಿನ ಕಳೆದಂತೆ ಅಭದ್ರತೆ ಕಾಡತೊಡಗಿತ್ತು. ತಾನು ಎಷ್ಟೊತ್ತಿಗೆ ಅಮರ್ ಆಳ್ವ ಸಂಗಡಿಗರಿಂದ ಕೊಲೆಯಾಗಿ ಬಿಡತ್ತೇನೊ ಎಂಬ ಆತಂಕ.
ಈ ಆತಂಕದಿಂದಾಗಿಯೇ ಆತನ ತಲೆಯಲ್ಲಿ ಅಮರ್ ಆಳ್ವನನ್ನು ಮುಗಿಸದೆ ತಾನು ಸಮಾಧಾನದಿಂದಿರುವುದು ಸಾಧ್ಯವೇ ಇಲ್ಲ ಎಂಬ ಅರಿವು ಮೂಡಿತು. ತಕ್ಷಣ ಆತ ಮುಂಬಯಿಯ ಕೆಲವು ಭೂಗತ ಲೋಕದ ವ್ಯಕ್ತಿಗಳನ್ನು ಸಂಪರ್ಕಿಸಿದ. ಅವರಲ್ಲಿ ಬಲ್ಲಾಳ್‌ಭಾಗ್ ರಘು ಎಂಬವನ ಮೂಲಕ ಮೂಲಕ ದುಬೈನಲ್ಲಿರುವ ಅಮರ್ ಆಳ್ವನ ವಿರೋಧಿ ಅಶೋಕ್ ಶೆಟ್ಟಿಯ ಸಂಪರ್ಕ ಸಿಕ್ಕಿತು. ಅಮರ್ ಆಳ್ವನ ಕೊಲೆ ಮಾಡುವ ಯತೀಶ ಐಡಿಯಾಕ್ಕೆ ಅಶೋಕ್ ಶೆಟ್ಟಿ ಹಣ ಒದಗಿಸಿ ನೀರೆರೆದ. ಅಮರ್ ಕೊಲೆ ಸ್ಕೆಚ್ ರೆಡಿಯಾಯ್ತು.
ಯೋಜನೆಯಂತೆ ೧೯೯೨ರ ಜೂ.೧೧ರಂದು ಅಂದರೆ ಅಮರ್ ಆಳ್ವನ ಕೊಲೆಯಾಗುವ ೩೩ ದಿನ ಮೊದಲು ಯತೀಶ ಹಾಗೂ ಸಂಗಡಿಗರು ಬಂದೂಕುಗಳೊಂದಿಗೆ ಮಂಗಳೂರಿನಲ್ಲೊಂದು ಬಾಡಿಗೆ ಮನೆ ಪಡೆದು ಠಿಕಾಣಿ ಹೂಡಿದರು. ಅವರಲ್ಲಿ ಇಬ್ಬರು ಹಂಪನಕಟ್ಟೆಯಲ್ಲಿರುವ ಹೋಟೆಲ್ ಒಂದರಲ್ಲಿ ರೂಂ ಮಾಡಿ ಅಮರ್ ಆಳ್ವನ ಚಲನವಲನ ವೀಕ್ಷಿಸುತ್ತಿದ್ದರು. ಅಮರ್ ಆಳ್ವ ಆಗಾಗ ಮಿಲಾಗ್ರಿಸ್‌ನ ಸೂಪರ್ ಮಾರ್ಕೆಟ್‌ಗೆ ಬರುತ್ತಿರುವುದು ಅವರ ಕಣ್ಣಿಗೆ ಬಿದ್ದಿತ್ತು. ಒಮ್ಮೆ ಅಮರ್ ಆಳ್ವ ಕೊಲೆ ಮಾಡಲು ಹಂತಕರು ನಿರ್ಧರಿಸಿದ್ದರಾದರೂ ಹೆಂಡತಿ- ಮಕ್ಕಳು ಜತೆಯಲ್ಲಿದ್ದರು. ಅವತ್ತು ಅಮರ್ ಆಳ್ವ ಬದುಕಿದ್ದ. ಆದರೆ ಜು.೧೪ರಂದು ಹಂತಕರು ಯಾವುದೇ ದಾಕ್ಷಿಣ್ಯ ತೋರಲಿಲ್ಲ. ಗುಂಡು ಹಾರಿಸಿಯೇ ಬಿಟ್ಟರು.
ಪೊಲೀಸರು ಅಮರ್ ಆಳ್ವ ಪ್ರಕರಣದಲ್ಲಿ ಒಟ್ಟು ೭ ಮಂದಿ ಆರೋಪಿಗಳನ್ನು ಗುರುತಿಸಿದರು. ಅವರಲ್ಲಿ ಯತೀಶ, ಮುರಳಿ, ಶ್ರೀಕರ ಹಾಗೂ ಬಾಲಕೃಷ್ಣನನ್ನು ಬಂಧಿಸಿದರು. ಉಳಿದವರು ನಾಪತ್ತೆಯಾಗಿಯೇ ಉಳಿದರು. ದುಬೈನಲ್ಲಿರುವ ಅಶೋಕ ಶೆಟ್ಟಿ ಗಡಿಪಾರಿಗೆ ದಾಖಲೆಗಳನ್ನು ಕಳುಹಿಸಿದರು. ಅದಕ್ಕೆ ಇವತಿನವರೆಗೂ ಉತ್ತರ ಬಂದಿಲ್ಲ.ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ ಅಮರ್ ಆಳ್ವ ಕೊಲೆಯ ಬಂಧಿತ ನಾಲ್ಕು ಮಂದಿ ಆರೋಪಿಗಳನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿತು. ಹಂಪನಕಟ್ಟೆಯಂಥ ಸಾರ್ವಜನಿಕ ಸ್ಥಳದಲ್ಲಿ ಹಲವಾರು ಕಣ್ಣುಗಳ ಎದುರೇ ಕೊಲೆ ನಡೆದರೂ ಸರಿಯಾದ ಸಾಕ್ಷಿ ಯಾರೂ ಇರಲಿಲ್ಲ. ಇದ್ದರೂ ಹೇಳಲಿಲ್ಲ. ಭೂಗತ ಲೋಕದ ಮಂದಿಗೆ ಹೆದರಿದ ಜನ ಸಾಕ್ಷಿ ಹೇಳಲು ಹೆದರುತ್ತಾರೆ. ಅಮರ್ ಆಳ್ವ ಪ್ರಕರಣದಲ್ಲಿ ಆದದ್ದೂ ಅದೇ. ಭುಹುಶಃ ಸುಬ್ಬರಾವ್ ಪ್ರಕರಣದಲ್ಲೂ ಆಗುವುದು ಅದೇ.

೧೬ ವರ್ಷಗಳ ನಂತರ

ಮೊದಲಿಗೆ ಹೋಲಿಸಿದರೆ ಮಂಗಳೂರಿನಲ್ಲಿ ಭೂಗತ ಲೋಕದ ಚಟುವಟಿಕೆಗಳು ಗಣನೀಯವಾಗಿ ಕಡಿಮೆಯಾಗಿವೆ. ಹೀಗಿದ್ದೂ ೧೬ ವರ್ಷಗಳ ನಂತರ ಮಂಗಳೂರಿನಲ್ಲಿ ವ್ಯಕ್ತಿಯೊಬ್ಬರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿದೆ. ಎರಡೂ ಹತ್ಯೆ ನಡೆದಿರುವುದು ಜುಲೈ ತಿಂಗಳಲ್ಲಿ!೧೯೯೨ರದಲ್ಲಿ ರಂದು ಸಂಜೆ ಅಮರ್ ಆಳ್ವನನ್ನು ಹಂಪನಕಟ್ಟೆ ಸಮೀಪ ಲಾಟರಿ ಅಂಗಡಿಯಲ್ಲಿ ಮೆಶಿನ್‌ಗನ್‌ನಿಂದ ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಅದರ ನಂತರ ಈಗ ನಡೆದಿರುವ ಸುಬ್ಬರಾವ್ ಹತ್ಯೆ. ಇದು ಮಂಗಳೂರು ನಗರದಲ್ಲಿ ನಡೆದ ಎರಡನೇ ಶೂಟೌಟ್ ಪ್ರಕರಣ.೧೯೯೨ರ ಜು.೧೪ರಂದು ರಾತ್ರಿ ೭.೪೫ಕ್ಕೆ ನಾಲ್ಕು ಜನರಿದ್ದ ಹಂತಕ ಪಡೆ ಲಾಟರಿ ಅಂಗಡಿ ಎದುರಿದ್ದ ಅಮರ ಆಳ್ವ ಮೇಲೆ ಯದ್ವಾತದ್ವಾ ಗುಂಡು ಹಾರಿಸಿತ್ತು.ಸುಬ್ಬರಾವ್ ಹತ್ಯೆ ಕೂಡ ನಡೆದಿರುವುದು ಕೂಡ ರಾತ್ರಿ ೯.೪೫ಕ್ಕೆ. ೧೬ ವರ್ಷದ ಹಿಂದೆ ಶೂಟೌಟ್ ನಡೆದ ಹಂಪನಕಟ್ಟೆಯಿಂದ ಕೇವಲ ೧ ಕಿ.ಮೀ. ಅಂತರದಲ್ಲಿ ಈಗ ಇನ್ನೊಂದು ಶೂಟೌಟ್ ನಡೆದಿದೆ. ಇದರಲ್ಲಿ ಸುಬ್ಬರಾವ್ ಅವರಿಗೆ ತೀರ ಸಮೀಪದಿಂದ ಅಂದರೆ ೧೦ ಅಡಿ ಅಂತರದೊಳಗಿನಿಂದ ಗುಂಡು ಹಾರಿಸಲಾಗಿದೆ.ಸಾಮಾನ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಭೂಗತ ಜಗತ್ತಿನ ವ್ಯಕ್ತಿಗಳು ತಲವಾರು ಬಳಸುತ್ತಾರೆ. ಗುಂಡು ಹಾರಿಸಿರುವ ಕಾರಣ ಮುಂಬಯಿ ಭೂಗತ ಜಗತ್ತಿನ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ.

