Friday, March 13, 2009

ಪ್ರಗತಿ ಪರರೇ ನೀವು ನಿಜವಾಗಿಯೂ ಪ್ರಗತಿ ಪರವೇ?


ಇಂತಹ ಮಾಹಿತಿ ಯುಗದಲ್ಲೂ ಇದೊಂದು ಸುದ್ದಿ ನಿಮ್ಮ ಕಣ್ತಪ್ಪಿಹೋಗಿರಬಹುದು!
ಯಾಕೆಂದರೆ ಮಂಗಳೂರಿನ ಪಬ್ ದಾಳಿಯನ್ನು ದೇಶವೊಂದರ ಮೇಲಿನ, ಇಡೀ ಮಹಿಳಾ ಸಮಾದ ಮೇಲೆ ನಡೆದ ದಾಳಿ ಎಂಬಂತೆ ಬಿಂಬಿಸಿದ, ವೆಲಂಟೈನ್ಸ್ ಡೇ ಆಚರಣೆಗೆ ಅಡ್ಡಿಪಡಿಸುವ ಶ್ರೀರಾಮ ಸೇನೆ ಹೇಳಿಕೆಯನ್ನು ಸ್ವಾತಂತ್ರ್ಯೋತ್ಸವಕ್ಕೆ ಅಡ್ಡಿಪಡಿಸಿದಷ್ಟು ಗಂಭೀರವಾಗಿ ಪಡಿಗಣಿಸಿದ ರಾಷ್ಟ್ರೀಯ ಮಾಧ್ಯಮಗಳು, ಈ ಸುದ್ದಿಯನ್ನು ಯಾವಾಗ ಪ್ರಕಟಿಸಿದವೊ ಗೊತ್ತಾಗಲೇ ಇಲ್ಲ.
೩ ವಾರದ ಹಿಂದೆ ಕೋಲ್ಕತ್ತ ನಗರದಲ್ಲಿ ದಾಂಧಲೆಗಳು ನಡೆದವು. ‘ದಿ ಸ್ಟೇಟ್ಸ್‌ಮೆನ್’ ಪತ್ರಿಕೆ ಸಂಪಾದಕ ರವೀಂದ್ರ ಕುಮಾರ್ ಹಾಗೂ ಪ್ರಕಾಶಕ ಆನಂದ ಸಿನ್ಹಾ ಅವರನ್ನು ಬಂಧಿಸಿದ ನಂತರವೇ ಗದ್ದಲ ತಣ್ಣಗಾಯಿತು. ಇದಕ್ಕೆ ಕಾರಣವಿಷ್ಟೆ. ‘ಇಂಡಿಪೆಂಡೆಂಟ್’ ಎಂಬ ಪತ್ರಿಕೆಯಲ್ಲಿ ಜೋಹಾನ್ ಹರಿ ಎಂಬವರು ಬರೆದ ಲೇಖನವನ್ನು ‘ದಿ ಸ್ಟೇಟ್ಸ್‌ಮೆನ್’ ಮರುಮುದ್ರಿಸಿತ್ತು. ಅದರಲ್ಲಿ ಇಸ್ಲಾಂ ಕುರಿತು ಟೀಕೆ ಇತ್ತು. ಅದೇ ಗಲಾಟೆಗೆ ಕಾರಣ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಆರೋಪದಲ್ಲಿ ಸಂಪಾದಕ ಮತ್ತು ಪ್ರಕಾಶನನ್ನು ಬಂಧಿಸಬೇಕು ಎಂಬ ಆಗ್ರಹವೇ ಗಲಾಟೆಗೆ ಮೂಲ.
ಜೋಹಾನ್ ಹತಿ ಬ್ರಿಟನ್‌ನ ಪ್ರಗತಿಪರ ಚಿಂತಕ, ಜಾತ್ಯಾತೀತವಾದಿ. ಆದರೆ ಡೋಂಗಿಯಲ್ಲ. ಈತ ಜಾತ್ಯತೀತ ನಿಲುವಿಗಾಗಿ ಪ್ರಶಸ್ತಿಯನ್ನೂ ಪಡೆದಿದ್ದಾನೆ ಎಂಬುದು ಗಮನಾರ್ಹ. ಹಿಂದೆ ಹಲವು ಬಾರಿ ಈತ ಇಸ್ಲಾಂ ಸಮರ್ಥಿಸಿ ಕೂಡ ಲೇಖನ ಬರೆದ ದಾಖಲೆಗಳಿವೆ. ಈತ ಇಂಡಿಪೆಂಡೆಂಟ್ ಎಂಬ ಪತ್ರಿಕೆಯಲ್ಲಿ ‘why should I respect opressive religions?’ (ದಬ್ಬಾಳಿಕೆ ನಡೆಸುವ ಧರ್ಮಗಳನ್ನು ನಾನ್ಯಾಕೆ ಗೌರವಿಸಲಿ?) ಎಂಬ ಹೆಡ್‌ಲೈನ್ ನೀಡಿ ಒಂದು ಲೇಖನ ಬರೆದಿದ್ದ. ಅದನ್ನು ‘ದಿ ಸ್ಟೇಟ್ಸ್‌ಮೆನ್’ ಯಥಾವತ್ತಾಗಿ ಪ್ರಕಟಿಸಿತ್ತು.
ಈ ಲೇಖನದಲ್ಲಿ ಮುಖ್ಯವಾಗಿ ವಾಕ್ ಮತ್ತು ಅಭಿವ್ಯಕ್ತಿ ಸಾತಂತ್ರ್ಯದ ಬಗ್ಗೆ ಜೊಹಾನ್ ಹರಿ ಪ್ರತಿಪಾದಿಸಿದ್ದ. ವಿಶ್ವಸಂಸ್ಥೆ ವಾಕ್ ಸ್ವಾತಂತ್ರ್ಯವನ್ನು ಪ್ರಮುಖವಾಗಿ ಪ್ರತಿಪಾದಿಸುತ್ತಿದೆ. ಆದರೆ ಕೆಲವು ಮುಸ್ಲಿಂ ರಾಷ್ಟ್ರಗಳು ಅದಕ್ಕೆ ತದ್ವಿರುದ್ಧವಾಗಿ ವರ್ತಿಸುತ್ತಿವೆ. ಅವು ಧರ್ಮ ಹಾಗೂ ಸ್ತ್ರೀ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ವಾಕ್ ಸ್ವಾತಂತ್ರ್ಯದ ಮೇಲೆ ನಿಯಂತ್ರಣ ಇರಬೇಕು. ಯಾಕೆಂದರೆ ಅದು ಇಸ್ಲಾಂನಲ್ಲಿ ಸಮ್ಮತವಲ್ಲ ಎಂದು ವಾದಿಸುತ್ತಿವೆ. (ಇತ್ತೀಚೆಗೆ ಸ್ವಾತ್ ಪ್ರದೇಶದಲ್ಲಿ ಇಸ್ಲಾಂನ ಶೆರಿಯತ್ ಕಾನೂನು ಜಾರಿ ಮಾಡಲು ಪಾಕಿಸ್ತಾನ ಸರಕಾರ ಸಮ್ಮತಿಸಿದ್ದನ್ನು ನೆನಪಿಸಿಕೊಳ್ಳಬಹುದು.)
‘ನೈಜೀರಿಯಾದಲ್ಲಿ ಗಂಡನಿಂದ ತಿರಸ್ಕೃತಳಾದ ಮಹಿಳೆಯನ್ನು ಮನೆಯಿಂದಲೇ ಹೊರಹಾಕಲಾಗುತ್ತದೆ. ಅವರ ಮಕ್ಕಳನ್ನು ನೋಡಲೂ ಅವಕಾಶ ಇಲ್ಲ. ಈ ಪದ್ಧತಿ ವಿರುದ್ಧ ಅನ್ಯಾಯಕ್ಕೊಳಗಾದ ಮಹಿಳೆಯರೆಲ್ಲ ಸೇರಿ ಪ್ರತಿಭಟಿಸಲು ನಿರ್ಧರಿಸಿದರೆ, ಅಲ್ಲಿನ ಪೊಲೀಸರು ಅದು ಇಸ್ಲಾಂಗೆ ವಿರುದ್ಧ ಎಂಬ ಕಾರಣ ನೀಡಿ ಪ್ರತಿಭಟನೆಗೆ ಅವಕಾಶ ನಿರಾಕರಿಸಿದರು. ಈ ಜಿಪ್ತ್‌ನಲ್ಲಿ ಶೆರಿಯತ್ ಕಾನೂನು ಜಾರಿ ಮಾಡದೆ, ಪರಿಷ್ಕೃತ ಇಸ್ಲಾಂ ಕಾನೂನು ಜಾರಿ ಮಾಡಬೇಕು ಎಂಬ ಅಭಿಪ್ರಾಯವನ್ನು ಬ್ಲಾಗ್‌ನಲ್ಲಿ ಪ್ರಕಟಿಸಿದ ಅಬ್ದುಲ್ ರೆಹಮಾನ್‌ನನ್ನು ಬಂಧಿಸಿ, ಬ್ಲಾಗ್ ಮುಚ್ಚಿಸಲಾಯಿತು. ಸೌದಿಯಲ್ಲಿ ವಯಸ್ಸಾದವನೊಬ್ಬ ೧೦ ವರ್ಷದ ಹುಡುಗಿಯನ್ನು ಮದುವೆಯಾಗಲು ಸಮ್ಮತಿಯಿದೆ.’
‘ಇಸ್ಲಾಂ ಸಂಸ್ಕೃತಿಯನ್ನು ಗೌರವಿಸಿ ಎಂದು ಬೊಬ್ಬೆ ಹೊಡೆಯುವ ಪ್ರಗತಿಪರರು, ಗೌರವಿಸಬೇಕಾದ್ದು ಮಹಿಳೆಯರನ್ನೊ? ಬ್ಲಾಗರ್‌ನನ್ನೊ? ಅಥವಾ ಇವರ ಸ್ವಾತಂತ್ರ್ಯ ಹತ್ತಿಕ್ಕುತ್ತಿರುವವರನ್ನೊ? ಎಂಬುದಕ್ಕೆ ಉತ್ತರಿಸಬೇಕು’ ಎಂಬುದು ಜೋಹಾನ್ ಹರಿಯ ಲೇಖನದ ಹೂರಣ. ಹೀಗೆ ಬರೆಯುತ್ತ ಆತ ‘೫೩ ವರ್ಷದವನಿದ್ದಾಗ ೯ ವರ್ಷದ ಬಾಲಕಿಯೊಂದಿಗೆ ಸಂಬಂಧ ಬೆಳೆಸಿದ, ತನ್ನ ಅನುಯಾಯಿಗಳಾಗಲಿಲ್ಲ ಎಂಬ ಕಾರಣಕ್ಕೆ ಇಡೀ ಗ್ರಾಮವೊಂದರ ಜನರನ್ನು ಕೊಲ್ಲುವಂತೆ ಆದೇಶಿಸಿದ ಪ್ರವಾದಿಯ ಮಾತನ್ನು ಅನುಸರಿಸಬೇಕು ಎಂಬ ಕಲ್ಪನೆಯನ್ನು ನಾನು ಗೌರವಿಸುದಿಲ್ಲ’ ಎಂದು ಬರೆದಿದ್ದಾನೆ.
ಇದೇ ವಿವಾದದ ಮೂಲ!
ಈ ವಾಕ್ಯದ ನಂತರ ‘ಜ್ಯೂಯಿಷ್‌ಗಳಿಗೆ ವೆಸ್ಟ್‌ಬ್ಯಾಂಕ್ ಹಸ್ತಾಂತರಿಸಬೇಕು ಮತ್ತು ಪ್ಯಾಲಿಸ್ತೇನಿಗಳನ್ನೆಲ್ಲ ಬಾಂಬ್ ಹಾಕಿ ಕೊಲ್ಲಬೇಕು ಎಂಬ ಭಾವನೆಯನ್ನೂ ಗೌರವಿಸುವುದಿಲ್ಲ. ಹಾಗೆಯೇ ಮಾನವ ಮೊದಲು ಕುರಿ, ಕೋತಿಯಾಗಿದ್ದ ಎಂಬ ನಂಬಿಕೆಯನ್ನೂ ಒಪ್ಪುವುದಿಲ್ಲ’ ಎಂದು ಜೋಹಾನ್ ಹರಿ ಬರೆದಿದ್ದು ಗದ್ದಲ ಮಾಡಿದವರಿಗೆ ಕಂಡಿಲ್ಲ.
ವಿಶ್ವದಲ್ಲಿ ಧರ್ಮಗಳನ್ನು ಟೀಕಿಸಿ ಪ್ರಕಟವಾದ ಪುಸ್ತಕಗಳಿಗೆ ಕೊರತೆಯಿಲ್ಲ. ಇತ್ತೀಚೆಗೆ ಕೇರಳದ ಸನ್ಯಾಸಿನಿಯೊಬ್ಬಳು ‘’ಅಮೆನ್- ಎ ಆಟೊಬಯಾಗ್ರಫಿ ಆಫ್ ನನ್’ ಎಂಬ ಆತ್ಮಚರಿತ್ರೆ ಬರೆದಿದ್ದಾಳೆ.ಅದರಲ್ಲಿ ಸನ್ಯಾಸಿನಿಯರ ಸಲಿಂಗ ಕಾಮ, ಫಾದರ್‌ಗಳ ಲೈಂಗಿಕ ಕಿರುಕುಳದ ಬಗ್ಗೆಲ್ಲ ತನ್ನ ೩೦ ವರ್ಷದ ಅನುಭವ ದಾಖಲಿಸಿದ್ದಾಳೆ. ಸಾಕಷ್ಟು ವಿವಾದ್ಕಕೀಡಾದ ‘ದ ವಿನ್ಸಿಕೋಡ್’ ನಿಮಗೆ ನೆನಪಿರಬಹುದು. ಯಾವುದೇ ವ್ಯಕ್ತಿ ‘ಮಹಾಭಾರತ’ದಲ್ಲಿ ದ್ರೌಪದಿ ಐವರ ಹೆಂಡತಿಯಾಗಿದ್ದಳು ಎಂದೊ, ಕೃಷ್ಣನ ರಾಸಲೀಲೆಗಳು, ಆತ ಗೋಪಿಕೆಯರ ಬಟ್ಟೆ ಕದ್ದದ್ದು, ಸೀತೆಯ ಅಗ್ನಿ ಪರೀಕ್ಷೆ ಮುಂತಾದವುಗಳನ್ನು ಟೀಕಿಸಿ ಬರೆದರೆ ಇಡೀ ಹಿಂದೂ ಸಮಾಜ ಸಿಡಿದೆದ್ದು ಪ್ರತಿಭಟಿಸುತ್ತದೆ ಎಂದು ನನಗನ್ನಿಸುವುದಿಲ್ಲ. ಎಲ್ಲೋ ಕೆಲವು ಸಂಘಟನೆಗಳು ಪ್ರತಿಭಟಿಸಬಹುದು. ಅಷ್ಟೆ. ಆದರೆ ಹೆಚ್ಚಿನವರು ಟೀಕೆಯನ್ನು ಒಪ್ಪಿಕೊಳ್ಳುತ್ತಾರೆ. ಇತ್ತೀಚೆಗೆ ಇಂಗ್ಲೀಷ್ ಪತ್ರಿಕೆಯೊಂದರಲ್ಲಿ ‘ಸೀತೆಯೂ ಮದ್ಯಪಾನ ಮಾಡುತ್ತಿದ್ದಳು’ ಎಂಬ ಲೇಖನ ಪ್ರಕಟವಾಯಿತು.
ಒಂದೇಒಂದು ಪ್ರತಿಭಟನೆಯೂ ನಡೆಯಲಿಲ್ಲ!!
ಆದರೆ ಪ್ರವಾದಿಯ ಬಗ್ಗೆ, ಇಸ್ಲಾಂ ಬಗ್ಗೆ ಟೀಕಿಸುವುದು ಬಿಡಿ ಒಂದು ಕಾರ್ಟೂನು, ಒಂದು ವಾಕ್ಯ ಬರೆದರೂ ಸಾಕು ದೊಡ್ಡ ಗಲಾಟೆಗಳಾಗುತ್ತವೆ. ಹಿಂದೊಮ್ಮೆ ವಿದೇಶದಲ್ಲೆಲ್ಲೊ ಪ್ರವಾದಿಯ ಕಾರ್ಟೂನ್ ಪ್ರಕಟಿಸಿದ್ದಕ್ಕೆ ಭಾರತದಲ್ಲಿ ಪ್ರತಿಭಟನೆ, ಗಲಾಟೆಗಳು ನಡೆದಿದ್ದವು. ಡ್ಯಾನಿಷ್ ಕಾರ್ಟೂನ್‌ಗಾಗಿ ಕ್ಷಮೆ ಕೇಳಿ ಇಲ್ಲವೇ ಆತನ ತಲೆದಂಡಕ್ಕಾಗಿ ಬಹುಮಾನ ಘೋಷಣೆ ಮಾಡುತ್ತೇವೆ ಎಂಬ ಘೋಷಣೆ ಹೊರಬಿತ್ತು. ಕರ್ನಾಟಕದ್ದೇ ಪತ್ರಿಕೆಗೆ ಹಿಂದೆ ಇಂಥದ್ದೇ ಅನುಭವವಾಗಿದೆ. ಲೇಖಕಿ ತಸ್ಲೀಮಾ ನ್ರೀನ್‌ಗೆ ಭಾರತದಲ್ಲಿ ಯಾವ ಸ್ಥಿತಿ ನಿರ್ಮಾಣ ಮಾಡಿದರು ಎಂಬುದು ನಿಮಗೆ ಗೊತ್ತೇ ಇದೆ. ಜಾತ್ಯತೀತ ಎಂದು ಹೇಳಿಕೊಳ್ಳುವ ಭಾರತದಲ್ಲಿರುವ ಕೋಲ್ಕತ್ತಾದಿಂದಲೇ ಅವಳ್ನನು ಹೊರಗಟ್ಟಲಾಯಿತು. ಸಲ್ಮಾನ್ ರಶ್ದಿಗೆ ಕೊಲೆ ಬೆದರಿಕೆ ಹಾಕಲಾಗಿತ್ತು.
ಶಾರದೆಯನ್ನು ಬೆತ್ತಲೆಯಾಗಿ ಚಿತ್ರಿಸಿದ ಎಂ.ಎಫ್. ಹುಸೇನ್ ಮೇಲೆ ದಾಳಿಗಳು ನಡೆದಾಗ ಅದನ್ನು ಪ್ರಗತಿಪರರು ವಿರೋಧಿಸಿದರು. ಆ ಪ್ರಗತಿಪರರೆಲ್ಲ ಇಂತಹ ಘಟನೆಗಳನ್ನೂ ಯಾಕೆ ವಿರೋಧಿಸುವುದಿಲ್ಲ? ಈಗ ಯಾಕೆ ‘ದಿ ಸ್ಟೇಟ್ಸ್‌ಮೆನ್’ ಪತ್ರಿಕೆ ಸಂಪಾದಕ ಹಾಗ ಲೇಖಕ ಜೋಹಾನ್ ಹರಿ ಪರವಾಗಿ ಯಾಕೆ ಮಾತನಾಡುವುದಿಲ್ಲ. ಅವರ ವಿರುದ್ಧ ಹಿಂಸೆಗಿಳಿದವರನ್ನು ಯಾಕೆ ಖಂಡಿಸುವುದಿಲ್ಲ?ತನಗೆ ಇಷ್ಟಬಂದಂತೆ ಚಿತ್ರ ರಚಿಸುವುದು ಕಲಾವಿದನ ಹಕ್ಕು. ಅದನ್ನು ಒಪ್ಪದವರು ಚಿತ್ರ ನೋಡದಿದ್ದರಾಯಿತು ಎಂಬುದು ಹುಸೇನ್ ಮೇಲಿನ ಹಲ್ಲೆ ವಿರೋಧಿಸುವವರ ವಾದ. ಸರಿ ಒಪ್ಪಿಕೊಳ್ಳೋಣ. ಅಕಸ್ಮಾತ್ ಹುಸೇನ್ ಅವರೇ ಪ್ರವಾದಿಯ ಅಶ್ಲೀಲ ಚಿತ್ರ ಬೇಡ ಸಾದಾ ಚಿತ್ರ ಬಿಡಿಸಿದ್ದರೆ? ದೊಡ್ಡ ಗದ್ದಲವೇ ಆಗುತ್ತಿತ್ತೇನೊ. ಆಗ ಪ್ರಗತಿಪರರು ‘ಇಸ್ಲಾಂನಲ್ಲಿ ಪ್ರವಾದಿಯ ಯಾವುದೇ ಬಗೆಯ ಚಿತ್ರೀಕರಣ ಮಾನ್ಯವಲ್ಲ. ಆದ್ದರಿಂದ ಅವರು ಮಹಾಪರಾಧ ಮಾಡಿದ್ದಾರೆ’ ಎಂದು ಚಿತ್ರ ಬಿಡಿಸಿದವರನ್ನೇ ಖಂಡಿಸುತ್ತಿದ್ದರು. ಮುಸ್ಲಿಮರ ಪ್ರಕಾರ ಪ್ರವಾದಿಯ ಚಿತ್ರೀಕರಣ ನಿಷಿದ್ಧ. ಆದರೆ ಬೇರೆ ಧರ್ಮದವರೂ ಅವರ ನಿಯಮಗಳಿಗೆ ಬದ್ಧರೆ? ಮುಸ್ಲಿಮರು ಖುರಾನ್‌ಗೆ, ಮುಲ್ಲಾಗರಳ ಆದೇಶಕ್ಕೆ ಬದ್ಧರಾಗಿರಬೇಕು. ಆ ವಿಷಯದಲ್ಲಿ ವಾಕ್ ಸ್ವಾತಂತ್ರ್ಯ ಹೊಂದಿರಬಾರದು. ಆದರೆ ಬೇರೆ ಧರ್ಮದವರೂ ಅದನ್ನು ಪಾಲಿಸಬೇಕೆಂದೇನೂ ಇಲ್ಲವಲ್ಲ. ಎಂ.ಎಫ್. ಹುಸೇನ್ ಕಲಾಕಾರನ ಕಲ್ಪನೆಯಿಂದ ಶಾರದೆಯನ್ನು ಕಲ್ಪಿಸಿದರೊ, ಹಾಗೆಯೇ ಬೇರೊಬ್ಬ ಕಲಾಕಾರನ ದೃಷ್ಟಿಗೆ ಪ್ರವಾದಿ ಕೂಡ ಹಾಗೆಯೇ ಕಾಣಬಹುದು. ಆಗ?
ಶಾರದೆಯ ಚಿತ್ರವನ್ನು ಅಭಿವ್ಯಕ್ತಿ ಸ್ವಾತಂತ್ರ್ಯವೆಂದು ಸಹಿಸಿಕೊಳ್ಳಿ ಎನ್ನುವವರು ಇನ್ನೊಬ್ಬ ಕಲಾಕಾರ ಬಿಡಿಸಿದ ಪ್ರವಾದಿಯ ಚಿತ್ರವನ್ನು ಸಹಿಸಿಕೊಳ್ಳಲೂ ಸಿದ್ಧರಿರಬೇಕಲ್ಲವೆ? ಈ ಪಗ್ರತಿಪರರು ವಾಕ್ ಮತ್ತು ಅಭಿವ್ಯಕಿ ಸ್ವಾತಂತ್ರ್ಯವನ್ನು ಬೆಂಬಲಿಸುತ್ತಾರೆ. ಆದರೆ ದುರಭಿಮಾನಿಗಳೂ, ಅಂಧಾಭಿಮಾನಿಗಳು ವಿರೋಧಿಸುವ ವಿಷಯದ ಬಗ್ಗೆ ಮಾತನಾಡಿದರೆ, ಆಗ ಸರೀ ವಿರುದ್ಧ ನಿಲುವು ತಾಳುತ್ತಾರೆ. ಗಲಾಟೆಗೆ ಪ್ರಚೋದಿಸಿದ್ದೇ ಹಿಂಸೆಗೆ ಮೂಲ ಕಾರಣ ಎಂದು ದೂರುತ್ತಾರೆ. ಇದೇ ಜನರ ಬಳಿ ‘ಕರಾವಳಿಯಲ್ಲಿ ಅಕ್ರಮ ದನ ಸಾಗಾಟವೇ ಕೋಮು ಗಲಭೆಗೆ ಮೂಲ ಕಾರಣ’ ಎಂದು ಹೇಳಿನೋಡಿ. ಆಗ ಅವರು ‘ಇಲ್ಲಾ ಅದನ್ನು ಬಜರಂಗದಳದವರು ತಡೆದು ತಾವೇ ಪೊಲೀಸರಾಗ ಹೊರಟಿರುವುದೇ ಗಲಭೆಗೆ ಕಾರಣ’ ಅನ್ನುತ್ತಾರೆ.
ರಾಮಜನ್ಮಭೂಮಿ ಸಮಸ್ಯೆಯನ್ನೇ ನೋಡಿ. ಅಲ್ಲಿ ರಾಮ ಮಂದಿರ ನಿರ್ಮಿಸಲು ಯತ್ನಿಸುವ ಮೂಲಕ ಮುಸ್ಲಿಮರನ್ನು ಪ್ರಚೋದಿಸುವ ಕೆಲಸ ನಡೆಯುತ್ತಿದೆ. ಅದಕ್ಕಾಗಿ ಯಾವನಾದರೂ ಒಬ್ಬ ಬುದ್ದಿಜೀವಿ ‘ನೋಡಿ ರಾಮಜನ್ಮಭೂಮಿ ನಿಷ್ಪ್ರಯೋಜಕ ಎಂಬುದು ನನಗೂ ಗೊತ್ತು. ಆದರೇನು ಮಾಡುವುದು ಈ ವಿವಾದದಿಂದ ಬಿಜೆಪಿಗೆ ಲಾಭವಾಗುತ್ತದೆ. ದಿನದಿಂದ ದಿನಕ್ಕೆ ಅದರ ಜನಪ್ರಿಯತೆ ಹೆಚ್ಚುತ್ತಿದೆ. ಅದರ ಬದಲು ರಾಮಂದಿರ ನಿರ್ಮಾಣಕ್ಕೆ ಅವಕಾಶ ಮಾಡಿಕೊಡೋಣ. ಆ ಮೂಲಕ ನಾವು ಕೋಮು ಸಮಾರಸ್ಯಕ್ಕೆ ಮೊದಲ ಹೆಜ್ಜೆ ಇಡೋಣ. ಬಿಜೆಪಿಗೆ ಪ್ರಚಾರ ಪಡೆಯಲೂ ಅವಕಾಶ ಇಲ್ಲದಂತಾಗುತ್ತದೆ. ಹೇಗೂ ಬಾಬರಿ ಮಸೀದಿ ನಮಾಜ್‌ಗೆ ಬಳಕೆಯಾಗುತ್ತಿಲ್ಲ’ ಎಂದುಬಿಟ್ಟರೆ. ಹೀಗೆ ಯಾವನಾದರೂ ಹೇಳಿದರೆ ಅಂತ ನಾನು ಬರೆದಿದ್ದಕ್ಕೇ ವಿಚಾರವಾದಿಗಳು ಸಿಟ್ಟಿಗೇಳುವ ಸಾದ್ಯತೆಯಿದೆ.
ಮಂಗಳೂರು ಪಬ್ ದಾಳಿಗೆ ರಾಷ್ಟ್ರೀಯ ಮಾಧ್ಯಮಗಳು ಎಷ್ಟೆಲ್ಲ ಪ್ರಚಾರ ನೀಡಿದವುಎಂಬುದು ನಿಮಗೆ ಗೊತ್ತೇ ಇದೆ. ಆಗ ಕೇಂದ್ರ ಮಹಿಳಾ ಆಯೋಗದಿಂದ ತನಿಖೆಗೆ ಆಗಮಿಸಿ ಸಮಿತಿಯ ನೇತೃತ್ವ ವಹಿಸಿದ್ದ ನಿರ್ಮಲಾ ವೆಂಕಟೇಶ್ ಅವರನ್ನು ಅದೇ ಮಾಧ್ಯಮಗಳು ದಿನಾ ತೋರಿಸಿದವು. ಆದರೆ ಅದೇ ನಿರ್ಮಲಾ ವೆಂಕಟೇಶ್ ಅವರ ಸಮಿತಿ ನೀಡಿದ ವರದಿಯನ್ನು ಕೇಂದ್ರ ಸರಕಾರ ತಿರಸ್ಕರಿಸಿತು. ತನಗೆ ಬೇಕಾದಂತೆ ವರದಿ ನೀಡಲಿಲ್ಲ ಎಂಬ ಕಾರಣಕ್ಕೆ, ನಿರ್ಮಲಾ ವೆಂಕಟೇಶ್ ಅವರು ರಾಜೀನಾಮೆ ಸಲ್ಲಿಸಿದ್ದರೂ, ಅವರನ್ನು ವಜಾ ಮಾಡಿ ಆದೇಶ ಹೊರಡಿಸಿತು. ಇದು ಮಹಿಳೆಯರ ಮೇಲಿನ ದೌರ್ಜನ್ಯವಲ್ಲವೇ? ಪಬ್‌ನಲ್ಲಿ ದಾಳಿಗೊಳಗಾದ ಮಗಿಳೆಯರ ಪರ ವಕಾಲತ್ತು ವಹಿಸಿದ ಮಾಧ್ಯಮಗಳು, ಮಹಿಳಾ ಪರ ಹೋರಾಟಗಾರರೆಲ್ಲ ಸ್ಥಾನ ಕಳೆದುಕೊಂಡ ನಿರ್ಮಲಾ ವೆಂಕಟೇಶ್ ಪರ ಯಾಕೆ ನಿಲ್ಲಲಿಲ್ಲ? ನಿರ್ಮಲಾ ವೆಂಕಟೇಶ್ ಅವರನ್ನು ವಜಾ ಮಾಡಿದ್ದು ಅನಗತ್ಯ ಎಂದು ಯಾಕೆ ವಾದಿಸಲಿಲ್ಲ?
ಪ್ರಗತಿಪರರೇ ಯಾಕೀ ದ್ವಿಮುಖ ನೀತಿ? ಜಾತ್ಯತೀತ ಸಮಾಜಕ್ಕೆ ಇದು ತಕ್ಕುದಲ್ಲ. ಪ್ರಗತಿಪರರ ನಿಲುವು ಸರಿಯಾಗಿರಬೇಕು. ಎಲ್ಲ ವಿಷಯದಲ್ಲೂ ಸಮನಾದ, ಜಾತ್ಯತೀತ, ವಿಷಯ ನಿಷ್ಟ ನಿಲುವು ವ್ಯಕ್ತಪಡಿಸಬೇಕು. ಪ್ರಗತಿಪರರ ನಿಲುವುಗಳೂ ಧರ್ಮ, ಜಾತಿ ಅವಲಂಬಿಸುವಂತಾದರೆ ‘ಜಾತ್ಯತೀತ’ ಎಂಬ ಶಬ್ದಕ್ಕೆ ಅರ್ಥವಿರುವುದಿಲ್ಲ. ಪ್ರಗತಿಪರರು ಹೆಸರಿಗೆ ಮಾತ್ರ ಪ್ರಗತಿಪರರಾಗಿರುತ್ತಾರೆ. ಆಗ ‘ಪ್ರಗತಿಪರರೇ ನೀವು ನಿಜವಾಗಿಯೂ ಪ್ರಗತಿಪರವೇ’ ಎಂಬ ಅನುಮಾನ ಮೂಡುತ್ತದೆ.

