Thursday, March 27, 2008

ಬಯಸದೇ ಬಂದ ಭಾಗ್ಯ!

ಇದು ಹಳೆಯ ಕನ್ನಡ ಸಿನಿಮಾ ಹೆಸರು. ಈಗ ಯಾಕೋ ನನಗೆ ಮತ್ತೆ ಮತ್ತೆ ನೆನಪಾಗುತ್ತಿದೆ. ನನಗಾಗೇ ಹೇಳಿದ್ದೇನೋ ಅನ್ನಿಸ್ತಿದೆ. ಕಾರಣ ನನಗೆ ಬಯಸದೇ ಕೆಲವು ಭಾಗ್ಯಗಳು ಒಲಿದುಬಂದಿವೆ. ಅದ್ಯಾರೋ ದೊಡ್ಡವರು ಕನಸು ಕಾಣುವುದು ಕಲಿಯಿರಿ. ನಂತರ ಅದನ್ನು ನನಸು ಮಾಡಲು ಯತ್ನಿಸಿ ಎಂದಿದ್ದಾರಂತೆ. ಆದರೆ ಕಂಡ ಕನಸು ಪ್ರಯತ್ನವಿಲ್ಲದೇ ನನಸಾದಾಗ ಅದನ್ನು ಬಯಸದೇ ಬಂದ ಭಾಗ್ಯ ಅನ್ನಬಹುದೇನೊ.
ಅದೊಂದು ದಿನ ಮಧ್ಯಾಹ್ನದ ಹೊತ್ತಿಗೆ ಕಚೇರಿಯಿಂದ ಕೃಷ್ಣ ಭಟ್ಟರು ಫೋನ್ ಮಾಡಿ "ಭಟ್ರೆ ಹೊಸ ವರುಷಕ್ಕೆ ನಿಮ್ಮ ಕನಸೇನು?' ಅಂದರು. ನಿಜಕ್ಕೂ ನಾನು ಯಾವ ಕನಸೂ ಕಂಡಿರಲೇ ಇಲ್ಲ. ಸಾಪ್ತಾಹಿಕಕ್ಕೆ ಕೇಳ್ತಿದಾರೆ ಅಂದರು. ತಕ್ಷಣಕ್ಕೆ ಮನಸ್ಸಿಗೆ ಅನ್ನಿಸಿದ್ದು ಬರೆದುಕೊಟ್ಟೆ. ಅದು ಪ್ರಕಟವೂ ಆಯ್ತು.
ನಾನೋ ಕಂಡ ಅಥವಾ ಹೇಳಿಕೊಂಡ ಕನಸು ನನಸು ಮಾಡಲು ಒಂಚೂರು ಯತ್ನಿಸಿರಲಿಲ್ಲ. ಅಷ್ಟರಲ್ಲಿ ಒಂದು ದಿನ ಆರ್ ಟಿಒ ಇನ್ಸ್ಪೆಕ್ಟರ್ ಕೇಶವ ಧರಣಿ ಸಿಕ್ಕಿದವರು "ನೀವು ಅವತ್ತು ಅಪಘಾತಗಳ ಬಗ್ಗೆ ಸರಣಿ ಲೇಖನ ಬರೆದಿದ್ದಿರಲ್ಲ. ಕೆಲವು ನನ್ನಲ್ಲಿವೆ. ಎಲ್ಲವೂ ಇದ್ದರೆ ಕೊಡಿ. ಈ ಬಾರಿಯ ರಸ್ತೆ ಸುರಕ್ಷತಾ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಪುಸ್ತಕ ಮಾಡಿ ಬಿಡುಗಡೆ ಮಾಡುವ. ಲೇಖನಗಳು ತುಂಬಾ ಚೆನ್ನಾಗಿದ್ದವು' ಅಂದರು. ಹುಂ. ಅಂದೆ. ಹಾಗಂದ ತಪ್ಪಿಗೆ ಹಳೆಯ ಲೇಖನಗಳನ್ನೆಲ್ಲ ಸ್ವಲ್ಪ ತಿದ್ದಿ, ಅಪ್ ಗ್ರೇಡ್ ಮಾಡಿ ಕೊಟ್ಟೆ. ಪುಸ್ತಕವಾಗಿ ಬಿಡುಗಡೆಯೂ ನಡೆದುಹೋಯಿತು. ಸರಿಯಾಗಿ ನನಗೂ ಗೊತ್ತಾಗದೆ!
ಇವತ್ತು ಗೋಪಾಲಕೃಷ್ಣ ಕುಂಟಿನಿ ಫೋನ್ ಮಾಡಿ "ಭಟ್ರೆ ನಿಮ್ಮ ಬ್ಲಾಗಿನ ಬಗ್ಗೆ ಕೆಂಡಸಂಪಿಗೆ ಡಾಟ್ ಕಾಂನಲ್ಲಿ ಚೆನ್ನಾಗಿ ಬರೆದಿದ್ದಾರೆ' ಅಂದರು. ನೋಡಿದರೆ ಹೌದು. ಏನೋ ನಮ್ಮ ತೆವಲಿಗೆ ಪುರುಸೊತ್ತಾದಾಗ ಬರೆದು ಬ್ಲಾಗಿಸುತ್ತೇವೆ. ಪಾಪ ನಾಲ್ಕೈದು ಜನ ಓದಿ ಕಾಮೆಂಟಿಸ್ತಾರೆ ಅಂದ್ಕೊಡಿದ್ದೆ. ಆದರೆ ಈ ಅನಿರೀಕ್ಷಿತ ಹೊಗಳಿಕೆ ಬಂದಿದೆ. ಕೆಂಡಸಂಪಿಗೆ ಡಾಟ್ ಕಾಂ ಮಾಲಿಕರಿಗೆ ನಾನು ಋಣಿ. ನನ್ನ ಬ್ಲಾಗಿನ ಬಗ್ಗೆ ಬರೆದಿದ್ದಕ್ಕೆ, ನನ್ನನ್ನು ಹುರಿದುಂಬಿಸಿದ್ದಕ್ಕೆ.
ಅವರು ನನ್ನ ಬ್ಲಾಗಿನ ಮೇಲೆ ಅಷ್ಟು ಬರೆದ ಮೇಲೂ ನಾನು ತುಂಬ ದಿನ ಬ್ಲಾಗು ಅಪ್ ಡೇಟ್ ಮಾಡದಿದ್ದರೆ ಹೇಗೆ? ಅನ್ನಿಸಿ ಭಾರೀ ಹುರುಪಿನಲ್ಲಿ ಕುಂತ ಮೆಟ್ಟಿನಲ್ಲಿ 3 ಲೇಖನ ಬರೆದು ಹಾಕಿದ್ದೇನೆ. ಓದಿಕೊಳ್ಳುವ ಇಷ್ಟ-ಕಷ್ಟ ನಿಮಗಿರಲಿ.

No comments: