Thursday, March 27, 2008

ಒಂದು ಬದಿ ಕಡಲು: ಸಮಯ ಮಾಡಿಕೊಳ್ಳಿ ಓದಲು

ಚುಕು ಬುಕು ರೈಲು ಹಳಿಗಳ ಮೇಲೆ ಗಡಗಡ ಸದ್ದು ಮಾಡುತ್ತ ಮಂಗಳೂರಿನಿಂದ ಗೋವೆಯ ಕಡೆಗೆ ಹೊರಟಿತ್ತು. ರೈಲಿನಲ್ಲಿ ಹೋಗುವಾಗ ಒಂದು ಬದಿಗೆ ಕಡಲೇ! ನಾನು ರೈಲಿನಲ್ಲಿ ಕುಳಿತು ವಿವೇಕ ಶ್ಯಾನುಭಾಗರ ಒಂದು ಬದಿ ಕಡಲು ಓದುತ್ತಿದ್ದೆ.
ನನ್ನ ಊರಿಗೆ ಹತ್ತಿರದಲ್ಲೇ ಇರುವ ಹೊನ್ನಾವರ ಒಂದು ಬದಿ ಕಡಲು ಕಾದಂಬರಿ ನಡೆಯುವ ಸ್ಥಳವಾದ್ದರಿಂದಲೋ ಏನೋ ಇಲ್ಲೇ ಎಲ್ಲೋ ನನ್ನ ಮನೆಯ ಪಕ್ಕದಲ್ಲಿಯೇ ಈ ಘಟನೆಗಳು ಸಂಭವಿಸಿದವೇನೋ ಅನ್ನಿಸಿಬಿಟ್ಟಿತು. ರೈಲಿನಲ್ಲಿ ಊರಿಗೆ ಹೋಗಿ, ಎರಡು ದಿನ ಬಿಟ್ಟು ಬರುವಾಗ ಹೀಗೆ ರೈಲಿನಲ್ಲಿಯೇ ವಿವೇಕ ಶ್ಯಾನುಭಾಗರ ಒಂದು ಬದಿ ಕಡಲು ಓದಿ ಮುಗಿಸಿದ್ದೇನೆ.
ಊರಿಗೆ ಹೋಗಿ ಬಂದ ಖುಶಿ ಒಂದೆಡೆಯಾದರೆ, ಕಾದಂಬರಿ ಓದಿದ ತೃಪ್ತಿ ಇನ್ನೊಂದೆಡೆ. ಹೀಗಾಗಿಯೇ ಊರಿಗೆ ಹೋಗಿ ಬಂದರೆ ಮನಸ್ಸು ತುಂಬ ಖುಶ್ ಖುಶ್!
ವಿವೇಕ ಶ್ಯಾನುಭಾಗರು ಸಾಕಷ್ಟು ಬರೆದಿದ್ದಾರೆ. ಸತ್ಯ ಹೇಳ್ತೇನೆ. ನಾನು ಉತ್ತರ ಕನ್ನಡದವನಾಗಿಯೂ ಅವರ ಒಂದೇ ಒಂದು ಪುಸ್ತಕ ಓದಿರಲಿಲ್ಲ. ಒಂದು ಬದಿ ಕಡಲು ಓದಿದೆ ನೋಡಿ, ಅವರು ಇಷ್ಟವಾಗಿಬಿಟ್ಟರು. ಕಾದಂಬರಿಯಂತೆ!
ಕಾದಂಬರಿಯುದ್ದಕ್ಕೂ ಉತ್ತರ ಕನ್ನಡದ ಜನಜೀವನ, ಅವರ ವರ್ತನೆಗಳೂ, ಎರಡೂ ಮನೆಯ ನಡುವೆ ಪಾಗಾರವೂ, ಬಾಂದುಕಲ್ಲೂ ಇರದ ಗಡಿಗಳು, ಅವರ ಜಗಳಗಳು, ಅಲ್ಲೇ ಒಳಗಿನ ಪ್ರೀತಿ ಎಲ್ಲವೂ ಸಹಜವಾಗಿ ಕಾದಂಬರಿಯಲ್ಲಿ ಬೆರೆತುಹೋಗಿದೆ. ಉತ್ತರ ಕನ್ನಡ ಕೆಲವು ಅಪರೂಪದ ಶಬ್ದಗಳು ಕೂಡ ಕಾದಂಬರಿಯಲ್ಲಿ ನಿಮಗೆ ಲಭ್ಯ.
ನೀವು ಉತ್ತರ ಕನ್ನಡದವರಾಗಿದ್ದರೂ ಈ ಕಾದಂಬರಿ ಓದಿ. ಉತ್ತರ ಕನ್ನದವರಾಗಿರದಿದ್ದರೂ ಅದನ್ನು ಓದಿ!! ನೀವು ಉತ್ತರ ಕನ್ನಡದವರೇ ಆಗಿದ್ದರೆ ನಿಮಗೆ ಕಾದಂಬರಿ ಆಪ್ತ ಅನ್ನಿಸೀತು. ನೀವು ಉತ್ತರ ಕನ್ನಡದವರಲ್ಲದೇ ಇದ್ದಲ್ಲಿ ಕಾದಂಬರಿ ನಿಮಗೆ ಉತ್ತರ ಕನ್ನಡದ ಜನ ಜೀವನದ ಪರಿಚಯ ಮಾಡಿಸೀತು. ಕಾದಂಬರಿ ಓದಿದವನಾಗಿ ಧೈರ್ಯದಿಂದ ಹೇಳಬಲ್ಲೆ ಒಂದು ಬದಿ ಕಡಲು ನಿಮಗೆ ಖಂಡಿತ ಇಷ್ಟವಾಗುತ್ತದೆ.

No comments: