Friday, June 19, 2009

ಅವಳದ್ದು ರಾಜಧಾನಿ ಎಕ್ಸ್ ಪ್ರೆಸ್, ನಂದು ಹಂಪಿ ಎಕ್ಸ್ ಪ್ರೆಸ್ !

ಅವಳು ರಾಜಧಾನಿ ಎಕ್ಸ್ ಪ್ರೆಸ್ ನಲ್ಲಿ ಹೋಗುತ್ತಿದ್ದಳು. ನಾನು ಹಂಪಿ ಎಕ್ಸ್ ಪ್ರೆಸ್ ನಲ್ಲಿ ಪಯಣಿಸುತ್ತಿದೆ.
ಎರಡೂ ರೈಲುಗಳೂ ‘ಓಡುತ ದೂರ ದೂರ. . .’
ಎರಡೂ ರೈಲು ಬೇರೆ ಬೇರೆ ದಿಕ್ಕಿನಲ್ಲಿ ಓಡುತ್ತಿತ್ತಾದರೂ, ಬಹುಶಃ ಇಬ್ಬರ ಮನಸ್ಸೂ ಒಂದೇ ದಿಕ್ಕಿನಲ್ಲಿ ವಿಚಾರ ಮಾಡುತ್ತಿತ್ತು. ಇಬ್ಬರೂ ಒಂದೊಂದು ಎಕ್ಸ್ ಪ್ರೆಸ್ ಹತ್ತಿದ್ದೆವಾದರೂ ನಮ್ಮ ಮನಸೊಳಗಿನ ದುಗುಡವನ್ನು ಯಾರ ಬಳಿಯೂ ಎಕ್ಸ್ ಪ್ರೆಸ್ ಮಾಡಲಾಗದೆ ತೊಳಲಾಡುತ್ತಿದ್ದೆವು!
ಕಾರಣ ಇಬ್ಬರ ಪಕ್ಕದಲ್ಲೂ ಹತ್ತಿರದವರು ಯಾರೂ ಇರಲಿಲ್ಲ. ಅವಳು ರಾಜಧಾನಿ ಎಕ್ಸ್ ಪ್ರೆಸ್ ರಶ್ಶಿನ ನಡುವೆಯೂ ಒಂಟಿತನ ಅನುಭವಿಸಿದರೆ, ನಾನು ಮನೆಯಲ್ಲಿ ಕೂತು ಒಂಟಿತನ ಓಡಿಸಲೆಂದೇ ವಸುಧೇಂದ್ರರ ಹಂಪಿ ಎಕ್ಸ್ ಪ್ರೆಸ್ ಹತ್ತಿದ್ದೆ!
ವಿಷಯ ಇಷ್ಟೇ. ನನ್ನ ಹೆಂಡತಿಗೆ ಮೂಡುಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ಲೆಕ್ಚರರ್ ಕೆಲಸ ಸಿಕ್ಕಿದೆ. ಹಾಗಾಗಿ ಈಗ ಅವಳೊಂದು ತೀರ, ನಾನೊಂದು ತೀರ.
ನಾನು ಒಂದು ಫೋನು ಕೂಡ ಮಾಡದೆ ಮೋಹನ ಆಳ್ವರು ನನ್ನ ಹೆಂಡತಿಗೆ ಕೆಲಸ ಕೊಟ್ಟಿದ್ದಾರೆ. ಅವರ ಪ್ರೀತಿಗೆ ನಾನು ಮತ್ತು ಅವಳು ಇಬ್ಬರೂ ಋಣಿ. ಆಕೆ ಕನ್ನಡದಲ್ಲಿ ಎಂ.ಎ. ಮಾಡಿ ನಂತರ ಜೋಗಿ ಅವರ ಬರಹದ ಕುರಿತು ಎಂಫಿಲ್ ಪ್ರಬಂಧ ಬರೆದಿದ್ದಾಳೆ. ಇಷ್ಟೆಲ್ಲ ಕಲಿತು ಮನೆಯಲ್ಲಿ ಇರುವ ಹಾಗಾಯ್ತಲ್ಲ ಎಂಬ ಬೇಸರ. ಇಷ್ಟೆಲ್ಲ ಕಲಿತ ಮೇಲೆ ಸ್ವಲ್ಪ ದಿನವಾದರೂ ಕೆಲಸ ಮಾಡಬೇಕು. ಇಲ್ಲವಾದಲ್ಲಿ ಕಲಿತದ್ದೆಲ್ಲ ವೇಸ್ಟ್ ಎಂಬ ಚಿಂತೆ.
ಕೆಲಸವಿಲ್ಲದೆ ಮನೆಯಲ್ಲಿರಲು ಕಷ್ಟ. ಕೆಲಸಕ್ಕೆ ಹೋಗಲು ಇಷ್ಟ. ಗಂಡನ ಬಿಟ್ಟು ಬೇರೆ ಊಡಿನಲ್ಲಿ ಕೆಲಸಕ್ಕೆ ಹೋದರೆ ನಷ್ಟ!
ಈ ಗೊಂದಲದಲ್ಲೇ ದಿನ ಕಳೆದ ಆಕೆ ಅಂತೂ ಅಂತಿಮವಾಗಿ ಕೆಲಸಕ್ಕೆ ಸೇರುವ ನಿರ್ಧಾರ ಕೈಗೊಂಡಳು. ಬೇಡ ಎಂದು ಮಹಿಳಾ ಅಭ್ಯುದಯದ ವಿರೋಧಿಯಾಗಲು ನನಗೆ ಇಷ್ಟವಿರಲಿಲ್ಲ. ಆಕೆಗೆ ಕೆಲಸಕ್ಕೆ ಸೇರುವ ಉಮೇದಿ ಇತ್ತಾದರೂ, ಕೆಲಸ ಸಿಕ್ಕೇ ಬಿಟ್ಟಿತು ಅನ್ನುವಾಗ ಗಂಡನನ್ನು ಬಿಟ್ಟು ಹೋಗಬೇಕಲ್ಲ ಎಂಬ ಕಾರಣಕ್ಕೆ ಅವಳಿಗೆ ಕೆಲಸದ ಬಗ್ಗೆ ವೈರಾಗ್ಯ ಮೂಡಿಬಿಟ್ಟಿತ್ತು. ಆದರೆ ಅರ್ಜಿ ಹಾಕಿದ ಮೇಲೆ, ಆಳ್ವರು ಕೆಲಸ ಕೊಟ್ಟ ಮೇಲೆ ತಿರಸ್ಕರಿಸುವುದು ಸರಿಯಲ್ಲ ಅನ್ನಿಸಿತು.
ಆದರೆ ಕೆಲಸ ಸಿಕ್ಕಿದ ದಿನದಿಂದ ಕೆಲಸ ಸಿಕ್ಕಿತು ಎಂಬ ಸಂತೋಷಕ್ಕಿಂತ ನನ್ನ ಬಿಟ್ಟು ಹೋಗಬೇಕಲ್ಲ ಎಂಬ ದುಃಖ ಅವಳಲ್ಲಿ ಹೆಚ್ಚಾಗಿತ್ತು. ಮಾತು ಮಾತಿಗೂ ‘ಅಳುವೇ ತುಟಿಗೆ ಬಂದಂತೆ’!
ಅವಳನ್ನು ದಿಲ್ಲಿಯ ನಿಜಾಮುದ್ದೀನ್ ನಿಲ್ದಾಣದಲ್ಲಿ ತ್ರಿವೇಂದ್ರಂ ರಾಜಧಾನಿ ಎಕ್ಸ್ ಪ್ರೆಸ್ಸಿಗೆ ಹತ್ತಿಸಿ ಬಂದ ನಂತರ ಮನ, ಮನಸೆಲ್ಲ ಖಾಲಿ ಖಾಲಿ. ಹಾಗೇ ಕುಳಿತರೆ ಎಲ್ಲಿ ಕಣ್ಣಲ್ಲಿ ನೀರು ಉಕ್ಕೀತೋ ಎಂಬ ಭಯದಿಂದ ವಸುದೇಂಧ್ರದ ಹಂಪಿ ಎಕ್ಸ್ ಪ್ರೆಸ್ ಹತ್ತಿಬಿಟ್ಟೆ. ಕತೆಗಳೂ ಅದ್ಭುತವಾಗಿದೆ. ಅದು ನನ್ನ ಬೇಸರ, ದುಃಖ ನಿವಾರಿಸಿ, ಮನಸಿಗೆ ಉಲ್ಲಾಸ ನೀಡಿತು. ಅಷ್ಟರ ಮಟ್ಟಿಗೆ ನಾನು ವಸುಧೇಂದ್ರ ಅವರಿಗೆ ಋಣಿ. ಅವರು ಉತ್ತರ ಕರ್ನಾಟಕದ ಕತೆ, ಬಳ್ಳಾರಿ ಗಣಿ ಧೂಳನ್ನು ಕಣ್ಣಿಗೆ ಕಟ್ಟುವಂತೆ, ಮನ ಮುಟ್ಟುವಂತೆ ಚಿತ್ರಿಸಿದ್ದಾರೆ. ಎಂದಿನಂತೆ ಅವರ ಎಲ್ಲ ಕತೆಗಳೂ ಚೆನ್ನಾಗಿವೆ. ಆದರೆ ಕೆಂಪು ಗಿಣಿ ನೀವೆಲ್ಲ ತಪ್ಪದೆ ಓದಬೇಕಾದ ಕತೆ. ನನಗೆ ತುಂಬ ಇಷ್ಟವಾಯಿತು.
ಹೆಂಡತಿ ಇಲ್ಲದ ಬೇಸರದ ನಡುವೆಯೂ!
ಅವಳನ್ನು ರೈಲಿನಲ್ಲಿ ಕೂರಿಸಿ, ಕಣ್ಣಿಂದ ಮರೆಯಾಗುವರೆಗೂ ಟಾಟಾ ಮಾಡಿ, ಬಂದು ಕಾರಲ್ಲಿ ಕೂತರೆ ಮನಸೆಲ್ಲ ಶೂನ್ಯ. ಕಣ್ಣಲ್ಲಿ ನೀರು ಉಕ್ಕೇ ಬಿಡುತ್ತದೇನೋ ಎಂಬಂತೆ. ನಾವು ಗಂಡಸರು ನೋಡಿ. ಸಾರ್ವಜನಿಕವಾಗಿ ಅಳುವಂತಿಲ್ಲ! ಕಾರಿನಲ್ಲಿ ಕೂತು ಮನೆ ಕಡೆ ಹೊರಟರೆ ಮನೆಗೆ ಯಾಕೆ ಹೋಗಬೇಕು ಎಂಬ ಪ್ರಶ್ನೆಗೆ ಎಷ್ಟು ಹುಡುಕಿದರೂ ಕಾರಣ ಸಿಗಲಿಲ್ಲ. ಮನುಷ್ಯ ಅದೆಷ್ಟು ಬೇಗ ಪರಾವಲಂಬಿಯಾಗಿಬಿಡುತ್ತಾನೆ ಅನ್ನಿಸಿತು.
ಒಂಟಿ ಬಾಳೆಂದರೆ ನನಗೆ ಮೊದಲಿನಿಂದಲೂ ರೇಜಿಗೆ. ಎಂ.ಎ. ಮಾಡಲು ಧಾರವಾಡದಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಹೊರಟಾಗ ಎಲ್ಲಿ ಉಳಿಯುವುದು, ಹಾಸ್ಟೆಲ್ಲಾ? ರೂಮಾ? ಎಂಬ ಪ್ರಶ್ನೆ ಉದ್ಭವಿಸಿತು. ಆಗ ಅಲ್ಲಿರುವ ದೊಡ್ಡಪ್ಪನ ಮನೆಯಲ್ಲೇ ಉಳಿಯುವುದು ಅಂತ ನಾನೇ ಅಂದುಕೊಂಡಿದ್ದೆ. ಅವರ್ಯಾರನ್ನೂ ಕೇಳದೆ. ಅವರದ್ದು ಆಗ ಸಣ್ಣ ಮನೆ. ನನ್ನ ತಂಗಿಯರಾದ ಅವರಿಬ್ಬರು ಮಕ್ಕಳು ಬೇರೆ ಇದ್ದಾರೆ. ನಾನೂ ಒಬ್ಬ ಸೇರಿಕೊಂಡರೆ ಕಷ್ಟ ಎಂಬುದು ಗೊತ್ತಿದ್ದೂ ನಾನು ಅವರ ಮನೆಯಲ್ಲೇ ಉಳಿಯಬೇಕು ಅಂದುಕೊಂಡೆ. ಯಾಕೆಂದರೆ ನನಗೆ ಒಂಟಿಯಾಗುವ ಭಯ ಇತ್ತು.
ದೊಡ್ಡಪ್ಪ-ದೊಡ್ಡಾಯಿಯ ಆತಿಥ್ಯ, ತಂಗಿಯರ ಪ್ರೀತಿ, ಗೆಳೆಯ ಪ್ರಸನ್ನ ಹಾಗೂ ಇತರ ಕೆಲವು ಗೆಳೆಯರ ಆಪ್ತತೆ ನಡುವೆ ೨ ವರ್ಷದ ಎಂ.ಎ. ಮುಗಿದಿದ್ದೇ ಗೊತ್ತಾಗಲಿಲ್ಲ. ಅಲ್ಲಿಂದ ಮುಂದೆ ಪಯಣ ಬೆಳೆಸಿದ್ದು ಮಂಗಳೂರಿಗೆ. ವಿಜಯ ಕರ್ನಾಟಕ ವರದಿಗಾರನಾಗಿ. ಅಲ್ಲಿ ಹೆಚ್ಚು ಕಡಿಮೆ ೬ ತಿಂಗಳು ಒಂಟಿಯಾಗಿ, ಯೆಯ್ಯಾಡಿಯ ಭೋಜಣ್ಣ ಅವರ ಮನೆಯ ಸಣ್ಣ ಕೊಠಡಿಯಲ್ಲಿದ್ದೆ. ನಿಧಾನವಾಗಿ ನನ್ನ ಸಹೋದ್ಯೋಗಿ ಯೋಗೀಶ್ ಹೊಳ್ಳನ ಪರಿಚಯವಾಗಿ, ಆತ್ಮೀಯನಾಗಿ ಅವನ ಜೊತೆ ಸೇರಿಕೊಂಡೆ. ವಿಜಯ ಕರ್ನಾಟಕದಲ್ಲೇ ಕೆಲಸ ಮಾಡುವ ರಾಮ ನಮ್ಮಿಬ್ಬರನ್ನು ಸೇರಿಕೊಂಡ. ಮೊದಲ ೬ ತಿಂಗಳಲ್ಲಿ ಕೂಡ ಒಂದೆರಡು ತಿಂಗಳು ಮಾತ್ರ ಒಂಟಿ ಅನ್ನಿಸಿತು. ಅದನ್ನು ದೂರ ಮಾಡಲೆಂದೇ ಕೆಲಸಕ್ಕೆ ಅಂಟಿಕೊಂಡುಬಿಟ್ಟಿದೆ. ರೂಮಲ್ಲಿ ಊಟ-ತಿಂಡಿ ಮಾಡುತ್ತಿರಲಿಲ್ಲ. ಎಲ್ಲ ಹೊರಗೇ. ಹೀಗಾಗಿ ಬೆಳಗ್ಗೆ ೮.೦೦ ಗಂಟೆಗೆಲ್ಲ ಕಚೇರಿ ತಲುಪಿ ಬಿಟ್ಟಿರುತ್ತಿದ್ದೆ. ಆಮೇಲೆ ನಿಧಾನವಾಗಿ ಅಕ್ಕಪಕ್ಕದ ರೂಮಿನಲ್ಲಿ ಇರುತ್ತಿದ್ದ ಮಹೇಶ ಪಟ್ಟಾಜೆ, ನಾರ್ಸಿನ್ ಡಿಸೋಜ ಹಾಗೂ ಇನ್ನೂ ಕೆಲವರು ಪರಿಚಯವಾದರು. ಇದೇ ಅವಧಿಯಲ್ಲಿ ಪರಿಚಯದ ಶಿಶಿರ್ ಹೆಗಡೆ ಟ್ಯೂಶನ್‌ಗೆಂದು ಮಂಗಳೂರಿಗೆ ಬಂದವ ನನ್ನ ರೂಮಿನಲ್ಲೇ ಇದ್ದ. ಯೋಗೀಶ್ ಹಾಗೂ ರಾಮನ ಜೊತೆ ಸೇರಿಕೊಂಡ ಮೇಲಂತೂ ಒಂಟಿ ಅನ್ನಿಸಲೇ ಇಲ್ಲ. ಅವರನ್ನು ಬಿಟ್ಟು ನಾನೇ ಪ್ರತ್ಯೇಕ ಮನೆ ಮಾಡಿದ್ದು ಮದುವೆಯಾದ ಮೇಲೆಯೆ. ಆಮೇಲೆ ಹೆಂಡತಿ ಜೊತೆಯಲ್ಲಿದ್ದಳು.
ಹೀಗಾಗಿ ನನ್ನ ಇಡೀ ಜೀವನದಲ್ಲಿ ನಾನು ಒಂಟಿಯಾಗಿ ಜೀವಿಸಿದ್ದು ಬರೀ ಒಂದೆರಡು ತಿಂಗಳು ಮಾತ್ರ ಅನ್ನಬಹುದು.
ಅಷ್ಟರ ಮಟ್ಟಿಗೆ ನಾನು `ಸಂಘ' ಜೀವಿ!!!!
ಹೀಗಾಗಿ ಊಟ, ತಿಂಡಿಗೆ ನಾನು ಅವಳನ್ನೇ ಅವಲಂಬಿಸಿದ್ದೆ. ತೊಳೆಯುವ ಬಟ್ಟೆ ನೆನೆಸಿಡುತ್ತಿದ್ದಳು. ಕೆಲಸಕ್ಕೆ ಹೋರಟಾಗ, ಬಂದ ಕೂಡಲೆ ಜೂಸಿನ ಗ್ಲಾಸು ತಂದು ಕೈಗೆ ಕೊಡುತ್ತಿದ್ದಳು. ಬೆಳಗ್ಗೆ ನನ್ನಷ್ಟಕ್ಕೆ ಪೇಪರ್ ಓದುತ್ತಾ ಕೂತಿದ್ದರೆ ತಿಂದಿ, ಚಾ ತಂದು ಇಡುತ್ತಿದ್ದಳು. ರಾತ್ರಿ ಊಟದ ನಂತರ ಹಣ್ಣನ್ನು ಚೆಂದಕೆ ಕೊಯ್ದು, ಹೋಳು ಮಾಡಿ, ಫೋರ್ಕ್ ಸಮೇತ ತಂದಿಡುತ್ತಿದ್ದಳು. ಟಿವಿ ನೋಡುತ್ತ ಗುಳುಂ ಮಾಡುವುದು ಮಾತ್ರ ನನ್ನ ಕೆಲಸವಾಗಿತ್ತು.
ಆದರೆ ಈಗ?
ಅನಿವಾರ್ಯವಾಗಿ ಒಂಟಿ ಜೀವನ ನಡೆಸಬೇಕಿದೆ.
ಆದರೆ ಅವಳು ಮೂಡುಬಿದಿರೆಗೆ ಹೋಗಿದ್ದಾಳೆ ಅಂತ ನಾನು ಮೂಡು ಕೆಡಿಸಿಕೊಂಡು ಕೂರುವ ಹಾಗಿಲ್ಲವಲ್ಲ. ಬೇಸರ ಮರೆಯಲು ಸಂಗಾತಿಯಾಗಿ ಪುಸ್ತಕಗಳಿವೆ. ಓದಬೇಕೆಂದು ತಂದಿಟ್ಟುಕೊಂಡ ಸಾಕಷ್ಟು ಪುಸ್ತಕಗಳಿವೆ. ಇನ್ನೂ ಕೆಲವು ನಾನು ಓದದ ಪುಸ್ತಕಗಳನ್ನು ತರುವಂತೆ ರಾಜ್ಯಕ್ಕೆ ಹೋಗಿರುವ ಗೆಳೆಯ ಶಿವಪ್ರಸಾದ್‌ಗೆ ಹೇಳಿದ್ದೇನೆ. ಕೆಲವೊಮ್ಮೆ ಹೆಂಡತಿಯ ನೆನಪೂ ಆಗದಷ್ಟು ಕೆಲಸಗಳಿರುತ್ತವೆ. ಅಡುಗೆ ಮಾಡಲು ಕೆಲಸದವಳನ್ನು ಗೊತ್ತು ಮಾಡಿದ್ದೇನೆ. ಹಾಗಾಗಿ ಅಷ್ಟು ಕಷ್ಟವಾಗಲಿಕ್ಕಿಲ್ಲ ಅಂದುಕೊಂಡಿದ್ದೇನೆ.
ಆದರೆ ಪುಸ್ತಕ ಓದಿದಾಗ, ಟಿವಿಯಲ್ಲಿ ಏನೋ ನೋಡಿದಾಗ ಏನಾದರೂ ಹೇಳಬೇಕೆಂದರೆ ಪಕ್ಕದಲ್ಲಿ ಯಾರೂ ಇರುವುದಿಲ್ಲ ಅದೊಂದೇ ಬೇಸರ.ಪಾಯಿ
ಬಹುಶಃ ಇದಕ್ಕೇ ನರಸಿಂಹ ಸ್ವಾಮಿಯವರು `ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರುಪಾಯಿ' ಅಂತ. ಅಲ್ವಾ?

Tuesday, May 26, 2009

ಬ್ಲಾಗು, ಹೂಂಸು ಮತ್ತು ಬಕ್‌ಬಕ್!



ಬಹಳ ಜನರಿಗೆ ಬ್ಲಾಗು ಬೋರಾಗುತ್ತಿದೆ!
ನಾವು ಭಾರತೀಯರೇ ಹಾಗೆ. ನಮಗೆ ಆರಂಭ ಶೂರತ್ವ. ಬ್ಲಾಗು ಎಂಬ ಹೊಸ ಲೋಕ ತೆರೆದುಕೊಂಡಾಗ ಎಲ್ಲರೂ ಬ್ಲಾಗು ಆರಂಭಿಸಿದ್ದೇ ಆರಂಭಿಸಿದ್ದು. ಈಗ ಬಹುತೇಕ ಜನ ಅದನ್ನು ನಿಲ್ಲಿಸಿದ್ದಾರೆ. ನನ್ನಂಥ ಕೆಲವರು ಆಗಾಗ ನೆಪಕ್ಕೆ ಏನೋ ಬರೆದು ಸುಮ್ಮನಾಗುತ್ತಿದ್ದಾರೆ.
ಬ್ಲಾಗಿನ ಬಗೆಗಿದ್ದ ಬೆರಗು ಕಡಿಮೆಯಾಗಿದೆ. ಬರೆಯುವ ತೆವಲು ತೀರಿದೆ!
ನನ್ನ ಬಹಳ ಆತ್ಮೀಯರೊಬ್ಬರು ಯಾವಾಗಲು ಬ್ಲಾಗು ಬರವಣಿಗೆಯನ್ನು ಟೀಕಿಸುತ್ತಿರುತ್ತಾರೆ. ಅವರು ಇತ್ತೀಚೆಗೆ ಬ್ಲಾಗಿನ ಬಗ್ಗೆ ಹೇಳುತ್ತ ‘ಬ್ಲಾಗೆಂದರೆ ಒಂದು ಕೋಣೆಯಲ್ಲಿ ಒಬ್ಬನೇ ಕುಳಿತು ಹೂಂಸು ಬಿಟ್ಟು ಒಬ್ಬನೇ ಆಸ್ವಾದಿಸಿದಂತೆ’ ಎಂದು ವ್ಯಾಖ್ಯಾನಿಸಿದ್ದರು.
ಅವರ ಮಾತಿಗೆ ನಾನು ನಕ್ಕು ಸುಮ್ಮನಾಗಿದ್ದೆ. ಆದರೆ ನಂತರ ಯೋಚಿಸುವಾಗ ಬ್ಲಾಗೆಂದರೆ ಒಬ್ಬನೇ ಹೂಂಸು ಬಿಟ್ಟು ಒಬ್ಬನೇ ಆಸ್ವಾದಿಸುವುದಾದರೆ, ಪತ್ರಿಕೆಗಳಿಗೆ ಬರೆಯುವುದು ಹೂಂಸು ಬಿಟ್ಟು ಊರಿಗೆಲ್ಲ ನಾಥ ಕೊಟ್ಟಂತೆಯಾ? ಎಂಬ ಅನುಮಾನ ಶುರುವಾಗಿಬಿಟ್ಟಿತು!
ಬ್ಲಾಗು ಯಾರು ಓದುತ್ತಾರೆ? ಓದಿದರೂ ಎಷ್ಟು ಜನ ಓದಿಯಾರು? ಅದರಿಂದ ಸಿಗುವುದೇನು? ಬ್ಲಾಗಿಗೆ ಬರೆಯುವ ಸಮಯವನ್ನು ಬೇರೆಯದಕ್ಕೆ ಬಳಸಿಕೊಳ್ಳಬಹುದಲ್ಲವಾ? ಎಂಬುದು ಅವರ ಪ್ರಶ್ನೆ.
ಅದು ಸರಿಯೇ ಬ್ಲಾಗೇನು ಲಕ್ಷಾಂತರ ಜನ ಓದುವುದಿಲ್ಲ. ಆದರೆ ನಮಗೆ ಅನ್ನಿಸಿದ್ದನ್ನೆಲ್ಲ ಬರೆಯಲು ಬ್ಲಾಗೊಂದು ವೇದಿಕೆ ಅಷ್ಟೆ. ನಾಲ್ಕೇ ಜನ ಓದಲಿ. ಇಬ್ಬರೇ ಪ್ರತಿಕ್ರಿಯಿಸಲಿ. ಅಷ್ಟೇ ಸಮಾದಾನ. ನನ್ನ ಮನದೊಳಗಿನ ಮಾತನ್ನು ಒಂದಿಬ್ಬರಾದರೂ ಕೇಳಿಸಿಕೊಂಡರೆ ಅಷ್ಟೇ ಸಾಕು. ಅದಕ್ಕಾಗಿ ಬ್ಲಾಗು ಬರೆಯೋದು.
ಲಕ್ಷಾಂತರ ಜನ ಓದಲಿ, ನೋಡಲಿ. ಅದರಿಂದ ನನಗೆ ಸಾವಿರಾರು ಆದಾಯ ಬರಲಿ ಎಂದು ಬಯಸುವವರು ಖಂಡಿತ ಬ್ಲಾಗು ಬರೆಯುವುದಿಲ್ಲ.
ಅವರು ಧಾರಾವಾಹಿ ಬರೆಯುತ್ತಾರೆ!
ಬರವಣಿಗೆಯ ಲೋಕದಲ್ಲಿ ಅಂಬೆಗಾಲಿಡುತ್ತಿರುವ ನನ್ನಂಥಹ ಅದೆಷ್ಟೋ ಮಂದಿಗೆ ಬ್ಲಾಗು ಸಹಾಯಮಾಡಿದೆ. ನಮಗನ್ನಿಸಿದ್ದನ್ನು ಬರೆದು, ಅದರ ಬಗ್ಗೆ ಬೇರೆಯವರ ಅಭಿಪ್ರಾಯ ತಿಳಿದುಕೊಳ್ಳಲು, ನಮ್ಮ ಬರವಣಿಗೆ ಶೈಲಿ ಉತ್ತಮ ಪಡಿಸಿಕೊಳ್ಳಲು ಬ್ಲಾಗು ಸಾಧನವಾಗಿದೆ. ಇದರಿಂದಲೇ ಪರಿಚಯವಾದರು ಅದೆಷ್ಟೋ ಮಂದಿ. ಅವರ ಊರು, ಜಾತಿ ಯಾವುದೂ ಗೊತ್ತಿಲ್ಲ. ಬ್ಲಾಗು ಗೆಳೆತನಕ್ಕೂ ದಾರಿ ಮಾಡಿಕೊಟ್ಟಿದೆ.
ಹಾಗಂತ ಬ್ಲಾಗೇನು ಮಹಾ ಸುಬಗರ ಬೀಡಾಗೇನೂ ಉಳಿದಿಲ್ಲ. ಹುಡುಗಿಯರ ಬ್ಲಾಗಿಗೆ ಕೆಟ್ಟ ಕಾಮೆಂಟು ಹಾಕುವ, ಅನಾಮಧೇಯವಾಗಿ ಅನಗತ್ಯ ಟೀಕಿಸಿ ಬರೆಯುವವರೂ ಬ್ಲಾಗನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ನಮಗಾಗದವರ ಬಗ್ಗೆ ಬರೆಯಲೂ ಬಳಸಿದ್ದಾರೆ. ಏನೇನೋ ಬರೆಯುತ್ತೇನೆ ಎಂದು ಹೆದರಿಸುವವರೂ ಇದ್ದಾರೆ. ನನಗೆ ಬಹಳ ಗೊತ್ತಿದೆ ಎಂದು ಆತ್ಮ ರತಿಯಲ್ಲಿ ಮುಳುಗಿದವರೂ ಇದ್ದಾರೆ.
ಇದೆಲ್ಲ ಏನೇ ಇರಲಿ ಬ್ಲಾಗಿಗೆ ಮೊದಲಿನ ಬೆರಗು ಉಳಿದಿಲ್ಲ ಎಂಬುದಂತೂ ಸತ್ಯ. ಅದೇನು ಬ್ಲಾಗಿನ ಸಂಖ್ಯೆ ಹೆಚ್ಚಾಗಿದ್ದಕ್ಕೋ ಅಥವಾ ದಿನಕಳೆದಂತೆ ಪ್ರತಿಯೊಂದೂ ಆಕರ್ಷಣೆ ಕಳೆದುಕೊಳ್ಳುತ್ತದೆ ಎಂಬ ನಿಯಮ ಬ್ಲಾಗಿಗೂ ಅನ್ವಯವಾದದ್ದಕ್ಕೋ ತಿಳಿಯದಾಗಿದೆ.
ಅಂತೂ ಒಬ್ಬರು ಬ್ಲಾಗು ಟೀಕಿಸಿದ್ದಕ್ಕೆ ಈ ಚಿಕ್ಕ ಬರಹ ಹುಟ್ಟಿಕೊಂಡಿತು. ಇಂಥದ್ದನ್ನೆಲ್ಲ ಬ್ಲಾಗಿನಲ್ಲಿ ಬರೆಯದೇ ವಿಜಯ ಕರ್ನಾಟಕದಲ್ಲಿ ಪ್ರಕಟಿಸಲು ಸಾದ್ಯವೇ? ಅಥವಾ ಇಂಥದ್ದಕ್ಕಾಗಿ ನಾನೇ ಒಂದು ಪತ್ರಿಕೆ ಆರಂಭಿಸೋದು ಸಾದ್ಯವೇ? ಇಲ್ಲ.
ಹೀಗಾಗಿ ಬ್ಲಾಗು. ಇದಕ್ಕೇನು ಮಹಾ ಸಮಯ ಬೇಕಾಗಿಲ್ಲ. ಇದಿಷ್ಟು ಬರೆಯಲು ೫ ನಿಮಿಷ ಸಾಕು. ಆದ್ದರಿಂದ ಬ್ಲಾಗು ಬರವಣಿಗೆಯಿಂದ ಮಹಾ ಸಮಯ ಹಾಳು ಎಂಬುದು ಸರಿಯಲ್ಲ ಎಂಬುದು ನನ್ನ ವಾದ.
ಹೂಂ ಅಂತೀರಾ? ಉಹೂಂ ಅಂತೀರಾ?

Monday, May 18, 2009

ಕರಗಿದ ಬಿಜೆಪಿಯ ಉಕ್ಕಿನ ಮನುಷ್ಯ



ಲೋಕಸಭೆ ಚುನಾವಣೆಯಲ್ಲಿನ ಜನಾದೇಶ ಬಿಜೆಪಿಯನ್ನು ರಾಷ್ಟ್ರ ಮಟ್ಟದ ಪಕ್ಷವಾಗಿ, ಅಧಿಕಾರಕ್ಕೇರುವಷ್ಟು ಶಕ್ತಿಯುತವಾಗಿ ಬೆಳೆಸಿದ ಲಾಲಕೃಷ್ಣ ಅಡ್ವಾಣಿ ಅವರ ಪ್ರಧಾನಿ ಕನಸನ್ನು ಭಗ್ನಗೊಳಿಸಿರುವುದರ ಜೊತೆಗೆ ಅವರ ಯುಗಾಂತ್ಯಕ್ಕೆ ಬರೆದ ಮುನ್ನುಡಿಯಂತಿದೆ.

‘ಅಜಾತಶತ್ರು’ ಅಟಲ್ ಬಿಹಾರಿ ವಾಜಪೇಯಿ ೨ ಬಾರಿ ದೇಶದ ಜನರ ಮೇಲೆ ಮಾಡಿದ ಜಾದೂವನ್ನು ಮಾಡಿ ಬಿಜೆಪಿಯನ್ನು ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ತರಲು ಬಿಜೆಪಿಯ ‘ಉಕ್ಕಿನ ಮನುಷ್ಯ’ ಎಂದೇ ಹೆಸರಾಗಿರುವ ಲಾಲಕೃಷ್ಣ ಅಡ್ವಾಣಿ ವಿಫಲರಾಗಿದ್ದಾರೆ. ಪರಿಣಾಮ ಅವರು ಪ್ರಧಾನಿ ಪಟ್ಟದ ಆಕಾಂಕ್ಷಿಯಾಗಿಯೇ ರಾಜಕೀಯ ಜೀವನ ಮುಗಿಸಬೇಕಾದ ಸ್ಥಿತಿ ಉದ್ಭವವಾಗಿದೆ.

ಲಾಲಕೃಷ್ಣ ಅಡ್ವಾಣಿ ಅವರಿಗೆ ಈಗಾಗಲೇ ೮೧. ಮಾನಸಿಕವಾಗಿ ಅಥವಾ ದೈಹಿಕವಾಗಿ ಅಡ್ವಾಣಿ ಮೊದಲಿನಷ್ಟು ದೃಢವಾಗಿ ಉಳಿದಿಲ್ಲ. ಅಲ್ಲದೆ ಈ ಬಾರಿ ಜನ ಕಾಂಗ್ರೆಸ್ ನೇತೃತ್ವದ ಯುಪಿಎಗೆ ಸಾಕಷ್ಟು ಸಂಸದರ ಬೆಂಬಲ ದೊರಕಿಸಿಕೊಟ್ಟಿದ್ದಾರೆ. ಹೀಗಾಗಿ ಮುಂದಿನ ೫ ವರ್ಷದಲ್ಲಿ ಈ ಸರಕಾರ ಬೀಳುವ ಸಾದ್ಯತೆಗಳು ತೀರ ಕಡಿಮೆ. ಇನ್ನು ೫ ವರ್ಷದವರೆಗೆ ಲಾಲಕೃಷ್ಣ ಅಡ್ವಾಣಿ ರಾಜಕೀಯದಲ್ಲಿರುವುದು ಹಾಗೂ ಅದರ ನಂತರ ಅವರು ಮತ್ತೆ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ಚುನಾವಣೆ ನೇತೃತ್ವ ವಹಿಸುವುದು ಬಹುತೇಕ ಅಸಾದ್ಯ ಸಂಗತಿ ಎಂಬುದರಲ್ಲಿ ಅನುಮಾನವಿಲ್ಲ.

ಈ ಲೋಕಸಭೆ ಚುನಾವಣೆ ನಡುವಿನಲ್ಲೇ ಸೋಲಿನ ಸುಳಿವರಿತ ಕೆಲವು ಬಿಜೆಪಿ ನಾಯಕರು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಭವಿಷ್ಯದ ಪ್ರಧಾನಿ ಅಭ್ಯರ್ಥಿ ಎಂದು ಬಹಿರಂಗವಾಗಿಯೇ ಹೇಳಿದರು. ಇದನ್ನು ಸ್ವತಃ ಮೋದಿ ಅಲ್ಲಗಳೆದಿದ್ದಾರಾದರೂ, ವಾಜಪೇಯಿ ನಂತರ ಪ್ರಧಾನಿ ಅಭ್ಯರ್ಥಿಯಾಗಿ ದೇಶಾದ್ಯಂತ ಜನರನ್ನು ಸೆರಳೆಯಬಲ್ಲ ಶಕ್ತಿ ಇರುವುದು ನರೇಂದ್ರ ಮೋದಿಗೆ ಮಾತ್ರ ಎಂಬುದನ್ನು ಬಿಜೆಪಿ ನಾಯಕರು ಒಪ್ಪಿಕೊಳ್ಳುತ್ತಾರೆ. ಹೀಗಾಗಿ ಮುಂದಿನ ಲೋಕಸಭೆ ಚುನಾವಣೆ ಹೊತ್ತಿಗೆ ಮೋದಿ ಪ್ರಧಾನಿ ಅಭ್ಯರ್ಥಿಯಾಗಿ ಹೊರಹೊಮ್ಮುದನ್ನು ಬಹುತೇಕ ಬಿಜೆಪಿ ನಾಯಕರು ಬಯಸುತ್ತಿದ್ದಾರೆ.

೧೯೯೦ರ ದಶಕದಲ್ಲಿ ಅಯೋಧ್ಯೆ ಚಳವಳಿಯ ನೇತೃತ್ವ ವಹಿಸಿದ ಲಾಲಕೃಷ್ಣ ಅಡ್ವಾಣಿ ದೇಶಾದ್ಯಂತ ರಥಯಾತ್ರೆ ನಡೆಸಿ, ಬಿಜೆಪಿಯನ್ನು ರಾಷ್ಟ್ರೀಯ ಮಟ್ಟದ ಪಕ್ಷವನ್ನಾಗಿ ಮಾಡಿದರು. ಅಯೋಧ್ಯಾ ಚಳವಳಿ ಬಿಜೆಪಿಗೆ ಅನಿರೀಕ್ಷಿತ ಜನಬೆಂಬಲ ದೊರಕಿಸಿಕೊಟ್ಟಿತು. ಈ ಚಳವಳಿ ದೇಶದ ರಾಜಕೀಯ ಚಿತ್ರಣವನ್ನೇ ಬದಲಾಯಿಸಿತು.
ಇಷ್ಟೆಲ್ಲ ಹೋರಾಟದ ನೇತೃತ್ವ ವಹಿಸಿ ಪಕ್ಷದ ಸಂಪೂರ್ಣ ಹಿಡಿತ ಲಾಲಕೃಷ್ಣ ಅಡ್ವಾಣಿ ಬಳಿ ಇತ್ತು. ಪಕ್ಷದ ಸೈದ್ಧಾಂತಿಕ ನಿಲುವಿನ ಪ್ರತಿನಿಧಿಯಾಗಿ ಲಾಕೃಷ್ಣ ಅಡ್ವಾಣೀ ಇದ್ದರು. ಸಂಘಪರಿವಾರದ ನಿಯಂತ್ರಣ ಬಿಟ್ಟರೆ ಬಿಜೆಪಿ ಮಟ್ಟಿಗೆ ಲಾಲಕೃಷ್ಣ ಅಡ್ವಾಣಿ ಪ್ರಶ್ನಾತೀತ ನಾಯಕರಾಗಿದ್ದರು. ಅಂತಹ ಸಂದರ್ಭದಲ್ಲಿ ಕೂಡ ಅಡ್ವಾಣಿ ಅವರು ಅಟಲ್ ಬಿಹಾರಿ ವಾಜಪೇಯಿ ಅವರನ್ನು ೧೯೯೯೫ರಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಿದರು. ವಾಜಪೇಯಿ ಪ್ರಧಾನಿಯಾಗಿದ್ದಾಗ ಉಪಪ್ರಧಾನಿಯಾಗಿ ಕಾರ್ಯನಿರ್ವಹಿಸಿದರು. ೨೦೦೫ರಲ್ಲಿ ವಾಜಪೇಯಿ ಅವರು ಅಡ್ವಾಣಿ ಅವರನ್ನು ತಮ್ಮ ಮುಂದಿನ ನಾಯಕ ಎಂದು ಪರೋಕ್ಷವಾಗಿ ಹೇಳುವ ಮೂಲಕ ಅಡ್ವಾಣಿ ಅವರ ಋಣ ತೀರಿಸಿದರು.

ಇದಾದ ಕೆಲವೇ ದಿನದಲ್ಲಿ ಅಡ್ವಾಣಿ ಅವರ ಗೃಹಚಾರ ಕೆಟ್ಟಿರು. ಪಾಕಿಸ್ತಾನಕ್ಕೆ ಹೋದ ಅಡ್ವಾಣಿ ಮಹಮ್ಮದ್ ಅಲಿ ಜಿನ್ಹಾ ಅವರನ್ನು ಜಾತ್ಯತೀತ ನಾಯಕ ಎಂದು ಕೊಂಡಾಡಿದರು. ಅದು ಸಂಘಪರಿವಾರದ ಕಣ್ಣು ಕೆಂಪಾಗಿಸಿತು. ಅಡ್ವಾಣಿ ಅವರಿಗಿದ್ದ ‘ಉಕ್ಕಿನ ಮನುಷ್ಯ’ ಎಂಬ ಬಿರುದು ಕೂಡ ಸದ್ದಿಲ್ಲದೆ ಬದಿಗೆ ಸರಿಯಿತು. ಪರಿಣಾಮ ೨೦೦೫ರ ಡಿ.೩೧ರಂದು ಲಾಲಕೃಷ್ಣ ಅಡ್ವಾಣಿ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.

ಅದರ ನಂತರ ಲಾಲಕೃಷ್ಣ ಅಡ್ವಾಣಿ ಅವರ ಒಳಗಿನ ‘ಉಕ್ಕಿನ ಮನುಷ್ಯ’ ಹೆಚ್ಚಾಗಿ ಕಾಣಿಸಿಕೊಳ್ಳಲೇ ಇಲ್ಲ. ಅಟಲ್‌ಬಿಹಾರಿ ವಾಜಪೇಯಿ ಅವರಿಗಿದ್ದ ‘ಜಾತ್ಯತೀತ’ ನಿಲುವನ್ನು ತಾನೂ ತಳೆಯಲು ಯತ್ನಿಸಿದ ಲಾಲಕೃಷ್ಣ ಅಡ್ವಾಣಿ ಬಹುತೇಕ ವಿಷಯಗಳಲ್ಲಿ ಮುಂದೆ ರಾಜಿ ಮಾಡಿಕೊಂಡಿದ್ದನ್ನು ಗಮನಿಸಬಹುದು. ಪರಿಣಾಮ ಅವರು ಅತ್ತ ‘ಜಾತ್ಯತೀತ’ರೂ ಆಗಲಿಲ್ಲ, ಕಠೋರ ಹಿಂದೂ ನಾಯಕರಾಗಿಯೂ ಮುಂದುವರಿಯಲಿಲ್ಲ. ಹೀಗೆ ವಯಸ್ಸಿನ ಹೊಡೆತಕ್ಕೊ, ಅನುಭವದ ಭಾರಕ್ಕೊ, ಪ್ರಧಾನಿ ಪಟ್ಟದಾಸೆಗೊ ಅಡ್ವಾಣಿ ಮೆತ್ತಗಾದರು.

೮೧ ವರ್ಷವಾಗಿರುವದನ್ನೂ ಲೆಕ್ಕಿಸದೆ ಈ ಚುನಾವಣೆ ಪ್ರಚಾರದಲ್ಲಿ ಲಾಲಕೃಷ್ಣ ಅಡ್ವಾಣಿ ಯುವಕರಿಗೆ ಕಡಿಮೆ ಇಲ್ಲದಂತೆ ಕೆಲಸ ಮಾಡಿದರು. ಉತ್ತರ ಭಾರತದ ೪೦ ಡಿಗ್ರಿ ಬಿಸಿಲನ್ನೂ ಲೆಕ್ಕಿಸದೆ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಿದರು. ಪ್ರಚಾರಕ್ಕಾಗಿ ೬೦,೦೦೦ ಕಿ.ಮೀ.ಗಿಂತ ಹೆಚ್ಚು ಪ್ರಯಾಣ ಮಾಡಿದರು. ಆಧುನಿಕ ತಂತ್ರಜ್ಞಾನ, ವೆಬ್‌ಸೈಟ್, ಎಸ್‌ಎಂಎಸ್‌ಗಳನ್ನು ಬಳಸಿದರು. ಯುವ ಮತದಾರರನ್ನು ಸೆಳೆಯುವ ಯತ್ನ ಮಾಡಿದರು. ಇಷ್ಟೆಲ್ಲ ಮಾಡಿಯೂ ಅಡ್ವಾಣಿ ೯೦ರ ದಶಕದಲ್ಲಿ ಗಳಿಸಿದ್ದ ಜನಪ್ರಿಯತೆಯನ್ನು ಗಳಿಸಲು ೨೦೦೯ರಲ್ಲಿ ವಿಫಲರಾದರು.ಪ್ರಧಾನಿಯಾಗುವ ಅವರ ಕನಸು ನನಸಾಗೇ ಉಳಿಯಿತು.

Wednesday, May 13, 2009

ಸಿಬಿಐ= ಕ್ಲೀನ್‌ಚಿಟ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್


ದೇಶದ ಉನ್ನತ ತನಿಖಾ ಸಂಸ್ಥೆ ಸೆಂಟ್ರಲ್ ಬ್ಯೂರೋ ಆಫ್ ಇನ್‌ವೆಸ್ಟಿಗೇಷನ್ ಅಲಿಯಾಸ್ ಸಿಬಿಐ ಮತ್ತೆ ಸುದ್ದಿಯಲ್ಲಿದೆ. ಕೆಟ್ಟ ಕಾರಣಕ್ಕಾಗಿ.
೧೯೮೪ರ ಗಲಭೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರಾದ ಜಗದೀಶ್ ಟೈಟ್ಲರ್ ಹಾಗೂ ಸಜ್ಜನ್‌ಕುಮಾರ್ ಅವರನ್ನು ದೋಷಮುಕ್ತ ಎಂದು ವರದಿ ನೀಡುವ ಮೂಲಕ ಸಿಖ್ಖರ ಕೆಂಗಣ್ಣಿಗೆ ಗುರಿಯಾಗಿದ್ದ ಸಿಬಿಐ ಈಗ ಬೊಫೋರ್ಸ್ ಹಗಣದ ಆರೋಪಿಗಳಲ್ಲಿ ಒಬ್ಬನಾದ ಇಟಲಿಯ ಒಟೆವಿಯೊ ಕೊಟ್ರೋಚಿಯ ಮೇಲಿರುವ ಪ್ರಕರಣವನ್ನೂ ಕೈಬಿಟ್ಟು, ಹೊರಡಿಸಿದ್ದ ರೆಡ್‌ಕಾರ್ನನ್ ನೋಟೀಸ್ ರದ್ದುಪಡಿಸುವ ಮೂಲಕ ಮೂಲಕ ದೇಶದ ಜನರನ್ನು ಬೆಚ್ಚಿ ಬೀಳಿಸಿದೆ. ಜಗದೀಶ ಟೈಟ್ಲರ್ ಹಾಗೂ ಸಜ್ಜನ್ ಕುಮಾರ್ ಕಾಂಗ್ರೆಸ್ಸಿಗರಾದರೆ, ಒಟೆವಿಯೊ ಕೊಟ್ರೋಚಿ ಸೋನಿಯಾ ಕುಟುಂಬಕ್ಕೆ ಹತ್ತಿರದವರು ಎಂಬುದು ಗುಟ್ಟೇನಲ್ಲ. ಈ ಎರಡೂ ಕ್ಲೀನ್‌ಚಿಟ್‌ಗಳು ಯುಪಿಎ ಅಧಿಕಾರಾವಧಿ ಅಂತಿಮ ಸಮಯದಲ್ಲಿ ಹೊರಬಿದ್ದಿರುವುದು ಸಿಬಿಐ ಮೇಲೆ ಜನರಿಗಿರುವ ನಂಬಿಕೆ ಕುಸಿಯುವಂತೆ ಮಾಡಿದೆ. ಸಿಬಿಐ ಸ್ವತಂತ್ರ ತನಿಖಾ ಸಂಸ್ಥೆಯಾಗಿ ಉಳಿದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಸಿಬಿಐನ ಮಾಜಿ ನಿರ್ದೇಶಕರಾದ ಜೋಗಿಂದರ್ ಸಿಂಗ್ ಅವರು ಕೊಟ್ರೋಚಿ ವಿರುದ್ಧ ಸಾಕಷ್ಟು ಸಾಕ್ಷ್ಯ ಇತ್ತು. ತಾವೇ ಸ್ವತಃ ಸ್ವಿಸ್ ಬ್ಯಾಂಕ್ ತೆರಳಿ ಖಾತೆ ಪರಿಶೀಲನೆ ನಡೆಸಿದ್ದನ್ನು ಬಹಿರಂಗಪಡಿಸಿದ್ದಾರೆ. ಅವರಿದ್ದಾಗ ಇದ್ದ ಸಾಕ್ಷ್ಯ ಆಮೇಲೇನಾಯಿತು?
ಇತ್ತೀಚಿನ ವರ್ಷಗಳಲ್ಲಿ ಸಿಬಿಐ ಒಳ್ಳೆಯ ಕೆಲಸಕ್ಕಾಗಿ ಸುದ್ದಿಯಾಗಿದ್ದು ಯಾರಿಗೂ ನೆನಪಿಲ್ಲ. ಸಿಬಿಐ ತನಿಖೆಗೊಳಗಾದ ಯಾವ ಪ್ರಕರಣವೂ ಆರೋಪಿಗಳ ಶಿಕ್ಷೆಯೊಂದಿಗೆ ಮುಕ್ತಾಯವಾದದ್ದು ಇತ್ತೀಚೆಗೆ ಸಂಭವಿಸಿಲ್ಲ. ಸಿಬಿಐ ಯಾವುದೇ ನಿರ್ಣಯ ಕೈಗೊಳ್ಳಲಿ ಅದರ ಬಗ್ಗೆ ಸಾರ್ವಜನಿಕರು ಅನುಮಾನದಿಂದ ನೋಡುವಂತಾಗಿದೆ. ಕಾರಣ ಕೇಂದ್ರ ಸರಕಾರದ ಅಧಿಕಾರದ ಚಿತ್ರಣ ಬದಲಾಗುತ್ತಿದ್ದಂತೆ ಸಿಬಿಐ ನಿಲುವುಗಳೂ, ಸಾಕ್ಷ್ಯಗಳು ಕೂಡ ಬದಲಾಗಿವೆ.
ಮಾಯಾವತಿ ವಿರುದ್ಧ ತಾಜ್ ಕಾರಿಡಾರ್ ಪ್ರಕರಣದಲ್ಲಿ ಸಿಬಿಐ ನಿಲುವು ಆಗಾಗ ಬದಲಾಗಿದ್ದನ್ನು ಕಂಡಿದ್ದೇವೆ. ಮಾಯಾವತಿ ಜತೆ ಸಖ್ಯ ಇರುವಾಗ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ವಿರುದ್ಧ ಅತಿಯಾದ ಆಸ್ತಿ ಸಂಗ್ರಹ ಪ್ರಕರಣವನ್ನು ಸಿಬಿಐ ಕೈಗೆತ್ತಿಕೊಂಡಿತು. ಅದೇ ಮಾಯಾವತಿ ಜತೆ ಕಾಂಗ್ರಸ್ ಮೈತ್ರಿ ಮುರಿದಾಗ ಮುಲಾಯಂ ಸಿಂಗ್ ವಿರುದ್ಧದ ಪ್ರಕರಣದಲ್ಲಿ ಸಿಬಿಐ ನಿಲುವು ಬದಲಾಯಿತು. ಸಮಾಜವಾದಿ ಪಕ್ಷ ೨೦೦೮ರ ಜುಲೈನಲ್ಲಿ ಅವಿಶ್ವಾಸಮತ ನಿರ್ಣಯ ಸಂದರ್ಭ ಯುಪಿಎ ಪರ ನಿಲ್ಲಲು ಸಿಬಿಐ ಪ್ರಕರಣ ಕೂಡ ಒಂದು ಕಾರಣ ಎಂಬುದರಲ್ಲಿ ಈಗ ಅನುಮಾನ ಉಳಿದಿಲ್ಲ. ಇದರ ನಂತರ ಮುಲಾಯಂ ಸಿಂಗ್ ಸಮೀಪ ವರ್ತಿಗಳು ಹಾಗೂ ಸಿಬಿಐ ಅಧಿಕಾರಿಗಳು ಒಟ್ಟಿಗೆ ಕುಳಿತು ನ್ಯಾಯಾಲಯದಲ್ಲಿ ಯಾವ ರೀತಿ ಪ್ರಕರಣ ನಿಲ್ಲದಂತೆ ದಾಖಲೆಗಳನ್ನು ಸಲ್ಲಿಸಬೇಕು ಎಂಬುದರ ಬಗ್ಗೆ ಚರ್ಚಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಸರಕಾರಗಳೂ ಅಷ್ಟೆ ಮೊದಲೆಲ್ಲ ಸಿಬಿಐ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವಾಗ ಬಹಳ ಜಾಗರೂಕವಾಗಿರುತ್ತಿದ್ದವು. ಈಗ ಕೊಟ್ರೋಚಿಗೂ ಕ್ಲೀನ್‌ಚಿಟ್ ಕೊಡಿಸುವಷ್ಟು ರಾಜಾರೋಷವಾಗಿ ಸಿಬಿಐನಲ್ಲಿ ಹಸ್ತಕ್ಷೇಪ ಮಾಡಲಾರಂಭಿಸಿವೆ.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿ ಸಂಗ್ರಹ ಪ್ರಕರಣದಲ್ಲೂ ಸಿಬಿಐ ನಿಲುವು ಕಾಲಕ್ಕೆ ತಕ್ಕಂತೆ ಬದಲಾಗಿದ್ದು ಜಗತ್ತಿಗೇ ಗೊತ್ತಿದೆ.ಇದನ್ನೆಲ್ಲ ಗಮನಿಸಿದರೆ ಸಿಬಿಐ ನಿಜಕ್ಕೂ ಸ್ವತಂತ್ರ ತನಿಖಾ ಸಂಸ್ಥೆಯಾಗಿ ಉಳೀದಿದೆಯೇ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ನಮ್ಮ ಅನುಭವದ ಪ್ರಕಾರವೇ ಇದಕ್ಕೆ ಇಲ್ಲ ಎಂಬ ಉತ್ತರ ದೊರೆಯುತ್ತದೆ. ಅಲ್ಲಿದೆ ದೇಶದಲ್ಲಿ ಜನರ ನಂಬಿಕೆ ಉಳಿದಿಸಿಕೊಂಡಿರುವ ಒಂದೇ ಒಂದು ತನಿಖಾ ಸಂಸ್ಥೆಯೂ ಇಲ್ಲದಂತಾಗಿಬಿಟ್ಟಿದೆ.
ಒಂದು ಕಾಲದಲ್ಲಿ ಸಿಬಿಐಗೆ ಒಳ್ಳೆಯ ಹೆಸರಿತ್ತು. ಸಿಬಿಐ ತನಿಖೆ ಅಂದರೆ ಅದೇ ಅಂತಿಮ. ಜನ ಕೂಡ ಅದನ್ನು ಮನ್ನಿಸುತ್ತಿದ್ದರು. ಸಿಬಿಐ ತನಿಖೆ ಅಂದರೆ ಸಾಕು ರಾಜಕಾರಣಿಗಳೂ ಕೂಡ ಹೆದರುತ್ತಿದ್ದರು. ರಾಜೀವ್ ಗಾಂಧಿ ಹತ್ಯೆ ಸಮಯದಲ್ಲಿ ಸಾಕ್ಷಿಗಳೇ ಇರಲಿಲ್ಲ ಎನ್ನಬಹುದಾದ ಸ್ಥಿತಿ. ಅಂತಹ ಪ್ರಕರಣವನ್ನೂ ಸಿಬಿಐ ತಂಡ ಸಮರ್ಥವಾಗಿ ನಡೆಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು. ಆದರೆ ಅದೇ ತನಿಖಾ ಸಂಸ್ಥೆ ಭಟ್ಕಳದ ಶಾಸಕ ಯು. ಚಿತ್ತರಂಜನ್ ಅವರ ಕೊಲೆ ಪ್ರಕರಣ ಬಗೆಹರಿಸಲು ವಿಫಲವಾಯಿತು. ಚಿತ್ತರಂಜನ್ ಪ್ರಕರಣದಂತೆ ಹಲವಾರು ಪ್ರಕರಣಗಳು ಸಿಬಿಐ ಕಚೇರಿ ಕಪಾಟಿನಲ್ಲಿ ಧೂಳುತಿನ್ನುತ್ತಿವೆ.
ಹಿಂದೆಲ್ಲ ಒಂದು ಪ್ರಕರಣವನ್ನು ಸಿಬಿಐಗೆ ನೀಡಿದರು ಎಂದರೆ ಸತ್ಯ ಹೊರಬಂದಂತೆ ಎಂಬ ನಂಬಿಕೆಯಿತ್ತು. ಈಗ? ಒಂದು ಪ್ರಕರಣವನ್ನು ಸಿಬಿಐಗೆ ನೀಡಿದರೆಂದರೆ ಅಲ್ಲಿಗೆ ಆ ಪ್ರಕರಣ ಮುಗಿಯಿತು ಎಂದರ್ಥ!
ಸಿಬಿಐ ನ್ಯಾಯಾಲಯಕ್ಕೆ ತನಿಖಾ ವರದಿ ಒಪ್ಪಿಸಿತು ಅಂದರೆ ಅದೇ ಅಂತಿಮ. ಆರೋಪಿಯನ್ನು ದೋಷಮುಕ್ತ ಎಂದು ಸಿಬಿಐ ಹೇಳಿದ್ದರೂ ನ್ಯಾಯಾಲಯಗಳು ಅದನ್ನು ಒಪ್ಪಿಕೊಳ್ಳುತ್ತಿದ್ದವು. ಆದರೆ ಸಿಬಿಐ ವಿಶ್ವಾಸರ್ಹತೆ ಕುಸಿಯುತ್ತಿದ್ದಂತೆ ಈಗ ನ್ಯಾಯಾಲಯಗಳೂ ಕೂಡ ಸಿಬಿಐ ವರದಿ ಸಲ್ಲಿಸಿದ ನಂತರವೂ ಮತ್ತೆ ತನಿಖೆಗೆ ಆದೇಶಿಸುತ್ತಿವೆ.
ದೇಶದ ಉನ್ನತ ತನಿಖಾ ಸಂಸ್ಥೆಯ ಗುಣಮಟ್ಟ ಕುಸಿಯಲು ಯಾರು ಕಾರಣ?
ನಿಸ್ಸಂಶಯವಾಗಿ ನಮ್ಮನ್ನಾಳುವವರು.
ತಾಜ್ ಕಾರಿಡಾರ್ ಪ್ರಕರಣದ ವಿಚಾರಣೆ ಸಂದರ್ಭ ಸುಪ್ರೀಂ ಕೋರ್ಟ್ ಸಿಬಿಐ ಕುರಿತು ‘ಸರಕಾರಿ ಸಂಸ್ಥೆಗಳ ಕಾರ್ಯಕ್ಷಮತೆ ಹಾಗೂ ಮೌಲ್ಯಗಳು ಶೀಘ್ರವಾಗಿ ಕುಸಿಯುತ್ತಿರುವುದು ನ್ಯಾಯಾಲಯದ ಗಮನಕ್ಕೆ ಬಂದಿದೆ. ಹೀಗೇ ಮುಂದುವರಿದರೆ ಕಾನೂನು ಸುವ್ಯವಸ್ಥೆ ಕುಸಿಯುವ ಸ್ಥಿತಿ ಬರಬಹುದು’ ಎಂದು ಅಭಿಪ್ರಾಯಪಟ್ಟಿತ್ತು. ಅದರಿಂದಲೂ ನಮ್ಮ ಸಿಬಿಐ ಅಧಿಕಾರಿಗಳು ಹಾಗೂ ಕೇಂದ್ರ ಸರಕಾರ ಎಚ್ಚೆತ್ತುಕೊಳ್ಳಲಿಲ್ಲ.ನಿಜವಾಗಿ ಸಿಬಿಐ ಯಾರ ನಿಯಂತ್ರಣದಲ್ಲೂ ಇಲ್ಲ. ದೆಹಲಿ ವಿಶೇಷ ಪೊಲೀಸ್ ಕಾನೂನಿನ ಅಡಿಯಲ್ಲಿ ಸ್ಥಾಪನೆಯಾದ ಸಿಬಿಐ ಕೇಂದ್ರ ಸರಕಾರದ ಖಾಸಗಿ ಹಾಗೂ ತರಬೇತಿ ವಿಭಾಗಕ್ಕೆ ಸೇರಿದ್ದು. ಅಂದರೆ ಕೇಂದ್ರ ಸರಕಾರದ ‘ಮೇಲ್ವಿಚಾರಣೆಯಲ್ಲಿ’ ಎಂದಷ್ಟೇ ಹೇಳಲಾಗಿದೆ. ‘ಮೇಲ್ವಿಚಾರಣೆ’ ಎಂಬುದನ್ನೇ ನಮ್ಮವರು ‘ಮೇಲ್ವಿಚಾರಣೆ, ನಿಯಂತ್ರಣ ಮತ್ತು ನಿರ್ದೇಶನ’ ಎಂದು ವ್ಯಾಖ್ಯಾನಿಸಿ ಸಿಬಿಐನ ವಿಶ್ವಾಸರ್ಹತೆಯನ್ನೇ ಹಾಳು ಮಾಡಿದ್ದಾರೆ.
ಸಿಬಿಐ ಕೇಂದ್ರ ಸರಕಾರದ ಇಶಾರೆಗಳ ಮೇಲೆ ನಡೆಯುತ್ತದೆ ಎಂಬುದು ಇಂದು ಗುಟ್ಟಾಗಿ ಉಳಿದಿಲ್ಲ. ಸಿಬಿಐ ನಿರ್ದೇಶಕರ ನೇಮಕದಲ್ಲಿ ಕೂಡ ರಾಜಕೀಯ ಮೂಗು ತೂರಿಸದೇ ಬಿಟ್ಟಿಲ್ಲ. ಹಾಗೆ ನೇಮಕವಾದ ನಿರ್ದೇಶಕರು ನೇಮಕ ಮಾಡಿದ ರಾಜಕೀಯ ಪಕ್ಷಕ್ಕೆ ನಿಷ್ಟರಾಗಿರುವುದು ಸಹಜ.
ಹೀಗಾಗಿ ಸಿಬಿಐಯನ್ನು ಸೆಂಟ್ರಲ್ ಬ್ಯೂರೋ ಆಫ್ ಇನ್‌ವೆಸ್ಟಿಗೇಷನ್ ಎಂದು ಕರೆಯುವ ಬದಲು ಕ್ಲೀನ್‌ಚಿಟ್ ಬ್ಯೂರೋ ಆಫ್ ಇನ್‌ವೆಸ್ಟಿಗೇಷನ್ ಎಂದು ಕರೆಯುವಂತಾಗಿದೆ. ನಮಗೀಗ ಬೇಕಿರುವುದು ಸೆಂಟ್ರಲ್ ಬ್ಯೂರೋ ಆಫ್ ಇನ್‌ವೆಸ್ಟಿಗೇಷನ್ (ಸಿಬಿಐ) ಅಲ್ಲ. ಬದಲಾಗಿ ಇಂಡಿಪೆಂಡೆಂಟ್ ಬ್ಯೂರೋ ಆಫ್ ಇನ್‌ವೆಸ್ಟಿಗೇಷನ್ (ಐಬಿಐ) ಬೇಕು.ಸಿಬಿಐ ಅಮೂಲಾಗ್ರ ಬದಲಾವಣೆ ಆಗಬೇಕಿದೆ. ಸಿಬಿಐ ನಿರ್ದೇಶಕರ ನೇಮಕವೂ ಸೇರಿದಂತೆ ಒಟ್ಟಾರೆ ಸಿಬಿಐ ಎಂಬ ಸಂಸ್ಥೆ ಸರಕಾರದ ನಿಯಂತ್ರದಿಂದ ದೂರವಾಗಿ ಸ್ವತಂತ್ರವಾಗಬೇಕಿದೆ. ನ್ಯಾಯಾಲಯ ಹೊರತು ಪಡಿಸಿ ಜನರಿಗೆ ಸರಕಾರ ಹಾಗೂ ಸರಕಾರಿ ಸಂಸ್ಥೆಗಳ ಮೇಲೆ ನಂಬಿಕೆ ಮೂಡಿಸುವ ಒಂದಾದರೂ ಸಂಸ್ಥೆ ಬೇಕೇಬೇಕು. ಅದಕ್ಕಾಗಿಯಾದರೂ ಈ ಕೆಲಸ ಮಾಡಬೇಕು.
ಯಾಕೆಂದರೆ ಜನ ಸರಕಾರ ಹಾಗೂ ಅದರ ಸಂಸ್ಥೆಗಳ ಮೇಲೆ ನಂಬಿಕೆ ಕಳೆದುಕೊಂಡರೆ ಅಲ್ಲಿಗೆ ಎಲ್ಲವೂ ಮುಗಿದಂತೆ.

Wednesday, April 29, 2009

ಸೋನಿಯಾಗೆ ಚಿದ್ರಚಿದ್ರವಾದ ರಾಜೀವ್ ದೇಹ ನೆನಪಾಗಲಿಲ್ಲವೇ?


ಏಷ್ಯಾದ ಅಷ್ಟೇ ಏಕೆ ವಿಶ್ವದ ಅತ್ಯಂತ ಹಳೆಯ ಹಾಗೂ ಬಲಿಷ್ಠ ಉಗ್ರಗಾಮಿ ಸಂಘಟನೆಯೆಂದರೆ ಎಲ್‌ಟಿಟಿಇ. ಅಂತಹ ಸಂಘಟನೆಯನ್ನು ಸೈನ್ಯ ಬಲದ ಮೂಲಕ ಮೂಲೆಗುಂಪು ಮಾಡಿ, ಇನ್ನೇನು ಎಲ್‌ಟಿಟಿ ಅಟಾಟೋಪ ಮುಗಿದೇ ಹೋಯಿತು ಎಂಬಂತಾಗಿರುವಾಗ, ಭಾರತ ಅನಗತ್ಯವಾಗಿ ಮೂಗು ತೂರಿಸಿದೆ.
ತಮಿಳುನಾಡಿನಲ್ಲಿ ಬಹಳ ಹಿಂದಿನಿಂದಲೂ ಎಲ್‌ಟಿಟಿಇ ರಾಜಕೀಯಕ್ಕೆ ಬಳಕೆಯಾಗುತ್ತಿದೆ. ಹಲವು ನಾಯಕರು ಎಲ್‌ಟಿಟಿಇ ಸಂಘಟನೆಯ ಮುಖ್ಯಸ್ಥರೊಂದಿಗೆ ನೇರ ಅಥವಾ ಪರೋಕ್ಷ ಸಂಪರ್ಕ ಹೊಂದಿದ್ದಾರೆ. ಈಗ ಚುನಾವಣೆ ಇರುವುದರಿಂದ ಹಾಗೂ ಎಲ್‌ಟಿಟಿಇ ನಾಯಕರನ್ನು ಬಚಾವ್ ಮಾಡುವ ಅಗತ್ಯ ಇರುವುದರಿಂದ ತಮಿಳುನಾಡಿನ ರಾಜಕಾರಣಿಗಳು ಕೇಂದ್ರದ ಮೇಲೆ ಒತ್ತಡ ಹೇರಿದ್ದಾರೆ. ತಮಿಳುನಾಡಿನಲ್ಲಿ ಕಾಂಗ್ರೆಸ್ ಹಾಗೂ ಡಿಎಂಕೆ ಮೈತ್ರಿ ಇದೆ. ಇದೇ ಒತ್ತಡದ ಕಾರಣದಿಂದ ಹಾಗೂ ಎಲ್ಲಾದರೂ ಬೇರೆ ಪಕ್ಷಗಳಿಗೆ ಹೆಚ್ಚು ಮತ ಸಿಕ್ಕೀತು ಎಂಬ ಹೆದರಿಕೆಯಿಂದ ಕೇಂದ್ರದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಶ್ರೀಲಂಕಾ ಸರಕಾರಕ್ಕೆ ‘ಇನ್ನಷ್ಟು ಸಮಯ ಯುದ್ಧ ಸ್ಥಗಿತಗೊಳಿಸಿ, ನಾಗರಿಕರಿಗೆ ಸುರಕ್ಷಿತ ಪ್ರದೇಶಕ್ಕೆ ಹೋಗಲು ಅವಕಾಶ ನೀಡಬೇಕು’ ಎಂದು ಮನವಿ ಮಾಡಿದೆ.
ಇಷ್ಟಕ್ಕೂ ಕಾಂಗ್ರೆಸ್‌ಗೆ, ಡಿಎಂಕೆಗೆ ಹೆಚ್ಚು ಮತ ಸಿಗಲಿ ಎಂಬ ಕಾರಣಕ್ಕೆ ಶ್ರೀಲಂಕಾ ಸರಕಾರ ಯಾಕೆ ಎಲ್‌ಟಿಟಿಇ ವಿರುದ್ಧ ಯುದ್ಧ ನಿಲ್ಲಿಸಬೇಕು? ಈ ಸಮಯದಲ್ಲಿ ಕೇಂದ್ರ ಸರಕಾರ ಶ್ರೀಲಂಕಾ ಸರಕಾರವನ್ನು ಒತ್ತಾಯಿಸಿದ್ದು ಆಡಳಿತ ದುರುಪಯೋಗವಲ್ಲವೇ? ಚುನಾವಣೆ ಸಮಯದಲ್ಲಿ ರಸ್ತೆ ಬದಿ ಮೂತ್ರ ಮಾಡಿದರೂ ನೀತಿಸಂಹಿತೆ ಉಲ್ಲಂಘನೆ ಎಂದು ಹೇಳುವವರಿಗೆ ಇದ್ಯಾಕೆ ಕಾಣಲಿಲ್ಲ? ಶ್ರೀಲಂಕಾ ಸರಕಾರವನ್ನು ಒತ್ತಾಯಿಸುವ ತಮಿಳು ರಾಜಕಾರಣಿಗಳು ಯಾಕೆ ಎಲ್‌ಟಿಟಿಇ ಸಂಘಟನೆಯನ್ನೇ ಶಸ್ತ್ರ ತ್ಯಜಿಸುವಂತೆ ಒತ್ತಾಯಿಸಬಾರದು?
೧೯೯೯೨ರಲ್ಲಿ ಎಲ್‌ಟಿಟಿಯಿ ಸಂಘಟನೆಯನ್ನು ಉಗ್ರಗಾಮಿ ಸಂಘಟನೆ ಎಂದು ಭಾರತವೇ ಘೋಷಿಸಿದ್ದು, ಈಗಿನ ನಮ್ಮ ಕೇಂದ್ರ ಸರಕಾರಕ್ಕೆ ಮರೆತುಹೋಗಿದೆಯೇ? ಅದು ನೆನಪಿದ್ದು ಶ್ರೀಲಂಕಾ ಸರಕಾರಕ್ಕೆ ಯುದ್ಧ ನಿಲ್ಲಿಸುವಂತೆ ಮನವಿ ಮಾಡಿದ್ದರೆ, ಪಾಕ್ ಹಾಗೂ ಅಪಘಾನಿಸ್ತಾನದಲ್ಲಿ ನಡೆಯುತ್ತಿರುವ ಉಗ್ರರ ಮೇಲಿನ ಅಮೆರಿಕ ದಾಳಿಯನ್ನು ನೋಡಿ ಭಾರತ ಸುಮ್ಮನಿರುವುದೇಕೆ?
ನಿಮಗೆ ಗೊತ್ತಿರಲಿ ವಿಶ್ವದಲ್ಲಿಯೇ ಸ್ವಂತ ವಿಮಾನ ನಿಲ್ದಾಣ, ಯುದ್ಧ ವಿಮಾನ, ಯುದ್ಧ ನೌಕೆಗಳನ್ನು ಹೊಂದಿದ್ದ ಏಕೈಕ ಸಂಘಟನೆ ಎಲ್‌ಟಿಟಿಇ. ೧೯೭೦ರ ದಶಕದಲ್ಲಿ ಶ್ರೀಲಂಕಾದಲ್ಲಿದ್ದ ತಮಿಳರ ಪ್ರತ್ಯೇಕ ರಾಜ್ಯದ ಹೋರಾಟದ ನೆಪದಲ್ಲಿ ಆರಂಭವಾದ ಎಲ್‌ಟಿಟಿಇ, ಅಧಿಕೃತವಾಗಿ ಸ್ಥಾಪನೆಯಾಗಿದ್ದು ೧೯೭೯ರ ಮೇ ೫ರಂದು. ನಂತರ ದೊಡ್ಡ ಉಗ್ರಗಾಮಿ ಸಂಘಟನೆಯಾಗಿ ಬೆಳೆಯಿತು. ಇದನ್ನು ಏಷ್ಯಾದ ಅತಿದೊಡ್ಡ ಹಾಗೂ ಅತಿಹೆಚ್ಚು ಸಮಯ ನಡೆದ ನಾಗರಿಕ ಯುದ್ಧ ಎಂದೂ ಬಣ್ಣಿಸಬಹುದು. ಆದರೆ ಎಲ್‌ಟಿಟಿಇ ಕೃತ್ಯಗಳನ್ನು ನೋಡಿದ ಭಾರತವೂ ಸೇರಿದಂತೆ ೩೨ ದೇಶಗಳೂ ಎಲ್‌ಟಿಟಿಇಯನ್ನು ಉಗ್ರಗಾಮಿ ಸಂಘಟನೆ ಎಂದು ಘೋಷಿಸಿವೆ.
ಮಕ್ಕಳಿಗೆ ಕೂಡ ಸೈನ್ಯದ ತರಬೇತಿ ಕೊಟ್ಟು ಸೇರಿಸಿಕೊಂಡಿದ್ದು, ಮಹಿಳಾ ಆತ್ಮಹತ್ಯಾ ತಂಡಗಳನ್ನು ರಚಿಸಿದ್ದು, ಬಾಂಬ್-ಬೆಲ್ಟ್ ಕಂಡು ಹಿಡಿದ ಕುಖ್ಯಾತಿ ಕೂಡ ಎಲ್‌ಟಿಟಿಇ ಸಂಘಟನೆಯದ್ದು. ಸೈನೈಡ್ ಎಂಬ ವಿನಾಶಕಾರಿ ವಿಶವನ್ನು ಕುತ್ತಿಗೆಯಲ್ಲಿ ಕಟ್ಟಿಕೊಂಡು, ಸಿಕ್ಕಿಬೀಳುವ ಸಮಯದಲ್ಲಿ ಅದನ್ನು ತಿಂದು ಸಾಯುವ ರೀತಿಯನ್ನು ಕೂಡ ಮೊದಲು ಜಾರಿ ಮಾಡಿದ್ದು ಎಲ್‌ಟಿಟಿಇ. ನಮ್ಮದೇ ಬೆಂಗಳೂರಿನಲ್ಲಿ ಎಲ್‌ಟಿಟಿಇ ಸಂಘಟನೆಯ ಶಿವರಸನ್ ಹಾಗೂ ಸಂಗಡಿಗರು ಬಂದು ಅಡಗಿಕೊಂಡು, ಸೈನೈಡ್ ತಿಂದು ಸತ್ತಿದ್ದು ಕಂಡಿದ್ದೇವೆ. ಇಂತಹ ಬಲಿಷ್ಠ ಹಾಗೂ ವಿನಾಶಕಾರಿ ಸಂಘಟನೆಯನ್ನು ಈಗ ಮೂಲೆಗೆ ತಳ್ಳಿ, ಮುಗಿಸುವ ಹಂತದಲ್ಲಿ ಶ್ರೀಲಂಕಾ ಸರಕಾರ ಸುಮ್ಮನಿದ್ದರೆ ಅದು ಮೂರ್ಖತನವಾದೀತು.
ಅಂತಹ ಮೂರ್ಖ ನಿರ್ಧಾರ ಕೈಗೊಳ್ಳುವಂತೆ ನಮ್ಮ ರಾಜಕಾರಣಿಗಳು ಮಾತ್ರ ಒತ್ತಾಯಿಸಲು ಸಾದ್ಯ.
ಈ ಹಿಂದೆ ಬೇಕಾದಷ್ಟು ಶಾಂತಿ ಮಾತುಕತೆಗಳಾಗಿವೆ. ೨೦೦೨ರಲ್ಲಿ ಶಾಂತಿ ಮಾತುಕತೆ ನಡೆದಿದೆ. ೨೦೦೬ರಲ್ಲಿ ಶಾಂತಿ ಮಾತುಕತೆ ಮುರಿದು ಬಿದ್ದ ಮೇಲೆ ಶ್ರೀಲಂಕಾ ಸೈನಿಕರು ಎಲ್‌ಟಿಟಿಇ ಮೇಲೆ ಮುರಕೊಂಡು ಬಿದ್ದಿದ್ದರು. ೧೯೮೭ರಲ್ಲಿ ಭಾರತೀಯ ಶಾಂತಿ ಸ್ಥಾಪನಾ ಪಡೆ ಕಳುಹಿಸುವ ಹಾಗೂ ತಮಿಳು ಆಕ್ರಮಿತ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಬಗ್ಗೆ ಭಾರತ ಸರಕಾರ ಮುಂದಾಗಿ ಶ್ರೀಲಂಕಾ ಸರಕಾರದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಇದನ್ನು ಬಹುತೇಕ ತಮಿಳು ಸಂಘಟನೆಗಳು ಒಪ್ಪಿಕೊಂಡಿದ್ದವು. ಆದರೆ ಆಗಲೇ ಸಾಕಷ್ಟು ಸೊಕ್ಕಿದ್ದ ಎಲ್‌ಟಿಟಿಇ ಅದನ್ನೂ ತಿರಸ್ಕರಿಸಿತು.ಇದೇ ಕಾರಣಕ್ಕೆ ಆತ್ಮಹತ್ಯಾ ಬಾಂಬ್ ದಾಳಿ ಮೂಲಕ ೧೯೯೧ರಲ್ಲಿ ರಾಜೀವ ಗಾಂಧಿ ಹತ್ಯೆ ಮಾಡಿತು. ನಂತರ ೧೯೯೩ಲ್ಲಿ ಶ್ರೀಲಂಕಾ ಅಧ್ಯಕ್ಷ ರಣಸಿಂಗೆ ಪ್ರೇಮದಾಸ ಅವರ ಹತ್ಯೆ ಮಾಡಲಾಯಿತು. ೧೯೯೪ರಲ್ಲಿ ಚುನಾವಣೆಯಲ್ಲಿ ಚಂದ್ರಿಕಾ ಕುಮಾರತುಂಗಾ ಅಧ್ಯಕ್ಷೆಯಾಗಿ ಆಯ್ಕೆಯಾದ ನಂತರ ಶಾಂತಿ ಮಾತುಕತೆಗಳು ಮತ್ತೆ ಆರಂಭವಾದವು. ಆದರೆ ಎಲ್‌ಟಿಟಿಇ ೧೯೯೫ರಲ್ಲಿ ಶ್ರೀಲಂಕಾ ಸೈನ್ಯದ ೨ ಹಡಗನ್ನು ಮುಳುಗಿಸಿ, ಶಾಂತಿ ಮಾತುಕತೆಗೆ ಅಂತ್ಯಹಾಡಿತು. ಆಗ ಭಯಂಕರ ದಾಳಿ ನಡೆಸಿದ ಶ್ರೀಲಂಕಾ ಸೈನ್ಯ, ಎಲ್‌ಟಿಟಿಇ ವಶದಲ್ಲಿದ್ದ ಹಲವಾರು ಪ್ರದೇಶಗಳನ್ನು ವಶಪಡಿಸಿಕೊಂಡಿತ್ತು. ಆಗ ಮತ್ತದೇ ಶಾಂತಿ ನೆಪದಲ್ಲಿ ಯುದ್ಧ ನಿಂತಿತು. ಆದರೆ ೧೯೯೮ರ ನಂತರ ಮತ್ತೆ ಎಲ್‌ಟಿಟಿಇ ಪ್ರಬಲವಾಯಿತು.
೨೦೦೧ರಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಕೈಬಿಟ್ಟ ಎಲ್‌ಟಿಟಿಇ, ಪ್ರಾದೇಶಿಕ ಸ್ವಾಮ್ಯತೆ ಬೇಕು ಎಂಬ ಬೇಡಿಕೆ ಮುಂದಿಟ್ಟಿತು. ೨೦೦೨ರಲ್ಲಿ ಎಲ್‌ಟಿಟಿ ಹಾಗೂ ಶ್ರೀಲಂಕಾ ಸರಕಾರ ಒಪ್ಪಂದಕ್ಕೆ ಸಹಿ ಹಾಕಿದವು. ೬ ಸುತ್ತು ಶಾಂತಿ ಮಾತುಕತೆಗಳೂ ನಡೆದವು. ಆದರೆ ಮತ್ತೆ ಕ್ಯಾತೆ ತೆಗೆದ ಎಲ್‌ಟಿಟಿಇ ಮಾತುಕತೆ ಮುರಿಯುವಂತೆ ಮಾಡಿತು. ಈಗ ಮಹಿಂದಾ ರಾಜಪಕ್ಸಾ ಅವರು ಶ್ರೀಲಂಕಾ ಅಧ್ಯಕ್ಷರಾದ ನಂತರ ಎಲ್‌ಟಿಟಿಇ ವಿರುದ್ಧ ಉಗ್ರ ಸಮರ ಸಾರಿದ್ದಾರೆ. ಯಾವ ಒತ್ತಡಕ್ಕೂ ಹಿಂಜರಿಯದೆ ಎಲ್‌ಟಿಟಿಇ ನಾಶ ಮಾಡಿಯೇ ಸಿದ್ಧ ಎಂದು ಹೊರಟಿದ್ದಾರೆ. ಯುದ್ಧ ವಲಯದಲ್ಲಿರುವ ನಾಗರಿಕರಿಗೆ ಸುರಕ್ಷಿತ ಪ್ರದೇಶಕ್ಕೆ ೨೪ ಗಂಟೆ ಅವಧಿಯನ್ನೂ ನೀಡಿದ್ದರು.ಅದು ನಿಜವಾಗಿಯೂ ಸರಿಯಾದ ನಿರ್ಧಾರ. ಇನ್ನೂ ಎಷ್ಟು ವರ್ಷ ಶ್ರೀಲಂಕಾ ಎಂಬ ಸಣ್ಣ ರಾಜ್ಯ ಎಲ್‌ಟಿಟಿಇ ಎಂಬ ದೊಡ್ಡ ಸಮಸ್ಯೆಯೊಂದಿಗೆ ಸೆಣಸಬೇಕು? ಒಂದು ಬಾರಿ ಸಮಸ್ಯೆ ಬಗೆಹರಿಯಬೇಕು. ಅದಕ್ಕೆ ಎಲ್‌ಟಿಟಿಇ ಅಂತ್ಯವೊಂದೇ ದಾರಿ.
ಹೀಗೆ ಕಠಿಣ ನಿರ್ಧಾರದ ಫಲವಾಗಿಯೇ ಇಂದು ತಮಿಳು ಹುಲಿ ಗಾಯಗೊಂಡು ಏದುಸಿರು ಬಿಡುತ್ತಿದೆ. ಬಲೆಗೆ ಬೀಳುವ ಅನಿವಾರ್ಯದಲ್ಲಿದೆ.
ಇಂತಹ ಸಂದರ್ಭದಲ್ಲಿ ನಮ್ಮ ರಾಜಕಾರಣಿಗಳು ಕೇವಲ ಮತಕ್ಕಾಗಿ ಯುದ್ಧ ನಿಲ್ಲುಸುವಂತೆ ಹೇಳುತ್ತಿರುವುದು ಯಾವ ನ್ಯಾಯ? ಎಲ್‌ಟಿಟಿಇ ಈ ವರೆಗೆ ಎಷ್ಟು ಬಾಂಬ್ ದಾಳಿ ಮಾಡಿದೆ. ಅದರ್‍ಲಿ ಸತ್ತವರ ಜೀವಕ್ಕೆ, ಅವರ ಸಂಬಂಧಿಗಳ ದುಃಖಕ್ಕೆ ಬೆಲೆ ಇಲ್ಲವೇ? ನಮ್ಮದೇ ಪ್ರಧಾನಿ ಒಬ್ಬರನ್ನು ಎಲ್‌ಟಿಟಿಇ ಹತ್ಯೆ ಮಾಡಿದ್ದನ್ನು ಇದೇ ಕಾಂಗ್ರೆಸ್ಸಿಗರು ಮತಕ್ಕಾಗಿ ಮರೆತುಬಿಟ್ಟರೆ? ಪತಿ ಹತ್ಯೆ ಮಾಡಿದ ಸಂಘಟನೆಯ ವಿರುದ್ಧ ಯುದ್ಧ ನಿಲ್ಲಿಸುವಂತೆ ಕೇಂದ್ರ ಸರಕಾರ ಒತ್ತಾಯಿಸುವಾಗ ಸೋನಿಯಾ ಅವರಿಗೆ ಒಂದು ಬಾರಿಯೂ ಚಿದ್ರಚಿದ್ರವಾದ ರಾಜೀವ್ ಗಾಂಧಿ ದೇಹ ನೆನಪಾಗಲಿಲ್ಲವೇ? ಇಂದಿಗೂ ರಾಜೀವ್ ಫೋಟೋ ಹಾಕಿ ಮತ ಕೇಳುವ ಕಾಂಗ್ರೆಸ್ ನಾಯಕರಿಗೆ, ಅವರ ಹತ್ಯೆ ಮಾಡಿದ ಸಂಘಟನೆಯ ವಿರುದ್ಧ ಯುದ್ಧ ನಿಲ್ಲಿಸುವಂತೆ ಹೇಳುವ ಮನಸ್ಸಾದರೂ ಹೇಗೆ ಬಂತು?
ನಮ್ಮ ದೇಶದಲ್ಲಿ ಸಮಸ್ಯೆಗಳು ದೊಡ್ಡದಾಗುತ್ತಿರುವುದೇ ಹೀಗೆ. ನಕ್ಸಲೀಯರ ಹಾವಳಿ ಇಷ್ಟೆಲ್ಲ ಹೆಚ್ಚಲು ನಮ್ಮ ಸರಕಾರಗಳ ಅರೆಬರೆ ನೀತಿಗಳೇ ಕಾರಣ. ಎಲ್‌ಟಿಟಿಇ ಸಂಘಟನೆ ಮೇಲೆ ಶ್ರೀಲಂಕಾ ಈಗ ಮುರಕೊಂಡು ಬಿದ್ದಂತೆ ನಮ್ಮ ಸರಕಾರಗಳೂ ನಕ್ಸಲೀಯರ ವಿರುದ್ಧ ಕೈತೊಳೆದು ಬೆನ್ನುಹತ್ತಿದ್ದರೆ ಇಷ್ಟೊತ್ತಿಗೆ ನಕ್ಸಲೀಯರ ಹುಟ್ಟಡಗಿಹೋಗುತ್ತಿತ್ತು. ಆದರೆ ನಮ್ಮಲ್ಲಿ ಹಾಗೆ ಮಾಡುವುದರಿಂದ ಆಗುವ ಒಳಿತಿಗಿಂತ, ತಮಗೆ, ತಮ್ಮ ಪಕ್ಷಕ್ಕೆ ಆಗುವ ಮತದ ಲಾಭ-ನಷ್ಟ ಯೋಚಿಸಲಾಗುತ್ತದೆ.
ಇಂತಹ ಸ್ವಂತ ಲಾಭದ ಯೋಚನೆಗಳನ್ನು ನಮ್ಮ ದೇಶಕ್ಕಷ್ಟೇ ಸೀಮಿತವಾಗಿರಿಸದ ರಾಜಕಾರಣಿಗಳು ಈಗ ಅದನ್ನು ನಮ್ಮ ವಿದೇಶಾಂಗ ನೀತಿಯಲ್ಲೂ ತೂರಿಸಿದ್ದಾರೆ. ಅಮೆರಿಕಾ ಅಪಘಾನಿಸ್ತಾನದಲ್ಲಿ ಉಗ್ರರ ವಿರುದ್ಧ ಯುದ್ಧ ಆರಂಭಿಸಿದಾಗ ಸುಮ್ಮನಿದ್ದ ಭಾರತ ಈಗಲೂ ಇದನ್ನು ಶ್ರೀಲಂಕಾದ ಆಂತರಿಕ ಸಮಸ್ಯೆ ಎಂದು ಸುಮ್ಮನಿರುವುದು ಬುದ್ದಿವಂತ ನಿರ್ಧಾರ. ಇಷ್ಟಕ್ಕೂ ಎಲ್‌ಟಿಟಿಇ ಸಂಘಟನೆಯನ್ನು ಉಳಿಸಿದರೆ ಅದೇನು ಬಂದು ನಮ್ಮನ್ನು ಉದ್ಧಾರ ಮಾಡುವುದಿಲ್ಲ.
ಯಾಕೆಂದರೆ ಹಾವಿಗೆ ಹಾಲರೆದೇನು ಫಲ? ನೀವು ಹಾಲು ಕುಡಿಸಿದರೂ ಹೊರಬುರುವುದು ಹಾಲಾಹಲವೇ. ತಮಿಳು ಹುಲಿ ಈಗ ಗಾಯಗೊಂಡಿರಬಹುದು. ಗಾಯಗೊಂಡಾಗ ಹೊಡೆಯುವುದು ಬೇಡ ಎಂದು ಸುಮ್ಮನಿದ್ದರೆ, ಗಾಯ ಗುಣವಾಗಿ ಅದು ನಮ್ಮ ಮೇಲೆ ದಾಳಿ ನಡೆಸುವ ಸಾದ್ಯತೆಯಿದೆ. ಹಾಗಾಗಿ ಗಾಯಗೊಂಡು ಬಿದ್ದಿರುವ ಹುಲಿಯನ್ನು ಹೊಡೆಯುವುದೇ ಜಾಣತನ. ಅದನ್ನು ಶ್ರೀಲಂಕಾ ಸರಕಾರ ಮಾಡಲಿಬಿಡಿ.

Friday, April 24, 2009

ಕಪ್ಪು ಹಣ ತರುವುದು ಹೇಳಿದಷ್ಟು ಸುಲಭವೇ?



