Tuesday, May 01, 2007

ಹೀಗೂ ಒಂದು ಶಿಕ್ಷೆ...!

ಪೊಲೀಸ್ ಇಲಾಖೆಯಲ್ಲಿ ತಪ್ಪಿಗೊಂದು ಶಿಕ್ಷೆ ಗ್ಯಾರಂಟಿ. ಹೆಚ್ಚಾಗಿ ವರ್ಗಾವಣೆ, ಅಮಾನತು ಸಾರ್ವಜನಿಕರಿಗೆ ಕಾಣುವ ಶಿಕ್ಷೆ. ಪೊಲೀಸ್ ಅಧಿಕಾರಿಗಳನ್ನು ಕಚೇರಿ ಒಳಗಿನ ಕೆಲಸಕ್ಕೆ ಸೀಮಿತಗೊಳಿಸುವುದು ಅಥವಾ ಸಾರ್ವಜನಿಕ ಕರ್ತವ್ಯಕ್ಕೆ ನೇಮಿಸದಿರುವುದೂ ಇಲಾಖೆಯ ಶಿಕ್ಷಾ ನೀತಿಯಲ್ಲೊಂದು. ಆದರೆ ಇಲ್ಲಿ ಹೇಳುತ್ತಿರುವ ಶಿಕ್ಷೆ ಒಂಥರಾ ವಿಶಿಷ್ಟ ಮತ್ತು ವಿಚಿತ್ರ. ಸುಮ್ಮನೆ ನೋಡಿದವರಿಗೆ ಅದು ಶಿಕ್ಷೆ ಎಂದು ಅನಿಸುವುದೇ ಇಲ್ಲ. ಶಿಕ್ಷೆ ಅನುಭವಿಸುತ್ತಿರುವವನಿಗೆ ಹಾಗೂ ಶಿಕ್ಷೆ ಕೊಟ್ಟವರಿಗೆ ಮಾತ್ರ ಗೊತ್ತು ಅದು ಶಿಕ್ಷೆಯೆಂದು...
ಪೊಲೀಸರಿಗೆ ರೇಶನ್ (ಅಕ್ಕಿ, ಗೋದಿ, ಸಕ್ಕರೆ) ಬರುತ್ತೆ. ಹೆಚ್ಚು ಉಳಿದರೆ ಅದನ್ನು ಹಿಂತಿರುಗಿಸಲಾಗುತ್ತದೆ. ಸಾಧಾರಣವಾಗಿ ಪೊಲೀಸರು ಬೇರೆ ಬೇರೆ ಕಡೆ ಕರ್ತವ್ಯ ನಿರ್ವಹಿಸುವುದರಿಂದ ಎಲ್ಲರೂ ರೇಶನ್ ತೆಗೆದುಕೊಂಡು ಹೋಗುವವರೆಗೂ ರೇಶನ್ ಹಿಂತಿರುಗಿಸುವುದಿಲ್ಲ. ಒಮ್ಮೆ ೫೨ ಮಂದಿ ಇನ್ನೂ ರೇಶನ್ ತೆಗೆದುಕೊಂಡಿರಲಿಲ್ಲ. ಆದರೂ ರೇಶನ್ ಹಿಂತಿರುಗಿಸಲಾಯಿತು. ೫೨ ಮಂದಿ ರೇಶನ್‌ನಿಂದ ವಂಚಿತರಾದರು.
ಈ ವಿಷಯ ಹಿರಿಯ ಅಧಿಕಾರಿಗಳ ಕಿವಿ ತಲುಪಿತು. ತಪ್ಪಿಗೊಂದು ಶಿಕ್ಷೆಯಾಗಲೇಬೇಕಲ್ಲ. ರೇಶನ್ ವಿತರಣೆ ಜವಾಬ್ದಾರಿ ಹೊತ್ತಿದ್ದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಾನ್‌ಸ್ಟೇಬಲ್‌ಗೆ ಹೆಚ್ಚುವರಿ ಎಸ್ಪಿ ಲೋಕೇಶ್ ಕುಮಾರ್ ಕೊಟ್ಟ ಶಿಕ್ಷೆ ಏನು ಗೊತ್ತಾ? ಆತ ಏಳು ದಿನ ಲೋಕೇಶ್ ಕುಮಾರ್ ಅವರ ಕಚೇರಿಯ ಬಾಗಿಲಲ್ಲಿ ಭಾರದ ಗನ್ ಹಿಡಿದು ನಿಂತಿರಬೇಕು ಅಷ್ಟೆ. ದಿನವೂ ಲೋಕೇಶ್ ಕುಮಾರ್ ಬರುವುದಕ್ಕಿಂತ ಮೊದಲೇ ಬರಬೇಕು. ಅವರು ಊಟಕ್ಕೆ ಹೋದಾಗ ಈತನೂ ಊಟ ಮಾಡಿ ಬರಬೇಕು. ರಾತ್ರಿ ಅವರು ಹೋದ ನಂತರ ಮನೆಗೆ ಹೋಗಬೇಕು. ಅವರ ಕಚೇರಿಗೆ ನಿಮಿಷಕ್ಕೊಮ್ಮೆ ಬರುವ ಪೊಲೀಸ್ ಅಧಿಕಾರಿಗಳಿಗೆ ಸೆಲ್ಯೂಟ್ ಹೊಡೀಬೇಕು.
ನೋಡೋಕೆ ಇದು ಶಿಕ್ಷೆ ಅನಿಸದು. ಆದರೆ ಎಸ್ಪಿ ಕಚೇರಿ ಹೋದವರಿಗೆ, ಅಲ್ಲಿ ಹೊರಗೆ ಕುಳಿತವರಿಗೆ ಗೊತ್ತು... ಅಲ್ಲಿ ಹೊರಗೆ ನಿಲ್ಲೋದೂ ಒಂದು ಶಿಕ್ಷೆ ಅಂತ. ಯಾಕಂದ್ರೆ ಮಂಗಳೂರಿನ ಅರ್ಧ ಸೊಳ್ಳೆ ಎಸ್ಪಿ ಕಚೇರಿಯಲ್ಲೇ ಇರುತ್ತೆ. ಸಂಜೆ ೫.೦೦ ಗಂಟೆ ನಂತರ ಹೆಚ್ಚುವರಿ ಎಸ್ಪಿ ಲೋಕೇಶ್ ಕುಮಾರ್ ಅವರ ಕಚೇರಿ ಹೊರಗೆ ಅರ್ಧ ಗಂಟೆ ಕುಳಿತರೆ ಸಾಕು "ಬರಿಗೈಯಲ್ಲಿ ಸೊಳ್ಳೆ ಹೊಡೆಯುವ ಕಲೆ’ ಎಂಬ ವಿಷಯದ ಕುರಿತು ಒಂದು ಪ್ರಬಂಧ ಮಂಡಿಸಿ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆದುಕೊಳ್ಳಬಹುದು. ಅಷ್ಟು ಸೊಳ್ಳೆ. ಸೈಜೂ ಭಾರಿಯಾಗಿಯೇ ಇರುತ್ತೆ.
ಅಂಥ ಸೊಳ್ಳೆ ಇರುವಲ್ಲಿ ಅರ್ಧ ಗಂಟೆ ಇರೋದೇ ಶಿಕ್ಷೆ ಅನಿಸುವಾಗ, ಲೋಕೇಶ್ ಕುಮಾರ್ ಮನೆಗೆ ಹೋಗುವವರೆಗೆ ಅಂದರೆ ಕನಿಷ್ಟ ರಾತ್ರಿ ೯.೩೦ರವರೆಗೆ ಆ ಕಾನ್‌ಸ್ಟೇಬಲ್ ಅವರ ಕಚೇರಿ ಹೊರಗೆ ನಿಂತಿರಬೇಕಲ್ಲ. ಬಹುಶಃ ಆತ ಮಾಡಿದ ತಪ್ಪಿಗೆ ಅದಕ್ಕಿಂತ ದೊಡ್ಡ ಶಿಕ್ಷೆ ಕೊಡೋಕೆ ಸಾಧ್ಯವೇ ಇರಲಿಲ್ಲವೇನೊ?
ಇದಪ್ಪ ಲೋಕೇಶ್ ಕುಮಾರ್ ಐಡಿಯಾ ಅಂದ್ರೆ!

1 comment:

Lanabhat said...

ಪಾಪ ಕಣ್ರೀ ನಿಮಗೊಂದು ಸಬ್ಜೆಕ್ಟು ಸಿಕ್ಕಿತು..

ಆ ಪೋಲೇಸಪ್ಪಂಗೆ ಎಷ್ಟು ಕಷ್ಟ ಆಯ್ತೋ ಎನೋ...