Friday, June 19, 2009

ಅವಳದ್ದು ರಾಜಧಾನಿ ಎಕ್ಸ್ ಪ್ರೆಸ್, ನಂದು ಹಂಪಿ ಎಕ್ಸ್ ಪ್ರೆಸ್ !

ಅವಳು ರಾಜಧಾನಿ ಎಕ್ಸ್ ಪ್ರೆಸ್ ನಲ್ಲಿ ಹೋಗುತ್ತಿದ್ದಳು. ನಾನು ಹಂಪಿ ಎಕ್ಸ್ ಪ್ರೆಸ್ ನಲ್ಲಿ ಪಯಣಿಸುತ್ತಿದೆ.
ಎರಡೂ ರೈಲುಗಳೂ ‘ಓಡುತ ದೂರ ದೂರ. . .’
ಎರಡೂ ರೈಲು ಬೇರೆ ಬೇರೆ ದಿಕ್ಕಿನಲ್ಲಿ ಓಡುತ್ತಿತ್ತಾದರೂ, ಬಹುಶಃ ಇಬ್ಬರ ಮನಸ್ಸೂ ಒಂದೇ ದಿಕ್ಕಿನಲ್ಲಿ ವಿಚಾರ ಮಾಡುತ್ತಿತ್ತು. ಇಬ್ಬರೂ ಒಂದೊಂದು ಎಕ್ಸ್ ಪ್ರೆಸ್ ಹತ್ತಿದ್ದೆವಾದರೂ ನಮ್ಮ ಮನಸೊಳಗಿನ ದುಗುಡವನ್ನು ಯಾರ ಬಳಿಯೂ ಎಕ್ಸ್ ಪ್ರೆಸ್ ಮಾಡಲಾಗದೆ ತೊಳಲಾಡುತ್ತಿದ್ದೆವು!
ಕಾರಣ ಇಬ್ಬರ ಪಕ್ಕದಲ್ಲೂ ಹತ್ತಿರದವರು ಯಾರೂ ಇರಲಿಲ್ಲ. ಅವಳು ರಾಜಧಾನಿ ಎಕ್ಸ್ ಪ್ರೆಸ್ ರಶ್ಶಿನ ನಡುವೆಯೂ ಒಂಟಿತನ ಅನುಭವಿಸಿದರೆ, ನಾನು ಮನೆಯಲ್ಲಿ ಕೂತು ಒಂಟಿತನ ಓಡಿಸಲೆಂದೇ ವಸುಧೇಂದ್ರರ ಹಂಪಿ ಎಕ್ಸ್ ಪ್ರೆಸ್ ಹತ್ತಿದ್ದೆ!
ವಿಷಯ ಇಷ್ಟೇ. ನನ್ನ ಹೆಂಡತಿಗೆ ಮೂಡುಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ಲೆಕ್ಚರರ್ ಕೆಲಸ ಸಿಕ್ಕಿದೆ. ಹಾಗಾಗಿ ಈಗ ಅವಳೊಂದು ತೀರ, ನಾನೊಂದು ತೀರ.
ನಾನು ಒಂದು ಫೋನು ಕೂಡ ಮಾಡದೆ ಮೋಹನ ಆಳ್ವರು ನನ್ನ ಹೆಂಡತಿಗೆ ಕೆಲಸ ಕೊಟ್ಟಿದ್ದಾರೆ. ಅವರ ಪ್ರೀತಿಗೆ ನಾನು ಮತ್ತು ಅವಳು ಇಬ್ಬರೂ ಋಣಿ. ಆಕೆ ಕನ್ನಡದಲ್ಲಿ ಎಂ.ಎ. ಮಾಡಿ ನಂತರ ಜೋಗಿ ಅವರ ಬರಹದ ಕುರಿತು ಎಂಫಿಲ್ ಪ್ರಬಂಧ ಬರೆದಿದ್ದಾಳೆ. ಇಷ್ಟೆಲ್ಲ ಕಲಿತು ಮನೆಯಲ್ಲಿ ಇರುವ ಹಾಗಾಯ್ತಲ್ಲ ಎಂಬ ಬೇಸರ. ಇಷ್ಟೆಲ್ಲ ಕಲಿತ ಮೇಲೆ ಸ್ವಲ್ಪ ದಿನವಾದರೂ ಕೆಲಸ ಮಾಡಬೇಕು. ಇಲ್ಲವಾದಲ್ಲಿ ಕಲಿತದ್ದೆಲ್ಲ ವೇಸ್ಟ್ ಎಂಬ ಚಿಂತೆ.
ಕೆಲಸವಿಲ್ಲದೆ ಮನೆಯಲ್ಲಿರಲು ಕಷ್ಟ. ಕೆಲಸಕ್ಕೆ ಹೋಗಲು ಇಷ್ಟ. ಗಂಡನ ಬಿಟ್ಟು ಬೇರೆ ಊಡಿನಲ್ಲಿ ಕೆಲಸಕ್ಕೆ ಹೋದರೆ ನಷ್ಟ!
ಈ ಗೊಂದಲದಲ್ಲೇ ದಿನ ಕಳೆದ ಆಕೆ ಅಂತೂ ಅಂತಿಮವಾಗಿ ಕೆಲಸಕ್ಕೆ ಸೇರುವ ನಿರ್ಧಾರ ಕೈಗೊಂಡಳು. ಬೇಡ ಎಂದು ಮಹಿಳಾ ಅಭ್ಯುದಯದ ವಿರೋಧಿಯಾಗಲು ನನಗೆ ಇಷ್ಟವಿರಲಿಲ್ಲ. ಆಕೆಗೆ ಕೆಲಸಕ್ಕೆ ಸೇರುವ ಉಮೇದಿ ಇತ್ತಾದರೂ, ಕೆಲಸ ಸಿಕ್ಕೇ ಬಿಟ್ಟಿತು ಅನ್ನುವಾಗ ಗಂಡನನ್ನು ಬಿಟ್ಟು ಹೋಗಬೇಕಲ್ಲ ಎಂಬ ಕಾರಣಕ್ಕೆ ಅವಳಿಗೆ ಕೆಲಸದ ಬಗ್ಗೆ ವೈರಾಗ್ಯ ಮೂಡಿಬಿಟ್ಟಿತ್ತು. ಆದರೆ ಅರ್ಜಿ ಹಾಕಿದ ಮೇಲೆ, ಆಳ್ವರು ಕೆಲಸ ಕೊಟ್ಟ ಮೇಲೆ ತಿರಸ್ಕರಿಸುವುದು ಸರಿಯಲ್ಲ ಅನ್ನಿಸಿತು.
ಆದರೆ ಕೆಲಸ ಸಿಕ್ಕಿದ ದಿನದಿಂದ ಕೆಲಸ ಸಿಕ್ಕಿತು ಎಂಬ ಸಂತೋಷಕ್ಕಿಂತ ನನ್ನ ಬಿಟ್ಟು ಹೋಗಬೇಕಲ್ಲ ಎಂಬ ದುಃಖ ಅವಳಲ್ಲಿ ಹೆಚ್ಚಾಗಿತ್ತು. ಮಾತು ಮಾತಿಗೂ ‘ಅಳುವೇ ತುಟಿಗೆ ಬಂದಂತೆ’!
ಅವಳನ್ನು ದಿಲ್ಲಿಯ ನಿಜಾಮುದ್ದೀನ್ ನಿಲ್ದಾಣದಲ್ಲಿ ತ್ರಿವೇಂದ್ರಂ ರಾಜಧಾನಿ ಎಕ್ಸ್ ಪ್ರೆಸ್ಸಿಗೆ ಹತ್ತಿಸಿ ಬಂದ ನಂತರ ಮನ, ಮನಸೆಲ್ಲ ಖಾಲಿ ಖಾಲಿ. ಹಾಗೇ ಕುಳಿತರೆ ಎಲ್ಲಿ ಕಣ್ಣಲ್ಲಿ ನೀರು ಉಕ್ಕೀತೋ ಎಂಬ ಭಯದಿಂದ ವಸುದೇಂಧ್ರದ ಹಂಪಿ ಎಕ್ಸ್ ಪ್ರೆಸ್ ಹತ್ತಿಬಿಟ್ಟೆ. ಕತೆಗಳೂ ಅದ್ಭುತವಾಗಿದೆ. ಅದು ನನ್ನ ಬೇಸರ, ದುಃಖ ನಿವಾರಿಸಿ, ಮನಸಿಗೆ ಉಲ್ಲಾಸ ನೀಡಿತು. ಅಷ್ಟರ ಮಟ್ಟಿಗೆ ನಾನು ವಸುಧೇಂದ್ರ ಅವರಿಗೆ ಋಣಿ. ಅವರು ಉತ್ತರ ಕರ್ನಾಟಕದ ಕತೆ, ಬಳ್ಳಾರಿ ಗಣಿ ಧೂಳನ್ನು ಕಣ್ಣಿಗೆ ಕಟ್ಟುವಂತೆ, ಮನ ಮುಟ್ಟುವಂತೆ ಚಿತ್ರಿಸಿದ್ದಾರೆ. ಎಂದಿನಂತೆ ಅವರ ಎಲ್ಲ ಕತೆಗಳೂ ಚೆನ್ನಾಗಿವೆ. ಆದರೆ ಕೆಂಪು ಗಿಣಿ ನೀವೆಲ್ಲ ತಪ್ಪದೆ ಓದಬೇಕಾದ ಕತೆ. ನನಗೆ ತುಂಬ ಇಷ್ಟವಾಯಿತು.
ಹೆಂಡತಿ ಇಲ್ಲದ ಬೇಸರದ ನಡುವೆಯೂ!
ಅವಳನ್ನು ರೈಲಿನಲ್ಲಿ ಕೂರಿಸಿ, ಕಣ್ಣಿಂದ ಮರೆಯಾಗುವರೆಗೂ ಟಾಟಾ ಮಾಡಿ, ಬಂದು ಕಾರಲ್ಲಿ ಕೂತರೆ ಮನಸೆಲ್ಲ ಶೂನ್ಯ. ಕಣ್ಣಲ್ಲಿ ನೀರು ಉಕ್ಕೇ ಬಿಡುತ್ತದೇನೋ ಎಂಬಂತೆ. ನಾವು ಗಂಡಸರು ನೋಡಿ. ಸಾರ್ವಜನಿಕವಾಗಿ ಅಳುವಂತಿಲ್ಲ! ಕಾರಿನಲ್ಲಿ ಕೂತು ಮನೆ ಕಡೆ ಹೊರಟರೆ ಮನೆಗೆ ಯಾಕೆ ಹೋಗಬೇಕು ಎಂಬ ಪ್ರಶ್ನೆಗೆ ಎಷ್ಟು ಹುಡುಕಿದರೂ ಕಾರಣ ಸಿಗಲಿಲ್ಲ. ಮನುಷ್ಯ ಅದೆಷ್ಟು ಬೇಗ ಪರಾವಲಂಬಿಯಾಗಿಬಿಡುತ್ತಾನೆ ಅನ್ನಿಸಿತು.
ಒಂಟಿ ಬಾಳೆಂದರೆ ನನಗೆ ಮೊದಲಿನಿಂದಲೂ ರೇಜಿಗೆ. ಎಂ.ಎ. ಮಾಡಲು ಧಾರವಾಡದಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಹೊರಟಾಗ ಎಲ್ಲಿ ಉಳಿಯುವುದು, ಹಾಸ್ಟೆಲ್ಲಾ? ರೂಮಾ? ಎಂಬ ಪ್ರಶ್ನೆ ಉದ್ಭವಿಸಿತು. ಆಗ ಅಲ್ಲಿರುವ ದೊಡ್ಡಪ್ಪನ ಮನೆಯಲ್ಲೇ ಉಳಿಯುವುದು ಅಂತ ನಾನೇ ಅಂದುಕೊಂಡಿದ್ದೆ. ಅವರ್ಯಾರನ್ನೂ ಕೇಳದೆ. ಅವರದ್ದು ಆಗ ಸಣ್ಣ ಮನೆ. ನನ್ನ ತಂಗಿಯರಾದ ಅವರಿಬ್ಬರು ಮಕ್ಕಳು ಬೇರೆ ಇದ್ದಾರೆ. ನಾನೂ ಒಬ್ಬ ಸೇರಿಕೊಂಡರೆ ಕಷ್ಟ ಎಂಬುದು ಗೊತ್ತಿದ್ದೂ ನಾನು ಅವರ ಮನೆಯಲ್ಲೇ ಉಳಿಯಬೇಕು ಅಂದುಕೊಂಡೆ. ಯಾಕೆಂದರೆ ನನಗೆ ಒಂಟಿಯಾಗುವ ಭಯ ಇತ್ತು.
ದೊಡ್ಡಪ್ಪ-ದೊಡ್ಡಾಯಿಯ ಆತಿಥ್ಯ, ತಂಗಿಯರ ಪ್ರೀತಿ, ಗೆಳೆಯ ಪ್ರಸನ್ನ ಹಾಗೂ ಇತರ ಕೆಲವು ಗೆಳೆಯರ ಆಪ್ತತೆ ನಡುವೆ ೨ ವರ್ಷದ ಎಂ.ಎ. ಮುಗಿದಿದ್ದೇ ಗೊತ್ತಾಗಲಿಲ್ಲ. ಅಲ್ಲಿಂದ ಮುಂದೆ ಪಯಣ ಬೆಳೆಸಿದ್ದು ಮಂಗಳೂರಿಗೆ. ವಿಜಯ ಕರ್ನಾಟಕ ವರದಿಗಾರನಾಗಿ. ಅಲ್ಲಿ ಹೆಚ್ಚು ಕಡಿಮೆ ೬ ತಿಂಗಳು ಒಂಟಿಯಾಗಿ, ಯೆಯ್ಯಾಡಿಯ ಭೋಜಣ್ಣ ಅವರ ಮನೆಯ ಸಣ್ಣ ಕೊಠಡಿಯಲ್ಲಿದ್ದೆ. ನಿಧಾನವಾಗಿ ನನ್ನ ಸಹೋದ್ಯೋಗಿ ಯೋಗೀಶ್ ಹೊಳ್ಳನ ಪರಿಚಯವಾಗಿ, ಆತ್ಮೀಯನಾಗಿ ಅವನ ಜೊತೆ ಸೇರಿಕೊಂಡೆ. ವಿಜಯ ಕರ್ನಾಟಕದಲ್ಲೇ ಕೆಲಸ ಮಾಡುವ ರಾಮ ನಮ್ಮಿಬ್ಬರನ್ನು ಸೇರಿಕೊಂಡ. ಮೊದಲ ೬ ತಿಂಗಳಲ್ಲಿ ಕೂಡ ಒಂದೆರಡು ತಿಂಗಳು ಮಾತ್ರ ಒಂಟಿ ಅನ್ನಿಸಿತು. ಅದನ್ನು ದೂರ ಮಾಡಲೆಂದೇ ಕೆಲಸಕ್ಕೆ ಅಂಟಿಕೊಂಡುಬಿಟ್ಟಿದೆ. ರೂಮಲ್ಲಿ ಊಟ-ತಿಂಡಿ ಮಾಡುತ್ತಿರಲಿಲ್ಲ. ಎಲ್ಲ ಹೊರಗೇ. ಹೀಗಾಗಿ ಬೆಳಗ್ಗೆ ೮.೦೦ ಗಂಟೆಗೆಲ್ಲ ಕಚೇರಿ ತಲುಪಿ ಬಿಟ್ಟಿರುತ್ತಿದ್ದೆ. ಆಮೇಲೆ ನಿಧಾನವಾಗಿ ಅಕ್ಕಪಕ್ಕದ ರೂಮಿನಲ್ಲಿ ಇರುತ್ತಿದ್ದ ಮಹೇಶ ಪಟ್ಟಾಜೆ, ನಾರ್ಸಿನ್ ಡಿಸೋಜ ಹಾಗೂ ಇನ್ನೂ ಕೆಲವರು ಪರಿಚಯವಾದರು. ಇದೇ ಅವಧಿಯಲ್ಲಿ ಪರಿಚಯದ ಶಿಶಿರ್ ಹೆಗಡೆ ಟ್ಯೂಶನ್‌ಗೆಂದು ಮಂಗಳೂರಿಗೆ ಬಂದವ ನನ್ನ ರೂಮಿನಲ್ಲೇ ಇದ್ದ. ಯೋಗೀಶ್ ಹಾಗೂ ರಾಮನ ಜೊತೆ ಸೇರಿಕೊಂಡ ಮೇಲಂತೂ ಒಂಟಿ ಅನ್ನಿಸಲೇ ಇಲ್ಲ. ಅವರನ್ನು ಬಿಟ್ಟು ನಾನೇ ಪ್ರತ್ಯೇಕ ಮನೆ ಮಾಡಿದ್ದು ಮದುವೆಯಾದ ಮೇಲೆಯೆ. ಆಮೇಲೆ ಹೆಂಡತಿ ಜೊತೆಯಲ್ಲಿದ್ದಳು.
ಹೀಗಾಗಿ ನನ್ನ ಇಡೀ ಜೀವನದಲ್ಲಿ ನಾನು ಒಂಟಿಯಾಗಿ ಜೀವಿಸಿದ್ದು ಬರೀ ಒಂದೆರಡು ತಿಂಗಳು ಮಾತ್ರ ಅನ್ನಬಹುದು.
ಅಷ್ಟರ ಮಟ್ಟಿಗೆ ನಾನು `ಸಂಘ' ಜೀವಿ!!!!
ಹೀಗಾಗಿ ಊಟ, ತಿಂಡಿಗೆ ನಾನು ಅವಳನ್ನೇ ಅವಲಂಬಿಸಿದ್ದೆ. ತೊಳೆಯುವ ಬಟ್ಟೆ ನೆನೆಸಿಡುತ್ತಿದ್ದಳು. ಕೆಲಸಕ್ಕೆ ಹೋರಟಾಗ, ಬಂದ ಕೂಡಲೆ ಜೂಸಿನ ಗ್ಲಾಸು ತಂದು ಕೈಗೆ ಕೊಡುತ್ತಿದ್ದಳು. ಬೆಳಗ್ಗೆ ನನ್ನಷ್ಟಕ್ಕೆ ಪೇಪರ್ ಓದುತ್ತಾ ಕೂತಿದ್ದರೆ ತಿಂದಿ, ಚಾ ತಂದು ಇಡುತ್ತಿದ್ದಳು. ರಾತ್ರಿ ಊಟದ ನಂತರ ಹಣ್ಣನ್ನು ಚೆಂದಕೆ ಕೊಯ್ದು, ಹೋಳು ಮಾಡಿ, ಫೋರ್ಕ್ ಸಮೇತ ತಂದಿಡುತ್ತಿದ್ದಳು. ಟಿವಿ ನೋಡುತ್ತ ಗುಳುಂ ಮಾಡುವುದು ಮಾತ್ರ ನನ್ನ ಕೆಲಸವಾಗಿತ್ತು.
ಆದರೆ ಈಗ?
ಅನಿವಾರ್ಯವಾಗಿ ಒಂಟಿ ಜೀವನ ನಡೆಸಬೇಕಿದೆ.
ಆದರೆ ಅವಳು ಮೂಡುಬಿದಿರೆಗೆ ಹೋಗಿದ್ದಾಳೆ ಅಂತ ನಾನು ಮೂಡು ಕೆಡಿಸಿಕೊಂಡು ಕೂರುವ ಹಾಗಿಲ್ಲವಲ್ಲ. ಬೇಸರ ಮರೆಯಲು ಸಂಗಾತಿಯಾಗಿ ಪುಸ್ತಕಗಳಿವೆ. ಓದಬೇಕೆಂದು ತಂದಿಟ್ಟುಕೊಂಡ ಸಾಕಷ್ಟು ಪುಸ್ತಕಗಳಿವೆ. ಇನ್ನೂ ಕೆಲವು ನಾನು ಓದದ ಪುಸ್ತಕಗಳನ್ನು ತರುವಂತೆ ರಾಜ್ಯಕ್ಕೆ ಹೋಗಿರುವ ಗೆಳೆಯ ಶಿವಪ್ರಸಾದ್‌ಗೆ ಹೇಳಿದ್ದೇನೆ. ಕೆಲವೊಮ್ಮೆ ಹೆಂಡತಿಯ ನೆನಪೂ ಆಗದಷ್ಟು ಕೆಲಸಗಳಿರುತ್ತವೆ. ಅಡುಗೆ ಮಾಡಲು ಕೆಲಸದವಳನ್ನು ಗೊತ್ತು ಮಾಡಿದ್ದೇನೆ. ಹಾಗಾಗಿ ಅಷ್ಟು ಕಷ್ಟವಾಗಲಿಕ್ಕಿಲ್ಲ ಅಂದುಕೊಂಡಿದ್ದೇನೆ.
ಆದರೆ ಪುಸ್ತಕ ಓದಿದಾಗ, ಟಿವಿಯಲ್ಲಿ ಏನೋ ನೋಡಿದಾಗ ಏನಾದರೂ ಹೇಳಬೇಕೆಂದರೆ ಪಕ್ಕದಲ್ಲಿ ಯಾರೂ ಇರುವುದಿಲ್ಲ ಅದೊಂದೇ ಬೇಸರ.ಪಾಯಿ
ಬಹುಶಃ ಇದಕ್ಕೇ ನರಸಿಂಹ ಸ್ವಾಮಿಯವರು `ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರುಪಾಯಿ' ಅಂತ. ಅಲ್ವಾ?

Tuesday, May 26, 2009

ಬ್ಲಾಗು, ಹೂಂಸು ಮತ್ತು ಬಕ್‌ಬಕ್!



ಬಹಳ ಜನರಿಗೆ ಬ್ಲಾಗು ಬೋರಾಗುತ್ತಿದೆ!
ನಾವು ಭಾರತೀಯರೇ ಹಾಗೆ. ನಮಗೆ ಆರಂಭ ಶೂರತ್ವ. ಬ್ಲಾಗು ಎಂಬ ಹೊಸ ಲೋಕ ತೆರೆದುಕೊಂಡಾಗ ಎಲ್ಲರೂ ಬ್ಲಾಗು ಆರಂಭಿಸಿದ್ದೇ ಆರಂಭಿಸಿದ್ದು. ಈಗ ಬಹುತೇಕ ಜನ ಅದನ್ನು ನಿಲ್ಲಿಸಿದ್ದಾರೆ. ನನ್ನಂಥ ಕೆಲವರು ಆಗಾಗ ನೆಪಕ್ಕೆ ಏನೋ ಬರೆದು ಸುಮ್ಮನಾಗುತ್ತಿದ್ದಾರೆ.
ಬ್ಲಾಗಿನ ಬಗೆಗಿದ್ದ ಬೆರಗು ಕಡಿಮೆಯಾಗಿದೆ. ಬರೆಯುವ ತೆವಲು ತೀರಿದೆ!
ನನ್ನ ಬಹಳ ಆತ್ಮೀಯರೊಬ್ಬರು ಯಾವಾಗಲು ಬ್ಲಾಗು ಬರವಣಿಗೆಯನ್ನು ಟೀಕಿಸುತ್ತಿರುತ್ತಾರೆ. ಅವರು ಇತ್ತೀಚೆಗೆ ಬ್ಲಾಗಿನ ಬಗ್ಗೆ ಹೇಳುತ್ತ ‘ಬ್ಲಾಗೆಂದರೆ ಒಂದು ಕೋಣೆಯಲ್ಲಿ ಒಬ್ಬನೇ ಕುಳಿತು ಹೂಂಸು ಬಿಟ್ಟು ಒಬ್ಬನೇ ಆಸ್ವಾದಿಸಿದಂತೆ’ ಎಂದು ವ್ಯಾಖ್ಯಾನಿಸಿದ್ದರು.
ಅವರ ಮಾತಿಗೆ ನಾನು ನಕ್ಕು ಸುಮ್ಮನಾಗಿದ್ದೆ. ಆದರೆ ನಂತರ ಯೋಚಿಸುವಾಗ ಬ್ಲಾಗೆಂದರೆ ಒಬ್ಬನೇ ಹೂಂಸು ಬಿಟ್ಟು ಒಬ್ಬನೇ ಆಸ್ವಾದಿಸುವುದಾದರೆ, ಪತ್ರಿಕೆಗಳಿಗೆ ಬರೆಯುವುದು ಹೂಂಸು ಬಿಟ್ಟು ಊರಿಗೆಲ್ಲ ನಾಥ ಕೊಟ್ಟಂತೆಯಾ? ಎಂಬ ಅನುಮಾನ ಶುರುವಾಗಿಬಿಟ್ಟಿತು!
ಬ್ಲಾಗು ಯಾರು ಓದುತ್ತಾರೆ? ಓದಿದರೂ ಎಷ್ಟು ಜನ ಓದಿಯಾರು? ಅದರಿಂದ ಸಿಗುವುದೇನು? ಬ್ಲಾಗಿಗೆ ಬರೆಯುವ ಸಮಯವನ್ನು ಬೇರೆಯದಕ್ಕೆ ಬಳಸಿಕೊಳ್ಳಬಹುದಲ್ಲವಾ? ಎಂಬುದು ಅವರ ಪ್ರಶ್ನೆ.
ಅದು ಸರಿಯೇ ಬ್ಲಾಗೇನು ಲಕ್ಷಾಂತರ ಜನ ಓದುವುದಿಲ್ಲ. ಆದರೆ ನಮಗೆ ಅನ್ನಿಸಿದ್ದನ್ನೆಲ್ಲ ಬರೆಯಲು ಬ್ಲಾಗೊಂದು ವೇದಿಕೆ ಅಷ್ಟೆ. ನಾಲ್ಕೇ ಜನ ಓದಲಿ. ಇಬ್ಬರೇ ಪ್ರತಿಕ್ರಿಯಿಸಲಿ. ಅಷ್ಟೇ ಸಮಾದಾನ. ನನ್ನ ಮನದೊಳಗಿನ ಮಾತನ್ನು ಒಂದಿಬ್ಬರಾದರೂ ಕೇಳಿಸಿಕೊಂಡರೆ ಅಷ್ಟೇ ಸಾಕು. ಅದಕ್ಕಾಗಿ ಬ್ಲಾಗು ಬರೆಯೋದು.
ಲಕ್ಷಾಂತರ ಜನ ಓದಲಿ, ನೋಡಲಿ. ಅದರಿಂದ ನನಗೆ ಸಾವಿರಾರು ಆದಾಯ ಬರಲಿ ಎಂದು ಬಯಸುವವರು ಖಂಡಿತ ಬ್ಲಾಗು ಬರೆಯುವುದಿಲ್ಲ.
ಅವರು ಧಾರಾವಾಹಿ ಬರೆಯುತ್ತಾರೆ!
ಬರವಣಿಗೆಯ ಲೋಕದಲ್ಲಿ ಅಂಬೆಗಾಲಿಡುತ್ತಿರುವ ನನ್ನಂಥಹ ಅದೆಷ್ಟೋ ಮಂದಿಗೆ ಬ್ಲಾಗು ಸಹಾಯಮಾಡಿದೆ. ನಮಗನ್ನಿಸಿದ್ದನ್ನು ಬರೆದು, ಅದರ ಬಗ್ಗೆ ಬೇರೆಯವರ ಅಭಿಪ್ರಾಯ ತಿಳಿದುಕೊಳ್ಳಲು, ನಮ್ಮ ಬರವಣಿಗೆ ಶೈಲಿ ಉತ್ತಮ ಪಡಿಸಿಕೊಳ್ಳಲು ಬ್ಲಾಗು ಸಾಧನವಾಗಿದೆ. ಇದರಿಂದಲೇ ಪರಿಚಯವಾದರು ಅದೆಷ್ಟೋ ಮಂದಿ. ಅವರ ಊರು, ಜಾತಿ ಯಾವುದೂ ಗೊತ್ತಿಲ್ಲ. ಬ್ಲಾಗು ಗೆಳೆತನಕ್ಕೂ ದಾರಿ ಮಾಡಿಕೊಟ್ಟಿದೆ.
ಹಾಗಂತ ಬ್ಲಾಗೇನು ಮಹಾ ಸುಬಗರ ಬೀಡಾಗೇನೂ ಉಳಿದಿಲ್ಲ. ಹುಡುಗಿಯರ ಬ್ಲಾಗಿಗೆ ಕೆಟ್ಟ ಕಾಮೆಂಟು ಹಾಕುವ, ಅನಾಮಧೇಯವಾಗಿ ಅನಗತ್ಯ ಟೀಕಿಸಿ ಬರೆಯುವವರೂ ಬ್ಲಾಗನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ನಮಗಾಗದವರ ಬಗ್ಗೆ ಬರೆಯಲೂ ಬಳಸಿದ್ದಾರೆ. ಏನೇನೋ ಬರೆಯುತ್ತೇನೆ ಎಂದು ಹೆದರಿಸುವವರೂ ಇದ್ದಾರೆ. ನನಗೆ ಬಹಳ ಗೊತ್ತಿದೆ ಎಂದು ಆತ್ಮ ರತಿಯಲ್ಲಿ ಮುಳುಗಿದವರೂ ಇದ್ದಾರೆ.
ಇದೆಲ್ಲ ಏನೇ ಇರಲಿ ಬ್ಲಾಗಿಗೆ ಮೊದಲಿನ ಬೆರಗು ಉಳಿದಿಲ್ಲ ಎಂಬುದಂತೂ ಸತ್ಯ. ಅದೇನು ಬ್ಲಾಗಿನ ಸಂಖ್ಯೆ ಹೆಚ್ಚಾಗಿದ್ದಕ್ಕೋ ಅಥವಾ ದಿನಕಳೆದಂತೆ ಪ್ರತಿಯೊಂದೂ ಆಕರ್ಷಣೆ ಕಳೆದುಕೊಳ್ಳುತ್ತದೆ ಎಂಬ ನಿಯಮ ಬ್ಲಾಗಿಗೂ ಅನ್ವಯವಾದದ್ದಕ್ಕೋ ತಿಳಿಯದಾಗಿದೆ.
ಅಂತೂ ಒಬ್ಬರು ಬ್ಲಾಗು ಟೀಕಿಸಿದ್ದಕ್ಕೆ ಈ ಚಿಕ್ಕ ಬರಹ ಹುಟ್ಟಿಕೊಂಡಿತು. ಇಂಥದ್ದನ್ನೆಲ್ಲ ಬ್ಲಾಗಿನಲ್ಲಿ ಬರೆಯದೇ ವಿಜಯ ಕರ್ನಾಟಕದಲ್ಲಿ ಪ್ರಕಟಿಸಲು ಸಾದ್ಯವೇ? ಅಥವಾ ಇಂಥದ್ದಕ್ಕಾಗಿ ನಾನೇ ಒಂದು ಪತ್ರಿಕೆ ಆರಂಭಿಸೋದು ಸಾದ್ಯವೇ? ಇಲ್ಲ.
ಹೀಗಾಗಿ ಬ್ಲಾಗು. ಇದಕ್ಕೇನು ಮಹಾ ಸಮಯ ಬೇಕಾಗಿಲ್ಲ. ಇದಿಷ್ಟು ಬರೆಯಲು ೫ ನಿಮಿಷ ಸಾಕು. ಆದ್ದರಿಂದ ಬ್ಲಾಗು ಬರವಣಿಗೆಯಿಂದ ಮಹಾ ಸಮಯ ಹಾಳು ಎಂಬುದು ಸರಿಯಲ್ಲ ಎಂಬುದು ನನ್ನ ವಾದ.
ಹೂಂ ಅಂತೀರಾ? ಉಹೂಂ ಅಂತೀರಾ?

Monday, May 18, 2009

ಕರಗಿದ ಬಿಜೆಪಿಯ ಉಕ್ಕಿನ ಮನುಷ್ಯ



ಲೋಕಸಭೆ ಚುನಾವಣೆಯಲ್ಲಿನ ಜನಾದೇಶ ಬಿಜೆಪಿಯನ್ನು ರಾಷ್ಟ್ರ ಮಟ್ಟದ ಪಕ್ಷವಾಗಿ, ಅಧಿಕಾರಕ್ಕೇರುವಷ್ಟು ಶಕ್ತಿಯುತವಾಗಿ ಬೆಳೆಸಿದ ಲಾಲಕೃಷ್ಣ ಅಡ್ವಾಣಿ ಅವರ ಪ್ರಧಾನಿ ಕನಸನ್ನು ಭಗ್ನಗೊಳಿಸಿರುವುದರ ಜೊತೆಗೆ ಅವರ ಯುಗಾಂತ್ಯಕ್ಕೆ ಬರೆದ ಮುನ್ನುಡಿಯಂತಿದೆ.

‘ಅಜಾತಶತ್ರು’ ಅಟಲ್ ಬಿಹಾರಿ ವಾಜಪೇಯಿ ೨ ಬಾರಿ ದೇಶದ ಜನರ ಮೇಲೆ ಮಾಡಿದ ಜಾದೂವನ್ನು ಮಾಡಿ ಬಿಜೆಪಿಯನ್ನು ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ತರಲು ಬಿಜೆಪಿಯ ‘ಉಕ್ಕಿನ ಮನುಷ್ಯ’ ಎಂದೇ ಹೆಸರಾಗಿರುವ ಲಾಲಕೃಷ್ಣ ಅಡ್ವಾಣಿ ವಿಫಲರಾಗಿದ್ದಾರೆ. ಪರಿಣಾಮ ಅವರು ಪ್ರಧಾನಿ ಪಟ್ಟದ ಆಕಾಂಕ್ಷಿಯಾಗಿಯೇ ರಾಜಕೀಯ ಜೀವನ ಮುಗಿಸಬೇಕಾದ ಸ್ಥಿತಿ ಉದ್ಭವವಾಗಿದೆ.

ಲಾಲಕೃಷ್ಣ ಅಡ್ವಾಣಿ ಅವರಿಗೆ ಈಗಾಗಲೇ ೮೧. ಮಾನಸಿಕವಾಗಿ ಅಥವಾ ದೈಹಿಕವಾಗಿ ಅಡ್ವಾಣಿ ಮೊದಲಿನಷ್ಟು ದೃಢವಾಗಿ ಉಳಿದಿಲ್ಲ. ಅಲ್ಲದೆ ಈ ಬಾರಿ ಜನ ಕಾಂಗ್ರೆಸ್ ನೇತೃತ್ವದ ಯುಪಿಎಗೆ ಸಾಕಷ್ಟು ಸಂಸದರ ಬೆಂಬಲ ದೊರಕಿಸಿಕೊಟ್ಟಿದ್ದಾರೆ. ಹೀಗಾಗಿ ಮುಂದಿನ ೫ ವರ್ಷದಲ್ಲಿ ಈ ಸರಕಾರ ಬೀಳುವ ಸಾದ್ಯತೆಗಳು ತೀರ ಕಡಿಮೆ. ಇನ್ನು ೫ ವರ್ಷದವರೆಗೆ ಲಾಲಕೃಷ್ಣ ಅಡ್ವಾಣಿ ರಾಜಕೀಯದಲ್ಲಿರುವುದು ಹಾಗೂ ಅದರ ನಂತರ ಅವರು ಮತ್ತೆ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಚುನಾವಣೆ ನೇತೃತ್ವ ವಹಿಸುವುದು ಬಹುತೇಕ ಅಸಾದ್ಯ ಸಂಗತಿ ಎಂಬುದರಲ್ಲಿ ಅನುಮಾನವಿಲ್ಲ.

ಈ ಲೋಕಸಭೆ ಚುನಾವಣೆ ನಡುವಿನಲ್ಲೇ ಸೋಲಿನ ಸುಳಿವರಿತ ಕೆಲವು ಬಿಜೆಪಿ ನಾಯಕರು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಭವಿಷ್ಯದ ಪ್ರಧಾನಿ ಅಭ್ಯರ್ಥಿ ಎಂದು ಬಹಿರಂಗವಾಗಿಯೇ ಹೇಳಿದರು. ಇದನ್ನು ಸ್ವತಃ ಮೋದಿ ಅಲ್ಲಗಳೆದಿದ್ದಾರಾದರೂ, ವಾಜಪೇಯಿ ನಂತರ ಪ್ರಧಾನಿ ಅಭ್ಯರ್ಥಿಯಾಗಿ ದೇಶಾದ್ಯಂತ ಜನರನ್ನು ಸೆರಳೆಯಬಲ್ಲ ಶಕ್ತಿ ಇರುವುದು ನರೇಂದ್ರ ಮೋದಿಗೆ ಮಾತ್ರ ಎಂಬುದನ್ನು ಬಿಜೆಪಿ ನಾಯಕರು ಒಪ್ಪಿಕೊಳ್ಳುತ್ತಾರೆ. ಹೀಗಾಗಿ ಮುಂದಿನ ಲೋಕಸಭೆ ಚುನಾವಣೆ ಹೊತ್ತಿಗೆ ಮೋದಿ ಪ್ರಧಾನಿ ಅಭ್ಯರ್ಥಿಯಾಗಿ ಹೊರಹೊಮ್ಮುದನ್ನು ಬಹುತೇಕ ಬಿಜೆಪಿ ನಾಯಕರು ಬಯಸುತ್ತಿದ್ದಾರೆ.

೧೯೯೦ರ ದಶಕದಲ್ಲಿ ಅಯೋಧ್ಯೆ ಚಳವಳಿಯ ನೇತೃತ್ವ ವಹಿಸಿದ ಲಾಲಕೃಷ್ಣ ಅಡ್ವಾಣಿ ದೇಶಾದ್ಯಂತ ರಥಯಾತ್ರೆ ನಡೆಸಿ, ಬಿಜೆಪಿಯನ್ನು ರಾಷ್ಟ್ರೀಯ ಮಟ್ಟದ ಪಕ್ಷವನ್ನಾಗಿ ಮಾಡಿದರು. ಅಯೋಧ್ಯಾ ಚಳವಳಿ ಬಿಜೆಪಿಗೆ ಅನಿರೀಕ್ಷಿತ ಜನಬೆಂಬಲ ದೊರಕಿಸಿಕೊಟ್ಟಿತು. ಈ ಚಳವಳಿ ದೇಶದ ರಾಜಕೀಯ ಚಿತ್ರಣವನ್ನೇ ಬದಲಾಯಿಸಿತು.
ಇಷ್ಟೆಲ್ಲ ಹೋರಾಟದ ನೇತೃತ್ವ ವಹಿಸಿ ಪಕ್ಷದ ಸಂಪೂರ್ಣ ಹಿಡಿತ ಲಾಲಕೃಷ್ಣ ಅಡ್ವಾಣಿ ಬಳಿ ಇತ್ತು. ಪಕ್ಷದ ಸೈದ್ಧಾಂತಿಕ ನಿಲುವಿನ ಪ್ರತಿನಿಧಿಯಾಗಿ ಲಾಕೃಷ್ಣ ಅಡ್ವಾಣೀ ಇದ್ದರು. ಸಂಘಪರಿವಾರದ ನಿಯಂತ್ರಣ ಬಿಟ್ಟರೆ ಬಿಜೆಪಿ ಮಟ್ಟಿಗೆ ಲಾಲಕೃಷ್ಣ ಅಡ್ವಾಣಿ ಪ್ರಶ್ನಾತೀತ ನಾಯಕರಾಗಿದ್ದರು. ಅಂತಹ ಸಂದರ್ಭದಲ್ಲಿ ಕೂಡ ಅಡ್ವಾಣಿ ಅವರು ಅಟಲ್ ಬಿಹಾರಿ ವಾಜಪೇಯಿ ಅವರನ್ನು ೧೯೯೯೫ರಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಿದರು. ವಾಜಪೇಯಿ ಪ್ರಧಾನಿಯಾಗಿದ್ದಾಗ ಉಪಪ್ರಧಾನಿಯಾಗಿ ಕಾರ್ಯನಿರ್ವಹಿಸಿದರು. ೨೦೦೫ರಲ್ಲಿ ವಾಜಪೇಯಿ ಅವರು ಅಡ್ವಾಣಿ ಅವರನ್ನು ತಮ್ಮ ಮುಂದಿನ ನಾಯಕ ಎಂದು ಪರೋಕ್ಷವಾಗಿ ಹೇಳುವ ಮೂಲಕ ಅಡ್ವಾಣಿ ಅವರ ಋಣ ತೀರಿಸಿದರು.

ಇದಾದ ಕೆಲವೇ ದಿನದಲ್ಲಿ ಅಡ್ವಾಣಿ ಅವರ ಗೃಹಚಾರ ಕೆಟ್ಟಿರು. ಪಾಕಿಸ್ತಾನಕ್ಕೆ ಹೋದ ಅಡ್ವಾಣಿ ಮಹಮ್ಮದ್ ಅಲಿ ಜಿನ್ಹಾ ಅವರನ್ನು ಜಾತ್ಯತೀತ ನಾಯಕ ಎಂದು ಕೊಂಡಾಡಿದರು. ಅದು ಸಂಘಪರಿವಾರದ ಕಣ್ಣು ಕೆಂಪಾಗಿಸಿತು. ಅಡ್ವಾಣಿ ಅವರಿಗಿದ್ದ ‘ಉಕ್ಕಿನ ಮನುಷ್ಯ’ ಎಂಬ ಬಿರುದು ಕೂಡ ಸದ್ದಿಲ್ಲದೆ ಬದಿಗೆ ಸರಿಯಿತು. ಪರಿಣಾಮ ೨೦೦೫ರ ಡಿ.೩೧ರಂದು ಲಾಲಕೃಷ್ಣ ಅಡ್ವಾಣಿ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.

ಅದರ ನಂತರ ಲಾಲಕೃಷ್ಣ ಅಡ್ವಾಣಿ ಅವರ ಒಳಗಿನ ‘ಉಕ್ಕಿನ ಮನುಷ್ಯ’ ಹೆಚ್ಚಾಗಿ ಕಾಣಿಸಿಕೊಳ್ಳಲೇ ಇಲ್ಲ. ಅಟಲ್‌ಬಿಹಾರಿ ವಾಜಪೇಯಿ ಅವರಿಗಿದ್ದ ‘ಜಾತ್ಯತೀತ’ ನಿಲುವನ್ನು ತಾನೂ ತಳೆಯಲು ಯತ್ನಿಸಿದ ಲಾಲಕೃಷ್ಣ ಅಡ್ವಾಣಿ ಬಹುತೇಕ ವಿಷಯಗಳಲ್ಲಿ ಮುಂದೆ ರಾಜಿ ಮಾಡಿಕೊಂಡಿದ್ದನ್ನು ಗಮನಿಸಬಹುದು. ಪರಿಣಾಮ ಅವರು ಅತ್ತ ‘ಜಾತ್ಯತೀತ’ರೂ ಆಗಲಿಲ್ಲ, ಕಠೋರ ಹಿಂದೂ ನಾಯಕರಾಗಿಯೂ ಮುಂದುವರಿಯಲಿಲ್ಲ. ಹೀಗೆ ವಯಸ್ಸಿನ ಹೊಡೆತಕ್ಕೊ, ಅನುಭವದ ಭಾರಕ್ಕೊ, ಪ್ರಧಾನಿ ಪಟ್ಟದಾಸೆಗೊ ಅಡ್ವಾಣಿ ಮೆತ್ತಗಾದರು.

೮೧ ವರ್ಷವಾಗಿರುವದನ್ನೂ ಲೆಕ್ಕಿಸದೆ ಈ ಚುನಾವಣೆ ಪ್ರಚಾರದಲ್ಲಿ ಲಾಲಕೃಷ್ಣ ಅಡ್ವಾಣಿ ಯುವಕರಿಗೆ ಕಡಿಮೆ ಇಲ್ಲದಂತೆ ಕೆಲಸ ಮಾಡಿದರು. ಉತ್ತರ ಭಾರತದ ೪೦ ಡಿಗ್ರಿ ಬಿಸಿಲನ್ನೂ ಲೆಕ್ಕಿಸದೆ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಿದರು. ಪ್ರಚಾರಕ್ಕಾಗಿ ೬೦,೦೦೦ ಕಿ.ಮೀ.ಗಿಂತ ಹೆಚ್ಚು ಪ್ರಯಾಣ ಮಾಡಿದರು. ಆಧುನಿಕ ತಂತ್ರಜ್ಞಾನ, ವೆಬ್‌ಸೈಟ್, ಎಸ್‌ಎಂಎಸ್‌ಗಳನ್ನು ಬಳಸಿದರು. ಯುವ ಮತದಾರರನ್ನು ಸೆಳೆಯುವ ಯತ್ನ ಮಾಡಿದರು. ಇಷ್ಟೆಲ್ಲ ಮಾಡಿಯೂ ಅಡ್ವಾಣಿ ೯೦ರ ದಶಕದಲ್ಲಿ ಗಳಿಸಿದ್ದ ಜನಪ್ರಿಯತೆಯನ್ನು ಗಳಿಸಲು ೨೦೦೯ರಲ್ಲಿ ವಿಫಲರಾದರು.ಪ್ರಧಾನಿಯಾಗುವ ಅವರ ಕನಸು ನನಸಾಗೇ ಉಳಿಯಿತು.

Wednesday, May 13, 2009

ಸಿಬಿಐ= ಕ್ಲೀನ್‌ಚಿಟ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್


ದೇಶದ ಉನ್ನತ ತನಿಖಾ ಸಂಸ್ಥೆ ಸೆಂಟ್ರಲ್ ಬ್ಯೂರೋ ಆಫ್ ಇನ್‌ವೆಸ್ಟಿಗೇಷನ್ ಅಲಿಯಾಸ್ ಸಿಬಿಐ ಮತ್ತೆ ಸುದ್ದಿಯಲ್ಲಿದೆ. ಕೆಟ್ಟ ಕಾರಣಕ್ಕಾಗಿ.
೧೯೮೪ರ ಗಲಭೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರಾದ ಜಗದೀಶ್ ಟೈಟ್ಲರ್ ಹಾಗೂ ಸಜ್ಜನ್‌ಕುಮಾರ್ ಅವರನ್ನು ದೋಷಮುಕ್ತ ಎಂದು ವರದಿ ನೀಡುವ ಮೂಲಕ ಸಿಖ್ಖರ ಕೆಂಗಣ್ಣಿಗೆ ಗುರಿಯಾಗಿದ್ದ ಸಿಬಿಐ ಈಗ ಬೊಫೋರ್ಸ್ ಹಗಣದ ಆರೋಪಿಗಳಲ್ಲಿ ಒಬ್ಬನಾದ ಇಟಲಿಯ ಒಟೆವಿಯೊ ಕೊಟ್ರೋಚಿಯ ಮೇಲಿರುವ ಪ್ರಕರಣವನ್ನೂ ಕೈಬಿಟ್ಟು, ಹೊರಡಿಸಿದ್ದ ರೆಡ್‌ಕಾರ್ನನ್ ನೋಟೀಸ್ ರದ್ದುಪಡಿಸುವ ಮೂಲಕ ಮೂಲಕ ದೇಶದ ಜನರನ್ನು ಬೆಚ್ಚಿ ಬೀಳಿಸಿದೆ. ಜಗದೀಶ ಟೈಟ್ಲರ್ ಹಾಗೂ ಸಜ್ಜನ್ ಕುಮಾರ್ ಕಾಂಗ್ರೆಸ್ಸಿಗರಾದರೆ, ಒಟೆವಿಯೊ ಕೊಟ್ರೋಚಿ ಸೋನಿಯಾ ಕುಟುಂಬಕ್ಕೆ ಹತ್ತಿರದವರು ಎಂಬುದು ಗುಟ್ಟೇನಲ್ಲ. ಈ ಎರಡೂ ಕ್ಲೀನ್‌ಚಿಟ್‌ಗಳು ಯುಪಿಎ ಅಧಿಕಾರಾವಧಿ ಅಂತಿಮ ಸಮಯದಲ್ಲಿ ಹೊರಬಿದ್ದಿರುವುದು ಸಿಬಿಐ ಮೇಲೆ ಜನರಿಗಿರುವ ನಂಬಿಕೆ ಕುಸಿಯುವಂತೆ ಮಾಡಿದೆ. ಸಿಬಿಐ ಸ್ವತಂತ್ರ ತನಿಖಾ ಸಂಸ್ಥೆಯಾಗಿ ಉಳಿದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಸಿಬಿಐನ ಮಾಜಿ ನಿರ್ದೇಶಕರಾದ ಜೋಗಿಂದರ್ ಸಿಂಗ್ ಅವರು ಕೊಟ್ರೋಚಿ ವಿರುದ್ಧ ಸಾಕಷ್ಟು ಸಾಕ್ಷ್ಯ ಇತ್ತು. ತಾವೇ ಸ್ವತಃ ಸ್ವಿಸ್ ಬ್ಯಾಂಕ್ ತೆರಳಿ ಖಾತೆ ಪರಿಶೀಲನೆ ನಡೆಸಿದ್ದನ್ನು ಬಹಿರಂಗಪಡಿಸಿದ್ದಾರೆ. ಅವರಿದ್ದಾಗ ಇದ್ದ ಸಾಕ್ಷ್ಯ ಆಮೇಲೇನಾಯಿತು?
ಇತ್ತೀಚಿನ ವರ್ಷಗಳಲ್ಲಿ ಸಿಬಿಐ ಒಳ್ಳೆಯ ಕೆಲಸಕ್ಕಾಗಿ ಸುದ್ದಿಯಾಗಿದ್ದು ಯಾರಿಗೂ ನೆನಪಿಲ್ಲ. ಸಿಬಿಐ ತನಿಖೆಗೊಳಗಾದ ಯಾವ ಪ್ರಕರಣವೂ ಆರೋಪಿಗಳ ಶಿಕ್ಷೆಯೊಂದಿಗೆ ಮುಕ್ತಾಯವಾದದ್ದು ಇತ್ತೀಚೆಗೆ ಸಂಭವಿಸಿಲ್ಲ. ಸಿಬಿಐ ಯಾವುದೇ ನಿರ್ಣಯ ಕೈಗೊಳ್ಳಲಿ ಅದರ ಬಗ್ಗೆ ಸಾರ್ವಜನಿಕರು ಅನುಮಾನದಿಂದ ನೋಡುವಂತಾಗಿದೆ. ಕಾರಣ ಕೇಂದ್ರ ಸರಕಾರದ ಅಧಿಕಾರದ ಚಿತ್ರಣ ಬದಲಾಗುತ್ತಿದ್ದಂತೆ ಸಿಬಿಐ ನಿಲುವುಗಳೂ, ಸಾಕ್ಷ್ಯಗಳು ಕೂಡ ಬದಲಾಗಿವೆ.
ಮಾಯಾವತಿ ವಿರುದ್ಧ ತಾಜ್ ಕಾರಿಡಾರ್ ಪ್ರಕರಣದಲ್ಲಿ ಸಿಬಿಐ ನಿಲುವು ಆಗಾಗ ಬದಲಾಗಿದ್ದನ್ನು ಕಂಡಿದ್ದೇವೆ. ಮಾಯಾವತಿ ಜತೆ ಸಖ್ಯ ಇರುವಾಗ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ವಿರುದ್ಧ ಅತಿಯಾದ ಆಸ್ತಿ ಸಂಗ್ರಹ ಪ್ರಕರಣವನ್ನು ಸಿಬಿಐ ಕೈಗೆತ್ತಿಕೊಂಡಿತು. ಅದೇ ಮಾಯಾವತಿ ಜತೆ ಕಾಂಗ್ರಸ್ ಮೈತ್ರಿ ಮುರಿದಾಗ ಮುಲಾಯಂ ಸಿಂಗ್ ವಿರುದ್ಧದ ಪ್ರಕರಣದಲ್ಲಿ ಸಿಬಿಐ ನಿಲುವು ಬದಲಾಯಿತು. ಸಮಾಜವಾದಿ ಪಕ್ಷ ೨೦೦೮ರ ಜುಲೈನಲ್ಲಿ ಅವಿಶ್ವಾಸಮತ ನಿರ್ಣಯ ಸಂದರ್ಭ ಯುಪಿಎ ಪರ ನಿಲ್ಲಲು ಸಿಬಿಐ ಪ್ರಕರಣ ಕೂಡ ಒಂದು ಕಾರಣ ಎಂಬುದರಲ್ಲಿ ಈಗ ಅನುಮಾನ ಉಳಿದಿಲ್ಲ. ಇದರ ನಂತರ ಮುಲಾಯಂ ಸಿಂಗ್ ಸಮೀಪ ವರ್ತಿಗಳು ಹಾಗೂ ಸಿಬಿಐ ಅಧಿಕಾರಿಗಳು ಒಟ್ಟಿಗೆ ಕುಳಿತು ನ್ಯಾಯಾಲಯದಲ್ಲಿ ಯಾವ ರೀತಿ ಪ್ರಕರಣ ನಿಲ್ಲದಂತೆ ದಾಖಲೆಗಳನ್ನು ಸಲ್ಲಿಸಬೇಕು ಎಂಬುದರ ಬಗ್ಗೆ ಚರ್ಚಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಸರಕಾರಗಳೂ ಅಷ್ಟೆ ಮೊದಲೆಲ್ಲ ಸಿಬಿಐ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವಾಗ ಬಹಳ ಜಾಗರೂಕವಾಗಿರುತ್ತಿದ್ದವು. ಈಗ ಕೊಟ್ರೋಚಿಗೂ ಕ್ಲೀನ್‌ಚಿಟ್ ಕೊಡಿಸುವಷ್ಟು ರಾಜಾರೋಷವಾಗಿ ಸಿಬಿಐನಲ್ಲಿ ಹಸ್ತಕ್ಷೇಪ ಮಾಡಲಾರಂಭಿಸಿವೆ.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿ ಸಂಗ್ರಹ ಪ್ರಕರಣದಲ್ಲೂ ಸಿಬಿಐ ನಿಲುವು ಕಾಲಕ್ಕೆ ತಕ್ಕಂತೆ ಬದಲಾಗಿದ್ದು ಜಗತ್ತಿಗೇ ಗೊತ್ತಿದೆ.ಇದನ್ನೆಲ್ಲ ಗಮನಿಸಿದರೆ ಸಿಬಿಐ ನಿಜಕ್ಕೂ ಸ್ವತಂತ್ರ ತನಿಖಾ ಸಂಸ್ಥೆಯಾಗಿ ಉಳೀದಿದೆಯೇ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ನಮ್ಮ ಅನುಭವದ ಪ್ರಕಾರವೇ ಇದಕ್ಕೆ ಇಲ್ಲ ಎಂಬ ಉತ್ತರ ದೊರೆಯುತ್ತದೆ. ಅಲ್ಲಿದೆ ದೇಶದಲ್ಲಿ ಜನರ ನಂಬಿಕೆ ಉಳಿದಿಸಿಕೊಂಡಿರುವ ಒಂದೇ ಒಂದು ತನಿಖಾ ಸಂಸ್ಥೆಯೂ ಇಲ್ಲದಂತಾಗಿಬಿಟ್ಟಿದೆ.
ಒಂದು ಕಾಲದಲ್ಲಿ ಸಿಬಿಐಗೆ ಒಳ್ಳೆಯ ಹೆಸರಿತ್ತು. ಸಿಬಿಐ ತನಿಖೆ ಅಂದರೆ ಅದೇ ಅಂತಿಮ. ಜನ ಕೂಡ ಅದನ್ನು ಮನ್ನಿಸುತ್ತಿದ್ದರು. ಸಿಬಿಐ ತನಿಖೆ ಅಂದರೆ ಸಾಕು ರಾಜಕಾರಣಿಗಳೂ ಕೂಡ ಹೆದರುತ್ತಿದ್ದರು. ರಾಜೀವ್ ಗಾಂಧಿ ಹತ್ಯೆ ಸಮಯದಲ್ಲಿ ಸಾಕ್ಷಿಗಳೇ ಇರಲಿಲ್ಲ ಎನ್ನಬಹುದಾದ ಸ್ಥಿತಿ. ಅಂತಹ ಪ್ರಕರಣವನ್ನೂ ಸಿಬಿಐ ತಂಡ ಸಮರ್ಥವಾಗಿ ನಡೆಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು. ಆದರೆ ಅದೇ ತನಿಖಾ ಸಂಸ್ಥೆ ಭಟ್ಕಳದ ಶಾಸಕ ಯು. ಚಿತ್ತರಂಜನ್ ಅವರ ಕೊಲೆ ಪ್ರಕರಣ ಬಗೆಹರಿಸಲು ವಿಫಲವಾಯಿತು. ಚಿತ್ತರಂಜನ್ ಪ್ರಕರಣದಂತೆ ಹಲವಾರು ಪ್ರಕರಣಗಳು ಸಿಬಿಐ ಕಚೇರಿ ಕಪಾಟಿನಲ್ಲಿ ಧೂಳುತಿನ್ನುತ್ತಿವೆ.
ಹಿಂದೆಲ್ಲ ಒಂದು ಪ್ರಕರಣವನ್ನು ಸಿಬಿಐಗೆ ನೀಡಿದರು ಎಂದರೆ ಸತ್ಯ ಹೊರಬಂದಂತೆ ಎಂಬ ನಂಬಿಕೆಯಿತ್ತು. ಈಗ? ಒಂದು ಪ್ರಕರಣವನ್ನು ಸಿಬಿಐಗೆ ನೀಡಿದರೆಂದರೆ ಅಲ್ಲಿಗೆ ಆ ಪ್ರಕರಣ ಮುಗಿಯಿತು ಎಂದರ್ಥ!
ಸಿಬಿಐ ನ್ಯಾಯಾಲಯಕ್ಕೆ ತನಿಖಾ ವರದಿ ಒಪ್ಪಿಸಿತು ಅಂದರೆ ಅದೇ ಅಂತಿಮ. ಆರೋಪಿಯನ್ನು ದೋಷಮುಕ್ತ ಎಂದು ಸಿಬಿಐ ಹೇಳಿದ್ದರೂ ನ್ಯಾಯಾಲಯಗಳು ಅದನ್ನು ಒಪ್ಪಿಕೊಳ್ಳುತ್ತಿದ್ದವು. ಆದರೆ ಸಿಬಿಐ ವಿಶ್ವಾಸರ್ಹತೆ ಕುಸಿಯುತ್ತಿದ್ದಂತೆ ಈಗ ನ್ಯಾಯಾಲಯಗಳೂ ಕೂಡ ಸಿಬಿಐ ವರದಿ ಸಲ್ಲಿಸಿದ ನಂತರವೂ ಮತ್ತೆ ತನಿಖೆಗೆ ಆದೇಶಿಸುತ್ತಿವೆ.
ದೇಶದ ಉನ್ನತ ತನಿಖಾ ಸಂಸ್ಥೆಯ ಗುಣಮಟ್ಟ ಕುಸಿಯಲು ಯಾರು ಕಾರಣ?
ನಿಸ್ಸಂಶಯವಾಗಿ ನಮ್ಮನ್ನಾಳುವವರು.
ತಾಜ್ ಕಾರಿಡಾರ್ ಪ್ರಕರಣದ ವಿಚಾರಣೆ ಸಂದರ್ಭ ಸುಪ್ರೀಂ ಕೋರ್ಟ್ ಸಿಬಿಐ ಕುರಿತು ‘ಸರಕಾರಿ ಸಂಸ್ಥೆಗಳ ಕಾರ್ಯಕ್ಷಮತೆ ಹಾಗೂ ಮೌಲ್ಯಗಳು ಶೀಘ್ರವಾಗಿ ಕುಸಿಯುತ್ತಿರುವುದು ನ್ಯಾಯಾಲಯದ ಗಮನಕ್ಕೆ ಬಂದಿದೆ. ಹೀಗೇ ಮುಂದುವರಿದರೆ ಕಾನೂನು ಸುವ್ಯವಸ್ಥೆ ಕುಸಿಯುವ ಸ್ಥಿತಿ ಬರಬಹುದು’ ಎಂದು ಅಭಿಪ್ರಾಯಪಟ್ಟಿತ್ತು. ಅದರಿಂದಲೂ ನಮ್ಮ ಸಿಬಿಐ ಅಧಿಕಾರಿಗಳು ಹಾಗೂ ಕೇಂದ್ರ ಸರಕಾರ ಎಚ್ಚೆತ್ತುಕೊಳ್ಳಲಿಲ್ಲ.ನಿಜವಾಗಿ ಸಿಬಿಐ ಯಾರ ನಿಯಂತ್ರಣದಲ್ಲೂ ಇಲ್ಲ. ದೆಹಲಿ ವಿಶೇಷ ಪೊಲೀಸ್ ಕಾನೂನಿನ ಅಡಿಯಲ್ಲಿ ಸ್ಥಾಪನೆಯಾದ ಸಿಬಿಐ ಕೇಂದ್ರ ಸರಕಾರದ ಖಾಸಗಿ ಹಾಗೂ ತರಬೇತಿ ವಿಭಾಗಕ್ಕೆ ಸೇರಿದ್ದು. ಅಂದರೆ ಕೇಂದ್ರ ಸರಕಾರದ ‘ಮೇಲ್ವಿಚಾರಣೆಯಲ್ಲಿ’ ಎಂದಷ್ಟೇ ಹೇಳಲಾಗಿದೆ. ‘ಮೇಲ್ವಿಚಾರಣೆ’ ಎಂಬುದನ್ನೇ ನಮ್ಮವರು ‘ಮೇಲ್ವಿಚಾರಣೆ, ನಿಯಂತ್ರಣ ಮತ್ತು ನಿರ್ದೇಶನ’ ಎಂದು ವ್ಯಾಖ್ಯಾನಿಸಿ ಸಿಬಿಐನ ವಿಶ್ವಾಸರ್ಹತೆಯನ್ನೇ ಹಾಳು ಮಾಡಿದ್ದಾರೆ.
ಸಿಬಿಐ ಕೇಂದ್ರ ಸರಕಾರದ ಇಶಾರೆಗಳ ಮೇಲೆ ನಡೆಯುತ್ತದೆ ಎಂಬುದು ಇಂದು ಗುಟ್ಟಾಗಿ ಉಳಿದಿಲ್ಲ. ಸಿಬಿಐ ನಿರ್ದೇಶಕರ ನೇಮಕದಲ್ಲಿ ಕೂಡ ರಾಜಕೀಯ ಮೂಗು ತೂರಿಸದೇ ಬಿಟ್ಟಿಲ್ಲ. ಹಾಗೆ ನೇಮಕವಾದ ನಿರ್ದೇಶಕರು ನೇಮಕ ಮಾಡಿದ ರಾಜಕೀಯ ಪಕ್ಷಕ್ಕೆ ನಿಷ್ಟರಾಗಿರುವುದು ಸಹಜ.
ಹೀಗಾಗಿ ಸಿಬಿಐಯನ್ನು ಸೆಂಟ್ರಲ್ ಬ್ಯೂರೋ ಆಫ್ ಇನ್‌ವೆಸ್ಟಿಗೇಷನ್ ಎಂದು ಕರೆಯುವ ಬದಲು ಕ್ಲೀನ್‌ಚಿಟ್ ಬ್ಯೂರೋ ಆಫ್ ಇನ್‌ವೆಸ್ಟಿಗೇಷನ್ ಎಂದು ಕರೆಯುವಂತಾಗಿದೆ. ನಮಗೀಗ ಬೇಕಿರುವುದು ಸೆಂಟ್ರಲ್ ಬ್ಯೂರೋ ಆಫ್ ಇನ್‌ವೆಸ್ಟಿಗೇಷನ್ (ಸಿಬಿಐ) ಅಲ್ಲ. ಬದಲಾಗಿ ಇಂಡಿಪೆಂಡೆಂಟ್ ಬ್ಯೂರೋ ಆಫ್ ಇನ್‌ವೆಸ್ಟಿಗೇಷನ್ (ಐಬಿಐ) ಬೇಕು.ಸಿಬಿಐ ಅಮೂಲಾಗ್ರ ಬದಲಾವಣೆ ಆಗಬೇಕಿದೆ. ಸಿಬಿಐ ನಿರ್ದೇಶಕರ ನೇಮಕವೂ ಸೇರಿದಂತೆ ಒಟ್ಟಾರೆ ಸಿಬಿಐ ಎಂಬ ಸಂಸ್ಥೆ ಸರಕಾರದ ನಿಯಂತ್ರದಿಂದ ದೂರವಾಗಿ ಸ್ವತಂತ್ರವಾಗಬೇಕಿದೆ. ನ್ಯಾಯಾಲಯ ಹೊರತು ಪಡಿಸಿ ಜನರಿಗೆ ಸರಕಾರ ಹಾಗೂ ಸರಕಾರಿ ಸಂಸ್ಥೆಗಳ ಮೇಲೆ ನಂಬಿಕೆ ಮೂಡಿಸುವ ಒಂದಾದರೂ ಸಂಸ್ಥೆ ಬೇಕೇಬೇಕು. ಅದಕ್ಕಾಗಿಯಾದರೂ ಈ ಕೆಲಸ ಮಾಡಬೇಕು.
ಯಾಕೆಂದರೆ ಜನ ಸರಕಾರ ಹಾಗೂ ಅದರ ಸಂಸ್ಥೆಗಳ ಮೇಲೆ ನಂಬಿಕೆ ಕಳೆದುಕೊಂಡರೆ ಅಲ್ಲಿಗೆ ಎಲ್ಲವೂ ಮುಗಿದಂತೆ.

Wednesday, April 29, 2009

ಸೋನಿಯಾಗೆ ಚಿದ್ರಚಿದ್ರವಾದ ರಾಜೀವ್ ದೇಹ ನೆನಪಾಗಲಿಲ್ಲವೇ?


ಏಷ್ಯಾದ ಅಷ್ಟೇ ಏಕೆ ವಿಶ್ವದ ಅತ್ಯಂತ ಹಳೆಯ ಹಾಗೂ ಬಲಿಷ್ಠ ಉಗ್ರಗಾಮಿ ಸಂಘಟನೆಯೆಂದರೆ ಎಲ್‌ಟಿಟಿಇ. ಅಂತಹ ಸಂಘಟನೆಯನ್ನು ಸೈನ್ಯ ಬಲದ ಮೂಲಕ ಮೂಲೆಗುಂಪು ಮಾಡಿ, ಇನ್ನೇನು ಎಲ್‌ಟಿಟಿ ಅಟಾಟೋಪ ಮುಗಿದೇ ಹೋಯಿತು ಎಂಬಂತಾಗಿರುವಾಗ, ಭಾರತ ಅನಗತ್ಯವಾಗಿ ಮೂಗು ತೂರಿಸಿದೆ.
ತಮಿಳುನಾಡಿನಲ್ಲಿ ಬಹಳ ಹಿಂದಿನಿಂದಲೂ ಎಲ್‌ಟಿಟಿಇ ರಾಜಕೀಯಕ್ಕೆ ಬಳಕೆಯಾಗುತ್ತಿದೆ. ಹಲವು ನಾಯಕರು ಎಲ್‌ಟಿಟಿಇ ಸಂಘಟನೆಯ ಮುಖ್ಯಸ್ಥರೊಂದಿಗೆ ನೇರ ಅಥವಾ ಪರೋಕ್ಷ ಸಂಪರ್ಕ ಹೊಂದಿದ್ದಾರೆ. ಈಗ ಚುನಾವಣೆ ಇರುವುದರಿಂದ ಹಾಗೂ ಎಲ್‌ಟಿಟಿಇ ನಾಯಕರನ್ನು ಬಚಾವ್ ಮಾಡುವ ಅಗತ್ಯ ಇರುವುದರಿಂದ ತಮಿಳುನಾಡಿನ ರಾಜಕಾರಣಿಗಳು ಕೇಂದ್ರದ ಮೇಲೆ ಒತ್ತಡ ಹೇರಿದ್ದಾರೆ. ತಮಿಳುನಾಡಿನಲ್ಲಿ ಕಾಂಗ್ರೆಸ್ ಹಾಗೂ ಡಿಎಂಕೆ ಮೈತ್ರಿ ಇದೆ. ಇದೇ ಒತ್ತಡದ ಕಾರಣದಿಂದ ಹಾಗೂ ಎಲ್ಲಾದರೂ ಬೇರೆ ಪಕ್ಷಗಳಿಗೆ ಹೆಚ್ಚು ಮತ ಸಿಕ್ಕೀತು ಎಂಬ ಹೆದರಿಕೆಯಿಂದ ಕೇಂದ್ರದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಶ್ರೀಲಂಕಾ ಸರಕಾರಕ್ಕೆ ‘ಇನ್ನಷ್ಟು ಸಮಯ ಯುದ್ಧ ಸ್ಥಗಿತಗೊಳಿಸಿ, ನಾಗರಿಕರಿಗೆ ಸುರಕ್ಷಿತ ಪ್ರದೇಶಕ್ಕೆ ಹೋಗಲು ಅವಕಾಶ ನೀಡಬೇಕು’ ಎಂದು ಮನವಿ ಮಾಡಿದೆ.
ಇಷ್ಟಕ್ಕೂ ಕಾಂಗ್ರೆಸ್‌ಗೆ, ಡಿಎಂಕೆಗೆ ಹೆಚ್ಚು ಮತ ಸಿಗಲಿ ಎಂಬ ಕಾರಣಕ್ಕೆ ಶ್ರೀಲಂಕಾ ಸರಕಾರ ಯಾಕೆ ಎಲ್‌ಟಿಟಿಇ ವಿರುದ್ಧ ಯುದ್ಧ ನಿಲ್ಲಿಸಬೇಕು? ಈ ಸಮಯದಲ್ಲಿ ಕೇಂದ್ರ ಸರಕಾರ ಶ್ರೀಲಂಕಾ ಸರಕಾರವನ್ನು ಒತ್ತಾಯಿಸಿದ್ದು ಆಡಳಿತ ದುರುಪಯೋಗವಲ್ಲವೇ? ಚುನಾವಣೆ ಸಮಯದಲ್ಲಿ ರಸ್ತೆ ಬದಿ ಮೂತ್ರ ಮಾಡಿದರೂ ನೀತಿಸಂಹಿತೆ ಉಲ್ಲಂಘನೆ ಎಂದು ಹೇಳುವವರಿಗೆ ಇದ್ಯಾಕೆ ಕಾಣಲಿಲ್ಲ? ಶ್ರೀಲಂಕಾ ಸರಕಾರವನ್ನು ಒತ್ತಾಯಿಸುವ ತಮಿಳು ರಾಜಕಾರಣಿಗಳು ಯಾಕೆ ಎಲ್‌ಟಿಟಿಇ ಸಂಘಟನೆಯನ್ನೇ ಶಸ್ತ್ರ ತ್ಯಜಿಸುವಂತೆ ಒತ್ತಾಯಿಸಬಾರದು?
೧೯೯೯೨ರಲ್ಲಿ ಎಲ್‌ಟಿಟಿಯಿ ಸಂಘಟನೆಯನ್ನು ಉಗ್ರಗಾಮಿ ಸಂಘಟನೆ ಎಂದು ಭಾರತವೇ ಘೋಷಿಸಿದ್ದು, ಈಗಿನ ನಮ್ಮ ಕೇಂದ್ರ ಸರಕಾರಕ್ಕೆ ಮರೆತುಹೋಗಿದೆಯೇ? ಅದು ನೆನಪಿದ್ದು ಶ್ರೀಲಂಕಾ ಸರಕಾರಕ್ಕೆ ಯುದ್ಧ ನಿಲ್ಲಿಸುವಂತೆ ಮನವಿ ಮಾಡಿದ್ದರೆ, ಪಾಕ್ ಹಾಗೂ ಅಪಘಾನಿಸ್ತಾನದಲ್ಲಿ ನಡೆಯುತ್ತಿರುವ ಉಗ್ರರ ಮೇಲಿನ ಅಮೆರಿಕ ದಾಳಿಯನ್ನು ನೋಡಿ ಭಾರತ ಸುಮ್ಮನಿರುವುದೇಕೆ?
ನಿಮಗೆ ಗೊತ್ತಿರಲಿ ವಿಶ್ವದಲ್ಲಿಯೇ ಸ್ವಂತ ವಿಮಾನ ನಿಲ್ದಾಣ, ಯುದ್ಧ ವಿಮಾನ, ಯುದ್ಧ ನೌಕೆಗಳನ್ನು ಹೊಂದಿದ್ದ ಏಕೈಕ ಸಂಘಟನೆ ಎಲ್‌ಟಿಟಿಇ. ೧೯೭೦ರ ದಶಕದಲ್ಲಿ ಶ್ರೀಲಂಕಾದಲ್ಲಿದ್ದ ತಮಿಳರ ಪ್ರತ್ಯೇಕ ರಾಜ್ಯದ ಹೋರಾಟದ ನೆಪದಲ್ಲಿ ಆರಂಭವಾದ ಎಲ್‌ಟಿಟಿಇ, ಅಧಿಕೃತವಾಗಿ ಸ್ಥಾಪನೆಯಾಗಿದ್ದು ೧೯೭೯ರ ಮೇ ೫ರಂದು. ನಂತರ ದೊಡ್ಡ ಉಗ್ರಗಾಮಿ ಸಂಘಟನೆಯಾಗಿ ಬೆಳೆಯಿತು. ಇದನ್ನು ಏಷ್ಯಾದ ಅತಿದೊಡ್ಡ ಹಾಗೂ ಅತಿಹೆಚ್ಚು ಸಮಯ ನಡೆದ ನಾಗರಿಕ ಯುದ್ಧ ಎಂದೂ ಬಣ್ಣಿಸಬಹುದು. ಆದರೆ ಎಲ್‌ಟಿಟಿಇ ಕೃತ್ಯಗಳನ್ನು ನೋಡಿದ ಭಾರತವೂ ಸೇರಿದಂತೆ ೩೨ ದೇಶಗಳೂ ಎಲ್‌ಟಿಟಿಇಯನ್ನು ಉಗ್ರಗಾಮಿ ಸಂಘಟನೆ ಎಂದು ಘೋಷಿಸಿವೆ.
ಮಕ್ಕಳಿಗೆ ಕೂಡ ಸೈನ್ಯದ ತರಬೇತಿ ಕೊಟ್ಟು ಸೇರಿಸಿಕೊಂಡಿದ್ದು, ಮಹಿಳಾ ಆತ್ಮಹತ್ಯಾ ತಂಡಗಳನ್ನು ರಚಿಸಿದ್ದು, ಬಾಂಬ್-ಬೆಲ್ಟ್ ಕಂಡು ಹಿಡಿದ ಕುಖ್ಯಾತಿ ಕೂಡ ಎಲ್‌ಟಿಟಿಇ ಸಂಘಟನೆಯದ್ದು. ಸೈನೈಡ್ ಎಂಬ ವಿನಾಶಕಾರಿ ವಿಶವನ್ನು ಕುತ್ತಿಗೆಯಲ್ಲಿ ಕಟ್ಟಿಕೊಂಡು, ಸಿಕ್ಕಿಬೀಳುವ ಸಮಯದಲ್ಲಿ ಅದನ್ನು ತಿಂದು ಸಾಯುವ ರೀತಿಯನ್ನು ಕೂಡ ಮೊದಲು ಜಾರಿ ಮಾಡಿದ್ದು ಎಲ್‌ಟಿಟಿಇ. ನಮ್ಮದೇ ಬೆಂಗಳೂರಿನಲ್ಲಿ ಎಲ್‌ಟಿಟಿಇ ಸಂಘಟನೆಯ ಶಿವರಸನ್ ಹಾಗೂ ಸಂಗಡಿಗರು ಬಂದು ಅಡಗಿಕೊಂಡು, ಸೈನೈಡ್ ತಿಂದು ಸತ್ತಿದ್ದು ಕಂಡಿದ್ದೇವೆ. ಇಂತಹ ಬಲಿಷ್ಠ ಹಾಗೂ ವಿನಾಶಕಾರಿ ಸಂಘಟನೆಯನ್ನು ಈಗ ಮೂಲೆಗೆ ತಳ್ಳಿ, ಮುಗಿಸುವ ಹಂತದಲ್ಲಿ ಶ್ರೀಲಂಕಾ ಸರಕಾರ ಸುಮ್ಮನಿದ್ದರೆ ಅದು ಮೂರ್ಖತನವಾದೀತು.
ಅಂತಹ ಮೂರ್ಖ ನಿರ್ಧಾರ ಕೈಗೊಳ್ಳುವಂತೆ ನಮ್ಮ ರಾಜಕಾರಣಿಗಳು ಮಾತ್ರ ಒತ್ತಾಯಿಸಲು ಸಾದ್ಯ.
ಈ ಹಿಂದೆ ಬೇಕಾದಷ್ಟು ಶಾಂತಿ ಮಾತುಕತೆಗಳಾಗಿವೆ. ೨೦೦೨ರಲ್ಲಿ ಶಾಂತಿ ಮಾತುಕತೆ ನಡೆದಿದೆ. ೨೦೦೬ರಲ್ಲಿ ಶಾಂತಿ ಮಾತುಕತೆ ಮುರಿದು ಬಿದ್ದ ಮೇಲೆ ಶ್ರೀಲಂಕಾ ಸೈನಿಕರು ಎಲ್‌ಟಿಟಿಇ ಮೇಲೆ ಮುರಕೊಂಡು ಬಿದ್ದಿದ್ದರು. ೧೯೮೭ರಲ್ಲಿ ಭಾರತೀಯ ಶಾಂತಿ ಸ್ಥಾಪನಾ ಪಡೆ ಕಳುಹಿಸುವ ಹಾಗೂ ತಮಿಳು ಆಕ್ರಮಿತ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಬಗ್ಗೆ ಭಾರತ ಸರಕಾರ ಮುಂದಾಗಿ ಶ್ರೀಲಂಕಾ ಸರಕಾರದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಇದನ್ನು ಬಹುತೇಕ ತಮಿಳು ಸಂಘಟನೆಗಳು ಒಪ್ಪಿಕೊಂಡಿದ್ದವು. ಆದರೆ ಆಗಲೇ ಸಾಕಷ್ಟು ಸೊಕ್ಕಿದ್ದ ಎಲ್‌ಟಿಟಿಇ ಅದನ್ನೂ ತಿರಸ್ಕರಿಸಿತು.ಇದೇ ಕಾರಣಕ್ಕೆ ಆತ್ಮಹತ್ಯಾ ಬಾಂಬ್ ದಾಳಿ ಮೂಲಕ ೧೯೯೧ರಲ್ಲಿ ರಾಜೀವ ಗಾಂಧಿ ಹತ್ಯೆ ಮಾಡಿತು. ನಂತರ ೧೯೯೩ಲ್ಲಿ ಶ್ರೀಲಂಕಾ ಅಧ್ಯಕ್ಷ ರಣಸಿಂಗೆ ಪ್ರೇಮದಾಸ ಅವರ ಹತ್ಯೆ ಮಾಡಲಾಯಿತು. ೧೯೯೪ರಲ್ಲಿ ಚುನಾವಣೆಯಲ್ಲಿ ಚಂದ್ರಿಕಾ ಕುಮಾರತುಂಗಾ ಅಧ್ಯಕ್ಷೆಯಾಗಿ ಆಯ್ಕೆಯಾದ ನಂತರ ಶಾಂತಿ ಮಾತುಕತೆಗಳು ಮತ್ತೆ ಆರಂಭವಾದವು. ಆದರೆ ಎಲ್‌ಟಿಟಿಇ ೧೯೯೫ರಲ್ಲಿ ಶ್ರೀಲಂಕಾ ಸೈನ್ಯದ ೨ ಹಡಗನ್ನು ಮುಳುಗಿಸಿ, ಶಾಂತಿ ಮಾತುಕತೆಗೆ ಅಂತ್ಯಹಾಡಿತು. ಆಗ ಭಯಂಕರ ದಾಳಿ ನಡೆಸಿದ ಶ್ರೀಲಂಕಾ ಸೈನ್ಯ, ಎಲ್‌ಟಿಟಿಇ ವಶದಲ್ಲಿದ್ದ ಹಲವಾರು ಪ್ರದೇಶಗಳನ್ನು ವಶಪಡಿಸಿಕೊಂಡಿತ್ತು. ಆಗ ಮತ್ತದೇ ಶಾಂತಿ ನೆಪದಲ್ಲಿ ಯುದ್ಧ ನಿಂತಿತು. ಆದರೆ ೧೯೯೮ರ ನಂತರ ಮತ್ತೆ ಎಲ್‌ಟಿಟಿಇ ಪ್ರಬಲವಾಯಿತು.
೨೦೦೧ರಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಕೈಬಿಟ್ಟ ಎಲ್‌ಟಿಟಿಇ, ಪ್ರಾದೇಶಿಕ ಸ್ವಾಮ್ಯತೆ ಬೇಕು ಎಂಬ ಬೇಡಿಕೆ ಮುಂದಿಟ್ಟಿತು. ೨೦೦೨ರಲ್ಲಿ ಎಲ್‌ಟಿಟಿ ಹಾಗೂ ಶ್ರೀಲಂಕಾ ಸರಕಾರ ಒಪ್ಪಂದಕ್ಕೆ ಸಹಿ ಹಾಕಿದವು. ೬ ಸುತ್ತು ಶಾಂತಿ ಮಾತುಕತೆಗಳೂ ನಡೆದವು. ಆದರೆ ಮತ್ತೆ ಕ್ಯಾತೆ ತೆಗೆದ ಎಲ್‌ಟಿಟಿಇ ಮಾತುಕತೆ ಮುರಿಯುವಂತೆ ಮಾಡಿತು. ಈಗ ಮಹಿಂದಾ ರಾಜಪಕ್ಸಾ ಅವರು ಶ್ರೀಲಂಕಾ ಅಧ್ಯಕ್ಷರಾದ ನಂತರ ಎಲ್‌ಟಿಟಿಇ ವಿರುದ್ಧ ಉಗ್ರ ಸಮರ ಸಾರಿದ್ದಾರೆ. ಯಾವ ಒತ್ತಡಕ್ಕೂ ಹಿಂಜರಿಯದೆ ಎಲ್‌ಟಿಟಿಇ ನಾಶ ಮಾಡಿಯೇ ಸಿದ್ಧ ಎಂದು ಹೊರಟಿದ್ದಾರೆ. ಯುದ್ಧ ವಲಯದಲ್ಲಿರುವ ನಾಗರಿಕರಿಗೆ ಸುರಕ್ಷಿತ ಪ್ರದೇಶಕ್ಕೆ ೨೪ ಗಂಟೆ ಅವಧಿಯನ್ನೂ ನೀಡಿದ್ದರು.ಅದು ನಿಜವಾಗಿಯೂ ಸರಿಯಾದ ನಿರ್ಧಾರ. ಇನ್ನೂ ಎಷ್ಟು ವರ್ಷ ಶ್ರೀಲಂಕಾ ಎಂಬ ಸಣ್ಣ ರಾಜ್ಯ ಎಲ್‌ಟಿಟಿಇ ಎಂಬ ದೊಡ್ಡ ಸಮಸ್ಯೆಯೊಂದಿಗೆ ಸೆಣಸಬೇಕು? ಒಂದು ಬಾರಿ ಸಮಸ್ಯೆ ಬಗೆಹರಿಯಬೇಕು. ಅದಕ್ಕೆ ಎಲ್‌ಟಿಟಿಇ ಅಂತ್ಯವೊಂದೇ ದಾರಿ.
ಹೀಗೆ ಕಠಿಣ ನಿರ್ಧಾರದ ಫಲವಾಗಿಯೇ ಇಂದು ತಮಿಳು ಹುಲಿ ಗಾಯಗೊಂಡು ಏದುಸಿರು ಬಿಡುತ್ತಿದೆ. ಬಲೆಗೆ ಬೀಳುವ ಅನಿವಾರ್ಯದಲ್ಲಿದೆ.
ಇಂತಹ ಸಂದರ್ಭದಲ್ಲಿ ನಮ್ಮ ರಾಜಕಾರಣಿಗಳು ಕೇವಲ ಮತಕ್ಕಾಗಿ ಯುದ್ಧ ನಿಲ್ಲುಸುವಂತೆ ಹೇಳುತ್ತಿರುವುದು ಯಾವ ನ್ಯಾಯ? ಎಲ್‌ಟಿಟಿಇ ಈ ವರೆಗೆ ಎಷ್ಟು ಬಾಂಬ್ ದಾಳಿ ಮಾಡಿದೆ. ಅದರ್‍ಲಿ ಸತ್ತವರ ಜೀವಕ್ಕೆ, ಅವರ ಸಂಬಂಧಿಗಳ ದುಃಖಕ್ಕೆ ಬೆಲೆ ಇಲ್ಲವೇ? ನಮ್ಮದೇ ಪ್ರಧಾನಿ ಒಬ್ಬರನ್ನು ಎಲ್‌ಟಿಟಿಇ ಹತ್ಯೆ ಮಾಡಿದ್ದನ್ನು ಇದೇ ಕಾಂಗ್ರೆಸ್ಸಿಗರು ಮತಕ್ಕಾಗಿ ಮರೆತುಬಿಟ್ಟರೆ? ಪತಿ ಹತ್ಯೆ ಮಾಡಿದ ಸಂಘಟನೆಯ ವಿರುದ್ಧ ಯುದ್ಧ ನಿಲ್ಲಿಸುವಂತೆ ಕೇಂದ್ರ ಸರಕಾರ ಒತ್ತಾಯಿಸುವಾಗ ಸೋನಿಯಾ ಅವರಿಗೆ ಒಂದು ಬಾರಿಯೂ ಚಿದ್ರಚಿದ್ರವಾದ ರಾಜೀವ್ ಗಾಂಧಿ ದೇಹ ನೆನಪಾಗಲಿಲ್ಲವೇ? ಇಂದಿಗೂ ರಾಜೀವ್ ಫೋಟೋ ಹಾಕಿ ಮತ ಕೇಳುವ ಕಾಂಗ್ರೆಸ್ ನಾಯಕರಿಗೆ, ಅವರ ಹತ್ಯೆ ಮಾಡಿದ ಸಂಘಟನೆಯ ವಿರುದ್ಧ ಯುದ್ಧ ನಿಲ್ಲಿಸುವಂತೆ ಹೇಳುವ ಮನಸ್ಸಾದರೂ ಹೇಗೆ ಬಂತು?
ನಮ್ಮ ದೇಶದಲ್ಲಿ ಸಮಸ್ಯೆಗಳು ದೊಡ್ಡದಾಗುತ್ತಿರುವುದೇ ಹೀಗೆ. ನಕ್ಸಲೀಯರ ಹಾವಳಿ ಇಷ್ಟೆಲ್ಲ ಹೆಚ್ಚಲು ನಮ್ಮ ಸರಕಾರಗಳ ಅರೆಬರೆ ನೀತಿಗಳೇ ಕಾರಣ. ಎಲ್‌ಟಿಟಿಇ ಸಂಘಟನೆ ಮೇಲೆ ಶ್ರೀಲಂಕಾ ಈಗ ಮುರಕೊಂಡು ಬಿದ್ದಂತೆ ನಮ್ಮ ಸರಕಾರಗಳೂ ನಕ್ಸಲೀಯರ ವಿರುದ್ಧ ಕೈತೊಳೆದು ಬೆನ್ನುಹತ್ತಿದ್ದರೆ ಇಷ್ಟೊತ್ತಿಗೆ ನಕ್ಸಲೀಯರ ಹುಟ್ಟಡಗಿಹೋಗುತ್ತಿತ್ತು. ಆದರೆ ನಮ್ಮಲ್ಲಿ ಹಾಗೆ ಮಾಡುವುದರಿಂದ ಆಗುವ ಒಳಿತಿಗಿಂತ, ತಮಗೆ, ತಮ್ಮ ಪಕ್ಷಕ್ಕೆ ಆಗುವ ಮತದ ಲಾಭ-ನಷ್ಟ ಯೋಚಿಸಲಾಗುತ್ತದೆ.
ಇಂತಹ ಸ್ವಂತ ಲಾಭದ ಯೋಚನೆಗಳನ್ನು ನಮ್ಮ ದೇಶಕ್ಕಷ್ಟೇ ಸೀಮಿತವಾಗಿರಿಸದ ರಾಜಕಾರಣಿಗಳು ಈಗ ಅದನ್ನು ನಮ್ಮ ವಿದೇಶಾಂಗ ನೀತಿಯಲ್ಲೂ ತೂರಿಸಿದ್ದಾರೆ. ಅಮೆರಿಕಾ ಅಪಘಾನಿಸ್ತಾನದಲ್ಲಿ ಉಗ್ರರ ವಿರುದ್ಧ ಯುದ್ಧ ಆರಂಭಿಸಿದಾಗ ಸುಮ್ಮನಿದ್ದ ಭಾರತ ಈಗಲೂ ಇದನ್ನು ಶ್ರೀಲಂಕಾದ ಆಂತರಿಕ ಸಮಸ್ಯೆ ಎಂದು ಸುಮ್ಮನಿರುವುದು ಬುದ್ದಿವಂತ ನಿರ್ಧಾರ. ಇಷ್ಟಕ್ಕೂ ಎಲ್‌ಟಿಟಿಇ ಸಂಘಟನೆಯನ್ನು ಉಳಿಸಿದರೆ ಅದೇನು ಬಂದು ನಮ್ಮನ್ನು ಉದ್ಧಾರ ಮಾಡುವುದಿಲ್ಲ.
ಯಾಕೆಂದರೆ ಹಾವಿಗೆ ಹಾಲರೆದೇನು ಫಲ? ನೀವು ಹಾಲು ಕುಡಿಸಿದರೂ ಹೊರಬುರುವುದು ಹಾಲಾಹಲವೇ. ತಮಿಳು ಹುಲಿ ಈಗ ಗಾಯಗೊಂಡಿರಬಹುದು. ಗಾಯಗೊಂಡಾಗ ಹೊಡೆಯುವುದು ಬೇಡ ಎಂದು ಸುಮ್ಮನಿದ್ದರೆ, ಗಾಯ ಗುಣವಾಗಿ ಅದು ನಮ್ಮ ಮೇಲೆ ದಾಳಿ ನಡೆಸುವ ಸಾದ್ಯತೆಯಿದೆ. ಹಾಗಾಗಿ ಗಾಯಗೊಂಡು ಬಿದ್ದಿರುವ ಹುಲಿಯನ್ನು ಹೊಡೆಯುವುದೇ ಜಾಣತನ. ಅದನ್ನು ಶ್ರೀಲಂಕಾ ಸರಕಾರ ಮಾಡಲಿಬಿಡಿ.

Friday, April 24, 2009

ಕಪ್ಪು ಹಣ ತರುವುದು ಹೇಳಿದಷ್ಟು ಸುಲಭವೇ?



ಯಾರೂ ನಿರೀಕ್ಷಿಸದ ರೀತಿಯಲ್ಲಿ ೨೦೦೯ರ ಲೋಕಸಭಾ ಚುನಾವಣಾ ವಿಷಯವಾಗಿ ಹೊರಹೊಮ್ಮಿದ್ದು ಸ್ವಿಸ್ ಬ್ಯಾಂಕ್‌ನಲ್ಲಿರುವ ಕಪ್ಪು ಹಣ. ಚುನಾವಣೆ ಘೊಷಣೆಯಾಗುವವರೆಗೂ ಇದೊಂದು ಚುನಾವಣಾ ವಿಷಯ ಅಂತ ಯಾರಿಗೂ ಅನಿಸಿರಲೇ ಇಲ್ಲ. ಹಾಗಾಗಬಹುದು ಎಂಬ ಕಲ್ಪನೆಯೂ ಇರಲಿಲ್ಲ. ಆದರೆ ಬಿಜೆಪಿ ಚುನಾವಣಾ ವಿಷಯವೆಂದು ಪರಿಗಣಿಸಿದ್ದ ಹಣದುಬ್ಬರ ಕಡಿಮೆಯಾಗಿ, ದರಗಳು ಸ್ವಲ್ಪ ನಿಯಂತ್ರಣಕ್ಕೆ ಬಂದಿದ್ದರಿಂದ ಅದನ್ನು ಚುನಾವಣಾ ವಿಷಯವಾಗಿ ಬಳಸಿಕೊಳ್ಳೂವುದು ಸಾದ್ಯವಿರಲಿಲ್ಲ. ಭಯೋತ್ಪಾದನೆ ಬಗ್ಗೆ ಮಾತಾಡ ಹೊರಟರೆ ಕಾಂಗ್ರೆಸ್ಸಿಗರು ‘ಕಂದಹಾರ್ ಪ್ರಕರಣ’ವನ್ನು ಪ್ರತಿ ಅಸ್ತ್ರವಾಗಿ ಬಳಸಿದರು.
ಹೀಗಾಗಿ ಬಿಜೆಪಿಗೆ ಹೊಸತೊಂದು ಚುನಾವಣಾ ವಿಷಯ ಬೇಕಿತ್ತು. ಬ್ರಹ್ಮಾಸ್ತ್ರದಂತೆ ಸಿಕ್ಕಿದ್ದು ಸ್ವಿಸ್ ಬ್ಯಾಂಕ್‌ನಲ್ಲಿರುವ ಕಪ್ಪು ಹಣ. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಕೂಡ ಇದನ್ನು ಪ್ರಸ್ತಾಪಿಸಿತು. ಇದೊಂದು ಚುಣಾವಣಾ ವಿಷಯ ಆಗಬಹುದು ಎಂದು ಕಾಂಗ್ರೆಸ್ ನಿರೀಕ್ಷಿಸಿರಲಿಲ್ಲ. ಹಾಗಾಗಿ ಆ ವಿಷಯದ ಬಗ್ಗೆ ಅದು ಮೌನವಾಗಿತ್ತು. ಯಾವಾಗ ಬಿಜೆಪಿ ಅದನ್ನೊಂದು ಚುನಾವಣಾ ಅಸ್ತ್ರವಾಗಿ ಬಳಸಲಾರಂಭಿಸಿತೊ ಆಗ ಅದು ವಿದೇಶದಲ್ಲಿರುವ ಕಪ್ಪು ಹಣದ ಬಗ್ಗೆ ಬಾಯ್ಬಿಡತೊಡಗಿತು.
ಎರಡೂ ಪಕ್ಷಗಳ ಆರೋಪ ಪ್ರತ್ಯಾರೋಪಗಳ ನಡುವೆ ಜನ ಗೊಂದಲಕ್ಕೆ ಸಿಲುಕಿದ್ದಾರೆ. ಆ ಗೊಂದಲಗಳಿಗೆ ಉತ್ತರ ಹುಡುಕುವ ಸಣ್ಣ ಯತ್ನ ಇದು.
ಬಹುತೇಕವಾಗಿ ಸ್ವಿಸ್ ಬ್ಯಾಂಕ್ ಹೆಸರು ಮಾತ್ರ ಕೇಳಿಬರುತ್ತಿದ್ದರೂ, ಸ್ವಿಟ್ಜರ್‌ಲ್ಯಾಂಡ್, ಮಾರಿಶಸ್, ಸಿಪ್ರಸ್ ದೇಶದ ಬ್ಯಾಂಕುಗಳು ಇದ್ದುದರಲ್ಲಿ ಪ್ರಸಿದ್ಧ. ಇವುಗಳಲ್ಲಿ ಭಾರತದ ಪ್ರಜೆಗಳು ಎಷ್ಟು ಹಣ ಇಟ್ಟಿದ್ದಾರೆ ಎಂಬುದು ಬ್ಯಾಂಕ್ ಅಧಿಕಾರಿಗಳಿಗೆ ಬಿಟ್ಟರೆ ಬೇರೆ ಯಾರಿಗೂ ಗೊತ್ತಿಲ್ಲ. ಯಾಕೆಂದರೆ ಬ್ಯಾಂಕುಗಳು ಈ ಮಾಹಿತಿಯನ್ನು ಈವರೆಗೆ ಬಹಿರಂಗಗೊಳಿಸಿಲ್ಲ. ಗೌಪ್ಯವೇ ಆ ಬ್ಯಾಂಕುಗಳ ಬಡವಾಳ. ಬಿಜೆಪಿ ಪ್ರಕಾರ ೨೫,೦೦,೦೦ ಕೋಟಿ ರೂ. ಕಪ್ಪು ಹಣ ವಿದೇಶಿ ಬ್ಯಾಂಕುಗಳಲ್ಲಿದೆ. ಇದೊಂದು ಅಂದಾಜು ಅಷ್ಟೆ. ಅದು ಹೆಚ್ಚೂ ಆಗಿರಬಹುದು. ಕಡಿಮೆಯೂ ಆಗಿರಬಹುದು.
ಬಿಜೆಪಿ ಹೇಳುತ್ತಿರುವ ವಿದೇಶಿ ಬ್ಯಾಂಕುಗಳಲ್ಲಿರುವ ಹಣದ ಮೊತ್ತದ ಬಗ್ಗೆಯೇ ಕಾಂಗ್ರೆಸ್ ತಕರಾರು ತೆಗೆದಿದೆ. ಅದಕ್ಕೆ ಯಾವುದೇ ಆಧಾರವಿಲ್ಲ ಎಂದಿದೆ. ಹೌದು. ಬಿಜೆಪಿ ಹೇಳುತ್ತಿರುವ ಮೊತ್ತಕ್ಕೆ ಸೂಕ್ತ ಆಧಾರವಿಲ್ಲ. ಆದರೆ ಎಷ್ಟಿದ್ದರೇನು? ಬೇಕಾದರೆ ಒಂದು ಲಕ್ಷ ರೂ. ಇರಲಿ. ಅದನ್ನು ದೇಶಕ್ಕೆ ತರುವುದರಲ್ಲಿ ಖಂಡಿತ ತಪ್ಪಿಲ್ಲವಲ್ಲ. ಹೀಗಾಗಿ ಎಷ್ಟು ಹಣವಿದೆ ಎಂದು ಕಾಂಗ್ರೆಸ್ ಪಕ್ಷ ಪ್ರಶ್ನಿಸುತ್ತಿರುವುದರಲ್ಲಿ ಅಥವಾ ಎಷ್ಟು ಹಣ ಇರಬಹುದು ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ. ಎಷ್ಟಾದರೂ ಇರಲಿ. ಅದನ್ನು ತರೋಣ.
ಅಮೆರಿಕ ಇತ್ತೀಚೆಗಷ್ಟೇ ಸ್ವಿಸ್ ಬ್ಯಾಂಕ್‌ನಲ್ಲಿರುವ ಅಮೆರಿಕ ಪ್ರಜೆಗಳ ಖಾತೆಗಳ ವಿವರ ಪಡೆದುಕೊಳ್ಳಲು ಯಶಸ್ವಿಯಾಗಿದೆ. ಸ್ವಿಸ್‌ಬ್ಯಾಂಕ್‌ನಲ್ಲಿದ್ದ ತನ್ನ ದೇಶದ ಪ್ರಜೆಗಳ ಹಣ ಪಡೆದುಕೊಳ್ಳಲು ಐರ್‍ಲೆಂಡ್ ಯಶಸ್ವಿಯಾಗಿದೆ. ಆದರೆ ಇದೆಲ್ಲ ಸಾದ್ಯವಾಗಿದ್ದು, ಆಯಾ ದೇಶಗಳ ಆಂತರಿಕ ತನಿಖಾ ತಂಡಗಳು ಸೂಕ್ತ ದಾಖಲೆಗಳನ್ನು ಒದಗಿಸಿದ ಮೇಲೆ ಎಂಬುದು ಗಮನಾರ್ಹ. ಇದನ್ನು ಭಾರತ ಸರಿಯಾಗಿ ಮಾಡಲು ಸಾದ್ಯವೇ ಎಂಬುದು ಈಗಿರುವ ಪ್ರಶ್ನೆ.
ಬಿಜೆಪಿ ಬಾಯಲ್ಲಿ ಹೇಳಿದಷ್ಟು ಸುಲಭವಲ್ಲ ವಿದೇಶಿ ಬ್ಯಾಂಕುಗಳಲ್ಲಿರುವ ಕಪ್ಪು ಹಣ ತರುವುದು. ಯಾಕೆಂದರೆ ನಮ್ಮಲ್ಲಿ ಎಂತೆಂತಹ ಪ್ರಕರಣಗಳು ಹೇಗೆ ಹಳ್ಳ ಹಿಡಿದಿವೆ ಎಂಬುದನ್ನು ನಾವು ಕಣ್ಣಾರೆ ಕಂಡಿದ್ದೇವೆ. ಸಿಬಿಐನಂತಹ ಉನ್ನತ ತನಿಖಾ ಸಂಸ್ಥೆ ಕೂಡ ದೇಶದ ನಾಗರಿಕರ ನಂಬಿಕೆ ಕಳೆದುಕೊಂಡಿದೆ. ಒಂದು ಪಕ್ಷದ ಸರಕಾರ ಇದ್ದಾಗ ಒಂದು ನಮೂನೆ ತನಿಖೆಯಾದರೆ, ಇನ್ನೊಂದು ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ತನಿಖೆ ಇನ್ನೊಂದು ರೀತಿಯಲ್ಲಿ ಮುಕ್ತಾಯವಾಗುವುದನ್ನು ಕಂಡಿದ್ದೇವೆ. ೧೯೮೪ರ ಗಲಭೆ ಪ್ರಕರಣದಲ್ಲಿ ಜಗದೀಶ್ ಟೈಟ್ಲರ್ ಹಾಗೂ ಸಜ್ಜನ್ ಕುಮಾರ್‌ರನ್ನು ಆರೋಪ ಮುಕ್ತ ಎಂದು ವರದಿ ನೀಡಿರುವುದು ಇತ್ತೀಚಿನ ಉದಾಹರಣೆ. ಅದನ್ನು ಸಿಖರು ಉಗ್ರವಾಗಿ ಖಂಡಿಸಿದ್ದು ಜನಕ್ಕೆ ಸಿಬಿಐ ಮೇಲೆ ಕೂಡ ನಂಬಿಕೆ ಹೊರಟುಹೋಗಿದೆ ಎಂಬುದಕ್ಕೆ ಸೂಚನೆ.
ಭಾರತದ ವಿದೇಶಾಂಗ ನೀತಿ ಕೂಡ ಕಪ್ಪು ಹಣ ತರಲು ಅಡ್ಡಿಯಾಗಬಹುದು. ಹಲವಾರು ಅಂತರಾಷ್ಟ್ರೀಯ ಕಾನೂನುಗಳು ಅಡೆತಡೆ ಒಡ್ಡಬಹುದು. ಇದನ್ನೆಲ್ಲ ಸರಿಪಡಿಸಿ, ಕಪ್ಪು ಹಣ ತರುವುದು ಎಂದರೆ ಕಪ್ಪು ಆನೆಯನ್ನು ತೊಳೆದು ಬಿಳಿ ಮಾಡಿದಂತೆಯೆ. ಅದೊಂದು ಸಾಹಸವೇ ಸರಿ. ಆದರೆ ದೇಶದ ಒಳಿತಿಗಾಗಿ ಅಂತಹ ಸಾಹಸ ಮಾಡುವುದೇ ಉತ್ತಮ.
ಈ ವಿಷಯವನ್ನು ಬಿಜೆಪಿ ಚುನಾವಣಾ ಅಸ್ತ್ರವನ್ನಾಗಿ ಬಳತೊಡಗಿದ ನಂತರ ಕಾಂಗ್ರೆಸ್ ಕಂಗಾಲಾಗಿದ್ದು ಸತ್ಯ. ಅದರ ವಕ್ತಾರರು ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡಿ, ಇನ್ನಷ್ಟು ಗೊಂಲದ ಸೃಷ್ಟಿಸಿದರು. ಆದರೆ ಕಾಂಗ್ರೆಸ್ ಆರೋಪದಂತೆ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ಈ ವಿಷಯ ಆರಂಭಿಸಿಲ್ಲ. ಚುನಾವಣೆ ಸಮಯದಲ್ಲಿ ಇದರ ಬಗ್ಗೆ ಹೆಚ್ಚಾಗಿ ಮಾತಾಡಿರಬಹುದು. ಆದರೆ ೨೦೦೮ರ ಏಪ್ರಿಲ್ ತಿಂಗಳಲ್ಲಿಯೇ ಪ್ರಧಾನಿ ಮನಮೋಹನ ಸಿಂಗ್ ಅವರೊಂದಿಗೆ ಚರ್ಚಿಸಿದ್ದರು. ಜರ್ಮನಿ ಸರಕಾರ ವಿದೇಶಿ ಬ್ಯಾಂಕೊಂದರಲ್ಲಿದ್ದ ಜರ್ಮನ್ ಪ್ರಜೆಗಳ ವಿವರ ಪಡೆದುಕೊಂಡ ಸುದ್ದಿ ಗಮನಿಸಿದ ಅಡ್ವಾಣಿ, ಪ್ರಧಾನಿಗೆ ಪತ್ರ ಬರೆದು ಗಮನ ಸೆಳೆದಿದ್ದರು. ಅದಕ್ಕೆ ಆಗ ಹಣಕಾಸು ಸಚಿವರಾಗಿದ್ದ ಪಿ. ಚಿದಂಬರಂ ಉತ್ತರ ಬರೆದು, ‘ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.’
ಇದಾದ ಸ್ವಲ್ಪ ಸಮಯದಲ್ಲೇ ಹಣಕಾಸು ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಜರ್ಮನಿಯಲ್ಲಿರುವ ಭಾರತದ ರಾಯಬಾರಿ ಅವರಿಗೆ ‘ಕಪ್ಪು ಹಣದ ವಿವರ ಬಹಿರಂಗಕ್ಕೆ ಅಲ್ಲಿನ ಸರಕಾರದ ಮೇಲೆ ಜಾಸ್ತಿ ಒತ್ತಡ ಹೇರುವ ಅಗತ್ಯವಿಲ್ಲ’ ಎಂಬರ್ಥದ ಪತ್ರ ಬರೆದಿರುವ ವಿಷಯ ಕೂಡ ಬಹಿರಂಗಗೊಂಡಿತ್ತು. ಲೋಕಸಭೆಯಲ್ಲಿ ಕೂಡ ಚರ್ಚೆಯಾಗಿದೆ. ಪಿ. ಚಿದಂಬರಂ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ‘ಕೇಂದ್ರ ಸರಕಾರ ಸ್ವಿಸ್ ಬ್ಯಾಂಕ್‌ಗೆ ಭಾರತದ ಪ್ರಜೆಗಳ ಖಾತೆ ವಿವರ ನೀಡುವಂತೆ ಪತ್ರ ಬರೆದಿದೆ. ೬ ತಿಂಗಳಾದರೂ ಬೇಕು ಉತ್ತರ ಬರಲು’ ಎಂದು ಹೇಳಿದ್ದರು.
ಆದರೆ ಏಪ್ರಿಲ್ ೧೮ರಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಸ್ವಿಸ್ ರಾಯಭಾರಿ ಅವರ ಹೇಳೀಕೆಯನ್ನು ಆಧರಿಸಿ ಲೇಖನವೊಂದನ್ನು ಪ್ರಕಟಿಸಿದೆ. ಸ್ವಿಸ್ ರಾಯಭಾರಿ ಅವರ ಪ್ರಕಾರ ‘ಅವರು ಈವರೆಗೆ ಸ್ವಿಸ್ ಸರಕಾರ ಅಂತಹ ಯಾವುದೇ ಮನವಿ ಅಥವಾ ಪತ್ರವನ್ನು ಸ್ವೀಕರಿಸಿಲ್ಲ’ ಎಂದಿದ್ದಾರೆ. ಇಷ್ಟೆಲ್ಲ ಆದಮೇಲೆ ಅದನ್ನೊಂದು ಚುನಾವಣಾ ವಿಷಯವನ್ನಾಗಿ ಮಾಡಿ, ಜನರ ಪ್ರತಿಕ್ರಿಯೆ ನಿರೀಕ್ಷಿಸಿದರೆ ತಪ್ಪೇನು?
ಇಷ್ಟೆಲ್ಲ ಚರ್ಚೆ ನಡೆಯುವ ಸಮಯದಲ್ಲಿ ಸಾಮಾನ್ಯ ಜನರ ಮನಸಲ್ಲಿ ಮೂಡುವ ಮತ್ತೊಂದು ಪ್ರಶ್ನೆಯೆಂದರೆ ಇದೆಲ್ಲ ಚರ್ಚೆಯಿಂದ ಸ್ವಿಸ್‌ಬ್ಯಾಂಕ್‌ನಲ್ಲಿ ಹಣ ಇಟ್ಟವರು ಅದನ್ನು ತೆಗೆದು ಬೇರೆಡೆ ಸಾಗಿಸಲಾರರೇ ಎಂಬುದು. ಈ ಸಾದ್ಯತೆಯಿದೆ. ಆದರೆ ಈ ಕಪ್ಪು ಹಣವನ್ನು ಅವರು ತೆರಿಗೆದಾರರ ಸ್ವರ್ಗ ಎಂದು ಕರೆಯಲಾಗುವ ಬೇರೆ ರಾಷ್ಟ್ರಗಳ ಬ್ಯಾಂಕ್‌ಗಳಲ್ಲಿ ಇಡಬೇಕಾಗುತ್ತದೆ. ಅಲ್ಲದೆ ದಿಢೀರನೆ ದೊಡ್ಡ ಮೊತ್ತದ ಹಣವನ್ನು ಬೇಕಾದಲ್ಲಿಗೆ ಸಾಗಿಸುವುದು ಕೂಡ ಅಷ್ಟು ಸುಲಭವಲ್ಲ.
ಒಂದಂತೂ ಸತ್ಯ. ವಿದೇಶಿ ಬ್ಯಾಂಕುಗಳಲ್ಲಿರುವ ನಮ್ಮ ದೇಶದ ಪ್ರಜೆಗಳ ಕಪ್ಪು ಹಣ ತರಲು ರಾಜಕೀಯ ಇಚ್ಛಾ ಶಕ್ತಿ ಅತ್ಯಂತ ಅಗತ್ಯ. ಯಾಕೆಂದರೆ ದೇಶದೊಳಗೆ ಕಠಿಣ ತನಿಖೆ ನಡೆಸಿ ಕಪ್ಪು ಹಣ ಇಟ್ಟಿರುವವರ ಬಗ್ಗೆ ಸೂಕ್ತವಾದ ಸಾಕ್ಷ್ಯ ಸಂಗ್ರಹಿಸಬೇಕು. ಅದರ ಜೊತೆ ಜೊತೆಗೆ ವಿದೇಶಾಂಗ ವ್ಯವಹಾರ ನೀತಿಗಳ ಮೂಲಕ ವಿದೇಶಿ ಬ್ಯಾಂಕು ಹಾಗೂ ಸರಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅವುಗಳ ಜತೆ ಅಗತ್ಯ ಒಪ್ಪಂದಗಳನ್ನು ಮಾಡಿಕೊಳ್ಳಬೇಕು. ಒಟ್ಟು ೭೦ ತೆರಿಗೆದಾರರ ಸ್ವರ್ಗ ಎಂದು ಕರೆಯಲಾಗುವ ದೇಶಗಳೊಂದಿಗೆ ಇಂತಹ ವ್ಯಾವಹಾರಿಕ ಒಪ್ಪಂದ ಮಾಡಿಕೊಂಡು ಅವರ ಬ್ಯಾಂಕುಗಳಲ್ಲಿರುವ ಹಣ ತರಿಸುವ ಹೊತ್ತಿಗೆ ದಶಕಗಳೇ ಬೇಕಾಗಬಹುದು. ಅಷ್ಟು ಸಮಯವೂ ರಾಜಕೀಯ ಇಚ್ಛಾ ಶಕ್ತಿಯನ್ನು ಕಾಪಾಡಿಕೊಂಡು ಕೆಲಸ ಮಾಡುವ ಅಗತ್ಯವಿರುತ್ತದೆ.
ಆದರೆ ಕಪ್ಪು ಹಣ ಈ ಬಾರಿ ಚುನಾವಣಾ ವಿಷಯವಾಗುವುದರಿಂದ ದೇಶಾದ್ಯಂತ ಈ ಬಗ್ಗೆ ಜನಾಭಿಪ್ರಾಯ, ಜಾಗೃತಿ ಮೂಡುತ್ತಿದೆ. ಬಿಜೆಪಿಯೊಂದೇ ಅಲ್ಲ ಸಿಪಿಎಂ, ಎಸ್ಪಿ, ಬಿಎಸ್ಪಿ, ಎಐಎಡಿಎಂಕೆ ಮುಂತಾದ ಪಕ್ಷಗಳು ಕೂಡ ಕಪ್ಪು ಹಣ ತರುವ ಬಗ್ಗೆ ಒಲವು ವ್ಯಕ್ತಪಡಿಸಿವೆ. ಈ ನಡುವೆ ರಾಮಜೇಠ ಮಲಾನಿಯಂತಹ ಪ್ರಸಿದ್ಧ ವಕೀಕಲರು ಕಪ್ಪು ಹಣದ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಖೂಡ ಹೂಡಿದ್ದಾರೆ. ಏನೇ ಹೆಣಗಾಡಿದರೂ ಹಣ ತರಲು ವರ್ಷಗಟ್ಟಲೆ ಹೆಣಗಬೇಕಾಗಬಹುದು. ಅದರ ಬಗ್ಗೆ ಉತ್ತಮ ಆರಂಭವನ್ನಂತೂ ಮಾಡಿದಂತಾಗಿದೆ.
ಆದರೆ ಇದು ಕೇವಲ ಚುನಾವಣಾ ಪ್ರಚಾರಕ್ಕೆ ಸೀಮಿತವಾಗದಿರಲಿ. ದೇಶಕ್ಕೆ ಒಳಿತಾಗಲಿ.

Tuesday, April 07, 2009

ಹಿಂದೂ ಪರವೆಂದರೆ ಮುಸ್ಲಿಮರನ್ನು ವಿರೋಧಿಸುವುದೇ?


'ಮುಸ್ಲಿಮರು ಪುಂಡಾಟಿಕೆ ನಡೆಸಿದರೆ ಬಕ್ರೀದ್, ಈದ್ ಮಿಲಾದ್ ಆಚರಿಸುವುದು ಕಷ್ಟವಾದೀತು. ನನ್ನ ಮೇಲೆ ೬೩ ಕ್ರಿಮಿನಲ್ ಪ್ರಕರಣಗಳಿವೆ. ಚುನಾವಣಾ ಆಯೋಗ ಇನ್ನೊಂದು ಪ್ರಕರಣ ದಾಖಲಿಸಲಿ. ನನಗೆ ಅಲ್ಪಸಂಖ್ಯಾತರ ಒಂದೇ ಒಂದು ಮತವೂ ಬೇಡ’ ಇಂತಹ ಹೇಳಿಕೆಯನ್ನು ಉತ್ತರ ಕನ್ನಡದ ಸಂಸದನೊಬ್ಬನಿಂದ ಯಾರೂ ಖಂಡಿತ ನಿರೀಕ್ಷಿಸಿರಲಿಲ್ಲ.

ದಕ್ಷಿಣ ಕನ್ನಡ ಅಥವಾ ಉಡುಪಿ, ಚಿಕ್ಕಮಗಳೂರು ಜಿಲ್ಲೆಯ ರಾಜಕಾರಣಿಗಳು ಈ ರೀತಿ ಹೇಳಿದರೆ, ಅವರು ಯಾಕೆ ಹಾಗೆ ಹೇಳಿದರು ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ ಉತ್ತರ ಕನ್ನಡದಂತಹ ಜಿಲ್ಲೆಯ ರಾಜಕಾರಣಿಗಳಿಗೆ ಖಂಡಿತ ಇಂತಹ ಹೇಳಿಕೆಗಳ ಅಗತ್ಯವಿಲ್ಲ. ಯಾಕೆಂದರೆ ಉತ್ತರ ಕನ್ನಡದಲ್ಲಿ ಅಂತಹ ಹೇಳಿಕೆಗಳಿಂದ ಓಟು ಪಡೆಯಲು ಸಾದ್ಯವಿಲ್ಲ. ಆದರೆ ಅನಂತಕುಮಾರ ಹೆಗಡೆಯಂತಹ ಸಂಸದರಿಂದ ಇನ್ನೇನು ನಿರೀಕ್ಷಿಸಲು ಸಾದ್ಯ?

ಚುನಾವಣೆಗಳು ಬಂದಾಗ ರಾಜಕೀಯ ನಾಯಕರುಗಳಿಗೆ ಜಾತಿ, ಧರ್ಮ ಎಲ್ಲ ನೆನಪಾಗುತ್ತದೆ. ಹಾಗೆಯೇ ಪರಸ್ಪರ ಟೀಕೆಗಳು ಕೇಳಿಬರುತ್ತವೆ. ಅದು ಸಾಮಾನ್ಯ. ಆದರೆ ೩ ಬಾರಿ ಉತ್ತರ ಕನ್ನಡದಿಂದ ಸಂಸದರಾಗಿ ಆಯ್ಕೆಯಾಗಿರುವ ಅನಂತ ಕುಮಾರ್ ಹೆಗಡೆಗೆ ಚುನಾವಣೆಗೆ ೬ ತಿಂಗಳಿರುವಂತೆ ದಿಢೀರನೆ ಮುಸ್ಲಿಂ ವಿರೋಧಿ ಭಾವ ಜಾಗೃತವಾಗಿಬಿಟ್ಟಿದೆ. ಹೋದಲ್ಲೆಲ್ಲ ಮುಸ್ಲಿಮರನ್ನು ಬಯ್ಯುವುದೇ ಅವರ ಏಕಂಶ ಕಾರ್ಯಕ್ರಮ. ಅಲ್ಪಸಂಖ್ಯಾತರ ಒಂದೇ ಒಂದು ಮತ ಬೇಡ. ನಾನು ಬಹುಸಂಖ್ಯಾತರ ಮತದಿಂದಲೇ ಗೆದ್ದು ಬರುತ್ತೇನೆ ಎಂಬ ಅಹಂಕಾರದ ಮಾತುಗಳನ್ನಾಡಿದ್ದಾರೆ. ಇರಲಿ ಅನಂತ ಕುಮಾರ ಹೆಗಡೆ ಅವರು ಬಹುಸಂಖ್ಯಾತರ ಮತದಿಂದಲೇ ಗೆದ್ದುಬರಲಿ. ಅವರು ಯಾರ ಮತದಿಂದಲೇ ಗೆದ್ದು ಬಂದರೂ ಅವರು ಇಡೀ ಜಿಲ್ಲೆಯ ಸಂಸದ ಎಂಬುದನ್ನು ಅವರು ಮರೆಯಬಾರದು. ಗೆದ್ದುಬಂದ ಮೇಲೆ ಮತ ಹಾಕಿದವನಿಗೂ, ಮತ ಹಾಕದವನಿಗೂ ಅವರೇ ಸಂಸದರು ಎಂಬ ಸರಳ ಸತ್ಯವನ್ನು ಅವರು ಮರೆತಂತಿದೆ.

ಉತ್ತರ ಕನ್ನಡ ಶಾಂತಿಯುತ ಜಿಲ್ಲೆ. ಜಿಲ್ಲೆಯಲ್ಲಿ ಸಾಕಷ್ಟು ಹೋರಾಟಗಳು ನಡೆದಿವೆಯಾದರೂ, ಯಾವುದೂ ತೀವ್ರ ಹಿಂಸಾರೂಪ ತಾಳಿದ್ದಿಲ್ಲ. ಭಟ್ಕಳದಲ್ಲಿ ಘೋರ ಗಲಭೆ ಆಗಿಲ್ಲವೇ? ಅಂತ ನೀವು ಕೇಳಬಹುದು. ಹೌದು ಭಟ್ಕಳದಲ್ಲಿ ಗಲಭೆಯಾಗಿದೆ. ಆದರೆ ಅದು ಭಟ್ಕಳ ದಾಟಿ ಬಂದಿಲ್ಲ. ಭಟ್ಕಳ ಹೊತ್ತಿ ಉರಿಯುತ್ತಿದ್ದಾಗಲೂ ಪಕ್ಕದ ಹೊನ್ನಾವರ, ಕುಮಟಾಗಳಲ್ಲಿ ಜನಜೀವನ ಸಾಮಾನ್ಯವಾಗಿತ್ತು. ಇಲ್ಲೆಲ್ಲ ಯಾವ ಮುಸ್ಲಿಮನಾಗಲಿ, ಹಿಂದುವಾಗಲಿ ಭಯ ಭೀತನಾಗಲಿಲ್ಲ. ಭಟ್ಕಳದಲ್ಲಿ ಗಲಭೆಯಾಯಿತು ಎಂದು ತಾವೂ ಗಲಭೆಗಿಳಿಯಲಿಲ್ಲ.

ಹಾಗೆಯೇ ಭಟ್ಕಳದ ಇನ್ನೊಂದು ವಿಶೇಷವೆಂದರೆ ಬೇರೆಡೆಯ ಕೋಮು ಗಲಭೆಗಳು ಕೂಡ ಭಟ್ಕಳದಲ್ಲಿ ಪ್ರತಿಫಲನಗೊಳ್ಳುವುದಿಲ್ಲ.

ರಾಮಜನ್ಮ ಭೂಮಿ ಚಳವಳಿ ಸಂದರ್ಭದಲ್ಲಿ ಇಟ್ಟಿಗೆ ಸಂಗ್ರಹದಲ್ಲೂ ಉತ್ತರ ಕನ್ನಡದಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿರಬಹುದು. ಹಾಗಂದಾಕ್ಷಣ ಉತ್ತರ ಕನ್ನಡದ ಜನ ಮುಸ್ಲಿಂ ವಿರೋಧಿಗಳು ಅಂತ ತೀರ್ಮಾನಿಸಬೇಕಿಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು ಎಂಬ ಆಸೆ ಇರಬಹುದು. ಹಾಗಂದಾಕ್ಷಣ ಅವರೆಲ್ಲ ಮುಸ್ಲಿಮರನ್ನು ವಿರೋಧಿಸುತ್ತಾರೆ ಎಂದು ಅರ್ಥೈಸುವ ಅಗತ್ಯ ಖಂಡಿತ ಇಲ್ಲ. ಉತ್ತರ ಕನ್ನಡದ ಜನ ಸೌಹಾರ್ದದಿಂದಲೇ ಜೀವನ ನಡೆಸುತ್ತಿದ್ದಾರೆ. ದೊಡ್ಡ ಗಲಭೆ ನಂತರ ಭಟ್ಕಳದಲ್ಲೂ ಗಲಭೆಗಳಾಗಿಲ್ಲ. ಜಿಲ್ಲೆಯ ಬೇರೆ ಪ್ರದೇಶದಲ್ಲಿ ಕೂಡ ಗಲಭೆಯ ಇತಿಹಾಸ ಇಲ್ಲ. ಅನಂತಕುಮಾರ ಹೆಗಡೆಯ ಕ್ಷೇತ್ರದೊಳಗೇ ಇರುವ ಕುಮಟ ತಾಲೂಕಿನ ಚಂದಾವರಕ್ಕೊಮ್ಮೆ ಹೋಗಿ ನೋಡಲಿ ಅವರು. ಅಲ್ಲಿ ಸಾಕಷ್ಟು ಮುಸ್ಲಿಮರಿದ್ದಾರೆ. ಹಿಂದುಗಳೂ ಇದ್ದಾರೆ. ಇಬ್ಬರ ಜನಜೀವನ ಎಷ್ಟು ಹಾಸುಹೊಕ್ಕಾಗಿದೆಯೆಂದರೆ ನೀವು ಹಿಂದು-ಮುಸ್ಲಿಂ ವ್ಯತ್ಯಾಸ ಗುರುತಿಸುವುದೂ ಕಷ್ಟ. ಮಾತಿನಿಂದ ಗೊತ್ತು ಮಾಡಬಹುದಷ್ಟೆ. ಈವರೆಗೆ ಒಂದೇ ಒಂದು ಅತಿರೇಕದ ಘಟನೆ ಅಲ್ಲಿ ನಡೆದಿದ್ದರೆ ಹೇಳಿ. ಊಹುಂ. ಅಲ್ಲಿ ಸದಾ ಶಾಂತಿ. ರಾಮಜನ್ಮಭೂಮಿ ಗಲಾಟೆ ಸಂದರ್ಭದಲ್ಲೂ ಉತ್ತರ ಕನ್ನಡ ಶಾಂತವಾಗೇ ಇತ್ತು. ಚಂದಾವರ ಕೂಡ!

ಅನಂತಕುಮಾರ ಹೆಗಡೆ ಹೆಚ್ಚು ಮತ ಪಡೆದು, ಚುನಾವಣೆ ಗೆದ್ದು ಜಿಲ್ಲೆಯನ್ನು ದೇಶದ ಉನ್ನತ ಸ್ಥಾನವಾಗ ಲೋಕಸಭೆಯಲ್ಲಿ ಪ್ರತಿನಿಧಿಸುವ ಅಧಿಕಾರ ಪಡೆದಿರಬಹುದು. ಹಾಗಂತ ಜಿಲ್ಲೆಯ ನೆಮ್ಮದಿ, ಸೌಹಾರ್ದ, ಶಾಂತಿ ಕೆಡಿಸುವ ಅಧಿಕಾರವನ್ನು ಅವರಿಗೆ ಯಾರೂ ಕೊಟ್ಟಿಲ್ಲ. ಅದಕ್ಕೆ ಉತ್ತರ ಕನ್ನಡದ ಜನ ಅವಕಾಶ ಕೊಡಲೂಬಾರದು.

ನನ್ನನ್ನು ಬಹಳ ಕಾಡುತ್ತಿರುವ ಇನ್ನೊಂದು ಪ್ರಶ್ನೆಯೆಂದರೆ ನೀವು ಹಿಂದೂ ಪರವಾಗಿರಬೇಕು ಅಥವಾ ಹಿಂದೂ ಪರ ಎಂದು ತೋರಿಸಿಕೊಳ್ಳಬೇಕು ಎಂದಾದರೆ ಮುಸ್ಲಿಮರನ್ನು ವಿರೋಧಿಸಲೇ ಬೇಕೆ? ಮುಸ್ಲಿಂ ವಿರೋಧಿಗಳೆಲ್ಲ ಹಿಂದೂ ಪರವೇ?

ಇತ್ತೀಚೆಗೆ ಇಂತಹ ಅಪಾಯಕಾರಿ ಬೆಳವಣಿಗೆ ಕಾಣುತ್ತಿದೆ. ಮುಸ್ಲಿಮರನ್ನು ಟೀಕಿಸಿದಾಕ್ಷಣ ಆತ ಹಿಂದೂ ಪರವಾಗಿಬಿಡುತ್ತಾನೆ ಅಥವಾ ಹಿಂದುಗಳನ್ನು ಟೀಕಿಸಿದಾಕ್ಷಣ ಅಥವಾ ಮುಸ್ಲಿಮರನ್ನು ವಿರೋಧಿಸಿ ಭಾಷಣ ಮಾಡಿದ್ದನ್ನು ಖಂಡಿಸಿದಾಕ್ಷಣ ಆತ ಮುಸ್ಲಿಂ ಪರವಾಗಿಬಿಡುತ್ತಾನೆ. ಆದರೆ ಅನಂತಕುಮಾರ ಹೆಗಡೆಯಂತಹ ರಾಜಕಾರಣಿಗಳಿಗೆ ಮುಸ್ಲಿಮರನ್ನು ವಿರೋಧಿಸದೆಯೂ ಹಿಂದೂ ಪರವಾಗಿರಬಹುದು ಎಂಬುದು ಯಾಕೆ ಅರ್ಥವಾಗುತ್ತಿಲ್ಲ? ಅನಂತ ಕುಮಾರ್ ಹೆಗಡೆ ‘ಅಲ್ಪಸಂಖ್ಯಾತರ ಒಂದು ಮತವೂ ಬೇಡ’ ಎಂದು ಹೇಳಿದ್ದರಿಂದ ಹಾಗೂ ಅವರು ಕೋಮು ದ್ವೇಷ ಮೂಡಿಸುವ ಮಾತುಗಳಾಡಿದ್ದರಿಂದ ಅವರನ್ನು ಕೆಲವು ಪ್ರಶ್ನೆ ಕೇಳಲೇ ಬೇಕಾಗಿದೆ.

ಅನಂತಕುಮಾರ್ ಹೆಗಡೆ ಅವರು ಮಹಾನ್ ಮುಸ್ಲಿಂ ವಿರೋಧಿಯಾಗಿದ್ದರೆ ಅಥವಾ ಹಿಂದು ಪರವಾಗಿದ್ದರೆ ಸಂಸದರಾಗಿರುವಾಗ ಅವರು ಅದಕ್ಕಾಗಿ ಏನು ಮಾಡಿದ್ದಾರೆ? ಭಟ್ಕಳದಲ್ಲಿ ಉಗ್ರಗಾಮಿ ಚಟುವಟಿಕೆಗಳು ಇರುವ ಬಗ್ಗೆ ಗಲಭೆ ನಂತರ ತನಿಖೆಗೆ ನೇಮಕಗೊಂಡ ನ್ಯಾಯಮೂರ್ತಿ ಜಗನ್ನಾಥ ಶೆಟ್ಟಿ ಆಯೋಗ ವರದಿಯಲ್ಲಿ ಪ್ರಸ್ತಾಪಿಸಿದೆ. ಅದರ ಬಗ್ಗೆ ಲೋಕಸಭೆಯಲ್ಲಿ ಗಮನ ಸೆಳೆದರೆ? ಗೃಹ ಇಲಾಖೆ ಗಮನಕ್ಕೆ ತಂದರೆ? ಈಗಂತೂ ರಾಜ್ಯದಲ್ಲಿ ಅವರದ್ದೇ ಬಿಜೆಪಿ ಸರಕಾರವಿದೆ ಅದರ ಬಗ್ಗೆ ಏನಾದರೂ ಪ್ರಯತ್ನ ಮಾಡಿದರೇ? ಭಟ್ಕಳದಲ್ಲಿ ನಡೆದ ಡಾ. ಚಿತ್ತರಂಜನ್ ಹಾಗೂ ತಿಮ್ಮಪ್ಪ ಶೆಟ್ಟಿ ಕೊಲೆ ಪ್ರಕರಣಗಳು ಇನ್ನೂ ಬಗೆಹರಿದಿಲ್ಲ. ಇಬ್ಬರೂ ಭಟ್ಕಳದಲ್ಲಿ ಹಿಂದೂ ನಾಯಕರಾಗಿದ್ದರು. ಅವರ ಕೊಲೆಗಾರರ ಪತ್ತೆಗೆ ಅನಂತಕುಮಾರ್ ಹೆಗಡೆ ಯಾರ ಮೇಲಾದರೂ ಒತ್ತಡ ಹಾಕಿದ್ದಾರೆಯೇ?ಅವರು ಅಷ್ಟು ಮುಸ್ಲಿಂ ವಿರೋಧಿ ಹಾಗೂ ಹಿಂದುಗಳ ಪರವಾಗಿದ್ದರೆ ಈ ನಾಯಕರ ಕೊಲೆಗಾರರ ಪತ್ತೆಗೆ ಒತ್ತಾಯಿಸಿ ಹೋರಾಟಗಳನ್ನು ಯಾಕೆ ರೂಪಿಸಲಿಲ್ಲ? ಡಾ. ಚಿತ್ತರಂಜನ್ ಕೊಲೆ ಪ್ರಕರಣದ ತನಿಖೆ ಸಿಬಿಐ ವಶದಲ್ಲಿದೆ. ದಿಲ್ಲಿಯಲ್ಲಿ ಸಿಬಿಐ ಅಧಿಕಾರಿಗಳ ಮೇಲೆ ತನಿಖೆ ಚುರುಕುಗೊಳಿಸಲು ಅನಂತಕುಮಾರ ಹೆಗಡೆ ಒತ್ತಡ ತರಬಹುದಿತ್ತು. ಲೋಕಸಭೆಯಲ್ಲಿ ಈ ಬಗ್ಗೆ ಮಾತನಾಡಿ, ಪ್ರಶ್ನೆ ಕೇಳಿ ತನಿಖೆ ಯಾವ ಹಂತದಲ್ಲಿದೆ ಎಂಬುದನ್ನು ಇಡೀ ದೇಶಕ್ಕೆ ತಿಳಿಸಬಹುದಿತ್ತು. ಮುಸ್ಲಿಮರ ಕಟ್ಟರ್ ವಿರೋಧಿಯಂತೆ ಈಗ ವೀರಾವೇಷದ ಭಾಷಣ ಮಾಡುತ್ತಿರುವ ಅವರು ಇದನ್ನೆಲ್ಲ ಯಾಕೆ ಮಾಡಲಿಲ್ಲ?

ಮುಂಬಯಿ ಮೇಲೆ ದಾಳಿಯಾಯಿತು. ಮುಂಬಯಿಯಂತೆಯೇ ಕಾರವಾರವೂ ಸಮುದ್ರ ತೀರದಲ್ಲಿದೆ. ಕಾರವಾರದಲ್ಲಿ ಅಣುವಿದ್ಯುತ್ ಸ್ಥಾವರವಿದೆ. ಅಲ್ಲಿಗೂ ಉಗ್ರರು ದಾಳಿ ಮಾಡಬಹುದು. ಗೋಕರ್ಣ, ಮುರ್ಡೇಶ್ವರ ಮುಂತಾದ ಪ್ರಸಿದ್ಧ ಧಾರ್ಮಿಕ ಹಾಗೂ ಪ್ರವಾಸಿ ಸ್ಥಳಗಳು ಕರಾವಳಿಯಲ್ಲಿವೆ. ಅಲ್ಲಿಗೂ ದಾಳಿ ನಡೆಯಬಹುದು. ಹೀಗಿದ್ದರೂ ಅನಂತಕುಮಾರ್ ಹೆಗಡೆ ಈ ಎಲ್ಲ ವಿಷಯಗಳ ಬಗ್ಗೆ ಲೋಕಸಭೆಯಲ್ಲಿ ಯಾಕೆ ದೇಶದ ಗಮನ ಸೆಳೆಯಲಿಲ್ಲ? ಕರಾವಳಿ ರಕ್ಷಣಾ ಪಡೆ ಠಾಣೆಗೆ ಬರಬೇಕಾದ ಬೋಟು ಮುಂತಾದ ಸೌಲಭ್ಯಗಳನ್ನು ಇನ್ನೂ ಕೇಂದ್ರ ಸರಕಾರ ಒದಗಿಸಿಲ್ಲ. ಅವುಗಳ ಬಗ್ಗೆ ಯಾಕೆ ಒಮ್ಮೆಯೂ ಅನಂತ ಕುಮಾರ್ ಮಾತಾಡಲಿಲ್ಲ? ಕರಾವಳಿ ಮೂಲಕ ಅಕ್ರಮ ಚಟುವಟಿಕೆ ನಡೆಯಬಹುದು, ಸ್ಪೋಟಕಗಳೂ ಬರಬಹುದು. ಆದ್ದರಿಂದ ಕರಾವಳಿ ಭದ್ರತೆ ಬಗ್ಗೆ ಏಕೆ ಕೇಂದ್ರ ಸರಕಾರದ ಗಮನ ಸೆಳೆಯಲಿಲ್ಲ?

ಅನಂತಕುಮಾರ ಹೆಗಡೆ ಅವರ ೫ ವರ್ಷದ ಇತಿಹಾಸ ನೋಡಿದರೆ ಇದ್ಯಾವುದನ್ನೂ ಅವರು ಲೋಕಸಭೆಯಲ್ಲಿ ಚರ್ಚಿಸಿಲ್ಲ. ಇತರೆ ಕಾರ್ಯಕ್ರಮಗಳಲ್ಲೂ ಮಾತಾಡಿಲ್ಲ. ಇದೆಲ್ಲ ಹೋಗಲಿ ಸಂಸದರಾಗಿ ೩ನೇ ಬಾರಿಗೆ ಆಯ್ಕೆಯಾಗಿರುವ ಅನಂತಕುಮಾರ ಹೆಗ್ಡೆ ಅವರಿಗೆ ಮತ ನೀಡಿದ ಜನರ ಕೈಗೆ ಎಷ್ಟು ಸಿಗುತ್ತಾರೆ? ತಮ್ಮ ಮೊಬೈಲ್‌ನಲ್ಲಿ ನಂಬರ್ ಇಲ್ಲದವರ ದೂರವಾಣಿ ಕರೆ ಸ್ವೀಕರಿಸದ ಸಂಸದರಿಂದ ಜನಕ್ಕೆ ಎಷ್ಟು ಉಪಯೋಗವಾದೀತು?ಇವುಗಳನ್ನೆಲ್ಲ ಹೇಗಾದರೂ ಉತ್ತರ ಕನ್ನಡದ ಜನ ಸಹಿಸಿಕೊಂಡಿರಬಹುದು. ಯಾಕೆಂದರೆ ಉತ್ತರ ಕನ್ನಡದ ಯಾವ ರಾಜಕಾರಣಿಯೂ ಜಿಲ್ಲೆಗೆ ಮಾಡಿದ ಸಹಾಯ ಅಷ್ಟರಲ್ಲೇ ಇದೆ. ಉತ್ತರ ಕನ್ನಡದ ಜನ ಕೂಡ ರಾಜಕಾರಣಿಗಳ ಬೆನ್ನು ಬಿದ್ದು ಕೆಲಸ ಮಾಡಿಸಿಕೊಳ್ಳುವ ಬಗ್ಗೆ ತೀವ್ರ ಆಸಕ್ತಿ ಹೊಂದಿದವರೇನಲ್ಲ. ರಸ್ತೆಗಳು ಹಾಳಾಗಿದ್ದರೆ ಶಾಪ ಹಾಕಿಯಾರು ಹೊರತು ಹೋರಾಟ, ಗಲಾಟೆಗಳಿಗೆ ಇಳಿಯುವವರಲ್ಲ. ಇದ್ದುದರಲ್ಲೇ ಸುಖವಾಗಿದ್ದಾರೆ ಉತ್ತರ ಕನ್ನಡದ ಜನ. ಕೆಲಸ ಮಾಡದ ರಾಜಕಾರಣಿಗಳನ್ನಾದರೂ ಕ್ಷಮಿಸಬಹುದು. ಆದರೆ ಜಿಲ್ಲೆಯ ಶಾಂತಿ, ನೆಮ್ಮದಿಯನ್ನೇ ಕದಡ ಹೊರಟರೆ ಅದನ್ನು ಕ್ಷಮಿಸುವುದು ಅಪಾಯಕಾರಿ.

೧೯೯೬ರಲ್ಲಿ ಅನಂತಕುಮಾರ ಹೆಗಡೆ ಲೋಕಸಭೆ ಚುನಾವಣೆಗೆ ನಿಂತಾಗ ಅವರಿಗಿದ್ದ ಒಂದೇ ಒಂದು ಅರ್ಹತೆ ಎಂದರೆ ‘ಅವರು ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ದೇಶದ ಧ್ವಜ ಹಾರಿಸಿದ್ದರು’ ಎಂಬುದು ಮಾತ್ರ. ಆಗ ಪೋರ ನೋಡಲೂ ಚೆಂದವಿದ್ದ. ಭರವಸೆ ಮೂಡಿಸುವಂತಿದ್ದ. ಮಾತಿನ ಮನೆ ಕಟ್ಟುತ್ತಿದ್ದ. ಕಾಂಗ್ರೆಸ್‌ನ ಮುದಿ ಸಂಸದರನ್ನು ನೋಡಿ ನೋಡಿ ಜನರಿಗೂ ಸಾಕಾಗಿತ್ತು. ಅದಕ್ಕೆ ಸರಿಯಾಗಿ ಭಟ್ಕಳದಲ್ಲಿ ಶಾಸಕ ಡಾ. ಚಿತ್ತರಂಜನ್ ಅವರ ಕೊಲೆಯಾಯಿತು. ಅನುಕಂಪದ ಅಲೆಯಲ್ಲಿ ತೇಲಿದ ಅನಂತಕುಮಾರ್ ಹೆಗಡೆ ಗೆದ್ದುಬಿಟ್ಟರು. ಆದರೆ ಉತ್ತರ ಕನ್ನಡದ ಜನ ಅವರ ಮೇಲಿರಿಸಿದ್ದ ನಂಬಿಕೆ, ನಿರೀಕ್ಷೆಗಳನ್ನೆಲ್ಲ ಅವರು ಹುಸಿಗೊಳಿಸಿದ್ದಾರೆ. ಜನರ ಕಷ್ಟಗಳಿಗೆ ಸ್ಪಂಧಿಸುವುದು ಬಿಡಿ, ಜನರಿಗೆ ಸ್ಪಂದಿಸುವುದನ್ನೇ ಅವರು ಮರೆತಿದ್ದಾರೆ. ಅದರ ನಂತರ ಅವರ ಕೆಲಸಕ್ಕಿಂತ ಹೆಚ್ಚಾಗಿ ಕಾಂಗ್ರೆಸ್‌ನ ಅಸಮರ್ಥ ಅಭ್ಯರ್ಥಿಯ ಕಾರಣದಿಂದಲೇ ಅವರು ಗೆಲ್ಲುತ್ತಿದ್ದಾರೆ.

ಸದ್ಯದ ಸ್ಥಿತಿ ಗಮನಿಸಿದರೆ ಅನಂತಕುಮಾರ್ ಹೆಗಡೆ ಅವರ ಹೇಳಿಕೆ ‘ತಪ್ಪು ಮುಚ್ಚಿಕೊಳ್ಳುವ’ ಸಾಧನವಾಗಿ ಕಾಣುತ್ತಿದೆ. ತಾವು ಐದು ವರ್ಷದಲ್ಲಿ ಕೆಲಸ ಮಾಡದೆ ಇರುವುದನ್ನು, ಜನರ ಕೈಗೆ ಸಿಗದಿರುವುದನ್ನು ಮುಸ್ಲಿಂ ವಿರೋಧಿ ಭಾಷಣದ ಮೂಲಕ ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎಂಬುದು ಸ್ಪಷ್ಟ. ಇಷ್ಟಕ್ಕೇ ಸುಮ್ಮನಾಗದ ಅವರು ‘ನಾನು ಪಾಕಿಸ್ತಾನ, ಅಪಘಾನಿಸ್ತಾನದ ಜನರ ಬಳಿ ಮತ ಕೇಳುತ್ತಿಲ್ಲ. ನಾನು ಹಿಂದುಸ್ತಾನದ ಜನರ ಬಳಿ ಮತ ಕೇಳುತ್ತಿದ್ದೇನೆ’ ಅಂದಿದ್ದಾರೆ. ಆದರೆ ಹಿಂದುಸ್ತಾನದಲ್ಲಿ ಹಿಂದುಗಳಲ್ಲದೆ ಬೇರೆ ಧರ್ಮದವರೂ ಇದ್ದಾರೆ ಎಂಬುದನ್ನು ಅವರು ಮರೆತಂತಿದೆ. ಚುನಾವಣೆಯಲ್ಲಿ ತಮ್ಮ ಗೆಲುವಿಗಾಗಿ ಅವರು ಜಿಲ್ಲೆಯ ಶಾಂತಿ, ಸೌಹಾರ್ದವನ್ನೇ ಬಲಿಕೊಡಲು ಹೊರಟಿದ್ದಾರೆ.ಅವರು ಕೋಮು ಪ್ರಚೋದಿ ಭಾಷಣ ಮಾಡಿದ್ದರ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ ಚುನಾವಣಾ ಆಯೋಗಕ್ಕೆ ದೂರು ನೀಡಿದರೆ, ‘ರಿಯಾಜ್ ಭಟ್ಕಳ ದೇಶಪಾಂಡೆ ಸಾಕುಮಗನಾ?’ ಎಂಬ ಪ್ರತಿಕ್ರಿಯೆ ನೀಡಿದ್ದಾರೆ. ಕೋಮು ದ್ವೇಷದ ಭಾಷಣದ ವಿರುದ್ಧ ದೂರು ನೀಡಿಬಿಟ್ಟರೆ ‘ರಿಯಾಝ್ ಭಟ್ಕಳನ ಬೆಂಬಲಿಗರಾಗಿಬಿಡುತ್ತಾರಾ?’ ರಿಯಾಝ್ ಭಟ್ಕಳನ ವಿರುದ್ಧ ಮಾತನಾಡಲಿಲ್ಲ ಅಂದಾಕ್ಷಣ ಅವರೆಲ್ಲ ಆತನ ಬೆಂಬಲಿಗರು ಅಂತ ಅರ್ಥೈಸುವುದು ಮೂರ್ಖತನ. ಹಾಗೇನಾದರೂ ಅರ್ಥೈಸಿದರೆ ಅದನ್ನು ‘ಅಪ್ರಬುದ್ಧ ಮತ್ತು ಸಮತೋಲನ ತಪ್ಪಿದ ಮನಸ್ಸು’ ಎಂದು ಕರೆಯಬೇಕಾಗುತ್ತದೆ. ರಿಯಾಝ್ ಭಟ್ಕಳ ಹಾಗೂ ಕೆಲವರು ಉಗ್ರಗಾಮಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದಾಕ್ಷಣ ಜಿಲ್ಲೆಯ ಮುಸ್ಲಿಮರನ್ನೆಲ್ಲ ಉಗ್ರಗಾಮಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಅಂದುಕೊಳ್ಳಬೇಕಿಲ್ಲ. ಅವರ ವಿರುದ್ಧ ಮಾತನಾಡದವರೆಲ್ಲ ಉಗ್ರಗಾಮಿಗಳ ಬೆಂಬಲಿಗರು ಅಂತ ತೀರ್ಮಾನಿಸುವುದು ಮೂರ್ಖತನ.

ರಿಯಾಜ್ ಭಟ್ಕಳ ಸೇರಿದಂತೆ ಭಟ್ಕಳದ ಕೆಲವರು ಉಗ್ರಗಾಮಿ ಚಟುವಟಿಕೆಯಲ್ಲಿದ್ದಾರೆ ಎಂಬುದು ಗುಪ್ತಚರ ಇಲಾಖೆ ಮಾಹಿತಿ. ಆತನ ಬಂಧನಕ್ಕೆ ಪೊಲೀಸರು ಯತ್ನಿಸುತ್ತಿದ್ದಾರೆ. ಕಾನೂನಿದೆ. ಉಗ್ರಗಾಮಿಗಳನ್ನು ಎಲ್ಲರೂ ವಿರೋಧಿಸಬೇಕು ಎಂಬುದು ನಿರ್ವಿವಾದ. ಹಾಗೆಯೇ ಅನಗತ್ಯವಾಗಿ ಜನರಲ್ಲಿ ಕೋಮು ದ್ವೇಷ ಬಿತ್ತಿ, ಶಾಂತ ಜಿಲ್ಲೆಯ ನೆಮ್ಮದಿ ಕೆಡಿಸುವ ಅನಂತಕುಮಾರ ಹೆಗಡೆಯಂತಹ ರಾಜಕಾರಣಿಗಳನ್ನೂ ವಿರೋಧಿಸಬೇಕಾಗುತ್ತದೆ.ಇಲ್ಲವಾದಲ್ಲಿ ಉತ್ತರ ಕನ್ನಡ ಜಿಲ್ಲೆ ಕೂಡ ಇನ್ನೊಂದು ಕೋಮು ಸೂಕ್ಷ್ಮ ಜಿಲ್ಲೆಯಾಗಿ, ನೆಮ್ಮದಿ ಕಳೆದುಕೊಳ್ಳುವ ಅಪಾಯವಿದೆ.

Thursday, March 26, 2009

ಫಿರಾಕ್: ಹೇಳೋ ಹಾಗಿಲ್ಲ ಬಹುಪರಾಕ್


ಅದೊಂದು ಸಿನಿಮಾ ಅಂತ ಅನ್ನಿಸಲೇ ಇಲ್ಲ. ಸಾಕ್ಷ್ಯಚಿತ್ರದಂತಿತ್ತು.
ಫಿರಾಕ್ ಸಿನಿಮಾ ನೋಡಬೇಕು ಅಂತ ಯಾಕೋ ಅನ್ನಿಸಿತ್ತು. ಸಾಮಾನ್ಯವಾಗಿ ಬಿಡುಗಡೆಯ ಮೊದಲ ದಿನ ಚಿತ್ರಮಂದಿರದತ್ತ ಸುಳಿಯದ ನಾನು ‘ಫಿರಾಕ್’ ಬಿಡುಗಡೆಯಾದ ಮೊದಲ ದಿನವೇ ನೋಡಿಬಿಟ್ಟೆ!
ಸತ್ಯವಾಗಿ ಹೇಳ್ತೀನಿ ಬೋರ್ ಬರಲಿಲ್ಲ. ಜೋರ್ ಇಷ್ಟವಾಗಲೂ ಇಲ್ಲ. ಗುಜರಾತ್ ನ ಮಲ್ಟಿಫ್ಲೆಕ್ಸ್ ಗಳು ಈ ಚಿತ್ರ ತೋರಿಸಲು ನಿರಾಕರಿಸಿವೆ ಎಂಬ ಸುದ್ದಿಯಿಂದ ಈ ಸನಿಮಾದಲ್ಲಿ ‘ಎಂಥದೋ’ ಇದೆ ಅಂದುಕೊಂಡೆ. ಅದರಲ್ಲೂ ಗುಜರಾತ್‌ನ ಗೋದ್ರಾ ಗಲಭೆ ನಂತರದ ಸಂಗತಿಯ ಸಿನಿಮಾ ಅಂದಾಗ ಸಹಜವಾಗಿ ಕುತೂಹಲ ಮೂಡಿತ್ತು. ಆ ಕುತೂಹಲ ತಣಿಯಿತು. ಗುಜರಾತ್ ನ ಮಲ್ಟಿಫ್ಲೆಕ್ಸ್ ಗಳು ಈ ಚಿತ್ರ ತೋರಿಸಲು ಯಾಕೆ ನಿರಾಕರಿಸಿವೆ ಎಂಬುದೂ ತಿಳಿಯಿತು. ಈ ಸಿನಿಮಾ ಮಲ್ಟಿಫ್ಲೆಕ್ಸ್ ಗಳಲ್ಲಿ ತೋರಿಸುವ ಗುಣಮಟ್ಟ ಹೊಂದಿಲ್ಲ.
ಸ್ವಲ್ಪ ಮಟ್ಟಿಗೆ ಗಲಭೆ ನಂತರದ ಪರಿಸ್ಥಿತಿಯನ್ನು ಬಿಂಬಿಸಲು ನಿರ್ದೇಶಕಿ ನಂದಿತಾ ದಾಸ್ ಸಫಲರಾಗಿದ್ದಾರೆ. ಆದರೆ ಆಕೆಯ ಮೊದಲ ಚಿತ್ರವಾದ್ದರಿಂದ ಅವರಿನ್ನೂ ಸಾಕ್ಷ್ಯ ಚಿತ್ರದ ಗುಂಗಿನಿಂದ ಹೊರಬಂದಿಲ್ಲ ಎಂಬುದು ಕಾಣುತ್ತಿತ್ತು.
ಚಿತ್ರದ ಆರಂಭದಲ್ಲಿ ಟಿಪ್ಪರ್ ಲಾರಿಯೊಂದರಲ್ಲಿ ಹೆಣಗಳನ್ನು ತಂದು ಕಲ್ಲು ಸುರಿದಂತೆ ಸುರಿವ ದೃಶ್ಯ ನಿಮ್ಮನ್ನು ಕಲಕಿ ಹಾಕಿಬಿಡುತ್ತದೆ. ನಿಮ್ಮ ಮನಸ್ಸಿನಲ್ಲಿ ಅಚ್ಚೊತ್ತಿ ಕುಳಿತುಬಿಡುತ್ತದೆ. ಆದರೆ ಹೀಗೇ ಇಡೀ ಸಿನಿಮಾ ಮನಸಿನಲ್ಲಿ ಅಚ್ಚೊತ್ತುವಂತೆ ಮಾಡುವಲ್ಲಿ ನಂದಿತಾ ವಿಫಲರಾಗಿದ್ದಾರೆ.
ಹಿಂದು-ಮುಸ್ಲಿಮರ ಗೆಳೆತನ. ಒಳ್ಳೆಯ ಹಿಂದು-ಮುಸ್ಲಿಂ, ಕೆಟ್ಟ ಹಿಂದು-ಮುಸ್ಲಿಂ ಇಬ್ಬರನ್ನೂ ತೋರಿಸಿದ್ದಾಳೆ ನಂದಿತಾ. ಆದರೆ ಪೊಲೀಸರನ್ನು ಮಾತ್ರ ಕೆಟ್ಟದಾಗಿ ಚಿತ್ರಿಸಿದ್ದಾಳೆ. ಎಲ್ಲೋ ಒಂದಿಬ್ಬರು ಪೊಲೀಸರು ಗುಜರಾತ್ ಗಲಭೆ ಸಂದರ್ಭ ಕೆಟ್ಟದಾಗಿ ನಡೆದುಕೊಂಡಿರಬಹುದು. ಆದರೆ ಎಲ್ಲ ಪೊಲೀಸರು ಹಾಗಲ್ಲ ಎಂಬುದನ್ನು ತೋರಿಸಲು ನಂದಿತಾ ಮರೆತಿದ್ದಾಳೆ. ಗಲಭೆಯ ಒಂದು ತಿಂಗಳ ನಂತರದ ಕತೆ ಅನ್ನುತ್ತಾಳೆ. ಹಾಗೆಯೇ ಪೊಲೀಸ್ ಒಬ್ಬನ ಬಾಯಲ್ಲಿ ಮುಸ್ಲಿಮನೊಬ್ಬನಿಗೆ ‘ಹೋಗು ಹೋಗು ಪಾಕಿಸ್ತಾನಕ್ಕೇ ಹೋಗು. ಇಲ್ಯಾಕೆ ಇದೀಯಾ’ ಎಂದು ಹೇಳಿಸುತ್ತಾರೆ ನಂದಿತಾ.
ಹೀಗಾಗಿ ಪಾಕಿಸ್ತಾನದಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ ಪ್ರಥಮ ಬಹುಮಾನ ಬಂದುದರಲ್ಲಿ ಆಶ್ಚರ್ಯವಿಲ್ಲ!
ನೀವೇ ಹೇಳಿ ಯಾವ ಪೊಲೀಸ್ ಹೀಗೆ ಹೇಳಲು ಸಾದ್ಯ?
ಅಕಸ್ಮಾತ್ ಒಬ್ಬ ಹೇಳಿದ್ದರೂ, ಅದನ್ನು ಎಲ್ಲ ಪೊಲೀಸರಿಗೆ ಅನ್ವಯಿಸುವ ಅಗತ್ಯವಿರಲಿಲ್ಲ. ಇಡೀ ಚಿತ್ರದುದ್ದಕ್ಕೂ ಪೊಲೀಸರನ್ನು ಕೆಟ್ಟದಾಗಿಯೇ ಚಿತ್ರಿಸಿರುವ ನಂದಿತಾ, ಪೊಲೀಸರ ಮೇಲೆ ಸಮಾಜಕ್ಕೆ ನಂಬಿಕೆ ಹೋಗುವಂತೆ ಮಾಡುವುದು ಎಷ್ಟು ಅಪಾಯಕಾರಿ ಎಂಬುದನ್ನು ಮರೆತಂತೆ ಕಾಣುತ್ತಾರೆ.
ಆದರೂ ಎಂದಿನಂತೆ ನಾಸಿರುದ್ದೀನ್ ಷಾ ನಟನೆ ಇಷ್ಟವಾಯಿತು. ವಯಸ್ಸಾದ ಉಸ್ತಾದನ ವೇಷದಲ್ಲಿ ಅವರ ಬಾಡಿ ಲಾಂಗ್ವೇಜ್ ನೋಡಲಾದರೂ ಸಿನಿಮಾ ನೋಡಬಹುದು. ಉಳಿದಂತೆ ಗಲಭೆ ನಂತರ ತಂದೆ-ತಾಯಿ ಕೊಲೆಯಾದದ್ದನ್ನು ಕಣ್ಣಾರೆ ಕಂಡ ಮುಸ್ಲಿಂ ಬಾಲಕನೊಬ್ಬನ ತಳಮಳಗಳು ಚೆನ್ನಾಗಿ ಮೂಡಿಬಂದಿವೆ. ಆತನನ್ನು ಮೋಹನನನ್ನಾಗಿ ಮಾಡಿ ಮನೆಯಲ್ಲಿಟ್ಟುಕೊಳ್ಳಲು ಯತ್ನಿಸುವ ಹಿಂದು ತಾಯಿಯೊಬ್ಬಳ ತವಕ, ಅವಳ ತುಡಿತ, ಗಾಬರಿ ಚೆನ್ನಾಗಿ ಮೂಡಿಬಂದಿದೆ. ಗಲಭೆ ನಂತರದ ಕೆಲವು ದೃಶ್ಯಗಳು ಕೂಡ ಮನಕಲಕುವಂತಿದೆ.
ಆದರೂ ಸಿನಿಮಾದುದ್ದಕ್ಕೂ ಬೆರಳು ಹಾಕಿಕೊಂಡರೂ ಕಣ್ಣಿಂದ ನೀರು ಬರುವುದಿಲ್ಲ!ಮಾರ್ಚ್ ೧೮ರಂದು ಹೊಸದಿಲ್ಲಿಯಲ್ಲಿ ‘ಫಿರಾಕ್’ ಚಿತ್ರ ಪ್ರದರ್ಶನವಿತ್ತು. ಅದರಲ್ಲಿ ಅವಳ ತಂದೆ ಪ್ರಸಿದ್ಧ ಕಲಾವಿದ ಜತಿನ್ ದಾಸ್ ಕಣ್ಣೀರ್ ಗರೆದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅದೇನು ಮಗಳು ಇಂತಹ ಸಿನಿಮಾ ಮಾಡಿದ್ದಾಳೆ ಅಂತ ಅತ್ತರೋ? ಜನ ನೋಡಲಿಕ್ಕಿಲ್ಲ ಅಂತ ಅನಿಸಿ ಅತ್ತರೋ? ಇಲ್ಲ ದೃಶ್ಯ ನೋಡಿ ಅತ್ತರೋ? ಎಂಬುದು ಸ್ಪಷ್ಟವಾಗಿಲ್ಲ. ಸಿನಿಮಾ ಮುಸ್ಲಿಂ ಪರ ಎಂಬ ಆರೋಪಕ್ಕೆ ಉತ್ತರಿಸಿರುವ ನಂದಿತಾ ‘ಗಲಭೆ ನಂತರ ಮುಸ್ಲಿಮರ ಕಷ್ಟಗಳನ್ನು ಚಿತ್ರಿಸಿದ್ದೇನೆ’ ಎಂದಿದ್ದಾರೆ. ಗಲಭೆ ಅಂದ ಮೇಲೆ ಎರಡೂ ಕಡೆಯವರಿಗೆ ಹಾನಿಯಾಗಿರುತ್ತದೆ. ದೇಶದ ಯಾವುದೇ ಕೋಮುಗಲಭೆ ತೆಗೆದು ನೋಡಿ ಅದರಲ್ಲಿ ಒಂದೇ ಕೋಮಿನ ಜನ ಸತ್ತಿರುವುದಿಲ್ಲ ಅಥವಾ ಒಂದೇ ಕೋಮಿನ ಜನರಿಗೆ ಹಾನಿಯಾಗಿರುವುದಿಲ್ಲ. ಲೆಕ್ಕಾಚಾರ ಯಾವಾಗಲೂ ಸಮನಾಗಿಯೇ ಇರುತ್ತದೆ.
ಆರೋಪಗಳೇನೆ ಇರಲಿ. ಸಿನಿಮಾ ನೋಡಿದರೆ ನಿಮಗದು ಸಂಪೂರ್ಣ ಮುಸ್ಲಿಂ ಪರ ಅನಿಸುವುದಿಲ್ಲ. ಸಂಗತಿಗಳನ್ನು ‘ಬ್ಯಾಲೆನ್ಸ್’ ಮಾಡಲು ನಂದಿತಾ ಯತ್ನಿಸಿದ್ದಾರೆ. ಆದರೆ ಯಾವುದನ್ನೂ ಸರಿಯಾಗಿ ಹೇಳಿಲ್ಲ. ಅಂತಿಮವಾಗಿ ಪೊಲೀಸರನ್ನು ಕೆಟ್ಟದಾಗಿ ಚಿತ್ರಿಸಿದ್ದಾರೆ. ನಾಸಿರುದ್ದೀನ್ ಷಾ, ಪರೇಶ್ ರಾವಲ್ ಅವರಂತಹ ನಟರನ್ನು ಸರಿಯಾಗಿ ಬಳಸಿಕೊಳ್ಳಲೂ ನಿರ್ದೇಶಕಿಯಾಗಿ ನಂದಿತಾ ವಿಫಲರಾಗಿದ್ದಾರೆ.
ಈ ಸಿನಿಮಾಕ್ಕೆ ಕ್ಷಮಿಸಿ ಸಾಕ್ಷ್ಯಚಿತ್ರಕ್ಕೆ ೫ ಚಲನಚಿತ್ರೋತ್ಸವ ಪ್ರಶಸ್ತಿಗಳು ಬಂದಿವೆ. ಪ್ರಶಸ್ತಿ ಬಂದ ಸಿನಿಮಾಗಳನ್ನು ನೋಡುವ ಗೀಳಿನವರಾಗಿದ್ದರೆ ಆ ಕಾರಣಕ್ಕಾದರೂ ನೀವು ಇದನ್ನು ನೋಡಬಹುದು. ಇಲ್ಲವಾದಲ್ಲಿ ನೀವು ತುಂಬ ಬುದ್ದಿವಂತರು ಅಂತ ನೀವಂದುಕೊಂಡಿದ್ದರೆ ತಪ್ಪದೆ ನೋಡಿ. ಯಾಕೆಂದರೆ ಬಹುತೇಕ ದೃಶ್ಯಗಳು, ಡೈಲಾಗ್‌ಗಳ ಅರ್ಥ ಸೂಚ್ಯವಾಗಿದೆ. ಆದ್ದರಿಂದ ಸಾಮಾನ್ಯ ನೋಡುಗ ಅರ್ಥ ಮಾಡಿಕೊಳ್ಳುವುದು ಕಷ್ಟ. ಸಿನಿಮಾ ಮುಗಿದಾಗ ನನ್ನ ಅಕ್ಕಪಕ್ಕದಲ್ಲಿದ್ದವರೆಲ್ಲಾ ‘ಮುಗಿದೇ ಹೋಯಿತಾ’ ಎಂಬರ್ಥದ ಮುಖಮುದ್ರೆ ಹೊತ್ತು ‘ಅರ್ಥವೇ ಆಗಲಿಲ್ಲ’ ಎಂಬಂತೆ ಕೈ ತಿರುಗಿಸದ್ದೇ ಇದಕ್ಕೆ ಸಾಕ್ಷಿ.
ಅವರಿಗಿಂತ ನಾನೇ ಬುದ್ದಿವಂತ ಅಂತ ಸಾಮಾದಾನ ಮಾಡಿಕೊಂಡು ಹೊರಬಂದೆ.
ನನ್ನ ಬುದ್ದಿಗೆ ದಕ್ಕಿದಷ್ಟನ್ನು ಬರೆದಿದ್ದೇನೆ. ನಾನು ಬುದ್ದಿವಂತನಲ್ಲ. ತುಂಬ ವಿಚಾರವಾದಿಗಳ, ಸಾಹಿತ್ಯಿಕ, ಸೂಚ್ಯಾರ್ಥವುಳ್ಳ ಸಿನಿಮಾಗಳು ನನಗಿಷ್ಟವಾಗುವುದಿಲ್ಲ. ಸಿನಿಮಾಗಳನ್ನು ಶುದ್ಧ ಮನೋರಂಜನೆ ದೃಷ್ಟಿಯಿಂದ ನೋಡುವ ನಾನು ಜಗ್ಗೇಶ್ ರ ಹಳೆ ಸಿನಿಮಾಗಳನ್ನು ಇಷ್ಟಪಟ್ಟವ. ಅದಿಲ್ಲವಾದರೆ ಪೊಲೀಸ್ ಕತೆಗಳು ನಂಗಿಷ್ಟ. ಈಗೀಗ ನನ್ನ ಬುದ್ದಿ ಬೆಳೆಯುತ್ತಿರುವ ಅಥವಾ ಕೆಡುತ್ತಿರುವ ಲಕ್ಷಣವೋ ಏನೊ ‘ಫೀರಾಕ್’ನಂತಹ ಸಿನಿಮಾಗಳನ್ನು ನೋಡಲಾರಂಭಿಸಿದ್ದೇನೆ. ಸರಿಯಾಗಿ ಅರ್ಥವಾಗಲಿಲ್ಲ ಅನ್ನೋದು ಬೇರೆ ಮಾತು. ಹೀಗಾಗಿ ನೀವು ನೋಡಿ. ಬುದ್ದಿವಂತರಾಗಿದ್ದರೆ ನಿಮಗೆ ಖಂಡಿತಾ ಅರ್ಥವಾದೀತು.
ಒಂದು ಸಾಲು ವಿಮರ್ಶೆ: ಫಿರಾಕ್ ಸಿನಿಮಾ ನೋಡಲು ದುಡ್ಡು ಖರ್ಚು ಮಾಡಿದರೆ ಮಾತ್ರ ಸಾಲದು, ಬುದ್ದಿಯನ್ನೂ ಖರ್ಚು ಮಾಡಬೇಕು!

Friday, March 20, 2009

ಅದು ಓದಿ ಬರೆದದ್ದು ಇದು!


ಧಾರಾವಾಡದ ಕಾಲೇಜೊಂದರಲ್ಲಿ ಒಂದು ದಿನ ಶಿವರಾಮ ಕಾರಂತರ ಉಪನ್ಯಾಸ ಕಾರ್ಯಕ್ರಮ ಇತ್ತಂತೆ. ಶಿವರಾಮ ಕಾರಂತ ಮಾತನಾಡುತ್ತಿದ್ದಾಗ ಒಬ್ಬಾಕೆ ವಿದ್ಯಾರ್ಥಿನಿ ಕೀಟಲೆ ಮಾಡುತ್ತಲೋ, ಅಕ್ಕಪಕ್ಕದವರಲ್ಲಿ ಮಾತನಾಡುತ್ತಲೋ ಇದ್ದಳಂತೆ. ಕೊನೆಗೆ ಕಾರ್ಯಕ್ರಮ ಮುಗಿದ ಬಳಿಕ ಆಕೆ ಕಾರಂತರಲ್ಲಿ ಅಟೋಗ್ರಾಫ್ ಕೊಡಿ ಪ್ಲೀಸ್ ಎಂದು ಕೇಳಿದಾಗ ಕಾರ್ಯಕ್ರಮದುದಕ್ಕೂ ಆಕೆಯ ಚಟುವಟಿಕೆಯನ್ನು ಗಮನಿಸಿದ್ದ ಕಾರಂತರು ಬರೆದದ್ದು;

'ನನ್ನ ಕೈಬರೆಹದಿಂದ ನಿನ್ನ ಹಣೆ ಬರೆಹವನ್ನು ತಿದ್ದಲಾಗದು!'


ಇಂಥಹದೊಂದು ಬರಹವನ್ನು ಗೆಳೆಯ ಮಿಥುನ್ ಬ್ಲಾಗಿಸಿದ್ದ. ಅದನ್ನು ಓದುತ್ತಿದ್ದಂತೆ ಬಹಳ ದಿನಗಳಿಂದ ಸುಮ್ಮನಿದ್ದ ನನ್ನ ಕೀಟಲೆ ಮನಸ್ಸು ಜಾಗೃತವಾಯಿತು. ಆಗ ಹೀಗೆ ಅನಿಸಿತು.....

* ಹಣೆ ಬರಹದಿಂದಲೂ ಕೆಲವರ ಕೈ ಬರಹ ತಿದ್ದಲು ಸಾದ್ಯವಿಲ್ಲ!


* ಕೈ ಬರಹ ಚೆನ್ನಾಗಿದ್ದವರ ಹಣೆ ಬರಹವೂ ಚೆನ್ನಾಗಿರುತ್ತದೆ ಎನ್ನಲಾಗುವುದಿಲ್ಲ!


* ಹಣೆ ಬರಹ ಬರೆದವನ ಕೈ ಬರಹ ಕೆಟ್ಟದಾಗಿದ್ದರೆ ಹಣೆ ಬರಹವೂ ಕೆಟ್ಟದಾಗಿರುತ್ತದೆ!


* ಅಕ್ಷರಸ್ಥ ಕೂಡ ಹಣೆಬರಹ ಓದಲಾರ!


* ಹಣೆ ಬರಹ ಓದಬಲ್ಲವನೇ ನಿಜವಾದ ಅಕ್ಷರಸ್ಥ!

* ಹಾಗಾದರೆ ಜಗತ್ತಿನ ತುಂಬ ಅನಕ್ಷರಸ್ಥರೆ!

* ಹಣೆಬರಹ ಬರೆಯಲು ದೇವರು ಅದೆಷ್ಟು ಮೊದಲೇ ಪರ್ಮನೆಂಟ್ ಮಾರ್ಕರ್ ಪೆನ್ನು ಕಂಡುಹಿಡಿದಿದ್ದ!

* ಹಣೆಬರಹ ಕೆಟ್ಟದಾಗಿದ್ದರೂ ಕೈ ಬರಹ ಕೆಟ್ಟದಾಗಿರಬೇಕಿಲ್ಲ!

* ಹಣೆಬರಹ ಬರೆಯುವುದೇ ನಿನ್ನ ಹಣೆಬರಹ ಅಂತ ಆತನ ಹಣೆಮೇಲೆ ಬರೆದವರಾರು!

Thursday, March 19, 2009

ನಗ್ಮ ದರ್ಶನ!



ಫೇಮಸ್ ಚಿತ್ರನಟಿಯೊಬ್ಬರು ದಿಢೀರನೆ ಸಿಕ್ಕರೆ ನೀವೇನು ಮಾಡುತ್ತೀರಿ? ಹೋಗಿ ಕೈ ಕುಲುಕುತ್ತೀರಿ. ಫೋಟೋ ತೆಗೆಸಿಕೊಳ್ಳಲು ಅತ್ತಿತ್ತ ಫೋಟೋಗ್ರಫರ್‌ಗಾಗಿ ಹುಡುಕುತ್ತೀರಿ. ಅವರ ಆಟೋಗ್ರಾಫ್ ತೆಗೆದುಕೊಳ್ಳುತ್ತೀರಿ. ಚಿತ್ರನಟಿಯರ ಕಂಡಾಗೆಲ್ಲ ಮುತ್ತಿಕೊಳ್ಳುವ ಜನರನ್ನು, ಅವಳ ಒಂದು ಟಚ್ ಗಾಗಿ, ಒಂದು ಸಹಿಗಾಗಿ ಅದೆಷ್ಟು ಕಷ್ಟಪಡುತ್ತಾರೆ ನೀವೇ ನೋಡಿದ್ದೀರಲ್ಲ.

ಅಂತಹ ನಟಿಯೊಬ್ಬಳು ನಮ್ಮ ಮಲ್ಲಿಕಾರ್ಜುನ ಖರ್ಗೆಯನ್ನು ಭೇಟಿಯಾಗಲು ಬಂದಾಗ ಅವರು ಕೇಳಿದ ಮೊದಲ ಪ್ರಶ್ನೆಯೇನು ಗೊತ್ತೇ ‘ನಿಮ್ಮ ಹೆಸರೇನು?’

ಹೌದು. ನೀವು ನಂಬಲೇ ಬೇಕು!

ಸೋಲಿಲ್ಲದ ಸರದಾರ, ಸಿದ್ದುಗಾಗಿ ಪ್ರತಿಪಕ್ಷ ನಾಯಕನ ಸ್ಥಾನ ತೆರವು ಮಾಡಿ, ತ್ಯಾಗಮಯಿ ಅನ್ನಿಸಿಕೊಳ್ಳಲು ಮನಸಿಲ್ಲದ ಮನಿಸಿನಿಂದಲೇ ಸಿದ್ದರಾಗುತ್ತಿರುವ ಮಲ್ಲಿಕಾರ್ಜುನ ಖರ್ಗೆ ಒಂದು ದಿನ ಕರ್ನಾಟಕ ಭವನದ ಕೊಠಡಿಯಲ್ಲಿ ಕುಳಿತಿದ್ದರು. ಪ್ರತಿಪಕ್ಷ ನಾಯಕನ ಸ್ಥಾನ ತಪ್ಪಿಸುವ ಮುನ್ಸೂಚನೆಯಾಗಿ ಖರ್ಗೆಗೆ ಮಹಾರಾಷ್ಟ್ರದ ಅಭ್ಯರ್ಥಿ ಆಯ್ಕೆ ಸಮಿತಿ ಅಧ್ಯಕ್ಷತೆ ವಹಿಸಲಾಗಿದೆ.

ಅದೃಷ್ಟ ನೋಡಿ!

ಚಿತ್ರ ನಟಿ ನಗ್ಮಾ ಖರ್ಗೆ ಭೇಟಿಗೆಂದು ತಾವೇ ಹುಡುಕಿಕೊಂಡು ಬಂದುಬಿಡಬೇಕೆ!

ಮುಂಬಯಿ ಪಶ್ಚಿಮ ಕ್ಷೇತ್ರದಿಂದ ನಗ್ಮಾ ಟಿಕೆಟ್ ಬಯಸಿದ್ದಾರೆ. ಬಹಳ ಪ್ರಯತ್ನವನ್ನೂ ನಡೆಸಿದ್ದಾರೆ. ಈ ಪ್ರಯತ್ನದ ಭಾಗವಾಗಿಯೇ ನಗ್ಮಾ ಅವರು ಖರ್ಗೆ ಭೇಟಿಗೆ ಆಗಮಿಸಿದ್ದರು. ನಗ್ಮಾ ಎಷ್ಟೆಂದರೂ ಫೇಮಸ್ ಅಲ್ಲವೆ. ಬಹುಶಃ ಖರ್ಗೆ ತನ್ನನ್ನು ಗುರುತಿಸಬಹುದು ಅಂದುಕೊಂಡಿದ್ದರು.

ಆದರೆ ಖರ್ಗೆ ಅಮಾಯಕರಂತೆ ನಿಮ್ಮ ಹೆಸರೇನಮ್ಮಾ ಅಂದಾಗ ದಂಗಾಗಿ ಹೋದಳು ನಗ್ಮಾ!

ಆಗ ಖರ್ಗೆ ಪಕ್ಕದಲ್ಲಿದ್ದ ಅವರ ಸ್ನೇಹಿತ ಕೊಂಡಯ್ಯ ಅವರು ಖರ್ಗೆ ಕಿವಿಯಲ್ಲಿ ‘ಸರ್ ಅವಳ ಹೆಸರು ನಗ್ಮಾ ಅಂತ. ಅವಳು ಫೇಮಸ್ ಚಿತ್ರನಟಿ ಸರ್. ಅವಳ ಹೆಸರಿನಲ್ಲಿ ತಮಿಳುನಾಡಿನಲ್ಲಿ ದೇವಸ್ಥಾನಗಳನ್ನೆಲ್ಲ ಕಟ್ಟಿಸಿದ್ದಾರೆ. ಅವಳಿಗೆ ಮುಂಬಯಿನಿಂದ ಟಕೆಟ್ ಬೇಕಂತೆ’ ಎಂದು ಉಸುರಿದರು.

ಆಗ ದಂಗಾಗುವ ಪಾಳಿ ಖರ್ಗೆಯದ್ದು!

ಹೌದಾ? ನಾನು ಅವಳ ಒಂದೂ ಸಿನಿಮಾ ನೋಡಿಲ್ಲಲ್ಲೊ ಎಂದು ಖರ್ಗೆ ಅಮಾಯಕರಂತೆ ನುಡಿದಾಗ ಕೊಠಡಿಯಲ್ಲಿದ್ದವರೆಲ್ಲ ಕಂಗಾಲು. ಆದರೂ ಸಾವರಿಸಿಕೊಂಡ ಖರ್ಗೆ ‘ರಾಜಕೀಯದ ಅನುಭವ ಎಷ್ಟಿದೆ? ನೀನು ಮಾಡಿದ ಸಾಮಾಜಿಕ ಕಾರ್ಯವೇನು?’ ಎಂದೆಲ್ಲ ಕೇಳಿದಾಗ ಚುನಾವಣೆಗೆ ಸ್ಪರ್ಧಿಸಲು ಇದೆಲ್ಲ ಅಗತ್ಯವಿದೆಯಾ ಎಂಬ ಪ್ರಶ್ನಾರ್ಥಕ ಚಿಹ್ನೆ ನಗ್ಮಾಳ ಮುಖದಲ್ಲಿ ಮೂಡಿತು. ಆ ಪ್ರಶ್ನೆ ಹೊತ್ತೇ ಅವರು ಖರ್ಗೆ ಕೊಠಡಿಯಿಂದ ಹೊರಹೋಗಬೇಕಾಯಿತು.

ಇದು ನಡೆದಾಗ ಕೆಲವರೇ ಇದ್ದರು ಕೊಠಡಿಯಲ್ಲಿ. ಆದರೂ ಈ ಸುದ್ದಿ ಹೇಗೋ ಹೊರಗೆ ನುಸುಳಿ ಬಂದುಬಿಟ್ಟಿದೆ. ನಾವೇನೋ ಕನ್ನಡ ಪತ್ರಕರ್ತರು ಇದನ್ನು ಕೇಳಿ, ನಕ್ಕು, ಜೋಕೆಂಬಂತೆ ಕೆಲವರ ಬಳಿ ಹೇಳಿ ಸುಮ್ಮನಿದ್ದೆವು. ಆದರೆ ‘ಮಿಡ್ ಡೇ’ ಪತ್ರಿಕೆಯವರು ಮುಖಪುಟದಲ್ಲಿ ಖರ್ಗೆಗೆ ನಗ್ಮಾ ಪರಿಚಯವೇ ಇಲ್ಲ ಎಂದು ಬರೆದು, ಜಗಜ್ಜಾಹೀರು ಮಾಡಿದರು.

ಅದಕ್ಕೆ ಪಾಪ ಖರ್ಗೆ "ಅಲ್ಲೊ ಹೆಸರೇನು ಅಂತ ಕೇಳಿದರೆ ನನಗೆ ಅವಳ ಪರಿಚವೇ ಇಲ್ಲ ಬರೆದುಬಿಡೋದಾ' ಅಂತ ಕನ್ನಡ ಪರ್ತಕರ್ತರೊಬ್ಬರ ಬಳಿ ದುಃಖ ತೋಡಿಕೊಂಡರಂತೆ.

ಚಿತ್ರನಟಿ ನಗ್ಮಾ ಅವರು ಖರ್ಗೆ ಭೇಟಿಗೆ ಬಂದಿದ್ದಾರೆ ಅಂತ ನನಗೆ ಫೋನ್ ಬಂದಾಗ ನನಗನ್ನಿಸಿತು..... ಖರ್ಗೆ ಜನ್ಮ ಸಾರ್ಥಕವಾಯಿತು ಬಿಡಿ ಅಂತ. ‘ಪ್ರತಿಪಕ್ಷ ನಾಯಕನ ಸ್ಥಾನ ಹೋದರೆ ಹೋಗಲಿ’ ಅಂತ ನಗ್ಮಾ ಭೇಟಿ ನಂತರ ಖರ್ಗೆ ಅವರೇ ಅಂದುಕೊಂಡಿರಬಹುದು ಅಂದುಕೊಂಡು ಮನಸೊಳಗೇ ನಕ್ಕಿದ್ದೆ.

ಒಂದು ಭೇಟಿ ಇಷ್ಟೆಲ್ಲ ಸುದ್ದಿ, ನಗು ಸೃಷ್ಟಿಸಿತು ನೋಡಿ.

Friday, March 13, 2009

ಪ್ರಗತಿ ಪರರೇ ನೀವು ನಿಜವಾಗಿಯೂ ಪ್ರಗತಿ ಪರವೇ?


ಇಂತಹ ಮಾಹಿತಿ ಯುಗದಲ್ಲೂ ಇದೊಂದು ಸುದ್ದಿ ನಿಮ್ಮ ಕಣ್ತಪ್ಪಿಹೋಗಿರಬಹುದು!
ಯಾಕೆಂದರೆ ಮಂಗಳೂರಿನ ಪಬ್ ದಾಳಿಯನ್ನು ದೇಶವೊಂದರ ಮೇಲಿನ, ಇಡೀ ಮಹಿಳಾ ಸಮಾದ ಮೇಲೆ ನಡೆದ ದಾಳಿ ಎಂಬಂತೆ ಬಿಂಬಿಸಿದ, ವೆಲಂಟೈನ್ಸ್ ಡೇ ಆಚರಣೆಗೆ ಅಡ್ಡಿಪಡಿಸುವ ಶ್ರೀರಾಮ ಸೇನೆ ಹೇಳಿಕೆಯನ್ನು ಸ್ವಾತಂತ್ರ್ಯೋತ್ಸವಕ್ಕೆ ಅಡ್ಡಿಪಡಿಸಿದಷ್ಟು ಗಂಭೀರವಾಗಿ ಪಡಿಗಣಿಸಿದ ರಾಷ್ಟ್ರೀಯ ಮಾಧ್ಯಮಗಳು, ಈ ಸುದ್ದಿಯನ್ನು ಯಾವಾಗ ಪ್ರಕಟಿಸಿದವೊ ಗೊತ್ತಾಗಲೇ ಇಲ್ಲ.
೩ ವಾರದ ಹಿಂದೆ ಕೋಲ್ಕತ್ತ ನಗರದಲ್ಲಿ ದಾಂಧಲೆಗಳು ನಡೆದವು. ‘ದಿ ಸ್ಟೇಟ್ಸ್‌ಮೆನ್’ ಪತ್ರಿಕೆ ಸಂಪಾದಕ ರವೀಂದ್ರ ಕುಮಾರ್ ಹಾಗೂ ಪ್ರಕಾಶಕ ಆನಂದ ಸಿನ್ಹಾ ಅವರನ್ನು ಬಂಧಿಸಿದ ನಂತರವೇ ಗದ್ದಲ ತಣ್ಣಗಾಯಿತು. ಇದಕ್ಕೆ ಕಾರಣವಿಷ್ಟೆ. ‘ಇಂಡಿಪೆಂಡೆಂಟ್’ ಎಂಬ ಪತ್ರಿಕೆಯಲ್ಲಿ ಜೋಹಾನ್ ಹರಿ ಎಂಬವರು ಬರೆದ ಲೇಖನವನ್ನು ‘ದಿ ಸ್ಟೇಟ್ಸ್‌ಮೆನ್’ ಮರುಮುದ್ರಿಸಿತ್ತು. ಅದರಲ್ಲಿ ಇಸ್ಲಾಂ ಕುರಿತು ಟೀಕೆ ಇತ್ತು. ಅದೇ ಗಲಾಟೆಗೆ ಕಾರಣ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಆರೋಪದಲ್ಲಿ ಸಂಪಾದಕ ಮತ್ತು ಪ್ರಕಾಶನನ್ನು ಬಂಧಿಸಬೇಕು ಎಂಬ ಆಗ್ರಹವೇ ಗಲಾಟೆಗೆ ಮೂಲ.
ಜೋಹಾನ್ ಹತಿ ಬ್ರಿಟನ್‌ನ ಪ್ರಗತಿಪರ ಚಿಂತಕ, ಜಾತ್ಯಾತೀತವಾದಿ. ಆದರೆ ಡೋಂಗಿಯಲ್ಲ. ಈತ ಜಾತ್ಯತೀತ ನಿಲುವಿಗಾಗಿ ಪ್ರಶಸ್ತಿಯನ್ನೂ ಪಡೆದಿದ್ದಾನೆ ಎಂಬುದು ಗಮನಾರ್ಹ. ಹಿಂದೆ ಹಲವು ಬಾರಿ ಈತ ಇಸ್ಲಾಂ ಸಮರ್ಥಿಸಿ ಕೂಡ ಲೇಖನ ಬರೆದ ದಾಖಲೆಗಳಿವೆ. ಈತ ಇಂಡಿಪೆಂಡೆಂಟ್ ಎಂಬ ಪತ್ರಿಕೆಯಲ್ಲಿ ‘why should I respect opressive religions?’ (ದಬ್ಬಾಳಿಕೆ ನಡೆಸುವ ಧರ್ಮಗಳನ್ನು ನಾನ್ಯಾಕೆ ಗೌರವಿಸಲಿ?) ಎಂಬ ಹೆಡ್‌ಲೈನ್ ನೀಡಿ ಒಂದು ಲೇಖನ ಬರೆದಿದ್ದ. ಅದನ್ನು ‘ದಿ ಸ್ಟೇಟ್ಸ್‌ಮೆನ್’ ಯಥಾವತ್ತಾಗಿ ಪ್ರಕಟಿಸಿತ್ತು.
ಈ ಲೇಖನದಲ್ಲಿ ಮುಖ್ಯವಾಗಿ ವಾಕ್ ಮತ್ತು ಅಭಿವ್ಯಕ್ತಿ ಸಾತಂತ್ರ್ಯದ ಬಗ್ಗೆ ಜೊಹಾನ್ ಹರಿ ಪ್ರತಿಪಾದಿಸಿದ್ದ. ವಿಶ್ವಸಂಸ್ಥೆ ವಾಕ್ ಸ್ವಾತಂತ್ರ್ಯವನ್ನು ಪ್ರಮುಖವಾಗಿ ಪ್ರತಿಪಾದಿಸುತ್ತಿದೆ. ಆದರೆ ಕೆಲವು ಮುಸ್ಲಿಂ ರಾಷ್ಟ್ರಗಳು ಅದಕ್ಕೆ ತದ್ವಿರುದ್ಧವಾಗಿ ವರ್ತಿಸುತ್ತಿವೆ. ಅವು ಧರ್ಮ ಹಾಗೂ ಸ್ತ್ರೀ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ವಾಕ್ ಸ್ವಾತಂತ್ರ್ಯದ ಮೇಲೆ ನಿಯಂತ್ರಣ ಇರಬೇಕು. ಯಾಕೆಂದರೆ ಅದು ಇಸ್ಲಾಂನಲ್ಲಿ ಸಮ್ಮತವಲ್ಲ ಎಂದು ವಾದಿಸುತ್ತಿವೆ. (ಇತ್ತೀಚೆಗೆ ಸ್ವಾತ್ ಪ್ರದೇಶದಲ್ಲಿ ಇಸ್ಲಾಂನ ಶೆರಿಯತ್ ಕಾನೂನು ಜಾರಿ ಮಾಡಲು ಪಾಕಿಸ್ತಾನ ಸರಕಾರ ಸಮ್ಮತಿಸಿದ್ದನ್ನು ನೆನಪಿಸಿಕೊಳ್ಳಬಹುದು.)
‘ನೈಜೀರಿಯಾದಲ್ಲಿ ಗಂಡನಿಂದ ತಿರಸ್ಕೃತಳಾದ ಮಹಿಳೆಯನ್ನು ಮನೆಯಿಂದಲೇ ಹೊರಹಾಕಲಾಗುತ್ತದೆ. ಅವರ ಮಕ್ಕಳನ್ನು ನೋಡಲೂ ಅವಕಾಶ ಇಲ್ಲ. ಈ ಪದ್ಧತಿ ವಿರುದ್ಧ ಅನ್ಯಾಯಕ್ಕೊಳಗಾದ ಮಹಿಳೆಯರೆಲ್ಲ ಸೇರಿ ಪ್ರತಿಭಟಿಸಲು ನಿರ್ಧರಿಸಿದರೆ, ಅಲ್ಲಿನ ಪೊಲೀಸರು ಅದು ಇಸ್ಲಾಂಗೆ ವಿರುದ್ಧ ಎಂಬ ಕಾರಣ ನೀಡಿ ಪ್ರತಿಭಟನೆಗೆ ಅವಕಾಶ ನಿರಾಕರಿಸಿದರು. ಈ ಜಿಪ್ತ್‌ನಲ್ಲಿ ಶೆರಿಯತ್ ಕಾನೂನು ಜಾರಿ ಮಾಡದೆ, ಪರಿಷ್ಕೃತ ಇಸ್ಲಾಂ ಕಾನೂನು ಜಾರಿ ಮಾಡಬೇಕು ಎಂಬ ಅಭಿಪ್ರಾಯವನ್ನು ಬ್ಲಾಗ್‌ನಲ್ಲಿ ಪ್ರಕಟಿಸಿದ ಅಬ್ದುಲ್ ರೆಹಮಾನ್‌ನನ್ನು ಬಂಧಿಸಿ, ಬ್ಲಾಗ್ ಮುಚ್ಚಿಸಲಾಯಿತು. ಸೌದಿಯಲ್ಲಿ ವಯಸ್ಸಾದವನೊಬ್ಬ ೧೦ ವರ್ಷದ ಹುಡುಗಿಯನ್ನು ಮದುವೆಯಾಗಲು ಸಮ್ಮತಿಯಿದೆ.’
‘ಇಸ್ಲಾಂ ಸಂಸ್ಕೃತಿಯನ್ನು ಗೌರವಿಸಿ ಎಂದು ಬೊಬ್ಬೆ ಹೊಡೆಯುವ ಪ್ರಗತಿಪರರು, ಗೌರವಿಸಬೇಕಾದ್ದು ಮಹಿಳೆಯರನ್ನೊ? ಬ್ಲಾಗರ್‌ನನ್ನೊ? ಅಥವಾ ಇವರ ಸ್ವಾತಂತ್ರ್ಯ ಹತ್ತಿಕ್ಕುತ್ತಿರುವವರನ್ನೊ? ಎಂಬುದಕ್ಕೆ ಉತ್ತರಿಸಬೇಕು’ ಎಂಬುದು ಜೋಹಾನ್ ಹರಿಯ ಲೇಖನದ ಹೂರಣ. ಹೀಗೆ ಬರೆಯುತ್ತ ಆತ ‘೫೩ ವರ್ಷದವನಿದ್ದಾಗ ೯ ವರ್ಷದ ಬಾಲಕಿಯೊಂದಿಗೆ ಸಂಬಂಧ ಬೆಳೆಸಿದ, ತನ್ನ ಅನುಯಾಯಿಗಳಾಗಲಿಲ್ಲ ಎಂಬ ಕಾರಣಕ್ಕೆ ಇಡೀ ಗ್ರಾಮವೊಂದರ ಜನರನ್ನು ಕೊಲ್ಲುವಂತೆ ಆದೇಶಿಸಿದ ಪ್ರವಾದಿಯ ಮಾತನ್ನು ಅನುಸರಿಸಬೇಕು ಎಂಬ ಕಲ್ಪನೆಯನ್ನು ನಾನು ಗೌರವಿಸುದಿಲ್ಲ’ ಎಂದು ಬರೆದಿದ್ದಾನೆ.
ಇದೇ ವಿವಾದದ ಮೂಲ!
ಈ ವಾಕ್ಯದ ನಂತರ ‘ಜ್ಯೂಯಿಷ್‌ಗಳಿಗೆ ವೆಸ್ಟ್‌ಬ್ಯಾಂಕ್ ಹಸ್ತಾಂತರಿಸಬೇಕು ಮತ್ತು ಪ್ಯಾಲಿಸ್ತೇನಿಗಳನ್ನೆಲ್ಲ ಬಾಂಬ್ ಹಾಕಿ ಕೊಲ್ಲಬೇಕು ಎಂಬ ಭಾವನೆಯನ್ನೂ ಗೌರವಿಸುವುದಿಲ್ಲ. ಹಾಗೆಯೇ ಮಾನವ ಮೊದಲು ಕುರಿ, ಕೋತಿಯಾಗಿದ್ದ ಎಂಬ ನಂಬಿಕೆಯನ್ನೂ ಒಪ್ಪುವುದಿಲ್ಲ’ ಎಂದು ಜೋಹಾನ್ ಹರಿ ಬರೆದಿದ್ದು ಗದ್ದಲ ಮಾಡಿದವರಿಗೆ ಕಂಡಿಲ್ಲ.
ವಿಶ್ವದಲ್ಲಿ ಧರ್ಮಗಳನ್ನು ಟೀಕಿಸಿ ಪ್ರಕಟವಾದ ಪುಸ್ತಕಗಳಿಗೆ ಕೊರತೆಯಿಲ್ಲ. ಇತ್ತೀಚೆಗೆ ಕೇರಳದ ಸನ್ಯಾಸಿನಿಯೊಬ್ಬಳು ‘’ಅಮೆನ್- ಎ ಆಟೊಬಯಾಗ್ರಫಿ ಆಫ್ ನನ್’ ಎಂಬ ಆತ್ಮಚರಿತ್ರೆ ಬರೆದಿದ್ದಾಳೆ.ಅದರಲ್ಲಿ ಸನ್ಯಾಸಿನಿಯರ ಸಲಿಂಗ ಕಾಮ, ಫಾದರ್‌ಗಳ ಲೈಂಗಿಕ ಕಿರುಕುಳದ ಬಗ್ಗೆಲ್ಲ ತನ್ನ ೩೦ ವರ್ಷದ ಅನುಭವ ದಾಖಲಿಸಿದ್ದಾಳೆ. ಸಾಕಷ್ಟು ವಿವಾದ್ಕಕೀಡಾದ ‘ದ ವಿನ್ಸಿಕೋಡ್’ ನಿಮಗೆ ನೆನಪಿರಬಹುದು. ಯಾವುದೇ ವ್ಯಕ್ತಿ ‘ಮಹಾಭಾರತ’ದಲ್ಲಿ ದ್ರೌಪದಿ ಐವರ ಹೆಂಡತಿಯಾಗಿದ್ದಳು ಎಂದೊ, ಕೃಷ್ಣನ ರಾಸಲೀಲೆಗಳು, ಆತ ಗೋಪಿಕೆಯರ ಬಟ್ಟೆ ಕದ್ದದ್ದು, ಸೀತೆಯ ಅಗ್ನಿ ಪರೀಕ್ಷೆ ಮುಂತಾದವುಗಳನ್ನು ಟೀಕಿಸಿ ಬರೆದರೆ ಇಡೀ ಹಿಂದೂ ಸಮಾಜ ಸಿಡಿದೆದ್ದು ಪ್ರತಿಭಟಿಸುತ್ತದೆ ಎಂದು ನನಗನ್ನಿಸುವುದಿಲ್ಲ. ಎಲ್ಲೋ ಕೆಲವು ಸಂಘಟನೆಗಳು ಪ್ರತಿಭಟಿಸಬಹುದು. ಅಷ್ಟೆ. ಆದರೆ ಹೆಚ್ಚಿನವರು ಟೀಕೆಯನ್ನು ಒಪ್ಪಿಕೊಳ್ಳುತ್ತಾರೆ. ಇತ್ತೀಚೆಗೆ ಇಂಗ್ಲೀಷ್ ಪತ್ರಿಕೆಯೊಂದರಲ್ಲಿ ‘ಸೀತೆಯೂ ಮದ್ಯಪಾನ ಮಾಡುತ್ತಿದ್ದಳು’ ಎಂಬ ಲೇಖನ ಪ್ರಕಟವಾಯಿತು.
ಒಂದೇಒಂದು ಪ್ರತಿಭಟನೆಯೂ ನಡೆಯಲಿಲ್ಲ!!
ಆದರೆ ಪ್ರವಾದಿಯ ಬಗ್ಗೆ, ಇಸ್ಲಾಂ ಬಗ್ಗೆ ಟೀಕಿಸುವುದು ಬಿಡಿ ಒಂದು ಕಾರ್ಟೂನು, ಒಂದು ವಾಕ್ಯ ಬರೆದರೂ ಸಾಕು ದೊಡ್ಡ ಗಲಾಟೆಗಳಾಗುತ್ತವೆ. ಹಿಂದೊಮ್ಮೆ ವಿದೇಶದಲ್ಲೆಲ್ಲೊ ಪ್ರವಾದಿಯ ಕಾರ್ಟೂನ್ ಪ್ರಕಟಿಸಿದ್ದಕ್ಕೆ ಭಾರತದಲ್ಲಿ ಪ್ರತಿಭಟನೆ, ಗಲಾಟೆಗಳು ನಡೆದಿದ್ದವು. ಡ್ಯಾನಿಷ್ ಕಾರ್ಟೂನ್‌ಗಾಗಿ ಕ್ಷಮೆ ಕೇಳಿ ಇಲ್ಲವೇ ಆತನ ತಲೆದಂಡಕ್ಕಾಗಿ ಬಹುಮಾನ ಘೋಷಣೆ ಮಾಡುತ್ತೇವೆ ಎಂಬ ಘೋಷಣೆ ಹೊರಬಿತ್ತು. ಕರ್ನಾಟಕದ್ದೇ ಪತ್ರಿಕೆಗೆ ಹಿಂದೆ ಇಂಥದ್ದೇ ಅನುಭವವಾಗಿದೆ. ಲೇಖಕಿ ತಸ್ಲೀಮಾ ನ್ರೀನ್‌ಗೆ ಭಾರತದಲ್ಲಿ ಯಾವ ಸ್ಥಿತಿ ನಿರ್ಮಾಣ ಮಾಡಿದರು ಎಂಬುದು ನಿಮಗೆ ಗೊತ್ತೇ ಇದೆ. ಜಾತ್ಯತೀತ ಎಂದು ಹೇಳಿಕೊಳ್ಳುವ ಭಾರತದಲ್ಲಿರುವ ಕೋಲ್ಕತ್ತಾದಿಂದಲೇ ಅವಳ್ನನು ಹೊರಗಟ್ಟಲಾಯಿತು. ಸಲ್ಮಾನ್ ರಶ್ದಿಗೆ ಕೊಲೆ ಬೆದರಿಕೆ ಹಾಕಲಾಗಿತ್ತು.
ಶಾರದೆಯನ್ನು ಬೆತ್ತಲೆಯಾಗಿ ಚಿತ್ರಿಸಿದ ಎಂ.ಎಫ್. ಹುಸೇನ್ ಮೇಲೆ ದಾಳಿಗಳು ನಡೆದಾಗ ಅದನ್ನು ಪ್ರಗತಿಪರರು ವಿರೋಧಿಸಿದರು. ಆ ಪ್ರಗತಿಪರರೆಲ್ಲ ಇಂತಹ ಘಟನೆಗಳನ್ನೂ ಯಾಕೆ ವಿರೋಧಿಸುವುದಿಲ್ಲ? ಈಗ ಯಾಕೆ ‘ದಿ ಸ್ಟೇಟ್ಸ್‌ಮೆನ್’ ಪತ್ರಿಕೆ ಸಂಪಾದಕ ಹಾಗ ಲೇಖಕ ಜೋಹಾನ್ ಹರಿ ಪರವಾಗಿ ಯಾಕೆ ಮಾತನಾಡುವುದಿಲ್ಲ. ಅವರ ವಿರುದ್ಧ ಹಿಂಸೆಗಿಳಿದವರನ್ನು ಯಾಕೆ ಖಂಡಿಸುವುದಿಲ್ಲ?ತನಗೆ ಇಷ್ಟಬಂದಂತೆ ಚಿತ್ರ ರಚಿಸುವುದು ಕಲಾವಿದನ ಹಕ್ಕು. ಅದನ್ನು ಒಪ್ಪದವರು ಚಿತ್ರ ನೋಡದಿದ್ದರಾಯಿತು ಎಂಬುದು ಹುಸೇನ್ ಮೇಲಿನ ಹಲ್ಲೆ ವಿರೋಧಿಸುವವರ ವಾದ. ಸರಿ ಒಪ್ಪಿಕೊಳ್ಳೋಣ. ಅಕಸ್ಮಾತ್ ಹುಸೇನ್ ಅವರೇ ಪ್ರವಾದಿಯ ಅಶ್ಲೀಲ ಚಿತ್ರ ಬೇಡ ಸಾದಾ ಚಿತ್ರ ಬಿಡಿಸಿದ್ದರೆ? ದೊಡ್ಡ ಗದ್ದಲವೇ ಆಗುತ್ತಿತ್ತೇನೊ. ಆಗ ಪ್ರಗತಿಪರರು ‘ಇಸ್ಲಾಂನಲ್ಲಿ ಪ್ರವಾದಿಯ ಯಾವುದೇ ಬಗೆಯ ಚಿತ್ರೀಕರಣ ಮಾನ್ಯವಲ್ಲ. ಆದ್ದರಿಂದ ಅವರು ಮಹಾಪರಾಧ ಮಾಡಿದ್ದಾರೆ’ ಎಂದು ಚಿತ್ರ ಬಿಡಿಸಿದವರನ್ನೇ ಖಂಡಿಸುತ್ತಿದ್ದರು. ಮುಸ್ಲಿಮರ ಪ್ರಕಾರ ಪ್ರವಾದಿಯ ಚಿತ್ರೀಕರಣ ನಿಷಿದ್ಧ. ಆದರೆ ಬೇರೆ ಧರ್ಮದವರೂ ಅವರ ನಿಯಮಗಳಿಗೆ ಬದ್ಧರೆ? ಮುಸ್ಲಿಮರು ಖುರಾನ್‌ಗೆ, ಮುಲ್ಲಾಗರಳ ಆದೇಶಕ್ಕೆ ಬದ್ಧರಾಗಿರಬೇಕು. ಆ ವಿಷಯದಲ್ಲಿ ವಾಕ್ ಸ್ವಾತಂತ್ರ್ಯ ಹೊಂದಿರಬಾರದು. ಆದರೆ ಬೇರೆ ಧರ್ಮದವರೂ ಅದನ್ನು ಪಾಲಿಸಬೇಕೆಂದೇನೂ ಇಲ್ಲವಲ್ಲ. ಎಂ.ಎಫ್. ಹುಸೇನ್ ಕಲಾಕಾರನ ಕಲ್ಪನೆಯಿಂದ ಶಾರದೆಯನ್ನು ಕಲ್ಪಿಸಿದರೊ, ಹಾಗೆಯೇ ಬೇರೊಬ್ಬ ಕಲಾಕಾರನ ದೃಷ್ಟಿಗೆ ಪ್ರವಾದಿ ಕೂಡ ಹಾಗೆಯೇ ಕಾಣಬಹುದು. ಆಗ?
ಶಾರದೆಯ ಚಿತ್ರವನ್ನು ಅಭಿವ್ಯಕ್ತಿ ಸ್ವಾತಂತ್ರ್ಯವೆಂದು ಸಹಿಸಿಕೊಳ್ಳಿ ಎನ್ನುವವರು ಇನ್ನೊಬ್ಬ ಕಲಾಕಾರ ಬಿಡಿಸಿದ ಪ್ರವಾದಿಯ ಚಿತ್ರವನ್ನು ಸಹಿಸಿಕೊಳ್ಳಲೂ ಸಿದ್ಧರಿರಬೇಕಲ್ಲವೆ? ಈ ಪಗ್ರತಿಪರರು ವಾಕ್ ಮತ್ತು ಅಭಿವ್ಯಕಿ ಸ್ವಾತಂತ್ರ್ಯವನ್ನು ಬೆಂಬಲಿಸುತ್ತಾರೆ. ಆದರೆ ದುರಭಿಮಾನಿಗಳೂ, ಅಂಧಾಭಿಮಾನಿಗಳು ವಿರೋಧಿಸುವ ವಿಷಯದ ಬಗ್ಗೆ ಮಾತನಾಡಿದರೆ, ಆಗ ಸರೀ ವಿರುದ್ಧ ನಿಲುವು ತಾಳುತ್ತಾರೆ. ಗಲಾಟೆಗೆ ಪ್ರಚೋದಿಸಿದ್ದೇ ಹಿಂಸೆಗೆ ಮೂಲ ಕಾರಣ ಎಂದು ದೂರುತ್ತಾರೆ. ಇದೇ ಜನರ ಬಳಿ ‘ಕರಾವಳಿಯಲ್ಲಿ ಅಕ್ರಮ ದನ ಸಾಗಾಟವೇ ಕೋಮು ಗಲಭೆಗೆ ಮೂಲ ಕಾರಣ’ ಎಂದು ಹೇಳಿನೋಡಿ. ಆಗ ಅವರು ‘ಇಲ್ಲಾ ಅದನ್ನು ಬಜರಂಗದಳದವರು ತಡೆದು ತಾವೇ ಪೊಲೀಸರಾಗ ಹೊರಟಿರುವುದೇ ಗಲಭೆಗೆ ಕಾರಣ’ ಅನ್ನುತ್ತಾರೆ.
ರಾಮಜನ್ಮಭೂಮಿ ಸಮಸ್ಯೆಯನ್ನೇ ನೋಡಿ. ಅಲ್ಲಿ ರಾಮ ಮಂದಿರ ನಿರ್ಮಿಸಲು ಯತ್ನಿಸುವ ಮೂಲಕ ಮುಸ್ಲಿಮರನ್ನು ಪ್ರಚೋದಿಸುವ ಕೆಲಸ ನಡೆಯುತ್ತಿದೆ. ಅದಕ್ಕಾಗಿ ಯಾವನಾದರೂ ಒಬ್ಬ ಬುದ್ದಿಜೀವಿ ‘ನೋಡಿ ರಾಮಜನ್ಮಭೂಮಿ ನಿಷ್ಪ್ರಯೋಜಕ ಎಂಬುದು ನನಗೂ ಗೊತ್ತು. ಆದರೇನು ಮಾಡುವುದು ಈ ವಿವಾದದಿಂದ ಬಿಜೆಪಿಗೆ ಲಾಭವಾಗುತ್ತದೆ. ದಿನದಿಂದ ದಿನಕ್ಕೆ ಅದರ ಜನಪ್ರಿಯತೆ ಹೆಚ್ಚುತ್ತಿದೆ. ಅದರ ಬದಲು ರಾಮಂದಿರ ನಿರ್ಮಾಣಕ್ಕೆ ಅವಕಾಶ ಮಾಡಿಕೊಡೋಣ. ಆ ಮೂಲಕ ನಾವು ಕೋಮು ಸಮಾರಸ್ಯಕ್ಕೆ ಮೊದಲ ಹೆಜ್ಜೆ ಇಡೋಣ. ಬಿಜೆಪಿಗೆ ಪ್ರಚಾರ ಪಡೆಯಲೂ ಅವಕಾಶ ಇಲ್ಲದಂತಾಗುತ್ತದೆ. ಹೇಗೂ ಬಾಬರಿ ಮಸೀದಿ ನಮಾಜ್‌ಗೆ ಬಳಕೆಯಾಗುತ್ತಿಲ್ಲ’ ಎಂದುಬಿಟ್ಟರೆ. ಹೀಗೆ ಯಾವನಾದರೂ ಹೇಳಿದರೆ ಅಂತ ನಾನು ಬರೆದಿದ್ದಕ್ಕೇ ವಿಚಾರವಾದಿಗಳು ಸಿಟ್ಟಿಗೇಳುವ ಸಾದ್ಯತೆಯಿದೆ.
ಮಂಗಳೂರು ಪಬ್ ದಾಳಿಗೆ ರಾಷ್ಟ್ರೀಯ ಮಾಧ್ಯಮಗಳು ಎಷ್ಟೆಲ್ಲ ಪ್ರಚಾರ ನೀಡಿದವುಎಂಬುದು ನಿಮಗೆ ಗೊತ್ತೇ ಇದೆ. ಆಗ ಕೇಂದ್ರ ಮಹಿಳಾ ಆಯೋಗದಿಂದ ತನಿಖೆಗೆ ಆಗಮಿಸಿ ಸಮಿತಿಯ ನೇತೃತ್ವ ವಹಿಸಿದ್ದ ನಿರ್ಮಲಾ ವೆಂಕಟೇಶ್ ಅವರನ್ನು ಅದೇ ಮಾಧ್ಯಮಗಳು ದಿನಾ ತೋರಿಸಿದವು. ಆದರೆ ಅದೇ ನಿರ್ಮಲಾ ವೆಂಕಟೇಶ್ ಅವರ ಸಮಿತಿ ನೀಡಿದ ವರದಿಯನ್ನು ಕೇಂದ್ರ ಸರಕಾರ ತಿರಸ್ಕರಿಸಿತು. ತನಗೆ ಬೇಕಾದಂತೆ ವರದಿ ನೀಡಲಿಲ್ಲ ಎಂಬ ಕಾರಣಕ್ಕೆ, ನಿರ್ಮಲಾ ವೆಂಕಟೇಶ್ ಅವರು ರಾಜೀನಾಮೆ ಸಲ್ಲಿಸಿದ್ದರೂ, ಅವರನ್ನು ವಜಾ ಮಾಡಿ ಆದೇಶ ಹೊರಡಿಸಿತು. ಇದು ಮಹಿಳೆಯರ ಮೇಲಿನ ದೌರ್ಜನ್ಯವಲ್ಲವೇ? ಪಬ್‌ನಲ್ಲಿ ದಾಳಿಗೊಳಗಾದ ಮಗಿಳೆಯರ ಪರ ವಕಾಲತ್ತು ವಹಿಸಿದ ಮಾಧ್ಯಮಗಳು, ಮಹಿಳಾ ಪರ ಹೋರಾಟಗಾರರೆಲ್ಲ ಸ್ಥಾನ ಕಳೆದುಕೊಂಡ ನಿರ್ಮಲಾ ವೆಂಕಟೇಶ್ ಪರ ಯಾಕೆ ನಿಲ್ಲಲಿಲ್ಲ? ನಿರ್ಮಲಾ ವೆಂಕಟೇಶ್ ಅವರನ್ನು ವಜಾ ಮಾಡಿದ್ದು ಅನಗತ್ಯ ಎಂದು ಯಾಕೆ ವಾದಿಸಲಿಲ್ಲ?
ಪ್ರಗತಿಪರರೇ ಯಾಕೀ ದ್ವಿಮುಖ ನೀತಿ? ಜಾತ್ಯತೀತ ಸಮಾಜಕ್ಕೆ ಇದು ತಕ್ಕುದಲ್ಲ. ಪ್ರಗತಿಪರರ ನಿಲುವು ಸರಿಯಾಗಿರಬೇಕು. ಎಲ್ಲ ವಿಷಯದಲ್ಲೂ ಸಮನಾದ, ಜಾತ್ಯತೀತ, ವಿಷಯ ನಿಷ್ಟ ನಿಲುವು ವ್ಯಕ್ತಪಡಿಸಬೇಕು. ಪ್ರಗತಿಪರರ ನಿಲುವುಗಳೂ ಧರ್ಮ, ಜಾತಿ ಅವಲಂಬಿಸುವಂತಾದರೆ ‘ಜಾತ್ಯತೀತ’ ಎಂಬ ಶಬ್ದಕ್ಕೆ ಅರ್ಥವಿರುವುದಿಲ್ಲ. ಪ್ರಗತಿಪರರು ಹೆಸರಿಗೆ ಮಾತ್ರ ಪ್ರಗತಿಪರರಾಗಿರುತ್ತಾರೆ. ಆಗ ‘ಪ್ರಗತಿಪರರೇ ನೀವು ನಿಜವಾಗಿಯೂ ಪ್ರಗತಿಪರವೇ’ ಎಂಬ ಅನುಮಾನ ಮೂಡುತ್ತದೆ.

Tuesday, March 10, 2009

ಹೀಗೊಂದು ನಂಬಲಾಗದ ಕತೆ

ಇಂತಹ ಕತೆ ನಾನು ಹಿಂದೆಂದೂ ಕೇಳಿರಲಿಲ್ಲ. ಬಹುಶಃ ಮುಂದೆಯೂ ಕೇಳಲಿಕ್ಕಿಲ್ಲ. ನೀವೂ ಕತೆ ಓದಿದ ನಂತರ ಹೀಗೇ ಹೇಳುತ್ತೀರಿ. ಯಾಕೆಂದರೆ ಹಾಗಿದೆ ಈ ಕತೆ.
ದೆಹಲಿ ಕರ್ನಾಟಕದ ಸಂಘದಲ್ಲೊಂದು ಕಾರ್ಯಕ್ರಮ. ಕರ್ನಾಟಕ ವಾರ್ತಾ ಇಲಾಖೆಯಲ್ಲಿ ದೆಹಲಿ ಕಚೇರಿಯಲ್ಲಿ ವಾರ್ತಾಧಿಕಾರಿಯಾಗಿರುವ ವೀರಣ್ಣ ಆಗಾಗ ದೆಹಲಿ ಕನ್ನಡಿಗರಿಗಾಗಿ ಕನ್ನಡ ಸಿನಿಮಾ ತೋರಿಸುತ್ತಿರುತ್ತಾರೆ. ಹಾಗೇ ಒಮ್ಮೆ ಸಿನಿಮಾ ತೋರಿಸುತ್ತೇನೆ ಬನ್ನಿ ಎಂದು ಕರೆದಿದ್ದರು. ಹೋಗಿದ್ದೆ. ಅಂತಹ ಅವಕಾಶ ತಪ್ಪಿಸುವುದಿಲ್ಲ.
ಯಾಕೆಂದರೆ ದೆಹಲಿಯಲ್ಲಿ ಕನ್ನಡ ಸಿನಿಮಾ ಅಂದರೆ ಸಮುದ್ರದ ನಡುವೆ ಸಿಹಿನೀರು ಸಿಕ್ಕಂತೆ!

ಹಾಗೆ ಸಿನಿಮಾ ನೋಡೋಕೆ ಅಂತ ಕೆಲವು ತಿಂಗಳ ಹಿಂದೆ ಹೋದಾಗ ಒಂದು ಸಭಾ ಕಾರ್ಯಕ್ರಮ ಇಟ್ಟುಕೊಂಡಿದ್ರು. ಅದು ಪಾಪ ವೀರಣ್ಣ ಅವರ ಕುಕೃತ್ಯವಾಗಿರಲಿಲ್ಲ. ಆದರೆ ಅವರು ಅದನ್ನು ತಪ್ಪಿಸುವಂತೆಯೂ ಇರಲಿಲ್ಲ. ಅನಿವಾರ್ಯ ಕರ್ಮ. ಕಾರ್ಯಕ್ರಮಕ್ಕೆ ತಲೆಕೊಟ್ಟವು. ಭಾಷಣ ಕೇಳುವ ಆಸಕ್ತಿ ಯಾರಿಗೂ ಇರಲಿಲ್ಲ. ಆದರೆ ಕೇಳದೆ ಇರುವಂತೆಯೂ ಇರಲಿಲ್ಲ.
ಆಗ ಭಾಷಣ ಮಾಡಿದ ಒಬ್ಬರು ಒಂದು ಕತೆ ಹೇಳಿದರು ನೋಡಿ. ಕೇಳಿ ನಾನು ದಂಗಾಗಿ ಹೋದೆ. ಅರೆ ಇಂತಹ ಕತೆಯೂ ಇದೆಯಾ? ಇದನ್ನು ಇಷ್ಟೆಲ್ಲ ಜನರ ಎದುರು ಹೇಳಲು ಅವರಿಗೆಷ್ಟು ಧೈರ್ಯ? ಏನು ನಮ್ಮನ್ನೆಲ್ಲಾ ದಡ್ಡರೆಂದು ಅವರು ಅಂದುಕೊಂಡಿದ್ದೀರಾ? ಅಥವಾ ಅವರೇ ದಡ್ಡರು ಎಂಬುದನ್ನು ಸಾಬೀತು ಮಾಡಲು ಅವರು ಹೊರಟಿದ್ದರಾ?
ಒಂದೂ ಅರ್ಥವಾಗಲಿಲ್ಲ!
ಕತೆ ಹೀಗಿತ್ತು....
ಅವರು ಒಮ್ಮೆ ಬೆಂಗಳೂರು ಹೊರಭಾಗದಲ್ಲಿ ಒಂದು ಬಸ್ಸಿನಲ್ಲಿ ಹೋಗುತ್ತಿದ್ದಂತೆ. ಅದು ಆ ಊರಿಗಿರುವ ಒಂದೇ ಒಂದು ಬಸ್. ಬಸ್ಸು ತುಂಬ ರಶ್ಶಿತ್ತು. ಅಷ್ಟು ರಶ್ಶಿದ್ದ ಬಸ್ಸಿಗೆ ಮಗು ಕರೆದುಕೊಂಡಿದ್ದ ಒಬ್ಬ ಹೆಂಗಸು ಕೈ ಮಾಡಿದಳು. ನಮ್ಮದು ಎಷ್ಟೆಂದರೂ ಕೈ ತೋರಿಸಿದಲ್ಲಿ ನಿಲ್ಲುವ ವಾಹನವಲ್ಲವೆ? ಬಸ್ಸು ನಿಂತಿತು. ಹೇಗೇಗೋ ಪ್ರಯತ್ನ ಮಾಡಿ ಆಕೆ ಬಸ್ಸು ಹತ್ತಿದಳು. ಸ್ವಲ್ಪ ದೂರ ಹೋದ ನಂತರ ಬಸ್ಸಿನಿಂದ ಏನೋ ಬಿದ್ದಂತಾಯಿತು. ಏನು? ಏನು? ಏನು? ಅಂತ ಎಲ್ಲರೂ ನೋಡಿದ್ದೇ ನೋಡಿದ್ದು. ೧-೨ ಕಿ.ಮೀ ಹೋದ ಮೇಲೆ ಅದು ಮಗುವೇ ಇರಬೇಕು ಎಂಬ ಅನುಮಾನ ತಾಯಿಗೆ ಆರಂಭವಾಯಿತು.
ನೋಡಿದರೆ ಹೌದು!
ತಾಯಿ ಮಗುವನ್ನು ಬುಟ್ಟಿಯಲ್ಲಿ ಹಾಕಿ ಬಸ್ಸಿನ ಟಾಪ್ ಮೇಲಿಟ್ಟಿದ್ದಳು. ಬಸ್ಸಿನ ಓಲಾಡುವಿಕೆಯಲ್ಲಿ ಮಗು ಕೆಳಗೆ ಬಿದ್ದಿತ್ತು. ಬಸ್ಸು ನಿಲ್ಲಿಸಿ ತಾಯಿ ಇಳಿದಳು. ಅವಳ ಜತೆ ನಮಗೆ ಕತೆ ಹೇಳಿದವರು ಹಾಗೂ ಮತ್ತೊಂದಿಬ್ಬರು ಬಸ್ ಇಳಿದರಂತೆ. ನಡೆದುಕೊಂಡು ಹೋಗಿ ನೋಡಿದರೆ ಮಗು ರಸ್ತೆ ಬದಿಗೆ ಬಿದ್ದಿತ್ತಂತೆ. ಬುಟ್ಟಿಯಲ್ಲಿದ್ದಿದ್ದರಿಂದ ಗಾಯವೇನೂ ಆಗಿರಲಿಲ್ಲ.
ಇಷ್ಟೇ ಅವರ ಕತೆ. ಅಲ್ಲಲ್ಲ ಸತ್ಯ ಘಟನೆ.
ನನ್ನ ಸಂಶಯ ಇಷ್ಟೆ. ಯಾವ ತಾಯಿಯೂ ಬಸ್ ಟಾಪ್ ಮೇಲೆ ಮಗುವನ್ನಿಟ್ಟು ತಾನು ಮಾತ್ರ ಒಳಗೆ ಕೂರುವುದಿಲ್ಲ. ಒಂದೋ ಆಕೆಯೂ ಮಗುವಿನ ಜತೆಯೇ ಬಸ್ ಟಾಪಿನ ಮೇಲೆ ಕೂರುತ್ತಾಳೆ. ಕರುನಾಡಲ್ಲಿ ಇನ್ನೂ ಅಂತಹ ತಾಯಂದಿರು ಇಲ್ಲ ಎಂಬುದು ನನ್ನ ಭಾವನೆ. ಹೀಗಿರುವಾಗ ಆ ಹಿರಿಯರು ಹೇಳಿದ ಘಟನೆ ಸತ್ಯಾಸತ್ಯತೆ ಬಗ್ಗೇ ನನಗೆ ಅನುಮಾನವಿದೆ. ಅವರು ಏನೋ ಹೇಳಲು ಹೋಗಿ ಏನೋ ಹೇಳಿದ್ದರು. ಯಾಕೆ ಕೆಲವರು ದೊಡ್ಡ ಸ್ಥಾನದಲ್ಲಿದ್ದರೂ ಹೀಗೆಲ್ಲ ಮಾತನಾಡುತ್ತಾರೊ? ಅಥವಾ ಮಾತನಾಡುವ ತೆವಲು ಅವರಿಂದ ಹೀಗೆಲ್ಲ ಆಡಿಸುತ್ತದೊ? ಒಂದೂ ಅರ್ಥವಾಗುತ್ತಿಲ್ಲ. ಅಂತೂ ಅವರ ಕತೆಯಿಂದಾಗಿ ನಿಷ್ಪ್ರಯೋಜಕ ಕಾರ್ಯಮವೊಂದು ನಮ್ಮನ್ನು ಚಿಂತೆಗೆ ಹಚ್ಚಿದ್ದು ಸುಳ್ಳಲ್ಲ.
ಈ ಕತೆ ನಿಮ್ಮನ್ನೂ ಚಿಂತೆಗೆ ಹಚ್ಚಿದರೆ ನಾನು ಅದಕ್ಕೆ ಕಾರಣವಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸುತ್ತೇನೆ. ಆ ಕೀರ್ತಿ ಏನಿದ್ದೂ ಕತೆ ಹೇಳಿದವರಿಗೇ ಸೇರಬೇಕು.

Monday, February 23, 2009

‘ಸ್ಲಂ ಡಾಗ್’ ಕಾಲದಲ್ಲಿ ‘ಶೌರ್ಯ’ದ ಬೊ(ಹೊ)ಗಳಿಕೆ



ಒಮ್ಮೊಮ್ಮೆ ಹೀಗೇ ಆಗೋದು ನೋಡಿ. ಆ ಡಿವಿಡಿ ತಂದು ಅದೆಷ್ಟೋ ದಿನವಾಗಿತ್ತು. ನನಗೆ ಅತ್ಯಂತ ಪ್ರಿಯವಾದ, ಇಷ್ಟವಾದ ‘ಎ ವೆನ್ಸಡೆ’ ಡಿವಿಡಿಯೊಟ್ಟಿಗೆ ಶೌರ್ಯ ಸಿನಿಮಾದ ಡಿವಿಡಿಯೂ ಇತ್ತು. ಒಮ್ಮೆ ಹಚ್ಚಿ ನೋಡಲು ಕುಳಿತು, ತುರ್ತು ಕೆಲಸದಿಂದ ಬಂದ್ ಮಾಡಿದ್ದೆ. ಶೌರ್ಯ ನೋಡಬೇಕು ಅಂತ ಹಲವು ಬಾರಿ ಅಂದುಕೊಂಡಿದ್ದೆನಾದರೂ, ಕಾಲ ಕೂಡಿ ಬಂದಿರಲಿಲ್ಲ. ಹಿಂದೊಮ್ಮೆ ಗಣೇಶಯ್ಯ ಅವರ ‘ಶಾಲಭಂಜಿಕೆ’ ಪುಸ್ತಕ ಕೂಡ ಹೀಗೇ ಆಗಿತ್ತು. ಆಮೇಲೆ ಓದಿದಾಗ ಛೆ ಮೊದಲೇ ಓದಬಾರದಿತ್ತೆ ಅನ್ನಿಸಿತ್ತು.

ಶೌರ್ಯ ಸಿನಿಮಾ ನೋಡಿದಾಗಲೂ ಹಾಗೇ ಅನ್ನಿಸಬೇಕೆ!

ಇವತ್ತು ಕಚೇರಿಯಿಂದ ಮನೆಗೆ ಬರುವಾಗ ಯಾಕೋ ಶೌರ್ಯ ನೆನಪಾಯಿತು. ಮನೆಗೆ ಬಂದವನೆ ಬೇರೇನೂ ವಿಚಾರ ಮಾಡದೆ ಕಂಪ್ಯೂಟರ್ ಆನ್ ಮಾಡಿ ಕುಳಿತೆ.

ವಾವ್.... ಸೂಪರ್.... ಫೆಂಟಾಸ್ಟಿಕ್....

ಒಮ್ಮೊಮ್ಮೆ ಅಲ್ಲ ಹಲವು ಬಾರಿ ಹೀಗೇ ಆಗುತ್ತೆ ನೋಡಿ. ಎಷ್ಟೋ ಜನ ಈ ಸಿನಿಮಾದ ಹೆಸರನ್ನಾದರೂ ಕೇಳಿದ್ದಾರೊ ಇಲ್ಲವೊ. ಸಾಮಾನ್ಯವಾಗಿ ನಾವು ಬಹುಜನರ ಅಭಿಪ್ರಾಯದಲ್ಲಿ ತೇಲಿಹೋಗುತ್ತೇವೆ. ‘ಸ್ಲಂ ಡಾಗ್’ ಸಿನಿಮಾದಂತೆ!

ನಮ್ಮ ಕಚೇರಿಯಲ್ಲಿರುವ ವಿನಯ್ ಶೇಷಗಿರಿ ‘ಸ್ಲಂ ಡಾಗ್’ ನೋಡಿ ಬಂದು, ಛೆ ಪ್ರಯೋಜನವಿಲ್ಲ. ಒಬ್ಬ ಭಾರತೀಯನಾಗಿ ನಾನು ಅದನ್ನು ಇಷ್ಟಪಡುವುದಿಲ್ಲ ಎಂದರು. ಆ ಸಿನಿಮಾ ನೋಡಬೇಕೆಂದು ಇದ್ದ ಸಣ್ಣ ಉದ್ದೇಶವನ್ನೂ ಕೈಬಿಟ್ಟೆ.

‘ಶೌರ್ಯ’ ಸಿನಿಮಾ ನೋಡಿದಾಗ ಮಾಧ್ಯಮಗಳು ಹೇಗೆ ನಮ್ಮ ಟೇಸ್ಟ್‌ಗಳನ್ನು, ನಿರ್ಣಯಗಳನ್ನು ಬದಲಿಸಿಬಿಡುತ್ತವೆ ಅಂದುಕೊಂಡೆ. ‘ಸ್ಲಂ ಡಾಗ್’ ಬಗ್ಗೆ ನಮ್ಮಲ್ಲಿರುವ ಸ್ಲಂಗಳ ಬಗ್ಗೆ ವರದಿ ಮಾಡಿದ್ದಕ್ಕಿಂತ ಬೇಕಾದಷ್ಟು ಹೆಚ್ಚು ವರದಿ ಮಾಡಿದ ಮಾಧ್ಯಮಗಳು, ನಾವೂ ಆ ಸಿನಿಮಾ ನೋಡಬೇಕು ಅನ್ನಿಸುವಂತೆ ಮಾಡಿಬಿಟ್ಟವು. ನೀವು ಆ ಸಿನಿಮಾ ನೋಡದಿದ್ದರೇ ಬದುಕಿರುವುದೇ ವೇಸ್ಟು ಎಂಬಂತೆ ಬರೆದವು. ಅದೇ ಮಾಧ್ಯಮಗಳು ‘ಶೌರ್ಯ’ದ ಬಗ್ಗೆ ನಿಮಗೆ ಗೊತ್ತೇ ಆಗದಷ್ಟು ಚಿಕ್ಕದಾಗಿ ಬರೆದವು.

ಸಮಸ್ಯೆಯೆಂದರೆ ಬಹುತೇಕ ಬಾರಿ ನಾವು ಸಿನಿಮಾ ರಿವ್ಯೂ ಆಧರಿಸಿ ಸಿನಿಮಾ ನೋಡುತ್ತೇವೆ. ನಾನು ಸಿನಿಮಾ ರಿವ್ಯೂ ಓದುವುದು ಕಡಿಮೆ, ನನಗೆ ನೋಡಬೇಕು ಅನ್ನಿಸಿದರೆ ನೋಡುತ್ತೇನೆ. ಇಲ್ಲವಾದಲ್ಲಿ ಅದೆಷ್ಟೇ ಸೂಪರ್ ಹಿಟ್ ಆಗಿರಲಿ ನಾನು ನೋಡುವುದಿಲ್ಲ.

ಜನರೆಲ್ಲ ನೋಡಿದ ಸಿನಿಮಾ ನಾನು ನೋಡುವುದಿಲ್ಲ. ಬಹುತೇಕ ಸಿನಿಮಾಗಳು ನಾನು ನೋಡಿದ್ದನ್ನು ಹೆಚ್ಚಿನ ಜನ ನೋಡಿರುವುದಿಲ್ಲ.

ಶೌರ್ಯ ಅಂತಹ ಸಿನಿಮಾಗಳಲ್ಲೊಂದು. ಶೌರ್ಯ ನಿಜಕ್ಕೂ ಅದ್ಭುತ ಸಿನಿಮಾ. ಸೈನ್ಯಾಧಾರಿತ ಕತೆ. ನಿಮ್ಮನ್ನು ಆಕರ್ಷಿಸುವ ನಟರಿಲ್ಲ. ದೊಡ್ಡ ದೊಡ್ಡ ಬಾಡಿಗಳ ನಾಯಕರಿಲ್ಲ. ಹೊಕ್ಕಳ ಕೆಳಗೆ ಸೀರೆ ಉಡುವ, 'ಪಿಂಕ್' ಚಡ್ಡಿ ಕಾಣಿಸುವಷ್ಟು ಚಿಕ್ಕ ಸ್ಕರ್ಟ್ ಹಾಕುವ ನಾಯಕಿಯಿಲ್ಲ. ಐಟಂ ಸಾಂಗ್ ಇಲ್ಲ. ಆದರೆ ಒಳ್ಳೆ ಕತೆಯಿದೆ. ನಿಮ್ಮನ್ನು ಆಸಕ್ತಿಯಿಂದ ನೋಡುವಂತೆ ಮಾಡುವ ಸ್ಕ್ರೀನ್ ಪ್ಲೇ ಇದೆ. ಸೈನ್ಯದ ಬಗ್ಗೆ ಒಂದೊಳ್ಳೆ ಮೆಸೇಜ್ ಇದೆ.

ಚಿತ್ರದ ನಾಯಕ ರಾಹುಲ್ ಭೋಸ್ ನ ವಿಚಿತ್ರವಾದ, ಕನ್‌ಫ್ಯೂಸ್ ಆದಂತಿರುವ ಆತನ ಪಿಕ್ಯುಲರ್ ಮ್ಯಾನರಿಸಂ ನಂಗಿಷ್ಟ. ಈತ ಸಿನಿಮಾದಲ್ಲಿ ಒಬ್ಬ ಬೇಜವಾಬ್ದಾರಿ, ಜಾಲಿ ಮನುಷ್ಯ. ಈತನ ಹೆಸರು ಮೇಜರ್ ಸಿದ್ದಾರ್ಥ ಚೌಧರಿ. ಈತನ ಗೆಳೆಯ ಮೇಜರ್ ಆಕಾಶ್ ಚೌಧರಿ. ಒಂದು ದಿನ ಆಕಾಶ್ ಕೇಸೊಂದನ್ನು ತಂದು ಸಿದ್ದಾರ್ಥನಿಗೆ ನೀಡುತ್ತಾನೆ. ಸೈನ್ಯದ ಅಧಿಕಾರಿಯೊಬ್ಬ ತನ್ನ ಕಮಾಂಡಿಂಗ್ ಅಧಿಕಾರಿಯನ್ನೇ ಕೊಂದಿರುತ್ತಾನೆ. ಆತನ ಕೋರ್ಟ್ ಮಾರ್ಷಲ್ ನಡೆಯಬೇಕಿರುತ್ತದೆ. ಅದರಲ್ಲಿ ಆತನ ಪರವಾಗಿ ಸಿದ್ದಾರ್ಥ ವಾದಿಸಬೇಕು. ಇಷ್ಟವಿಲ್ಲದ ಮನಸ್ಸಿನಿಂದ ಒಪ್ಪಿಕೊಂಡ ಸಿದ್ದಾರ್ಥನಿಗೆ ಪತ್ರಕರ್ತೆ (ಚಿತ್ರದ ನಾಯಕಿ) ಭೇಟಿಯಾಗುತ್ತಾಳೆ. ಆಕೆ ಕೇಸಿನ ಬಗ್ಗೆ ಕೇಳಿದಾಗ ಸಿದ್ದಾರ್ಥ ಸರಿಯಾಗಿ ಉತ್ತರಿಸುವುದಿಲ್ಲ. ಆಕೆ ಅದನ್ನೇ ಪ್ರಕಟಿಸಿಬಿಡುತ್ತಾಳೆ. ಹಾಗೆ ಪತ್ರಿಕೆಯಲ್ಲಿ ಬಂದರೆ ಏನಾಗುತ್ತದೆಂದು ನಿಮಗೆ ಗೊತ್ತಿದೆ.

ಈತ ಅವಳಿಗೆ ಬಯ್ಯಲು ಹೋದಾಗ ಆಕೆ ಪ್ರಕರಣದ ಗಂಭೀರತೆಯನ್ನು ಹೇಳುತ್ತಾಳೆ. ಅಂದಿನಿಂದ ಸಿದ್ದಾರ್ಥ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತಾನೆ.

ಆಗ ಆತನಿಗೆ ಬ್ರಿಗೇಡಿಯರ್ ಪ್ರತಾಪ್‌ನ ಭೇಟಿಯಾಗುತ್ತದೆ. ಆತ ಪ್ರತಾಪಗಳ ಪರಿಚಯವಾಗುತ್ತದೆ. ಆರೋಪಿ ಜಾವೇದ್ ಖಾನ್ ತನ್ನ ಅಧಿಕಾರಿ ಮೇಜರ್ ರಾಠೋಡ್‌ನನ್ನು ಕೊಂದಿರುತ್ತಾನೆ. ಆದರೆ ಜಾವೇದ್ ಮಾತೇ ಆಡುವುದಿಲ್ಲ. ಬೇಕಂತಲೇ ಮೌನಿಯಾಗಿರುತ್ತಾನೆ. ನಿಧಾನವಾಗಿ ಕತೆ ಬಿಚ್ಚಿಕೊಳ್ಳುತ್ತ ಹೋಗುತ್ತದೆ. ಹಂತಹಂತವಾಗಿ, ಕುತೂಹಲಕಾರಿಯಾಗಿ.

ಈ ಚಿತ್ರದಲ್ಲಿ ಕತೆಯ ಜತೆಗೆ ಬ್ರಿಗೇಡಿಯರ್ ಪ್ರತಾಪ್‌ನ ಡೈಲಾಗ್‌ಗಳು, ಮ್ಯಾನರಿಸಂ, ಮೆಡಲ್ ಪಡೆದ ಅಧಿಕಾರಿಯೊಬ್ಬನ ದರ್ಪ, ಆತನ ಸಮರ್ಥನೆಗಳು ನಿಮಗಿಷ್ಟವಾಗುತ್ತವೆ. ಅದೇರೀತಿ ಪೆಕ್ರನಂತೆ ಆಡುವ ಸಿದ್ದಾರ್ಥ ಚೌಧರಿ ನಟನೆ ಕೂಡ. ಹಾಸ್ಯ ಕೂಡ ಅಲ್ಲಲ್ಲಿ ಚಕ್ಕನೆ ಇಣುಕಿ, ಕಚಗುಳಿ ಇಟ್ಟು ಮರೆಯಾಗುತ್ತದೆ.

ಕೇವಲ ಮುಸ್ಲಿಂ ಎಂಬ ಕಾರಣಕ್ಕೆ ಯಾವನೂ ದೇಶದ್ರೋಹಿಯಲ್ಲ ಎಂಬ ಸಂದೇಶದ ಜತೆಗೆ ಭಾರತದ ಸೇನೆ ಜಾತಿ, ಧರ್ಮ ಮೀರಿ ನಿಂತಿದೆ ಎಂಬುದನ್ನೂ ನಿರ್ದೇಶಕ ಸಮರ್ ಖಾನ್ ಬಿಂಬಿಸಿದ್ದಾರೆ. ಮಾಲೇಗಾಂವ್ ಬಾಂಬ್ ಸ್ಫೋಟ ಆರೋಪಿಗಳಿಗೆ ಲೆಫ್ಟಿನೆಂಟ್ ಪುರೋಹಿತ್ ತರಬೇತಿ ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲೂ ಈ ಸಿನಿಮಾ ನೋಡಬಹುದು.

ಇಷ್ಟು ಕತೆ ಸಾಕು. ಉಳಿದದ್ದನ್ನು ನೀವು ಸಿನಿಮಾ ನೋಡಿಯೇ ಆನಂದಿಸಿ. ದಯವಿಟ್ಟು ಸಮಯ ಸಿಕ್ಕರೆ ‘ಶೌರ್ಯ’ ಡಿವಿಡಿ ತಂದು ನೋಡಿ. ನಿಮಗಿಷ್ಟವಾಗಬಹುದು. ಕೊಂಚ ದೇಶಭಕ್ತಿಯೂ ಮೂಡಬಹುದು. ನಿಮಗಿಷ್ಟವಾದರೆ ತಿಳಿಸಿ. ಅಷ್ಟೇ ನನಗೆ ತೃಪ್ತಿ.

ಇಷ್ಟಕ್ಕೂ ಈ ‘ಸ್ಲಂ ಡಾಗ್’ ಕಾಲದಲ್ಲಿ ಹಳೆಯ ‘ಶೌರ್ಯ’ದ ಬಗ್ಗೆ ಬೊಗಳಿದ್ದಕ್ಕೆ ಕ್ಷಮೆ ಇರಲಿ.

Friday, January 09, 2009

ವಿಶ್ವದಲ್ಲೆಲ್ಲ ಮೆಲ್ಟ್‌ಡೌನು, ನನ್ನ ಮನೆಲೆಲ್ಲ ಶಟ್‌ಡೌನು!



ಪ್ರಪಂಚದ ಜನರಿಗೆಲ್ಲ ಮೆಲ್ಟ್ ಡೌನಿನ ಚಿಂತೆ. ನನ್ನ ಮನೇಲೋ ಶಟ್ ಡೌನಿನ ಕಂತೆ!

ಎಲ್ಲರೂ ಸಾಮಾನ್ಯ ಜೀವನಕ್ಕೆ ಹಣ ಹೊಂದಿಸುವ ಹರಿಬರಿ. ನನಗೋ ಶಟ್ ಡೌನಾದ ವಸ್ತುಗಳ ದುರಸ್ತಿಯ ತರಾತುರಿ!

ನಾನು ಸೆಪ್ಟೆಂಬರ್ನಲ್ಲಿ ಊರಿಗೆ ಹೋಗಿ ಬಂದಾಗಿಬನಿಂದ ದುರಸ್ತಿ ಮಾಡಿಸಿದ ವಸ್ತುಗಳ ಪಟ್ಟಿ ನೋಡಿದರೆ, ಸರಿಯಿರುವ ನನ್ನ ತಲೆಯೂ ಹಾಳಾಗುತ್ತದೆ! ನಿಮ್ಮದೂ ಹಾಳಾಗಬಹುದು!!

ಊರಿಂದ ಬಂದ ದಿನವೇ ಮನೆಗೆ ಬಂದು ಮೊಬೈಲ್ ಚಾರ್ಜ್ ಹಾಕಿದರೆ, ಚಾರ್ಜೇ ಆಗುವುದಿಲ್ಲ. ಎಷ್ಟು ಕಷ್ಟಪಟ್ಟರೂ! ಮೊಬೈಲ್ ಬಳಸಬೇಕಾದರೆ ಚಾರ್ಜರ್ ಬೇಕೇ ಬೇಕು. ತಕ್ಷಣ ಅಂಗಿ ಹಾಕಿ ಹೊರಟೆ. ಮನೆಯಿಂದ ೧.೫ ಕಿ.ಮೀ. ದೂರವಿರುವ ಮಾರುಕಟ್ಟೆಗೆ ಹೋಗಿ, ಸೋನಿ ಶೋರೂಂ ಹುಡುಕಿ, ಸಮಸ್ಯೆ ಹೇಳಿದೆ. ಚಾರ್ಜರ್ ಹಾಳಾಗಿದೆ ಸರ್ ಎಂದ. ಸರಿ ೫೦೦ ರೂ. ಕೊಟ್ಟು ಚಾರ್ಜರ್ ಖರೀದಿಸಿದೆ.
ಕಿಸೆಯ ಚಾರ್ಜ್ ಕಡಿಮೆಯಾದರೂ, ಮೊಬೈಲ್ ಫುಲ್ ಚಾರ್ಜ್ ಆಯಿತು!
ಸ್ವಲ್ಪ ದಿನ ಯಾವ ಸಮಸ್ಯೆಯೂ ಇರಲಿಲ್ಲ. ಅಷ್ಟೊತ್ತಿಗೆ ಬಂತು ನೋಡಿ ವಿಶ್ವ ಆರ್ಥಿಕ ಹಿಂಜರಿತ ಅಲಿಯಾಸ್ ಮೆಲ್ಟ್ ಡೌನು! ಜತೆಗೆ ಚಳಿ.
ಚಳೀಗೆ ಹೆದರಿಯೋ, ಆರ್ಥಿಕ ಹಿಂಜರಿತದ ಜರಿತಕ್ಕೊ ನನ್ನ ಟಿವಿ ಕಣ್ಮುಚ್ಚಿತು. ಹಿಂದಿನ ದಿನ ರಾತ್ರಿವರೆಗೂ ಸರಿಯಾಗೇ ಉರಿಯುತ್ತಿದ್ದ ಟಿವಿ, ಮರುದಿನ ಮಧ್ಯಾಹ್ನ ಹಚ್ಚಿದರೆ ಸಣ್ಣ ಸೌಂಡೂ ಹೊರಹಾಕಲಿಲ್ಲ! ಏನೋ ಸಣ್ಣ ಸಮಸ್ಯೆ ಇರಬಹುದು ಅಂತ ಹತ್ತಿರವೇ ಇರುವ ಎಲೆಕ್ಟ್ರೀಷಿಯನ್ ಕರೆಸಿದೆ. ಆತ ಬಂದು ನೋಡಿ, ಸರ್ ಟಿವಿ ಅಂಗಡಿಗೇ ತೆಗೆದುಕೊಂಡು ಹೋಗಬೇಕು ಅಂದ. ಹಾಗೆಲ್ಲ ಅವನ ಅಂಗಡಿಗಳಿಗೆ ಕಳುಹಿಸುವುದು ಸರಿಯಲ್ಲ. ಒಮ್ಮೊಮ್ಮೆ ಅಂಗಡಿಗೆ ಹೋಗಿ ಕುಳಿತ ಟಿವಿ ಮರಳುವುದೇ ಇಲ್ಲ. ಹೀಗಾಗಿ ಹೆದರಿದ ನಾನು ಬೇಡ ಬಿಡು. ಕಂಪನಿಯ ಸರ್ವೀಸ್ ರೂಂನಲ್ಲೇ ದುರಸ್ತಿ ಮಾಡಿಸುತ್ತೇನೆ ಅಂದೆ. ೧೦೦ ರೂ. ಕೊಟ್ಟು ಕಳುಹಿಸಿದೆ. ಸರಿ ಪಿಲಿಫ್ಸ್ ಕಸ್ಟಮರ್ ಕೇರ್ ಗೆ ಫೋನಾಯಿಸಿದೆ. ಮರುದಿನ ಒಬ್ಬ ಎಕ್ಸಿಕ್ಯುಟೀವ್ ರೂಪದ ಎಲೆಕ್ಟ್ರೀಷಿಯನ್ ಬಂದ. ನೋಡಿ, ಸರ್ ಟಿವಿ ಸರ್ವೀಸ್ ರೂಮಿಗೆ ತನ್ನಿ ಎಂದ. ಮನೆ ಬಳಿಯ ಎಲೆಕ್ಟ್ರೀಚಿಯನ್ ಹೇಳಿದ್ದನ್ನೇ ಆತನೂ ಹೇಳಿದ್ದ. ಈತನ ಚಾರ್ಜು ೨೮೦ ರೂ!
ಮರುದಿನ ಕಾರಲ್ಲಿ ಟಿವಿ ತುಂಬಿ ಸರ್ವೀಸ್ ರೂಂ ಹುಡುಕಿ ಹೋದೆ. ೫ ದಿನದ ನಂತರ ಟಿವಿ ಮನೆಗೆ ಬಂತು. ಒಟ್ಟು ೯೦೦ ರೂ. ಕಿಸೆಯಿಂದ ಹೋಗಿತ್ತು!
ಈ ನಡುವೆ ಕಾರಿನ ಸರ್ವೀಸಿಂಗ್ ಬಾಕಿ ಇತ್ತು. ಅಲ್ಲಿಗೆ ಹೋದರೆ ಸರ್ ೬೦,೦೦೦ದ ಸರ್ವೀಸು. ಮೇಜರ್ರು ಅಂದ. ಬಿಲ್ಲು ಮೇಜರ್ ಆಗೇ ಇತ್ತು. ೮೦೦೦ ರೂ. ತೆತ್ತು ಗಾಡಿ ತಂದೆ. ಮರುದಿನ ಬೆಳಗ್ಗೆ ಕಾರು ಸ್ಟಾರ್ಟ್ ಮಾಡಿದರೆ ಹಳೆ ಫಿಯೆಟ್ ಗಾಡಿಯಂತೆ ಸ್ಟಾರ್ಟ್ ಆಗಲು ನಿರಾಕರಿಸಿತು! ಅಂತೂ ೨-೩ ಬಾರಿ ಪ್ರಯತ್ನಿಸಿದ ಮೇಲೆ ಸ್ಟಾರ್ಟ್ ಆಯಿತು. ಅವತ್ತೇನೋ ಕೆಲಸ. ಶೋರೂಂಗೆ ಹೋಗಲಾಗಲಿಲ್ಲ. ಮತ್ತೆ ಮರುದಿನ ಇದೇ ಕತೆ. ಹಿಂದಿನ ದಿನ ಕೊಂಚ ಪ್ರಯತ್ನಿಸಿದ ಮೇಲೆ ಸ್ಟಾರ್ಟ್ ಆಗಿದ್ದರಿಂದ ನಾನೂ ಚಲಬಿಡದೆ ಪ್ರಯತ್ನಿಸಿದೆ! ಕಾರೂ ಚಲಬಿಡಲಿಲ್ಲ!
ಸಮೀಪದ ಗ್ಯಾರೇಜಿನಿಂದ ಮೆಕ್ಯಾನಿಕ್ ಕರೆತಂದು ಆತನಿಗೆ ೧೦೦ ರೂ. ಕೊಟ್ಟಮೇಲೆಯೇ ಕಾರು ಸ್ಟಾರ್ಟ್ ಆಗಿದ್ದು!
ಸೀದಾ ಶೋ ರೂಮಿಗೆ ಹೋಗಿ ದಬಾಯಿಸಿದೆ. ಕಾರಿಟ್ಟು ಹೋಗಿ ಸರ್. ನಾಳೆ ಎಲ್ಲಾ ಕರೆಕ್ಟ್ ಆಗಿರುತ್ತೆ ಅಂತ ತಲೆಸವರಿ ಕಳುಹಿಸಿದರು. ಮರುದಿನ ಹೋದೆ. ಯಾವುದೇ ಕರ್ಚಿಲ್ಲದೆ ರಿಪೇರಿ ಮಾಡಿಟ್ಟಿದ್ದರು. ಉಸ್ಸಪ್ಪ, ಬದುಕಿದೆಯಾ ಬಡ ಜೀವವೆ (೨ ದಿನದ ಹಿಂದಷ್ಟೇ ೮೦೦೦ ಕೊಟ್ಟು ಬಡವಾಗಿದ್ದರಿಂದ!) ಅಂತ ಮನೆಗೆ ಬಂದೆ. ಮರುದಿನ ಬೆಳಗ್ಗೆ ಎದ್ದು ಕಚೇರಿಗೆ ಹೊರಟರೆ ಸೆಂಟ್ರಲ್ ಲಾಕಿಂಗ್‌ನ ರಿಮೋಟ್ ಬಟನ್ ಒತ್ತಿದರೂ ಕಾರು ಕುಂಯ್ ಅನ್ನಲಿಲ್ಲ. ಹಲವು ಬಾರಿ ಪ್ರಯತ್ನಿಸಿದೆ. ಕೊನೆಗೆ ಚಾವಿ ಮೂಲಕ ತೆಗೆದು ಒಳಗೆ ಕೂತರೆ, ಸೈರನ್ ಹೊಡೆದುಕೊಳ್ಳಲಾರಂಭಿಸಿತು!
ಪಾಪ. ನನ್ನ ಹೆಂಡತಿ ಸಮೀಪದ ಮಾರುಕಟ್ಟೆಗೆ ಹೋಗಿ ಸೆಂಟ್ರಲ್ ಲಾಕಿಂಗ್ ರಿಮೋಟ್ಗೆ ಸೆಲ್ ಹಾಕಿಸಿ ತಂದಳು. ನನ್ನ ಗೃಹಚಾರಕ್ಕೆ ರಿಮೋಟ್ ನ ಸೆಲ್ ಸತ್ತೇ ಹೋಗಿತ್ತು!
ಇದಾದ ಸ್ವಲ್ಪ ದಿನಕ್ಕೆ ನನ್ನ ಲ್ಯಾಪ್ಟಾಪ್ ಸಮಸ್ಯೆ ಕೊಡತೊಡಗಿತು. ನನ್ನ ಕಚೇರಿಯಲ್ಲಿರುವ ಕಂಪ್ಯೂಟರ್ ತಜ್ಞನಿಗೆ ಕೊಟ್ಟೆ. ಆತ ಅದೇನೋ ಮಾಡಿಸಿ ತಂದ. ೫೦೦ ರೂ. ಕೊಡಿ ಅಂದ. ಅದಾದ ೩ ದಿನ ಲ್ಯಾಪ್ಟಾಪ್ ಸ್ಟಾರ್ಟ್ ಆಗಲು ನಿರಾಕರಿಸಿತು. ಈ ಕಿರಿಕಿರಿ ಬೇಡ. ದರ ಹೆಚ್ಚಾದರೂ ತೊಂದರೆಯಿಲ್ಲ ಏಸರ್ ಸರ್ವೀಸ್ ರೂಂನಲ್ಲೇ ದುರಸ್ತಿ ಮಾಡಿಸೋಣ. ಒಮ್ಮೆ ಸಮಸ್ಯೆ ಬಗೆಹರಿಯುತ್ತದಲ್ಲ ಎಂದು ಅಲ್ಲಿಗೇ ಕೊಟ್ಟೆ. ಮರುದಿನ ಸರ್ ಮದರ್ ಬೋರ್ಡ್ ಹೋಗಿದೆ. ೧೩,೦೦೦ ಆಗುತ್ತೆ ಅಂತ ಫೋನ್ ಬಂತು!
ಹಳೆ ಲ್ಯಾಪ್ಟಾಪ್ ಮಾರಾಟ ಮಾಡಿದರೆ ನೆಟ್ಟಗೆ ೫೦೦೦ ಸಿಗುವುದು ಅನುಮಾನ. ಅದಕ್ಕೆ ೧೩,೦೦೦ ಕೊಟ್ಟು ದುರಸ್ತಿ ಮಾಡಿಸುವುದೇ? ಅಂತ ಈಗ ೨೦,೫೦೦ ರೂ. ಕೊಟ್ಟು ಹೊಸ ಕಂಪ್ಯೂಟರ್ ತಂದಿರಿಸಿಕೊಂಡಿದ್ದೇನೆ. ನನ್ನ ಗೃಹಚಾರಕ್ಕೆ ಅದೂ ಸಮಸ್ಯೆ ಕೊಡಬೇಕೆ!
ಅಂತೂ ನೆಹರುಪ್ಲೇಸಿಗೆ (ಏಷ್ಯಾದ ದೊಡ್ಡ ಕಂಪ್ಯೂಟರ್ ಮಾರುಕಟ್ಟೆ) ತಿರುಗಾಡಿ ಅದನ್ನಂತೂ ಸರಿ ಮಾಡಿಸಿದ್ದೇನೆ. ಟ್ರಿಪಲ್ ಕೋರ್ ಪ್ರೊಸೆಸರ್ ಹಾಕಿಸಿದ್ದಕ್ಕೇ ಇರಬೇಕು ಹೊಸ ಕಂಪ್ಯೂಟರ್ ಸರಿಯಾಗಿ ಕೆಲಸ ಮಾಡಲು ನೆಹರೂ ಪ್ಲೇಸಿಗೆ ೩ ಬಾರಿ ಹೋಗಬೇಕಾಯಿತು! ಈಗ ಅದರ ಮೂಲಕವೇ ಬ್ಲಾಗಿಸುತ್ತಿರುವುದು. ಲ್ಯಾಪ್ಟಾಪ್ ಇನ್ನೂ ತಂದಿಲ್ಲ.
ಈ ನಡುವೆ ಟಿವಿ ಒಂದು ಶುಭ ಮುಂಜಾನೆ ಅರ್ಥಾತ್ ಹೊಸ ವರ್ಷದ ೨ನೇ ದಿನ ಮತ್ತೆ ಕೆಲಸ ಮಾಡುವುದನ್ನು ನಿಲ್ಲಿಸಿತು. ಅದಕ್ಕೆ ಹೊಸ ವರ್ಷದಲ್ಲಿ ಹೊಸದಾಗಿ ದುರಸ್ತಿ ಮಾಡಿಸಿಕೊಳ್ಳುವಾಸೆ! ಮೊದಲು ಮಾಡಿದ ತಪ್ಪುಗಳಿಂದ ಪಾಠ ಕಲಿತಿದ್ದ ನಾನು ಸೀದ ಶೋರೂಮಿಗೆ ಟಿವಿ ತೆಗೆದುಕೊಂಡು ಹೋದೆ. ರಿಪೇರಿ ಮಾಡಿಕೊಟ್ಟು ೧ ತಿಂಗಳಿನ್ನೂ ಆಗಿಲ್ಲ ಎಂಬ ಕಾರಣಕ್ಕೋ ಏನೋ ಹಾಳಾಗಿದ್ದ ಬಿಡಿ ಭಾಗದ ೨೦೦ ರೂ. ಮಾತ್ರ ಪಡೆದು ರಿಪೇರಿ ಮಾಡಿಕೊಟ್ಟರು.
ಇಷ್ಟಕ್ಕೇ ಮುಗಿದಲ್ಲ ನನ್ನ ವ್ಯಥೆ!
ಫ್ರಿಜ್ಜು ಸದ್ಯಕ್ಕೆ ಹಾಳಾಗಿದೆಯೋ ಇಲ್ಲವೋ ಗೊತ್ತಿಲ್ಲ. ಅದೇನು ದಿಲ್ಲಿಯ ತಂಪು ಫ್ರಿಡ್ಜಿಗಿಂತ ಜಾಸ್ತಿ ತಂಪಿರುವುದರಿಂದಲೋ ಏನೋ ಫ್ರಿಡ್ಜು ತಂಪೇ ಆಗುತ್ತಿಲ್ಲ ಎಂಬ ಅನುಮಾನ ನಮಗೆ, ಈಗ ಚಳಿ ಇರುವುದರಿಂದ ಅದಕ್ಕೆ ಸದ್ಯ ರೆಸ್ಟ್ ನೀಡಿದ್ದೇವೆ. ಬೇಸಿಗೆ ಬಂದ ಮೇಲೆ ಅದರ ಬಗ್ಗೆ ತಲೆಬಿಸಿ ಮಾಡಿಕೊಳ್ಳುವ ಅಂತ!
ಇದೆಲ್ಲ ಓದಿದ ಮೇಲೆ ಸದ್ಯಕ್ಕೆ ವಿನಾಯಕನ ಮನೆಯಲ್ಲಿ ಸರಿ ಇರುವುದು ಅವನ ಮತ್ತು ಹೆಂಡತಿಯ ತಲೆ ಮಾತ್ರ ಅಂತ ನಿಮಗೆ ಅನ್ನಿಸಿದರೂ ಅಚ್ಚರಿಯಿಲ್ಲ. ಯಾಕೆಂದರೆ ನನಗೇ ಎಷ್ಟೋ ಸಾರಿ ಹಾಗನ್ನಿಸಿದೆ!
ನಾನು ದಿಲ್ಲಿಗೆ ಬಂದು ೭ ತಿಂಗಳಷ್ಟೇ ಆಗಿದೆ. ಈ ಅವಧಿಯಲ್ಲಿ ನಿನ್ನ ಸಾಧನೆಯೇನು ಅಂತ ಯಾರಾದರೂ ಕೇಳಿದರೆ, ಯಾವುದೇ ವಸ್ತು ಕೊಡಿ ನಾನು ದುರಸ್ತಿ ಮಾಡಿಸಿ ತರಬಲ್ಲೆ ಎಂದು ಧೈರ್ಯದಿಂದ ಹೇಳಬಲ್ಲೆ!
ಸದ್ಯಕ್ಕೆ ನನ್ನ ಈ ‘ಹಾಳು’ ಪುರಾಣ ಮುಗಿಸುತ್ತೇನೆ. ಮತ್ತೇನಾದರೂ ಹಾಳಾದರೆ ಬರೆದು ತಿಳಿಸುತ್ತೇನೆ ಎಂದು ಈ ಮೂಲಕ ನಿಮ್ಮನ್ನು ಹೆದರಿಸುತ್ತಿದ್ದೇನೆ!

Wednesday, December 03, 2008

ಪಾಪಿ ಚಿರಾಯು...


ಯಾರೂ ಸಾಯಬಾರದು. ಹಾಗೆಂದು ಬಯಸಬಾರದು. ಹಾಗೆ ಬಯಸುವುದು ಮಾನಸಿಕ ಅದಃಪಥನದ ಸೂಚನೆ. ಇವತ್ತಿನವರೆಗೂ ನನಗೆ ಹಾಗೆ ಅನ್ನಿಸಿದ್ದೂ ಇಲ್ಲ.

ಮೊನ್ನೆ ಹಾಗನ್ನಿಸಿತು. ಉಗ್ರರು ಮುಂಬಯಿಗೆ ದಾಳಿ ನಡೆಸಿದಾಗ!

ದಾಳಿ ನಡೆಸಿದ ಉಗ್ರರೆಲ್ಲ ಸಾಯಬೇಕು ಅಂತ ಎಲ್ಲರಿಗೂ ಅನ್ನಿಸಿದೆ. ನನಗನ್ನಿಸಿದ್ದು ಬೇರೆ. ದಾಳಿಯ ಗಡಿಬಿಡಿಯಲ್ಲಿ ನೀವು ಗಮನಿಸಿದ್ದೀರೋ ಇಲ್ಲವೊ. ನಾನು ಸರಿಯಾಗಿ ಗಮನಿಸಿದೆ.

ತಾಜ್‌ಗೆ ಉಗ್ರರು ದಾಳಿ ನಡೆಸಿದಾಗ ಅದರಲ್ಲಿ ನಮ್ಮ ನಾಲ್ಕು ಸಂಸದರು (ಎಂಪಿಗಳು) ಇದ್ದರು. ಇಬ್ಬರು ಆರಂಭದಲ್ಲೇ ತಪ್ಪಿಸಿಕೊಂಡರೆ, ಇನ್ನಿಬ್ಬರು ೩೨ ಗಂಟೆಗಳ ನಂತರ ಪಾರಾದರು!

ಆಗ ನನಗೆ ಅನ್ನಿಸಿತು. ಇಷ್ಟೆಲ್ಲ ಜನ ಅಮಾಯಕರು, ನಿತ್ಯ ಜೀವನದ ಅನಿವಾರ್ಯಕ್ಕೆ ಹೆಣಗುತ್ತಿರುವವರು ಸತ್ತರು. ನಮ್ಮ ಸೈನಿಕರು, ಪೊಲೀಸರು ಸತ್ತರು. ಛೆ! ಹಾಗಿರುವಾಗ ಇವರೂ ಸಾಯಬಾರದಿತ್ತೇ ಅನ್ನಿಸಿಬಿಟ್ಟಿತು. ವಿಚಿತ್ರವೆಂದರೆ ಇಂದಿಗೂ ನನಗೆ ಹಾಗೆ ಅನ್ನಿಸುತ್ತಲೇ ಇದೆ. ಇನ್ನೂ ಭಯಂಕರವೆಂದರೆ ಛೆ, ನಮ್ಮ ಭದ್ರತಾ ದಳದವರಾದರೂ ಯಾಕೆ ಅವರನ್ನು ಹೊರಗೆ ಸುರಕ್ಷಿತವಾಗಿ ಕರೆತಂದರು. ಅವರನ್ನು ಎಳೆದುಕೊಂಡು ಉಗ್ರರ ಎದುರಿಗೆ ನಿಲ್ಲಿಸಿಬಿಡಬೇಕಿತ್ತು. ಇಲ್ಲವೇ ಭದ್ರತಾ ದಳದ ಸಿಬ್ಬಂದಿಯೇ ಗುಂಡುಹೊಡೆದರೂ ಆಗುತ್ತಿತ್ತು!

ಹೀಗೆಲ್ಲ ಯೋಚಿಸುವುದು ಸ್ವಸ್ಥ ಮನಿಸಿನ ಚಿಂತನೆಯಲ್ಲ ಎಂಬುದು ನನಗೆ ಅರಿವಿದೆ. ಆದರೂ ಅವರ ಮೇಲಿನ ಕೋಪ ಹೀಗೆಲ್ಲ ಯೋಚಿಸುವಂತೆ ಮಾಡುತ್ತಿದೆ. ಮತ್ತು ಅದೇ ಸರಿ ಅಂತಲೂ ಅನ್ನಿಸುತ್ತಿದೆ.

ಹೌದು. ಅವರು ಸಾಯಬೇಕಿತ್ತು. ಆಗಲಾದರೂ ನಮ್ಮ ರಾಜಕಾರಣಿಗಳು ಉಗ್ರರ ದಾಳಿ, ಬಾಂಬ್ ಸ್ಫೋಟಗಳನ್ನು ಗಂಭೀರವಾಗಿ ಪರಿಗಣಿಸುತ್ತಿದ್ದರೇನೊ. ಇಲ್ಲವಾದಲ್ಲಿ ನಮ್ಮನ್ನಾಳುವವರು ಇದನ್ನೆಲ್ಲ ಮತಕ್ಕಾಗಿ ಬಳಸಿಕೊಳ್ಳುವುದನ್ನೇ ವೃತ್ತಿಯಾಗಿಸಿಕೊಂಡಿದ್ದಾರೆ. ಅವರದ್ದೇ ಕಾಲಬುಡಕ್ಕೆ ಬಂದಾಗ, ಅವರದ್ದೇ ಜನ ಸತ್ತಾಗಲಾದರೂ ಸ್ವಲ್ಪ ಎಚ್ಚೆತ್ತುಕೊಳ್ಳುತ್ತಾರೇನೋ ಎಂಬ ಕಾರಣಕ್ಕಾಗಿಯೇ ನನಗೆ ಹಾಗನ್ನಿಸಿತು.

ಅವತ್ತು ತಾಜ್‌ನಲ್ಲಿ ಬಿಜೆಪಿಯ ಗೋದ್ರಾ ಸಂಸದ, ಮಹಾರಾಷ್ಟ್ರ ಎನ್‌ಸಿಪಿ ಸಂಸದ, ಕಾಂಗ್ರೆಸ್‌ನ ಸಂದರು ಇದ್ದರು. ಸರ್ವ ಪಕ್ಷ ಸಮನ್ವಯವೂ ಆಗುತ್ತಿತ್ತು. ತಥ್. ಹಾಗಾಗಲಿಲ್ಲ.

ನಾಲ್ಕು ಎಂಪಿಗಳು ಪಾರಾಗಿದ್ದು, ಅದರಲ್ಲೂ ೩೨ ಗಂಟೆಗಳ ನಂತರ ಇಬ್ಬರು ಎಂಪಿಗಳು ಪಾರಾದ ಸುದ್ದಿ ಓದಿದಾಗ ನೆನಪಾಯ್ತು...

ಪಾಪಿ ಚಿರಾಯು!

ಹಾಂ... ಅಂದಹಾಗೆ ಜೋಗಿ ಇತ್ತೀಚೆಗೆ ಬರೆದ ಯಾಮಿನಿ ಕಾದಂಬರಿಯ ಹೀರೋ ಹೆಸರು ಚಿರಾಯು!

ಅದರ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ.

Monday, December 01, 2008

ಇನ್ನೆಷ್ಟು ವರ್ಷ ಕಾಶ್ಮೀರಕ್ಕೆ ವಿಶೇಷ ರಾಜ್ಯದ ಕಿರೀಟ?


ಕಾಶ್ಮೀರಿಗಳೆಲ್ಲ ಭಾರತದ ಪ್ರಜೆಗಳು. ಆದರೆ ಭಾರತದ ಪ್ರಜೆಯೊಬ್ಬ ಕಾಶ್ಮೀರಿಯಾಗಲು ಸಾಧ್ಯವಿಲ್ಲ! ನೀವು ಎಂದಿಗೂ ಕಾಶ್ಮೀರದ ಚುನಾವಣೆಯಲ್ಲಿ ಮತ ಚಲಾಯಿಸಲಾರಿರಿ. ಅಲ್ಲಿ ಭೂಮಿ ಕೊಳ್ಳಲಾರಿರಿ. ಅದೇ ಒಬ್ಬ ಕಾಶ್ಮೀರಿ ಪ್ರಜೆ ಹಂಪಿಗೆ ಬಂದು ಮತದಾರರ ಗುರುತುಪತ್ರ ಪಡೆಯಬಲ್ಲ. ವಿಜಾಪುರದಲ್ಲಿ ಭೂಮಿ ಖರೀದಿಸಿ, ಗಲ್ಲಿಯಲ್ಲಿ ವ್ಯಾಪಾರಿಯಾಗಲ್ಲ.

೬೧ ವರ್ಷದಲ್ಲಿ ಜಮ್ಮು-ಕಾಶ್ಮೀರ ಒಬ್ಬೇ ಒಬ್ಬ ಹಿಂದೂ ಮುಖ್ಯಮಂತ್ರಿಯನ್ನು ಕಂಡಿಲ್ಲ. ಒಬ್ಬ ಹಿಂದುವೂ ಪ್ರಮುಖ ಖಾತೆಯ ಸಚಿವನಾಗಲಿಲ್ಲ. ಕೇಂದ್ರ ಸರಕಾರ ಈ ರಾಜ್ಯದ ಪ್ರಜೆಗಳಿಗೆ ವರ್ಷಕ್ಕೆ ತಲಾ ೯,೭೫೪ ರೂ. ದೊರೆಯುವಷ್ಟು ಅನುದಾನ ನೀಡುತ್ತದೆ. ಬಿಹಾರದಂತಹ ರಾಜ್ಯಕ್ಕೆ ದಕ್ಕುವುದು ತಲಾ ೮೭೬ ರೂ.ನಷ್ಟು ಅನುದಾನ ಮಾತ್ರ. ಇಷ್ಟಾಗಿಯೂ ವಿದೇಶಾಂಗ, ಭದ್ರತೆ ಹಾಗೂ ಸಂಪರ್ಕ ಸಂಬಂಧಿ ಕಾನೂನುಗಳುನ್ನು ಬಿಟ್ಟರೆ ದೇಶದ ಅತ್ಯುನ್ನತ ಕೇಂದ್ರವಾದ ಲೋಕಸಭೆ ಜಾರಿ ಮಾಡಿದ ಕಾನೂನುಗಳು ಕಾಶ್ಮೀರಕ್ಕೆ ಲಾಗೂ ಆಗುವುದಿಲ್ಲ!

ವಿಶೇಷ ರಾಜ್ಯದ ಸವಲತ್ತುಗಳನ್ನು ಕಾಶ್ಮೀರ ಇಷ್ಟೂ ವರ್ಷ ತಕರಾರಿಲ್ಲದೆ, ಸುಖದಿಂದ ಅನುಭವಿಸಿಕೊಂಡುಬಂದಿದೆ. ಇಷ್ಟೆಲ್ಲ ಅನುಭವಿಸಿದ ಕಾಶ್ಮೀರಿಗಳು ಮಾಡಿದ್ದೇನು?

೬೧ನೇ ಸ್ವಾತಂತ್ರ್ಯೋತ್ಸವದ ದಿನ ಶ್ರೀನಗರದ ಲಾಲ್‌ಚೌಕ್‌ನಲ್ಲಿ ಹಾರಿಸಲಾಗಿದ್ದ ಭಾರತ ಧ್ವಜವನ್ನು ಕೆಲವೇ ಕ್ಷಣದಲ್ಲಿ ಇಳಿಸಿ, ಪಾಕಿಸ್ಥಾನ ಧ್ವಜ ಹಾರಿಸಿದರು. ಪಾಕಿಸ್ಥಾನಕ್ಕೆ ಜಯಕಾರ ಕೂಗಿದರು. ಭಾರತದ ಸೈನ್ಯ ಜಮ್ಮು-ಕಾಶ್ಮೀರ ಹೆದ್ದಾರಿಯನ್ನು ಸಂಚಾರಕ್ಕೆ ಮುಕ್ತವಾಗಿರಿಸಿತ್ತು. ಸರಕಾರಿ ಅಧಿಕೃತ ದಾಖಲೆಗಳ ಪ್ರಕಾರ ಆಗಸ್ಟ್ ತಿಂಗಳ ೧ ರಿಂದ ೧೦ನೇ ತಾರೀಕಿನವರೆಗೆ ೩,೦೭೨ ಲಾರಿಗಳು ಔಷಧಿ ಸೇರಿದಂತೆ ಅಗತ್ಯ ವಸ್ತುಗಳನ್ನು ಶ್ರೀನಗರಕ್ಕೆ ತಲುಪಿಸಿವೆ. ೨,೧೪೨ ಲಾರಿಗಳು ಕಾಶ್ಮೀರದಿಂದ ಹಣ್ಣು ತುಂಬಿಕೊಂಡು ಲಖನಪುರ ದಾಟಿ ದೇಶದ ಇತರ ಭಾಗಗಳಿಗೆ ಪ್ರಯಾಣ ಬೆಳೆಸಿವೆ. ಜುಲೈ ತಿಂಗಳಲ್ಲಿ ೨೫,೬೫೩ ಲಾರಿಗಳು ಈ ರಾಜ್ಯ ಪ್ರವೇಶಿಸಿ, ೧೫,೪೦೧ ಲಾರಿಗಳು ಹೊರಹೋಗಿವೆ. ಹೀಗಿದ್ದೂ ತಮ್ಮ ಬೆಳೆಗಳನ್ನು ಪಾಕಿಸ್ಥಾನದ ಮುಜಫಾರಾಬಾದಿಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತೇವೆ ಎಂದು ಹೆದರಿಸಿದರು.

ಪ್ರತ್ಯೇಕತಾವಾದಿಗಳ ನಾಯಕ ಸಯ್ಯದ್ ಅಲಿ ಗೀಲಾನಿ ಸಾರ್ವಜನಿಕವಾಗಿ `ಪಾಕಿಸ್ತಾನ ಸೇರಬಯಸುತ್ತೇವೆ. ಕಾಶ್ಮೀರಿಗಳೆಲ್ಲ ಪಾಕಿಸ್ತಾನಿಗಳು' ಎಂದ. ಕಾಫಿರರೇ ಕಾಶ್ಮೀರ ಬಿಟ್ಟು ತೊಲಗಿ ಎಂದು ಘೋಷಣೆ ಮೊಳಗಿತು. ನಮ್ಮ ತೆರಿಗೆ ದುಡ್ಡಿನಲ್ಲಿ ಇಷ್ಟು ವರ್ಷ ಸಕಲ ಸವಲತ್ತು ನೀಡಿ ಸಾಕಿದ್ದಕ್ಕೆ ಈಗ ದಕ್ಕಿದ್ದು `ಕಾಫಿರರು' ಎಂಬ ಬಿರುದು!

ನಮ್ಮ ಕೇಂದ್ರ ಸರಕಾರ ಮಾತ್ರ ಇನ್ನೂ `ಪಾಪ ಕಾಶ್ಮೀರಿ ಮುಸ್ಲಿಮರಿಗೆ ಬೇಸರವಾಗುತ್ತದೆ. ಹಾಗಾದರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮುಸ್ಲಿಮರ ಮತಗಳು ಸಿಗದೇ ಹೋಗುತ್ತದೆ' ಎಂದು ಮಾತಾಡದೆ ಸುಮ್ಮನೆ ಕುಳಿತಿತು.`ಪಾಕಿಸ್ತಾನದ ಮುಜಫರಾಬಾದಿಗೆ ಹೋಗುವವರು ಹೋಗಬಹುದು. ಆದರೆ ಮರಳಿ ಬರುವಂತಿಲ್ಲ. ಅವರು ಅಲ್ಲೇ ಉಳಿಯಲಿ' ಎಂದು ಹೇಳುವ, `ಪಾಕಿಸ್ತಾನ ಧ್ವಜ ಹಾರಿಸಿದವನಿಗೆ ಗುಂಡಿಕ್ಕಲು ಹಿಂಜರಿಯುವುದಿಲ್ಲ' ಎಂದಬ್ಬರಿಸುವ ಒಬ್ಬ ಗಂಡು ಕೇಂದ್ರ ಸರಕಾರದಲ್ಲಿ ಕಾಣಲಿಲ್ಲ.

ಹಾಗೇನಾದರೂ ಹೇಳಿದ್ದಲ್ಲಿ ಮುಜಫರಾಬಾದಿಗೆ ಹೊರಟವರ ಬಾಯಿ ಕಟ್ಟಿಹೋಗುತ್ತಿತ್ತು. ರಾಲಿ ಸದ್ದಿಲ್ಲದೆ ನಿಂತುಹೋಗುತ್ತಿತ್ತು. ಅಷ್ಟರ ಹೊರತಾಗಿಯೂ ಅವರು ಹೋಗಿದ್ದರೆ ದೇಶಕ್ಕೆ ನಷ್ಟವೇನೂ ಆಗುತ್ತಿರಲಿಲ್ಲ ಬಿಡಿ.

ಪ್ರತ್ಯೇಕತೆಯ ಕೂಗು ಭಾರತಕ್ಕೆ ಹೊಸದಲ್ಲ. ನಾಗಾಲ್ಯಾಂಡ್, ಆಸ್ಸಾಂ, ಮಿಜೋರಾಂ, ತಮಿಳುನಾಡು, ಪಂಜಾಬ ಕೂಡ ಪ್ರತ್ಯೇಕವಾಗಬಯಸಿದ್ದವು. ಆದರೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಅವಕ್ಕೆಲ್ಲ ಒಂದು ಪರಿಹಾರ ಕಂಡುಕೊಂಡಿದೆ. ಆ ಮೂಲಕ ಏಕಾಗ್ರತೆ ಉಳಿಸಿಕೊಂಡು, ಅವರನ್ನೂ ದೇಶದೊಳಗೊಂದಾಗಿಸಿದೆ. ಕ್ರೂರ, ಅತಿಕ್ರೂರವಾಗಿ ಶಕ್ತಿಯ ಬಳಕೆ, ಪ್ರತ್ಯೇಕತಾವಾದಿ ನಾಯಕರನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿದ್ದು ಹಾಗೂ ಉದಾರ ಅನುದಾನ ಹೀಗೆ ೩ ವಿಧಾನಗಳ ಮೂಲಕ ಪ್ರತ್ಯೇಕತೆಯ ಸದ್ದಡಗಿಸಲಾಗಿದೆ. ಇದರ ಪರಿಣಾಮ ನಾಗಾಗಳು ಕೂಡ ಈಗ ರಾಜ್ಯದ ಗಡಿ ವ್ಯತ್ಯಾಸಕ್ಕೆ ಹೋರಾಟ ಸೀಮಿಗೊಳಿಸಿದ್ದಾರೆ. ತಮಿಳುನಾಡಿನ ಹಿಂದಿ ವಿರುದ್ಧದ ಪ್ರತಿಭಟನೆ ಈಗ ಮಸುಕು ನೆನಪು ಮಾತ್ರ.

ಆದರೆ ಕಾಶ್ಮೀರ? ಊಹುಂ. ಕೇಂದ್ರ ಉದಾರವಾಗಿ ಹಣ ನೀಡಿದೆ. ವಾರ್ಷಿಕ ಅನುದಾನದ ಜತೆಗೆ ೨೦೦೪ರಲ್ಲಿ ೫೦,೦೦೦ ಕೋಟಿ ವಿಶೇಷ ಅನುದಾನ ನೀಡಿದೆ. ವಿಶೇಷ ಸ್ಥಾನಮಾನ ಮೊದಲಿಂದಲೂ ಇದೆ. ಎಲ್ಲವನ್ನೂ ಪಡೆದು ಅನುಭವಿಸುತ್ತಲೇ ಕಾಶ್ಮೀರಿಗಳು ರಾಜಕೀಯ ಸ್ವಾತಂತ್ರ್ಯ ಇಲ್ಲ ಎಂದರು. ಅದನ್ನೂ ಕೊಡಲಾಯಿತು. ೨೦೦೪ರಲ್ಲಿ ವಿಶ್ವವೆ ಮೆಚ್ಚುಗೆ ವ್ಯಕ್ತಪಡಿಸುವಂತೆ ಚುನಾವಣೆಯೂ ನಡೆಯಿತು. ಇದಕ್ಕಿಂತ ಹೆಚ್ಚಿನದೇನನ್ನು ಕೊಡಲು ಸಾಧ್ಯ? ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಇದೆಲ್ಲ ದಕ್ಕಿದೆಯೇನು?ಆದರೂ ಕಾಶ್ಮೀರಿಗಳಿಗೆ ಸಮಾದಾನವಿಲ್ಲ. ಅಮರನಾಥ ದೇವಸ್ಥಾನ ಮಂಡಳಿಗೆ ಭೂಮಿ ಕೊಟ್ಟಿದ್ದನ್ನೆ (ಪುಕ್ಕಟೆ ಕೊಟ್ಟಿದ್ದೂ ಅಲ್ಲ) ನೆಪಮಾಡಿ ದೊಡ್ಡ ಗಲಾಟೆ ಎಬ್ಬಿಸಿದರು. ಅವರ ೨ ದಿನದ ಪ್ರತಿಭಟನೆಗೆ ಹೆದರಿದ ಸರಕಾರ ಭೂಮಿ ಹಿಂಪಡೆಯಿತು. ಅಲ್ಲಿಗೆ ಕಾಶ್ಮೀರಿಗಳ ಪ್ರತಿಭಟನೆ ನಿಲ್ಲಬೇಕಿತ್ತು. ಹಾಗಾಗಲಿಲ್ಲ. ಈಗ ಅಮರನಾಥ ಭೂ ವಿವಾದ ಕಾಶ್ಮೀರಿಗರ ಬೇಡಿಕೆಯಾಗಿ ಉಳಿದಿಲ್ಲ. ಅವರದ್ದು ಮತ್ತದೇ ಪ್ರತ್ಯೇಕತೆಯ ಕೂಗು.

ಕಾಶ್ಮೀರ ಭಾರತದ ತಲೆ ಇದ್ದಂತೆ ಎಂದು ಅದ್ಯಾವ ಮಹಾನುಭಾವರು ಹೇಳಿದರೋ? ಕಾಶ್ಮೀರ ಸದಾ ದೇಶಕ್ಕೆ ತಲೆನೋವಾಗೇ ಉಳಿದಿದೆ. ಇನ್ನೂ ಎಷ್ಟು ದಿನ ಅದನ್ನು ಸಹಿಸಿಕೊಳ್ಳುವುದು? ಇನ್ನೆಷ್ಟು ವರ್ಷ ವಿಶೇಷ ರಾಜ್ಯದ ಕಿರೀಟ ತೊಡಿಸುವುದು? ಅಥವಾ ದೇಶವಿರುವಷ್ಟು ಕಾಲವೂ ಕಾಶ್ಮೀರ ವಿಶೇಷ ರಾಜ್ಯವಾಗೇ ಉಳಿಯಬೇಕೇ?

ವಿಶೇಷ ರಾಜ್ಯ ಎಂಬ ನೆಪದಲ್ಲಿ ಕಾಶ್ಮೀರಕ್ಕೆ ಸಿಗುವ ಸವಲತ್ತುಗಳನ್ನು ನೋಡಿದರೆ ಎಲ್ಲ ರಾಜ್ಯಗಳು `ನಮ್ಮನ್ನೂ ವಿಶೇಷ ರಾಜ್ಯ ಎಂದು ಘೋಷಿಸಿ' ಎಂದು ಹೋರಾಟ ಆರಂಭಿಸುವ ಅಪಾಯವಿದೆ. ಭಾರತದೊಂದಿಗೆ ಸೇರಿದ ೬೧ ವರ್ಷಗಳ ನಂತರವೂ ಕಾಶ್ಮೀರದ ಜನ ಭಾರತದೊಂದಿಗೆ ಮಾನಸಿಕವಾಗಿ ಬೆರೆತೇ ಇಲ್ಲ. (ಭಾರತದ ಪರವಾಗಿದ್ದ ಪಂಡಿತರನ್ನೆಲ್ಲ ಅಲ್ಲಿಂದ ಓಡಿಸಲಾಗಿದೆ ಬಿಡಿ) ಅದೆಲ್ಲಕ್ಕಿಂತ ಹೆಚ್ಚಾಗಿ ಅವರು ಪ್ರತ್ಯೇಕತೆಯ ಅಸ್ತ್ರವನ್ನು ದೇಶವನ್ನು ಹೆದರಿಸಲೆಂದೇ ಬಳಸಿಕೊಂಡುಬಂದಿದ್ದಾರೆ.`ಸಣ್ಣ ಮಕ್ಕಳು ಆಟವಾಡುವಾಗ ನೀನು ಹಂಗೆಲ್ಲ ಮಾಡಿದರೆ ನಾನು ಬರಲ್ಲ ಅಂತ ಮುಖ ತಿರುಗಿಸುತ್ತಾರಲ್ಲ, ವಯಸ್ಸಿಗೆ ಬಂದ ಮಗ ಅಪ್ಪನನ್ನು ಮನೆ ಬಿಟ್ಟುಹೋಗುತ್ತೇನೆಂದು ಹೆದರಿಸುತ್ತಾನಲ್ಲ ಹಾಗೆ...

ಕಾಶ್ಮೀರಿಗಳು ಭಾರತದೊಂದಿಗಿದ್ದೇ ಸುಖವಾಗಿದ್ದಾರೆ. ಹಾಗೊಮ್ಮೆ ಅವರು ಸುಖವಾಗಿಲ್ಲವಾಗಿದ್ದರೆ ಹಿಂಸೆಗೆ ಹೆದರಿ ಪಂಡಿತರು ಕಾಶ್ಮೀರ ತೊರೆದಂತೆ ಅವರೂ ಕಾಶ್ಮೀರ ಬಿಟ್ಟು ಹೋಗುತ್ತಿದ್ದರು. ಪಾಕ್ ಆಕ್ರಮಿತ ಕಾಶ್ಮೀರದ ಸ್ಥಿತಿ ನೋಡಿ ಪಾಕಿಸ್ತಾನಕ್ಕೆ ಸೇರಿದರೆ ಏನಾಗುತ್ತದೆ ಎಂಬುದನ್ನು ಅವರು ಅರಿತಿದ್ದಾರೆ. ಹಾಗಾಗಿ ಪಾಕಿಸ್ತಾನ ಸೇರುವುದು ಇಷ್ಟವಿಲ್ಲ. ಸ್ವತಂತ್ರ್ಯ ರಾಷ್ಟ್ರ ಅನ್ನುತ್ತಾರೆ. ಒಂದೊಮ್ಮೆ ಕಾಶ್ಮೀರಕ್ಕೆ ಸ್ವಾತಂತ್ರ್ಯ ಕೊಟ್ಟರೆ ಪಾಕಿಸ್ತಾನ ಅದನ್ನು ಬಿಟ್ಟೀತೇ? ಹಾಗೊಮ್ಮೆ ಬಿಟ್ಟರೂ ಒಂದು ರಾಷ್ಟ್ರವಾಗಿ, ಪ್ರಜೆಗಳು ಸುಖವಾಗಿ ಬದುಕುವ ರಾಷ್ಟ್ರವಾಗಿ ಉಳಿಯಲು ಸಾಧ್ಯವಾದೀತೇ?

ಇದೆಲ್ಲ ಆಗದ ಮಾತು ಎಂಬುದು ಕಾಶ್ಮೀರಿಗಳಿಗೂ ಗೊತ್ತಿದೆ. ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ `ಪ್ರತ್ಯೇಕತೆಯ ಕೂಗು ಕ್ಷೀಣಿಸುತ್ತದೆ. ಸ್ವತಂತ್ರ್ಯ ರಾಷ್ಟ್ರವಾಗಿ ಉಳಿಯುವುದು ಸಾಧ್ಯವಿಲ್ಲ. ಮಾತುಕತೆ, ಹೊಂದಾಣಿಕೆಯಲ್ಲಿ ಮುಕ್ತಾಯವಾಗಲಿದೆ' ಎಂದು ಹೇಳಿರುವುದು ಇದಕ್ಕೆ ಸಾಕ್ಷಿ.

ಆದರೇನು ಮಾಡುವುದು ಅವರಿಗೆ ಹಠ ಮಾಡಿ ರೂಢಿಯಾಗಿದೆ. ಕೆಲವು ಮಕ್ಕಳು ರಚ್ಚೆ ಹಿಡಿಯುತ್ತಾರಲ್ಲ ಹಾಗೆ. ಆಗಾಗ ನಾವು ಪಾಕಿಸ್ತಾನಕ್ಕೆ ಸೇರುತ್ತೇವೆ ಅನ್ನುವುದು. ಸ್ವಾತಂತ್ರ್ಯ ಕೊಡಿ ಅನ್ನುವುದು. ಅದಕ್ಕೆ ಹೆದರಿ ದಿಲ್ಲಿ ದೊರೆಗಳು ಕೊಡುವ ವಿಶೇಷ ಕೊಡುಗೆ ಸ್ವೀಕರಿಸಿ ಸುಮ್ಮನಾಗುವುದು. ಅವರಿಗೆ ಹಠ ಮಾಡುವ ಚಟ, ಇವರಿಗೆ ಸಮಾದಾನ ಮಾಡುವ ಸಂಭ್ರಮ!

ಸಾಕು, ಇಷ್ಟು ವರ್ಷ ಅವರನ್ನು ವಿಶೇಷವಾಗಿ ಸಲಹಿದ್ದು ಸಾಕು. ಸ್ವಾತಂತ್ರ್ಯ ಬಂದಾಗ, ಅದ್ಯಾವುದೋ ಅನಿವಾರ್ಯ ಸ್ಥಿತಿಯಲ್ಲಿ ಭಾರತಕ್ಕೆ ಸೇರಿದಾಗ ಇದ್ದ ಜನಾಂಗ ಈಗಿಲ್ಲ. ಈಗ ಕಾಶ್ಮೀರದಲ್ಲಿರುವುದು ಹೊಸ ಜನಾಂಗ. ಚಾನಲ್‌ಗಳಲ್ಲಿ ನೋಡಿದರೆ ೧೫-೪೦ ವರ್ಷದವರೇ ಪ್ರತಿಭಟನೆಗಳಲ್ಲಿ ಕಾಣಸಿಗುತ್ತಾರೆ. ಅಂದರೆ ಅವರು ಹುಟ್ಟಾ ಭಾರತೀಯರು. ಭಾರತಕ್ಕೆ ಕಾಶ್ಮೀರ ಸೇರುವಾಗ ಇದ್ದ ಜನರಿಗೆ ವಿಶೇಷ ಸೌಲಭ್ಯಗಳನ್ನು ಕೊಡುವುದು ನ್ಯಾಯಯುತ. ಒಪ್ಪಿಕೊಳ್ಳೋಣ. ಈಗಿನವರಿಗೂ ಅದನ್ನು ನೀಡುವ ಅಗತ್ಯ ಖಂಡಿತ ಇಲ್ಲ.

ಕಾಶ್ಮೀರ ವಿಶೇಷ ರಾಜ್ಯವಾಗಿ ಮೆರಿದಿದ್ದು ಸಾಕು. ಅದನ್ನೂ ದೇಶದ ಇತರ ರಾಜ್ಯಗಳಂತೆ ಪರಿಗಣಿಸುವತಾಗಲಿ. ಅವರೂ ನಮ್ಮ ಹಾಗೆ ಹೊಂಡದಿಂದ ಕೂಡಿದ, ರಸಗೊಬ್ಬರ ಸಿಗದ, ನಮ್ಮ ರಾಜ್ಯಗಳಷ್ಟೇ ಅನುದಾನ ಪಡೆಯುವ, ದಕ್ಕಬೇಕಾದ್ದನ್ನೂ ಹೋರಾಟ ಮಾಡಿಯೇ ದಕ್ಕಿಸಿಕೊಳ್ಳಬೇಕಾದ ಸ್ಥಿತಿ ಅನುಭವಿಸಲಿ. ಆಗ ಅವರ ಹಠ ಕಡಿಮೆಯಾದೀತು.

ಬಗ್ಗಿದವನ ಬೆನ್ನಿಗೊಂದು ಗುದ್ದು ಎಂದು ಹಳೇ ಮಾತಿದೆ. ಹಾಗೆ ದಿಲ್ಲಿಯಲ್ಲಿನ ಕೇಂದ್ರ ಸರಕಾರಗಳು ಕಾಶ್ಮೀರಿಗಳ ಎದುರು ಬಗ್ಗಿದ್ದಷ್ಟೇ ಅಲ್ಲ ಕುಕ್ಕುರುಗಾಲಿನಲ್ಲಿ ಕುಳಿತಿದೆ. ಅದಕ್ಕೇ ಅವರು ಆಗಾಗ ಗುದ್ದುತ್ತಿರುತ್ತಾರೆ. ಕೇಂದ್ರ ಸರಕಾರ ಸೆಟೆದು ನಿಂತುಕೊಳ್ಳಲಿ. ದೇಶದ ಮುಸ್ಲಿಮರಿಗೆಲ್ಲಿ ಬೇಸರವಾಗುತ್ತದೋ ಎಂದು ಅಂಜುವ ಅಗ್ಯವಿಲ್ಲ. ಯಾಕೆಂದರೆ ಕಾಶ್ಮೀರಿ ಮುಸ್ಲಿಮರ ಬಗ್ಗೆ ದೇಶದ ಇತರೆಡೆಯ ಮುಸ್ಲಿಮರೇನು ವಿಶೇಷ ಒಲವು ಹೊಂದಿಲ್ಲ. ಇದು ಮೊದಲು ಮತ್ತು ಈಗ ಸಾಬೀತಾಗಿದೆ. ಹಾಗಾಗಿ ಕೇಂದ್ರ ಸರಕಾರ ಧೈರ್ಯದಿಂದ ಈ ನಿರ್ಧಾರ ತೆಗೆದುಕೊಳ್ಳಬಹುದು.

ಇಷ್ಟೆಲ್ಲ ಆದ ನಂತರವೂ ಕಾಶ್ಮೀರಕ್ಕೆ ವಿಶೇಷ ಸ್ಥಾನ-ಮಾನ ಮುಂದುವರಿಸಿದರೆ, ವಿಶೇಷ ಸ್ಥಾನಮಾನದ ಆಸೆಗಾಗಿ ಪ್ರತ್ಯೇಕತೆಯ ಪೀಪಿ ಮೊಳಗಿಸುವಂತೆ ಇತರೆ ರಾಜ್ಯಗಳಿಗೆ ನಾವೇ ಪ್ರೋತ್ಸಾಹ ನೀಡಿದಂತಾಗುತ್ತದೆ.

Tuesday, October 14, 2008

ನನಗೆ ಅಂಥ ಪಿಚ್ಚರುಗಳೇ ಯಾಕೆ ಇಷ್ಟವಾಗುತ್ತವೆ?


ಅಬ್‌ತಕ್ ಚಪ್ಪನ್, ರಿಸ್ಕ್, ಶೂಟ್‌ಔಟ್ ಎಟ್ ಲೋಖಂಡ್ವಾಲಾ, ಎ ವೆನ್ಸಡೆ, ಗಂಗಾಜಲ್...

ಓಹ್! ಗಂಗಾಜಲ್, ಅಬ್ತಕ್ ಚಪ್ಪನ್ ಪಿಚ್ಚರ್ಗಳನ್ನು ಹಲವು ಬಾರಿ ನೋಡಿದ್ದೇನೆ. ನೀವು ಇನ್ನೊಮ್ಮೆ ತೋರಿಸಿದರೂ ಮೊದಲ ಸಾರಿ ನೋಡಿದಾಗಿನಿಗಿಂತ ಹೆಚ್ಚು ಆಸಕ್ತಿಯಿಂದ ನೋಡುತ್ತೇನೆ. ನನಗೆ ಇಷ್ಟವಾಗೋ ಪಿಚ್ಚರ್(ಸಿನಿಮಾ)ಗಳ ಲೀಸ್ಟು ನೋಡಿದರೆ ಎಲ್ಲವೂ ಒಂದೇ ಥರದವು. ಅವುಗಳ ಕತೆ, ಅಲ್ಲಿನ ತಿರುವುಗಳಲ್ಲಿ ವ್ಯತ್ಯಾಸ ಇದೆಯಾದರೂ ಹೆಚ್ಚಿನವೆಲ್ಲ ಪೊಲೀಸರಿಗೆ ಸಂಬಂಧಿಸಿದ ಕತೆಗಳು. ಅದರಲ್ಲೂ ನಿಯತ್ತಿನ, ಧಕ್ಷ ಪೊಲೀಸ್ ಅಧಿಕಾರಿಗಳ ಕತೆಗಳು. ಒಳ್ಳೆ ಪೊಲೀಸರ ಕತೆಗಳು!

ಒಂದು ಕಾಲದಲ್ಲಿ ಪೊಲೀಸರು ಅಂದರೆ ಕೆಟ್ಟವರು. ಎಲ್ಲ ಮುಗಿದ ಮೇಲೆ ಬರುವವರು. ಲಂಚ ತಿನ್ನುವವರು. ಖಾಕಿ ಧಾರಿ ಗೂಂಡಾಗಳು ಎಂದು ಬಿಂಬಿಸುವ ಪಿಚ್ಚುಗಳೇ ಬರುತ್ತಿದ್ದವು. ಅವುಗಳನ್ನೂ ನೋಡಿದ್ದೇನೆ. ಈಗಿನ ಪೊಲೀಸ್ ಪರ ಪಿಚ್ಚರ್ ಗಳನ್ನೂ ನೋಡುತ್ತಿದ್ದೇನೆ.

ಚಿಕ್ಕನಿರುವಾಗ ನನ್ನ ಫೇವರಿಟ್ ಹೀರೊ ದೇವರಾಜ್! ಯಾಕೆಂದರೆ ಆತ ದಕ್ಷ ಪೊಲೀಸ್ ಅಧಿಕಾರಿಗಳ ಪಾತ್ರ ಮಾಡುತ್ತಿದ್ದ. ಒರಿಜಿನಲ್ ಸಾಂಗ್ಲಿಯಾನಾ ಇಷ್ಟವಾಗದಿದ್ದರೂ ಶಂಕರ್‌ನಾಗ್‌ನ ಎಸ್ಪಿ ಸಾಂಗ್ಲಿಯಾನಾ ಪಿಚ್ಚರ್ ಇಷ್ಟವಾಗಿತ್ತು! ನಂತರ ಸಾಯಿಕುಮಾರ್ ಬಂದ. ಪೊಲೀಸ್‌ಸ್ಟೋರಿ ಮೂಲಕ ಇಷ್ಟವಾದ.

ಈಗಲ್ಲ. ಚಿಕ್ಕವನಿರುವಾಗಿನಿಂದಲೂ ನನಗೆ ಪೊಲೀಸರ ಕತೆಯ ಪಿಚ್ಚರ್‌ಗಳೆಂದರೆ ಇಷ್ಟ. ಕೊಂಚ ಮಟ್ಟಿಗೆ ಭೂಗತಲೋಕದ ಕತೆಗಳು ಕೂಡ! ಸೈನಿಕರ ಕತೆಗಳು ಇಷ್ಟವಾಗುತ್ತವಾದರೂ ಪೊಲೀಸರ ಕತೆಗಳಷ್ಟು ಅವು ನನ್ನನ್ನು ಸೆಳೆಯಲಿಲ್ಲ. ಮನಸಲ್ಲಿ ನಿಲ್ಲಲಿಲ್ಲ.

ಯಾಕೆ?

ನಾನಗೆ ಪೊಲೀಸ್ ಆಗಬೇಕೆಂಬ ಆಸೆ ಇದ್ದದ್ದಕ್ಕಾ? ಆ ಮೂಲಕ ಸಮಾಜಕ್ಕೆ ಒಂದಷ್ಟಾದರೂ ಒಳ್ಳೆಯದು ಮಾಡಬೇಕು ಅಂದುಕೊಂಡಿದ್ದಕ್ಕಾ? ಸೈನಿಕನಾಗಿ ಹೊರಗಿನ ಶತ್ರುಗಳ ವಿರುದ್ಧ ಹೋರಾಡುವುದಕ್ಕಿಂತ ಪೊಲೀಸ್ ಅಧಿಕಾರಿಯಾಗಿ ದೇಶದೊಳಗಿನ ಶತ್ರುಗಳ ವಿರುದ್ಧ ಹೋರಾಡುವ ಮನಸ್ಸಿದ್ದಿದ್ದಕ್ಕಾ? ಅಥವಾ ಇಂಥ ಪಿಚ್ಚರ್ ನೋಡಿಯೇ ನಾನೂ ಒಬ್ಬ ದಕ್ಷ ಪೊಲೀಸ್ ಅಧಿಕಾರಿ ಆಗಬೇಕು ಅನ್ನಿಸಿತಾ?

ಇವತ್ತಿಗೂ ನನಗೆ ಈ ಪ್ರಶ್ನೆಗಳಿಗೆ ಸರಿಯಾದ ಉತ್ತರ ಸಿಕ್ಕಿಲ್ಲ. ಆದರೂ ನಾನು ಒಬ್ಬ ಒಳ್ಳೆ ಪೊಲೀಸ್ ಅಧಿಕಾರಿಯಾಗಬೇಕು ಅದುಕೊಂಡಿದ್ದು ಸತ್ಯ. ಹಲವು ಕಾರಣಗಳು. ಅದಾಗಲಿಲ್ಲ. ಬದಲಾಗಿ ಪತ್ರಕರ್ತನಾದೆ. ಈ ಮೂಲಕವೂ ಸಮಾಜಕ್ಕೆ ಸೇವೆ ಸಲ್ಲಿಸಬಹುದಲ್ಲ ಎಂಬ ಸಮಾದಾನ. ಅಷ್ಟೇ ಅಲ್ಲ ಕ್ರೈಂ ವರದಿಗಾರನೂ ಆದೆ. ಆ ಮೂಲಕ ಮತ್ತೆ ನನಗಿಷ್ಟವಾದ ಪೊಲೀಸ್ ಇಲಾಖೆ ಸಂಪರ್ಕ ಪಡೆದೆ.

ಒಳ್ಳೆ ಅಧಿಕಾರಿಗಳ ಪರಿಚಯವಾಯಿತು. ಹೆಸರು ಬರೆಯುತ್ತ ಹೋದರೆ ಸಾಕಷ್ಟಿದೆ. ಹಾಗೆ ಬರೆದರೂ ಅವರಿಗೂ ಹಾನಿ! ಅಂತೂ ಒಳ್ಳೆ ಅಧಿಕಾರಿಗಳ ಪರಿಚಯವೇ ಆಯಿತು. ಯಾರಿಗೂ ಗೊತ್ತಾಗದ ಅದೆಷ್ಟೋ ಸಂಗತಿಗಳು ಕಿವಿಗೆ ಬೀಳತೊಡಗಿದವು. ಕಿವಿಗೆ ಬಿದ್ದಿದ್ದು ಕಣ್ಣಿಗೂ ಕಂಡವು. ಏನೇ ಹೇಳಿ ನನಗಂತೂ ಸಾಕಷ್ಟು ಒಳ್ಳೆ ಅಧಿಕಾರಿಗಳೇ ಕಂಡರು. ಅಥವಾ ನನ್ನ ಮನಸ್ಸಲ್ಲಿ ಒಳ್ಳೆಯದೇ ಇದ್ದಿದ್ದಕ್ಕೆ ಅವರಲ್ಲಿದ್ದ ಒಳ್ಳೆಯದನ್ನಷ್ಟೇ ಕಂಡೆನೊ? ಕೆಲವು ವಿಷಯದಲ್ಲಿ ಪತ್ರಕರ್ತನಾಗಿ ಅವರಿಗೆ ಸಹಾಯವನ್ನೂ ಮಾಡಿದೆ. ಆ ಮೂಲಕ ಸಮಾಜಕ್ಕೂ ಅಂತ ಅಂದುಕೊಂಡೆ. ಈಗಲೂ ಅವರೊಂದಿಗೆ ಗೆಳತನ ನನಗಿಷ್ಟ.

ಇಂದಿಗೂ ಅದೆಷ್ಟೋ ಒಳ್ಳೆ ಅಧಿಕಾರಿಗಳಿದ್ದಾರೆ. ಅವರನ್ನೆಲ್ಲ ಅರ್ಧ ಹಾಳು ಮಾಡುತ್ತಿರುವವರು ನಮ್ಮ ರಾಜಕಾರಣಿಗಳು. ಅವರ ಲಾಭಕ್ಕೆ ಪೊಲೀಸರು ದಾಳಗಳು. ಸಾರ್ವಜನಿಕರು ನಡೆಸುವ ಕಾಯಿಗಳು. ಕಾನೂನು ಮುರಿಯುವವನಿಗೆ ಯಾವುದೂ ಇಲ್ಲ. ಅದೇ ಕಾನೂನು ಪಾಲಕರು ಸಮಾಜದ ಒಳ್ಳೆಯದಕ್ಕೆ ಎನ್‌ಕೌಂಟರ್ ನಡೆಸಿದರೆ ಮಾನವ ಹಕ್ಕು ನಾಶವಾದ ಬಗ್ಗೆ ಬೊಬ್ಬೆ ಹೊಡೆಯಲಾಗುತ್ತದೆ! ಕಾನೂನು ಪಾಲಿಸದೆ ಸಮಾಜಕ್ಕೆ ಕೆಡುಕುಂಟು ಮಾಡುವವನ ನಾಶಕ್ಕೆ ಕಾನೂನು ಪಾಲಕರು ಕೊಂಚ ಕಾನೂನು ಬಿಟ್ಟು ಹೋದರೆ ತಪ್ಪೇನು?

ನಿಮಗೆ ನೆನಪಿರಬಹುದು, ಶೂಟೌಟ್ ಎಟ್ ಲೋಖಂಡ್ವಾಲಾದಲ್ಲಿ ಪ್ರಕರಣದ ತನಿಖೆ ನಡೆಸುವ ನ್ಯಾಯಾಧೀಶರ ಬಳಿ ಅಮಿತಾಬ್ ಕೊನೆಯಲ್ಲೊಂದು ಪ್ರಶ್ನೆ ಕೇಳುತ್ತಾನೆ... ನೀವು ನ್ಯಾಯಾಲಯದಲ್ಲಿದ್ದೀರಿ. ಹೆಂಡತಿ- ಮಕ್ಕಳು ಮನೆಯಲ್ಲಿದ್ದಾರೆ. ಒಬ್ಬ ವ್ಯಕ್ತಿ ನಿಮ್ಮ ಮನೆಯ ಹೊರಗೆ ಪಿಸ್ತೂಲ್ ಹಿಡಿದು ನಿಂತಿದ್ದಾನೆ. ಆತ ಪೊಲೀಸ್ ಆಗಿರಲಿ ಎಂದು ಬಯಸುತ್ತೀರೊ? ಗೂಂಡಾ ಆಗಿರಲಿ ಎಂದು ಬಯಸುತ್ತೀರೊ?

ಸಹಜ. ಆತ ಪೊಲೀಸ್ ಆಗಿರಲಿ ಎಂದೇ ಬಯಸುತ್ತೇವೆ. ಎಲ್ಲದಕ್ಕೂ ಉತ್ತರ ಅಲ್ಲಿಯೇ ಇದೆ. ಎಷ್ಟೇ ಕೆಟ್ಟವರಿರಲಿ, ಪೊಲೀಸರಿಗೆ ಕಾನೂನಿನ ತಡೆಯಿರುತ್ತದೆ. ಆತನನ್ನು ನಿಯಂತ್ರಿಸುವುದು ಕಷ್ಟವಲ್ಲ. ಆದರೆ ಕಾನೂನೇ ಇಲ್ಲದ ಗೂಂಡಾಗಳು ಹಾಗಲ್ಲ. ದುರತವೆಂದರೆ ಅಂಥವರು ಈಗ ಖಾದಿ ಧರಿಸಿ, ನಮ್ಮನ್ನೇ ಆಳುವಂತಾಗಿದ್ದಾರೆ!

ಅದೇನು ನಾನು ಬೆಳೆದ ವಾತಾವರಣವೋ? ನನ್ನಪ್ಪ-ಅಮ್ಮ ನೀಡಿದ ಸಂಸ್ಕಾರವೋ? ಅಥವಾ ಅವರೇ ಸ್ವತಃ ನಿಯತ್ತಿನಿಂದ, ಭಾರತದ ಉತ್ತಮ ಪ್ರಜೆಗಳಾಗಿರುವುದೋ? ನನ್ನ ಮನಸ್ಸಿನಲ್ಲಿ ಚಿಕ್ಕಂದಿನಿಂದಲೂ ಲಂಚ, ಅನ್ಯಾಯ ವಿರೋಧಿ ಮನಸ್ಸು ರೂಪುಗೊಂಡುಬಿಟ್ಟಿದೆ. ಇವತ್ತಿಗೂ ಅನ್ಯಾಯ, ಲಂಚ ಕಂಡರೆ ಅದು ಸಹಿಸದು. ಎಲ್ಲ ಕಡೆ ಲಂಚ ಇದೆ ಅಂತ ಅನ್ನಿಸಿದರೂ ನಾನು ಇವತ್ತಿನವರೆಗೆ ಯಾರಿಗೂ ಲಂಚಕೊಟ್ಟಿಲ್ಲ. ಪತ್ರಕರ್ತನಾಗಿಯೂ, ದೊಡ್ಡ ಪೊಲೀಸ್ ಅಧಿಕಾರಿಗಳ ಪರಿಚಯವಿದ್ದೂ ಪೊಲೀಸರಿಗೆ ದಂಡ ಕಟ್ಟಿದ್ದೇನೆ. ಲಂಚಕೊಟ್ಟಿಲ್ಲ. ಇವತ್ತಿಗೂ ನನಗೆ ಲಂಚಕೋರರನ್ನು, ಕೊಳಕು ರಾಜಕಾರಣಿಗಳನ್ನು ಕಂಡರೆ ಎಲ್ಲಿಲ್ಲದ ದ್ವೇಷ. ಅಂಥವರ ವಿರುದ್ಧ ಬರೆಯಲು ಸಿಕ್ಕ ಒಂದು ಅವಕಾಶವನ್ನೂ ನಾನು ಇವತ್ತಿನವರೆಗೆ ಸುಮ್ಮನೆ ಬಿಟ್ಟಿಲ್ಲ. ನನಗೆ ಅವರ ಮೇಲೆ ಸೇಡು ತೀರಿಸಿಕೊಳ್ಳು ಕಾನೂನು ಬದ್ಧವಾಗಿರುವ ಮಾರ್ಗ ಅದು.

ಎಲ್ಲರೂ ಕಳ್ಳರು. ಲಂಚ ಎಲ್ಲೆಲ್ಲೂ ಆವರಿಸಿದೆ ಅಂತ ಎಷ್ಟೇ ಅಂದರೂ ನನಗೆ ಈಗಲೂ ನಂಬಿಕೆಯಿದೆ. ಅದೇನೆಂದರೆ ಇವತ್ತಿಗೂ ನಿಯತ್ತಿನ ಜನ ಇದ್ದಾರೆ. ಧಕ್ಷ ಅಧಿಕಾರಿಗಳಿದ್ದಾರೆ. ರಾಜಕಾರಣಿಗಳೂ! ಸಂಖ್ಯೆ ಕಡಿಮೆ ಇರಬಹುದು. ಹೆಚ್ಚಿದ್ದರೂ ನಮಗೆ ಕಡಿಮೆ ಅನ್ನಿಸಬಹುದು. ಅವರಿಗೆ ಕೆಟ್ಟವರು ಕಿರಿಕಿರಿ ನೀಡಬಹುದು. ಅದೇನಾದರೂ ಇರಲಿ. ನಾವು ನಮ್ಮಷ್ಟಕ್ಕೆ ನಿಯತ್ತಿನಿಂದ ಇರಬೇಕು. ಇಲ್ಲಿದ್ದುಕೊಂಡೇ ಕೈಲಾದಷ್ಟು ಬದಲಾವಣೆ ಮಾಡಬಹುದು ಅಥವಾ ನಿಯತ್ತು ಇನ್ನಷ್ಟು ಕೆಡದಂತೆ, ಭಷ್ಟತೆ ಹರಡದಂತೆ ತಡೆಯಬಹುದು.

ನಾವು ಮಾಡಬೇಕಾದ್ದಿಷ್ಟೆ, ನಾವು ನಿಯತ್ತಿನಿಂದಿರಬೇಕು. ಲಂಚ ಕೊಡಬಾರದು. ನಮ್ಮ ಮಕ್ಕಳೂ ನಿಯತ್ತಾಗಿ ಭಾರತದ ಉತ್ತಮ ಪ್ರಜೆಯಾಗುವಂತೆ ನೋಡಿಕೊಳ್ಳಬೇಕು. ಅಷ್ಟು ಸಾಕು. ಅದೇ ನಾವು ದೇಶಕ್ಕೆ ಕೊಡಬಹುದಾದ ಕೊಡುಗೆ. ಅದಕ್ಕಾಗಿ ನಮಗೆ ಯಾರೂ ಭಾರತ ರತ್ನ ಪ್ರಶಸ್ತಿ ನೀಡಬೇಕಿಲ್ಲ. ಯಾರೂ ನಮ್ಮನ್ನು ಗುರುತಿಸಬೇಕಾಗಿಯೂ ಇಲ್ಲ.

(ವಿ.ಸೂ: ಇವತ್ತು (೧೪-೧೦-೦೮) ರಾತ್ರಿ ಯುಟಿವಿಯಲ್ಲಿ ರಿಸ್ಕ್ ಸಿನಿಮಾ ನೋಡ್ತಾ ಇದ್ದೆ. ನನಗೆ ಪೊಲೀಸ್ ಸಿನಿಮಾಗಳು ಇಷ್ಟವಾಗುವ ಬಗ್ಗೆ ಯಾಕೊಂದು ಚಿಕ್ಕ ಬರಹ ಬ್ಲಾಗಿಸಬಾರದು ಅನ್ನಿಸಿತು. ಪಿಚ್ಚರ್‌ನೋಡುತ್ತ, ಜಾಹೀರಾತು ಬಂದಾಗ ಬರೆಯುತ್ತ ಹೋದೆ. ಪಿಚ್ಚರ್ ಬಗ್ಗೆ ಬರೆಯಬೇಕು ಅದುಕೊಂಡು ಹೊರಟವ, ಅದು ಎಲ್ಲಿಗೋ ಹೋಯಿತು. ತುಂಬ ಸೀರಿಯಸ್ ಅನ್ನಿಸಿ ಬೋರು ಹೊಡೆಸಿದ್ದರೆ, ಬಯ್ಯಬೇಡಿ. ಬರೆಯುತ್ತ ನನ್ನ ಬಗ್ಗೇ ಹೆಚ್ಚು ಹೊಗಳಿಕೊಂಡಿದ್ದೇನೆ ಅನ್ನಿಸಿದರೆ ಕ್ಷಮಿಸಿ. ನಿಯತ್ತಿನ ಮನುಷ್ಯನಾಗಿ ನನಗಷ್ಟು ನೈತಿಕ ಅಧಿಕಾರ ಇದೆ ಅಂದುಕೊಳ್ಳುತ್ತೇನೆ.)

Monday, October 13, 2008

ಆಹಾ ಮಿಥುನನ ಮದ್ವೆಯಂತೆ!

ನಾನು ಕರ್ನಾಟಕದಲ್ಲೇ ಇದ್ದಿದ್ದರೆ ಇವತ್ತು ಹೋಗಲೇ ಬೇಕಿತ್ತು. ಆದರೆ ದೂರದ ದಿಲ್ಲಿಯಲ್ಲಿದ್ದೇನಲ್ಲಾ. ನನ್ನ ಆತ್ಮೀಯ ಗೆಳೆಯ ಮಿಥುನನ ಮದುವೆ ಇವತ್ತು. ನನ್ನ ಪರವಾಗಿ ನನ್ನ ಹೆಂಡತಿ ಹೋಗಿ ಬಂದಳು. ಆದರೆ ನಾನು ಮಿಸ್!
ಮಿಥುನ್ ಸದಾ ಚಟುವಟಿಕೆಯ ಹುಡುಗ. ಅದಕ್ಕೆ ತಕ್ಕಂತೆ ಗಡಿಬಿಡಿ. ಫೋನು ಮಾಡಿದರೆ ಕಟ್ ಮಾಡುವ ಬಟನ್ ಮೇಲೆ ಬೆರಳಿಟ್ಟೇ ಮಾತನಾಡುತ್ತಾನೆ. ಕಿನ್ನಿಗೋಳಿಯಂತಹ ಸಣ್ಣ ಊರಲ್ಲಿ ಕುಳಿತು ದೊಡ್ಡ ದೊಡ್ಡ ವಿಷಯಗಳ ಬೆನ್ನುಹತ್ತುತ್ತಾನೆ. ತುಂಬ ಚುರುಕು. ಅಸೂಯೆಯಾಗುವಷ್ಟು!
ಆದರೆ ಆತ ನನ್ನ ಲೇಖನ ಪತ್ರಿಕೆಯಲ್ಲಿ ಬಂದಾಗೆಲ್ಲ ಉರಿದುಕೊಳ್ಳುತ್ತಿರುತ್ತಾನೆ. ಬೆಳ್ಳಂಬೆಳಗ್ಗೆ ಆತನ ಮಿಸ್ ಕಾಲ್ ಬಂದಿದೆ ಎಂದರೆ ಆ ದಿನ ನನ್ನ ಲೇಖನ ಪ್ರಕಟವಾಗಿದೆ ಎಂದೇ ಅರ್ಥ. ಓದದಿದ್ದರೂ ನೋಡಿದ ಕೂಡಲೆ ಒಂದು ಮಿಸ್ ಕಾಲ್ ಕೊಡುವುದು ಆತನ ಪದ್ಧತಿ.
ನನ್ನ ಗೆಳೆಯನ ಮದುವೆಯಾಗಿದ್ದರೆ ಬ್ಲಾಗಿಗೆ ಬರೆಯುತ್ತಿರಲಿಲ್ಲ. ಅವನ ಮದುವೆಗೂ ನನಗೂ ಸಂಬಂಧ ಉಂಟು! ನನ್ನ ಗೆಳೆಯನಾದರೂ ನನ್ನ ಬಳಿ ಹುಡುಗಿಯರು ಮಾತನಾಡುವುದು ಕಂಡು ಅವನಿಗೆ ಒಳಗೊಳಗಷ್ಟೇ ಅಲ್ಲ ಹೊರಗೂ (ನನ್ನ ಬಳಿಯೇ ಹೇಳಿದ್ದಾನೆ ಹಾಗಾಗಿ) ಅಸೂಯೆ. ಒಂದಾದರೂ ಹುಡುಗಿಯನ್ನು ಪಟಾಯಿಸಿ ಮಿಂಚಬೇಕೆಂದು ಆಸೆ. ಅವಳನ್ನೇ ಮದುವೆಯಾಗಲೂ ಸಿದ್ಧನಿದ್ದ ಬಿಡಿ. ಮೂಡುಬಿದಿರೆಯ ನುಡಿಸಿರಿ, ಉಡುಪಿಯ ಸಾಹಿತ್ಯ ಸಮ್ಮೇಳನ ಹೀಗೆ ದೊಡ್ಡ ಕಾರ್ಯಕ್ರಮಗಳಲ್ಲಿ ಉತ್ತಮ ವರದಿಯ ಜತೆ ಹುಡುಗಿಯೂ ಸಿಗುತ್ತಾಳೇನೋ ಹುಡುಕಿದ್ದೇ ಹುಡುಕಿದ್ದು.
ನಾನಾವಾಗಲೇ ಹೇಳಿದ್ದೆ ನನ್ನ ಜತೆ ತಿರುಗಬೇಡ. ನಿನಗೆ ಹುಡುಗಿ ಸಿಗುವುದಿಲ್ಲ ಎಂದು. ಆತ ಕೇಳಬೇಕಲ್ಲ. ನನ್ನ ಜತೆಯೇ ಇರುತ್ತಿದ್ದ. ನನಗೂ ಅವನ ಜತೆ ಇಷ್ಟವಾಗುತ್ತಿತ್ತು. ಹೀಗೆ ಹೋದಲ್ಲೆಲ್ಲ ಯಾವುದೋ ಹುಡುಗಿಯನ್ನು ಸುಮ್ಮನೆ ಕಣ್ಣುಹಾಕಿ ಇಟ್ಟಿರುತ್ತಿದ್ದ. ದುರಂತವೆಂದರೆ ಆ ಹುಡುಗಿ ನನ್ನ ಬಳಿ ನಗುನಗುತ್ತ ಮಾತನಾಡಿ, ಪರಿಚಯ ಮಾಡಿಕೊಂಡು ಹೋಗುತ್ತಿದ್ದರು. ಅವರು ಹೋದ ಮೇಲೆ ಈತ ನನಗೆ ಶಾಪಹಾಕುತ್ತಿದ್ದ! ಪ್ರೀತಿಯಿಂದ!!
ಎಷ್ಟು ಕಾರ್ಯಕ್ರಮ ಸುತ್ತಿದರೂ ವರದಿ ಹೊರತು ಬೇರೇನೂ ಲಾಭವಾಗಲಿಲ್ಲ. ಅಂತೂ ನಾನು ಮಂಗಳೂರು ಬಿಟ್ಟೆ. ಅದೇನು ಕಾಕತಾಳೀಯವೋ? ಆತನಿಗೆ ಹುಡುಗಿ ಸಿಕ್ಕಿ ಮದುವೆ ನಿಕ್ಕಿಯಾಯಿತು! ಅಂತೂ ಅವನಿಗೆ ಹುಡುಗಿ ಸಿಗಬೇಕಾದರೆ ನಾನು ಮಂಗಳೂರು ಬಿಡಬೇಕಲಾಯಿತು!!
ಇವತ್ತು ಯಾರೋ ಅವನ ಮದುವೆಯಲ್ಲಿ 'ಮಿಥುನನ ರಿಮೋಟ್ ಪೋಂಡಾ ಅಂದು' (ಮಿಥುನನ ರಿಮೋಟ್ ಹೋಯ್ತು) ಅಂದರಂತೆ. ಹೋಗಿಬಂದ ಗೆಳೆಯರ ವರದಿ ಪ್ರಕಾರ ಮಿಥುನನ ಪರಿಸ್ಥಿತಿ ಇನ್ನುಮುಂದೆ ಕಷ್ಟ ಎಂಬಂತಿತ್ತು. ಏನೇ ಇರಲಿ. ಅವರಿಬ್ಬರೂ ಸುಖವಾಗಿರಲಿ.
ಹನಿಮೂನಿಗೆ ದಿಲ್ಲಿಗೆ ಬಾ ಎಂದಿದ್ದೇನೆ. ಮದುವೆಯಾದ ಗಡಿಬಿಡಿಯಲ್ಲಿ ಎಲ್ಲಾ ಅಲ್ಲೇ ಮುಗಿಸುತ್ತಾನೊ, ದಿಲ್ಲಿಗಾಗಿ ಏನಾದ್ರೂ ಉಳಿಸಿಕೊಳ್ಳುತ್ತಾನೊ? ನೋಡಬೇಕು...
(ವಿಸೂ: ವಿಶೇಷ ಸೂಚನೆ ಅಥವಾ ವಿನಾಯಕನ ಸೂಚನೆ!: ಮದುವೆಯ ದಿನವೇ ಸಂಸಾರ ಹಾಳು ಮಾಡುವ ಯತ್ನಕ್ಕೆ ಕೈಹಾಕಿದ್ದಾನೆ ಎಂದು ಅಪಾರ್ಥ ಮಾಡಿಕೊಳ್ಳಬೇಡಿ. ಯಾಕೆಂದರೆ ಅವರವರ ಸಂಸಾರಕ್ಕೆ ಅವರೇ ಜವಾಬ್ದಾರರು!)

Tuesday, October 07, 2008

ಕಟ್ಟಿದೆ ಮೂಗು, ತೆರೆದಿದೆ ಬ್ಲಾಗು!


ಮೂಗು ಕಟ್ಟಿದೆ. ಪರಿಣಾಮ ನಿದ್ದೆ ಕೆಟ್ಟಿದೆ.

ಈ ಸಿಂಬಳ ಹಿಡಿದಿಡಲಾಗದೆ

ಮೂಗು ಸೋತಿದೆ...

ಈ ಶೀತ ಹಿಡಿದಿಡಲು

ಬೆಡ್‌ಶೀಟೂ ಸಾಲದೆ...

(ದುಂಡಿರಾಜರ 'ಈ ಚೆಲುವೆಯ ಬಣ್ಣಿಸಲಾಗದೆ ಕವಿತೆ ಸೋತಿದೆ, ನಿನ್ನ ರೂಪ ಬಣ್ಣಿಸಲು ಪದಗಳೂ ಸಾಲದೆ' ಹಾಡಿನಿಂದ ಸ್ಪೂರ್ತಿ ಪಡೆದು) ಅಷ್ಟು ಶೀತ. ಮೇಲೆ ಮುಖಮಾಡಿ ಮಲಗಿದರೆ ಸಿಂಬಳ ಮೂಗಿನ ಕೆಳಭಾಗದಲ್ಲಿ ಕಟ್ಟುತ್ತದೆ. ಕೆಳಮುಖಮಾಡಿ ಮಲಗಿದರೆ ಸಿಂಬಳ ಮೇಲ್ಭಾಗದಲ್ಲಿ ಕಟ್ಟುತ್ತದೆ. ಒಟ್ಟಿನಲ್ಲಿ ನಿದ್ರೆ ಇಲ್ಲದ ರಾತ್ರಿ!

ಬಹುತೇಕ ಜನರಿಗೆ ಹೀಗಾದಾಗ ಮೂಡು ಕೆಡುತ್ತದೆ. ವಕ್ರದಂತನಾದ ನಾನು ಇಲ್ಲೂ ವಕ್ರ. ನನಗೆ ಮೂಡು ಬಂತು. ಆಗಸ್ಟ್ 1೫ರಂದು ಒಂದು ಲೇಖನ ಬರೆದು ಬ್ಲಾಗಿಗೆ ಹಾಕಿದವ ಮತ್ತೆ ಬ್ಲಾಗಿಸಿಯೇ ಇರಲಿಲ್ಲ. ಅಷ್ಟೇ ಏಕೆ ಬೇರೆ ಬ್ಲಾಗಿನತ್ತ ಬಗ್ಗಿ, ಬಾಗಿಯೂ ನೋಡಿರಲಿಲ್ಲ. ಆ.೨೯ರಿಂದ ೧೫ ದಿನ ಊರಿಗೆ ಹೋಗಿದ್ದೆ. ಪತ್ರಿಕೋದ್ಯಮ ಸೇರಿದ ಮೇಲೆ ಮದುವೆಗೆ ೧೨ ದಿನ ರಜೆ ಹಾಕಿದ್ದು ಬಿಟ್ಟರೆ ಮತ್ತೆ ೧೫ ದಿನದ ದೀರ್ಘ ರಜೆ ಇದೇ ಮೊದಲು. ಆಗಸ್ಟ್ ೧೫ರ ನಂತರ ಊರಿಗೆ ಹೋಗುವ ಸಂಭ್ರಮ. ಬ್ಲಾಗು ಬೋರನ್ನಿಸಿತು. ಊರಿನಲ್ಲಿ ಲ್ಯಾಪ್‌ಟಾಪ್ ಜತೆಯಲ್ಲಿತ್ತಾದರೂ ಯಾಕೋ ಬ್ಯಾಗಿನಿಂದ ಹೊರತೆಗೆಯುವ ಮನಸ್ಸಾಗಲಿಲ್ಲ. ಬಂದ ಮೇಲೆ ಊರಿನ ರಂಗು, ರಜೆಯ ಗುಂಗು ಏನೂ ಬರೆಯಲಾಗಲಿಲ್ಲ.

ಹಾಗಂತ ಬರೆಯೋಕೆ ವಿಷಯ ಇರಲಿಲ್ಲ ಅಂತಲ್ಲ. ಓದಿದ ಪುಸ್ತಕ, ನೋಡಿದ ಸಿನಿಮಾ ಎಲ್ಲ ಸಾಕಷ್ಟಿದ್ದವು. ರೈಲಿನಲ್ಲಿ ಜೋಗಿಯವರ ಯಾಮಿನಿ, ಚೇತನಾ ಅವರ ಭಾಮಿನಿ ಓದಿದೆ. ದಿಲ್ಲಿಯಲ್ಲಿ ಮನೆಯಲ್ಲಿ ಕುಳೀತು ಜಯಂತ ಕಾಯ್ಕಿಣಿ ಅವರ ಕತೆಗಳನ್ನು ಓದಿ ಮತ್ತೆ ಮಾನಸಿಕವಾಗಿ ದೀವಗಿ ಸೇತುವೆ ಮೇಲೆ, ಗೋಕರ್ಣದ ಬೀದಿಯಲ್ಲಿ ಓಡಾಡಲಾರಂಭಿಸಿದೆ. ಇವುಗಳನ್ನೆಲ್ಲ ಓದುತ್ತಿದ್ದಂತೆ ಕೆಲವು ಸಿನಿಮಾ ನೋಡುತ್ತಿದ್ದಂತೆ ಇದರ ಬಗ್ಗೆ ಬರೆದು ಬ್ಲಾಗಿಸಬೇಕು ಅಂದುಕೊಳ್ಳುತ್ತಿದ್ದೆ. ಸಾಮಾನ್ಯವಾಗಿ ಹಾಗೆ ಮಾಡುತ್ತೇನೆ. ಆದರೆ ಲ್ಯಾಪ್‌ಟಾಪ್‌ನ ಮುಂದೆ ಕುಳಿತರೆ ಬರೆಯಲೇಕೋ ಮನಸ್ಸಿಲ್ಲ. ಇಂದು ಹುಡುಗಿಗೆ ಐಲವ್ ಯು ಹೇಳಲೇ ಬೇಕು ಅಂತ ಬೇಗ ಎದ್ದು ಚೆಂದವಾಗಿ ರೆಡಿಯಾಗಿ ಕಾಲೇಜಿಗೆ ಬಂದ ಹುಡುಗ ಯಾಕೋ ಇವತ್ತು ಬೇಡ ಎಂದು ೭೨ನೇ ಬಾರಿಯೂ ಶುಭ ಕಾರ್ಯ ಮುಂದೂಡಿದಂತೆ!

ಈ ನಡುವೆ ಬ್ಲಾಗಿನ ಬಗ್ಗೆ ಒಂದು ನಮೂನೆ ನಶ್ವರ ಭಾವ. ರವಿ ಬೆಳೆಗೆರೆ ಅವರು ಹಾಯ್ ಬೆಂಗಳೂರಿನಲ್ಲಿ ಜೋಗಿ ಅವರ ಬಗ್ಗೆ ಬರೆಯುತ್ತ ನಯ್ಯಾಪೈಸೆ ಲಾಭವಿಲ್ಲದ ಬ್ಲಾಗೂ ನಡೆಸುತ್ತಾನೆ ಎಂದು ಶರಾ ಬರೆದಿದ್ದರು. ಅದರಿಂದ ಸ್ಪೂರ್ತಿ ಪಡೆದರೋ ಎಂಬಂತೆ ಜೋಗಿ ಕೂಡ ಹಿಟ್‌ವಿಕೆಟ್ ಆದವರಂತೆ ಬ್ಲಾಗ್ಲೋಕದಿಂದ ನಿರ್ಗಮಿಸಿಬಿಟ್ಟರು. ಈ ನಡುವೆ ವಿಶ್ವೇಶ್ವರ ಭಟ್ಟರು ಸುಮ್ಮನೆ ಬ್ಲಾಗಿಗೆ ಬರೆದು ಯಾಕೆ ಸಮಯ ಹಾಳು ಮಾಡ್ತೆ. ಪತ್ರಿಕೆಗೆ ಬರೆ. ಅದನ್ನು ಬೇಕಾದ್ರೆ ಬ್ಲಾಗಿಸು ಎಂದಿದ್ದರು. ಬಹುಶಃ ಇಷ್ಟೆಲ್ಲ ವಿಷಯಗಳು ಒಟ್ಟಿಗೆ ಸೇರಿ ನನಗೆ ಬ್ಲಾಗಿನ ಬಗ್ಗೆ ಬ್ಯಾಸರ ಮೂಡುವಂತೆ ಮಾಡಿತು.

ಕಳ್ಳಂಗೊಂದು ಪಿಳ್ಳೆ ನೆವ ಅಂತಾರಲ್ಲ ಹಾಗೆ ನನ್ನ ಆಲಸಿತನಕ್ಕೆ ಇಷ್ಟೆಲ್ಲ ದೊಡ್ಡ ಜನರ ಸಮರ್ಥನೆ ಸಿಕ್ಕಿಬಿಟ್ಟತ್ತು! ಪರಿಣಾಮ ನನ್ನ ಬ್ಲಾಗು ಬಂದಿತ್ತು. ಕೆಲವು ಗೆಳೆಯರು ಆರ್ಕುಟ್‌ನಲ್ಲಿ ಯಾಕೋ ನಿನ್ನ ಬ್ಲಾಗನ್ನು ಸ್ಕ್ಯಾಪ್ ಮಾಡಿದ್ದೀಯಾ ಅಂದರು. ಹಾಗೇನಿಲ್ಲ ಅಂತ ನಾನು ಸ್ಕ್ರ್ಯಾಪ್ ಮಾಡಿದೆ. ಏನೋ ಅನಿವಾರ್ಯ ಅನ್ನೋ ಶೈಲಿಯಲ್ಲಿ ಪತ್ರಿಕರ್ತನ ಕೆಲಸವನ್ನು ಮಾಡುತ್ತಿದ್ದೆ. ಅದೂ ಪೂರ್ತಿ ನನಗೇ ಸಮಾದಾನ ಕೊಡುತ್ತಿರಲಿಲ್ಲ.

ಎಲ್ಲ ಚಟಗಳಂತೆ ಬರೆವಣಿಗೆ ಚಟ ಕೂಡ. ನೀವು ಅದನ್ನು ಸ್ವಲ್ಪ ದಿನ ಬಿಟ್ಟಿರೋ ಬಿಟ್ಟೇಹೋಗುತ್ತದೆ. ಮತ್ತೆ ಅದನ್ನು ಶುರುಮಾಡಬೇಕಾಗುತ್ತದೆ.

ಆದರೆ ನನ್ನ ಕಟ್ಟಿದ ಮೂಗು ನನ್ನನ್ನು ಮತ್ತೆ ಬ್ಲಾಗಿನೊಳು ಮೂಗುತೂರಿಸುವಂತೆ ಮಾಡಿತು. ಬ್ಲಾಗಿನಲ್ಲಿ ನಾನು ಇಷ್ಟು ದಿನ ಕಾಣಿಸಿಕೊಳ್ಳದಿರುವುದರ ಬಗ್ಗೆ ಬರೆದೇ ಯಾಕೆ ಪುನಾರಂಭ ಮಾಡಬಾರದು ಎಂದು ಯೋಚಿಸಿದೆ. ಮಧ್ಯರಾತ್ರಿ ೧೨.೦೦ ಗಂಟೆಗೆ ಎದ್ದೆ. ಬರೆದೆ. ಬ್ಲಾಗಿಸಿದೆ.

ಬ್ಲಾಗಿಗೆ ಮರುಹುಟ್ಟು ನೀಡಲು ಕಟ್ಟಿದ ಮೂಗು ಕಾರಣವಾದರೂ ಬರೆಯದೇ ಗರಬಡಿದವನಂತೆ ಇದ್ದ ನನ್ನನ್ನು ಬರೆಯಲು ಹಚ್ಚಿದ್ದು ಪ್ರತಾಪಸಿಂಹ. ಏನು ವಿನಾಯಕ್? ಬರವಣಿಗೆ ನಿಲ್ಲಿಸಿಬಿಟ್ಟಿದ್ದೀಯಾ? ಏನಾದ್ರೂ ಬರೆದುಕೊಡಿ. ಅಪರೂಪಕ್ಕಾದರೂ ಪತ್ರಿಕೆಯಲ್ಲಿ ಕಾಣಿಸಿಕೊಳ್ತಾ ಇರಬೇಕು ಎಂದು ತಿದಿಯೊತ್ತಿದರು.

ಬರವಣಿಗೆ ಆರಂಭಿಸಲು ಒಂದು ನೆಪ ಬೇಕಿತ್ತು. ಅದು ಸಿಕ್ಕಂತಾಯಿತು. ಒಂದು ಲೇಖನ ಬರೆದೆ. ನನಗೇಕೋ ಪೂರ್ಣ ಸಮಾದಾನ ಆಗಿರಲಿಲ್ಲ. ಆದರೂ ಸೋಮವಾರ ಕಳುಹಿಸಿತ್ತೇನೆ ಅಂದಿದ್ದೆ. ಕಳುಹಿಸಿದೆ. ಆದರೆ ಸೋಮವಾರ ಸಂಜೆ ವೈನಾಗಿ (ಕುಡಿದು ಅಲ್ಲ) ಕುಳಿತು ಇನ್ನೊಂದು ಲೇಖನ ಬರೆದೆ. ನನಗೆ ಖುಶಿಕೊಟ್ಟಿತು. ಅದನ್ನೇ ಪ್ರತಾಪ್‌ಗೆ ಕಳುಹಿಸಿದೆ. ಯಾಕೋ ಬಹಳ ದಿನದ ನಂತರ ನಾನು ಉಲ್ಲಸಿತನಾಗಿದ್ದೆ. ಬಹುಶಃ ಕಟ್ಟಿದ ಮೂಗಿಗಿಂತ ಮನಸ್ಸಿಗೆ ಕಟ್ಟಿದ ಮೋಡ ಚದುರಿ ಹೋದದ್ದಕ್ಕೇ ಇರಬೇಕು ನಿದ್ರೆ ಬರುತ್ತಿಲ್ಲ!

ಚಿಕ್ಕವರಿರುವಾಗ ಪ್ರವಾಸಕ್ಕೆ ಹೋಗುವ ಹಿಂದಿನ ದಿನ ನಿದ್ರೆ ಬರುತ್ತಿರಲಿಲ್ಲವಲ್ಲ ಹಾಗೆ!

Friday, August 15, 2008

ಸ್ವಾತಂತ್ರ್ಯೋತ್ಸವದಲ್ಲಿಯೇ ಕಾಣದ ಸ್ವಾತಂತ್ರ್ಯ!


೧೫ ದಿನದ ಹಿಂದಿನಿಂದಲೇ ಪ್ರವಾಸಿಗರಿಂದ ಕೆಂಪುಕೋಟೆ, ರಾಷ್ಟ್ರಪತಿ ಭವನ ಮುಂತಾದ ಪ್ರಮುಖ ಪ್ರವಾಸಿ ತಾಣಕ್ಕೆ ಭೇಟಿ ನೀಡುವ ಸ್ವಾತಂತ್ರ್ಯ ಕಸಿದುಕೊಳ್ಳಲಾಗಿದೆ. ನಗರದ ರೈಲು ನಿಲ್ದಾಣಗಳಿಗೆ ೨೦ ದಿನ ಹಿಂದಿನಿಂದಲೇ ಪ್ರಯಾಣಿಕರನ್ನು ಕರೆದುಕೊಂಡು ಬರಲು ಹೋಗುವ ಸಾರ್ವಜನಿಕರಿಗೆ ಪ್ಲಾಟ್‌ಫಾರ್ಮ್ ಪ್ರವೇಶ ನಿಷೇಧಿಸಲಾಗಿದೆ.
೫-೬ ದಿನದಿಂದ ಪ್ರಮುಖ ಸ್ಥಳಗಳಲ್ಲಿನ ಕಟ್ಟಡಗಳು, ಅದರಲ್ಲಿನ ಕಚೇರಿಗಳು ರಾತ್ರಿ ೮.೦೦ ಗಂಟೆ ನಂತರ ಕೆಲಸ ಮಾಡುವ ಸ್ವಾತಂತ್ರ್ಯ ಕಳೆದುಕೊಂಡಿವೆ. ಸ್ವಾತಂತ್ರ್ಯೋತ್ಸವದ ಹಿಂದಿನ ದಿನವಂತೂ ನಮ್ಮ ಕಚೇರಿಯ ಕಟ್ಟಡವೂ ಸೇರಿದಂತೆ ಹಲವು ಕಟ್ಟಡಗಳನ್ನು ಸಂಜೆ ೪.೦೦ ಗಂಟೆ ಹೊತ್ತಿಗೇ ಮುಚ್ಚುವ ಆದೇಶ ಹೊರಬಿದ್ದಿದೆ!
ಹೋಗಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಾದರೂ ನೀವು ಸ್ವತಂತ್ರರಾಗಿ ಭಾಗವಹಿಸಬಹುದೇ? ಊಹುಂ. ಕೆಂಪುಕೋಟೆಯೂ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ನಡೆಯುವ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಗಳಿಗೆ ನೀವು ಭಾಗವಹಿಸಲು ಹರಸಾಹಸ ಮಾಡಬೇಕಾಗುತ್ತದೆ. ಮೊದಲೇ ಪಾಸು ಮಾಡಿಸಿಕೊಂಡರೆ ಮಾತ್ರ ನಿಮಗೆ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ!
ಸ್ವಾತಂತ್ರ್ಯೋತ್ಸವ ಸಮೀಪಿಸುತ್ತಿದ್ದಂತೆ ನಿಮ್ಮ ಒಂದೊಂದೇ ಸ್ವಾತಂತ್ರ್ಯ ಕಡಿತಗೊಳ್ಳುತ್ತಾ ಹೋಗುತ್ತದೆ! ಹುಡುಕಬೇಕು ನಮಗೆಷ್ಟು ಸ್ವಾತಂತ್ರ್ಯವಿದೆ ಎಂಬುದನ್ನು!!
ಸಾರ್ವಜನಿಕ ಮಾರುಕಟ್ಟೆಗಳೂ ೧೫ ದಿನ ಹಿಂದಿನಿಂದಲೇ
ಮೆಟಲ್ ಡಿಟೆಕ್ಟರಿನೊಳಗೆ ಹಾದು
ಒಳಗೆ ಬಾಯಾತ್ರಿಕನೆ... ಎಂದು ಜನರನ್ನು ಕೋರುತ್ತಿವೆ. ಮಾರುಕಟ್ಟೆಯ ಸುತ್ತಲಿನ ದಾರಿಗಳು ಬಂದ್ ಆಗಿವೆ. ಒಂದಿಡೀ ಮಾರುಕಟ್ಟೆಗೆ ೧ ಅಥವಾ ೨ ಕಡೆ ಮಾತ್ರ ಪ್ರವೇಶ ಸಾಧ್ಯ. ಅದೂ ಮೆಟಲ್‌ಡಿಟೆಕ್ಟರ್ ಎಂಬ ಹೊಸ್ತಿಲ ಮೂಲಕ. ಪ್ರಮುಖ ಸ್ಥಳಗಳಲ್ಲಿರುವ ಕಟ್ಟಡದ ಒಳಕ್ಕೆ ಕಾರು ತೆಗೆದುಕೊಂಡು ಹೋದರೆ ಮನೆಗೆ ಸ್ವಾಮೀಜಿಗಳು ಬಂದಾಗ ಹಾನದಲ್ಲಿ ಮುಖನೋಡಿ ಒಳಕರೆದುಕೊಳ್ಳುತ್ತಾರಲ್ಲ ಹಾಗೆ ಕಾರಿನ ಅಡಿಭಾಗವನ್ನು ಕನ್ನಡಿಯಲ್ಲಿ ಪರಿಶೀಲಿಸಿ ಒಳಬಿಡಲಾಗುತ್ತದೆ. ನೀವು ಒಳಹೋಗಬೇಕೆಂದರೆ ಕೆಲವು ಕಡೆ ಮೊಬೈಲು, ಇನ್ನು ಕೆಲವು ಕಡೆ ನಿಮ್ಮ ಮನೆಯ ಚಾವಿ, ಬೆಲ್ಟ್ ಕೂಡ ರೆಸೆಪ್ಶನಿಸ್ಟ್‌ಗೆ ಕೊಟ್ಟು ಹೋಗಬೇಕು. ನಿಮ್ಮ ಕೈಯಲ್ಲಿ ಚೀಲವಿದ್ದರಂತೂ ಮುಗಿದೇ ಹೋಯಿತು. ಅದರಲ್ಲೇನಿದೆ ಅಂತ ಪೂರ್ತಿ ನೋಡಿದ ನಂತರವೇ ಒಳಪ್ರವೇಶ. ಮಾರುಕಟ್ಟೆ, ಕಟ್ಟಡ ಹೀಗೆ ಎಲ್ಲೆಂದರಲ್ಲಿ ಬಂದು ಕುಳಿತಿರುವ ಸಿಸಿ ಟಿವಿ ಕ್ಯಾಮರಾಗಳು ಅದ್ಯಾವಾಗಲೋ ನಿಮ್ಮ ಪ್ರತಿ ಕ್ಷಣದ ಚಲನೆಯನ್ನೂ ದಾಖಲಿಸುತ್ತಿವೆ.
೬೧ನೇ ಸ್ವಾತಂತ್ರ್ಯೋತ್ಸವದ ದಿನ ಕುಳಿತು ಯೋಚಿಸಿದರೆ...
ಯಾರಿಗೆ ಬಂತು ಸ್ವಾತಂತ್ರ್ಯ?
ಎಲ್ಲಿಗೆ ಬಂತು ಸ್ವಾತಂತ್ರ್ಯ? ಎಂಬ ಪ್ರೊ. ಸಿದ್ದಲಿಂಗಯ್ಯ ಅವರು ಬರೆದ ಈ ಹಾಡು ನೆನಪಾಗುತ್ತದೆ. ಸಿದ್ದಲಿಂಗಯ್ಯ ಅವರು ಬೇರೆಯೇ ಕಾರಣಗಳಿಗಾಗಿ ಈ ಹಾಡು ಬರೆದಿದ್ದರೂ ಅದು ಈಗ ದೇಶದ ಅದರಲ್ಲೂ ವಿಶೇಷವಾಗಿ ರಾಜಧಾನಿಯಾದ ಹೊಸದಿಲ್ಲಿಯನ್ನು ಗಮನದಲ್ಲಿಸಿಕೊಂಡೇ ಬರೆದಂತಿದೆ. ಅಷ್ಟು ಚೆನ್ನಾಗಿ ದಿಲ್ಲಿಗೆ ಹೊಂದಿಕೊಳ್ಳುತ್ತದೆ ಈ ಹಾಡು.
ಈ ಪರಿಸ್ಥಿತಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಬೇಕಾ? ಸ್ವಾತಂತ್ರ್ಯೋತ್ಸವ ಬಂತಲ್ಲಾ ಎಂದು ಖುಷಿಪಡಬೇಕಾ? ದುಃಕ್ಕಿಸಬೇಕಾ? ಎಂಬ ಪ್ರಶ್ನೆ ಕಾಡುತ್ತದೆ.
ಸ್ವಾತಂತ್ರ್ಯೋತ್ಸವ ಅಂದರೆ ಎಲ್ಲೆಡೆ ಖುಶಿ ಇರಬೇಕು. ಪುಟಾಣಿ ಮಕ್ಕಳಲ್ಲಿ ಇರುತ್ತದಲ್ಲ ಅಂತಹ ಖುಷಿ. ಆದರೆ ನಮಗೋ ಹೊಸದಿಲ್ಲಿಯೂ ಸೇರಿದಂತೆ ಹಲವೆಡೆ ಬಾಂಬ್ ಭಯ! ಸ್ವಾತಂತ್ರ್ಯೋತ್ಸವ ಬಂತೆಂದರೆ ಹೊಸದಿಲ್ಲಿಯಂತಹ ಮಹಾನಗರಗಳಲ್ಲಿ ಭಯದ ಛಾಯೆ. ಒಂದು ವಾರದ ಹಿಂದಿನಿಂದಲೇ ಮಾರುಕಟ್ಟೆಗಳಿಗೆ ಬರುವ ಜನರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಹೊಸದಿಲ್ಲಿಯ ದೊಡ್ಡ ದೊಡ್ಡ ಮಾಲ್‌ಗಳು, ಪ್ರಸಿದ್ಧ ಮಾರುಕಟ್ಟೆಗಳಲ್ಲಿ ಸ್ವಾತಂತ್ರ್ಯೋತ್ಸವ ಸಮೀಪಿಸುತ್ತಿರುವ ೧ ವಾರದಲ್ಲಿ ಆಗಮಿಸುವವರ ಸಂಖ್ಯೆ ಶೇ.೫೦ರಷ್ಟು ಇಳಿದಿದೆಯಂತೆ. ಎಲ್ಲ ಆಫರ್‌ಗಳ ಹೊರತಾಗಿ!
ಕಾರಣ ಉಗ್ರರು. ಸ್ವಾತಂತ್ರ್ಯೋತ್ಸವ ಸಂಭ್ರಮ ಹಾಳು ಮಾಡಲು ಅವರೆಲ್ಲಿ ಬಾಂಬ್ ಸ್ಪೋಟಿಸುತ್ತಾರೊ ಎಂಬ ಭಯ. ಅದಕ್ಕಾಗಿ ಮುನ್ನೆಚ್ಚರಿಕೆ ಹೆಸರಲ್ಲಿ ಕಟ್ಟಡ ಮುಚ್ಚಿಸುವುದು, ರಾತ್ರಿ ೮.೦೦ ಗಂಟೆ ನಂತರ ಕೆಲಸ ಮಾಡದಂತೆ ಸೂಚಿಸುವುದು ನಡೆಯುತ್ತಿದೆ. ಜನ ಭದ್ರತೆ, ನೆಮ್ಮದಿಗಾಗಿ ಅದನ್ನೆಲ್ಲ ಸಹಿಸಿಕೊಳ್ಳುತ್ತಿದ್ದಾರೆ.
ಇದೆಲ್ಲ ಏನನ್ನು ಸೂಚಿಸುತ್ತದೆ? ನಾವು ಭಯದ ನೆರಳಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದೇವೆ. ಅನಾಹುತ ರಹಿತ ಸ್ವಾತಂತ್ರ್ಯೋತ್ಸವಕ್ಕಾಗಿ ನಮ್ಮ ಸ್ವಾತಂತ್ರ್ಯ ಹರಣ ಸಹಿಸಿಕೊಳ್ಳುತ್ತೇವೆ. ಮೊದಲ್ಲೆಲ್ಲ ಹೇಳುವಂತೆ ಸಂಭ್ರಮದ ಸ್ವಾತಂತ್ರ್ಯೋತ್ಸವ ಎಂಬುದು ಮಾಯವಾಗಿ ಕೇವಲ ಸ್ವಾತಂತ್ರ್ಯೋತ್ಸವಕ್ಕೆ ಸೀಮಿತವಾಗುತ್ತಿರುವಂತೆ ಭಾಸವಾಗುತ್ತಿದೆ. ೬೧ನೇ ಸ್ವಾತಂತ್ರ್ಯೋತ್ಸವ ಹೊಸ್ತಿಲಲ್ಲಿ ನಿಂತು ನಮಗೆಷ್ಟು ಸ್ವಾತಂತ್ರ್ಯವಿದೆ, ಎಷ್ಟು ಸ್ವಾತಂತ್ರ್ಯ ಮುಂದಿನ ದಿನಗಳಲ್ಲಿ ಉಳಿಯಲಿದೆ ಎಂದು ವಿಚಾರ ಮಾಡುವಂತಾಗಿದೆ.
ನೀಮಗೂ ಹಾಗನ್ನಿಸುತ್ತಿದೆಯೇ? ಹಾಗಾದ್ರೆ ಸೇಮ್ ಪಿಂಚ್!!