Monday, April 30, 2007

ಮೊಸರಲ್ಲೂ ಕಲ್ಲು ಹುಡುಕುವುದು ಏಕೆ ಸುಬ್ಬಯ್ಯ?




ಎಲ್ಲವೂ ಮೋಸ!
ಹೊಸನಗರದ ಶ್ರೀ ರಾಮಚಂದ್ರಾಪುರ ಮಠದಲ್ಲಿ ೯ ದಿನ ನಡೆದ ವಿಶ್ವ ಗೋ ಸಮ್ಮೇಳನದಂತ ಅಧ್ಬುತ, ವಿಶಿಷ್ಟ, ಅಪರೂಪದ ಕಾರ್ಯಕ್ರಮದ ಬಗ್ಗೆ ಮಾಜಿ ಶಾಸಕ ಎ.ಕೆ. ಸುಬ್ಬಯ್ಯ ಹೇಳಿದ ಮಾತು ಇದು.
ಅವರ ಪ್ರಕಾರ... ಗೋ ಸಮ್ಮೇಳನ ಶುದ್ಧ ಮೋಸ. ಕೇವಲ ಹಣ ಮಾಡುವ ದಂಧೆ. ಕರ್ನಾಟಕದಾದ್ಯಂತ ಕೋಮುವಾದ ಹಬ್ಬಿಸುವ ತಂತ್ರದ ಒಂದು ಭಾಗ. ಸ್ವಾಮೀಜಿಗೆ ನಿಜವಾಗಿಯೂ ಗೋವುಗಳ ಸಂತತಿ ಉಳಿಸಲು ಮನಸ್ಸಿದ್ದರೆ ಗೋ ಪಾಲಕರ ಸಮ್ಮೇಳನ ಮಾಡಬೇಕಿತ್ತು. ಅವರ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕಿತ್ತು. ಅದರ ಬದಲು ಈಗ ನಡೆದದ್ದು ಗೋ ಪೂಜಕರ ಸಮ್ಮೇಳನ. ವಿಶ್ವ ಗೋ ಸಮ್ಮೇಳನದ ನೆಪದಲ್ಲಿ ಯಾರ್‍ಯಾರಿಂದ ಎಷ್ಟು ಹಣ ಸಂಗ್ರಹಿಸಲಾಯಿತು ಎಂಬುದನ್ನು ಬಹಿರಂಗ ಪಡಿಸಬೇಕು.
ವಿಶ್ವ ಗೋ ಸಮ್ಮೇಳನ ಎಂಬುದೇ ಮೋಸದ ಶಬ್ದ. ವಿಶ್ವದಾದ್ಯಂತದ ಗೋವುಗಳೇ ಇಲ್ಲಿರಲಿಲ್ಲ ಜನರಲ್ಲಿ ಮೌಢ್ಯ ಬೆಳೆಸುವ ಕಾರ್ಯಕ್ರಮ. ಸ್ವಾಮೀಜಿ ಭಾಷಣದಲ್ಲಿ ಹೇಳಿದ್ದೆಲ್ಲ ಸುಳ್ಳು. ನಾನೂ ಗೋವು ಸಾಕಿದ್ದೇನೆ. ಎತ್ತು ಇರಿಸಿಕೊಂಡು ನನಗೇನೂ ಪ್ರಯೋಜನವಿಲ್ಲ. ಅವುಗಳನ್ನು ಹಣ ಕೊಟ್ಟು ಖರೀದಿಸುವವರು ಕಸಾಯಿಖಾನೆಯವರು ಮಾತ್ರ. ನನಗೆ ಲಾಭವಾಗುತ್ತದಾದ್ದರಿಂದ ಅವರಿಗೆ ಕೊಡುತ್ತೇನೆ. ಅದಕ್ಕೆ ಸ್ವಾಮೀಜಿಯದ್ದೇನು ತಕರಾರು. ನಮ್ಮ ಎತ್ತು ನಾನು ಯಾರಿಗೆ ಬೇಕಾದರೂ ಕೊಡುತ್ತೇವೆ. ಅದು ರೈತರ ಹಕ್ಕು. ಅಷ್ಟಿದ್ದರೆ ಎಲ್ಲ ಗೋವುಗಳನ್ನು ಸ್ವಾಮೀಜಿಯೇ ಮಾರುಕಟ್ಟೆ ಕ್ರಯ ಕೊಟ್ಟು ಖರೀದಿಸಲಿ. ಇದನ್ನು ಬಿಟ್ಟು ಆರ್‌ಎಸ್‌ಎಸ್‌ನಂತೆ ಕೋಮುವಾದ ಹಬ್ಬಿಸಲು ಗೋ ಸಮ್ಮೇಳದಂತರಹ ಡೋಂಗಿ ಗೋ ಪ್ರೀತಿ ತೋರಿಸುವುದನ್ನು ಬಿಡಲಿ ಎಂಬುದು ಸುಬ್ಬಯ್ಯ ಅವರ ಅಂಬೋಣ.