ಬಿಲ್ಡರ್ ಸುಬ್ಬರಾವ್ ಹತ್ಯೆ




ಮಯೂರ ಬಿಲ್ಡರ್ ಸಂಸ್ಥೆ ಮಾಲಿಕ ಸುಬ್ಬರಾವ್ ಅವರನ್ನು ಸೋಮವಾರ ರಾತ್ರಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಕೆ.ಎಸ್.ರಾವ್ ರಸ್ತೆಯ ಗಣೇಶ ಮಹಲ್ ಕಾಂಪ್ಲೆಕ್ಸ್‌ನ ಕೆಳಮಹಡಿಯಲ್ಲಿರುವ ಕಚೇರಿಯಿಂದ ಮನೆಗೆ ಹೋಗಲೆಂದು ಸೋಮವಾರ ರಾತ್ರಿ ೯.೪೫ಕ್ಕೆ ಸುಬ್ಬರಾವ್ ಅವರು ಕೆ.ಎಸ್. ರಾವ್ ರಸ್ತೆಗೆ ಆಗಮಿಸಿದಾಗ ದುಷ್ಕರ್ಮಿ ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾನೆ. ಸುಬ್ಬರಾವ್ ಅವರಿಗೆ ಮೂರು ಗುಂಡು ತಾಗಿದ್ದರೆ, ಇನ್ನೊಂದು ಗುಂಡು ಕಾರಿನ ಕಿಟಕಿ ಗಾಜಿಗೆ ತಾಗಿ ಕರಾವಳಿ ಮಾರುತ ಪತ್ರಿಕೆಯ ಸಂಪಾದಕ ಸುದೇಶ್ ಅವರ ಕೈಗೆ ಸವರಿಕೊಂಡು ಹೋಗಿದೆ. ಒಂದು ಗುಂಡು ಗುರಿತಪ್ಪಿದೆ. ಘಟನಾ ಸ್ಥಳದಲ್ಲಿ ಒಂದು ಸಜೀವ ಗುಂಡು ದೊರೆತಿದೆ. ಕಾರಿನಲ್ಲಿ ಕೂಡ ಗುಂಡು ತಾಗಿದ ಕುರುಹು ಪತ್ತೆಯಾಗಿದೆ.ಒಟ್ಟು ಮೂವರು ಈ ಕೃತ್ಯದಲ್ಲಿ ಪಾಲ್ಗೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಸುಬ್ಬರಾವ್ ಅವರನ್ನು ಮನೆಗೆ ಕರೆದುಕೊಂಡು ಹೋಗಲೆಂದು ಸುದೇಶ್ ಕಾರನ್ನು ಕೆ.ಎಸ್. ರಾವ್ ರಸ್ತೆಯಲ್ಲಿ ತಂದು ನಿಲ್ಲಿಸಿದ್ದರು. ಸುದೇಶ್ ಮತ್ತು ಸುಬ್ಬರಾವ್ ಕಚೇರಿಯಿಂದ ರಸ್ತೆಗೆ ಬಂದಿದ್ದರು. ಸುದೇಶ್ ಚಾಲಕ ಸೀಟಿನಲ್ಲಿ ಕುಳಿತಿದ್ದರು. ಸುಬ್ಬರಾವ್ ಅವರು ಕಾರಿನ ಇನ್ನೊಂದು ಬದಿಯಿಂದ ಮುಂದಿನ ಸೀಟಿನಲ್ಲಿ ಕುಳಿತುಕೊಳ್ಳಲೆಂದು ಬಾಗಿಲು ತೆಗೆಯಲು ಕೈ ಇಟ್ಟ ಸಂದರ್ಭ ದುಷ್ಕರ್ಮಿ ಮೊದಲ ಗುಂಡು ಹಾರಿಸಿದ್ದಾನೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಮೊದಲ ಗುಂಡು ಯಾರಿಗೂ ತಾಗಿಲ್ಲ. ಎರಡು, ಮೂರು ಮತ್ತು ನಾಲ್ಕನೇ ಗುಂಡು ಸುಬ್ಬರಾವ್ ಅವರಿಗೆ ತಾಗಿದೆ. ಸುಬ್ಬರಾವ್ ಕುಸಿದು ಬಿದ್ದ ಪರಿಣಾಮ ಐದನೇ ಗುಂಡು ಕಾರಿನ ಕಿಟಕಿ ಗಾಜು ಪುಡಿ ಮಾಡಿ ಒಳ ನುಗ್ಗಿ ಸುದೇಶ್ ಅವರ ಎಡಗೈ ತೋಳು ಸವರಿಕೊಂಡು ಹೋಗಿದೆ.
ಘಟನಾ ಸ್ಥಳದಲ್ಲಿಯೇ ಇದ್ದ ಮಿಥುನ್ ತಕ್ಷಣ ಚೇತರಿಸಿಕೊಂಡು ಗುಂಡಿಕ್ಕಿದವನ ಬೆನ್ನಟ್ಟಲು ಯತ್ನಿಸಿದರು. ಆದರೆ ದುಷ್ಕರ್ಮಿಗಳಲ್ಲಿ ಒಬ್ಬ ಸುಜಾತ ಹೋಟೆಲ್ ತಿರುವಿನಲ್ಲಿ ಬೈಕ್ ಚಾಲೂ ಇಟ್ಟು ಕಾಯುತ್ತಿದ್ದ. ಗುಂಡಿಕ್ಕಿದ ವ್ಯಕ್ತಿ ಬೈಕ್ ಏರಿ ಪರಾರಿಯಾಗಿದ್ದಾರೆ. ಮಿಥುನ್ ಓಡುವಾಗ ಆರಂಭದಲ್ಲಿಯೇ ಒಬ್ಬ ವ್ಯಕ್ತಿ ಅಡ್ಡ ಬಂದಿದ್ದು, ಆತನೂ ಕೊಲೆಯ ಸಂಚಿನ ಭಾಗೀದಾರನಾಗಿರುವ ಸಾಧ್ಯತೆ ಇದೆ. ಹತ್ಯೆ ನಡೆಸಿದ ವ್ಯಕ್ತಿ ಕುಳ್ಳಗೆ, ತೆಳ್ಳಗೆ ಇದ್ದು, ಯುವಕನಂತಿದ್ದ ಎಂದು ಸುದೇಶ್ ಹೇಳುತ್ತಾರೆ.ಸುಬ್ಬರಾವ್ ನಗರದಲ್ಲಿ ಹಲವು ವರ್ಷದಿಂದ ಮಯೂರ ಮಿನಿ ಥಿಯೇಟರ್, ಸಿಡಿ ಅಂಗಡಿಗಳನ್ನು ನಡೆಸುತ್ತಿದ್ದರು. ಭ್ಲ್ಯೂಫಿಲಂ ಮಾಫಿಯಾದಲ್ಲೂ ಗುರುತಿಸಿಗೊಂಡಿದ್ದರು. ಎರಡೂವರೆ- ಮೂರು ವರ್ಷದ ಹಿಂದೆ ಸುಬ್ಬರಾವ್ ಅವರು ರಿಯಲ್ ಎಸ್ಟೇಟ್ ಮತ್ತು ಕಟ್ಟಡ ನಿರ್ಮಾಣ ಉದ್ಯಮಕ್ಕೆ ಇಳಿದಿದ್ದರು. ಅದರ ನಂತರವೇ ಅಂದರೆ ಒಂದೂವರೆ ವರ್ಷದ ಹಿಂದೆ ಅವರಿಗೆ ಬೆದರಿಕೆ ಕರೆಗಳು ಬಂದಿದ್ದವು. ಆದರೆ ಇತ್ತೀಚೆಗೆ ಸುಬ್ಬರಾವ್ ಸುದ್ದಿಯಲ್ಲಿ ಇರಲಿಲ್ಲ. ಮಯೂರ ಬಿಲ್ಡರ್ಸ್ ವತಿಯಿಂದ ಪಾಂಡೇಶ್ವರದಲ್ಲಿ ಒಂದು ಅಪಾರ್ಟ್‌ಮೆಂಟ್ ನಿರ್ಮಾಣ ಪೂರ್ಣಗೊಂಡಿದ್ದು, ಕದ್ರಿಯಲ್ಲಿ ಇನ್ನೊಂದು ಅಪಾರ್ಟ್‌ಮೆಂಟ್ ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಉದ್ಯಮದಲ್ಲಿನ ದ್ವೇಷ ಅಥವಾ ವ್ಯವಹಾರದಲ್ಲಿನ ದ್ವೇಷವೇ ಹತ್ಯೆಗೆ ಕಾರಣ ಎಂದು ಶಂಕಿಸಲಾಗಿದೆ.
ಸುಬ್ಬರಾವ್ ಅವರಿಗೆ ಸಧ್ಯ ಬೆದರಿಕೆ ಕರೆಗಳು ಬಂದ ಬಗ್ಗೆ ಮಾಹಿತಿ ಇಲ್ಲ ಎಂದು ಎಸ್ಪಿ ಸತೀಶ ಕುಮಾರ್ ಹೇಳಿದ್ದಾರೆ. ಮಂಗಳೂರು ಗ್ರಾಮಾಂತರ ಸರ್ಕಲ್ ಇನ್‌ಸ್ಪೆಕ್ಟರ್ ಜಯಂತ ವಿ. ಶೆಟ್ಟಿ ಅವರ ನೇತೃತ್ವದಲ್ಲಿ ಒಂದು ತಂಡ ಈಗಾಗಲೇ ಆರೋಪಿಗಳ ಪತ್ತೆಗೆ ಕಾರ್ಯ ಪ್ರವೃತ್ತವಾಗಿದೆ. ಬಂದರು ಇನ್‌ಸ್ಪೆಕ್ಟರ್ ಉಮೇಶ ಶೇಟ್ ನೇತೃತ್ವದಲ್ಲಿ ಇನ್ನೊಂದು ತಂಡ ತನಿಖೆ ನಡೆಸಲಿದೆ.

Sunday, July 29, 2007

ಮಂಥನದ ಕುರಿತು ಚಿಕ್ಕ ಚಿಂತನೆ

ಚಿಕ್ಕ ವಾಕ್ಯ. ಎಲ್ಲ ಅರ್ಧರ್ಧ. ನ್ಯಾಚುರಲ್ಲು ಅನಿಸಲ್ಲ. ವಾಕ್ಯ ಆರ್ಧಕ್ಕೇ ತುಂಡಾಗುತ್ತೆ. ಮನಸ್ಸಿಗೆ ಹರ್ಟಾಗುತ್ತೆ. ಧಾರಾವಾಹಿ ನೋಡೋದು ಸಾಕು ಅನ್ಸತ್ತೆ. ಚಾನಲ್ ಬದಲಾಯಿಸಿದ್ರೆ ಮನ್ಸು ನಿರಾಳ.
ಅಯ್ಯೋ! ಈ ಮಂಥನ ಧಾರವಾಹಿ ಪ್ರಭಾವ. ಈಟಿವಿಲಿ ರಾತ್ರಿ ೧೦.೦೦ ಗಂಟೆಗೆ ಪ್ರಸಾರವಾಗೋ ಧಾರಾವಾಹಿ ನೋಡಿದ ಪರಿಣಾಮ. ನಾನೂ ಅದೇ ಥರ ಬರೆಯೋಕೆ ಶುರುಮಾಡಿಬಿಟ್ಟೆ. ಅದೇಕೋ? ಅದೇನೋ? ಇತ್ತೀಚೆಗೆ ಮಂಥನ ಧಾರವಾಹಿ ನೋಡೋಕೆ ಕಷ್ಟ ಆಗ್ತಿದೆ. ಡೈಲಾಗ್‌ಗಳೆಲ್ಲ ಅರ್ಧರ್ಧ. ಒಂಥರಾ ಆರ್ಟಿಫಿಶಿಯಲ್ಲು ಅನ್ನಿಸೋಕೆ ಶುರುವಾಗಿದೆ. ಲಂಚ ಪಡೆಯದಿರೋ ಅಪರೂಪದ (ಸೌಂದರ್ಯದಲ್ಲಿ ಮತ್ತು ನಿಯತ್ತಿನಲ್ಲಿ) ಡಿಸಿಯನ್ನೇ ಕೇಂದ್ರೀಕರಿಸಿ ಇರೋ ಕಥೆ ಆರಂಭದಲ್ಲಿ ಚೆನ್ನಾಗಿದೆ ಅನ್ನಿಸುತ್ತಿತ್ತು. ಬರಬರುತ್ತ ಬೋರ್ ಆಗ್ತಿದೆ. ಅಪ್ಪ- ಮಗಳು ಮಾತಾಡುವಾಗಲೂ ಹರ್ಟ್ ಆಗುತ್ತೆ, ಮನಸ್ಸು ನಿರಾಳ ಅಂತೆಲ್ಲ ಶಬ್ದಗಳ ಪ್ರಯೋಗ. ನಾವು ನಮ್ಮ ತಂದೆ-ತಾಯಿಯ ಬಳಿ ಮಾತಾಡುವಾಗ ‘ಹರ್ಟ್-ನಿರಾಳ’ ಎಂಬೆಲ್ಲ ಶಬ್ದ ಬಳಸುತ್ತೇವಾ? ಖಂಡಿತ ಇಲ್ಲ. ಆಡು ಭಾಷೆಯಲ್ಲಿ ನಿರಾಳ ಅನ್ನೋ ಶಬ್ದದ ಬಳಕೆಯೇ ನಿಂತುಹೋಗಿದೆ. ಇದ್ದುದರಲ್ಲಿ ಶಿವಶಂಕರ ರೆಡ್ಡಿ ಡೈಲಾಗ್‌ಗಳು ಚೆನ್ನಾಗಿರುತ್ತವೆ.
ಇಂತಹ ಕಾರಣಗಳಿಗಾಗಿಯೇ ಮಂಥನ ನೋಡೋವಾಗ ಕಿರಿಕಿರಿ ಅನ್ನಿಸ್ತಾ ಇದೆ. ನಿಮಗ್ಯಾರಿಗಾದ್ರೂ ಮಂಥನ ಧಾರವಾಹಿ ಡೈಲಾಗ್ ಬರೆಯೋರು ಪರಿಚಯ ಇದ್ರೆ ಪ್ಲೀಸ್ ಅವ್ರಿಗೆ ತಿಳ್ಸಿ.
ಇದೇ ಥರದ ಸಮಸ್ಯೆ ಟಿವಿ೯ ನ್ಯೂಸ್ ನೋಡೋವಾಗಲೂ ಉಂಟು. ಅವರೂ ಅಷ್ಟೆ ಸುದ್ದಿಯನ್ನು ಮಾತನಾಡುವ ಭಾಷೆಯಲ್ಲಿ ಓದುತ್ತಾರೆ. ಅದು ಕೇಳೋಕೆ ಅಷ್ಟು ಚೆನ್ನಾಗಿರುವುದಿಲ್ಲ. ಸುದ್ದಿಯನ್ನು ಹೇಗೆ ಓದಬೇಕೋ ಹಾಗೆ ಓದಬೇಕು. ಅದು ನಮ್ಮ ಮನಸ್ಸಿನಲ್ಲಿ ಸ್ಥಿರವಾಗಿದೆ. ಸುದ್ದಿ ಎಂದರೆ ಹೀಗೇ ಓದಬೇಕು ಅಂತ ಮನಸ್ಸಿನಲ್ಲಿ ಪಕ್ಕಾಗಿದೆ. ಹಾಗಾಗಿ ಬೇರೆ ಥರ ಓದಿದರೆ ಸ್ವೀಕರಿಸೋದು ಕಷ್ಟ. ಅದಕ್ಕಿಂತ ಹೆಚ್ಚಾಗಿ ಆಡು ಬಾಷೆಯಲ್ಲಿ ಸುದ್ದಿ ಓದಿದರೆ ಗಂಭೀರ ಅಂತ ಅನ್ನಿಸೋದೇ ಇಲ್ಲ. ನೀವೇನಂತೀರಾ?

Wednesday, July 25, 2007

ಹೆ(ವಿ)ಲಿಕಾಪ್ಟರು ಮತ್ತು ಕಾಲೇಜು



ಕ್ರಿಕೆಟ್ಟು, ಫಿಲ್ಮು ನೋಡುವಾಗ ಪಕ್ಕನೆ ಕರೆಂಟ್ ಹೋಗೋದು, ಹಾರೋ ಹೆಲಿಕಾಪ್ಟರ್‌ಗಳು ತಟ್ಟನೆ ಕೆಳಗಿಳಿಯೋದು ಎರಡೂ ಇತ್ತೀಚೆಗೆ ಹೆಚ್ಚಾಗ್ಬಿಟ್ಟಿವೆ. ಒಂದು ವರ್ಷದ ಹಿಂದೆ ಶಿರಸಿಯಲ್ಲಿ ಒಂದು ಹೆಲಿಕಾಪ್ಟರ್ ಬಂದು ಮರದ ಮೇಲೆ ಪವಡಿಸಿತ್ತು. ಕಳೆದ ವಾರ ಸೋನಿಯಾ ಗಾಂಧಿಯ ಕಾರ್ಯಕ್ರಮದಲ್ಲಿ ಒಂದು ಹೆಲಿಕಾಫ್ಟರ್ ಗಡಿಬಿಡಿಯಲ್ಲಿ ಕೆಳಗಿಳಿಯಿತು. ಹಿಂದಿನ ವಾರ ಹೀಗೆ ಗಡಿಬಿಡಿ ಮಾಡಿದ ಚಿಕ್ಕ ವಿಮಾನ ಸೌಂದರ್ಯ ಸೇರಿದಂತೆ ನಾಲ್ಕು ಜನರ ಜೀವ ತಗೊಂಡು ಹೋಯ್ತು.

ಇತ್ತೀಚೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಎರಡು ಬಾರಿ ಇಳಿಯಬೇಕಾದಲ್ಲಿ ಇಳಿಯದೆ ಇನ್ನೆಲ್ಲೋ ಇಳಿದರು. ಒಮ್ಮೆ ಕೆರೆಯಲ್ಲಿ ಹೆಲಿಕಾಫ್ಟರ್ ಇಳಿದರೂ, ನೀರಿಲ್ಲದೇ ಇದ್ದುದರಿಂದ ಬಚಾವಾದರು.ಈ ಹೆಲಿಕಾಫ್ಟರ್‌ಗಳು ಯಾಕ್ಬೀಳ್ತವೆ? ಹಾರೋವಾಗ ಇದ್ದಕ್ಕಿಂದ್ದಂಗೆ ಭೂಮಿಗೆ ಗುರುತ್ವಾಕರ್ಷಣ ಶಕ್ತಿ ಇದೆ ಅಂತ ಅದ್ಕೆ ನೆನಪಾಗಿ ಬಿಡುತ್ತಾ? ಅಥವಾ ಈ ರಾಜಕಾರಣಿಗಳಿಗೆ ಒಂದು ಪಾಠ ಕಲ್ಸೋಣ ಅಂತ ವಿಚಾರ ಮಾಡುತ್ತಾ? ಹೋಗ್ತಿದ್ದಂಗೆ ಸುಸ್ತಾಗಿ ಬಿಡುತ್ತಾ? ಗೊತ್ತಾಗಿಲ್ಲ.

ಈ ಹೆಲಿಕಾಪ್ಟರ್‌ಗಳು ಬೀಳೋ ಬಗ್ಗೆ ಒಂದು ಜೋಕಿದೆ. ಒಬ್ಬ ಹೆಲಿಕಾಪ್ಟರ್ ಚಲಾಯಿಸ್ಕೊಂಡು ಹಿಮಾಲಯದ ಮೇಲೆ ಹೋಗ್ತಿದ್ನಂತೆ. ಆಗ ಚಳಿ ಆಯ್ತು ಅಂತ ಹೆಲಿಕಾಪ್ಟರ್‌ನ ಫ್ಯಾನ್ (ಮೇಲೆ ತಿರುಗುತ್ತಾ ಇರುತ್ತಲ್ಲ) ಆಫ್ ಮಾಡಿಬಿಟ್ನಂತೆ. ಹಾಗೆ ಮೇಲೆ ಹಾರಾಡ್ತಿದ್ದವ ಕೆಳಗೆ ಬರೋದ್ಕಿಂತ ಮೇಲೆ ಹೋಗೋದೆ ಹತ್ರ ಹಂತ ಮೇಲೇ ಹೋಗ್ಬಿಟ್ನಂತೆ.ಈ ಹೆಲಿಕಾಪ್ಟರ್‌ಗಳು ಒಂಥರಾ ವಿಚಿತ್ರ. ಅದರಲ್ಲಿ ಯಾರೇ ಕುಳಿತಿರಲಿ. ಎಲ್ಲೇ ಹಾರುತ್ತಿರಲಿ ಇಳೀಬೇಕು ಅನ್ನಿಸಿದರೆ ಯಾರ ಮಾತೂ ಕೇಳದೇ ಅಲ್ಲೇ ತಕ್ಷಣ ಇಳಿದೇ ಬಿಡುತ್ವೆ. ಹೆಲಿಕಾಪ್ಟರ್ರೇ ಹಾಗೆ. ಅದು ಯಾರನ್ನೂ ಕ್ಯಾರ್ ಮಾಡಲ್ಲ. ಒಪ್ತೀರಿ ತಾನೆ. ಒಪ್ಲೇ ಬೇಕು. ಹಂಗಿದೆ ಹೆಲಿಕಾಪ್ಟರ್ ಮಹಿಮೆ.

ನಮ್ಮ ಯು.ಬಿ. ಕಂಪನಿ ಮಾಲಿಕ ಹಂಗನ್ನೋದಕ್ಕಿಂತ ಜನತಾಪಕ್ಷದ ಸಂಸ್ಥಾಪಕ ಅನ್ನೋದು ಸೂಕ್ತ. ಇಲೆಕ್ಷನ್ ಹತ್ರ ಬಂತಲ್ಲಾ ಅದ್ಕೆ. ಅವರ್‍ನ ಹೊತ್ಕೊಂಡು ಹೊಂಟಿದ್ದ ಹೆಲಿಕಾಪ್ಟರ್ ಇದ್ದಂಕ್ಕಿಂದ್ದಂಗೆ ಕೆಳಗಿಳಿದು ಬಿಡ್ತು. ಜನರಿಗೆ ಬಿಯರ್ ಕುಡಿಸಿದ ಪುಣ್ಯ ಮಲ್ಯ ಸಾಹೇಬ್ರು ಬಚಾವಾದ್ರು. ನಮ್ಮ ಮಾಜಿ ಪ್ರಧಾನಿ ಮುರಾರ್ಜಿ ದೇಸಾಯಿ ಅವರಿದ್ದಾರಲ್ಲ. ಅವರನ್ನೂ ಈ ಹೆಲಿಕಾಪ್ಟರ್ ಒಮ್ಮೆ ಕೆಳಗಿಳಿಸಿಬಿಟಿತ್ತು. ಮೊರಾರ್ಜಿ ಅವರು ಹಿಂಗೆ ಹಾರ್‍ಕೊಂಡು ಹೊಯ್ತಾ ಇರೋವಾಗ ಆ ಹೆಲಿಕಾಫ್ಟರ್‌ಗೆ ಎನನ್ಸಿತೋ ಏನೋ ಚಾಲಕನ ಮಾತು ಕೇಳದೆ ಹಠ ಹಿಡೀತು. ಅದರ ಹಠಕ್ಕೆ ಚಾಲಕ ಬಗ್ಗಿದನೋ ಇಲ್ಲವೋ ಹೆಲಿಕಾಪ್ಟರ್ ಕೆಳಗಿಳಿದಿತ್ತು.

ಇಳಿದು ಇಳಿದು ಲ್ಯಾಂಡ್ ಆದ್ದು ಎಲ್ಲಿ ಗೊತ್ತಾ? ಪಕ್ಕಾ ಕೆಸರು ಗದ್ದೆಯಲ್ಲಿ. ಅದೂ ನಾಟಿ ಕೆಲಸ ಮಾಡುತ್ತಿದ್ದವರ ಎದುರಲ್ಲೇ!ಪ್ರಧಾನಿಯಾದರೇನು? ಅನಿವಾರ್ಯ. ಕೆಸರಲ್ಲಿ ಇಳೀಲೇ ಬೇಕು. ಹಾರೋ ಲೋಹದ ಹಕ್ಕಿಯೊಂದು ಪಕ್ಕನೆ ಗದ್ದೆಯಲ್ಲೇ ಇಳಿದದ್ದು ಕಂಡು ಜನ ಬೆರಗಾಗಿ ನೋಡುತ್ತಿರುವಂತೆ ಮುರಾರ್ಜಿ ಕೆಸರು ಗದ್ದೆಯಲ್ಲಿ ಪಚಪಚನೆ ನಡೆದು ಬಂದರು. ಬಿಳಿ ಧೋತಿ ಉಟ್ಟ ಮನುಷ್ಯ ಗದ್ದೆಯಲ್ಲಿ ಬಂದಿದ್ದು ನೋಡಿ ಅಲ್ಲಿರೋರಿಗೆಲ್ಲ ಆಶ್ಚರ್ಯ. ಅವರಿಗೇನು ಗೊತ್ತು ದೇಶದ ಪ್ರಧಾನಿ ಇಳ್ದು ಬರ್‍ತಿರೋದು ಅಂತ!! ಎದ್ನೋ ಬಿದ್ನೋ ಅಂತ ಸ್ಥಳಕ್ಕೆ ಧಾವಿಸಿದ ಪೊಲೀಸರು ಅವರನ್ನು ಕರೆದುಕೊಂಡು ಹೋದರು.

ಹುಬ್ಬಳ್ಳಿ ಸಮೀಪ ರಾಜೀವ ಗಾಂಧಿ ಅವರ ಹೆಲಿಕಾಪ್ಟರ್ ಇಳಿದಾಗ ಅವರು ರಸ್ತೆವರೆಗೆ ನಡೆದುಕೊಂಡು ಬಂದು ಹೋಗುತ್ತಿರುವ ವಾಹನಕ್ಕೆ ಕೈ ಮಾಡಿ ಹತ್ತಿ ಹುಬ್ಬಳ್ಳಿ ತಲುಪಿದ್ದರು. ಬುಲೆಟ್‌ಪ್ರೂಫ್ ಕಾರಿಲ್ಲ. ಬೆಂಗಾವಲು ಪಡೆಯಿಲ್ಲ. ಏನೂ ಇಲ್ಲ. ಸಾದಾ ಮನುಷ್ಯನಂತೆ ರಸ್ತೆ ಬದಿಗೆ ನಿಂತು ಕೈ ಮಾಡಿದ್ದರು. ರಾಜೀವ ಗಾಂಧಿ ಅಂತ ಗುರುತಿಸಿದ ಯಾರೋ ಕಾರು ನಿಲ್ಲಿಸಿದ್ದರು.

ಇದೆಲ್ಲದಕ್ಕಿಂತ ಇಂಟರೆಸ್ಟಿಂಗ್ ಆದ ವಿಷ್ಯ ಇನ್ನೊಂದಿದೆ. ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ. ಅವರನ್ನೂ ಹೆಲಿಕಾಪ್ಟರ್ ಕೆಳೆಗಿಳಿಸದೇ ಬಿಟ್ಟಿಲ್ಲ. ಒಮ್ಮೆ ರಾಮಕೃಷ್ಣ ಹೆಗಡೆ ಅವರಿದ್ದ ಹೆಲಿಕಾಪ್ಟರ್ ಕಡೂರಿನ ಪಂಚನಹಳ್ಳಿಯಲ್ಲಿ ಕೆಳಗಿಳೀತು. ಪುಣ್ಯಕ್ಕೆ ಮೈದಾನದಲ್ಲೇ ಇಳಿದಿತ್ತು. ಮುಖ್ಯಮಂತ್ರಿ ಅಲ್ವಾ? ಕೆಲವರಿಗೆ ಪರಿಚಯ ಇತ್ತು. ಒಂದು ಮನೆಗೆ ಕರೆದುಕೊಂಡು ಹೋಗಿ ಕೂರಿಸಿದ್ರು. ಚಹಾನೂ ಕೊಟ್ರು. ಹೀಗೆ ಮಾತಾಡ್ತಾ ಮಾತಾಡ್ತಾ ಹೇಗೂ ಹೆಲಿಕಾಪ್ಟರ್ ಮಹಿಮೆಯಿಂದ ಪಂಚನಹಳ್ಳಿಯಲ್ಲಿ ಇಳಿದ್ದೀರಿ. ಸುರಕ್ಷಿತವಾಗೂ ಇದ್ದೀರಿ. ಅದರ ನೆನಪಿಗೆ ಊರಿಗೆ ಏನಾದರೊಂದು ಯೋಜನೆ ಘೋಷಣೆ ಮಾಡಿ ಅಂತ ಯಾರೋ ಸಲಹೆ ಮುಂದಿಟ್ಟರು.

ಮುಖ್ಯಮಂತ್ರಿ ಅಲ್ವಾ? ಏನ್ಬೇಕೋ ಕೇಳಿ ಅಂದ್ಬಿಟ್ರು ಹೆಗಡೆ. ಸರಿ ಜನ ಕಾಲೇಜು ಕೇಳಿದ್ರು. ಹೆಗಡೆ ತಥಾಸ್ತು ಅಂದ್ರು. ಇಂದು ಹೆಗಡೆ ಇಲ್ಲ. ಆದರೆ ಅಂದು ಅವರ ಹೆಲಿಕಾಪ್ಟರ್ ಇಳಿದ ಪಂಚನಹಳ್ಳಿ ಮೈದಾನದಲ್ಲಿ ಸರಕಾರಿ ಕಾಲೇಜು ಇದೆ. ಅದನ್ನು ನೋಡಿದಾಗೆಲ್ಲ ಅಲ್ಲಿನವರಿಗೆ ರಾಮಕೃಷ್ಣ ಹೆಗಡೆ ನೆನಪಿಗೆ ಬರ್‍ತಾರೆ.

ಹೆಲಿಕಾಪ್ಟರ್ ಬಿದ್ದು ಏನಾದರೊಂದು ಲಾಭ ಆಗೋ ಹಾಗಿದ್ರೆ ನಮ್ಮೂರಲ್ಲೂ ಒಂದು ಹೆಲಿಕಾಫ್ಟರ್ ಬೀಳ್ಲಿ ಅಥವಾ ಇಳೀಲಿ ಅಂತ ದೇವರಲ್ಲಿ ಪ್ರಾರ್ಥಿಸೋಕೆ ಶುರುಮಾಡ್ಬೇಡಿ!ಒಂದ್ಮಾತ್ ಹೇಳಿ. ಮೇಲೇರಿದವನು ಕೆಳಗಿಳಿಯಲೇ ಬೇಕು ಅಂತ ಎಲ್ಲೆಂದರಲ್ಲಿ ಇಳಿಯೋ ಇಂಥ ಹೆಲಿಕಾಫ್ಟರ್ ನೋಡಿಯೇ ಹೇಳಿದ್ದಾರಾ?

Saturday, July 21, 2007

ಹ್ಯಾಟ್ಸ್ ಆಫ್ ಟು ಜೋಗಿ

ಪ್ರತಿ ಬಾರಿ ಚಲನಚಿತ್ರ ಪ್ರಶಸ್ತಿ ಘೋಷಣೆಯಾದಾಗ ಅಷ್ಟೇನೂ ಸಂತೋಷ ಇರಲಿಲ್ಲ. ಆದರೆ ಈ ಬಾರಿ ಸಂತೋಷವಾಗಿದೆ. ಕಾರಣ ನನ್ನ ಪರಿಚಿತರಿಗೆ, ನಾನು ಮೆಚ್ಚಿಕೊಂಡ ಬರಹಗಾರನಿಗೆ ಪ್ರಶಸ್ತಿ ಬಂದಿದೆ.ಅವರು ನಿಮಗೂ ಗೊತ್ತು. ಬ್ಲಾಗುಗಳ ಲೋಕದಲ್ಲೂ ಅವರು ಮಿಂಚುತ್ತಿದ್ದಾರೆ. ಅವರ ಹೆಸರು ಜೋಗಿ. ಅವರು ಬರೆದ ಸಿನೆಮಾ ಕಥೆಗೆ ಉತ್ತಮ ಕಥೆ ಪ್ರಶಸ್ತಿ ದೊರೆತಿದೆ.ಜೋಗಿ ತುಂಬ ಬರೆಯುತ್ತಾರೆ. ಪುರುಸೊತ್ತಿಲ್ಲದಂತೆ ಬರೆಯುತ್ತಾರೆ. ಅದರ ನಡುವೆ ಬಿಡುವು ಮಾಡಿಕೊಂಡು ಬರೆದದ್ದನ್ನು ಬ್ಲಾಗಿಸುತ್ತಲೂ ಇರುತ್ತಾರೆ. ಬರೆದದ್ದೆಲ್ಲವನ್ನೂ ಚೆನ್ನಾಗಿ ಬರೆಯುತ್ತಾರೆ. ಬಹುಶಃ ಕನ್ನಡದಲ್ಲಿ ತುಂಬ ಬರೆಯುವ ಮತ್ತು ಚೆನ್ನಾಗಿ ಬರೆಯುವ ಮೂವರು ಮಾತ್ರ ಇರೋದು. ವಿಶ್ವೇಶ್ವರ ಭಟ್, ಜೋಗಿ ಮತ್ತುರವಿ ಬೆಳೆಗೆರೆ. ಕೇವಲ ಬರೆದೇ ಹೇಗೆ ಹಣ, ಗೌರವ ಎರಡನ್ನೂ ಗಳಿಸಬಹುದು ಎಂಬುದನ್ನು ತೋರಿಸಿಕೊಟ್ಟವರು ಈ ತ್ರಿಮೂರ್ತಿಗಳು. ಸುದೈವ ಮೂವರೂ ಗೆಳೆಯರು. ಈ ಮೂವರ ಸಾಮಾನ್ಯ ಗುಣವೆಂದರೆ ಗರ್ವ- ಅಹಂ ಇಲ್ಲದೆ ಇರುವುದು. ಇನ್ನೊದು ಸಂತೋಷವೆಂದರೆ ಈ ಮೂವರು ನನಗೆ ಪರಿಚಯ!ಮೂವರ ಬಗ್ಗೆಯೂ ಬರೆಯುತ್ತ ಹೋದರೆ ಸಾಕಷ್ಟಿದೆ. ಆದರೆ ಈಗ ಸಧ್ಯಕ್ಕೆ ಪ್ರಶಸ್ತಿ ಪಡೆದ ಜೋಗಿ ಬಗ್ಗೆ ಮಾತ್ರ ಬರೆಯುತ್ತೇನೆ. ಜೋಗಿ ದಕ್ಷಿಣ ಕನ್ನಡದ ಉಪ್ಪಿನಂಗಡಿಯವರು. ಬಡತನದಲ್ಲಿ ಬೆಳೆದವರು. ಅವರು ಬರಹಗಾರರಾಗಿ ಪ್ರಸಿದ್ಧರಾಗುವುದಕ್ಕಿಂತ ಮೊದಲು ಪಟ್ಟ ಕಷ್ಟ ನೋಡಿದರೆ ಅವರ ಕತೆಯೇ ಒಂದು ಸಿನೆಮಾಕ್ಕೆ ಆಹಾರವಾಗಬಲ್ಲದು ಅನಿಸುತ್ತದೆ.ಜೋಗಿ ಮತ್ತುನನ್ನ ಇನ್ನೊಬ್ಬ ಗೆಳೆಯ ಪ್ಲಸ್ ಗುರು ಪುತ್ತೂರಿನ ಗೋಪಾಲಕೃಷ್ಣ ಕುಂಟಿನಿ ಗೆಳೆಯರು. ಸಹಪಾಠಿಗಳು. ಕುಂಟಿನಿ ಮೂಲಕವೇ ಜೋಗಿಯ ಪರಿಚಯವಾಗಿದ್ದು. ಇಲ್ಲವಾದಲ್ಲಿ ಜೋಗಿಯ ಪರಿಚಯ ನನ್ನಂಥವಿನಗೆಲ್ಲಿ? ಜೋಗಿಯನ್ನು ಮೊದಲ ಬಾರಿಗೆ ನೋಡಿದಾಗ ಸಂತೋಷ. ಬೆಕ್ಕಸ ಬೆರಗು. ಅಷ್ಟು ದೊಡ್ಡ ಬರಹಗಾರ. ಹೇಗಿರುತ್ತಾರೊ ಏನೊ? ನನ್ನಂಥವನ ಬಳಿ ಮಾತಾಡುತ್ತಾರೊ ಇಲ್ಲವೊ ಅಂದುಕೊಂಡಿದ್ದೆ. ಆದರೂ ಗೆಳೆಯ ಕುಂಟಿನ ಜತೆಯಲ್ಲಿದ್ದರಿಂದ ತೊಂದರೆಯಿಲ್ಲ ಅಂತ ಸಮಾದಾನ ಮಾಡಿಕೊಂಡಿದ್ದೆ.ನೋಡಿದಾಗಲೇ ಗೊತ್ತಾದ್ದು ಜೋಗಿ ನನಗಿಂತ ಸಿಂಪಲ್ಲು ಅಂತ. ನೋಡಿದವರು ಯಾರೂ ಜೋಗಿ ಅಷ್ಟು ಚೆನ್ನಾಗಿ ಬರೀತಾನೆ ಅಥವಾ ಈತ ಸಿನೆಮಾಕ್ಕೆ, ಪತ್ರಿಕೆ ಬರೆಯುವವ ಅಂತ ಹೇಳಲು ಸಾಧ್ಯವೇ ಇಲ್ಲ. ಜೋಗಿ ಹಣ ಮಾಡಿರಬಹುದು. ಬೆಂಗಳೂರಲ್ಲಿ ಮನೆ ಕಟ್ಟಿಸಿರಬಹುದು. ಹೆಸರು ಗಳಿಸಿರಬಹುದು. ಆದರೆ ನೋಡಲು ಹಾಗೂ ಊರಿನವರ ಪಾಲಿಗೆ ಅದೇ ಹಳೆಯ ಗಿರೀಶನೇ. ಗಿರೀಶನ ಸಾಧನೆಗೆ ವಂದನೆ.ಜೋಗಿ ಎಷ್ಟು ಚೆನ್ನಾಗಿ ಬರೆಯುತ್ತಾರೆಂದು ಅರಿಯಬೇಕಿದ್ದರೆ ನೀವು ಅವರ ಜಾನಕಿ ಕಾಲಂ ಅಂತ ಪುಸ್ತಕ ಇದೆ. ಓದಿ.ಜೋಗಿ ಏರಿದ ಎತ್ತರ ನೋಡಿದರೆ ನನಗೂ ಅಷ್ಟೆತ್ತರಕ್ಕೆ ಏರಬೇಕೆಂಬ ಆಸೆ. ಸಾಧ್ಯವಾ? ಅದು ಸಾಧ್ಯವಾಗದಿದ್ದರೂ ಪರವಾಗಿಲ್ಲ ಅವರು ದಿನಕ್ಕೆ ಬರೆಯುವ ಅರ್ಧ ಬೇಡ ಕಾಲು ಅಂಶದಷ್ಟಾದರೂ ನನಗೆ ಬರೆಯಲು ಸಾಧ್ಯವಾದರೂ ಸಂತೋಷ.

ಮುಂಗಾರು- ದುನಿಯಾ- ಕಹಾನಿಯಾ

ಎಷ್ಟೋ ದಿನದಿಂದ ಬರೀಬೇಕು ಅಂದ್ಕೊಂಡಿದ್ದೆ. ಆಗಿರ‍ಲಿಲ್ಲ. ಅಥವಾ ಆಲಸಿತನ ಅಂತಾದರೂ ಅಂದ್ಕೊಳ್ಳೀ. ಈಗ ಮುಂಗಾರು ಮಳೆ ಅತ್ಯುತ್ತಮ ಚಿತ್ರ, ದುನಿಯಾ ಎರಡನೇ ಅತ್ಯುತ್ತಮ ಚಿತ್ರ ಅಂತ ಪ್ರಶಸ್ತಿ ಪಡೆದಿವೆ. ಈಗಲೂ ಬರೆಯದೇ ಹೋದರೆ ಮನಸಿನ್ಯಾಗಿನ ಮಾತು ಮನಸಲ್ಲೇ ಉಳಿಯುವ ಸಾಧ್ಯತೆಯಿದೆ.ಮುಂಗಾರು ಮಳೆಗೆ ಜನ ತೋಯ್ದು ಹೋಗಿದ್ದಾರೆ.
ದುನಿಯಾದಲ್ಲಿ ಜನ ಜೀವಿಸುತ್ತಿದ್ದಾರೆ. ಬ್ಲಾಗುಗಳ ಲೋಕದಲ್ಲಿ ಇಣುಕಿದರೂ ಮುಂಗಾರು ಮಳೆಯದ್ದೇ ಸಿಂಚನ. ಮುಂಗಾರು ಮಳೆಯನ್ನು ಹೊಗಳದ ಬ್ಲಾಗೋತ್ತಮರೇ ಇಲ್ಲ ಎಂದರೂ ತಪ್ಪಿಲ್ಲ. ಆದರೆ ನಾನು ಹೇಳ್ತೀನಿ ಮುಂಗಾರು ಮಳೆಗಿಂತ ದುನಿಯಾ ಒಳ್ಳೆಯ ಚಿತ್ರ. ಜೀವನಕ್ಕೆ ಹತ್ತಿರವಾದ ಚಿತ್ರ.ಮುಂಗಾರು ಮಳೆ ಮತ್ತು ದುನಿಯಾ ಎರಡೂ ಸಿನೆಮಾ ನೋಡಿದವನಾಗಿ ನಾನು ಈ ಮಾತು ಹೇಳುತ್ತಿದ್ದೇನೆ. ಮುಂಗಾರು ಮಳೆಯಂತಹ ಚಿತ್ರ ಇರುವಾಗ ಅದಕ್ಕೆ ಸರಿಸಮನಾಗಿ ಶತಕ ಬಾರಿಸಿದ್ದು ದುನಿಯಾದ ಸಾಧನೆ.
ಮುಂಗಾರು ಮಳೆ ಚಿತ್ರ ನೋಡಿದ್ದರೆ ನೆನಪಿಸಿಕೊಳ್ಳಿ. ಗೆಳತಿಯರು ಮದುವೆಗೆ ಬರುತ್ತಾರೆಂದು ನಾಯಕಿ ರೈಲು ನಿಲ್ದಾಣಕ್ಕೆ ಹೊರಟು ನಿಲ್ಲುತ್ತಾಳೆ. ಆಕೆ ಇರುವುದು ಮಡಿಕೇರಿಯಲ್ಲಿ. ಅಲ್ಲಿಗೆ ಹತ್ತಿರ ರೈಲ್ವೆ ನಿಲ್ದಾಣವೆಂದರೆ ಮೈಸೂರು ಅಥವಾ ಮಂಗಳೂರು. ಈ ಎರಡೂ ಊರುಗಳಿಗೆ ಹೋಗುವಾಗಲೂ ಜೋಗ ಸಿಗುವುದಿಲ್ಲ. ಜೋಗ ಇರುವುದು ಉತ್ತರ ಕನ್ನಡ ಹೊನ್ನಾವರದಿಂದ ಸಾಗರಕ್ಕೆ ಅಥವಾ ಶಿವಮೊಗ್ಗಕ್ಕೆ ಹೋಗುವ ರಸ್ತೆಯಲ್ಲಿ. ಆದರೂ ನಾಯಕ- ನಾಯಕಿ ಜೋಗಕ್ಕೆ ಹೋಗುತ್ತಾರೆ. ಇರಲಿ ಅಂದ-ಚೆಂದಕ್ಕೆ ತೋರಿಸಿದ್ದಾರೆ ಅಂದುಕೊಳ್ಳೋಣ.ಹೀಗೆ ನಾಯಕಿ ಗೆಳತಿಯರನ್ನು ಕರೆತರಲು ಹೊರಟಾಗ ಅವಳಪ್ಪ ‘ನೀನು ಮದುಮಗಳು. ಒಬ್ಬಳೇ ಹೋಗಬೇಡ’ ಅಂತ ಹೇಳಿ ಜತೆಯಲ್ಲಿ ಗಣೇಶನನ್ನು ಕಳುಹಿಸುತ್ತಾನೆ. ಅವರು ಜೋಗ-ಗೀಗ ಎಲ್ಲೋ ಸುತ್ತಾಡಿ, ಕುಡಿದು ತೂರಾಡಿ, ಮಯ್ಯಿ-ಮನಸು ಎರಡನ್ನೂ ರಾಡಿ ಮಾಡಿಕೊಂಡು ಎಷ್ಟೋ ಹೊತ್ತಿನ ನಂತರ ಮನೆಗೆ ಮರಳಿ ಬರುತ್ತಾರೆ.
ಅಷ್ಟರಲ್ಲಿ ಗೆಳತಿಯರು ಮನೆ ತಲುಪಿರುತ್ತಾರೆ. ಗೆಳತಿಯರನ್ನು ಕರೆತರಲು ಮನೆಯಿಂದ ಹೋಗುವಾಗ ನಾಯಕಿಯನ್ನು ಒಬ್ಬಳೆ ಕಳುಹಿಸಲು ಒಪ್ಪದ ಅಪ್ಪ ಗೆಳತಿಯರು ಮನೆಗೆ ಬಂದು ಎಷ್ಟೋ ಹೊತ್ತಾದ ನಂತರ ಮನೆಗೆ ಮರಳಿದ ಮಗಳನ್ನು ಏಕೆ? ಏನು? ಎಲ್ಹೋಗಿದ್ರಿ? ಅಂತ ಕೇಳೋದಿಲ್ಲ.ಕೆಲವು ಮನೆಗಳಲ್ಲಿ ಮಗಳು ಕಾಲೇಜಿಂದ ಬರುವಾಗ ೧೫ ನಿಮಿಷ ತಡವಾದರೆ ರಂಪವೆದ್ದು ಹೋಗುತ್ತದೆ. ಅಫ್‌ಕೋರ್ಸ್ ಮುಂಗಾರು ಮಳೆಯ ಥರ ಆಗಿದ್ದರೆ ಯಾರ ಮನೆಯಲ್ಲಾದರೂ ಕೇಳಿರೋರು. ಬೈದಿರೋರು.
ಇದಕ್ಕಿಂತ ತರ್ಕದ ವಿಷಯ ಇನ್ನೊಂದಿದೆ. ನಾಯಕಿಯನ್ನು ಮದುವೆಯಾಗಲು ಬರುವ ಮಿಲಿಟ್ರಿ ಮಾಮ ಹಾಗೂ ಗೆಳೆಯರು ಮದುವೆ ಹಿಂದಿನ ದಿನವಷ್ಟೇ ಮದುವೆ ಮನೆ ಕಡೆ ಬರುತ್ತಿರುತ್ತಾರೆ. ಅವರನ್ನು ದಾರಿಯಲ್ಲಿ ಅಡ್ಡಗಟ್ಟಿ ಹಲ್ಲೆ ನೆಡೆಸಲಾಗುತ್ತದೆ. ಮಿಲ್ಟ್ರಿ ಮಾಮನ ಗೆಳೆಯರೆಲ್ಲ ಎಚ್ಚರ ತಪ್ಪಿ ಬಿದ್ದಿರುವ ದೃಶ್ಯವನ್ನು ಕೂಡ ನಿಮಗೆ ತೋರಿಸಲಾಗುತ್ತದೆ. ಆದರೆ ಮರುದಿನ ಬೆಳಗ್ಗೆ ಮದುವೆಗೆ ಬರುವಾಗ ಮಿಲ್ಟ್ರಿ ಮಾಮ ಅಥವಾ ಅವನ ಗೆಳೆಯರು ಮರ್ಯಾದೆಗೂ ಒಂದು ಚಿಕ್ಕ ಬ್ಯಾಂಡೇಜ್ ಹಾಕಿಕೊಂಡಿರುವುದಿಲ್ಲ. ಇದಪ್ಪ ಸಿನೆಮಾ ಅಂದ್ರೆ!!
ಈ ಕಾರಣಗಳನ್ನು ಇರಿಸಿಕೊಂಡು ನೋಡಿದರೆ ಮುಂಗಾರು ಮಳೆಗೆ ಮಾರ್ಕ್ಸ್ ಕಟ್. ಅದೇನೇ ಇರಲಿ ಜನ ಮೆಚ್ಚಿದ್ದಾರೆ. ತಜ್ಞರು ಪ್ರಶಸ್ತಿ ಕೊಟ್ಟಿದ್ದಾರೆ. ಆದರೂ ನನ್ನದೊಂದು ಸಣ್ಣ ಕ್ಯಾತೆ ಇರಲಿ. ಮುಂದಾದರೂ ಯೋಗರಾಜ ಭಟ್ಟರು ಅವರ ಸಿನಿಮಾದಲ್ಲಿ ಅಲ್ಲಲ್ಲಿ ಇಂತಹ ಸಿಲ್ಲಿ ಮಿಸ್ಟೇಕ್ ಮಾಡದಿರಲಿ.

Friday, July 20, 2007

ರಾಷ್ಟ್ರಪತ್ನಿ!?

ಒಬ್ಬ ಗೆಳೆಯ ಸಿನಿಮಾ ಟಾಕೀಸಿನಲ್ಲಿ ಟಿಕೆಟ್ ಕ್ಯೂನಲ್ಲಿ ನಿಂತಾದ ಸಿಗುತ್ತಾನೆ. ಆದರೂ ಆತ ಕೇಳೋದು "ಸಿನಿಮಾಕ್ಕಾ’? ಸಿನಿಮಾ ಟಿಕೆಟ್ ತಗೊಂಡು ಸಿನೆಮಾಕ್ಕಲ್ಲದೆ ವಿಮಾನದಲ್ಲಿ ಹೋಗೋಕಾಗುತ್ತಾ? ಬೆಳಗ್ಗೆ ಚೆನ್ನಾಗಿ ಡ್ರೆಸ್ ಮಾಡಿ ಬುಕ್ ಹಿಡ್ದು ಕಾಲೇಜಿಗೆ ಹೊರಟಿದ್ರೆ ಪಕ್ಕದ ಮನೆಯವ ಎದುರಿಗೆ ಬಂದು "ಕಾಲೇಜಿಗಾ?’ ಅನ್ನುತ್ತಾನೆ. ಸಿಟ್ಟು ಬಂದ್ರೆ ಇಲ್ಲಾ ಸುಡುಗಾಡಿಗೆ ಅನ್ನಬೇಕಷ್ಟೆ! ನಡ್ಕೊಂಡು ಹೊರಟ್ರೆ ಎದುರಿಗೆ ಸಿಕ್ಕಿದ ಪರಿಚಿತರು ಆರಾಮಾ? ಅಂತಾರೆ. ಎಲಾ ಇವನಾ! ಆರಾಮಿಲ್ಲದೇ ಹೋಗಿದ್ದರೆ ಹೀಗೆ ನಡ್ಕೊಂಡು ಬರೋಕಾಗ್ತಿತ್ತಾ? ಬೆಳಗ್ಗೆ ಸಿಕ್ಕರೆ ತಿಂಡಿ ಆಯ್ತಾ ಅಂತ ಕೇಳ್ತಾರೆ. ಅಕಸ್ಮಾತ್ ನೀವು ಇಲ್ಲಾ ಅಂತ ಹೇಳಿ ನೋಡಿ. ಆತನೇನೂ ನಿಮ್ಮನ್ನ ಹೋಟೆಲ್‌ಗೆ ಕರ್‍ಕೊಂಡು ಹೋಗಿ ತಿಂಡಿ ತಿನ್ಸಲ್ಲ. ಆರಾಮಿಲ್ಲ ಅಂತಂದ್ರೆ ಆಸ್ಪತ್ರೆ ಕರ್‍ಕೊಂಡು ಹೋಗಿ ಔಷಧಿ ಕೊಡಿಸಲ್ಲ.ಪ್ರಶ್ನೆ ಕೇಳೋರಿಗೂ ಗೊತ್ತು ನೀವು ಹೊರಟಿದ್ದು ಸಿನೇಮಾಕ್ಕೆ, ಕಾಲೇಜಿಗೆ ಅಂತ. ಆದ್ರೆ ಎದ್ರು ಕಂಡ ಕೂಡ್ಲೆ ಏನಾದ್ರೂ ಮಾತಾಡ್ಬೇಕಲ್ವಾ? ಅದ್ಕೆ ಹಾಗೆಲ್ಲ ಕೇಳೀಬಿಡ್ತಾರೆ. ನಾವು ಕೂಡ ಅದ್ಕೆ ಹೊರತಲ್ಲ.ಕೆಲವರು ಸಭೆ ಸಮಾರಂಭಗಳಲ್ಲಿ ಮಾತನಾಡುವುದನ್ನು ಗಮನಿಸುತ್ತ ಹೋದರೆ ನಗು ಬರುತ್ತದೆ. ಗಮನಿಸಿದರೆ ನಿಮಗೂ ಇಂಥವು ಸಾಕಷ್ಟು ಸಿಕ್ಕಾವು. ಕೆಲವರು ಮಾತನಾಡುವಾಗ "ನಮ್ಮ ಘನ ಸರಕಾರದ’... ಅಂತ್ಲೇ ಮಾತಿಗೆ ಶುರುವಿಡುತ್ತಾರೆ. ಅಂದರೆ ದ್ರವ ಸರಕಾರ, ಅನಿಲ ಸರಕಾರ ಅಂತ ಬೇರೆ ಸರಕಾರಗಳಿವೆಯೇ? ಅವರು ಮಾತನ್ನು ಮುಂದುವರಿಸುತ್ತ ನಮ್ಮ ಘನ ಸರಕಾರದ ಗೌರವಾನ್ವಿತ ಮಂತ್ರಿಯವರಾದ... ಅನ್ನುತ್ತಾರೆ. ಅರೆ! ಗೌರವಾನ್ವಿತ ಸಚಿವರು ಅಂದರೆ? ಅಗೌರವಾನ್ವಿತ ಸಚಿವರೂ ಇದ್ದಾರೆಯೇ? ಎಂಬ ಸಂಶಯ ಹುಟ್ಟಿಕೊಂಡು ಬಿಡುತ್ತದೆ. ಕೆಲವರು ಗೌರವಾನ್ವಿತ ಶಬ್ದದ ಬದಲು ಮಾನ್ಯ (ಅಮಾನ್ಯ ಸಚಿವರು ಇದ್ದಾರಾ?) ಬಳಸ್ತಾರೆ. ಇನ್ನೂ ಕೆಲವರಿದ್ದಾರೆ ಅವರು ಪೂಜ್ಯ (ಸೊನ್ನೆ-ಝೀರೊ) ಮೇಯರ್ ಅಂತೆಲ್ಲ ಕರೆದು ಅವರನ್ನು (ಅವ)ಮಾನಿಸ್ತಾ ಇರ್‍ತಾರೆ. ಆದ್ರೂ ಪಾಪ ನಮ್ಮ ರಾಜಕಾರಣಿಗಳಿಗೆ ಗೊತ್ತಾಗೋದೇ ಇಲ್ಲ!! ಅವರು ಅದನ್ನೇ ದೊಡ್ಡ ಗೌರವದ ಶಬ್ದ ಅಂದ್ಕೊಡು ಹುಳ್ಳನೆಯ ನಗುವಿನ ಪೋಜ಼ು ಕೊಡುತ್ತಿರುತ್ತಾರೆ.ಸ್ವಾಮೀಜಿಗಳ ವಿಷಯದಲ್ಲೂ ಅಷ್ಟೆ. ಶ್ರೀ ಶ್ರೀ ಶ್ರೀ ಹೀಗೆ ಎಷ್ಟು ಸಾಧ್ಯವೋ ಅಷ್ಟು ಶ್ರೀಗಳನ್ನು ಹಿಂದೆ ಸಿಕ್ಕಿಸಿಯೇ ಅವರ ಹೆಸರು ಬರೆಯಲಾಗುತ್ತದೆ. ಸ್ವಾಮೀಜಿಗಳಿಗೆ ಈ ಶ್ರೀ ಬಗ್ಗೆ ತೀವ್ರ ಆಸಕ್ತಿ- ಆಕ್ಷೇಪ ಇಲ್ಲದಿದ್ದರೂ, ಅಭಿಮಾನಿಗಳಿಗೆ ಮಾತ್ರ ಸ್ವಾಮೀಜಿ ಹೆಸರಿನ ಹಿಂದೆ ಎಷ್ಟು ಸಾಧ್ಯವೋ ಅಷ್ಟು ಶ್ರೀ ಹಾಕಿದಾಗ ಮಾತ್ರ ಸಮಾಧಾನ. ಸತ್ಯವಾಗಿ ಹೇಳಬೇಕೆಂದರೆ ಸ್ವಾಮೀಜಿ ಶಬ್ದ ಇದೆಯಲ್ಲ ಅದರಲ್ಲಿ "ಜಿ’ ಅದು ಗೌರವ ಸೂಚಕ ಶಬ್ಧ. ಹೀಗಿರುವಾಗ ಪುನಃ ಹಿಂದೆ ಶ್ರೀ ಶ್ರೀ ಶ್ರೀ ಬೇಕೆ? ಹೀಗೆ ಹೇಳಿದೆ ಅಂತ ಅಡಿಕೆ ಪತ್ರಿಕೆ ಸಂಪಾದಕರ ಹೆಸರನ್ನು (ಶ್ರೀಪಡ್ರೆ) ಶ್ರೀ ಬಳಸದೇ ಬರೆಯ(ಹೇಳ)ಬೇಡಿ!!ನಮ್ಮ ಕಚೇರಿಯ ಒಬ್ಬರನ್ನು ಕೇಳಿಕೊಂಡು ಒಂದು ದಿನ ಒಬ್ರು ಕಚೇರಿಗೆ ಬಂದಿದ್ರು. ನಾನು ಅವರಿಲ್ಲ ನಾಲ್ಕು ಗಂಟೆ ಮೇಲೆ ಬರ್‍ತಾರೆ ಅಂದೆ. ಅಷ್ಟಂದದ್ದೇ ಸಾಕು ಅಲ್ಲೇ ಸಮೀಪದಲ್ಲಿದ್ದ ಉಜಿರೆ ಕಾಲೇಜು ವಿದ್ಯಾರ್ಥಿ ವಿನುತ "ಸರ್ ನಾಲ್ಕು ಗಂಟೆ ಮೇಲೆ’ ಅಂದೆ ಏನು? ಎನ್ನಬೇಕೆ. ಅದಕ್ಕೆ ಅದೇ ಕಾಲೇಜಿನ ಚೇತನಾ ಕೂಡ ಧ್ವನಿಗೂಡಿಸಿದರು. ಅವರನ್ನು ಯಾವಾಗಲೂ ಇಕ್ಕಟ್ಟಿಗೆ ಸಿಲುಕಿಸುತ್ತಿದ್ದ ನನ್ನನ್ನು ಪೇಚಿಗೀಡು ಮಾಡುವುದು ಅವರ ಉದ್ದೇಶವಾಗಿತ್ತು. ಆದರೆ ನಮ್ಮ ಕಚೇರಿ ಮೊದಲ ಮಹಡಿಯಲ್ಲಿರುವುದರಿಂದ ನಾಲ್ಕು ಗಂಟೆಗೆ ಅವರು ಮೇಲೆ (ಮೊದಲ ಮಹಡಿಗೆ) ಬರುತ್ತಾರೆ. ಅದನ್ನೇ ನಾನು ನಾಲ್ಕು ಗಂಟೆ ಮೇಲೆ ಬರುತ್ತಾರೆ ಎಂದದ್ದು ಎಂದು ವಿವರಿಸಿ ಇಕ್ಕಟ್ಟಿನಿಂದ ಬಚಾವಾದೆ. ಆದರೆ ನಾನಾಡಿದ ಮಾತು ವಾಸ್ತವದಲ್ಲಿ ತಪ್ಪೇ ಆಗಿತ್ತು.ಕೆಲವು ಪದವಿ ಸೂಚಕಗಳನ್ನು ನಾವು ಸ್ತ್ರೀಲಿಂಗ, [ಲ್ಲಿಂಗ ಬಳಸಿ ಕರೆಯೋದರ ಕುರಿತು ಸಾಲಿಗ್ರಾಮದ ನರಸಿಂಹ ಐತಾಳ್ ಅವರು ನನ್ನ ಬಳಿ ಯಾವಾಗಲೂ ತಕರಾರು ತೆಗೆಯುತ್ತಾರೆ. ಅಧ್ಯಕ್ಷ ಶಬ್ದವನ್ನು ಮಹಿಳೆಯರಿಗೆ ಅಧ್ಯಕ್ಷೆ ಎಂದು ಬಳಸುವುದು ತಪ್ಪು ಎಂಬುದು ಅವರ ಅಂಬೋಣ. ಅದೇರೀತಿ ಉಪಾಧ್ಯಕ್ಷೆ, ಪ್ರಾಂಶುಪಾಲೆ, ರಾಜ್ಯಪಾಲೆ ಅಂತೆಲ್ಲ ಬಳಸುತ್ತಾರೆ. ಆದರೆ ಕಾರ್ಯದರ್ಶಿ ಸ್ಥಾನದಲ್ಲಿ ಸ್ತ್ರೀಯರಿದ್ದಾಗ ಕಾರ್ಯ"ದರ್ಶಿನಿ’ ಎಂದು ಬಳಸಬಹುದಲ್ಲ ಅಂತ ಅವರು ಹೇಳುತ್ತಿರುತ್ತಾರೆ.ನಾನು ಅವರು ಒಂದೆರಡು ಬಾರಿ ಈ ವಿಷಯದಲ್ಲಿ ಚರ್ಚಿಸಿದ್ದಿದೆ. ಈ ಚರ್ಚೆ ಏನಿದ್ದರೂ ನಮ್ಮೊಳಗೆ ಇತ್ತು. ಆದರೆ ಇದೇ ಚರ್ಚೆ ರಾಷ್ಟ್ರದಾದ್ಯಂತ ಚರ್ಚೆಗೆ ಬಂದೀತು ಎಂದು ನಾನ್ಯಾವತ್ತೂ ಅಂದುಕೊಂಡಿರಲಿಲ್ಲ. ಪ್ರತಿಭಾ ಪಾಟೀಲ್ ರಾಷ್ಟ್ರಪತಿ ಸ್ಥಾನದ ಅಭ್ಯರ್ಥಿಯಾಗುವುದರೊಂದಿಗೆ ಅದೂ ಆಗಿಹೋಯಿತು.ಔಟ್‌ಸ್ವಿಂಗ್: ಅಧ್ಯಕ್ಷೆ, ಪ್ರಾಂಶುಪಾಲೆ, ರಾಜ್ಯಪಾಲೆ ಎಂದೆಲ್ಲ ಕರೆಯಬಹುದಾದರೆ ಮಹಿಳೆ ರಾಷ್ಟ್ರಪತಿ ಹುದ್ದೆ ಅಲಂಕಿಸಿದರೆ ಆಗ ರಾಷ್ಟ್ರಪತ್ನಿ ಎಂದೂ, ವಿಶ್ವವಿದ್ಯಾಲಯದ (ಕುಲಪತಿ) ಮುಖ್ಯಸ್ಥರಾದ ಮಹಿಳೆಯರನ್ನು "ಕುಲಪತ್ನಿ’ದು ಕರೆದರೂ ಕರೆಯಬಹುದು!!