Wednesday, April 29, 2009

ಸೋನಿಯಾಗೆ ಚಿದ್ರಚಿದ್ರವಾದ ರಾಜೀವ್ ದೇಹ ನೆನಪಾಗಲಿಲ್ಲವೇ?


ಏಷ್ಯಾದ ಅಷ್ಟೇ ಏಕೆ ವಿಶ್ವದ ಅತ್ಯಂತ ಹಳೆಯ ಹಾಗೂ ಬಲಿಷ್ಠ ಉಗ್ರಗಾಮಿ ಸಂಘಟನೆಯೆಂದರೆ ಎಲ್‌ಟಿಟಿಇ. ಅಂತಹ ಸಂಘಟನೆಯನ್ನು ಸೈನ್ಯ ಬಲದ ಮೂಲಕ ಮೂಲೆಗುಂಪು ಮಾಡಿ, ಇನ್ನೇನು ಎಲ್‌ಟಿಟಿ ಅಟಾಟೋಪ ಮುಗಿದೇ ಹೋಯಿತು ಎಂಬಂತಾಗಿರುವಾಗ, ಭಾರತ ಅನಗತ್ಯವಾಗಿ ಮೂಗು ತೂರಿಸಿದೆ.
ತಮಿಳುನಾಡಿನಲ್ಲಿ ಬಹಳ ಹಿಂದಿನಿಂದಲೂ ಎಲ್‌ಟಿಟಿಇ ರಾಜಕೀಯಕ್ಕೆ ಬಳಕೆಯಾಗುತ್ತಿದೆ. ಹಲವು ನಾಯಕರು ಎಲ್‌ಟಿಟಿಇ ಸಂಘಟನೆಯ ಮುಖ್ಯಸ್ಥರೊಂದಿಗೆ ನೇರ ಅಥವಾ ಪರೋಕ್ಷ ಸಂಪರ್ಕ ಹೊಂದಿದ್ದಾರೆ. ಈಗ ಚುನಾವಣೆ ಇರುವುದರಿಂದ ಹಾಗೂ ಎಲ್‌ಟಿಟಿಇ ನಾಯಕರನ್ನು ಬಚಾವ್ ಮಾಡುವ ಅಗತ್ಯ ಇರುವುದರಿಂದ ತಮಿಳುನಾಡಿನ ರಾಜಕಾರಣಿಗಳು ಕೇಂದ್ರದ ಮೇಲೆ ಒತ್ತಡ ಹೇರಿದ್ದಾರೆ. ತಮಿಳುನಾಡಿನಲ್ಲಿ ಕಾಂಗ್ರೆಸ್ ಹಾಗೂ ಡಿಎಂಕೆ ಮೈತ್ರಿ ಇದೆ. ಇದೇ ಒತ್ತಡದ ಕಾರಣದಿಂದ ಹಾಗೂ ಎಲ್ಲಾದರೂ ಬೇರೆ ಪಕ್ಷಗಳಿಗೆ ಹೆಚ್ಚು ಮತ ಸಿಕ್ಕೀತು ಎಂಬ ಹೆದರಿಕೆಯಿಂದ ಕೇಂದ್ರದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಶ್ರೀಲಂಕಾ ಸರಕಾರಕ್ಕೆ ‘ಇನ್ನಷ್ಟು ಸಮಯ ಯುದ್ಧ ಸ್ಥಗಿತಗೊಳಿಸಿ, ನಾಗರಿಕರಿಗೆ ಸುರಕ್ಷಿತ ಪ್ರದೇಶಕ್ಕೆ ಹೋಗಲು ಅವಕಾಶ ನೀಡಬೇಕು’ ಎಂದು ಮನವಿ ಮಾಡಿದೆ.
ಇಷ್ಟಕ್ಕೂ ಕಾಂಗ್ರೆಸ್‌ಗೆ, ಡಿಎಂಕೆಗೆ ಹೆಚ್ಚು ಮತ ಸಿಗಲಿ ಎಂಬ ಕಾರಣಕ್ಕೆ ಶ್ರೀಲಂಕಾ ಸರಕಾರ ಯಾಕೆ ಎಲ್‌ಟಿಟಿಇ ವಿರುದ್ಧ ಯುದ್ಧ ನಿಲ್ಲಿಸಬೇಕು? ಈ ಸಮಯದಲ್ಲಿ ಕೇಂದ್ರ ಸರಕಾರ ಶ್ರೀಲಂಕಾ ಸರಕಾರವನ್ನು ಒತ್ತಾಯಿಸಿದ್ದು ಆಡಳಿತ ದುರುಪಯೋಗವಲ್ಲವೇ? ಚುನಾವಣೆ ಸಮಯದಲ್ಲಿ ರಸ್ತೆ ಬದಿ ಮೂತ್ರ ಮಾಡಿದರೂ ನೀತಿಸಂಹಿತೆ ಉಲ್ಲಂಘನೆ ಎಂದು ಹೇಳುವವರಿಗೆ ಇದ್ಯಾಕೆ ಕಾಣಲಿಲ್ಲ? ಶ್ರೀಲಂಕಾ ಸರಕಾರವನ್ನು ಒತ್ತಾಯಿಸುವ ತಮಿಳು ರಾಜಕಾರಣಿಗಳು ಯಾಕೆ ಎಲ್‌ಟಿಟಿಇ ಸಂಘಟನೆಯನ್ನೇ ಶಸ್ತ್ರ ತ್ಯಜಿಸುವಂತೆ ಒತ್ತಾಯಿಸಬಾರದು?
೧೯೯೯೨ರಲ್ಲಿ ಎಲ್‌ಟಿಟಿಯಿ ಸಂಘಟನೆಯನ್ನು ಉಗ್ರಗಾಮಿ ಸಂಘಟನೆ ಎಂದು ಭಾರತವೇ ಘೋಷಿಸಿದ್ದು, ಈಗಿನ ನಮ್ಮ ಕೇಂದ್ರ ಸರಕಾರಕ್ಕೆ ಮರೆತುಹೋಗಿದೆಯೇ? ಅದು ನೆನಪಿದ್ದು ಶ್ರೀಲಂಕಾ ಸರಕಾರಕ್ಕೆ ಯುದ್ಧ ನಿಲ್ಲಿಸುವಂತೆ ಮನವಿ ಮಾಡಿದ್ದರೆ, ಪಾಕ್ ಹಾಗೂ ಅಪಘಾನಿಸ್ತಾನದಲ್ಲಿ ನಡೆಯುತ್ತಿರುವ ಉಗ್ರರ ಮೇಲಿನ ಅಮೆರಿಕ ದಾಳಿಯನ್ನು ನೋಡಿ ಭಾರತ ಸುಮ್ಮನಿರುವುದೇಕೆ?
ನಿಮಗೆ ಗೊತ್ತಿರಲಿ ವಿಶ್ವದಲ್ಲಿಯೇ ಸ್ವಂತ ವಿಮಾನ ನಿಲ್ದಾಣ, ಯುದ್ಧ ವಿಮಾನ, ಯುದ್ಧ ನೌಕೆಗಳನ್ನು ಹೊಂದಿದ್ದ ಏಕೈಕ ಸಂಘಟನೆ ಎಲ್‌ಟಿಟಿಇ. ೧೯೭೦ರ ದಶಕದಲ್ಲಿ ಶ್ರೀಲಂಕಾದಲ್ಲಿದ್ದ ತಮಿಳರ ಪ್ರತ್ಯೇಕ ರಾಜ್ಯದ ಹೋರಾಟದ ನೆಪದಲ್ಲಿ ಆರಂಭವಾದ ಎಲ್‌ಟಿಟಿಇ, ಅಧಿಕೃತವಾಗಿ ಸ್ಥಾಪನೆಯಾಗಿದ್ದು ೧೯೭೯ರ ಮೇ ೫ರಂದು. ನಂತರ ದೊಡ್ಡ ಉಗ್ರಗಾಮಿ ಸಂಘಟನೆಯಾಗಿ ಬೆಳೆಯಿತು. ಇದನ್ನು ಏಷ್ಯಾದ ಅತಿದೊಡ್ಡ ಹಾಗೂ ಅತಿಹೆಚ್ಚು ಸಮಯ ನಡೆದ ನಾಗರಿಕ ಯುದ್ಧ ಎಂದೂ ಬಣ್ಣಿಸಬಹುದು. ಆದರೆ ಎಲ್‌ಟಿಟಿಇ ಕೃತ್ಯಗಳನ್ನು ನೋಡಿದ ಭಾರತವೂ ಸೇರಿದಂತೆ ೩೨ ದೇಶಗಳೂ ಎಲ್‌ಟಿಟಿಇಯನ್ನು ಉಗ್ರಗಾಮಿ ಸಂಘಟನೆ ಎಂದು ಘೋಷಿಸಿವೆ.
ಮಕ್ಕಳಿಗೆ ಕೂಡ ಸೈನ್ಯದ ತರಬೇತಿ ಕೊಟ್ಟು ಸೇರಿಸಿಕೊಂಡಿದ್ದು, ಮಹಿಳಾ ಆತ್ಮಹತ್ಯಾ ತಂಡಗಳನ್ನು ರಚಿಸಿದ್ದು, ಬಾಂಬ್-ಬೆಲ್ಟ್ ಕಂಡು ಹಿಡಿದ ಕುಖ್ಯಾತಿ ಕೂಡ ಎಲ್‌ಟಿಟಿಇ ಸಂಘಟನೆಯದ್ದು. ಸೈನೈಡ್ ಎಂಬ ವಿನಾಶಕಾರಿ ವಿಶವನ್ನು ಕುತ್ತಿಗೆಯಲ್ಲಿ ಕಟ್ಟಿಕೊಂಡು, ಸಿಕ್ಕಿಬೀಳುವ ಸಮಯದಲ್ಲಿ ಅದನ್ನು ತಿಂದು ಸಾಯುವ ರೀತಿಯನ್ನು ಕೂಡ ಮೊದಲು ಜಾರಿ ಮಾಡಿದ್ದು ಎಲ್‌ಟಿಟಿಇ. ನಮ್ಮದೇ ಬೆಂಗಳೂರಿನಲ್ಲಿ ಎಲ್‌ಟಿಟಿಇ ಸಂಘಟನೆಯ ಶಿವರಸನ್ ಹಾಗೂ ಸಂಗಡಿಗರು ಬಂದು ಅಡಗಿಕೊಂಡು, ಸೈನೈಡ್ ತಿಂದು ಸತ್ತಿದ್ದು ಕಂಡಿದ್ದೇವೆ. ಇಂತಹ ಬಲಿಷ್ಠ ಹಾಗೂ ವಿನಾಶಕಾರಿ ಸಂಘಟನೆಯನ್ನು ಈಗ ಮೂಲೆಗೆ ತಳ್ಳಿ, ಮುಗಿಸುವ ಹಂತದಲ್ಲಿ ಶ್ರೀಲಂಕಾ ಸರಕಾರ ಸುಮ್ಮನಿದ್ದರೆ ಅದು ಮೂರ್ಖತನವಾದೀತು.
ಅಂತಹ ಮೂರ್ಖ ನಿರ್ಧಾರ ಕೈಗೊಳ್ಳುವಂತೆ ನಮ್ಮ ರಾಜಕಾರಣಿಗಳು ಮಾತ್ರ ಒತ್ತಾಯಿಸಲು ಸಾದ್ಯ.
ಈ ಹಿಂದೆ ಬೇಕಾದಷ್ಟು ಶಾಂತಿ ಮಾತುಕತೆಗಳಾಗಿವೆ. ೨೦೦೨ರಲ್ಲಿ ಶಾಂತಿ ಮಾತುಕತೆ ನಡೆದಿದೆ. ೨೦೦೬ರಲ್ಲಿ ಶಾಂತಿ ಮಾತುಕತೆ ಮುರಿದು ಬಿದ್ದ ಮೇಲೆ ಶ್ರೀಲಂಕಾ ಸೈನಿಕರು ಎಲ್‌ಟಿಟಿಇ ಮೇಲೆ ಮುರಕೊಂಡು ಬಿದ್ದಿದ್ದರು. ೧೯೮೭ರಲ್ಲಿ ಭಾರತೀಯ ಶಾಂತಿ ಸ್ಥಾಪನಾ ಪಡೆ ಕಳುಹಿಸುವ ಹಾಗೂ ತಮಿಳು ಆಕ್ರಮಿತ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಬಗ್ಗೆ ಭಾರತ ಸರಕಾರ ಮುಂದಾಗಿ ಶ್ರೀಲಂಕಾ ಸರಕಾರದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಇದನ್ನು ಬಹುತೇಕ ತಮಿಳು ಸಂಘಟನೆಗಳು ಒಪ್ಪಿಕೊಂಡಿದ್ದವು. ಆದರೆ ಆಗಲೇ ಸಾಕಷ್ಟು ಸೊಕ್ಕಿದ್ದ ಎಲ್‌ಟಿಟಿಇ ಅದನ್ನೂ ತಿರಸ್ಕರಿಸಿತು.ಇದೇ ಕಾರಣಕ್ಕೆ ಆತ್ಮಹತ್ಯಾ ಬಾಂಬ್ ದಾಳಿ ಮೂಲಕ ೧೯೯೧ರಲ್ಲಿ ರಾಜೀವ ಗಾಂಧಿ ಹತ್ಯೆ ಮಾಡಿತು. ನಂತರ ೧೯೯೩ಲ್ಲಿ ಶ್ರೀಲಂಕಾ ಅಧ್ಯಕ್ಷ ರಣಸಿಂಗೆ ಪ್ರೇಮದಾಸ ಅವರ ಹತ್ಯೆ ಮಾಡಲಾಯಿತು. ೧೯೯೪ರಲ್ಲಿ ಚುನಾವಣೆಯಲ್ಲಿ ಚಂದ್ರಿಕಾ ಕುಮಾರತುಂಗಾ ಅಧ್ಯಕ್ಷೆಯಾಗಿ ಆಯ್ಕೆಯಾದ ನಂತರ ಶಾಂತಿ ಮಾತುಕತೆಗಳು ಮತ್ತೆ ಆರಂಭವಾದವು. ಆದರೆ ಎಲ್‌ಟಿಟಿಇ ೧೯೯೫ರಲ್ಲಿ ಶ್ರೀಲಂಕಾ ಸೈನ್ಯದ ೨ ಹಡಗನ್ನು ಮುಳುಗಿಸಿ, ಶಾಂತಿ ಮಾತುಕತೆಗೆ ಅಂತ್ಯಹಾಡಿತು. ಆಗ ಭಯಂಕರ ದಾಳಿ ನಡೆಸಿದ ಶ್ರೀಲಂಕಾ ಸೈನ್ಯ, ಎಲ್‌ಟಿಟಿಇ ವಶದಲ್ಲಿದ್ದ ಹಲವಾರು ಪ್ರದೇಶಗಳನ್ನು ವಶಪಡಿಸಿಕೊಂಡಿತ್ತು. ಆಗ ಮತ್ತದೇ ಶಾಂತಿ ನೆಪದಲ್ಲಿ ಯುದ್ಧ ನಿಂತಿತು. ಆದರೆ ೧೯೯೮ರ ನಂತರ ಮತ್ತೆ ಎಲ್‌ಟಿಟಿಇ ಪ್ರಬಲವಾಯಿತು.
೨೦೦೧ರಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಕೈಬಿಟ್ಟ ಎಲ್‌ಟಿಟಿಇ, ಪ್ರಾದೇಶಿಕ ಸ್ವಾಮ್ಯತೆ ಬೇಕು ಎಂಬ ಬೇಡಿಕೆ ಮುಂದಿಟ್ಟಿತು. ೨೦೦೨ರಲ್ಲಿ ಎಲ್‌ಟಿಟಿ ಹಾಗೂ ಶ್ರೀಲಂಕಾ ಸರಕಾರ ಒಪ್ಪಂದಕ್ಕೆ ಸಹಿ ಹಾಕಿದವು. ೬ ಸುತ್ತು ಶಾಂತಿ ಮಾತುಕತೆಗಳೂ ನಡೆದವು. ಆದರೆ ಮತ್ತೆ ಕ್ಯಾತೆ ತೆಗೆದ ಎಲ್‌ಟಿಟಿಇ ಮಾತುಕತೆ ಮುರಿಯುವಂತೆ ಮಾಡಿತು. ಈಗ ಮಹಿಂದಾ ರಾಜಪಕ್ಸಾ ಅವರು ಶ್ರೀಲಂಕಾ ಅಧ್ಯಕ್ಷರಾದ ನಂತರ ಎಲ್‌ಟಿಟಿಇ ವಿರುದ್ಧ ಉಗ್ರ ಸಮರ ಸಾರಿದ್ದಾರೆ. ಯಾವ ಒತ್ತಡಕ್ಕೂ ಹಿಂಜರಿಯದೆ ಎಲ್‌ಟಿಟಿಇ ನಾಶ ಮಾಡಿಯೇ ಸಿದ್ಧ ಎಂದು ಹೊರಟಿದ್ದಾರೆ. ಯುದ್ಧ ವಲಯದಲ್ಲಿರುವ ನಾಗರಿಕರಿಗೆ ಸುರಕ್ಷಿತ ಪ್ರದೇಶಕ್ಕೆ ೨೪ ಗಂಟೆ ಅವಧಿಯನ್ನೂ ನೀಡಿದ್ದರು.ಅದು ನಿಜವಾಗಿಯೂ ಸರಿಯಾದ ನಿರ್ಧಾರ. ಇನ್ನೂ ಎಷ್ಟು ವರ್ಷ ಶ್ರೀಲಂಕಾ ಎಂಬ ಸಣ್ಣ ರಾಜ್ಯ ಎಲ್‌ಟಿಟಿಇ ಎಂಬ ದೊಡ್ಡ ಸಮಸ್ಯೆಯೊಂದಿಗೆ ಸೆಣಸಬೇಕು? ಒಂದು ಬಾರಿ ಸಮಸ್ಯೆ ಬಗೆಹರಿಯಬೇಕು. ಅದಕ್ಕೆ ಎಲ್‌ಟಿಟಿಇ ಅಂತ್ಯವೊಂದೇ ದಾರಿ.
ಹೀಗೆ ಕಠಿಣ ನಿರ್ಧಾರದ ಫಲವಾಗಿಯೇ ಇಂದು ತಮಿಳು ಹುಲಿ ಗಾಯಗೊಂಡು ಏದುಸಿರು ಬಿಡುತ್ತಿದೆ. ಬಲೆಗೆ ಬೀಳುವ ಅನಿವಾರ್ಯದಲ್ಲಿದೆ.
ಇಂತಹ ಸಂದರ್ಭದಲ್ಲಿ ನಮ್ಮ ರಾಜಕಾರಣಿಗಳು ಕೇವಲ ಮತಕ್ಕಾಗಿ ಯುದ್ಧ ನಿಲ್ಲುಸುವಂತೆ ಹೇಳುತ್ತಿರುವುದು ಯಾವ ನ್ಯಾಯ? ಎಲ್‌ಟಿಟಿಇ ಈ ವರೆಗೆ ಎಷ್ಟು ಬಾಂಬ್ ದಾಳಿ ಮಾಡಿದೆ. ಅದರ್‍ಲಿ ಸತ್ತವರ ಜೀವಕ್ಕೆ, ಅವರ ಸಂಬಂಧಿಗಳ ದುಃಖಕ್ಕೆ ಬೆಲೆ ಇಲ್ಲವೇ? ನಮ್ಮದೇ ಪ್ರಧಾನಿ ಒಬ್ಬರನ್ನು ಎಲ್‌ಟಿಟಿಇ ಹತ್ಯೆ ಮಾಡಿದ್ದನ್ನು ಇದೇ ಕಾಂಗ್ರೆಸ್ಸಿಗರು ಮತಕ್ಕಾಗಿ ಮರೆತುಬಿಟ್ಟರೆ? ಪತಿ ಹತ್ಯೆ ಮಾಡಿದ ಸಂಘಟನೆಯ ವಿರುದ್ಧ ಯುದ್ಧ ನಿಲ್ಲಿಸುವಂತೆ ಕೇಂದ್ರ ಸರಕಾರ ಒತ್ತಾಯಿಸುವಾಗ ಸೋನಿಯಾ ಅವರಿಗೆ ಒಂದು ಬಾರಿಯೂ ಚಿದ್ರಚಿದ್ರವಾದ ರಾಜೀವ್ ಗಾಂಧಿ ದೇಹ ನೆನಪಾಗಲಿಲ್ಲವೇ? ಇಂದಿಗೂ ರಾಜೀವ್ ಫೋಟೋ ಹಾಕಿ ಮತ ಕೇಳುವ ಕಾಂಗ್ರೆಸ್ ನಾಯಕರಿಗೆ, ಅವರ ಹತ್ಯೆ ಮಾಡಿದ ಸಂಘಟನೆಯ ವಿರುದ್ಧ ಯುದ್ಧ ನಿಲ್ಲಿಸುವಂತೆ ಹೇಳುವ ಮನಸ್ಸಾದರೂ ಹೇಗೆ ಬಂತು?