ಸುಬಯ್ಯನವರ ಮಾತು ಕೇಳುವಾಗಲೇ ಈ ವಯ್ಯಂದ್ಯಾಕೋ ಜಾಸ್ತಿಯಾಯ್ತು ಅನ್ಸುತ್ತೆ. ಇವರಿಗೆ ಗೋ ಸಮ್ಮೇಳನದ ಬಗ್ಗೆಯಾಗಲಿ, ರಾಮಚಂದ್ರಾಪುರ ಮಠದಲ್ಲಿ ನಡೆಯುತ್ತಿರುವ ಗೋ ಸಂರಕ್ಷಣೆ, ಗೋ ಶಾಲೆ ಬಗ್ಗೆಯಾಗಲಿ ಯಾವುದೇ ಮಾಹಿತಿ ಇಲ್ಲ ಎಂಬುದೂ ಸಾಬೀತಾಗುತ್ತದೆ. ಇಷ್ಟೆಲ್ಲ ಮತಾಡುವ ಸುಬ್ಬಯ್ಯನವರ ಬಳಿ ಸ್ವಾಮಿ ನೀವು ರಾಮಚಂದ್ರಾಪುರ ಮಠಕ್ಕೆ ಹೋಗಿದ್ರಾ ಅಂದ್ರೆ ಇಲ್ಲ ಅಂತಾರೆ. ಹೋಗ್ಲಿ ವಿಶ್ವ ಗೋ ಸಮ್ಮೇಳನಕ್ಕಾದ್ರೂ ಹೋಗಿದ್ರಾ ಅಂದ್ರೆ ಅದಕ್ಕೂ ಅಡ್ಡಡ್ಡ ತಲೆ ಆಡಿಸ್ತಾರೆ. ಈ ಮನುಷ್ಯ ರಾಮಚಂದ್ರಾಪುರ ಮಠಕ್ಕೂ ಹೋಗಿಲ್ಲ. ಗೋ ಸಮ್ಮೇಳನವನ್ನೂ ನೋಡಿಲ್ಲ. ಆದ್ರೂ ಹೋದವರಿಗಿಂತ ಹೆಚ್ಚಾಗಿ ಎಗರಾಡ್ತಾರೆ.
ಇಡೀ ಸಮ್ಮೇಳನ ಜನರಲ್ಲಿ ಮೌಢ್ಯ ಬೆಳೆಸುವ ಕಾರ್ಯಕ್ರಮ ಎಂಬ ಆರೋಪ ಮಾಡುವ ಮೊದಲು ಸುಬ್ಬಯ್ಯ ಒಮ್ಮೆ ಸಮ್ಮೇಳನನೋಡಬೇಕಿತ್ತು. ನೋಡಿದ್ದರೆ ಬಹುಶಃ ಹೀಗೆ ಪೆಕರನಂತೆ, ಅರಳೂ ಮರಳೀಗೆ ತುತ್ತಾದವರಂತೆ ಮಾತಾಡುತ್ತಿರಲಿಲ್ಲ. ಗೋ ಸಮ್ಮೇಳನದ ಅಂಗವಾಗಿ ನಡೆದ ವಸ್ತು ಪ್ರದರ್ಶನದಲ್ಲಿ ಗೋ ಮತ್ತು ವಿeನ ಎಂಬ ವಿಷಯದ ಬಗ್ಗೆ ೧೦ಕ್ಕೂ ಹೆಚ್ಚು ಸ್ಟಾಲ್‌ಗಳಿದ್ದವು. ಗೋ ಮತ್ತು ಕೃಷಿ, ಗೋ ಮತ್ತು ಪುರಾಣ ಹೀಗೆ ಗೋವಿಗೆ ಸಂಬಂಧಿಸಿದ ವಿವಿಧ ವಿಭಾಗಗಳ ಬಗ್ಗೆ ಸ್ಟಾಲ್‌ಗಳಿದ್ದವು. ಅಲ್ಲಿ ಸಾಕ್ಷಿ ಸಮೇತ ವಿಷಯಗಳ ವಿವರಣೆ ಇತ್ತು. ಪಾಪ ಸುಬ್ಬಯ್ಯ. ಇದನ್ನೆಲ್ಲ ನೋಡದೆ ಏನೇನೋ ಮಾತಾಡುತ್ತಾರೆ.
