Tuesday, July 31, 2007

ಬಿಲ್ಡರ್ ಸುಬ್ಬರಾವ್ ಹತ್ಯೆ




ಮಯೂರ ಬಿಲ್ಡರ್ ಸಂಸ್ಥೆ ಮಾಲಿಕ ಸುಬ್ಬರಾವ್ ಅವರನ್ನು ಸೋಮವಾರ ರಾತ್ರಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಕೆ.ಎಸ್.ರಾವ್ ರಸ್ತೆಯ ಗಣೇಶ ಮಹಲ್ ಕಾಂಪ್ಲೆಕ್ಸ್‌ನ ಕೆಳಮಹಡಿಯಲ್ಲಿರುವ ಕಚೇರಿಯಿಂದ ಮನೆಗೆ ಹೋಗಲೆಂದು ಸೋಮವಾರ ರಾತ್ರಿ ೯.೪೫ಕ್ಕೆ ಸುಬ್ಬರಾವ್ ಅವರು ಕೆ.ಎಸ್. ರಾವ್ ರಸ್ತೆಗೆ ಆಗಮಿಸಿದಾಗ ದುಷ್ಕರ್ಮಿ ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾನೆ. ಸುಬ್ಬರಾವ್ ಅವರಿಗೆ ಮೂರು ಗುಂಡು ತಾಗಿದ್ದರೆ, ಇನ್ನೊಂದು ಗುಂಡು ಕಾರಿನ ಕಿಟಕಿ ಗಾಜಿಗೆ ತಾಗಿ ಕರಾವಳಿ ಮಾರುತ ಪತ್ರಿಕೆಯ ಸಂಪಾದಕ ಸುದೇಶ್ ಅವರ ಕೈಗೆ ಸವರಿಕೊಂಡು ಹೋಗಿದೆ. ಒಂದು ಗುಂಡು ಗುರಿತಪ್ಪಿದೆ. ಘಟನಾ ಸ್ಥಳದಲ್ಲಿ ಒಂದು ಸಜೀವ ಗುಂಡು ದೊರೆತಿದೆ. ಕಾರಿನಲ್ಲಿ ಕೂಡ ಗುಂಡು ತಾಗಿದ ಕುರುಹು ಪತ್ತೆಯಾಗಿದೆ.ಒಟ್ಟು ಮೂವರು ಈ ಕೃತ್ಯದಲ್ಲಿ ಪಾಲ್ಗೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಸುಬ್ಬರಾವ್ ಅವರನ್ನು ಮನೆಗೆ ಕರೆದುಕೊಂಡು ಹೋಗಲೆಂದು ಸುದೇಶ್ ಕಾರನ್ನು ಕೆ.ಎಸ್. ರಾವ್ ರಸ್ತೆಯಲ್ಲಿ ತಂದು ನಿಲ್ಲಿಸಿದ್ದರು. ಸುದೇಶ್ ಮತ್ತು ಸುಬ್ಬರಾವ್ ಕಚೇರಿಯಿಂದ ರಸ್ತೆಗೆ ಬಂದಿದ್ದರು. ಸುದೇಶ್ ಚಾಲಕ ಸೀಟಿನಲ್ಲಿ ಕುಳಿತಿದ್ದರು. ಸುಬ್ಬರಾವ್ ಅವರು ಕಾರಿನ ಇನ್ನೊಂದು ಬದಿಯಿಂದ ಮುಂದಿನ ಸೀಟಿನಲ್ಲಿ ಕುಳಿತುಕೊಳ್ಳಲೆಂದು ಬಾಗಿಲು ತೆಗೆಯಲು ಕೈ ಇಟ್ಟ ಸಂದರ್ಭ ದುಷ್ಕರ್ಮಿ ಮೊದಲ ಗುಂಡು ಹಾರಿಸಿದ್ದಾನೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಮೊದಲ ಗುಂಡು ಯಾರಿಗೂ ತಾಗಿಲ್ಲ. ಎರಡು, ಮೂರು ಮತ್ತು ನಾಲ್ಕನೇ ಗುಂಡು ಸುಬ್ಬರಾವ್ ಅವರಿಗೆ ತಾಗಿದೆ. ಸುಬ್ಬರಾವ್ ಕುಸಿದು ಬಿದ್ದ ಪರಿಣಾಮ ಐದನೇ ಗುಂಡು ಕಾರಿನ ಕಿಟಕಿ ಗಾಜು ಪುಡಿ ಮಾಡಿ ಒಳ ನುಗ್ಗಿ ಸುದೇಶ್ ಅವರ ಎಡಗೈ ತೋಳು ಸವರಿಕೊಂಡು ಹೋಗಿದೆ.
