Friday, August 17, 2007

ಮುಂಗಾರು ಮಳೆ ಗುಂಗಿನಲ್ಲಿ, ಜೋಗದ ಕೆಟ್ಟ ರಶ್ಶಿನಲ್ಲಿ




‘ಜೋಗದ ಸಿರಿ ಬೆಳಕಿನಲ್ಲಿ


ತುಂಗೆಯ ತೆನೆ ಬಳುಕಿನಲ್ಲಿ


ಸಹ್ಯಾದ್ರಿಯ ಲೋಕದುದಿನ


ಉತ್ತುಂಗದ ಶಿಖರದಲ್ಲಿ...’


ಕವಿ ನಿಸಾರ್ ಅಹ್ಮದ್ ಅವರ ‘ನಿತ್ಯೋತ್ಸವ’ ಹಾಡಿನ ಜೋಗದ ವರ್ಣನೆಯನ್ನು ಈಗ ಕಣ್ಣಾರೆ ಕಂಡು ಅನುಭವಿಸಬಹುದು. ಒಂದು ಸಿನಿಮಾ ಏನೆಲ್ಲಾ ಮಾಡಬಹುದು ಎಂಬುದಕ್ಕೆ ಮುಂಗಾರು ಮಳೆಯ ನಂತರದ ಜೋಗ ಸಾಕ್ಷಿ. ಮುಂಗಾರು ಮಳೆಯಲ್ಲಿ ಜೋಗ ನೋಡಿದ ಜನ ಈ ಬಾರಿ ಮೈ ತುಂಬಿ ಧುಮ್ಮಕ್ಕುತ್ತಿರುವ ಜೋಗದತ್ತ ಹೊರಟಿದ್ದಾರೆ ಬೇಗ.


ಜೋಗ ಅದೆಷ್ಟೋ ವರ್ಷದಿಂದ ಇದೆ. ನಾನೂ ಹಲವು ವರ್ಷದಿಂದ ಹೋಗಿ ಬರುತ್ತಿದ್ದೇನೆ. ಈ ವರ್ಷದಷ್ಟು ಜನ! ಊಹೂಂ. ನಾನು ಇವತ್ತಿನವರೆಗೆ ನೋಡಿಲ್ಲ. ನಾನಷ್ಟೇ ಏಕೆ ಜೋಗದ ಜನರೇ ಇಷ್ಟು ಜನರನ್ನು ಜೀವಮಾನದಲ್ಲಿ ನೋಡಿರಲಿಲ್ಲ. ಶರಾವತಿ ನದಿಯಲ್ಲಿ ಹರಿದು ಬರುವ ನದಿಯನ್ನೂ ಮೀರಿಸುವಷ್ಟು ಜನ!


ಹೀಗೆ ಹರಿದು ಬಂದ ಜನರಲ್ಲಿ ಒಂದು ಹುಡುಗಿ ಅವಳ ಹುಡುಗನ ಬಳಿ ‘ಮುಂಗಾರು ಮಳೆ ಕಲ್ಲಿಗೆ ಹೋಗೋಣ್ವಾ’ ಅಂದಿದ್ದು ಸಿನೆಮಾದ ಎಫೆಕ್ಟಲ್ಲದೇ ಇನ್ನೇನು. ಆ ಕಲ್ಲೋ ಅದೆಷ್ಟೋ ವರ್ಷದಿಂದ ಅಲ್ಲೇ, ಹಾಗೇ ಇತ್ತು. ಮುಂಗಾರು ಮಳೆ ಸಿನಿಮಾದಲ್ಲಿ ಗಣೇಶ ಮತ್ತು ಸಂಜನಾ ಗಾಂಧಿ ಯಾನೆ ಪೂಜಾ ಗಾಂಧಿ ಕಲ್ಲಿನ ಮೇಲೆ ಮಲಗಿ ಹಾಡಿದ್ದೇ ಹಾಡಿದ್ದು, ಆ ಕಲ್ಲಿಗೆ ಅಯಾಚಿತವಾಗಿ ಮುಂಗಾರು ಮಳೆ ಕಲ್ಲು ಎಂಬ ಹೆಸರು ಬಂದಿದೆ. ಅಲ್ಲೇ ಇರುವ ಅಂಗಡಿ ಸಾಲಿನಲ್ಲಿ ನಡೆದು ಹೊರಟಿರೋ ಮುಂಗಾರು ಮಳೆ ಚರುಮುರಿ, ಮುಂಗಾರು ಬಳೆ ಬಜೆ, ಬೊಂಡಾ ಎಲ್ಲವೂ ಸಿಗುತ್ತವೆ. ಇಡೀ ಜೋಗವೇ ಮುಂಗಾರು ಮಳೆ ಮಯ. ಎಲ್ಲ ವಾಹನಗಳನ್ನೂ ‘ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ’ ಎಂಬ ಹಾಡು. ಸಿನಿಮಾದಿಂದ ಉಂಟಾದ ‘ಮೇನಿಯಾ’ದ ಪರಿಣಾಮ ಆಗಸ್ಟ್ ೧೨ರಂದು ಜೋಗದಲ್ಲಿ ಜನರ ಮಹಾಪೂರ. ಪರಿಣಾಮ ಟ್ರಾಫಿಕ್ ಜಾಮ್!


ಜೋಗದಲ್ಲಿ ಆ.೧೨ರಂದು ಉಂಟಾದ ಟ್ರಾಫಿಕ್ ಜಾಂನ ಪ್ರಭಾವ ನೀವು ನೋಡಬೇಕಿತ್ತು. ಬೆಂಗಳೂರನ್ನೂ ಮೀರಿಸುವಂತಿತ್ತು. ನೀವು ನಂಬಿ ಬಿಡಿ ನಾನು ಮೂರೂವರೆ ತಾಸು ಜೋಗದಲ್ಲಿ ಶರಾವತಿ ನದಿಗೆ ಕಟ್ಟಲಾದ ಸೇತುವೆ ಮೇಲೆ ಸ್ಕಾರ್ಪಿಯೋದಲ್ಲಿ ಕುಳಿತಿದ್ದೆ. ಒಂದಿಂಚು ಗಾಡಿ ಮುಂದೆ ಚಲಿಸಲಿಲ್ಲ. ಬಾಡಿ ಗಾಡಿಯಿಂದ ಇಳಿಯಲಿಲ್ಲ. ನನ್ನ ಜತೆಗೆ ಜೋಗಕ್ಕೆ ಹೋಗಿದ್ದವರೆಲ್ಲ ನಡೆದುಕೊಂಡು ಹೋಗಿ ಜೋಗ ಫಾಲ್ಸನ್ನು ಒಂದು ಬದಿಯಿಂದ ನೋಡಿ ಬಂದರೂ ನಾನು ಮಾತ್ರ ಸ್ಕಾರ್ಪಿಯೋದಲ್ಲಿ ಸೇತುವೆ ಮೇಲೆಯೇ ಇದ್ದೆ.


ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿ ಕೇಂದ್ರವೆಂದು ಜೋಗ ಹೆಸರು ಮಾಡಿದ್ದರೂ, ನಿರೀಕ್ಷೆಗೂ ಮೀರಿ ಜನ ಬಂದಾಗ ಅಲ್ಲಿವ ವ್ಯವಸ್ಥೆ ಮಗುಚಿ ಬೀಳುತ್ತದೆ. ನಮ್ಮ ವ್ಯವಸ್ಥೆಗಳೇ ಹಾಗೆ. ಅಲ್ಲಿ ಮುಂದಾಲೊಚನೆಯಿಲ್ಲ. ಸಿನಿಮಾದ ಪರಿಣಾಮ ಜೋಗಕ್ಕೆ ಇಷ್ಟು ಪ್ರಮಾಣದ ಜನ ಬರಬಹುದು ಎಂಬುದನ್ನು ಮೊದಲೇ ಜಿಲ್ಲಾಡಳಿತ ಗ್ರಹಿಸಿದ್ದರೆ ಬಹುಶಃ ಈ ಜಾಮ್ ಆಗುತ್ತಿರಲಿಲ್ಲ. ಜೋಗಕ್ಕೆ ಒಂದು ಬದಿಯಿಂದ ಬಂದು ಇನ್ನೊಂದು ಬದಿಯಿಂದ ಹೋಗಲು ವ್ಯವಸ್ಥೆ ಮಾಡುತ್ತಿದ್ದರೆ, ವಾಹನಗಳ ಪಾರ್ಕಿಂಗ್‌ಗೆ ತುಂಬ ಸ್ಥಳ ಕಲ್ಪಿಸುತ್ತಿದ್ದರೆ ಇಂತಹ ಅವ್ಯವಸ್ಥೆ ತಪ್ಪಿಸಬಹುದಿತ್ತು.ಆದರೂ ಹೀಗೆ ಜೋಗದತ್ತ ಜನ ಧುಮುಕಿ ಬರಲು ಮುಂಗಾರು ಮಳೆ ಸಿನಿಮಾ ಕಾರಣ ಎಂಬುದು ಸತ್ಯ. ಜೋಗದ ವೈಭವವನ್ನು ಜನರಿಗೆ ತೆರೆದು ತೋರಿಸಿದ್ದಕ್ಕೆ ಯೋಗರಾಜ್ ಭಟ್ ಅವರಿಗೆ ಥ್ಯಾಂಕ್ಸ್ ಹೇಳಲೇ ಬೇಕು.


ನಮ್ಮೂರ ಮಂದಾರ ಹೂವೆ ಸಿನಿಮಾದಲ್ಲಿ ಉತ್ತರ ಕನ್ನಡದ ಯಾಣವನ್ನು ತೋರಿಸಿದಾಗಲೂ ಹೀಗೇ ಆಗಿತ್ತು. ಈ ದೃಷ್ಟಿಯಿಂದ ಎರಡೂ ಸನಿಮಾಗಳ ನಿರ್ದೇಶಕರು ಅಭಿನಂದನಾರ್ಹರು.
(ಚಿತ್ರಗಳು: ಸಿಂಧುಶ್ರೀ ಭಟ್)

1 comment:

Anonymous said...

Good one sir......