ಯಾರೂ ನಿರೀಕ್ಷಿಸದ ರೀತಿಯಲ್ಲಿ ೨೦೦೯ರ ಲೋಕಸಭಾ ಚುನಾವಣಾ ವಿಷಯವಾಗಿ ಹೊರಹೊಮ್ಮಿದ್ದು ಸ್ವಿಸ್ ಬ್ಯಾಂಕ್‌ನಲ್ಲಿರುವ ಕಪ್ಪು ಹಣ. ಚುನಾವಣೆ ಘೊಷಣೆಯಾಗುವವರೆಗೂ ಇದೊಂದು ಚುನಾವಣಾ ವಿಷಯ ಅಂತ ಯಾರಿಗೂ ಅನಿಸಿರಲೇ ಇಲ್ಲ. ಹಾಗಾಗಬಹುದು ಎಂಬ ಕಲ್ಪನೆಯೂ ಇರಲಿಲ್ಲ. ಆದರೆ ಬಿಜೆಪಿ ಚುನಾವಣಾ ವಿಷಯವೆಂದು ಪರಿಗಣಿಸಿದ್ದ ಹಣದುಬ್ಬರ ಕಡಿಮೆಯಾಗಿ, ದರಗಳು ಸ್ವಲ್ಪ ನಿಯಂತ್ರಣಕ್ಕೆ ಬಂದಿದ್ದರಿಂದ ಅದನ್ನು ಚುನಾವಣಾ ವಿಷಯವಾಗಿ ಬಳಸಿಕೊಳ್ಳೂವುದು ಸಾದ್ಯವಿರಲಿಲ್ಲ. ಭಯೋತ್ಪಾದನೆ ಬಗ್ಗೆ ಮಾತಾಡ ಹೊರಟರೆ ಕಾಂಗ್ರೆಸ್ಸಿಗರು ‘ಕಂದಹಾರ್ ಪ್ರಕರಣ’ವನ್ನು ಪ್ರತಿ ಅಸ್ತ್ರವಾಗಿ ಬಳಸಿದರು.
ಹೀಗಾಗಿ ಬಿಜೆಪಿಗೆ ಹೊಸತೊಂದು ಚುನಾವಣಾ ವಿಷಯ ಬೇಕಿತ್ತು. ಬ್ರಹ್ಮಾಸ್ತ್ರದಂತೆ ಸಿಕ್ಕಿದ್ದು ಸ್ವಿಸ್ ಬ್ಯಾಂಕ್‌ನಲ್ಲಿರುವ ಕಪ್ಪು ಹಣ. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಕೂಡ ಇದನ್ನು ಪ್ರಸ್ತಾಪಿಸಿತು. ಇದೊಂದು ಚುಣಾವಣಾ ವಿಷಯ ಆಗಬಹುದು ಎಂದು ಕಾಂಗ್ರೆಸ್ ನಿರೀಕ್ಷಿಸಿರಲಿಲ್ಲ. ಹಾಗಾಗಿ ಆ ವಿಷಯದ ಬಗ್ಗೆ ಅದು ಮೌನವಾಗಿತ್ತು. ಯಾವಾಗ ಬಿಜೆಪಿ ಅದನ್ನೊಂದು ಚುನಾವಣಾ ಅಸ್ತ್ರವಾಗಿ ಬಳಸಲಾರಂಭಿಸಿತೊ ಆಗ ಅದು ವಿದೇಶದಲ್ಲಿರುವ ಕಪ್ಪು ಹಣದ ಬಗ್ಗೆ ಬಾಯ್ಬಿಡತೊಡಗಿತು.
ಎರಡೂ ಪಕ್ಷಗಳ ಆರೋಪ ಪ್ರತ್ಯಾರೋಪಗಳ ನಡುವೆ ಜನ ಗೊಂದಲಕ್ಕೆ ಸಿಲುಕಿದ್ದಾರೆ. ಆ ಗೊಂದಲಗಳಿಗೆ ಉತ್ತರ ಹುಡುಕುವ ಸಣ್ಣ ಯತ್ನ ಇದು.
ಬಹುತೇಕವಾಗಿ ಸ್ವಿಸ್ ಬ್ಯಾಂಕ್ ಹೆಸರು ಮಾತ್ರ ಕೇಳಿಬರುತ್ತಿದ್ದರೂ, ಸ್ವಿಟ್ಜರ್‌ಲ್ಯಾಂಡ್, ಮಾರಿಶಸ್, ಸಿಪ್ರಸ್ ದೇಶದ ಬ್ಯಾಂಕುಗಳು ಇದ್ದುದರಲ್ಲಿ ಪ್ರಸಿದ್ಧ. ಇವುಗಳಲ್ಲಿ ಭಾರತದ ಪ್ರಜೆಗಳು ಎಷ್ಟು ಹಣ ಇಟ್ಟಿದ್ದಾರೆ ಎಂಬುದು ಬ್ಯಾಂಕ್ ಅಧಿಕಾರಿಗಳಿಗೆ ಬಿಟ್ಟರೆ ಬೇರೆ ಯಾರಿಗೂ ಗೊತ್ತಿಲ್ಲ. ಯಾಕೆಂದರೆ ಬ್ಯಾಂಕುಗಳು ಈ ಮಾಹಿತಿಯನ್ನು ಈವರೆಗೆ ಬಹಿರಂಗಗೊಳಿಸಿಲ್ಲ. ಗೌಪ್ಯವೇ ಆ ಬ್ಯಾಂಕುಗಳ ಬಡವಾಳ. ಬಿಜೆಪಿ ಪ್ರಕಾರ ೨೫,೦೦,೦೦ ಕೋಟಿ ರೂ. ಕಪ್ಪು ಹಣ ವಿದೇಶಿ ಬ್ಯಾಂಕುಗಳಲ್ಲಿದೆ. ಇದೊಂದು ಅಂದಾಜು ಅಷ್ಟೆ. ಅದು ಹೆಚ್ಚೂ ಆಗಿರಬಹುದು. ಕಡಿಮೆಯೂ ಆಗಿರಬಹುದು.
ಬಿಜೆಪಿ ಹೇಳುತ್ತಿರುವ ವಿದೇಶಿ ಬ್ಯಾಂಕುಗಳಲ್ಲಿರುವ ಹಣದ ಮೊತ್ತದ ಬಗ್ಗೆಯೇ ಕಾಂಗ್ರೆಸ್ ತಕರಾರು ತೆಗೆದಿದೆ. ಅದಕ್ಕೆ ಯಾವುದೇ ಆಧಾರವಿಲ್ಲ ಎಂದಿದೆ. ಹೌದು. ಬಿಜೆಪಿ ಹೇಳುತ್ತಿರುವ ಮೊತ್ತಕ್ಕೆ ಸೂಕ್ತ ಆಧಾರವಿಲ್ಲ. ಆದರೆ ಎಷ್ಟಿದ್ದರೇನು? ಬೇಕಾದರೆ ಒಂದು ಲಕ್ಷ ರೂ. ಇರಲಿ. ಅದನ್ನು ದೇಶಕ್ಕೆ ತರುವುದರಲ್ಲಿ ಖಂಡಿತ ತಪ್ಪಿಲ್ಲವಲ್ಲ. ಹೀಗಾಗಿ ಎಷ್ಟು ಹಣವಿದೆ ಎಂದು ಕಾಂಗ್ರೆಸ್ ಪಕ್ಷ ಪ್ರಶ್ನಿಸುತ್ತಿರುವುದರಲ್ಲಿ ಅಥವಾ ಎಷ್ಟು ಹಣ ಇರಬಹುದು ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ. ಎಷ್ಟಾದರೂ ಇರಲಿ. ಅದನ್ನು ತರೋಣ.
ಅಮೆರಿಕ ಇತ್ತೀಚೆಗಷ್ಟೇ ಸ್ವಿಸ್ ಬ್ಯಾಂಕ್‌ನಲ್ಲಿರುವ ಅಮೆರಿಕ ಪ್ರಜೆಗಳ ಖಾತೆಗಳ ವಿವರ ಪಡೆದುಕೊಳ್ಳಲು ಯಶಸ್ವಿಯಾಗಿದೆ. ಸ್ವಿಸ್‌ಬ್ಯಾಂಕ್‌ನಲ್ಲಿದ್ದ ತನ್ನ ದೇಶದ ಪ್ರಜೆಗಳ ಹಣ ಪಡೆದುಕೊಳ್ಳಲು ಐರ್‍ಲೆಂಡ್ ಯಶಸ್ವಿಯಾಗಿದೆ. ಆದರೆ ಇದೆಲ್ಲ ಸಾದ್ಯವಾಗಿದ್ದು, ಆಯಾ ದೇಶಗಳ ಆಂತರಿಕ ತನಿಖಾ ತಂಡಗಳು ಸೂಕ್ತ ದಾಖಲೆಗಳನ್ನು ಒದಗಿಸಿದ ಮೇಲೆ ಎಂಬುದು ಗಮನಾರ್ಹ. ಇದನ್ನು ಭಾರತ ಸರಿಯಾಗಿ ಮಾಡಲು ಸಾದ್ಯವೇ ಎಂಬುದು ಈಗಿರುವ ಪ್ರಶ್ನೆ.
ಬಿಜೆಪಿ ಬಾಯಲ್ಲಿ ಹೇಳಿದಷ್ಟು ಸುಲಭವಲ್ಲ ವಿದೇಶಿ ಬ್ಯಾಂಕುಗಳಲ್ಲಿರುವ ಕಪ್ಪು ಹಣ ತರುವುದು. ಯಾಕೆಂದರೆ ನಮ್ಮಲ್ಲಿ ಎಂತೆಂತಹ ಪ್ರಕರಣಗಳು ಹೇಗೆ ಹಳ್ಳ ಹಿಡಿದಿವೆ ಎಂಬುದನ್ನು ನಾವು ಕಣ್ಣಾರೆ ಕಂಡಿದ್ದೇವೆ. ಸಿಬಿಐನಂತಹ ಉನ್ನತ ತನಿಖಾ ಸಂಸ್ಥೆ ಕೂಡ ದೇಶದ ನಾಗರಿಕರ ನಂಬಿಕೆ ಕಳೆದುಕೊಂಡಿದೆ. ಒಂದು ಪಕ್ಷದ ಸರಕಾರ ಇದ್ದಾಗ ಒಂದು ನಮೂನೆ ತನಿಖೆಯಾದರೆ, ಇನ್ನೊಂದು ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ತನಿಖೆ ಇನ್ನೊಂದು ರೀತಿಯಲ್ಲಿ ಮುಕ್ತಾಯವಾಗುವುದನ್ನು ಕಂಡಿದ್ದೇವೆ. ೧೯೮೪ರ ಗಲಭೆ ಪ್ರಕರಣದಲ್ಲಿ ಜಗದೀಶ್ ಟೈಟ್ಲರ್ ಹಾಗೂ ಸಜ್ಜನ್ ಕುಮಾರ್‌ರನ್ನು ಆರೋಪ ಮುಕ್ತ ಎಂದು ವರದಿ ನೀಡಿರುವುದು ಇತ್ತೀಚಿನ ಉದಾಹರಣೆ. ಅದನ್ನು ಸಿಖರು ಉಗ್ರವಾಗಿ ಖಂಡಿಸಿದ್ದು ಜನಕ್ಕೆ ಸಿಬಿಐ ಮೇಲೆ ಕೂಡ ನಂಬಿಕೆ ಹೊರಟುಹೋಗಿದೆ ಎಂಬುದಕ್ಕೆ ಸೂಚನೆ.
ಭಾರತದ ವಿದೇಶಾಂಗ ನೀತಿ ಕೂಡ ಕಪ್ಪು ಹಣ ತರಲು ಅಡ್ಡಿಯಾಗಬಹುದು. ಹಲವಾರು ಅಂತರಾಷ್ಟ್ರೀಯ ಕಾನೂನುಗಳು ಅಡೆತಡೆ ಒಡ್ಡಬಹುದು. ಇದನ್ನೆಲ್ಲ ಸರಿಪಡಿಸಿ, ಕಪ್ಪು ಹಣ ತರುವುದು ಎಂದರೆ ಕಪ್ಪು ಆನೆಯನ್ನು ತೊಳೆದು ಬಿಳಿ ಮಾಡಿದಂತೆಯೆ. ಅದೊಂದು ಸಾಹಸವೇ ಸರಿ. ಆದರೆ ದೇಶದ ಒಳಿತಿಗಾಗಿ ಅಂತಹ ಸಾಹಸ ಮಾಡುವುದೇ ಉತ್ತಮ.
ಈ ವಿಷಯವನ್ನು ಬಿಜೆಪಿ ಚುನಾವಣಾ ಅಸ್ತ್ರವನ್ನಾಗಿ ಬಳತೊಡಗಿದ ನಂತರ ಕಾಂಗ್ರೆಸ್ ಕಂಗಾಲಾಗಿದ್ದು ಸತ್ಯ. ಅದರ ವಕ್ತಾರರು ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡಿ, ಇನ್ನಷ್ಟು ಗೊಂಲದ ಸೃಷ್ಟಿಸಿದರು. ಆದರೆ ಕಾಂಗ್ರೆಸ್ ಆರೋಪದಂತೆ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ಈ ವಿಷಯ ಆರಂಭಿಸಿಲ್ಲ. ಚುನಾವಣೆ ಸಮಯದಲ್ಲಿ ಇದರ ಬಗ್ಗೆ ಹೆಚ್ಚಾಗಿ ಮಾತಾಡಿರಬಹುದು. ಆದರೆ ೨೦೦೮ರ ಏಪ್ರಿಲ್ ತಿಂಗಳಲ್ಲಿಯೇ ಪ್ರಧಾನಿ ಮನಮೋಹನ ಸಿಂಗ್ ಅವರೊಂದಿಗೆ ಚರ್ಚಿಸಿದ್ದರು. ಜರ್ಮನಿ ಸರಕಾರ ವಿದೇಶಿ ಬ್ಯಾಂಕೊಂದರಲ್ಲಿದ್ದ ಜರ್ಮನ್ ಪ್ರಜೆಗಳ ವಿವರ ಪಡೆದುಕೊಂಡ ಸುದ್ದಿ ಗಮನಿಸಿದ ಅಡ್ವಾಣಿ, ಪ್ರಧಾನಿಗೆ ಪತ್ರ ಬರೆದು ಗಮನ ಸೆಳೆದಿದ್ದರು. ಅದಕ್ಕೆ ಆಗ ಹಣಕಾಸು ಸಚಿವರಾಗಿದ್ದ ಪಿ. ಚಿದಂಬರಂ ಉತ್ತರ ಬರೆದು, ‘ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.’
ಇದಾದ ಸ್ವಲ್ಪ ಸಮಯದಲ್ಲೇ ಹಣಕಾಸು ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಜರ್ಮನಿಯಲ್ಲಿರುವ ಭಾರತದ ರಾಯಬಾರಿ ಅವರಿಗೆ ‘ಕಪ್ಪು ಹಣದ ವಿವರ ಬಹಿರಂಗಕ್ಕೆ ಅಲ್ಲಿನ ಸರಕಾರದ ಮೇಲೆ ಜಾಸ್ತಿ ಒತ್ತಡ ಹೇರುವ ಅಗತ್ಯವಿಲ್ಲ’ ಎಂಬರ್ಥದ ಪತ್ರ ಬರೆದಿರುವ ವಿಷಯ ಕೂಡ ಬಹಿರಂಗಗೊಂಡಿತ್ತು. ಲೋಕಸಭೆಯಲ್ಲಿ ಕೂಡ ಚರ್ಚೆಯಾಗಿದೆ. ಪಿ. ಚಿದಂಬರಂ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ‘ಕೇಂದ್ರ ಸರಕಾರ ಸ್ವಿಸ್ ಬ್ಯಾಂಕ್‌ಗೆ ಭಾರತದ ಪ್ರಜೆಗಳ ಖಾತೆ ವಿವರ ನೀಡುವಂತೆ ಪತ್ರ ಬರೆದಿದೆ. ೬ ತಿಂಗಳಾದರೂ ಬೇಕು ಉತ್ತರ ಬರಲು’ ಎಂದು ಹೇಳಿದ್ದರು.
ಆದರೆ ಏಪ್ರಿಲ್ ೧೮ರಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಸ್ವಿಸ್ ರಾಯಭಾರಿ ಅವರ ಹೇಳೀಕೆಯನ್ನು ಆಧರಿಸಿ ಲೇಖನವೊಂದನ್ನು ಪ್ರಕಟಿಸಿದೆ. ಸ್ವಿಸ್ ರಾಯಭಾರಿ ಅವರ ಪ್ರಕಾರ ‘ಅವರು ಈವರೆಗೆ ಸ್ವಿಸ್ ಸರಕಾರ ಅಂತಹ ಯಾವುದೇ ಮನವಿ ಅಥವಾ ಪತ್ರವನ್ನು ಸ್ವೀಕರಿಸಿಲ್ಲ’ ಎಂದಿದ್ದಾರೆ. ಇಷ್ಟೆಲ್ಲ ಆದಮೇಲೆ ಅದನ್ನೊಂದು ಚುನಾವಣಾ ವಿಷಯವನ್ನಾಗಿ ಮಾಡಿ, ಜನರ ಪ್ರತಿಕ್ರಿಯೆ ನಿರೀಕ್ಷಿಸಿದರೆ ತಪ್ಪೇನು?
ಇಷ್ಟೆಲ್ಲ ಚರ್ಚೆ ನಡೆಯುವ ಸಮಯದಲ್ಲಿ ಸಾಮಾನ್ಯ ಜನರ ಮನಸಲ್ಲಿ ಮೂಡುವ ಮತ್ತೊಂದು ಪ್ರಶ್ನೆಯೆಂದರೆ ಇದೆಲ್ಲ ಚರ್ಚೆಯಿಂದ ಸ್ವಿಸ್‌ಬ್ಯಾಂಕ್‌ನಲ್ಲಿ ಹಣ ಇಟ್ಟವರು ಅದನ್ನು ತೆಗೆದು ಬೇರೆಡೆ ಸಾಗಿಸಲಾರರೇ ಎಂಬುದು. ಈ ಸಾದ್ಯತೆಯಿದೆ. ಆದರೆ ಈ ಕಪ್ಪು ಹಣವನ್ನು ಅವರು ತೆರಿಗೆದಾರರ ಸ್ವರ್ಗ ಎಂದು ಕರೆಯಲಾಗುವ ಬೇರೆ ರಾಷ್ಟ್ರಗಳ ಬ್ಯಾಂಕ್‌ಗಳಲ್ಲಿ ಇಡಬೇಕಾಗುತ್ತದೆ. ಅಲ್ಲದೆ ದಿಢೀರನೆ ದೊಡ್ಡ ಮೊತ್ತದ ಹಣವನ್ನು ಬೇಕಾದಲ್ಲಿಗೆ ಸಾಗಿಸುವುದು ಕೂಡ ಅಷ್ಟು ಸುಲಭವಲ್ಲ.
ಒಂದಂತೂ ಸತ್ಯ. ವಿದೇಶಿ ಬ್ಯಾಂಕುಗಳಲ್ಲಿರುವ ನಮ್ಮ ದೇಶದ ಪ್ರಜೆಗಳ ಕಪ್ಪು ಹಣ ತರಲು ರಾಜಕೀಯ ಇಚ್ಛಾ ಶಕ್ತಿ ಅತ್ಯಂತ ಅಗತ್ಯ. ಯಾಕೆಂದರೆ ದೇಶದೊಳಗೆ ಕಠಿಣ ತನಿಖೆ ನಡೆಸಿ ಕಪ್ಪು ಹಣ ಇಟ್ಟಿರುವವರ ಬಗ್ಗೆ ಸೂಕ್ತವಾದ ಸಾಕ್ಷ್ಯ ಸಂಗ್ರಹಿಸಬೇಕು. ಅದರ ಜೊತೆ ಜೊತೆಗೆ ವಿದೇಶಾಂಗ ವ್ಯವಹಾರ ನೀತಿಗಳ ಮೂಲಕ ವಿದೇಶಿ ಬ್ಯಾಂಕು ಹಾಗೂ ಸರಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅವುಗಳ ಜತೆ ಅಗತ್ಯ ಒಪ್ಪಂದಗಳನ್ನು ಮಾಡಿಕೊಳ್ಳಬೇಕು. ಒಟ್ಟು ೭೦ ತೆರಿಗೆದಾರರ ಸ್ವರ್ಗ ಎಂದು ಕರೆಯಲಾಗುವ ದೇಶಗಳೊಂದಿಗೆ ಇಂತಹ ವ್ಯಾವಹಾರಿಕ ಒಪ್ಪಂದ ಮಾಡಿಕೊಂಡು ಅವರ ಬ್ಯಾಂಕುಗಳಲ್ಲಿರುವ ಹಣ ತರಿಸುವ ಹೊತ್ತಿಗೆ ದಶಕಗಳೇ ಬೇಕಾಗಬಹುದು. ಅಷ್ಟು ಸಮಯವೂ ರಾಜಕೀಯ ಇಚ್ಛಾ ಶಕ್ತಿಯನ್ನು ಕಾಪಾಡಿಕೊಂಡು ಕೆಲಸ ಮಾಡುವ ಅಗತ್ಯವಿರುತ್ತದೆ.
ಆದರೆ ಕಪ್ಪು ಹಣ ಈ ಬಾರಿ ಚುನಾವಣಾ ವಿಷಯವಾಗುವುದರಿಂದ ದೇಶಾದ್ಯಂತ ಈ ಬಗ್ಗೆ ಜನಾಭಿಪ್ರಾಯ, ಜಾಗೃತಿ ಮೂಡುತ್ತಿದೆ. ಬಿಜೆಪಿಯೊಂದೇ ಅಲ್ಲ ಸಿಪಿಎಂ, ಎಸ್ಪಿ, ಬಿಎಸ್ಪಿ, ಎಐಎಡಿಎಂಕೆ ಮುಂತಾದ ಪಕ್ಷಗಳು ಕೂಡ ಕಪ್ಪು ಹಣ ತರುವ ಬಗ್ಗೆ ಒಲವು ವ್ಯಕ್ತಪಡಿಸಿವೆ. ಈ ನಡುವೆ ರಾಮಜೇಠ ಮಲಾನಿಯಂತಹ ಪ್ರಸಿದ್ಧ ವಕೀಕಲರು ಕಪ್ಪು ಹಣದ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಖೂಡ ಹೂಡಿದ್ದಾರೆ. ಏನೇ ಹೆಣಗಾಡಿದರೂ ಹಣ ತರಲು ವರ್ಷಗಟ್ಟಲೆ ಹೆಣಗಬೇಕಾಗಬಹುದು. ಅದರ ಬಗ್ಗೆ ಉತ್ತಮ ಆರಂಭವನ್ನಂತೂ ಮಾಡಿದಂತಾಗಿದೆ.
ಆದರೆ ಇದು ಕೇವಲ ಚುನಾವಣಾ ಪ್ರಚಾರಕ್ಕೆ ಸೀಮಿತವಾಗದಿರಲಿ. ದೇಶಕ್ಕೆ ಒಳಿತಾಗಲಿ.

Tuesday, April 07, 2009

ಹಿಂದೂ ಪರವೆಂದರೆ ಮುಸ್ಲಿಮರನ್ನು ವಿರೋಧಿಸುವುದೇ?


'ಮುಸ್ಲಿಮರು ಪುಂಡಾಟಿಕೆ ನಡೆಸಿದರೆ ಬಕ್ರೀದ್, ಈದ್ ಮಿಲಾದ್ ಆಚರಿಸುವುದು ಕಷ್ಟವಾದೀತು. ನನ್ನ ಮೇಲೆ ೬೩ ಕ್ರಿಮಿನಲ್ ಪ್ರಕರಣಗಳಿವೆ. ಚುನಾವಣಾ ಆಯೋಗ ಇನ್ನೊಂದು ಪ್ರಕರಣ ದಾಖಲಿಸಲಿ. ನನಗೆ ಅಲ್ಪಸಂಖ್ಯಾತರ ಒಂದೇ ಒಂದು ಮತವೂ ಬೇಡ’ ಇಂತಹ ಹೇಳಿಕೆಯನ್ನು ಉತ್ತರ ಕನ್ನಡದ ಸಂಸದನೊಬ್ಬನಿಂದ ಯಾರೂ ಖಂಡಿತ ನಿರೀಕ್ಷಿಸಿರಲಿಲ್ಲ.

ದಕ್ಷಿಣ ಕನ್ನಡ ಅಥವಾ ಉಡುಪಿ, ಚಿಕ್ಕಮಗಳೂರು ಜಿಲ್ಲೆಯ ರಾಜಕಾರಣಿಗಳು ಈ ರೀತಿ ಹೇಳಿದರೆ, ಅವರು ಯಾಕೆ ಹಾಗೆ ಹೇಳಿದರು ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ ಉತ್ತರ ಕನ್ನಡದಂತಹ ಜಿಲ್ಲೆಯ ರಾಜಕಾರಣಿಗಳಿಗೆ ಖಂಡಿತ ಇಂತಹ ಹೇಳಿಕೆಗಳ ಅಗತ್ಯವಿಲ್ಲ. ಯಾಕೆಂದರೆ ಉತ್ತರ ಕನ್ನಡದಲ್ಲಿ ಅಂತಹ ಹೇಳಿಕೆಗಳಿಂದ ಓಟು ಪಡೆಯಲು ಸಾದ್ಯವಿಲ್ಲ. ಆದರೆ ಅನಂತಕುಮಾರ ಹೆಗಡೆಯಂತಹ ಸಂಸದರಿಂದ ಇನ್ನೇನು ನಿರೀಕ್ಷಿಸಲು ಸಾದ್ಯ?

ಚುನಾವಣೆಗಳು ಬಂದಾಗ ರಾಜಕೀಯ ನಾಯಕರುಗಳಿಗೆ ಜಾತಿ, ಧರ್ಮ ಎಲ್ಲ ನೆನಪಾಗುತ್ತದೆ. ಹಾಗೆಯೇ ಪರಸ್ಪರ ಟೀಕೆಗಳು ಕೇಳಿಬರುತ್ತವೆ. ಅದು ಸಾಮಾನ್ಯ. ಆದರೆ ೩ ಬಾರಿ ಉತ್ತರ ಕನ್ನಡದಿಂದ ಸಂಸದರಾಗಿ ಆಯ್ಕೆಯಾಗಿರುವ ಅನಂತ ಕುಮಾರ್ ಹೆಗಡೆಗೆ ಚುನಾವಣೆಗೆ ೬ ತಿಂಗಳಿರುವಂತೆ ದಿಢೀರನೆ ಮುಸ್ಲಿಂ ವಿರೋಧಿ ಭಾವ ಜಾಗೃತವಾಗಿಬಿಟ್ಟಿದೆ. ಹೋದಲ್ಲೆಲ್ಲ ಮುಸ್ಲಿಮರನ್ನು ಬಯ್ಯುವುದೇ ಅವರ ಏಕಂಶ ಕಾರ್ಯಕ್ರಮ. ಅಲ್ಪಸಂಖ್ಯಾತರ ಒಂದೇ ಒಂದು ಮತ ಬೇಡ. ನಾನು ಬಹುಸಂಖ್ಯಾತರ ಮತದಿಂದಲೇ ಗೆದ್ದು ಬರುತ್ತೇನೆ ಎಂಬ ಅಹಂಕಾರದ ಮಾತುಗಳನ್ನಾಡಿದ್ದಾರೆ. ಇರಲಿ ಅನಂತ ಕುಮಾರ ಹೆಗಡೆ ಅವರು ಬಹುಸಂಖ್ಯಾತರ ಮತದಿಂದಲೇ ಗೆದ್ದುಬರಲಿ. ಅವರು ಯಾರ ಮತದಿಂದಲೇ ಗೆದ್ದು ಬಂದರೂ ಅವರು ಇಡೀ ಜಿಲ್ಲೆಯ ಸಂಸದ ಎಂಬುದನ್ನು ಅವರು ಮರೆಯಬಾರದು. ಗೆದ್ದುಬಂದ ಮೇಲೆ ಮತ ಹಾಕಿದವನಿಗೂ, ಮತ ಹಾಕದವನಿಗೂ ಅವರೇ ಸಂಸದರು ಎಂಬ ಸರಳ ಸತ್ಯವನ್ನು ಅವರು ಮರೆತಂತಿದೆ.

ಉತ್ತರ ಕನ್ನಡ ಶಾಂತಿಯುತ ಜಿಲ್ಲೆ. ಜಿಲ್ಲೆಯಲ್ಲಿ ಸಾಕಷ್ಟು ಹೋರಾಟಗಳು ನಡೆದಿವೆಯಾದರೂ, ಯಾವುದೂ ತೀವ್ರ ಹಿಂಸಾರೂಪ ತಾಳಿದ್ದಿಲ್ಲ. ಭಟ್ಕಳದಲ್ಲಿ ಘೋರ ಗಲಭೆ ಆಗಿಲ್ಲವೇ? ಅಂತ ನೀವು ಕೇಳಬಹುದು. ಹೌದು ಭಟ್ಕಳದಲ್ಲಿ ಗಲಭೆಯಾಗಿದೆ. ಆದರೆ ಅದು ಭಟ್ಕಳ ದಾಟಿ ಬಂದಿಲ್ಲ. ಭಟ್ಕಳ ಹೊತ್ತಿ ಉರಿಯುತ್ತಿದ್ದಾಗಲೂ ಪಕ್ಕದ ಹೊನ್ನಾವರ, ಕುಮಟಾಗಳಲ್ಲಿ ಜನಜೀವನ ಸಾಮಾನ್ಯವಾಗಿತ್ತು. ಇಲ್ಲೆಲ್ಲ ಯಾವ ಮುಸ್ಲಿಮನಾಗಲಿ, ಹಿಂದುವಾಗಲಿ ಭಯ ಭೀತನಾಗಲಿಲ್ಲ. ಭಟ್ಕಳದಲ್ಲಿ ಗಲಭೆಯಾಯಿತು ಎಂದು ತಾವೂ ಗಲಭೆಗಿಳಿಯಲಿಲ್ಲ.

ಹಾಗೆಯೇ ಭಟ್ಕಳದ ಇನ್ನೊಂದು ವಿಶೇಷವೆಂದರೆ ಬೇರೆಡೆಯ ಕೋಮು ಗಲಭೆಗಳು ಕೂಡ ಭಟ್ಕಳದಲ್ಲಿ ಪ್ರತಿಫಲನಗೊಳ್ಳುವುದಿಲ್ಲ.

ರಾಮಜನ್ಮ ಭೂಮಿ ಚಳವಳಿ ಸಂದರ್ಭದಲ್ಲಿ ಇಟ್ಟಿಗೆ ಸಂಗ್ರಹದಲ್ಲೂ ಉತ್ತರ ಕನ್ನಡದಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿರಬಹುದು. ಹಾಗಂದಾಕ್ಷಣ ಉತ್ತರ ಕನ್ನಡದ ಜನ ಮುಸ್ಲಿಂ ವಿರೋಧಿಗಳು ಅಂತ ತೀರ್ಮಾನಿಸಬೇಕಿಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು ಎಂಬ ಆಸೆ ಇರಬಹುದು. ಹಾಗಂದಾಕ್ಷಣ ಅವರೆಲ್ಲ ಮುಸ್ಲಿಮರನ್ನು ವಿರೋಧಿಸುತ್ತಾರೆ ಎಂದು ಅರ್ಥೈಸುವ ಅಗತ್ಯ ಖಂಡಿತ ಇಲ್ಲ. ಉತ್ತರ ಕನ್ನಡದ ಜನ ಸೌಹಾರ್ದದಿಂದಲೇ ಜೀವನ ನಡೆಸುತ್ತಿದ್ದಾರೆ. ದೊಡ್ಡ ಗಲಭೆ ನಂತರ ಭಟ್ಕಳದಲ್ಲೂ ಗಲಭೆಗಳಾಗಿಲ್ಲ. ಜಿಲ್ಲೆಯ ಬೇರೆ ಪ್ರದೇಶದಲ್ಲಿ ಕೂಡ ಗಲಭೆಯ ಇತಿಹಾಸ ಇಲ್ಲ. ಅನಂತಕುಮಾರ ಹೆಗಡೆಯ ಕ್ಷೇತ್ರದೊಳಗೇ ಇರುವ ಕುಮಟ ತಾಲೂಕಿನ ಚಂದಾವರಕ್ಕೊಮ್ಮೆ ಹೋಗಿ ನೋಡಲಿ ಅವರು. ಅಲ್ಲಿ ಸಾಕಷ್ಟು ಮುಸ್ಲಿಮರಿದ್ದಾರೆ. ಹಿಂದುಗಳೂ ಇದ್ದಾರೆ. ಇಬ್ಬರ ಜನಜೀವನ ಎಷ್ಟು ಹಾಸುಹೊಕ್ಕಾಗಿದೆಯೆಂದರೆ ನೀವು ಹಿಂದು-ಮುಸ್ಲಿಂ ವ್ಯತ್ಯಾಸ ಗುರುತಿಸುವುದೂ ಕಷ್ಟ. ಮಾತಿನಿಂದ ಗೊತ್ತು ಮಾಡಬಹುದಷ್ಟೆ. ಈವರೆಗೆ ಒಂದೇ ಒಂದು ಅತಿರೇಕದ ಘಟನೆ ಅಲ್ಲಿ ನಡೆದಿದ್ದರೆ ಹೇಳಿ. ಊಹುಂ. ಅಲ್ಲಿ ಸದಾ ಶಾಂತಿ. ರಾಮಜನ್ಮಭೂಮಿ ಗಲಾಟೆ ಸಂದರ್ಭದಲ್ಲೂ ಉತ್ತರ ಕನ್ನಡ ಶಾಂತವಾಗೇ ಇತ್ತು. ಚಂದಾವರ ಕೂಡ!

ಅನಂತಕುಮಾರ ಹೆಗಡೆ ಹೆಚ್ಚು ಮತ ಪಡೆದು, ಚುನಾವಣೆ ಗೆದ್ದು ಜಿಲ್ಲೆಯನ್ನು ದೇಶದ ಉನ್ನತ ಸ್ಥಾನವಾಗ ಲೋಕಸಭೆಯಲ್ಲಿ ಪ್ರತಿನಿಧಿಸುವ ಅಧಿಕಾರ ಪಡೆದಿರಬಹುದು. ಹಾಗಂತ ಜಿಲ್ಲೆಯ ನೆಮ್ಮದಿ, ಸೌಹಾರ್ದ, ಶಾಂತಿ ಕೆಡಿಸುವ ಅಧಿಕಾರವನ್ನು ಅವರಿಗೆ ಯಾರೂ ಕೊಟ್ಟಿಲ್ಲ. ಅದಕ್ಕೆ ಉತ್ತರ ಕನ್ನಡದ ಜನ ಅವಕಾಶ ಕೊಡಲೂಬಾರದು.

ನನ್ನನ್ನು ಬಹಳ ಕಾಡುತ್ತಿರುವ ಇನ್ನೊಂದು ಪ್ರಶ್ನೆಯೆಂದರೆ ನೀವು ಹಿಂದೂ ಪರವಾಗಿರಬೇಕು ಅಥವಾ ಹಿಂದೂ ಪರ ಎಂದು ತೋರಿಸಿಕೊಳ್ಳಬೇಕು ಎಂದಾದರೆ ಮುಸ್ಲಿಮರನ್ನು ವಿರೋಧಿಸಲೇ ಬೇಕೆ? ಮುಸ್ಲಿಂ ವಿರೋಧಿಗಳೆಲ್ಲ ಹಿಂದೂ ಪರವೇ?

ಇತ್ತೀಚೆಗೆ ಇಂತಹ ಅಪಾಯಕಾರಿ ಬೆಳವಣಿಗೆ ಕಾಣುತ್ತಿದೆ. ಮುಸ್ಲಿಮರನ್ನು ಟೀಕಿಸಿದಾಕ್ಷಣ ಆತ ಹಿಂದೂ ಪರವಾಗಿಬಿಡುತ್ತಾನೆ ಅಥವಾ ಹಿಂದುಗಳನ್ನು ಟೀಕಿಸಿದಾಕ್ಷಣ ಅಥವಾ ಮುಸ್ಲಿಮರನ್ನು ವಿರೋಧಿಸಿ ಭಾಷಣ ಮಾಡಿದ್ದನ್ನು ಖಂಡಿಸಿದಾಕ್ಷಣ ಆತ ಮುಸ್ಲಿಂ ಪರವಾಗಿಬಿಡುತ್ತಾನೆ. ಆದರೆ ಅನಂತಕುಮಾರ ಹೆಗಡೆಯಂತಹ ರಾಜಕಾರಣಿಗಳಿಗೆ ಮುಸ್ಲಿಮರನ್ನು ವಿರೋಧಿಸದೆಯೂ ಹಿಂದೂ ಪರವಾಗಿರಬಹುದು ಎಂಬುದು ಯಾಕೆ ಅರ್ಥವಾಗುತ್ತಿಲ್ಲ? ಅನಂತ ಕುಮಾರ್ ಹೆಗಡೆ ‘ಅಲ್ಪಸಂಖ್ಯಾತರ ಒಂದು ಮತವೂ ಬೇಡ’ ಎಂದು ಹೇಳಿದ್ದರಿಂದ ಹಾಗೂ ಅವರು ಕೋಮು ದ್ವೇಷ ಮೂಡಿಸುವ ಮಾತುಗಳಾಡಿದ್ದರಿಂದ ಅವರನ್ನು ಕೆಲವು ಪ್ರಶ್ನೆ ಕೇಳಲೇ ಬೇಕಾಗಿದೆ.

ಅನಂತಕುಮಾರ್ ಹೆಗಡೆ ಅವರು ಮಹಾನ್ ಮುಸ್ಲಿಂ ವಿರೋಧಿಯಾಗಿದ್ದರೆ ಅಥವಾ ಹಿಂದು ಪರವಾಗಿದ್ದರೆ ಸಂಸದರಾಗಿರುವಾಗ ಅವರು ಅದಕ್ಕಾಗಿ ಏನು ಮಾಡಿದ್ದಾರೆ? ಭಟ್ಕಳದಲ್ಲಿ ಉಗ್ರಗಾಮಿ ಚಟುವಟಿಕೆಗಳು ಇರುವ ಬಗ್ಗೆ ಗಲಭೆ ನಂತರ ತನಿಖೆಗೆ ನೇಮಕಗೊಂಡ ನ್ಯಾಯಮೂರ್ತಿ ಜಗನ್ನಾಥ ಶೆಟ್ಟಿ ಆಯೋಗ ವರದಿಯಲ್ಲಿ ಪ್ರಸ್ತಾಪಿಸಿದೆ. ಅದರ ಬಗ್ಗೆ ಲೋಕಸಭೆಯಲ್ಲಿ ಗಮನ ಸೆಳೆದರೆ? ಗೃಹ ಇಲಾಖೆ ಗಮನಕ್ಕೆ ತಂದರೆ? ಈಗಂತೂ ರಾಜ್ಯದಲ್ಲಿ ಅವರದ್ದೇ ಬಿಜೆಪಿ ಸರಕಾರವಿದೆ ಅದರ ಬಗ್ಗೆ ಏನಾದರೂ ಪ್ರಯತ್ನ ಮಾಡಿದರೇ? ಭಟ್ಕಳದಲ್ಲಿ ನಡೆದ ಡಾ. ಚಿತ್ತರಂಜನ್ ಹಾಗೂ ತಿಮ್ಮಪ್ಪ ಶೆಟ್ಟಿ ಕೊಲೆ ಪ್ರಕರಣಗಳು ಇನ್ನೂ ಬಗೆಹರಿದಿಲ್ಲ. ಇಬ್ಬರೂ ಭಟ್ಕಳದಲ್ಲಿ ಹಿಂದೂ ನಾಯಕರಾಗಿದ್ದರು. ಅವರ ಕೊಲೆಗಾರರ ಪತ್ತೆಗೆ ಅನಂತಕುಮಾರ್ ಹೆಗಡೆ ಯಾರ ಮೇಲಾದರೂ ಒತ್ತಡ ಹಾಕಿದ್ದಾರೆಯೇ?ಅವರು ಅಷ್ಟು ಮುಸ್ಲಿಂ ವಿರೋಧಿ ಹಾಗೂ ಹಿಂದುಗಳ ಪರವಾಗಿದ್ದರೆ ಈ ನಾಯಕರ ಕೊಲೆಗಾರರ ಪತ್ತೆಗೆ ಒತ್ತಾಯಿಸಿ ಹೋರಾಟಗಳನ್ನು ಯಾಕೆ ರೂಪಿಸಲಿಲ್ಲ? ಡಾ. ಚಿತ್ತರಂಜನ್ ಕೊಲೆ ಪ್ರಕರಣದ ತನಿಖೆ ಸಿಬಿಐ ವಶದಲ್ಲಿದೆ. ದಿಲ್ಲಿಯಲ್ಲಿ ಸಿಬಿಐ ಅಧಿಕಾರಿಗಳ ಮೇಲೆ ತನಿಖೆ ಚುರುಕುಗೊಳಿಸಲು ಅನಂತಕುಮಾರ ಹೆಗಡೆ ಒತ್ತಡ ತರಬಹುದಿತ್ತು. ಲೋಕಸಭೆಯಲ್ಲಿ ಈ ಬಗ್ಗೆ ಮಾತನಾಡಿ, ಪ್ರಶ್ನೆ ಕೇಳಿ ತನಿಖೆ ಯಾವ ಹಂತದಲ್ಲಿದೆ ಎಂಬುದನ್ನು ಇಡೀ ದೇಶಕ್ಕೆ ತಿಳಿಸಬಹುದಿತ್ತು. ಮುಸ್ಲಿಮರ ಕಟ್ಟರ್ ವಿರೋಧಿಯಂತೆ ಈಗ ವೀರಾವೇಷದ ಭಾಷಣ ಮಾಡುತ್ತಿರುವ ಅವರು ಇದನ್ನೆಲ್ಲ ಯಾಕೆ ಮಾಡಲಿಲ್ಲ?

ಮುಂಬಯಿ ಮೇಲೆ ದಾಳಿಯಾಯಿತು. ಮುಂಬಯಿಯಂತೆಯೇ ಕಾರವಾರವೂ ಸಮುದ್ರ ತೀರದಲ್ಲಿದೆ. ಕಾರವಾರದಲ್ಲಿ ಅಣುವಿದ್ಯುತ್ ಸ್ಥಾವರವಿದೆ. ಅಲ್ಲಿಗೂ ಉಗ್ರರು ದಾಳಿ ಮಾಡಬಹುದು. ಗೋಕರ್ಣ, ಮುರ್ಡೇಶ್ವರ ಮುಂತಾದ ಪ್ರಸಿದ್ಧ ಧಾರ್ಮಿಕ ಹಾಗೂ ಪ್ರವಾಸಿ ಸ್ಥಳಗಳು ಕರಾವಳಿಯಲ್ಲಿವೆ. ಅಲ್ಲಿಗೂ ದಾಳಿ ನಡೆಯಬಹುದು. ಹೀಗಿದ್ದರೂ ಅನಂತಕುಮಾರ್ ಹೆಗಡೆ ಈ ಎಲ್ಲ ವಿಷಯಗಳ ಬಗ್ಗೆ ಲೋಕಸಭೆಯಲ್ಲಿ ಯಾಕೆ ದೇಶದ ಗಮನ ಸೆಳೆಯಲಿಲ್ಲ? ಕರಾವಳಿ ರಕ್ಷಣಾ ಪಡೆ ಠಾಣೆಗೆ ಬರಬೇಕಾದ ಬೋಟು ಮುಂತಾದ ಸೌಲಭ್ಯಗಳನ್ನು ಇನ್ನೂ ಕೇಂದ್ರ ಸರಕಾರ ಒದಗಿಸಿಲ್ಲ. ಅವುಗಳ ಬಗ್ಗೆ ಯಾಕೆ ಒಮ್ಮೆಯೂ ಅನಂತ ಕುಮಾರ್ ಮಾತಾಡಲಿಲ್ಲ? ಕರಾವಳಿ ಮೂಲಕ ಅಕ್ರಮ ಚಟುವಟಿಕೆ ನಡೆಯಬಹುದು, ಸ್ಪೋಟಕಗಳೂ ಬರಬಹುದು. ಆದ್ದರಿಂದ ಕರಾವಳಿ ಭದ್ರತೆ ಬಗ್ಗೆ ಏಕೆ ಕೇಂದ್ರ ಸರಕಾರದ ಗಮನ ಸೆಳೆಯಲಿಲ್ಲ?

ಅನಂತಕುಮಾರ ಹೆಗಡೆ ಅವರ ೫ ವರ್ಷದ ಇತಿಹಾಸ ನೋಡಿದರೆ ಇದ್ಯಾವುದನ್ನೂ ಅವರು ಲೋಕಸಭೆಯಲ್ಲಿ ಚರ್ಚಿಸಿಲ್ಲ. ಇತರೆ ಕಾರ್ಯಕ್ರಮಗಳಲ್ಲೂ ಮಾತಾಡಿಲ್ಲ. ಇದೆಲ್ಲ ಹೋಗಲಿ ಸಂಸದರಾಗಿ ೩ನೇ ಬಾರಿಗೆ ಆಯ್ಕೆಯಾಗಿರುವ ಅನಂತಕುಮಾರ ಹೆಗ್ಡೆ ಅವರಿಗೆ ಮತ ನೀಡಿದ ಜನರ ಕೈಗೆ ಎಷ್ಟು ಸಿಗುತ್ತಾರೆ? ತಮ್ಮ ಮೊಬೈಲ್‌ನಲ್ಲಿ ನಂಬರ್ ಇಲ್ಲದವರ ದೂರವಾಣಿ ಕರೆ ಸ್ವೀಕರಿಸದ ಸಂಸದರಿಂದ ಜನಕ್ಕೆ ಎಷ್ಟು ಉಪಯೋಗವಾದೀತು?ಇವುಗಳನ್ನೆಲ್ಲ ಹೇಗಾದರೂ ಉತ್ತರ ಕನ್ನಡದ ಜನ ಸಹಿಸಿಕೊಂಡಿರಬಹುದು. ಯಾಕೆಂದರೆ ಉತ್ತರ ಕನ್ನಡದ ಯಾವ ರಾಜಕಾರಣಿಯೂ ಜಿಲ್ಲೆಗೆ ಮಾಡಿದ ಸಹಾಯ ಅಷ್ಟರಲ್ಲೇ ಇದೆ. ಉತ್ತರ ಕನ್ನಡದ ಜನ ಕೂಡ ರಾಜಕಾರಣಿಗಳ ಬೆನ್ನು ಬಿದ್ದು ಕೆಲಸ ಮಾಡಿಸಿಕೊಳ್ಳುವ ಬಗ್ಗೆ ತೀವ್ರ ಆಸಕ್ತಿ ಹೊಂದಿದವರೇನಲ್ಲ. ರಸ್ತೆಗಳು ಹಾಳಾಗಿದ್ದರೆ ಶಾಪ ಹಾಕಿಯಾರು ಹೊರತು ಹೋರಾಟ, ಗಲಾಟೆಗಳಿಗೆ ಇಳಿಯುವವರಲ್ಲ. ಇದ್ದುದರಲ್ಲೇ ಸುಖವಾಗಿದ್ದಾರೆ ಉತ್ತರ ಕನ್ನಡದ ಜನ. ಕೆಲಸ ಮಾಡದ ರಾಜಕಾರಣಿಗಳನ್ನಾದರೂ ಕ್ಷಮಿಸಬಹುದು. ಆದರೆ ಜಿಲ್ಲೆಯ ಶಾಂತಿ, ನೆಮ್ಮದಿಯನ್ನೇ ಕದಡ ಹೊರಟರೆ ಅದನ್ನು ಕ್ಷಮಿಸುವುದು ಅಪಾಯಕಾರಿ.

೧೯೯೬ರಲ್ಲಿ ಅನಂತಕುಮಾರ ಹೆಗಡೆ ಲೋಕಸಭೆ ಚುನಾವಣೆಗೆ ನಿಂತಾಗ ಅವರಿಗಿದ್ದ ಒಂದೇ ಒಂದು ಅರ್ಹತೆ ಎಂದರೆ ‘ಅವರು ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ದೇಶದ ಧ್ವಜ ಹಾರಿಸಿದ್ದರು’ ಎಂಬುದು ಮಾತ್ರ. ಆಗ ಪೋರ ನೋಡಲೂ ಚೆಂದವಿದ್ದ. ಭರವಸೆ ಮೂಡಿಸುವಂತಿದ್ದ. ಮಾತಿನ ಮನೆ ಕಟ್ಟುತ್ತಿದ್ದ. ಕಾಂಗ್ರೆಸ್‌ನ ಮುದಿ ಸಂಸದರನ್ನು ನೋಡಿ ನೋಡಿ ಜನರಿಗೂ ಸಾಕಾಗಿತ್ತು. ಅದಕ್ಕೆ ಸರಿಯಾಗಿ ಭಟ್ಕಳದಲ್ಲಿ ಶಾಸಕ ಡಾ. ಚಿತ್ತರಂಜನ್ ಅವರ ಕೊಲೆಯಾಯಿತು. ಅನುಕಂಪದ ಅಲೆಯಲ್ಲಿ ತೇಲಿದ ಅನಂತಕುಮಾರ್ ಹೆಗಡೆ ಗೆದ್ದುಬಿಟ್ಟರು. ಆದರೆ ಉತ್ತರ ಕನ್ನಡದ ಜನ ಅವರ ಮೇಲಿರಿಸಿದ್ದ ನಂಬಿಕೆ, ನಿರೀಕ್ಷೆಗಳನ್ನೆಲ್ಲ ಅವರು ಹುಸಿಗೊಳಿಸಿದ್ದಾರೆ. ಜನರ ಕಷ್ಟಗಳಿಗೆ ಸ್ಪಂಧಿಸುವುದು ಬಿಡಿ, ಜನರಿಗೆ ಸ್ಪಂದಿಸುವುದನ್ನೇ ಅವರು ಮರೆತಿದ್ದಾರೆ. ಅದರ ನಂತರ ಅವರ ಕೆಲಸಕ್ಕಿಂತ ಹೆಚ್ಚಾಗಿ ಕಾಂಗ್ರೆಸ್‌ನ ಅಸಮರ್ಥ ಅಭ್ಯರ್ಥಿಯ ಕಾರಣದಿಂದಲೇ ಅವರು ಗೆಲ್ಲುತ್ತಿದ್ದಾರೆ.

ಸದ್ಯದ ಸ್ಥಿತಿ ಗಮನಿಸಿದರೆ ಅನಂತಕುಮಾರ್ ಹೆಗಡೆ ಅವರ ಹೇಳಿಕೆ ‘ತಪ್ಪು ಮುಚ್ಚಿಕೊಳ್ಳುವ’ ಸಾಧನವಾಗಿ ಕಾಣುತ್ತಿದೆ. ತಾವು ಐದು ವರ್ಷದಲ್ಲಿ ಕೆಲಸ ಮಾಡದೆ ಇರುವುದನ್ನು, ಜನರ ಕೈಗೆ ಸಿಗದಿರುವುದನ್ನು ಮುಸ್ಲಿಂ ವಿರೋಧಿ ಭಾಷಣದ ಮೂಲಕ ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎಂಬುದು ಸ್ಪಷ್ಟ. ಇಷ್ಟಕ್ಕೇ ಸುಮ್ಮನಾಗದ ಅವರು ‘ನಾನು ಪಾಕಿಸ್ತಾನ, ಅಪಘಾನಿಸ್ತಾನದ ಜನರ ಬಳಿ ಮತ ಕೇಳುತ್ತಿಲ್ಲ. ನಾನು ಹಿಂದುಸ್ತಾನದ ಜನರ ಬಳಿ ಮತ ಕೇಳುತ್ತಿದ್ದೇನೆ’ ಅಂದಿದ್ದಾರೆ. ಆದರೆ ಹಿಂದುಸ್ತಾನದಲ್ಲಿ ಹಿಂದುಗಳಲ್ಲದೆ ಬೇರೆ ಧರ್ಮದವರೂ ಇದ್ದಾರೆ ಎಂಬುದನ್ನು ಅವರು ಮರೆತಂತಿದೆ. ಚುನಾವಣೆಯಲ್ಲಿ ತಮ್ಮ ಗೆಲುವಿಗಾಗಿ ಅವರು ಜಿಲ್ಲೆಯ ಶಾಂತಿ, ಸೌಹಾರ್ದವನ್ನೇ ಬಲಿಕೊಡಲು ಹೊರಟಿದ್ದಾರೆ.ಅವರು ಕೋಮು ಪ್ರಚೋದಿ ಭಾಷಣ ಮಾಡಿದ್ದರ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಆರ್.ವಿ. ದೇಶಪಾಂಡೆ ಚುನಾವಣಾ ಆಯೋಗಕ್ಕೆ ದೂರು ನೀಡಿದರೆ, ‘ರಿಯಾಜ್ ಭಟ್ಕಳ ದೇಶಪಾಂಡೆ ಸಾಕುಮಗನಾ?’ ಎಂಬ ಪ್ರತಿಕ್ರಿಯೆ ನೀಡಿದ್ದಾರೆ. ಕೋಮು ದ್ವೇಷದ ಭಾಷಣದ ವಿರುದ್ಧ ದೂರು ನೀಡಿಬಿಟ್ಟರೆ ‘ರಿಯಾಝ್ ಭಟ್ಕಳನ ಬೆಂಬಲಿಗರಾಗಿಬಿಡುತ್ತಾರಾ?’ ರಿಯಾಝ್ ಭಟ್ಕಳನ ವಿರುದ್ಧ ಮಾತನಾಡಲಿಲ್ಲ ಅಂದಾಕ್ಷಣ ಅವರೆಲ್ಲ ಆತನ ಬೆಂಬಲಿಗರು ಅಂತ ಅರ್ಥೈಸುವುದು ಮೂರ್ಖತನ. ಹಾಗೇನಾದರೂ ಅರ್ಥೈಸಿದರೆ ಅದನ್ನು ‘ಅಪ್ರಬುದ್ಧ ಮತ್ತು ಸಮತೋಲನ ತಪ್ಪಿದ ಮನಸ್ಸು’ ಎಂದು ಕರೆಯಬೇಕಾಗುತ್ತದೆ. ರಿಯಾಝ್ ಭಟ್ಕಳ ಹಾಗೂ ಕೆಲವರು ಉಗ್ರಗಾಮಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದಾಕ್ಷಣ ಜಿಲ್ಲೆಯ ಮುಸ್ಲಿಮರನ್ನೆಲ್ಲ ಉಗ್ರಗಾಮಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಅಂದುಕೊಳ್ಳಬೇಕಿಲ್ಲ. ಅವರ ವಿರುದ್ಧ ಮಾತನಾಡದವರೆಲ್ಲ ಉಗ್ರಗಾಮಿಗಳ ಬೆಂಬಲಿಗರು ಅಂತ ತೀರ್ಮಾನಿಸುವುದು ಮೂರ್ಖತನ.

ರಿಯಾಜ್ ಭಟ್ಕಳ ಸೇರಿದಂತೆ ಭಟ್ಕಳದ ಕೆಲವರು ಉಗ್ರಗಾಮಿ ಚಟುವಟಿಕೆಯಲ್ಲಿದ್ದಾರೆ ಎಂಬುದು ಗುಪ್ತಚರ ಇಲಾಖೆ ಮಾಹಿತಿ. ಆತನ ಬಂಧನಕ್ಕೆ ಪೊಲೀಸರು ಯತ್ನಿಸುತ್ತಿದ್ದಾರೆ. ಕಾನೂನಿದೆ. ಉಗ್ರಗಾಮಿಗಳನ್ನು ಎಲ್ಲರೂ ವಿರೋಧಿಸಬೇಕು ಎಂಬುದು ನಿರ್ವಿವಾದ. ಹಾಗೆಯೇ ಅನಗತ್ಯವಾಗಿ ಜನರಲ್ಲಿ ಕೋಮು ದ್ವೇಷ ಬಿತ್ತಿ, ಶಾಂತ ಜಿಲ್ಲೆಯ ನೆಮ್ಮದಿ ಕೆಡಿಸುವ ಅನಂತಕುಮಾರ ಹೆಗಡೆಯಂತಹ ರಾಜಕಾರಣಿಗಳನ್ನೂ ವಿರೋಧಿಸಬೇಕಾಗುತ್ತದೆ.ಇಲ್ಲವಾದಲ್ಲಿ ಉತ್ತರ ಕನ್ನಡ ಜಿಲ್ಲೆ ಕೂಡ ಇನ್ನೊಂದು ಕೋಮು ಸೂಕ್ಷ್ಮ ಜಿಲ್ಲೆಯಾಗಿ, ನೆಮ್ಮದಿ ಕಳೆದುಕೊಳ್ಳುವ ಅಪಾಯವಿದೆ.