ಘಟನಾ ಸ್ಥಳದಲ್ಲಿಯೇ ಇದ್ದ ಮಿಥುನ್ ತಕ್ಷಣ ಚೇತರಿಸಿಕೊಂಡು ಗುಂಡಿಕ್ಕಿದವನ ಬೆನ್ನಟ್ಟಲು ಯತ್ನಿಸಿದರು. ಆದರೆ ದುಷ್ಕರ್ಮಿಗಳಲ್ಲಿ ಒಬ್ಬ ಸುಜಾತ ಹೋಟೆಲ್ ತಿರುವಿನಲ್ಲಿ ಬೈಕ್ ಚಾಲೂ ಇಟ್ಟು ಕಾಯುತ್ತಿದ್ದ. ಗುಂಡಿಕ್ಕಿದ ವ್ಯಕ್ತಿ ಬೈಕ್ ಏರಿ ಪರಾರಿಯಾಗಿದ್ದಾರೆ. ಮಿಥುನ್ ಓಡುವಾಗ ಆರಂಭದಲ್ಲಿಯೇ ಒಬ್ಬ ವ್ಯಕ್ತಿ ಅಡ್ಡ ಬಂದಿದ್ದು, ಆತನೂ ಕೊಲೆಯ ಸಂಚಿನ ಭಾಗೀದಾರನಾಗಿರುವ ಸಾಧ್ಯತೆ ಇದೆ. ಹತ್ಯೆ ನಡೆಸಿದ ವ್ಯಕ್ತಿ ಕುಳ್ಳಗೆ, ತೆಳ್ಳಗೆ ಇದ್ದು, ಯುವಕನಂತಿದ್ದ ಎಂದು ಸುದೇಶ್ ಹೇಳುತ್ತಾರೆ.ಸುಬ್ಬರಾವ್ ನಗರದಲ್ಲಿ ಹಲವು ವರ್ಷದಿಂದ ಮಯೂರ ಮಿನಿ ಥಿಯೇಟರ್, ಸಿಡಿ ಅಂಗಡಿಗಳನ್ನು ನಡೆಸುತ್ತಿದ್ದರು. ಭ್ಲ್ಯೂಫಿಲಂ ಮಾಫಿಯಾದಲ್ಲೂ ಗುರುತಿಸಿಗೊಂಡಿದ್ದರು. ಎರಡೂವರೆ- ಮೂರು ವರ್ಷದ ಹಿಂದೆ ಸುಬ್ಬರಾವ್ ಅವರು ರಿಯಲ್ ಎಸ್ಟೇಟ್ ಮತ್ತು ಕಟ್ಟಡ ನಿರ್ಮಾಣ ಉದ್ಯಮಕ್ಕೆ ಇಳಿದಿದ್ದರು. ಅದರ ನಂತರವೇ ಅಂದರೆ ಒಂದೂವರೆ ವರ್ಷದ ಹಿಂದೆ ಅವರಿಗೆ ಬೆದರಿಕೆ ಕರೆಗಳು ಬಂದಿದ್ದವು. ಆದರೆ ಇತ್ತೀಚೆಗೆ ಸುಬ್ಬರಾವ್ ಸುದ್ದಿಯಲ್ಲಿ ಇರಲಿಲ್ಲ. ಮಯೂರ ಬಿಲ್ಡರ್ಸ್ ವತಿಯಿಂದ ಪಾಂಡೇಶ್ವರದಲ್ಲಿ ಒಂದು ಅಪಾರ್ಟ್‌ಮೆಂಟ್ ನಿರ್ಮಾಣ ಪೂರ್ಣಗೊಂಡಿದ್ದು, ಕದ್ರಿಯಲ್ಲಿ ಇನ್ನೊಂದು ಅಪಾರ್ಟ್‌ಮೆಂಟ್ ನಿರ್ಮಾಣ ಕಾರ್ಯ ಆರಂಭಗೊಂಡಿದೆ. ಉದ್ಯಮದಲ್ಲಿನ ದ್ವೇಷ ಅಥವಾ ವ್ಯವಹಾರದಲ್ಲಿನ ದ್ವೇಷವೇ ಹತ್ಯೆಗೆ ಕಾರಣ ಎಂದು ಶಂಕಿಸಲಾಗಿದೆ.
ಸುಬ್ಬರಾವ್ ಅವರಿಗೆ ಸಧ್ಯ ಬೆದರಿಕೆ ಕರೆಗಳು ಬಂದ ಬಗ್ಗೆ ಮಾಹಿತಿ ಇಲ್ಲ ಎಂದು ಎಸ್ಪಿ ಸತೀಶ ಕುಮಾರ್ ಹೇಳಿದ್ದಾರೆ. ಮಂಗಳೂರು ಗ್ರಾಮಾಂತರ ಸರ್ಕಲ್ ಇನ್‌ಸ್ಪೆಕ್ಟರ್ ಜಯಂತ ವಿ. ಶೆಟ್ಟಿ ಅವರ ನೇತೃತ್ವದಲ್ಲಿ ಒಂದು ತಂಡ ಈಗಾಗಲೇ ಆರೋಪಿಗಳ ಪತ್ತೆಗೆ ಕಾರ್ಯ ಪ್ರವೃತ್ತವಾಗಿದೆ. ಬಂದರು ಇನ್‌ಸ್ಪೆಕ್ಟರ್ ಉಮೇಶ ಶೇಟ್ ನೇತೃತ್ವದಲ್ಲಿ ಇನ್ನೊಂದು ತಂಡ ತನಿಖೆ ನಡೆಸಲಿದೆ.

1 comment:

Satish said...

ಇತ್ತೀಚೆಗೆ ಶೂಟ್ ಮಾಡಿ ಸಾಯಿಸುವವರ, ಹಾಗೆ ಸಾಯುವವರ ಸಂಖ್ಯೆ ಹೆಚ್ಚಾದಂತೆ ಅನ್ಸಲ್ವಾ?
ಯಾಕಿರಬಹುದು ಈ ಹೆಚ್ಚಳ?