10 comments:

Anonymous said...

ಒಂದು ಸಂಪೂರ್ಣ ವಿಚಾರಶೀಲ ಲೇಖನ. ಮಿಥ್ಯಾ ಜಾತ್ಯಾತೀತತೆ ಬಗ್ಗೆ ಚೆನ್ನಾಗಿ ಹೇಳಿದ್ದೀರ ವಿನಾಯಕರವರೇ.

ವಿಚಾರವಂತಿಕೆ, ವಿಚಾರಪರತೆ, ವಿಚಾರಶೀಲತೆ, ವಿಚಾರವಾದ ಇವೆಲ್ಲವುಗಳಿಗೆ ಮಾನದಂಡವೇನು. ಒಂದು ನಿಷ್ಕಪಟ ಚರ್ಚೆಯಾಗಬೇಕು. ಪ್ರಶ್ನಿಸುವುದು ಅಪರಾಧವೇ? ಅಥವಾ ಸಮರ್ಥನೆಯೇ ಜೀವನವೇ? ಇದು ಮೂಲಭೂತ ಪ್ರಶ್ನೆ.

ಪ್ರಜ್ನಾವಂತ ಸಮಾಜ ಯಾವ ದಿಕ್ಕುಗಳಿಗೂ ನೋಡದೆ, ಅತಿಯಾಗಿ ಯಾವ ವಾದವನ್ನೂ ಓದದೇ, ಮರು ವಿಮರ್ಶೆಗೆ ಒಳಗಾಗಬೇಕು.

sunaath said...

ನಮ್ಮಲ್ಲಿಯ ಬುದ್ಧಿಜೀವಿಗಳು, ತಮ್ಮ ಸ್ವಾರ್ಥಕ್ಕೋಸ್ಕರ
double standard ಅನುಸರಿಸುತ್ತಿದ್ದಾರೆ. ಹೀಗೆ ಮಾಡುವದರಿಂದ ಭಾರತವನ್ನು ವಿನಾಶದತ್ತ ತಳ್ಳುತ್ತಿದ್ದೇವೆ ಎನ್ನುವ ಎಚ್ಚರ ಅವರಿಗಿಲ್ಲ!

ಸಿಂಧು ಭಟ್. said...

ಸೀರಿಯಸ್ ಲೇಖನ ಜನ ಓದೋದು ಕಷ್ಟ,TRP ಕಡಿಮೆ...

ಮಿಥುನ ಕೊಡೆತ್ತೂರು said...

ತಿಂಗಳಿಗೊಮ್ಮೆ ಬರೆದರೆ ಮಾತ್ರ ಟಿಆರ್ ಪಿ ಕಡಿಮೆ ಯಾಗೋದು!
ವಕ್ರದಂತನ ಬರೆವಣಿಗೆ ಯಾವತ್ತಿಗೂ ಸೊಗಸಾಗಿಯೇ ಇರುತ್ತದೆ. ಆದರೇನು ಮಾಡೋಡು, ಮೊದಲಿನಷ್ಟು ವೇಗವಾಗಿ ಹೊಸ ಬರೆಹಗಳು ಬರುತ್ತಿಲ್ಲ ಅಷ್ಟೆ!

ಸಿಂಧು ಭಟ್. said...

ವಕ್ರದಂತನ ಬರೆವಣಿಗೆ ಯಾವತ್ತಿಗೂ ಸೊಗಸೆ. ಅದರ ಬಗ್ಗೆ ಮಾತಿಲ್ಲ.ಆದರೆ ಅವರ ಸಿಲ್ಲಿ ಪಾಯಿಂಟ್ ಕಾಲಂ ನೆನಪಿಗೆ ತರುವ, ಪತ್ರಿಕೆಗಳಲ್ಲಿ ಪ್ರಕಟ ಅಸಾಧ್ಯವಾದ ತಮಾಶೆಯ ಲೇಖನವನ್ನು ಬ್ಲಾಗ್ ನಲ್ಲೇ ಓದಬೇಕಷ್ಟೇ. ಅವರ ಬ್ಲಾಗ್ ನ್ನೇ ಗಮನಿಸಿದರೆ ಅರ್ಥವಾಗುತ್ತದೆ. ಎಂತಹ ಬರವಣಿಗೆಗೆ ಹೆಚ್ಚಿನ ಕಾಮೆಂಟ್ ಗಳು ಬಂದಿವೆಯೆಂದು.