ನಮ್ಮ ದೇಶದಲ್ಲಿ ಸಮಸ್ಯೆಗಳು ದೊಡ್ಡದಾಗುತ್ತಿರುವುದೇ ಹೀಗೆ. ನಕ್ಸಲೀಯರ ಹಾವಳಿ ಇಷ್ಟೆಲ್ಲ ಹೆಚ್ಚಲು ನಮ್ಮ ಸರಕಾರಗಳ ಅರೆಬರೆ ನೀತಿಗಳೇ ಕಾರಣ. ಎಲ್‌ಟಿಟಿಇ ಸಂಘಟನೆ ಮೇಲೆ ಶ್ರೀಲಂಕಾ ಈಗ ಮುರಕೊಂಡು ಬಿದ್ದಂತೆ ನಮ್ಮ ಸರಕಾರಗಳೂ ನಕ್ಸಲೀಯರ ವಿರುದ್ಧ ಕೈತೊಳೆದು ಬೆನ್ನುಹತ್ತಿದ್ದರೆ ಇಷ್ಟೊತ್ತಿಗೆ ನಕ್ಸಲೀಯರ ಹುಟ್ಟಡಗಿಹೋಗುತ್ತಿತ್ತು. ಆದರೆ ನಮ್ಮಲ್ಲಿ ಹಾಗೆ ಮಾಡುವುದರಿಂದ ಆಗುವ ಒಳಿತಿಗಿಂತ, ತಮಗೆ, ತಮ್ಮ ಪಕ್ಷಕ್ಕೆ ಆಗುವ ಮತದ ಲಾಭ-ನಷ್ಟ ಯೋಚಿಸಲಾಗುತ್ತದೆ.
ಇಂತಹ ಸ್ವಂತ ಲಾಭದ ಯೋಚನೆಗಳನ್ನು ನಮ್ಮ ದೇಶಕ್ಕಷ್ಟೇ ಸೀಮಿತವಾಗಿರಿಸದ ರಾಜಕಾರಣಿಗಳು ಈಗ ಅದನ್ನು ನಮ್ಮ ವಿದೇಶಾಂಗ ನೀತಿಯಲ್ಲೂ ತೂರಿಸಿದ್ದಾರೆ. ಅಮೆರಿಕಾ ಅಪಘಾನಿಸ್ತಾನದಲ್ಲಿ ಉಗ್ರರ ವಿರುದ್ಧ ಯುದ್ಧ ಆರಂಭಿಸಿದಾಗ ಸುಮ್ಮನಿದ್ದ ಭಾರತ ಈಗಲೂ ಇದನ್ನು ಶ್ರೀಲಂಕಾದ ಆಂತರಿಕ ಸಮಸ್ಯೆ ಎಂದು ಸುಮ್ಮನಿರುವುದು ಬುದ್ದಿವಂತ ನಿರ್ಧಾರ. ಇಷ್ಟಕ್ಕೂ ಎಲ್‌ಟಿಟಿಇ ಸಂಘಟನೆಯನ್ನು ಉಳಿಸಿದರೆ ಅದೇನು ಬಂದು ನಮ್ಮನ್ನು ಉದ್ಧಾರ ಮಾಡುವುದಿಲ್ಲ.
ಯಾಕೆಂದರೆ ಹಾವಿಗೆ ಹಾಲರೆದೇನು ಫಲ? ನೀವು ಹಾಲು ಕುಡಿಸಿದರೂ ಹೊರಬುರುವುದು ಹಾಲಾಹಲವೇ. ತಮಿಳು ಹುಲಿ ಈಗ ಗಾಯಗೊಂಡಿರಬಹುದು. ಗಾಯಗೊಂಡಾಗ ಹೊಡೆಯುವುದು ಬೇಡ ಎಂದು ಸುಮ್ಮನಿದ್ದರೆ, ಗಾಯ ಗುಣವಾಗಿ ಅದು ನಮ್ಮ ಮೇಲೆ ದಾಳಿ ನಡೆಸುವ ಸಾದ್ಯತೆಯಿದೆ. ಹಾಗಾಗಿ ಗಾಯಗೊಂಡು ಬಿದ್ದಿರುವ ಹುಲಿಯನ್ನು ಹೊಡೆಯುವುದೇ ಜಾಣತನ. ಅದನ್ನು ಶ್ರೀಲಂಕಾ ಸರಕಾರ ಮಾಡಲಿಬಿಡಿ.

5 comments:

Unknown said...

ನಮ್ಮ ದೇಶದಲ್ಲಿ ಸಮಸ್ಯೆಗಳು ದೊಡ್ಡದಾಗುತ್ತಿರುವುದೇ ಹೀಗೆ.ನಕ್ಸಲೀಯರ ಹಾವಳಿ ಇಷ್ಟೆಲ್ಲ ಹೆಚ್ಚಲು ನಮ್ಮ ಸರಕಾರಗಳ ಅರೆಬರೆ ನೀತಿಗಳೇ ಕಾರಣ.

ತಮಗೆ, ತಮ್ಮ ಪಕ್ಷಕ್ಕೆ ಆಗುವ ಮತದ ಲಾಭ-ನಷ್ಟದ ಯೋಚನೆಗಳನ್ನು ನಮ್ಮ ರಾಜಕಾರಣಿಗಳು ಬಿಡದಿದ್ದರೆ, ದೇಶ ಉದ್ಧಾರ ....!?

Anonymous said...

ಚೆನ್ನಾಗಿ ವಿವರಿಸಿದ್ದೀರಿ... ನಿಮ್ಮ ಬರೆಹ ಇಷ್ಟವಾಯಿತು.

-ಸುಮ

Unknown said...

Nice article ...very informative ...

ಜಿ.ಎಸ್.ಬಿ. ಅಗ್ನಿಹೋತ್ರಿ said...

ವಿನಾಯಕ,
ನಮ್ಮ ವ್ಯವಸ್ಥೆ ಹೀಗಿರುವಾಗ ನಿನ್ನ ಕೂಗು ಕೇಳುವರಾರು ಎನ್ನುವುದು ನನ್ನ ಪ್ರಶ್ನೆ. ಹಾಗು ಹೀಗೂ ನಾಲ್ಕಾರು ಮಂದಿ ಓದಿ ಖುಷಿ ಪಡ್ತಾರಸ್ಟೆ. ಧ್ವನಿ ಎತ್ತುವವರು ತೀರ ವಿರಳ. ನಮ್ಮ ರಾಜಕೀಯ ಪುಢಾರಿಗಳು ಇಂಥ ವಿಚಾರವಾಗಿ ಯೂಚಿಸುವುದಾಗಿದ್ದಿದ್ದರೆ ವ್ಯವಸ್ಥೆ ಇಸ್ಟೊಂದು ಹದಗೆಡುತ್ತಿರಲಿಲ್ಲ.
ಒಂದು ಉದಾಹರಣೆ: ಈ ಭಾರಿ ಲೋಕಸಭಾ ಚುನಾವಣೆಯಲ್ಲಿ ಮುಂಬೈನಲ್ಲಿ ನಡೆದ ಭಯೋತ್ಪಾದಕರ ಅಟ್ಟಹಾಸ ದೊಡ್ಡ ಇಶ್ಯೂ ಆಗುತ್ತೆ ಎಂದೇ ನಂಬಲಾಗಿತ್ತು. ಆದರೆ ಯಾವುದೇ ಪಕ್ಷ ಇದನ್ನ ಪ್ರಚಾರಕ್ಕೆ ಇಶ್ಯೂವಾಗಿಸಿಕೊಳ್ಳಲಿಲ್ಲ. ಯಾಕೆ?
ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಇವೆಲ್ಲ ಇಶ್ಯೂ ಹೇಗೆ ಆಗುವುದಿಲ್ಲವೂ... ಇದು ಹಾಗೆ?
ಅದೊಂತರ...ಇದೊಂತರ...:)

Unknown said...

ನಮ್ಮ ಸರ್ಕಾರಕ್ಕೆ ಯಾವುದೇ ಗಟ್ಟಿಯಾದ ನಿಲುವು ಇಲ್ಲ ಹಾಗಾಗಿ ಹೀಗಾಗುತ್ತದೆ. ಪತ್ರಿಕೆಯವರು ಎಷ್ಟು ಬೊಬ್ಬೆ ಹೊಡೆದರೂ ಅದು ಅವರಿಗೆ ಕೇಳುವುದಿಲ್ಲ. ನಿಮ್ಮ ಪಾಡಿಗೆ ನೀವು ಹೇಳಿಕೊಳ್ಳಿ ನಮ್ಮ ಪಾಡಿಗೆ ನಾವು ಮಾಡುತ್ತೇವೆ ಎನ್ನುವ ಈ ಸರ್ಕಾರ