Thursday, March 27, 2008

ಬಯಸದೇ ಬಂದ ಭಾಗ್ಯ!

ಇದು ಹಳೆಯ ಕನ್ನಡ ಸಿನಿಮಾ ಹೆಸರು. ಈಗ ಯಾಕೋ ನನಗೆ ಮತ್ತೆ ಮತ್ತೆ ನೆನಪಾಗುತ್ತಿದೆ. ನನಗಾಗೇ ಹೇಳಿದ್ದೇನೋ ಅನ್ನಿಸ್ತಿದೆ. ಕಾರಣ ನನಗೆ ಬಯಸದೇ ಕೆಲವು ಭಾಗ್ಯಗಳು ಒಲಿದುಬಂದಿವೆ. ಅದ್ಯಾರೋ ದೊಡ್ಡವರು ಕನಸು ಕಾಣುವುದು ಕಲಿಯಿರಿ. ನಂತರ ಅದನ್ನು ನನಸು ಮಾಡಲು ಯತ್ನಿಸಿ ಎಂದಿದ್ದಾರಂತೆ. ಆದರೆ ಕಂಡ ಕನಸು ಪ್ರಯತ್ನವಿಲ್ಲದೇ ನನಸಾದಾಗ ಅದನ್ನು ಬಯಸದೇ ಬಂದ ಭಾಗ್ಯ ಅನ್ನಬಹುದೇನೊ.
ಅದೊಂದು ದಿನ ಮಧ್ಯಾಹ್ನದ ಹೊತ್ತಿಗೆ ಕಚೇರಿಯಿಂದ ಕೃಷ್ಣ ಭಟ್ಟರು ಫೋನ್ ಮಾಡಿ "ಭಟ್ರೆ ಹೊಸ ವರುಷಕ್ಕೆ ನಿಮ್ಮ ಕನಸೇನು?' ಅಂದರು. ನಿಜಕ್ಕೂ ನಾನು ಯಾವ ಕನಸೂ ಕಂಡಿರಲೇ ಇಲ್ಲ. ಸಾಪ್ತಾಹಿಕಕ್ಕೆ ಕೇಳ್ತಿದಾರೆ ಅಂದರು. ತಕ್ಷಣಕ್ಕೆ ಮನಸ್ಸಿಗೆ ಅನ್ನಿಸಿದ್ದು ಬರೆದುಕೊಟ್ಟೆ. ಅದು ಪ್ರಕಟವೂ ಆಯ್ತು.
ನಾನೋ ಕಂಡ ಅಥವಾ ಹೇಳಿಕೊಂಡ ಕನಸು ನನಸು ಮಾಡಲು ಒಂಚೂರು ಯತ್ನಿಸಿರಲಿಲ್ಲ. ಅಷ್ಟರಲ್ಲಿ ಒಂದು ದಿನ ಆರ್ ಟಿಒ ಇನ್ಸ್ಪೆಕ್ಟರ್ ಕೇಶವ ಧರಣಿ ಸಿಕ್ಕಿದವರು "ನೀವು ಅವತ್ತು ಅಪಘಾತಗಳ ಬಗ್ಗೆ ಸರಣಿ ಲೇಖನ ಬರೆದಿದ್ದಿರಲ್ಲ. ಕೆಲವು ನನ್ನಲ್ಲಿವೆ. ಎಲ್ಲವೂ ಇದ್ದರೆ ಕೊಡಿ. ಈ ಬಾರಿಯ ರಸ್ತೆ ಸುರಕ್ಷತಾ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಪುಸ್ತಕ ಮಾಡಿ ಬಿಡುಗಡೆ ಮಾಡುವ. ಲೇಖನಗಳು ತುಂಬಾ ಚೆನ್ನಾಗಿದ್ದವು' ಅಂದರು. ಹುಂ. ಅಂದೆ. ಹಾಗಂದ ತಪ್ಪಿಗೆ ಹಳೆಯ ಲೇಖನಗಳನ್ನೆಲ್ಲ ಸ್ವಲ್ಪ ತಿದ್ದಿ, ಅಪ್ ಗ್ರೇಡ್ ಮಾಡಿ ಕೊಟ್ಟೆ. ಪುಸ್ತಕವಾಗಿ ಬಿಡುಗಡೆಯೂ ನಡೆದುಹೋಯಿತು. ಸರಿಯಾಗಿ ನನಗೂ ಗೊತ್ತಾಗದೆ!
ಇವತ್ತು ಗೋಪಾಲಕೃಷ್ಣ ಕುಂಟಿನಿ ಫೋನ್ ಮಾಡಿ "ಭಟ್ರೆ ನಿಮ್ಮ ಬ್ಲಾಗಿನ ಬಗ್ಗೆ ಕೆಂಡಸಂಪಿಗೆ ಡಾಟ್ ಕಾಂನಲ್ಲಿ ಚೆನ್ನಾಗಿ ಬರೆದಿದ್ದಾರೆ' ಅಂದರು. ನೋಡಿದರೆ ಹೌದು. ಏನೋ ನಮ್ಮ ತೆವಲಿಗೆ ಪುರುಸೊತ್ತಾದಾಗ ಬರೆದು ಬ್ಲಾಗಿಸುತ್ತೇವೆ. ಪಾಪ ನಾಲ್ಕೈದು ಜನ ಓದಿ ಕಾಮೆಂಟಿಸ್ತಾರೆ ಅಂದ್ಕೊಡಿದ್ದೆ. ಆದರೆ ಈ ಅನಿರೀಕ್ಷಿತ ಹೊಗಳಿಕೆ ಬಂದಿದೆ. ಕೆಂಡಸಂಪಿಗೆ ಡಾಟ್ ಕಾಂ ಮಾಲಿಕರಿಗೆ ನಾನು ಋಣಿ. ನನ್ನ ಬ್ಲಾಗಿನ ಬಗ್ಗೆ ಬರೆದಿದ್ದಕ್ಕೆ, ನನ್ನನ್ನು ಹುರಿದುಂಬಿಸಿದ್ದಕ್ಕೆ.