Anonymous said...

wonderful. intha lekhana ella 'avadhi' kannige yaake beelalla??

ವಿನಾಯಕ ಭಟ್ಟ said...

ನಿಮ್ಮ ಹೆಸರಿಗೆ ತಕ್ಕಂತೆ ಲೈನುಗಳು ಪಂಚ್ ನೀಡಿವೆ.
ತಿಂಗಳಿಗೊಮ್ಮೆ ಬರೆದರೆ ಮಾತ್ರ ಟಿಆರ್ ಪಿ ಕಡಿಮೆಯಾಗೋದು ಎಂಬುದು ಮಿಥುನನ ತಕರಾರು.
ಹಾಗೆಯೇ ದಿನಕ್ಕೊಂದು ಹಾಕಿದರೂ ಟಿಆರ್ ಪಿ ಕಡಿಮೆಯೇ. ಯಾಕೆಂದರೆ ಬ್ಲಾಗ್ ನಲ್ಲಿ ಸಾಮಾನ್ಯವಾಗಿ ಹೆಚ್ಚಿನವರು ಮೊದಲ ಲೇಖನ ಮಾತ್ರ ಓದುತ್ತಾರೆ. ಹಾಗಾಗಿ ನಾನು ಉದ್ದೇಶ ಪೂರ್ವಕವಾಗಿಯೇ ಸ್ವಲ್ಪ ತಡವಾಗಿ ಬ್ಲಾಗಿಸುತ್ತೇನೆ.
ಅನಾಮಿಕರೇ ನಿಮ್ಮಂಥ ಓದುಗರೇ ನನಗೆ ಸಾಕು. ದೊಡ್ಡ ಜನ ನನ್ನನ್ನು ಗುರುತಿಸಲಿ ಎಂಬ ಆಸೆ ನನಗಿಲ್ಲ. ನನಗೆ ನನ್ನದೇ ಬ್ಲಾಗಿದೆ. ನಿಮ್ಮಂಥ ಓದುಗರಿದ್ದಾರೆ. ಸಾಕು.

prasca said...

ವಿನಾಯಕರೆ ನಮಸ್ಕಾರ,
ನಿಮ್ಮ ಲೇಖನ ಚಾಟಿ ಏಟಿನಂತಿದೆ. ನಿಮ್ಮಲ್ಲೊಂದು ಮನವಿ. ನಿಮ್ಮ ಈ ಲೇಖನವನ್ನು ಸಂಪದ.ನೆಟ್ ನಲ್ಲಿ ನೀವೇ ಹಾಕಿ. ನಿಮಗೆ ವಯಕ್ತಿಕವಾಗಿ ಅಲ್ಲಿ ಹಾಕಲು ಇಷ್ಟವಿಲ್ಲದಿದ್ದರೆ ನಾನು ಇಲ್ಲಿಂದ ಕಾಪಿ ಮಾಡಿ ಹಾಕುವುದಕ್ಕೆ ಅನುಮತಿಯನ್ನಾದರೂ ಕೊಡಿ. ಏಕೆಂದರೆ ಅಲ್ಲಿ ಕೆಲವು ಬುದ್ದಿಜೀವಿ ಜಾತ್ಯಾತೀತ ಪ್ರಗತಿಪರರು ಸೇರಿಕೊಂದಿದ್ದಾರೆ.
ನನ್ನ ಇ ಮೈಲ್ prasannakannadiga[at]yahoo [DOT] co [DOT] in

ವಿನಾಯಕ ಭಟ್ಟ said...

ಲೇಖನವೆಂದರೆ ಯಾವಾಗಲೂ ಕರ್ಣನ ಹಾಗೆ ಮತ್ತು ಲೇಖಕ ಸೀತೆಯ ಹಾಗೆ ಇರಬೇಕಂತೆ. ಸೀತೆ ಹೇಗೆ ಕರ್ಣನನ್ನು ನದಿಯಲ್ಲಿ ತೇಲಿಬಿಟ್ಟಳಲ್ಲಾ ಹಾಗೆ ನಾವು ಬರೆದು ಅದನ್ನು ತೇಲಿಬಿಟ್ಟುಬಿಡಬೇಕು. ಅದರ ಬಗ್ಗೆ ಚಿಂತೆ ಮಾಡಬಾರದು. ಅದರಲ್ಲಿ ಸತ್ವವಿದ್ದರೆ ಬದುಕಿಕೊಳ್ಳುತ್ತದೆ. ಇಲ್ಲವಾದಲ್ಲಿ ಸಾಯುತ್ತದೆ.
ನನ್ನ ಲೇಖನವನ್ನು ನೀವು ಕಾಪಿ ಮಾಡಿ ಬಳಸುವುದಕ್ಕೆ ನನ್ನ ಅಭ್ಯಂತರವಿಲ್ಲ.

gooooold said...

swami battare,karnanannu nirinalli theli bittidduSITHE alla Kunthi