Tuesday, April 17, 2007

ಕರೆಂಟು ಇಲ್ಲದ ಮೇಲೆ

ತುಥ್!
ಯಾವಾಗ ನೋಡಿದರೂ ಕೈ ಕೊಡುವ ಕರೆಂಟು. ಈಗೀಗ ಸರಿಯಾಗಿ ರಾತ್ರಿ ೯.೩೦ಕ್ಕೆ ಹೋಗುತ್ತಿದೆ. ಹೀಗಾಗಿ ನೋಡುತ್ತಿದ್ದ ಒಂದೇ ಒಂದು ದಾರಾವಾಹಿಯೂ ತಪ್ಪಿ ಹೋಗುತ್ತಿದೆ. ನನ್ನ ನೆಚ್ಚಿನ ನಟ ಅನಂತನಾಗ್ ಇದ್ದಾರೆ ಎಂಬ ಒಂದೇ ಕಾರಣಕ್ಕೆ ಮತ್ತು ಕಥೆ ಪರವಾಗಿಲ್ಲ ಎಂದುಕೊಂಡು ನೋಡುತ್ತಿರುವ ದಾರವಾಹಿ ಅದು. ಮೆಸ್ಕಾಂ ಕೃಪೆಯಿಂದ ಅದೂ ಸಾಧ್ಯವಾಗುತ್ತಿಲ್ಲ.
ಅದರ ಹೆಸರನ್ನು ಈಗ ಕರೆಂಟು ಇಲ್ಲದ ಮೇಲೆ ಎಂದು ಬದಾಯಿಸಿಕೊಂಡಿದ್ದೇನೆ.
ರಾಷ್ಟ್ರಕವಿ ಖ್ಯಾತಿಗೆ ಪಾತ್ರರಾದ ಜಿ.ಎಸ್. ಶಿವರುದ್ರಪ್ಪ ಅವರು...
ಪ್ರೀತಿ ಇಲ್ಲಿದ ಮೇಲೆ
ಹೂವು ಅರಳೀತು ಹೇಗೆ
ಮೋಡ ಕಟ್ಟೀತು ಹೇಗೆ...
ಎಂದು ಬರೆದರು. ಅದೇ ಹೆಸರಿನ ದಾರವಾಹಿಯ ಸಮಯದಲ್ಲೇ ವಿದ್ಯುತ್ ಕೈ ಕೊಡುತ್ತಿರುವುದರಿಂದ...
ಕರೆಂಟು ಇಲ್ಲದ ಮೇಲೆ
ದೀಪ ಬೆಳಗೀತು ಹೇಗೆ
ಟೀವಿ ಹೊತ್ತೀತು ಹೇಗೆ...
ಎಂದು (ಶಿವರುದ್ರಪ್ಪ ಅವರ ಕ್ಷಮೆ ಕೇಳುತ್ತ) ಹೇಳ್ಬೇಕು ಅನಿಸುತ್ತದೆ.
ಇಷ್ಟಕ್ಕೂ ಕರ್ನಾಟಕದಾದ್ಯಂತ ಪವರ್ ಕಟ್ ಕಾಮನ್ನು. ನಮ್ಮ ರಾಜ್ಯವನ್ನು ಕರುನಾಡು ಎಂದೂ ಕರೆಯುತ್ತಾರೆ. ಇದನ್ನು ಬೇರೆಯವರು ಕರು ಎಂಬುದನ್ನು ಕತ್ತಲ ನಾಡು ಎಂದು ಅಪಾರ್ಥ ಮಾಡಿಕೊಳ್ಳದಿದ್ದರೆ ಸಾಕು. ಕಾಸರಗೋಡು ಕರ್ನಾಟಕಕ್ಕೆ ಸೇರುಏಕು ಅನ್ನುತ್ತಾರೆ. ಕಾಸರಗೋಡಿನವರನ್ನೇ ಕೇಳಿದರೆ... ಬೇಡ ಸ್ವಾಮಿ ನಿಮ್ಮ ರಾಜ್ಯದಲ್ಲಿ ಯಾವಾಗ ನೋಡಿದರೂ ಕರೆಂಟು ಇರಲ್ಲ. ನಾವು ಕೇರಳ ರಾಜ್ಯದಲ್ಲೇ ಅರಾಮಿದ್ದೇವೆ ಅನ್ನುತ್ತಾರೆ. ಕರೆಂಟು ಗಡಿನಾಡಿವವರಲ್ಲಿ ನಮ್ಮ ರಾಜ್ಯದ ಬಗ್ಗೆ ತಾತ್ಸಾರ ಬೆಳೆಸಿದೆ.
ಈಗ ಪಡುಬಿದ್ರಿಯಲ್ಲಿ ನಾಗಾರ್ಜುನ ಯೋಜನೆ ಜಾರಿ ಮಾಡಲು ಉತ್ಸುಕವಾಗಿದೆ. ಭಾರೀ ವೆಚ್ಚದಲ್ಲಿ ಸಿದ್ಧವಾದ ಏಷ್ಯಾದ ಮೊದಲ ನೀರಿನ ಮೇಲೆ ತೇಲುವ ಪವರ್ ಪ್ಲಾಂಟ್ ಎಂಬ ಹೆಸರಿಗೆ ಪಾತ್ರವಾದ ತಣ್ಣೀರುಬಾವಿ ಯೋಜನೆ ಇದೆ. ಅದರಿಂದ ವಿದ್ಯುತ್ ಖರೀದಿ ತುಂಬ ದುಬಾರಿ. ಯುನಿಟ್‌ಗೆ ೫.೪೦ ರೂ. ನೀಡಬೇಕು. ಇಷ್ಟು ದುಬಾರಿ ದರದಲ್ಲಿ ಖರೀದಿಸಿ ಗ್ರಾಹಕರಿಗೆ ಕಡಿಮೆ ದರದಲ್ಲಿ ವಿದ್ಯುತ್ ನೀಡುವುದು ಸಾಧುವಲ್ಲ. ಇದು ಸತ್ಯ. ಆದರೆ ಯೋಜನೆಗೆ ಅನುಮತಿ ನೀಡುವಾಗ ಈ eನೋದಯ ಯಾಕಾಗಲಿಲ್ಲ? ಅದು ಆಗಿನವರಿಗೆ ಗೊತ್ತಿರಲಿಲ್ಲವೆ? ಗೊತ್ತಿತ್ತು. ಯಾರಪ್ಪನ ಗಂಟು? ಅನುಮತಿ ಕೊಟ್ಟರು.
ಆಗಿನ ಒಪ್ಪಂದಂತೆ ಸರಕಾರ ನಿರ್ದಿಷ್ಟ ಮೊತ್ತವನ್ನು ತಣ್ಣೀರುಬಾವಿ ಪವರ್ ಪ್ರಾಜೆಕ್ಟ್ ಸಂಸ್ಥೆಗೆ ನೀಡಬೇಕು. ಕರೆಂಟು ಖರೀದಿಸಿ, ಬಿಡಿ ಸಂಬಂಧವಿಲ್ಲ. ಈಗ ಅದು ದುಬಾರಿ ಎಂಬ ನೆಪ ಹೇಳಿ ಪಡುಬಿದ್ರಿಯಲ್ಲಿ ನಾಗಾರ್ಜುನ ಪವರ್ ಪ್ರಾಜೆಕ್ಟ್ ಆರಂಭಿಸ ಹೊರಟಿದ್ದಾರೆ. ಅತ್ತ ಗೋಕರ್ಣದ ಸಮೀಪದ ತದಡಿಯಂತಹ ಸೂಕ್ಷ್ಮ ಪ್ರದೇಶದಲ್ಲಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪಿಸುವ ಸಿದ್ಧತೆಗಳಾಗುತ್ತಿವೆ. ಕರಾವಳಿ ಹಾಗೂ ಮಲೆನಾಡಿನ ಪ್ರದೇಶ ಸದಾ ಹಲವು ಯೋನೆಗಳಿಗೆ ಬಲಿಯಾಗಿದೆ. ಹಾಗೆಯೇ ವಿದ್ಯುತ್ ಖೊತಾ ಹೆಚ್ಚು ಜಾರಿಗೆ ಬರುವುದು ಕೂಡ ಇದೇ ಪ್ರದೇಶಗಳಲ್ಲಿ. ಬೆಂಗಳೂರಲ್ಲಿ ವಿದ್ಯುತ್ ತೆಗೆಯುವಂತಿಲ್ಲ. ಹಾಗೇನಾದರೂ ಮಾಡಿದರೆ ಅಲ್ಲಿರುವ ಮಲ್ಟಿ ನ್ಯಾಶನಲ್ ಸಂಸ್ಥೆಗಳು ಬಾಗಿಲು ಹಾಕಿ ಬೇರೆ ರಾಜ್ಯಕ್ಕೆ ಗುಳೆ ಹೋದರೆ?
ಈಗ ಪಡುಬಿದ್ರಿ ಬಳಿ ಜನ ನಾಗಾರ್ಜುನ ಯೋಜನೆ ವಿರೋಧಿಸುತ್ತಿದ್ದಾರೆ. ಇದನ್ನು ಹತ್ತಿಕ್ಕಲು ಸಾಕಷ್ಟು ಯತ್ನಗಳು ನಡೆಯುತ್ತಿವೆ. ಅದರಲ್ಲಿ ವಿದ್ಯುತ್ ತೆಗೆಯುವ ತಂತ್ರವೂ ಒಂದು. ವಿದ್ಯುತ್ ಆಗಾಗ ತೆಗೆಯುವ ಮೂಲಕ ಜನರಲ್ಲಿ ಅಸಹನೆ ಸೃಷ್ಟಿಸಲಾಗುತ್ತಿದೆ. ಒಮ್ಮೆ ದಿನವಿಡೀ ವಿದ್ಯುತ್ ಇರುವಂತಾದರೆ ಸಾಕು ಎಂಬ ಸ್ಥಿತಿಗೆ ಜನರನ್ನು ತರಲಾಗುತ್ತದೆ. ದಿನವಿಡೀ ವಿದ್ಯುತ್ ನೀಡುತ್ತೇವೆ ಎಂದು ಹೇಳಿ ನಾಗಾರ್ಜುನ ಸ್ಥಾಪನೆ ಮಾಡಲಾಗುತ್ತದೆ. ವಿದ್ಯುತ್ ಖೋತಾಗೆ ಭಾರೀ ಬೆಳವಣಿಗೆ, ವಿದ್ಯುತ್ ಬೇಡಿಕೆ ಹೆಚ್ಚಳದ ನೆಪ ಹೇಳಲಾಗುತ್ತಿದೆ. ಮೊದಲೇ ತಿಳಿದಿರಲಿಲ್ಲವೆ ವಿದ್ಯುತ್ ಬೇಡಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತದೆಂದು? ಖಂಡಿತಾ ಗೊತ್ತಿತ್ತು. ಹಾಗಾದರೆ ಯಾಕೆ ಅದರ ಬಗ್ಗೆ ಸೂಕ್ತ ಗಮನ ನೀಡಲಿಲ್ಲ? ಇದನ್ನು ಜನ ರಾಜಕಾರಣಿಗಳ ಜುಟ್ಟು ಹಿಡಿದು ಕೇಳಬೇಕಿದೆ.

No comments: