Tuesday, October 07, 2008

ಕಟ್ಟಿದೆ ಮೂಗು, ತೆರೆದಿದೆ ಬ್ಲಾಗು!


ಮೂಗು ಕಟ್ಟಿದೆ. ಪರಿಣಾಮ ನಿದ್ದೆ ಕೆಟ್ಟಿದೆ.

ಈ ಸಿಂಬಳ ಹಿಡಿದಿಡಲಾಗದೆ

ಮೂಗು ಸೋತಿದೆ...

ಈ ಶೀತ ಹಿಡಿದಿಡಲು

ಬೆಡ್‌ಶೀಟೂ ಸಾಲದೆ...

(ದುಂಡಿರಾಜರ 'ಈ ಚೆಲುವೆಯ ಬಣ್ಣಿಸಲಾಗದೆ ಕವಿತೆ ಸೋತಿದೆ, ನಿನ್ನ ರೂಪ ಬಣ್ಣಿಸಲು ಪದಗಳೂ ಸಾಲದೆ' ಹಾಡಿನಿಂದ ಸ್ಪೂರ್ತಿ ಪಡೆದು) ಅಷ್ಟು ಶೀತ. ಮೇಲೆ ಮುಖಮಾಡಿ ಮಲಗಿದರೆ ಸಿಂಬಳ ಮೂಗಿನ ಕೆಳಭಾಗದಲ್ಲಿ ಕಟ್ಟುತ್ತದೆ. ಕೆಳಮುಖಮಾಡಿ ಮಲಗಿದರೆ ಸಿಂಬಳ ಮೇಲ್ಭಾಗದಲ್ಲಿ ಕಟ್ಟುತ್ತದೆ. ಒಟ್ಟಿನಲ್ಲಿ ನಿದ್ರೆ ಇಲ್ಲದ ರಾತ್ರಿ!

ಬಹುತೇಕ ಜನರಿಗೆ ಹೀಗಾದಾಗ ಮೂಡು ಕೆಡುತ್ತದೆ. ವಕ್ರದಂತನಾದ ನಾನು ಇಲ್ಲೂ ವಕ್ರ. ನನಗೆ ಮೂಡು ಬಂತು. ಆಗಸ್ಟ್ 1೫ರಂದು ಒಂದು ಲೇಖನ ಬರೆದು ಬ್ಲಾಗಿಗೆ ಹಾಕಿದವ ಮತ್ತೆ ಬ್ಲಾಗಿಸಿಯೇ ಇರಲಿಲ್ಲ. ಅಷ್ಟೇ ಏಕೆ ಬೇರೆ ಬ್ಲಾಗಿನತ್ತ ಬಗ್ಗಿ, ಬಾಗಿಯೂ ನೋಡಿರಲಿಲ್ಲ. ಆ.೨೯ರಿಂದ ೧೫ ದಿನ ಊರಿಗೆ ಹೋಗಿದ್ದೆ. ಪತ್ರಿಕೋದ್ಯಮ ಸೇರಿದ ಮೇಲೆ ಮದುವೆಗೆ ೧೨ ದಿನ ರಜೆ ಹಾಕಿದ್ದು ಬಿಟ್ಟರೆ ಮತ್ತೆ ೧೫ ದಿನದ ದೀರ್ಘ ರಜೆ ಇದೇ ಮೊದಲು. ಆಗಸ್ಟ್ ೧೫ರ ನಂತರ ಊರಿಗೆ ಹೋಗುವ ಸಂಭ್ರಮ. ಬ್ಲಾಗು ಬೋರನ್ನಿಸಿತು. ಊರಿನಲ್ಲಿ ಲ್ಯಾಪ್‌ಟಾಪ್ ಜತೆಯಲ್ಲಿತ್ತಾದರೂ ಯಾಕೋ ಬ್ಯಾಗಿನಿಂದ ಹೊರತೆಗೆಯುವ ಮನಸ್ಸಾಗಲಿಲ್ಲ. ಬಂದ ಮೇಲೆ ಊರಿನ ರಂಗು, ರಜೆಯ ಗುಂಗು ಏನೂ ಬರೆಯಲಾಗಲಿಲ್ಲ.

ಹಾಗಂತ ಬರೆಯೋಕೆ ವಿಷಯ ಇರಲಿಲ್ಲ ಅಂತಲ್ಲ. ಓದಿದ ಪುಸ್ತಕ, ನೋಡಿದ ಸಿನಿಮಾ ಎಲ್ಲ ಸಾಕಷ್ಟಿದ್ದವು. ರೈಲಿನಲ್ಲಿ ಜೋಗಿಯವರ ಯಾಮಿನಿ, ಚೇತನಾ ಅವರ ಭಾಮಿನಿ ಓದಿದೆ. ದಿಲ್ಲಿಯಲ್ಲಿ ಮನೆಯಲ್ಲಿ ಕುಳೀತು ಜಯಂತ ಕಾಯ್ಕಿಣಿ ಅವರ ಕತೆಗಳನ್ನು ಓದಿ ಮತ್ತೆ ಮಾನಸಿಕವಾಗಿ ದೀವಗಿ ಸೇತುವೆ ಮೇಲೆ, ಗೋಕರ್ಣದ ಬೀದಿಯಲ್ಲಿ ಓಡಾಡಲಾರಂಭಿಸಿದೆ. ಇವುಗಳನ್ನೆಲ್ಲ ಓದುತ್ತಿದ್ದಂತೆ ಕೆಲವು ಸಿನಿಮಾ ನೋಡುತ್ತಿದ್ದಂತೆ ಇದರ ಬಗ್ಗೆ ಬರೆದು ಬ್ಲಾಗಿಸಬೇಕು ಅಂದುಕೊಳ್ಳುತ್ತಿದ್ದೆ. ಸಾಮಾನ್ಯವಾಗಿ ಹಾಗೆ ಮಾಡುತ್ತೇನೆ. ಆದರೆ ಲ್ಯಾಪ್‌ಟಾಪ್‌ನ ಮುಂದೆ ಕುಳಿತರೆ ಬರೆಯಲೇಕೋ ಮನಸ್ಸಿಲ್ಲ. ಇಂದು ಹುಡುಗಿಗೆ ಐಲವ್ ಯು ಹೇಳಲೇ ಬೇಕು ಅಂತ ಬೇಗ ಎದ್ದು ಚೆಂದವಾಗಿ ರೆಡಿಯಾಗಿ ಕಾಲೇಜಿಗೆ ಬಂದ ಹುಡುಗ ಯಾಕೋ ಇವತ್ತು ಬೇಡ ಎಂದು ೭೨ನೇ ಬಾರಿಯೂ ಶುಭ ಕಾರ್ಯ ಮುಂದೂಡಿದಂತೆ!

ಈ ನಡುವೆ ಬ್ಲಾಗಿನ ಬಗ್ಗೆ ಒಂದು ನಮೂನೆ ನಶ್ವರ ಭಾವ. ರವಿ ಬೆಳೆಗೆರೆ ಅವರು ಹಾಯ್ ಬೆಂಗಳೂರಿನಲ್ಲಿ ಜೋಗಿ ಅವರ ಬಗ್ಗೆ ಬರೆಯುತ್ತ ನಯ್ಯಾಪೈಸೆ ಲಾಭವಿಲ್ಲದ ಬ್ಲಾಗೂ ನಡೆಸುತ್ತಾನೆ ಎಂದು ಶರಾ ಬರೆದಿದ್ದರು. ಅದರಿಂದ ಸ್ಪೂರ್ತಿ ಪಡೆದರೋ ಎಂಬಂತೆ ಜೋಗಿ ಕೂಡ ಹಿಟ್‌ವಿಕೆಟ್ ಆದವರಂತೆ ಬ್ಲಾಗ್ಲೋಕದಿಂದ ನಿರ್ಗಮಿಸಿಬಿಟ್ಟರು. ಈ ನಡುವೆ ವಿಶ್ವೇಶ್ವರ ಭಟ್ಟರು ಸುಮ್ಮನೆ ಬ್ಲಾಗಿಗೆ ಬರೆದು ಯಾಕೆ ಸಮಯ ಹಾಳು ಮಾಡ್ತೆ. ಪತ್ರಿಕೆಗೆ ಬರೆ. ಅದನ್ನು ಬೇಕಾದ್ರೆ ಬ್ಲಾಗಿಸು ಎಂದಿದ್ದರು. ಬಹುಶಃ ಇಷ್ಟೆಲ್ಲ ವಿಷಯಗಳು ಒಟ್ಟಿಗೆ ಸೇರಿ ನನಗೆ ಬ್ಲಾಗಿನ ಬಗ್ಗೆ ಬ್ಯಾಸರ ಮೂಡುವಂತೆ ಮಾಡಿತು.

ಕಳ್ಳಂಗೊಂದು ಪಿಳ್ಳೆ ನೆವ ಅಂತಾರಲ್ಲ ಹಾಗೆ ನನ್ನ ಆಲಸಿತನಕ್ಕೆ ಇಷ್ಟೆಲ್ಲ ದೊಡ್ಡ ಜನರ ಸಮರ್ಥನೆ ಸಿಕ್ಕಿಬಿಟ್ಟತ್ತು! ಪರಿಣಾಮ ನನ್ನ ಬ್ಲಾಗು ಬಂದಿತ್ತು. ಕೆಲವು ಗೆಳೆಯರು ಆರ್ಕುಟ್‌ನಲ್ಲಿ ಯಾಕೋ ನಿನ್ನ ಬ್ಲಾಗನ್ನು ಸ್ಕ್ಯಾಪ್ ಮಾಡಿದ್ದೀಯಾ ಅಂದರು. ಹಾಗೇನಿಲ್ಲ ಅಂತ ನಾನು ಸ್ಕ್ರ್ಯಾಪ್ ಮಾಡಿದೆ. ಏನೋ ಅನಿವಾರ್ಯ ಅನ್ನೋ ಶೈಲಿಯಲ್ಲಿ ಪತ್ರಿಕರ್ತನ ಕೆಲಸವನ್ನು ಮಾಡುತ್ತಿದ್ದೆ. ಅದೂ ಪೂರ್ತಿ ನನಗೇ ಸಮಾದಾನ ಕೊಡುತ್ತಿರಲಿಲ್ಲ.

ಎಲ್ಲ ಚಟಗಳಂತೆ ಬರೆವಣಿಗೆ ಚಟ ಕೂಡ. ನೀವು ಅದನ್ನು ಸ್ವಲ್ಪ ದಿನ ಬಿಟ್ಟಿರೋ ಬಿಟ್ಟೇಹೋಗುತ್ತದೆ. ಮತ್ತೆ ಅದನ್ನು ಶುರುಮಾಡಬೇಕಾಗುತ್ತದೆ.

ಆದರೆ ನನ್ನ ಕಟ್ಟಿದ ಮೂಗು ನನ್ನನ್ನು ಮತ್ತೆ ಬ್ಲಾಗಿನೊಳು ಮೂಗುತೂರಿಸುವಂತೆ ಮಾಡಿತು. ಬ್ಲಾಗಿನಲ್ಲಿ ನಾನು ಇಷ್ಟು ದಿನ ಕಾಣಿಸಿಕೊಳ್ಳದಿರುವುದರ ಬಗ್ಗೆ ಬರೆದೇ ಯಾಕೆ ಪುನಾರಂಭ ಮಾಡಬಾರದು ಎಂದು ಯೋಚಿಸಿದೆ. ಮಧ್ಯರಾತ್ರಿ ೧೨.೦೦ ಗಂಟೆಗೆ ಎದ್ದೆ. ಬರೆದೆ. ಬ್ಲಾಗಿಸಿದೆ.

ಬ್ಲಾಗಿಗೆ ಮರುಹುಟ್ಟು ನೀಡಲು ಕಟ್ಟಿದ ಮೂಗು ಕಾರಣವಾದರೂ ಬರೆಯದೇ ಗರಬಡಿದವನಂತೆ ಇದ್ದ ನನ್ನನ್ನು ಬರೆಯಲು ಹಚ್ಚಿದ್ದು ಪ್ರತಾಪಸಿಂಹ. ಏನು ವಿನಾಯಕ್? ಬರವಣಿಗೆ ನಿಲ್ಲಿಸಿಬಿಟ್ಟಿದ್ದೀಯಾ? ಏನಾದ್ರೂ ಬರೆದುಕೊಡಿ. ಅಪರೂಪಕ್ಕಾದರೂ ಪತ್ರಿಕೆಯಲ್ಲಿ ಕಾಣಿಸಿಕೊಳ್ತಾ ಇರಬೇಕು ಎಂದು ತಿದಿಯೊತ್ತಿದರು.

ಬರವಣಿಗೆ ಆರಂಭಿಸಲು ಒಂದು ನೆಪ ಬೇಕಿತ್ತು. ಅದು ಸಿಕ್ಕಂತಾಯಿತು. ಒಂದು ಲೇಖನ ಬರೆದೆ. ನನಗೇಕೋ ಪೂರ್ಣ ಸಮಾದಾನ ಆಗಿರಲಿಲ್ಲ. ಆದರೂ ಸೋಮವಾರ ಕಳುಹಿಸಿತ್ತೇನೆ ಅಂದಿದ್ದೆ. ಕಳುಹಿಸಿದೆ. ಆದರೆ ಸೋಮವಾರ ಸಂಜೆ ವೈನಾಗಿ (ಕುಡಿದು ಅಲ್ಲ) ಕುಳಿತು ಇನ್ನೊಂದು ಲೇಖನ ಬರೆದೆ. ನನಗೆ ಖುಶಿಕೊಟ್ಟಿತು. ಅದನ್ನೇ ಪ್ರತಾಪ್‌ಗೆ ಕಳುಹಿಸಿದೆ. ಯಾಕೋ ಬಹಳ ದಿನದ ನಂತರ ನಾನು ಉಲ್ಲಸಿತನಾಗಿದ್ದೆ. ಬಹುಶಃ ಕಟ್ಟಿದ ಮೂಗಿಗಿಂತ ಮನಸ್ಸಿಗೆ ಕಟ್ಟಿದ ಮೋಡ ಚದುರಿ ಹೋದದ್ದಕ್ಕೇ ಇರಬೇಕು ನಿದ್ರೆ ಬರುತ್ತಿಲ್ಲ!

ಚಿಕ್ಕವರಿರುವಾಗ ಪ್ರವಾಸಕ್ಕೆ ಹೋಗುವ ಹಿಂದಿನ ದಿನ ನಿದ್ರೆ ಬರುತ್ತಿರಲಿಲ್ಲವಲ್ಲ ಹಾಗೆ!

4 comments:

ಹರೀಶ ಮಾಂಬಾಡಿ said...

ನೀವು ಬ್ಲಾಗಿಸುತ್ತಿದ್ದರೆ ಚೆಂದ..
ದೊಡ್ದವರ ಎಲ್ಲಾ ಅನುಕರಣೆ ಬೇಡ...
ಸಾಮಾನ್ಯರೊಳಗೊಂದಾಗಿದ್ದರೆ
ಅದರ ಖುಶಿಯೇ ಬೇರೆ...

ವಿನಾಯಕ ಭಟ್ಟ said...

ಎಲ್ಲರೊಳಗೊಂದಾಗೋ ಮಂಕುತಿಮ್ಮ ಅಂತೀರಾ?
ಮಂಕುತಿಮ್ಮನಾಗಿರೋದ್ರಲ್ಲೂ ಸುಖಾ ಇದೆ ಬಿಡಿ.

KRISHNA said...

ಬರೆಯೋ ತಾಕತ್ ಇರೋರು ಬರೀತಾ ಇದ್ರೇನೆ ಚೆಂದ... ಅದಕ್ಕೆ ನೆವಗಳು ಯಾಕೆ...?

Unknown said...

please don't stop the blog... every one is waiting for u r articles...
please .. don't stop ... think it is my order also .... :-):-)
because i am the regular reader of u r articles of vijaya karnataka.... so i can order u.... :-) :-)