ಗೋವುಗಳ ಬಗ್ಗೆ ಪ್ರೀತಿಯಿದ್ದರೆ ಸ್ವಾಮೀಜಿ ಮಾರುಕಟ್ಟೆ ದರ ಕೊಟ್ಟು ಗೋವು ಖರೀದಿಸಲಿ ಎಂದು ಸುಬ್ಬಯ್ಯ ಒತ್ತಾಯಿಸಿದ್ದಾರೆ. ಆದರೆ ಸ್ವಾಮೀಜಿ ಒಂದು ವರ್ಷದ ಹಿಂದೆಯೇ ಇಂತಹ ಕಲ್ಪನೆಯ ಯೋಜನೆ ಆರಂಭಿಸಿದ್ದಾರೆ. ಪ್ರತಿ ಭಾಷಣದಲ್ಲೂ ಸಂತೆಗೆ ನಡೆಯಿರಿ. ಮಾರಾಟವಾಗುವ ಗೋ ಖರೀದಿಸಿ. ಸಾಧ್ಯವಾಗದಿದ್ದರೆ ಮಠವೇ ಖರೀದಿಸಲಿದೆ ಎಂದು ಭಕ್ತರಿಗೆ ಹೇಳಿದ್ದಾರೆ. ಅದಕ್ಕಾಗಿ ಯೋಜನೆಯನ್ನೂ ಆರಂಭಿಸಿದಾರೆ. ಈ ಯೋಜನೆ ಆರಂಭಗೊಂಡ ಎರಡೇ ದಿನದಲ್ಲಿ ೨.೬೩ ಕೋಟಿ ರೂ. ಸಂಗ್ರಹವಾಗಿದ್ದೂ ಸುಬ್ಬಯ್ಯರಿಗೆ ಗೊತ್ತಿಲ್ಲ. ನನ್ನ ಎತ್ತು ಬೇಕಾದರೆ ಮಠದವರು ಖರೀದಿಸಲಿ ಎಂಬುದು ಅವರ ಗೋಳು. ಸುಬ್ಬಯ್ಯರ ಮನೆಯಲ್ಲಿ ಒಂದು ಎತ್ತು ಕೊಡೋದಿದೆ ಎಂದು ಯಾರಿಗೋ ಕನಸು ಬಿದ್ದು, ಅವರು ಹಣ ಹಿಡಿದು ಬಂದು ಎತ್ತು ಖರೀದಿಸಿ ಹೋಗಬೇಕು ಎಂಬುದು ಸುಬ್ಬಯ್ಯನವರ ಮಾತಿನ ಅರ್ಥ. ಮನೆ ಮನೆಗೆ ಬಂದು ದನ ಕೊಡೋದಿದ್ಯಾ ಎಂದು ಕೇಳೋಕೆ ಅದೇನು ಹಳೇ ಪೇಪರ್, ಪ್ಲಾಸ್ಟಿಕ್, ಚಪ್ಪಲ್, ಬಾಟ್ಲಿ ವ್ಯವಹಾರವಾ?
ಕ್ಷುಲ್ಲಕವಾಗಿ ಮಾತನಾಡುವ ಮುಂಚೆ ಸುಬ್ಬಯ್ಯ ಸ್ವಲ್ಪಯೋಚಿಸಬೇಕು. ಗೋ ಸಮ್ಮೇಳಕ್ಕೆ ಪ್ರತಿ ನಿತ್ಯ ಭೇಟಿ ನೀಡಿದ ಜನರ ಸಂಖ್ಯೆ ಲಕ್ಷವನ್ನೂ ದಾಟಿದೆ. ಮೊದಲ ಎರಡು ದಿನ ಮಾತ್ರ ಸ್ವಲ್ಪ ಕಡಿಮೆ ಜನರಿದ್ದರು. ಆದರೂ ಬಂದವರ ಸಂಖ್ಯೆ ೮೦ ಸಾವಿರ! ಉಳಿದ ಎಲ್ಲ ದಿನವೂ ಒಂದೂವರೆ ಲಕ್ಷ ಮೀರಿದೆ. ಊಟ ಮಾಡಿದವರ ಸಂಖ್ಯೆ. ಊಟ ಮಾಡದೆ ಹೋದವರು ಈ ಲೆಕ್ಕದಲ್ಲಿಲ್ಲ. ಇಷ್ಟು ಜನರನ್ನು ಒಂದೇ ಸಮಯದಲ್ಲಿ ಒಂದೇ ವಿಷಯಕ್ಕೆ ಮೋಸ ಮಾಡಲು ಸಾಧ್ಯವೇ? ಸುಬ್ಬಯ್ಯನವರೇ?
ಇನ್ನು ವಿಶ್ವದ ಗೋವುಗಳೇ ಸಮ್ಮೇಳದಲ್ಲಿ ಇರಲಿಲ್ಲೆಂಬ ಸುಬ್ಬಯ್ಯರ ಹೇಳಿಕೆ ಅತ್ಯಂತ ಬಾಲಿಶ. ಗೋವುಗಳು ಸಮ್ಮೇಳನಕ್ಕೆ ಬಂದು ಆಗಬೇಕಿರುವುದೇನಿಲ್ಲ. ಬದಲಾಗಿ ಗೋವಿನ ಬಗ್ಗೆ ಆಸಕ್ತಿ ಇರುವುವವರು, ಅರಿಯಲು ಇಷ್ಟ ಇದ್ದವರು ಬರಬೇಕು. ಆ ಮೂಲಕ ಗೋ ಸಂರಕ್ಷಣೆ ಆಗಬೇಕು ಎಂಬುದು ಸಮ್ಮೇಳನದ ಉದ್ದೇಶ. ಹೊರತು ಗೋ ಸಮ್ಮೇಳನ ಅಂದಾಕ್ಷಣ ವಿಶ್ವದಾದ್ಯಂತ ಗೋವುಗಳು ಬಂದು ಸೇರುತ್ತವೆ ಎಂದರ್ಥವಲ್ಲ.
ಸುಬ್ಬಯ್ಯ ಮಾತಿನ ಬಗ್ಗೆ ನಂಬಿಕೆಯೇ ಹೊರಟು ಹೋಗುವಂಥ ಇನ್ನೊಂದು ಹೇಳಿಕೆಯೆಂದರೆ ಪ್ರಾಣಿಗಳನ್ನು ಕೊಲ್ಲುವುದು ಪ್ರಕೃತಿ ನಿಯಮ ಎಂಬ ಅವರ ಸ್ಟೇಟ್‌ಮೆಂಟು. ಹುಲಿ ಜಿಂಕೆಯನ್ನು ಕೊಲ್ಲುತ್ತದೆ. ಇಲ್ಲವಾದಲ್ಲಿ ಹುಲಿಯೇ ಸಾಯುತ್ತದೆ. ಜಿಂಕೆಯನ್ನು ಕೊಂದದ್ದಕ್ಕೆ ಹುಲಿಯ ಮೇಲೆ ಕೇಸು ಹಾಕುವುದು ನ್ಯಾಯವೇ? ಹಾಗೆಯೇ ಗೋಹತ್ಯಾ ನಿಷೇಧ ಕೂಡ ಎಂಬ ಸುಬ್ಬಯ್ಯರ ಮಾತು ನಿಜಕ್ಕೂ ಅವರಿಗೆ ಮೊದುಳು ಮತ್ತು ನಾಲಿಗೆ ನಡುವೆ ಸಂಪರ್ಕ ಸರಿಯಿಲ್ಲ ಎಂಬುದನ್ನು ತೋರಿಸುತ್ತದೆ. ಹುಲಿ ಜಿಂಕೆಯನ್ನು ಕಲೊಲ್ಲುವುದಕ್ಕೂ, ಮನುಷ್ಯ ದನವನ್ನು ಕೊಲ್ಲುವುದಕ್ಕೂ ವ್ಯತ್ಯಾಸವಿದೆ. ಹಾಗಿಲ್ಲವಾಗಿದ್ದರೆ ಹುಲಿ, ಜಿಂಕೆ ಕೊಲ್ಲುವ ಮನುಷ್ಯರಿಗೇಕೆ ಶಿಕ್ಷೆ? ಈ ಶಿಕ್ಷೆ ಇಲ್ಲವಾಗಿದ್ದಲ್ಲಿ ಈಗ ನೋಡಲು ಒಂದು ಹುಲಿ ಕೂಡ ಇರುತ್ತಿರಲಿಲ್ಲ ಎಂಬ ಸಿಂಪಲ್ ಸತ್ಯ ಸುಬ್ಬಯ್ಯರಿಗೆ ಗೊತ್ತಿಲ್ಲ.