ಅವರು ನನ್ನ ಬ್ಲಾಗಿನ ಮೇಲೆ ಅಷ್ಟು ಬರೆದ ಮೇಲೂ ನಾನು ತುಂಬ ದಿನ ಬ್ಲಾಗು ಅಪ್ ಡೇಟ್ ಮಾಡದಿದ್ದರೆ ಹೇಗೆ? ಅನ್ನಿಸಿ ಭಾರೀ ಹುರುಪಿನಲ್ಲಿ ಕುಂತ ಮೆಟ್ಟಿನಲ್ಲಿ 3 ಲೇಖನ ಬರೆದು ಹಾಕಿದ್ದೇನೆ. ಓದಿಕೊಳ್ಳುವ ಇಷ್ಟ-ಕಷ್ಟ ನಿಮಗಿರಲಿ.

ಒಂದು ಬದಿ ಕಡಲು: ಸಮಯ ಮಾಡಿಕೊಳ್ಳಿ ಓದಲು

ಚುಕು ಬುಕು ರೈಲು ಹಳಿಗಳ ಮೇಲೆ ಗಡಗಡ ಸದ್ದು ಮಾಡುತ್ತ ಮಂಗಳೂರಿನಿಂದ ಗೋವೆಯ ಕಡೆಗೆ ಹೊರಟಿತ್ತು. ರೈಲಿನಲ್ಲಿ ಹೋಗುವಾಗ ಒಂದು ಬದಿಗೆ ಕಡಲೇ! ನಾನು ರೈಲಿನಲ್ಲಿ ಕುಳಿತು ವಿವೇಕ ಶ್ಯಾನುಭಾಗರ ಒಂದು ಬದಿ ಕಡಲು ಓದುತ್ತಿದ್ದೆ.
ನನ್ನ ಊರಿಗೆ ಹತ್ತಿರದಲ್ಲೇ ಇರುವ ಹೊನ್ನಾವರ ಒಂದು ಬದಿ ಕಡಲು ಕಾದಂಬರಿ ನಡೆಯುವ ಸ್ಥಳವಾದ್ದರಿಂದಲೋ ಏನೋ ಇಲ್ಲೇ ಎಲ್ಲೋ ನನ್ನ ಮನೆಯ ಪಕ್ಕದಲ್ಲಿಯೇ ಈ ಘಟನೆಗಳು ಸಂಭವಿಸಿದವೇನೋ ಅನ್ನಿಸಿಬಿಟ್ಟಿತು. ರೈಲಿನಲ್ಲಿ ಊರಿಗೆ ಹೋಗಿ, ಎರಡು ದಿನ ಬಿಟ್ಟು ಬರುವಾಗ ಹೀಗೆ ರೈಲಿನಲ್ಲಿಯೇ ವಿವೇಕ ಶ್ಯಾನುಭಾಗರ ಒಂದು ಬದಿ ಕಡಲು ಓದಿ ಮುಗಿಸಿದ್ದೇನೆ.
ಊರಿಗೆ ಹೋಗಿ ಬಂದ ಖುಶಿ ಒಂದೆಡೆಯಾದರೆ, ಕಾದಂಬರಿ ಓದಿದ ತೃಪ್ತಿ ಇನ್ನೊಂದೆಡೆ. ಹೀಗಾಗಿಯೇ ಊರಿಗೆ ಹೋಗಿ ಬಂದರೆ ಮನಸ್ಸು ತುಂಬ ಖುಶ್ ಖುಶ್!
ವಿವೇಕ ಶ್ಯಾನುಭಾಗರು ಸಾಕಷ್ಟು ಬರೆದಿದ್ದಾರೆ. ಸತ್ಯ ಹೇಳ್ತೇನೆ. ನಾನು ಉತ್ತರ ಕನ್ನಡದವನಾಗಿಯೂ ಅವರ ಒಂದೇ ಒಂದು ಪುಸ್ತಕ ಓದಿರಲಿಲ್ಲ. ಒಂದು ಬದಿ ಕಡಲು ಓದಿದೆ ನೋಡಿ, ಅವರು ಇಷ್ಟವಾಗಿಬಿಟ್ಟರು. ಕಾದಂಬರಿಯಂತೆ!
ಕಾದಂಬರಿಯುದ್ದಕ್ಕೂ ಉತ್ತರ ಕನ್ನಡದ ಜನಜೀವನ, ಅವರ ವರ್ತನೆಗಳೂ, ಎರಡೂ ಮನೆಯ ನಡುವೆ ಪಾಗಾರವೂ, ಬಾಂದುಕಲ್ಲೂ ಇರದ ಗಡಿಗಳು, ಅವರ ಜಗಳಗಳು, ಅಲ್ಲೇ ಒಳಗಿನ ಪ್ರೀತಿ ಎಲ್ಲವೂ ಸಹಜವಾಗಿ ಕಾದಂಬರಿಯಲ್ಲಿ ಬೆರೆತುಹೋಗಿದೆ. ಉತ್ತರ ಕನ್ನಡ ಕೆಲವು ಅಪರೂಪದ ಶಬ್ದಗಳು ಕೂಡ ಕಾದಂಬರಿಯಲ್ಲಿ ನಿಮಗೆ ಲಭ್ಯ.
ನೀವು ಉತ್ತರ ಕನ್ನಡದವರಾಗಿದ್ದರೂ ಈ ಕಾದಂಬರಿ ಓದಿ. ಉತ್ತರ ಕನ್ನದವರಾಗಿರದಿದ್ದರೂ ಅದನ್ನು ಓದಿ!! ನೀವು ಉತ್ತರ ಕನ್ನಡದವರೇ ಆಗಿದ್ದರೆ ನಿಮಗೆ ಕಾದಂಬರಿ ಆಪ್ತ ಅನ್ನಿಸೀತು. ನೀವು ಉತ್ತರ ಕನ್ನಡದವರಲ್ಲದೇ ಇದ್ದಲ್ಲಿ ಕಾದಂಬರಿ ನಿಮಗೆ ಉತ್ತರ ಕನ್ನಡದ ಜನ ಜೀವನದ ಪರಿಚಯ ಮಾಡಿಸೀತು. ಕಾದಂಬರಿ ಓದಿದವನಾಗಿ ಧೈರ್ಯದಿಂದ ಹೇಳಬಲ್ಲೆ ಒಂದು ಬದಿ ಕಡಲು ನಿಮಗೆ ಖಂಡಿತ ಇಷ್ಟವಾಗುತ್ತದೆ.

ರೇಸ್: ನೋಡಿದ್ರೆ ಆಗಲ್ಲ ಲಾಸ್!

ಒಂದೆಡೆ ಸಂತೋಷ. ಇನ್ನೊಂದೆಡೆ ದುಗುಡ!
ಒಂದೊಳ್ಳೆ ಸಿನಿಮಾ ನೋಡಿದ ಸಂತೋಷ. ಕನ್ನಡದಲ್ಲಿ ಇಂತಹ ಸಿನಿಮಾಗಳು ಯಾಕೆ ಬರ್ತಾ ಇಲ್ಲ ಎಂಬ ಕೊರಗು! ಹಿಂದಿಯ ರೇಸ್ ಸಿನಿಮಾ ನೋಡಿ ಹೆಂಡತಿಯ ಕೈ ಹಿಡಿದು ಹೊರಬರುತ್ತಿದ್ದರೆ ಮನಸ್ಸಿನಲ್ಲಿ ದ್ವಂದ್ವ!!
ಅದೆಷ್ಟು ಚೆನ್ನಾಗಿದೆ ಚಿತ್ರ. ಕಥೆಯೇನು ಅಂತಹ ಮಹಾನ್ ಅಲ್ಲ. ಆದರೆ ಚಿತ್ರದ ತುಂಬ ಅದ್ಭುತ ತಿರುವುಗಳು, ಅನೂಹ್ಯ ಒಳಸುಳಿಗಳು, ಸಖತ್ ಸ್ಟಂಟ್‌ಗಳು, ಎಲ್ಲೂ ಅನಗತ್ಯ ಎನಿಸದ ದೃಶ್ಯಗಳು ಚಿತ್ರವನ್ನು ಉಸಿರು ಬಿಗಿ ಹಿಡಿದು ನೋಡುವಂತೆ ಮಾಡಿವೆ. ರೇಸ್ ಸಿನಿಮಾ ಪೋಸ್ಟರ್‌ನಲ್ಲಿ ಬಿಪಾಶಾ (‘ಬಿ’ಪಿ ಏರಿಸಿ ಜೀವಕ್ಕೆ ‘ಪಾಶಾ’ ಹಾಕುವವಳು ಎನ್ನಬಹುದೇ?) ಪೋಸ್ಟರ್ ನೋಡಿ ಸಿನಿಮಾಕ್ಕೆ ಹೋದರೂ, ಹೊರಬರುವಾಗ ಅದೊಂದು ಬಿಟ್ಟು ಉಳಿದೆಲ್ಲ ನಿಮ್ಮ ಮನಸ್ಸಿನಲ್ಲಿ ಅಚ್ಚೊತ್ತಿರುತ್ತದೆ. ಸಿನಿಮಾ ನೋಡಿ ಹೊರಬಂದವರು ಅಬ್ಬಾಸ್ ಮಸ್ತಾನ್‌ಗೆ ಒಂದು ಶಬ್ಬಾಸ್ ಕೊಡ್ತಾರೆ. ಆರಂಭದಿಂದ ಅಂತ್ಯದವರೆಗೆ ಆಸಕ್ತಿ ಕೆರಳಿಸುವಂತೆ ಸಿನಿಮಾ ನಿರೂಪಿಸುತ್ತ ಹೋಗಿದ್ದಾನೆ ನಿರ್ದೇಶಕ. ಒಂದೆರಡು ಹಾಡುಗಳು ಮಾತ್ರ ಹೆಚ್ಚಿನಿಸುವಂತಿದ್ದವು.
ಇದು ಖಂಡಿತ ಸಖತ್ ಸಿನಿಮಾ. ಸಮಯ ಸಿಕ್ಕರೆ ನೋಡಿ. ರೇಸ್ ಸಿನಿಮಾ ನೋಡಿದರೆ ಖಂಡಿತ ಆಗಲ್ಲ ಲಾಸ್!
ಒಳ್ಳೆ ಸಿನಿಮಾ ನೋಡಿಯಾದ ಮೇಲೆ ನಿಂಗ್ಯಾಕಪ್ಪ ದುಗುಡ ಅಂತ ಕ್ಯಾತೆ ತೆಗಿಬೇಡಿ. ಇತ್ತೀಚೆಗೆ ರವಿ ಬೆಳೆಗೆರೆ ಅಭಿನಯದ ವಾರಸ್ದಾರ ನೋಡ್ದೆ. ನಾನು ಬೆಳೆಗೆರ ಅವರ ಅಭಿಮಾನಿ. ಅವರ ಎಲ್ಲ ಕಾದಂಬರಿ ಓದಿ ಮೆಚ್ಚಿದವನು. ತುಂಬ ಆಸೆಯಿಂದ ವಾರಸ್ದಾರಕ್ಕೆ ಹೋದರೆ, ಆದದ್ದು ನಿರಾಸೆ!
ನಿಜಕ್ಕೂ ಚಿತ್ರ ಚೆನ್ನಾಗಿಲ್ಲ. ಬೆಳೆಗೆರೆ ಅವರ ಮೇಲಿನ ಪ್ರೀತಿಯಿಂದಲೋ ಏನೋ ಮಾಧ್ಯಮಗಳು ಚಿತ್ರವನ್ನು ತೆಗಳಿಲ್ಲ. ಆದರೆ ಹೊಗಳಲೂ ಇಲ್ಲ! ಇಲ್ಲಿ ಬೆಳೆಗೆರೆಯ ತಪ್ಪಿಲ್ಲ. ಅವರ ನಟನೆ ಗುಡ್. ಆದರೆ ನಿರ್ದೇಶಕ ಗುರುದೇಶಪಾಂಡೆ ಎಡವಿದ್ದಾರೆ. ಅಷ್ಟೇ ಅಲ್ಲ ಎಡವಿ ಮುಗ್ಗರಿಸಿ ಬಿದ್ದಿದ್ದಾರೆ!
ವಾರಸ್ದಾರ ಹಿಂದಿಯ ಸರ್ಕಾರ್ ಸಿನಿಮಾ ಹೋಲುತ್ತದೆ. ಸರ್ಕಾರ್ ಸಿನಿಮಾಕ್ಕೆ ಹೋಲಿಸದೇ ಇದ್ದರೂ ವಾರಸ್ದಾರ ಚೆನ್ನಾಗಿಲ್ಲ. ಇನ್ನು ಸರ್ಕಾರ್ ನೋಡಿ ಹೋದರಂತೂ ಕತೆ ಮುಗಿದಂತೆಯೇ. ಸರ್ಕಾರ್ ಸಿನಿಮಾದಲ್ಲಿ ಅಮಿತಾಬ್ ನಟನೆ, ಉಂಟೋ ಇಲ್ಲವೋ ಎಂಬಷ್ಟೇ ಮಾತು, ಕೇವಲ ಕೈ, ಬಾಯಿ, ಕಣ್ಣು ಇಷ್ಟನ್ನೇ ತೋರಿಸುವ ಕ್ಯಾಮರಾ ವರ್ಕ್, ಭೂಗತ ಜಗತ್ತಿನ ಒಳಸುಳಿಗಳು ಚೆನ್ನಾಗಿ ಬಿಂಬಿತವಾಗಿವೆ. ರವಿ ಬೆಳೆಗಯಂತಹ ಒಬ್ಬ ಭೂಗತ ಲೋಕದ ಪರಿಚಯ ಇದ್ದವರಾಗಿ, ಭೂಗತ ಲೋಕದಲ್ಲಿ ಗೆಳೆಯರನ್ನು ಹೊಂದಿದವರಾಗಿ ವಾರಸ್ದಾರ ಚಿತ್ರವನ್ನು ಇನ್ನಷ್ಟು ಚೆನ್ನಾಗಿ ಮಾಡಬಹುದಿತ್ತು. ಆದರೆ ಬೆಳೆಗೆರೆ ಅಷ್ಟಾಗಿ ಅತ್ತ ತಲೆ ಹಾಕದಿರುವುದು ಇದಕ್ಕೆ ಕಾರಣವೂ ಇರಬಹುದು. ಅದಕ್ಕೇ ಹೇಳಿದ್ದು ನಿರ್ದೇಶಕ ಎಡವಿದ್ದಾನೆ ಎಂದು. ಚಿತ್ರ ನೋಡಿ ನಿಜಕ್ಕೂ ಬೇಜಾರಾಯಿತು.
ಗುರು ದೇಶಪಾಂಡೆ ಇನ್ನು ಮುಂದಾದರೂ ಸುಧಾರಿಸಿಕೊಳ್ಳಲಿ. ಒಳ್ಳೆ ಚಿತ್ರ ನೀಡಲಿ. ಅದನ್ನು ಕನ್ನಡದ ಜನ ನೋಡಲಿ.

Sunday, March 09, 2008

ಅಂಚಿ, ಇಂಚಿ ಎಲ್ಲಿ ಹೋದರೂ ಬೇಕು ಸಂಚಿ!

ಸಂಚಿ! ಅಲಿಯಾಸ್ ಚಂಚಿ!! ಯಾನೆ ಕವಳ್ಚಂಚಿ!!!
ಉತ್ತರ ಕನ್ನಡದವರಿಗೆ ಈ ಶಬ್ದ ಚಿರಪರಿಚಿತ. ಕವಳ ಸಂಚಿ ಎಂಬುದು ಉತ್ತರ ಕನ್ನಡದ ಕರಾವಳಿಯಲ್ಲಿರುವ ಹಾಲಕ್ಕಿ ಜನಾಂಗದವರ ದೇಹದ್ದೇ ಒಂದು ಅವಿಭಾಜ್ಯ ಅಂಗ!
ಅಂಗಿ ಇಲ್ಲದಿದ್ದರೂ ನಡೆದೀತು. ಸಂಚಿ ಇಲ್ಲದೇ ಸಾಧ್ಯವಿಲ್ಲ. ಮುಂಡು ಹರಿದಿದ್ದರೂ ಆದೀತು. ಸಂಚಿ ಸರಿಯಾಗಿ ಇರಬೇಕು. ಅಂಚಿ(ಅಲ್ಲಿ), ಇಂಚಿ (ಇಲ್ಲಿ) ಎಲ್ಲೇ ಹೋದರೂ ಅವರ ಸೊಂಟಕ್ಕೆ ಸಂಚಿ ಇರಲೇಬೇಕು. ಪ್ಯಾಂಟು ಹೊಲಿದು, ಉಳಿದ ಬಟ್ಟೆಯಿಂದ ಸಂಚಿ ಮಾಡುವುದು ಹೆಚ್ಚು ಜನಪ್ರಿಯ.
ಇದರಲ್ಲಿ ಒಂದು ಸುಣ್ಣದ ಡಬ್ಬ. ಒಂದಷ್ಟು ವೀಳ್ಯದೆಲೆ. ೩-೪ ಅಡಕೆ. ೧ ತಂಬಾಕಿನ ಎಸಳು. ಇವಿಷ್ಟು ಇರಲೇಬೇಕು. ಇಲ್ಲದಿದ್ದರೆ ಸಂಚಿಗೆ ಮರ್ಯಾದೆಯಿಲ್ಲ. ಬೆಲೆಯೂ ಇಲ್ಲ.
ಇತ್ತೀಚೆಗೆ ಊರಿಗೆ ಹೋಗುವಾಗ ರೈಲಿನಲ್ಲಿ ಕಿಟಕಿಯ ಹೊರಗೆ ಕಣ್ಣು ನೆಟ್ಟು ಕುಳಿತಿದ್ದಾಗ ಹೊನ್ನಾವರ ಸಮೀಪ ಒಬ್ಬ ಸಂಚಿ ಹಿಡಿದು ಹೋಗುವುದು ಕಾಣಿಸಿತು. ಪಕ್ಕದಲ್ಲಿದ್ದ ಹೆಂಡತಿಗೆ ಸಂಚಿಯ ಕುರಿತು ಹೇಳಿದೆ. ಆಕೆ ಕನ್ನಡ ಎಂ.ಎ. ಹಾಗಾಗಿ ಸಂಚಿ ಎಂದ ಕೂಡಲೆ ಆಕೆಗೆ ಸಂಚಿ ಹೊನ್ನಮ್ಮ ನೆನಪಾದಳು.
ನೋಡಿ ಎಲ್ಲಿಂದೆಲ್ಲಿಯ ಸಂಬಂಧ!
ಎಲ್ಲಿಯ ಹಾಲಕ್ಕಿ ಜನಾಂಗದವರ ಕವಳ ಸಂಚಿ, ಎಲ್ಲಿ ‘ಹದಿಬದೆಯ ಧರ್ಮ’ ಬರೆದ ಸಂಚಿ ಹೊನ್ನಮ್ಮ!
ಸಂಬಂಧ ಇದೆ! ಅದು ಸಂಚಿಯದ್ದು. ರಾಜ ಮಹಾರಾಜರೂ ಕವಳ ಹಾಕುತ್ತಿದ್ದರು. ಥೂ! ಅಲ್ಲ ವೀಳ್ಯ ಹಾಕುತ್ತಿದ್ದರು. ಅದಕ್ಕೆ ಅಗತ್ಯ ಪರಿಕರಗಳು ಸಂಚಿಯಲ್ಲಿ ಇರುತ್ತಿದ್ದವು. ಅದನ್ನು ಹಿಡಿದುಕೊಳ್ಳಲು ಒಬ್ಬ ಆಳು ಬೇಕಲ್ಲ. ಆ ಕೆಲಸಕ್ಕೆ ಹೊನ್ನಮ್ಮ ಇದ್ದಳಂತೆ!
ಉತ್ತರ ಕನ್ನಡದ ಕರಾವಳಿಯಲ್ಲಿ ಸಂಚಿ ಚಂಚಿಯಾಗಿದೆ. ನನ್ನ ಅಮ್ಮ ಪ್ರಾಥಮಿಕ ಶಾಲೆ ಶಿಕ್ಷಕಿಯಾಗಿ ಸೇರುವ ಮೊದಲು ಮನೆಯಲ್ಲೇ ಹೊಲಿಗೆ ಮಾಡುತ್ತಿದ್ದಳು. ಆಗೆಲ್ಲ ಆಳುಗಳದ್ದು (ಕೆಲಸಕ್ಕೆ ಬರುವವರದ್ದು) ಒಂದೇ ವರಾತ. ಅಬ್ಬೇರೆ (ಹೆಂಗಸರನ್ನು ಕೆಲಸದವರು ಕರೆಯುವುದೇ ಹೀಗೆ. ಗಂಡಸರು ಅಥವಾ ಮನೆಯ ಯಜಮಾನರನ್ನು ವಡಿದೀರು ಎಂದು ಕರೆಯುವುದು ರೂಢಿ) ಒಂದು ಚೆಂಚಿ ಹೊಲ್ಕೊಡ್ರಾ! ಅಬ್ಬೇರು ಹೊಲಿದು ಕೊಡುವ ಒಂದು ಚೆಂಚಿಗಾಗಿ ಅವರು ಯಾವ ಕೆಲಸ ಮಾಡಲೂ ಸಿದ್ಧರಿದ್ದರು. ಹೊಸ ಚೆಂಚಿ ಅವರ ಮುಖದಲ್ಲಿ ಅಪ್ಪ ಚಾಕಲೇಟು ತಂದಾಗ ಮಕ್ಕಳ ಮುಖದಲ್ಲಿ ಉಂಟಾಗುವಷ್ಟು ಸಂತಸ ಮೂಡಿಸುತ್ತಿದ್ದುದು ನಂಗೀಗಲೂ ನೆನಪಿದೆ. ಚಂಚಿ ಹೊಲಿದುಕೊಟ್ಟ ಅಬ್ಬೇರಿಗೆ ಅವರ ನಿಷ್ಟೆ ಒಂದು ಕೆ.ಜಿ. ಜಾಸ್ತಿಯೇ.
ಕಾರಂತರ ಜ್ಞಾನಪೀಠ ವಿಜೇತ ಕೃತಿ ಮೂಕಜ್ಜಿಯ ಕನಸಿನಲ್ಲೂ ಸಂಚಿಯ ಪ್ರಸ್ತಾಪ ಬರುತ್ತದೆ. ನೋಡಿ ಎಲ್ಲಿಯ ಸಂಚಿ, ಎಲ್ಲಿಯ ಜ್ಞಾನಪೀಠ ಪ್ರಶಸ್ತಿ ಪಡೆದ ಕಾದಂಬರಿ! ಅಲ್ಲೂ ಸಂಚಿಗೆ ಬೆಲೆ ಇದೆ.
ರಾಜ ಮಹಾರಾಜರೂ ಕವಳ ಹಾಕುತ್ತಿದ್ದರು ಮತ್ತು ಅವರು ಕವಳದ ವಸ್ತುಗಳನ್ನು ಇರಿಸಿಕೊಳ್ಳುತ್ತಿದ್ದ ಚೀಲವನ್ನೂ ಸಂಚಿ ಎಂದು ಕರೆಯುತ್ತಿದ್ದರು. ಆ ಸಂಚಿ ಹಿಡಿದುಕೊಳ್ಳುತ್ತಿದ್ದ ಹೊನ್ನಮ್ಮ ಒಂದು ಕೃತಿಯನ್ನೂ ರಚಿಸಿದ್ದಾಳೆ ಎಂಬುದು ಕವಳದ ಸಂಚಿ ಇರಿಸಿಕೊಳ್ಳುವವರಿಗೆಲ್ಲ ನಿಜಕ್ಕೂ ಹೆಮ್ಮೆಯ ಸಂಗತಿ. ಆದರೆ ಈ ಸಂಗತಿ ಅವರಿಗೆ ಗೊತ್ತಿಲ್ಲ! ಆದರೂ ಅವರಿಗೆ ಸಂಚಿ ಹೊಂದುವುದು ಹೆಮ್ಮೆಯ ಸಂಗತಿಯೇ ಆಗಿದೆ ಎಂಬುದು ನಿಜಕ್ಕೂ ಹೆಮ್ಮೆಯ ಸಂಗತಿ!!

Friday, March 07, 2008

ಮಂಜು ಮುಸುಕಿದ ಹಾದಿಯಲ್ಲಿ...

ಇಬ್ಬನಿ ತಬ್ಬಿದ ಇಳೆಯಲಿ
ರವಿ ತೇಜ ಕಣ್ಣ ತೆರೆದು
ಬಾನಕೋಟಿ ಕಿರಣ
ಇಳಿದು ಬಂತು ಭೂಮಿಗೆ...

೩ ದಿನದಿಂದ ಮಂಗಳೂರಿನಲ್ಲೂ ಮಂಜು ಸುರಿವ ಮುಂಜಾವು. ಮಂಗಳೂರಲ್ಲಿ, ಅದೂ ಮಾರ್ಚ್ ತಿಂಗಳಲ್ಲಿ ಮಂಜು ಸುರಿಯುವುದು ಅಪರೂಪದಲ್ಲಿ ಅಪರೂಪ. ಫೆಬ್ರವರಿಯಲ್ಲೇ ಮಂಗಳೂರಿನಲ್ಲಿ ಬೆವರು ಸುರಿಯುವ ಸಮಯ. ಆದರೆ ಈ ವರ್ಷ ಮಾರ್ಚ್‌ನಲ್ಲೂ ಮಂಜು ಸುರಿಯುವ ಸಮಯ!
ಮಂಜು ಮುಸುಕಿದ ಹಾದಿಯಲ್ಲಿ ಬೆಳ್ಳಂಬೆಳಗ್ಗೆ ಸ್ವೆಟರ್ ಹಾಕಿ, ಮಫ್ಲರ್ ಸುತ್ತಿ ವಾಕಿಂಗ್ ಮಾಡುವ ಮೋಜು ಮಡಿಕೇರಿಯವರಿಗೆ ಹಾಗೂ ಘಟ್ಟದ ಮೇಲಿನವರಿಗೆ ಮಾತ್ರ ಸಾಧ್ಯ. ಘಟ್ಟದ ಮೇಲಿನವರಿಗೆ ಘನಘೋರ ಚಳಿಗಾಲ ಇರುವಾಗ ಮಂಗಳೂರಿನಲ್ಲಿ ಬೆಳಗ್ಗೆ ಮಾತ್ರ ಚುಮುಚುಮು ಚಳಿ. ಅದನ್ನು ಚಳಿ ಅನ್ನುವುದಕ್ಕಿಂತ ತಂಪು ಎನ್ನುವುದು ಹೆಚ್ಚು ಸೂಕ್ತ. ೯.೦೦ ಗಂಟೆಯ ನಂತರ ಸಖತ್ ಹಾಟ್ ಮಗಾ!
ಈ ಬಾರಿ ಪರಿಸ್ಥಿತಿ ಬದಲಾಗಿದೆ. ಚಳಿ ಇತ್ತು. ಈಗ ನೋಡಿದರೆ ಮಂಜು ಮುಸುಕಿದ ಹಾದಿಯೂ!
ಗೆಳೆಯ ವೇಣು ಕರಾವಳಿಯವನೇ. ಆದರೆ ಅವನಿಗೆ ಕಾಡು ತಿರುಗುವ ಹವ್ಯಾಸ. ಹಾಗಾಗಿ ಅವರು ಕರಾವಳಿಯಲ್ಲಿದ್ದೂ ತಮ್ಮ ಬ್ಲಾಗಿಗೆ ಕಾಶ್ಮೀರದಲ್ಲಿರೋರ ಥರ ‘ಮಂಜು ಮುಸುಕಿದ ದಾರಿಯಲ್ಲಿ’ ಎಂಬ ಹೆಸರು ಕೊಟ್ಟಿದ್ದಾನೆ. ಪ್ರಕೃತಿ ಮಂಗಳೂರಿನ ದಾರಿಗೇ ಮಂಜು ಮುಸುಕುವ ಮೂಲಕ ಅವರ ಆಸೆಯನ್ನೂ ಈಡೇರಿಸಿದೆ.
ಅಣ್ಣ ಗೋಪಾಲಕೃಷ್ಣ ಕುಂಟಿನಿ ನಾಲ್ಕೇ ಸಾಲು ಕವನಗಳನ್ನು ಬರೆಯುತ್ತಿದ್ದಾರೆ. ಕವಿಯಾಗುವ ಅಪಾಯದ ಮುನ್ಸೂಚನೆ ತೋರುತ್ತಿದ್ದಾರೆ. ಕೆಲವು ನನಗೆ ಅರ್ಥವಾಗದಿದ್ದರಿಂದ ಅವುಗಳು ಅಧ್ಬುತ ಎನ್ನಲು ಅಡ್ಡಿಯಿಲ್ಲ. ಇನ್ನು ಹಲವು ಅರ್ಥವಾಗಿದ್ದರಿಂದ ನಿಜಕ್ಕೂ ಅದ್ಭುತ ಅನ್ನಿಸುತ್ತವೆ. ಅವರೇ ಬರೆದ ಇಬ್ಬನಿ ಕುರಿತ ನಾಲ್ಕು ಸಾಲು ಹೀಗಿದೆ...
ಎಲೆಗಳಲ್ಲಿದ್ದ ರಾತ್ರಿ ಇಬ್ಬನಿ
ಕತ್ತಲಿನ ಅಚ್ಚರಿಗಳನ್ನು
ಹಗಲಿಗೆ ಹೇಳದೆ
ಆರಿಹೋಯಿತು.... ಎಂಥ ಚಂದ, ಎಂಥ ಅಂದ!
ಜಿ.ಪಿ. ರಾಜತ್ನಂ ಅವರು ಮಡಿಕೇರಿ ಮೇಲೆ ಮಂಜು ಕವನದಲ್ಲಿ...
ಮಡಿಕೇರಿ ಮೇಲ್ ಮಂಜು
ಭೂಮಿನ್ ತಬ್ಬಿದ ಮೋಡಿದ್ದಂಗೆ
ಬೆಳ್ಳಿ ಬಳಿದಿದ್ ರೋಡಿದ್ದಂಗೆ
ಸಾಫಾಗಿ ಅಳ್ಳಾಟಿಟ್ಟಿಲ್ದಂಗೆ
ಮಡಗಿದ್ದಲ್ಲೆ ಮಡಗಿದ್ದಂಗೆ.... ಎಂದು ಬರೆಯುತ್ತಾರೆ.
ಈ ಎಲ್ಲ ಕವಿತೆಗಳನ್ನು ನೆನಪಿಗೆ ತರುವಂತೆ ಮಂಗಳೂರಿಗೂ ಮಂಜು ಕವಿದಿದೆ. ಮಂಗಳೂರನ್ನೇ ಬಿಳಿ ಮೋಡ ತಬ್ಬಿದ ಹಾಗೆ, ರಸ್ತೆಗಳಿಗೆಲ್ಲ ಬೆಳ್ಳಿ ಮೆತ್ತಿದ ಹಾಗೆ...
ಮಂಗಳೂರಿಗೂ ಕವಿದ ಮಂಜು ನನಗೆ ಮುದ ನೀಡಿತು. ಇದೆಲ್ಲದರ ಜತೆ ನನ್ನ ಕೆಲವು ಹಳೆ ನೆನಪುಗಳನ್ನು ಸ್ಮೃತಿ ಪಟಲದ ಎದುರು ತಂದು ನಿಲ್ಲಿಸಿತು. ನಾನು ಜರ್ನಲಿಸಂ ಕಲಿಯುವಾಗ ದಿಲ್ಲಿ ಸೇರಿದಂತೆ ಉತ್ತರ ಭಾರತಕ್ಕೆ ಪ್ರವಾಸ ತೆರಳಿದ್ದೆವು. ದೆಹಲಿಯಲ್ಲಿ ದಟ್ಟವಾದ ಮಂಜು. ನಾವು ಒಂದು ರಾತ್ರಿ ಒಳಗೆ ಕುಳಿತು ಹರಟುತ್ತಿದ್ದಾಗ ನನ್ನ ಸಹಪಾಠಿ ಲಕ್ಷ್ಮಣ ನಾಯಕ ಒಂದು ಕವಿತೆ ಬರೆದಿದ್ದೇನೆ ಎಂದ.
ಇಬ್ಬನಿ
ನೀನೊಂದು ಕಂಬನಿ... ಹೀಗೆ (ಈಗ ಸರಿಯಾಗಿ ನೆನಪಿಲ್ಲ) ಒಟ್ಟಾರೆ ಅಂತ್ಯ ಪ್ರಾಸದಲ್ಲಿ, ಕೇಳಲು ತುಂಬ ತ್ರಾಸವಾಗಿ ಸಾಗಿತ್ತು. ನಾನು ಮತ್ತು ಆಪ್ತ ಗೆಳೆಯ ಪ್ರಸನ್ನ ಹಿರೇಮಠ ಕೇಳಿ ಒಳಗೊಳಗೇ ನಕ್ಕರೂ, ತುಂಬ ಚೆನ್ನಾಗಿದೆ ಎಂದು ಹುರಿದುಂಬಿಸಿ ಎಲ್ಲರೆದರೂ ಕವನ ಓದಲು ಹೇಳಿದವು. ಆತ ಓದಿದ. ಅದರ ಪರಿಣಾಮ ಎಲ್ಲರೂ ನಕ್ಕಿದ್ದಲ್ಲದೆ, ಆತನಿಗೆ ‘ಇಬ್ಬನಿ’ ಎಂದೇ ಕರೆಯಲಾರಂಭಿಸಿದರು. ಪ್ರವಾಸ ಮುಗಿದು ತರಗತಿಗೆ ಬಂದಾಗ ಎಲ್ಲರೂ, ಅವರವರ ಅನುಭವನ ಕಥನ ಹೇಳಬೇಕಿತ್ತು. ಆಗ ಲಕ್ಷ್ಮಣ ನಾಯ್ಕ ವೇದಿಕೆಯ ಮೇಲೆ ಹೋಗಿ ನಿಂತಾಗ ನಾವು ಹಿಂದಿನಿಂದ ‘ಇಬ್ಬನಿ’ ಎಂದು ಕೂಗಿದ್ದೇ ತಡ ಕ್ಲಾಸಿನಲ್ಲಿದ್ದವರ ನಗೆಯ ಅಣೆಕಟ್ಟು ಒಡೆದಿತ್ತು.
ತನ್ನಷ್ಟಕ್ಕೆ ಸದ್ದಿಲ್ಲದೆ, ನಾವು ಬರೆಯದೆ ಹೋದರೆ ಸುದ್ದಿಯೂ ಇಲ್ಲದೆ ಸುರಿಯುವ, ಮೇಸ್ಟ್ರು ಬರುತ್ತಿದ್ದಂತೆ ಸದ್ದಿಲ್ಲದೆ ಸರಿಯಾಗಿ ಕುಳಿತುಕೊಳ್ಳುವ ಮಕ್ಕಳಂತೆ ಸೂರ್ಯ ಬರುತ್ತಿದ್ದಂತೆ ಸದ್ದಿಲ್ಲದೆ ಸರಿದೂ ಹೋಗುವ ಇಬ್ಬನಿ ನಮ್ಮ ಮನಸೊಳಗೆ ಅದಷ್ಟು ನೆನಪಿನ ಹನಿಗಳನ್ನು ಬಿಟ್ಟುಹೋಗಬಲ್ಲದು!
ಚಿತ್ರಗಳು: ಜಿ.ಕೆ. ಹೆಗಡೆ