ಮಠದಲ್ಲಿ ಎಷ್ಟು ಗೋವಿದೆ ಗೊತ್ತಿದ್ಯಾ ಎಂದರೆ ಪೂಜೆ ಮಾಡೋಕೆ ಇಟ್ಕೊಂಡಿರಬಹುದು ಒಂದಷ್ಟು ಅಂತಾರೆ ಸುಬ್ಬಯ್ಯ. ಪೂಜೆ ಮಡೋಕೆ ಒಂದೆರಡು ಹೆಚ್ಚೆಂದರೆ ೧೦ ಗೋವು ಸಾಕು. ಆದರೆ ನೋರಾರು, ಸಾವಿರಾರು ಗೋವುಗಳನ್ನು ಸಾಕುವುದು ಅವುಗಳ ಮೇಲಿನ ಪ್ರೀತಿಯಿಂದ ಹೊರತು ಪೂಜೆಗಾಗಿ ಅಲ್ಲ. ವಿಶ್ವಗೋ ಸಮ್ಮೇಳನ ಗೋ ಪೂಜರ ಸಮ್ಮೇಳನವಾಗಿತ್ತು ಎಂದು ಸುಬ್ಬಯ್ಯ ಹಳಿದಿದ್ದಾರೆ. ಗೋ ಸಾಕುವವರು ಮಾತ್ರ ಗೋವನ್ನು ಪೂಜಿಸುತ್ತಾರೆ. ನನ್ನ ದೃಷ್ಟಿಯಯಲ್ಲಿ ಗೋ ಪಾಲಕ ಮತ್ತು ಗೋ ಪೂಜಕ ಇಬ್ಬರೂ ಒಬ್ಬನೇ ಆಗಿರುತ್ತಾನೆ. ಯಾರೂ ಪಕ್ಕದ ಮನೆ ಗೋವಿಗೆ ಹೋಗಿ ಪೂಜೆ ಮಾಡುವುದಿಲ್ಲ. ಅದೇನಿದ್ದರೂ ಪ್ಯಾಟೆಯವರ ಸಾಮೂಹಿಕ ಗೋ ಪೂಜೆಯಲ್ಲಿ ಮಾತ್ರ. ಹಾಗಾಗಿ ಸುಬ್ಬಯ್ಯನವರು ಗೋ ಪೂಜಕರ ಸಮ್ಮೇಳನ ಎಂದು ಹಳಿದದ್ದು ಎಳ್ಳಷ್ಟೂ ಸರಿಯಲ್ಲ.
ಸುಬ್ಬಯ್ಯ ಸಮಾಜದ ಒಂದು ವರ್ಗದ ಪ್ರತಿನಿಧಿಯಷ್ಟೇ. ರಾಮಚಂದ್ರಾಪುರ ಮಠದಲ್ಲಿ ನಡೆದ ವಿಶ್ವ ಗೋ ಸಮ್ಮೇಳನ, ಅದರ ಯಶಸ್ಸು, ಗಳಿಸಿದ ಜನಾಕರ್ಷಣೆ ಹಲವರ ಕಣ್ಣು ಕುಕ್ಕಿದೆ. ಹೊಟ್ಟೆಯುರಿಸಿದೆ. ಹೊಟ್ಟೆಕಿಚ್ಚು ಬಾಯಿಯ ಮೂಲಕ ಹೀಗೆಲ್ಲ ಹೊರ ಬರುತ್ತಿದೆ. ಗೋವುಗಳ ಬಗ್ಗೆ ಮಾತನಾಡುವುದೇ ಕೋಮುವಾದ ಎಂಬಂತೆ ಮಾತಾಡುತ್ತಾರೆ ಕೆಲವರು. ದನ ಕಡಿಯುವುದರ ಪರವಾಗಿರುವುದು ಕೋಮುವಾದ ಅಂದರೆ ಮಾತ್ರ ಅವರಿಗೆ ಕೋಪ ಬರುತ್ತೆ. ಒಳ್ಳೆ ಕೆಲಸ ಮಾಡಿದವರ ಬಗ್ಗೆ ಹೊಗಳದಿದ್ದರೂ ಪರವಾಗಿಲ್ಲ ಆದರೆ ಇಷ್ಟು ಹಗುರಾಗಿ ಮಾತನಾಡವುದು, ಆಧಾರ ರಹಿತವಾಗಿ ಆರೋಪ ಮಾಡುವುದು ಯಾವ ಕಾರಣಕ್ಕೂ ಸರಿಯಲ್ಲ. ಒಂದು ವರ್ಗವನ್ನು ಮೆಚ್ಚಿಸಲು ಸುಬ್ಬಯ್ಯ ಬಾಯಿಗೆ ಬಂದದ್ದು ಮಾತಾಡಿದ್ದಾರೆ. ಅಲ್ಪಸಂಖ್ಯಾತರನ್ನು (ಈಗ ಅವರು ಅಲ್ಪಸಂಖ್ಯಾತರು ಹೌದೋ ಅಲ್ಲವೋ ಎಂಬ ಅನುಮಾನ ಇದೆ) ಮೆಚ್ಚಿಸಲು. ಅದು ಸುಬ್ಬಯ್ಯರಿಗೆ ರಾಜಕೀಯದಿಂದ ರಕ್ತದಲ್ಲೇ ಬೆರೆತಿರಬಹುದು. ಆದರೆ ಇನ್ನೊಬ್ಬರನ್ನು ಟೀಕಿಸುವುದು, ತುಷ್ಟೀಕರಿಸುವುದೇ ಅಲ್ಪಸಂಖ್ಯಾತರನ್ನು ಮೆಚ್ಚಿಸುವ ಸಾಧನ ಎಂದುಕೊಂಡಿರುವುದು ಸುಬ್ಬಯ್ಯರ ದೌರ್ಬಲ್ಯ.
ಇಷ್ಟಕ್ಕೂ ಸುಬ್ಬಯ್ಯ ಸಾಚಾ ಜನವೇ? ಮೊದಲು ಬಿಜೆಪಿಯಲ್ಲಿದ್ದರು. ಇದೇ ಆರ್‌ಎಸ್‌ಎಸ್ ಮುಖಂಡರ ಮನೆ ಬಾಗಿಲಿಗೆ ಎಡತಾಕಿಒದ್ದರು. ನಂತರ ಜನತಾದಳಕ್ಕೆ ಹೋದರು. ಈಗ ಆವ ಪಕ್ಷದಲ್ಲಿದ್ದಾರೆ? ಅವರಿಗೇ ಗೊತ್ತಿಲ್ಲ. ಕಾಂಗ್ರೆಸ್ ಪರವಾಗಿ ಮಾತಾಡುತ್ತಿದ್ದಾರೆ. ಮೂರುವರೆ ವರ್ಷದ ಹಿಂದೆ ವೀರಪ್ಪ ಮೊಯಿಲಿಯನ್ನು ಸೋಲಿಸಿದ ಪಾಪ ಪ್ರಜ್ಞೆ ಕಾಡುತ್ತಿದೆ ಅಂತ ಈಗ ಬಡಬಡಿಸುತ್ತಾರೆ. ರಾಮಚಂದ್ರಾಪುರ ಸ್ವಾಮೀಜಿ ಜನರಲ್ಲಿ ಮೌಢ್ಯ ಬೆಳೆಸುತ್ತಾರೆ ಎಂದು ಆರೋಪ ಮಾಡುವ ಸುಬ್ಬಯ್ಯ ತಾವೇ ಪಾಪಪ್ರಜ್ಞೆ, ಪಾಪ ವಿಮೋಚನೆ ಎಂಬ ಮೌಢ್ಯದ ಮಾತಾಡುತ್ತಾರೆ.
ಮೊಸರಲ್ಲೂ ಕಲ್ಲು ಹುಡುಕೋದು ಅಂದ್ರೆ ಇದೇನಾ?

No comments: